Puttur
ಪುತ್ತೂರು: 2026–27ನೇ ಸಾಲಿನ ‘ಈದ್ ಮಿಲಾದ್ ಸಮಿತಿ’ ರಚನೆ – ಅಧ್ಯಕ್ಷರಾಗಿ ಹನೀಫ್ ಬಗ್ಗುಮೂಲೆ ಆಯ್ಕೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ.), ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಲೋಕನಾಯಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಅವರ 1501ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ 2026–2027ನೇ ಸಾಲಿನ ‘ಪುತ್ತೂರು ತಾಲೂಕು ಈದ್ ಮಿಲಾದ್ ಸಮಿತಿ’ಯನ್ನು ನೂತನವಾಗಿ ರಚಿಸಲಾಗಿದೆ.
ನೂತನ ಸಮಿತಿಯ ಅಧ್ಯಕ್ಷರಾಗಿ ದ.ಕ. ಜಿಲ್ಲಾ ಐಕ್ಯ ವೇದಿಕೆಯ ಅಧ್ಯಕ್ಷ ಹನೀಫ್ ಬಗ್ಗುಮೂಲೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ವಿವರ:
- ಅಧ್ಯಕ್ಷರು: ಹನೀಫ್ ಬಗ್ಗುಮೂಲೆ
- ಉಪಾಧ್ಯಕ್ಷರು: ಮೂಸಾ ಕರೀಂ ಮಾಣಿ
- ಪ್ರಧಾನ ಕಾರ್ಯದರ್ಶಿ: ನೌಷಾದ್ ಹಾಜಿ ಬೋಳ್ವಾರ್
- ಜೊತೆ ಕಾರ್ಯದರ್ಶಿಗಳು: ಶರೀಫ್ ಬಲ್ನಾಡ್ ಹಾಗೂ ಬಾತಿಷಾ ಬಡಕ್ಕೋಡಿ
- ಸಂಘಟನಾ ಕಾರ್ಯದರ್ಶಿಗಳು: ಅಶ್ರಫ್ ಕೆ.ಜಿ.ಎನ್., ಹಮೀದ್ ಮೌಲಾ, ಸಿದ್ದೀಕ್ ಬೀಟಿಗೆ ಹಾಗೂ ಹಂಝ ಕಬಕ
- ಕೋಶಾಧಿಕಾರಿ: ಸಿದ್ದೀಕ್ ಸೂರ್ಯ
- ಪತ್ರಿಕಾ ಕಾರ್ಯದರ್ಶಿ: ಇಫಾಝ್ ಬನ್ನೂರು
ಪದಾಧಿಕಾರಿಗಳ ಜೊತೆಗೆ ಕಾರ್ಯಕಾರಿ ಸಮಿತಿಗೆ ವಿವಿಧ ಜವಾಬ್ದಾರಿಗಳಿಗಾಗಿ 33 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಬೃಹತ್ ಮಿಲಾದ್ ಜಾಥಾ ಹಾಗೂ ಸಮಾವೇಶ
ಸಭೆಯಲ್ಲಿ ಮುಂಬರುವ ಈದ್ ಮಿಲಾದ್ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ಶಾಂತಿಯುತವಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ತೀರ್ಮಾನಿಸಲಾಯಿತು.
ಮಿಲಾದ್ ಜಾಥಾ: ವರ್ಷಪ್ರತಿಯಂತೆ ಈ ಬಾರಿಯೂ ದರ್ಬೆ ಸರ್ಕಲ್ನಿಂದ ಕಿಲ್ಲೆ ಮೈದಾನದವರೆಗೆ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಲಿದೆ.
ಸಾಂಸ್ಕೃತಿಕ ಪ್ರದರ್ಶನ: ಜಾಥಾದಲ್ಲಿ ವಿವಿಧ ದಫ್ ಪ್ರದರ್ಶನ, ಸ್ಕೌಟ್ ಪ್ರದರ್ಶನ ಹಾಗೂ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ವೈವಿಧ್ಯಮಯ ಪ್ರದರ್ಶನಗಳು ಕಂಗೊಳಿಸಲಿವೆ.
ಸಮಾವೇಶ: ಜಾಥಾದ ಮುಕ್ತಾಯದ ನಂತರ ಕಿಲ್ಲೆ ಮೈದಾನದಲ್ಲಿ ಬೃಹತ್ ಮಿಲಾದ್ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ತಾಲೂಕು ಅಧ್ಯಕ್ಷ ಅಶ್ರಫ್ ಕಲ್ಲೇಗ ಹಾಗೂ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ. ಅಬೂಬಕ್ಕರ್ ಹಾಜಿ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ತಾಲೂಕು ಮುಸ್ಲಿಂ ಯುವಜನ ಪರಿಷತ್ ಸಂಚಾಲಕರಾದ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ ಹಾಗೂ ಕಾಸಿಂ ಹಾಜಿ ಮಿತ್ತೂರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

accident
ವಿಟ್ಲ-ಪುತ್ತೂರು ರಸ್ತೆ: ಬಸ್ಸಿಗೆ ಸೈಡ್ ಕೊಡಲು ಹೋಗಿ ಲಾರಿ ಪಲ್ಟಿ; ಚಾಲಕ ಪ್ರಾಣಾಪಾಯದಿಂದ ಪಾರು
ವಿಟ್ಲ / ಪುತ್ತೂರು: ವಿಟ್ಲ – ಬೆಳಿಯೂರುಕಟ್ಟೆ – ಪುತ್ತೂರು ಮಾರ್ಗ ಮಧ್ಯೆಯ ಮಂಜ ಸೇತುವೆ ಸಮೀಪ ಸರಕಾರಿ ಬಸ್ಸಿಗೆ ಸೈಡ್ ನೀಡಲು ಹೋದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಪಲ್ಟಿಯಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಘಟನೆಯ ವಿವರ:
ಮುಖಾಮುಖಿ ಎದುರಾದ ವಾಹನಗಳು: ಪುತ್ತೂರು ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ಸು ಹಾಗೂ ಪುತ್ತೂರು ಕಡೆಗೆ ತೆರಳುತ್ತಿದ್ದ ಲಾರಿ ಪುಣಚ ಮಲ್ಲಿಕಟ್ಟೆ ದಾಟಿ ಮಂಜ ಗಡಿ ಸೇತುವೆ ಬಳಿ ಮುಖಾಮುಖಿಯಾಗಿವೆ.
ಅಪಘಾತಕ್ಕೆ ಕಾರಣ: ಕಿರಿದಾದ ರಸ್ತೆಯಲ್ಲಿ ಬಸ್ಸಿಗೆ ದಾರಿ (ಸೈಡ್) ಮಾಡಿಕೊಡಲು ಲಾರಿ ಚಾಲಕ ವಾಹನವನ್ನು ರಸ್ತೆಯ ಪಕ್ಕಕ್ಕೆ ಇಳಿಸಿದ್ದಾರೆ. ಈ ವೇಳೆ ಮಳೆಯಿಂದಾಗಿ ಮಣ್ಣು ಸಡಿಲಗೊಂಡು, ಲಾರಿ ಚಕ್ರ ಜಾರಿ ರಸ್ತೆಯ ಎಡಬದಿಯ ತಾಣಕ್ಕೆ ಪಲ್ಟಿಯಾಗಿದೆ.
ಸ್ಥಳೀಯರ ಮಾಹಿತಿ: ಪಲ್ಟಿಯಾದ ಲಾರಿಯು ವಿಟ್ಲ ಮುಡ್ನೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ‘ಎನ್ ಎಸ್ ಕ್ರಷರ್’ ಸಂಸ್ಥೆಯ ಮಾಲಕತ್ವದ್ದು ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಪಾರು:
ಲಾರಿ ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದ್ದರೂ, ಚಾಲಕ ಯಾವುದೇ ಅಪಾಯವಿಲ್ಲದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸತತ ಮಳೆಯಿಂದಾಗಿ ಗ್ರಾಮೀಣ ಭಾಗದ ರಸ್ತೆಬದಿಯ ಮಣ್ಣು ಸಡಿಲಗೊಳ್ಳುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿ ವಿನಂತಿಸಲಾಗಿದೆ.

court
ಮದುವೆ ನಂಬಿಸಿ ವಂಚನೆ ಪ್ರಕರಣ: ರಾಜಿ ಸಂಧಾನ ಸಂಪೂರ್ಣ ವಿಫಲ; ಮದುವೆಯಾಗಲು ಆರೋಪಿ ಶ್ರೀಕೃಷ್ಣ ಜೆ. ರಾವ್ ನಿರಾಕರಣೆ
- ಸಂತ್ರಸ್ತೆ-ಮಗುವಿನ ಪಾಲನೆಗೆ ಮಾಸಿಕ ₹75,000 | ವಿಚಾರಣೆ ಸೆ.11ಕ್ಕೆ ಮುಂದೂಡಿಕೆ
- ಬೆಂಗಳೂರು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಿಂದ ಮಧ್ಯಂತರ ಆದೇಶ ಮುಂದುವರಿಕೆ
ಬೆಂಗಳೂರು/ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಗೆ ಮಗು ಜನಿಸಿದ ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿರುವ ಆರೋಪ ಎದುರಿಸುತ್ತಿರುವ ನಗರಸಭೆಯ ಮಾಜಿ ಸದಸ್ಯನ ಪುತ್ರ ಶ್ರೀಕೃಷ್ಣ ಜೆ. ರಾವ್ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 11ಕ್ಕೆ ಮುಂದೂಡಿದೆ.
ಪ್ರಕರಣದ ಮುಂದಿನ ವಿಚಾರಣೆ ನಡೆಯುವವರೆಗೂ ಆರೋಪಿಯು ಸಂತ್ರಸ್ತೆ ಮತ್ತು ಮಗುವಿನ ಜೀವನಾಂಶ ಹಾಗೂ ಪಾಲನೆಗಾಗಿ ಪ್ರತಿ ತಿಂಗಳು ₹75,000 ಪಾವತಿಸಬೇಕು ಎಂಬ ಮಧ್ಯಂತರ ಆದೇಶವನ್ನು ನ್ಯಾಯಪೀಠ ಮುಂದುವರಿಸಿದೆ.
ರಾಜಿ ಸಂಧಾನ ಪ್ರಯತ್ನ ಸಂಪೂರ್ಣ ವಿಫಲ
ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಾಗಿ ಆರೋಪಿ ಪರ ವಕೀಲರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ಹೈಕೋರ್ಟ್ ಜೂನ್ 19ರಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ಉಲ್ಲೇಖಿಸಿತ್ತು. ಪದಾಂಕಿತ ಹಿರಿಯ ವಕೀಲೆ ಎಸ್. ಸುಶೀಲ ಅವರನ್ನು ಮಧ್ಯಸ್ಥಿಕೆದಾರರಾಗಿ ನೇಮಕ ಮಾಡಲಾಗಿತ್ತು.
ಮಧ್ಯಸ್ಥಿಕೆ ಕೇಂದ್ರದಲ್ಲಿ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಆರೋಪಿ ಶ್ರೀಕೃಷ್ಣ ಜೆ. ರಾವ್ ಅವನ ತಂದೆ ಪಿ.ಜಿ.ಜಗನ್ನೀವಾಸ ರಾವ್ ಮತ್ತು ಚಂದ್ರಶೇಖರ ರಾವ್ ಮದ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಿದ್ದರು. ಕುಟುಂಬಸ್ಥರು ನೇರವಾಗಿ ಹಾಜರಾಗಿದ್ದರೆ, ಆರೋಪಿ ಶ್ರೀಕೃಷ್ಣ ಜೆ. ರಾವ್ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದ. ಈ ವೇಳೆ ನಡೆದ ಮಾತುಕತೆಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗಲು ಆರೋಪಿಯು ಸ್ಪಷ್ಟವಾಗಿ ನಿರಾಕರಿಸಿದ ಕಾರಣ, ರಾಜಿ ಸಂಧಾನದ ಪ್ರಯತ್ನ ವಿಫಲಗೊಂಡಿದೆ. ಈ ಕುರಿತು ಮಧ್ಯಸ್ಥಿಕೆದಾರರು ನ್ಯಾಯಪೀಠಕ್ಕೆ ಅಧಿಕೃತ ವರದಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ನಗರಸಭೆಯ ಮಾಜಿ ಸದಸ್ಯ ಪಿ.ಸಿ. ಜಗನ್ನಾಥ ರಾವ್ ಅವರ ಮಗ ಶ್ರೀಕೃಷ್ಣ ಜೆ. ರಾವ್, ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಯುವತಿ ಗರ್ಭಿಣಿಯಾಗಿದ್ದು, ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಗು ಜನಿಸಿದ ನಂತರ ಆರೋಪಿಯು ಆಕೆಯನ್ನು ಮದುವೆಯಾಗಲು ನಿರಾಕರಿಸಿ ವಂಚಿಸಿದ್ದ.
ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿ ವಿರುದ್ಧ ಐಪಿಸಿ ಕಲಂ 64(2)(M) ಹಾಗೂ ಬಿಎನ್ಎಸ್ ಕಾಯ್ದೆಯ ಕಲಂ 69 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಸ್ತುತ ಆತ ಜಾಮೀನಿನ ಮೇಲೆ ಹೊರಗಿದ್ದು, ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಹೈಕೋರ್ಟ್ನ ಕಟ್ಟುನಿಟ್ಟಿನ ಷರತ್ತು
ತನ್ನ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ರದ್ದುಪಡಿಸುವಂತೆ ಕೋರಿ ಆರೋಪಿ ಶ್ರೀಕೃಷ್ಣ ಜೆ. ರಾವ್, ಹಿರಿಯ ವಕೀಲ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಕಟ್ಟುನಿಟ್ಟಿನ ಷರತ್ತಿನೊಂದಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ನ್ಯಾಯಪೀಠದ ಪ್ರಮುಖ ವೀಕ್ಷಣೆ:
“ಒಂದು ವೇಳೆ ಈ ಪ್ರಕರಣವು ಕೇವಲ ಇಬ್ಬರ ನಡುವಿನ ಒಮ್ಮತದ ಸಂಬಂಧವಾಗಿದ್ದು, ಮಗು ಜನಿಸುವ ಹಂತಕ್ಕೆ ತಲುಪದೆ ಇದ್ದಿದ್ದರೆ ಹಾಗೂ ತಾಯಿ-ಮಗು ಸಂಕಷ್ಟಕ್ಕೆ ಸಿಲುಕದೆ ಇದ್ದಿದ್ದರೆ ಪ್ರಕರಣದ ನಡಾವಳಿಗೆ ಸಂಪೂರ್ಣ ತಡೆ ನೀಡಬಹುದಿತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಆರೋಪಿಯ ಕೃತ್ಯಗಳಿಂದಾಗಿ ಸಂತ್ರಸ್ತೆ ಮತ್ತು ಮಗು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಪೋಷಕರೂ ಮಗುವನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಪ್ರಕರಣ ಇತ್ಯರ್ಥವಾಗುವವರೆಗೆ ಆರೋಪಿಯು ಸಂತ್ರಸ್ತೆ ಮತ್ತು ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರತಿ ತಿಂಗಳು ₹75,000 ನೀಡಲೇಬೇಕು.”
ರಾಜಿ ಸಂಧಾನ ಪ್ರಕ್ರಿಯೆ ವಿಫಲವಾಗಿರುವ ಹಿನ್ನೆಲೆಯಲ್ಲಿ, ಹೈಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 11ರಂದು ಸಂಜೆ 4:00ಕ್ಕೆ ನಿಗದಿಪಡಿಸಿದೆ.

arrest
ಪುತ್ತೂರು: ಅಕ್ರಮ ಮರ ಸಾಗಾಟ ಯತ್ನ ವಿಫಲ; 10 ಲಕ್ಷ ರೂ. ಮೌಲ್ಯದ ಸೊತ್ತು ವಶ, ಆರೋಪಿ ಬಂಧನ
ಪುತ್ತೂರು: ಸಕಲೇಶಪುರದಿಂದ ಮಂಗಳೂರಿಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಸೋಮವಾರ (ಆಗಸ್ಟ್ 3) ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದೆ.
ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾಗುತ್ತಿದ್ದ ಅಶೋಕ್ ಲೇಲ್ಯಾಂಡ್ (KA-13-AA-6340) ವಾಹನವನ್ನು ತಡೆದು ಪರಿಶೀಲಿಸಿದಾಗ, ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ, ಮಂಡ್ಯ ಜಿಲ್ಲೆಯ ಹೊಳೆನರಸೀಪುರ ನಿವಾಸಿ ಲೋಕೇಶ್ ಅವರ ಪುತ್ರ ರೋಹಿತ್ ಎಸ್. ಎಲ್. (20) ಎಂಬಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ವಶಪಡಿಸಿಕೊಂಡ ವಾಹನ ಹಾಗೂ ಮರದ ದಿಮ್ಮಿಗಳ ಒಟ್ಟು ಮೌಲ್ಯ ಸುಮಾರು ₹10 ಲಕ್ಷ ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿದ್ದ ತಂಡ:
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ:ಉಪ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್,ಗಸ್ತು ಅರಣ್ಯ ಪಾಲಕರಾದ ವಿನಯಚಂದ್ರ ಮತ್ತು ದೀಕ್ಷಾ ಕೆ.ಚಾಲಕ ಕಿಶೋರ್ ಕುಮಾರ್ ಕೆ. ಭಾಗವಹಿಸಿದ್ದರು.
ಮುಂದಿನ ತನಿಖೆ:
ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರ ನಿರ್ದೇಶನದಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಎಚ್.ಪಿ. ರಾಘವೇಂದ್ರ ಅವರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.

-
accident3 days agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident3 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
