Connect with us

Bantawala

ನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ

Published

on

ನಾಗ ಬನ ನಾಶ ! ಯಾರೋ ಅನ್ಯಧರ್ಮಿಯರಿಂದ ನಡೆಯುತ್ತಿದ್ದರೆ ಧರ್ಮ ಜಾಗೃತಿಗಾಗಿ ದೊಡ್ಡ ಹೋರಾಟವೇ ನಡೆಯುತ್ತಿತ್ತು. ಖಂಡನೆಗಳು, ಹೋರಾಟಗಳು ಸಾಲುಸಾಲಾಗಿ ನಡೆದೇ ಹೋಗುತ್ತಿತ್ತು. ನಮ್ಮ ಧರ್ಮದ ಮೇಲೆ ದಾಳಿ ಆರಂಭವಾಗಿದೆ ಎಚ್ಚೆತ್ತು ಕೊಳ್ಳಿ ಹಿಂದೂ ಧರ್ಮಕ್ಕೆ ಅಪಾಯ ಎದುರಾಗಿದೆ ಎಂಬೆಲ್ಲ ಸ್ಲೋಗನ್‌ಗಳು ವೈರಲ್ ಆಗುತ್ತಿತ್ತು.

ದೈವಗಳ ನೆಲೆವೀಡು ಕರಾವಳಿಯಲ್ಲಿ ಶತಶತಮಾನಗಳಿಂದ ಆರಾಧಿಸಿಕೊಂಡು ಬರುತ್ತಿದ್ದ ಮೂಲ ನಾಗದೇವರ ಬನ ಮತ್ತು ಕೆರೆಯನ್ನು ಸರ್ವನಾಶಮಾಡಿ ಭಕ್ತಾದಿಗಳ ಮನಸ್ಸನ್ನು ಘಾಸಿಗೊಳಿಸಿದ ಘಟನೆಯೊಂದಕ್ಕೆ ದೈವಭಕ್ತರಿಂದಾಗಲಿ, ಧರ್ಮಪಾಲಕರಿಂದಾಗಲಿ ಯಾವುದೇ ವಿರೋಧಗಳು ಬಾರದೆ ಇದ್ದ ಅತ್ಯಂತ ನೋವಿನ ವಿಚಾರವೊಂದು ಇದೀಗ ಬೊಂಡಾಲ ಎಂಬ ಕರಾವಳಿ ಭಾಗದಿಂದ ಸದ್ದಿಲ್ಲದೆ ಬೆಳಕಿಗೆ ಬಂದಿದೆ.

ಬoಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೊಂಡಾಳ ಸೇನೆರೆಬೈಲು ಎಂಬಲ್ಲಿ ಅನಾದಿ ಕಾಲದಿಂದಲೂ ಹಲವಾರು ಕುಟುಂಬಗಳಿಗೆ ಮೂಲನಾಗದೇವರಾಗಿ ಆರಾಧನೆಯಾಗುತ್ತಿದ್ದ ಪವಿತ್ರ ನಾಗಬನವನ್ನು ಭೂಮಿ ಖರೀದಿದಾರ ಸಂಪೂರ್ಣವಾಗಿ ದ್ವಂಸ ಗೊಳಿಸಿ ಅದರ ಪ್ರಾಕೃತಿಕ ರಚನೆಯನ್ನೇ ನೆಲಸಮ ಮಾಡಿ ಭಕ್ತಾದಿಗಳ ಭಾವನೆಗಳನ್ನು ಜೀವಂತ ಸುಟ್ಟು ಹಾಕಿದ ಘಟನೆಯ ಸುತ್ತು ಭಕ್ತರು ಆಕ್ರೋಶಿತರಾಗಿರುವುದು ಕಂಡುಬoದಿದೆ.

ನಮ್ಮ ಪೂರ್ವಜರ ಲಗಾಯಿತು ನೂರಾರು ವರ್ಷಗಳಿಂದ ಆರಾಧನೆಯಾಗುತ್ತಿದ್ದ ನಾಗದೇವರು ನಾಗಬ್ರಹ್ಮ, ನಾಗರಾಜ, ಮತ್ತು ನಾಗಕನ್ನಿಕೆ ಸೇರಿದಂತೆ ಅಷ್ಟಕುಲ ನಾಗದೇವರ ಸಾನಿಧ್ಯವನ್ನು ದ್ವಂಸಗೊಳಿಸಿರುವ ವಿಚಾರವನ್ನು ಬೊಂಡಾಲ ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ತರು ಅವರ ಕ್ಷೇತ್ರದ ದೈವಜ್ಞರಲ್ಲಿ ಪ್ರಶ್ನಾಚಿಂತನೆಯನ್ನು ಇಟ್ಟು ಕೇಳಿದಾಗ ನಿಮ್ಮ ಮೂಲ ನಾಗದೇವರ ಸಂಕಷ್ಟ ಸಂದರ್ಭ ನೀವು ಅದನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಿದಲ್ಲಿ ನಾಗದೇವರು ಇನ್ನಷ್ಟು ಸಾನಿಧ್ಯಶಕ್ತಿಯಾಗಿ ಬೆಳಗಲಿದ್ದಾರೆ ಎಂದು ತಿಳಿಸಿದರೆನ್ನಲಾಗಿದೆ.

ಅವರ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದoತೆ ಕಣಿಯೂರು ಕ್ಷೇತ್ರದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ತಂತ್ರಿಗಳಾದ ಶಂಕರನಾರಾಯಣ ಪುರೋಹಿತರ ದಿವ್ಯ ಉಪಸ್ಥಿತಿಯಲ್ಲಿ ಜನವರಿ 9ರಂದು ಕುಟುಂಬಸ್ತರು ಸಾನಿಧ್ಯದಲ್ಲಿ ಸೇರಿಕೊಂಡು ದೈವಗಳ ಪವಿತ್ರವಾದ ಬನ ಕಟ್ಟೆಗಳನ್ನು ದ್ವಂಸಗೊಳಿಸಲಾದ ಅದೇ ಜಾಗದಲ್ಲಿ ನಾಗದೇವರು ಮತ್ತು ರಕ್ತೇಶ್ವರಿ ಸಾನಿಧ್ಯದ ಸಂಕಲ್ಪವನ್ನು ದೀಪದಲ್ಲಿ ಲಯನ ಮಾಡಿಕೊಂಡು ಕುಟುಂಬಸ್ತರು ಸಾಮೂಹಿಕ ಪ್ರಾರ್ಥನೆ ನಡೆಸಿದರು.


ಇದೇ ಜಾಗದಲ್ಲಿ ನಮಗೆ ನಾಗಸಾನಿಧ್ಯ ಮತ್ತೆ ಉದಯಿಸಿ ಬರುವಂತೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದ ಸ್ವಾಮೀಜಿಯವರು. ಸಮಾಜದಲ್ಲಿ ದೈವಬಲ ಇಲ್ಲವಾದರೆ ಆತನಿಂದ ಏನೂ ಸಾಧಿಸುವುದಕ್ಕೆ ಸಾಧ್ಯವಿಲ್ಲ. ಎಲ್ಲಿ ಕಳೆದುಕೊಂಡಿದ್ದೇವೆಯೋ ಅಲ್ಲಿಯೇ ಹುಡುಕುವ ಕೆಲಸ ಮಾಡಿದಾಗ ದೈವೀ ಅನುಗ್ರಹದ ಮೂಲಕ ಮತ್ತೇ ನಾಗಬನದ ನಿರ್ಮಾಣ ಇದೇ ಜಾಗದಲ್ಲಿ ಆಗಿಯೇ ಆಗುತ್ತದೆ ಎಂದು ಆಶೀರ್ವಚನ ಮಾಡಿದರು.

ತಲೆ ತಲಾಂತರಗಳಿOದ ಕ್ಷೇತ್ರದ ತಂತ್ರಿಗಳಾಗಿ ನಾಗದೇವರು ಸೇರಿದಂತೆ ದೈವದೇವರ ಸೇವೆಯನ್ನು ಮಾಡಿಕೊಂಡು ಬಂದಿರುವ ಶಂಕರನಾರಾಯಣ ತಂತ್ರಿಗಳವರು ಈ ಕ್ಷೇತ್ರ ನಮ್ಮವರಿಂದಲೇ ದ್ವಂಸವಾಗಿರುವ ದುಖಃದ ವಾರ್ತೆಯನ್ನು ಕೇಳಿ ಸಾನಿಧ್ಯಕ್ಕೆ ಆಗಮಿಸಿ ನೋಡಿ ಆತಂಕಗೊoಡು ನಾಗದೇವರಿಗೆ ಬಂದಿರುವ ಸಂಕಷ್ಟವನ್ನು ನೆನೆದು ಅದೇ ಸ್ಥಳದಲ್ಲಿ ಕಣ್ಣೀರು ಹಾಕಿ ಹೋಗಿದ್ದರು. ತನ್ನ ಹೃದಯಂತರಾಳದಿOದ ಸಾನಿಧ್ಯದಲ್ಲಿ ಪ್ರಾರ್ಥಿಸಿ ತೆರಳಿದವರು ಇಂದು ಮತ್ತೆ ಈ ಸಾನಿಧ್ಯಕ್ಕೆ ಆಗಮಿಸಿ ಭಕ್ತಾದಿಗಳ ನೋವಿನೊಂದಿಗೆ ಜೊತೆಯಾಗಿ ಮಾತನಾಡುತ್ತಾ ದೈವತಾ ಕಾರ್ಯವನ್ನು ನಾವು ಯಾವ ರೀತಿಯಲ್ಲಿ ಈ ಕ್ಷೇತದಲ್ಲಿ ಮಾಡಿಕೊಂಡು ಬಂದಿದ್ದೇವೆಯೋ ಅದೇ ರೀತಿಯಲ್ಲಿ ಇನ್ನು ಮುಂದೆಯೂ ಮಾಡಲು ಆ ದೈವಶಕ್ತಿಗಳು ಅನುಗ್ರಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಈ ಭೂಮಿಯ ಹಕ್ಕುದಾರ್ತಿಯಾಗಿರುವ ಗಿರಿಜ ಅವರ ಮಗಳು ಗಂಗಮ್ಮ ಮತ್ತು ಮಕ್ಕಳು ಉಪಸ್ಥಿತರಿದ್ದು, ನ್ಯಾಯಾಲಯದಲ್ಲಿ ದಾವೆಯಲ್ಲಿರುವ ಜಾಗವನ್ನು ಪರಬಾರೆ ಅಥವಾ ಮಾರಾಟ ಮಾಡಬಾರದೆಂಬ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ದೈವದೇವರ ಸ್ವತ್ತು ಎಂಬ ಭಯಭಕ್ತಿಯೂ ತೋರದೆ ಸಾನಿಧ್ಯವನ್ನು ಸಂಪೂರ್ಣವಾಗಿ ದ್ವಂಸ ಮಾಡಿರುವ ಬಗ್ಗೆ ಕಣ್ಣೀರು ಹಾಕಿದ ಘಟನೆಯೂ ನಡೆಯಿತು.

ಏನಿದು ದಾವೆ ?
ಬೊಂಡಾಳ ಸೇನೆರ ಬೈಲು ಎಂಬಲ್ಲಿ ಗಿರಿಜ ಎಂಬವರಿಗೆ ಸುಮಾರು 5.5 ಎಕ್ರೆ ಜಮೀನಿದ್ದು, ಸುಮಾರು 10 ವರ್ಷಗಳ ಹಿಂದೆ ಸಮಾನ ಹಕ್ಕುದಾರರಾಗಿರುವ 4 ಗಂಡು ಮತ್ತು 5 ಹೆಣ್ಣು ಮಕ್ಕಳಿರುವ ಸಂಸಾರದಲ್ಲಿ ಹೆಣ್ಣು ಮಕ್ಕಳ ಸಹಿಯನ್ನು ಪೋರ್ಜರಿ ಮಾಡಿ 4 ಗಂಡು ಮಕ್ಕಳು ಜಾಗವನ್ನು ಕಬಳಿಸಿರುವುದು ಮತ್ತು ಈ ಬಗ್ಗೆ ಗಿರಿಜ ಅವರ ಮಗಳು ಗಂಗಮ್ಮ ಗಂಡು ಮಕ್ಕಳು ಪಡೆದಿರುವ ಆಸ್ತಿ ಹಕ್ಕು ಅಕ್ರಮವಾಗಿ ಪಡೆದಿರುವುದಾಗಿದೆ, ಹಾಗೂ ತನ್ನ ಪಾಲಿನ ಆಸ್ತಿಯ ಹಕ್ಕನ್ನು ಪಡೆಯಲು ಮುಂದಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಶ್ರೀಮತಿ ಗಂಗಮ್ಮ,ಇತರರು ಮತ್ತು ಎದುರುವಾದಿಗಳ ಮದ್ಯೆ ಒ ಎಸ್ ನಂ.80/2018 ಎಂಬ ಮೂಲದಾವೆ ಮಾನ್ಯ ಪ್ರದಾನ ಸಿವಿಲ್ ನ್ಯಾಯಾಲಯದಲ್ಲಿ ಬಾಕಿಯಿರುತ್ತದೆ.ಅದಾಗ್ಯೂ ಬಿ ಶೆಡ್ಯೂಲ್ ಆಸ್ತಿಗೆ ಸಂಬOಧಪಟ್ಟOತೆ ಮಾನ್ಯ ನ್ಯಾಯಾಲಯವು 2018ರ ಪೆ.17.ರಂದು ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ ನಂತರ ,2018ರ ಫೆ. 24ರಂದು ತಡೆಯಾಜ್ಞೆ ಆದೇಶವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದ್ದು, ಈ ತಡೆ ಆದೇಶದಲ್ಲಿ ದಾವಾ ಆಸ್ತಿಯ ಮಾರಾಟ ಅಥವಾ ಹಸ್ತಾಂತರವನ್ನು ನಿರ್ಬಂಧಿಸಿರುವುದು ಈಗಲೂ ಚಾಲ್ತಿಯಲ್ಲಿರುದನ್ನು ಎದ್ರಿಯವರು ಮನಗಂಡಿದ್ದರೂ ಸಾನಿಧ್ಯವಿರುವ ಜಾಗದ ಹಕ್ಕುದಾರ್ತಿ ಎಂದಿರುವ ಗಿರಿಜ ಅವರ ಮಗ ಶೇಖರ ಸಾಲ್ಯಾನ್‌ರವರ ಪತ್ನಿ ವಿಜಯ ಮತ್ತು ಮಗ ರಾಹುಲ್ ಅವರು ಬಿಸಿರೋಡಿನ ಅಮರ್ ಸತೀಶ್ ಕುಮಾರ್ ಎಂಬವರಿಗೆ ವಿಕ್ರಯಿಸಿರುವುದು ಮತ್ತು ಅವರು ಕಮರ್ಷಿಯಲ್ ಆಗಿ ಸಾನಿಧ್ಯ ಅಗೆದು ದ್ವಂಸ ಮಾಡಿರುವುದಾಗಿ.. ಇದರಿಂದ ಅನೇಕ ಭಕ್ತರ ಮನಸ್ಸಿಗೆ ಆಘಾತವಾಗಿರುವುದಾಗಿ ಗಂಗಮ್ಮ ಅವರ ಮಗ ಜಯಶಂಕರ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ಈ ಕಾನೂನು ಪ್ರಕ್ರಿಯೆಗಳನ್ನು ತಿಳಿದುಕೊಂಡ ಜಮೀನುದಾರರು ವ್ಯಕ್ತಿಯೊಬ್ಬರಿಗೆ ಮಾರಾಟ ಹೆಸರಿನಲ್ಲಿ ಜಾಗವನ್ನು ಹಸ್ತಾಂತರಿಸಿರುವುದು ಮೊದಲನೇಯ ಅಪರಾಧವಾದರೆ. ಆ ಜಾಗವನ್ನು ಪಡೆದು ಕಮರ್ಶಿಯಲ್ ಯೋಚನೆಯಲ್ಲಿ ಅದರಲ್ಲಿದ್ದ ನಾಗಬನ ಮತ್ತು ಅದಕ್ಕೆ ಸಂಬAದಿಸಿದ ಕೆರೆಯನ್ನು ನಾಶಮಾಡಿರುವುದು ದೈವದ್ರೋಹವಾಗಿರುವುದಾಗಿ ಭಕ್ತರು ಆರೋಪಿಸಿದ್ದಾರೆ. ಅತೀ ಪುರಾತನವಾದ ನಾಗ ಬನದೊಳಗೆ ಭವ್ಯವಾದ ಕಟ್ಟೆಯನ್ನು ನಿರ್ಮಾಣ ಮಾಡಿ ಸಂಬAಧಿಸಿದ ಕೆರೆಗೂ ಕಲ್ಲಿನ ಕಟ್ಟೆಯನ್ನು ಕಟ್ಟಿ ರಕ್ತೇಶ್ವರಿ ದೈವಕ್ಕೂ ಪವಿತ್ರವದ ಕಟ್ಟೆಯನ್ನು ಕಟ್ಟಿ, ಹೀಗೆ ಸುಮಾರು 15 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐತಿಹ್ಯವನ್ನು ದ್ವಂಸಗೊಳಿಸಿದಾಗ ಅದನ್ನು ವೀಕ್ಷಿಸಲು ಬಂದ ಭಕ್ತರ ಮೇಲೆಯೇ ಕೇಸು ದಾಖಲಿಸುವುದೆಂದರೆ ನಾವು ಪಾಕಿಸ್ತಾನದಲ್ಲಿದ್ದೇವೆಯೋ ಎಂಬ ಭಯ ಬಂದಿದೆ. ಮೇಲಾಗಿ ನಾಗಬನದಲ್ಲಿ ಬೆಳೆದಿದ್ದ ಬೃಹದಾಕಾರದ ಮರಗಳನ್ನು ಅರಣ್ಯ ಇಲಾಖೆಯ ಕೃಪಾ ಕಟಾಕ್ಷದಲ್ಲಿ ಕಡಿದು ಸಾಗಾಟ ಮಾಡುವಾಗ ಯಾವುದೇ ಅಡೆತಡೆಗಳು ಬಂದಿಲ್ಲ, ಯಾವ ಇಲಾಖೆಗಳೂ ಇತ್ತ ಸುಳಿಯಲೇ ಇಲ್ಲ ಎಂದರೆ ಎಲ್ಲವೂ ನಾಗದೇವರಿಗೆ ಅರ್ಪಿತವಾಗಲಿ ಎಂದು ನಾವು ಸುಮ್ಮನೆ ಬಿಡುವುದಿಲ್ಲ. ಮರ ಸಾಗಾಟದ ಹಿಂದೆ ಇಲಾಖೆಯ ಅನುಮತಿ ಪತ್ರವನ್ನು ಪ್ರಶ್ನಿಸುತ್ತೇವೆ ಎಂದು ರಾಜೇಶ್ ಬಾಕಿಲ ತಿಳಿಸಿದ್ದಾರೆ.

ನೂರಾರು ವರ್ಷಗಳಿಂದ ನಮ್ಮ ಪಾಲಿನ ಮೂಲನಾಗದೇವರು ಎಂದು ಆರಾಧಿಸಿಕೊಂಡು ಬಂದಿರುವ ಕೆಲವು ಕುಟುಂಬಗಳು ತಮ್ಮ ನಂಬಿಕೆಯ ಆರಾಧನಾ ಶಕ್ತಿಗಳಾದ ದೈವದೇವರುಗಳ ಪ್ರಾಕೃತಿಕ ನಾಗಬನ ಮತ್ತು ಸಂಬoದಿಸಿದ ಕೆರೆಯನ್ನು ಜೆಸಿಬಿ ತಂದು ಸಂಪೂರ್ಣವಾಗಿ ನಾಶ ಮಾಡಿರುವ ಘಟನೆಯಿಂದ ನೊಂದು ಹೋಗಿದ್ದು, ಇದೀಗ ಆ ಜಮೀನಿಗೆ ಸಂಬoಧ ಪಟ್ಟಂತೆ ಏಕಮಾತ್ರ ಗಂಗಮ್ಮ ಕುಟುಂಬ ಮಾತ್ರ ಭಕ್ತರೊಂದಿಗೆ ಬೆಂಬಲವಾಗಿ ನಿಂತಿದ್ದು, ತಮ್ಮ ಪಾಲಿನ ಹಕ್ಕನ್ನು ಪಡೆದೇ ಪಡೆಯುತ್ತೇವೆ, ಮತ್ತು ಸದ್ರಿ ಜಾಗದಲ್ಲಿಯೇ ದೈವದೇವರ ಸಾನಿಧ್ಯಕ್ಕೆ ಶಕ್ತಿಯನ್ನು ನೀಡುವ ದೈವೀ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ನಾಗದೇವರು, ರಕ್ತೇಶ್ವರಿ ದೈವಗಳ ಸಂಕಲ್ಪದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಕುಟುಂಬದ ನೂರಾರು ಭಕ್ತರು ಪಾಲ್ಗೊಂಡರು. ಈ ಜಾಗದಲ್ಲಿದ್ದ ನಾಗಬನವನ್ನು ಜೀಣೋದ್ಧಾರ ಹೆಸರಿನಲ್ಲಿ ಎತ್ತಂಗಡಿ ಮಾಡಿ ಬೇರೆ ಜಾಗದಲ್ಲಿ ಮಾಡಲು ಬರುವುದಿಲ್ಲ. ಒಂದು ವೇಳೆ ಆ ರೀತಿ ಆಗುವುದಿದ್ದರೆ ನಾಗನಿಗೆ ತನು ಎರೆಯಲು ನೂರಾರು ಕಿ.ಮೀ. ಸಾಗುವುದು ಬೇಕಾಗಿರಲಿಲ್ಲ. ನಮ್ಮ ದೈವ ಕ್ಷೇತ್ರದ ಸಾನಿಧ್ಯ ಬಳಿಯಲ್ಲಿಯೇ ನಾಗನ ಪ್ರತಿಷ್ಠಾಪನೆ ಮಾಡಬಹುದಿತ್ತು ಮತ್ತು ನಾಗನ ತೆರವುಗೊಳಿಸಿದ ಪ್ರಕರಣಕ್ಕೆ ನಮ್ಮ ತಕರಾರು ಕೂಡಾ ಇರುತ್ತಿರಲಿಲ್ಲ ಎಂದು ಕುಟುಂಬಸ್ತರಾದ ಹರೀಶ್ ಪೂಜಾರಿ ಬಾಕಿಲ ತಿಳಿಸಿದ್ದಾರೆ.

ಕೊನೆಗೆ ಭಕ್ತರು ಸಾನಿಧ್ಯದ ಸಮೀಪದಲ್ಲಿರುವ ಪಂಜುರ್ಲಿ ಸಾನಿಧ್ಯಕ್ಕೆ ತೆರಳಿ ಅಲ್ಲಿ ದೈವಗಳಿಗೆ ದೀಪದೂಪ ಬೆಳಗಿ ಆರಾಧನೆಯನ್ನು ಮಾಡಿ ದೈವಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡು ಪ್ರಾರ್ಥನೆಯನ್ನು ಸಲ್ಲಿಸಿದರು. ಬೆಳಿಗ್ಗೆ ಬೊಳ್ಳೆಮಾರ್ ಕುಟುಂಬಸ್ತರು ತಮ್ಮ ಧರ್ಮದೈವ ಧೂಮಾವತಿ ಸಪರಿವಾರ ದೈವಗಳಿಗೆ ಪ್ರಾರ್ಥಿಸಿ ಸಾನಿಧ್ಯಕ್ಕೆ ಆಗಮಿಸಿದರು ಮತ್ತು ಗ್ರಾಮದ ದೈವದೇವರಿಗೆ ಸಂಕಲ್ಪವನ್ನು ಮಾಡಿಕೊಂಡು ನಾಗ ಸಾನಿಧ್ಯವನ್ನು ಉಳಿಸಿಕೊಳ್ಳಲು ಪ್ರಾರ್ಥನೆಯನ್ನು ಮಾಡಿದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪಣೋಳಿಬೈಲು ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಅಗೇಲು ಸೇವೆ ಸಮರ್ಪಣೆ!

Published

on

ಬಂಟ್ವಾಳ: ತುಳುನಾಡಿನ ಇತಿಹಾಸ ಪ್ರಸಿದ್ಧ, ಪರಮ ಕಾರಣೀಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಪಣೋಳಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಗರಿಷ್ಠ ಪ್ರಮಾಣದ ಅಗೇಲು ಸೇವೆ ನಡೆದಿದೆ. ಅಂದು ಒಂದೇ ದಿನ ಭಕ್ತರಿಂದ ಬರೋಬ್ಬರಿ 4,180 ಅಗೇಲು ಸೇವೆಗಳು ಸಂದಾಯವಾಗುವ ಮೂಲಕ ಕ್ಷೇತ್ರದ ಕಾರಣೀಕ ಶಕ್ತಿಗೆ ಸಾಕ್ಷಿಯಾಯಿತು .

ಇಷ್ಟೊಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಏಕದಿನದಲ್ಲಿ ಅಗೇಲು ಸೇವೆ ಸಲ್ಲಿಸುತ್ತಿರುವುದು ಕಲ್ಲುರ್ಟಿ ದೈವದ ಮೇಲಿನ ಅವರ ಅಚಲ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಇದು ಈ ವರ್ಷದಲ್ಲಿ ಸಂದಾಯವಾದ ಅತ್ಯಂತ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ.

ಶೈಕ್ಷಣಿಕ ವರ್ಷದ ಆರಂಭ: ಪ್ರಾರ್ಥನೆ ಸಲ್ಲಿಸಿದ ಭಕ್ತರ ದಂಡು

ಪ್ರಸ್ತುತ ಶಾಲಾ-ಕಾಲೇಜುಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುರ್ಟಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಭಕ್ತರು ಮುಗಿಬಿದ್ದಿದ್ದರು. ಮಕ್ಕಳ ಉತ್ತಮ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಸಂಸ್ಥೆಗಳ ಆಯ್ಕೆ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಹಾಗೂ ವಿದೇಶಕ್ಕೆ ತೆರಳುವ ಭಕ್ತರ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರಾವಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಸನ್ನಿಧಿಗೆ ಭೇಟಿ ನೀಡಿ ಅಗೇಲು ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಶಾಲಾ-ಕಾಲೇಜು ರಜೆ ಅಥವಾ ವಿಶೇಷ ಹಬ್ಬಗಳ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸುವುದು ಕ್ಷೇತ್ರದ ವಿಶೇಷತೆಯಾಗಿದೆ.

ನಿರಂತರವಾಗಿ ಸಾಗಿದ ಪ್ರಸಾದ ವಿತರಣೆ

ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1:30ರ ಬಳಿಕ ಅಗೇಲು ಸೇವೆಯ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ಆದರೆ ಭಾನುವಾರ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಸೇವೆಗಳು ಇದ್ದ ಕಾರಣ ಪ್ರಕ್ರಿಯೆ ಸ್ವಲ್ಪ ತಡವಾಗಿ ಆರಂಭಗೊಂಡು, ಸಂಜೆಯ ನಂತರವೂ ನಿರಂತರವಾಗಿ ಸಾಗಿತು. ಕ್ಷೇತ್ರಕ್ಕೆ ಹರಿದುಬಂದಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೈವದ ಪ್ರಸಾದ ಸ್ವೀಕರಿಸಿದರು.

ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹಾಗೂ ಸೇವೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

ಕಳೆದ ವರ್ಷ ಜೂನ್ 22ರಂದು ಆ ವರ್ಷದ ಗರಿಷ್ಠ ಅಂದರೆ 3,871 ಅಗೇಲು ಸೇವೆಗಳು ಸಂದಾಯವಾಗಿದ್ದವು.

ಅದಕ್ಕೂ ಮುನ್ನ, 2024ರ ಜೂನ್ 2ರಂದು 3,908 ಅಗೇಲು ಸೇವೆಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಾರಿ ಭಾನುವಾರ 4,180 ಸೇವೆಗಳು ಸಲ್ಲಿಕೆಯಾಗಿದೆ.

ಪಣೋಳಿಬೈಲು ಕ್ಷೇತ್ರದ ಪ್ರಮುಖ ವಿಶೇಷತೆಗಳು:

  • ಸಜೀಪ ಮೂಡದ ಪುಣ್ಯಕ್ಷೇತ್ರ: ಈ ಪ್ರಸಿದ್ಧ ಕಾರಣೀಕ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಂದರ ಪರಿಸರದಲ್ಲಿದೆ.
  • ವಿಶೇಷ ಸೇವೆಗಳ ದಿನ: ಈ ದೈವಸ್ಥಾನದಲ್ಲಿ ವಾರದ ಮೂರು ದಿನಗಳು ಅಂದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾತ್ರ ವಿಶೇಷ ಅಗೇಲು ಸೇವೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಕೋಲ ಸೇವೆ ಜರುಗುತ್ತದೆ.
  • ಭಾವೈಕ್ಯತೆಯ ಸನ್ನಿಧಿ: ಪಣೋಳಿಬೈಲು ಕ್ಷೇತ್ರವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲಾ ಧರ್ಮದವರೂ ಮುಕ್ತವಾಗಿ ಬಂದು ದೈವಕ್ಕೆ ಹರಕೆ ಸಲ್ಲಿಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳುವ ಅಪೂರ್ವ ಭಾವೈಕ್ಯತೆಯ ಕೇಂದ್ರವಾಗಿದೆ.
Continue Reading

accident

ಪೆರುವಾಯಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದ ಕೋಳಿ ಸಾಗಾಟದ ಪಿಕಪ್; ಚಾಲಕ ಅದೃಷ್ಟವಶಾತ್ ಪಾರು!

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಪೆರುವಾಯಿ ಗ್ರಾಮದ ಮುಖ್ಯ ಸೇತುವೆ ಬಳಿ ಶುಕ್ರವಾರ ಮುಂಜಾನೆ ಭೀಕರ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಪಲ್ಟಿ ಹೊಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಂಜಾನೆ ಸಂಭವಿಸಿದ ಅವಘಡ:

ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು ಪೆರುವಾಯಿ ಸೇತುವೆ ತಲುಪುತ್ತಿದ್ದಂತೆ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ನಿಯಂತ್ರಣ ಕಳೆದುಕೊಂಡು ನೇರವಾಗಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಸ್ಥಳೀಯರು ತಕ್ಷಣ ಧಾವಿಸಿ ಚಾಲಕನನ್ನು ರಕ್ಷಿಸಿದ್ದಾರೆ.

ಕಿರಿದಾದ ಸೇತುವೆ, ಪಕ್ಕದಲ್ಲೇ ಟ್ರಾನ್ಸ್‌ಫಾರ್ಮರ್: ಹೆಚ್ಚಿದ ಅಪಘಾತಗಳ ಭೀತಿ

ಪೆರುವಾಯಿ ಸೇತುವೆಯು ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಜೋಡಿಸುವ ಅಂತರರಾಜ್ಯ ಗಡಿಭಾಗದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಕೇರಳದ ಬೆರಿಪದವು, ಉಪ್ಪಳ ಮುಂತಾದ ಭಾಗಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ.

ಆದರೆ, ಈ ಸೇತುವೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಇದರ ಜೊತೆಗೆ ಸೇತುವೆಯ ತೀರಾ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಇದು ಅಪಘಾತಗಳಿಗೆ ನೇರ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ತಿರುವಿನಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಕ್ರಮ ಕೆಂಪುಕಲ್ಲು ಸಾಗಾಟದ ಹಾವಳಿ:

ಕೇರಳ ಕಡೆಯಿಂದ ಪ್ರತಿನಿತ್ಯ ಈ ಮಾರ್ಗವಾಗಿ ಕೆಂಪುಕಲ್ಲಿನ ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದು ಕೂಡ ಇಲ್ಲಿನ ಸರಣಿ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದು ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮಸ್ಥರ ಆಕ್ರೋಶ – ಅಭಿವೃದ್ಧಿಗೆ ಬಿಗಿ ಪಟ್ಟು:

“ಇದು ಅಂತರರಾಜ್ಯ ಸಂಪರ್ಕದ ಪ್ರಮುಖ ರಸ್ತೆಯಾಗಿದ್ದರೂ, ಯಾವುದೇ ಸರ್ಕಾರಗಳು ಈ ಸೇತುವೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿಲ್ಲ. ಸೇತುವೆಯನ್ನು ಅಗಲಗೊಳಿಸದೆ, ಅಪಾಯಕಾರಿ ತಿರುವನ್ನು ಸರಿಪಡಿಸದೆ ಮತ್ತು ಇಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸದ ಹೊರತು ಈ ಭಾಗದಲ್ಲಿ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಪೆರುವಾಯಿ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ (PWD) ಎಚ್ಚೆತ್ತುಕೊಂಡು, ತಕ್ಷಣವೇ ಮಧ್ಯಪ್ರವೇಶಿಸಿ ಸೇತುವೆಯನ್ನು ವಿಸ್ತರಿಸಬೇಕು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆಗಳನ್ನು (Crash Barriers) ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.




Continue Reading

Bantawala

ಪಂಚಾಯತ್ ರಾಜ್ ಬಲಪಡಿಸಿದ್ದು ಕಾಂಗ್ರೆಸ್; ದುರ್ಬಲಗೊಳಿಸಲು ಬಿಜೆಪಿ ಯತ್ನ: ಮಾಜಿ ಸಚಿವ ರಮಾನಾಥ ರೈ

Published

on

ಬಂಟ್ವಾಳ: ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಂಡಿಸಿದ್ದ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಗೆ ಬಿಜೆಪಿ ಅಡ್ಡಿಪಡಿಸಿತ್ತು. ಬಳಿಕ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಜನರಿಗೆ ಅಧಿಕಾರ ಹಂಚಿಕೆಯಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ದುರ್ಬಲ ವರ್ಗಗಳ ಸಬಲೀಕರಣಕ್ಕೆ ನೆರವಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಸುಳ್ಳು ಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಬಂಟ್ವಾಳ ಕ್ಷೇತ್ರದಲ್ಲಿಯೇ ಸುಮಾರು 5,000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಕರರಾಗಿ ಮಾತನಾಡಿದ ಸುಧೀರ್ ಕುಮಾರ್ ಮರೋಳಿ, ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೀಟ್ ಪರೀಕ್ಷೆಯ ನಿರ್ವಹಣೆ ಕುರಿತು ಉದ್ಭವಿಸಿರುವ ಪ್ರಶ್ನೆಗಳು ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ತಾಂತ್ರಿಕ ಲೋಪಗಳಿಂದ ಅರ್ಹ ಮತದಾರರ ಹೆಸರುಗಳು ಕೈಬಿಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿ ಶೃಂಗೇರಿಯ ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆಯಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ ಗೇರು ನಿಗಮದ ಅದ್ಯಕ್ಷರಾದ ಮಮತಾ ಎಸ್. ಗಟ್ಟಿ, ಪ್ರವಾಸೋದ್ಯಮ ನಿಗಮದ ಅದ್ಯಕ್ಷೆ ಶಾಲೆಟ್ ಪಿಂಟೋ,ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತಾಡಿದರು.

ಈ ಸಂಧರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬಿ. ಪದ್ಮಶೇಖರ್ ಜೈನ್, ಪಿ.ಪಿ. ವರ್ಗೀಸ್, ಶಾಹುಲ್ ಹಮೀದ್, ಸರ್ವೋತ್ತಮ ಗೌಡ ನೆಲ್ಯಾಡಿ, ದಿನೇಶ್ ಮೂಳೂರು, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಅರುಣ್ ಕುಮಾರ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ರಾಧಾಕೃಷ್ಣ ಬೊಲ್ಲೂರು, ಅಭಿಲಾಷ್ ಪಿ.ಕೆ., ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ, ಕುಮಾರಿ ಅಪ್ಪಿ, ಉಷಾ ಅಂಚನ್, ಜಯಂತಿ ಪೂಜಾರಿ, ಸುಧೀರ್ ಕುಮಾರ್ ಶೆಟ್ಟಿ, ಐಡಾ ಸುರೇಶ್, ಶೈಲಜಾ ರಾಜೇಶ್ ಹಾಗೂ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಜಗದೀಶ್ ಕೊಯಿಲ ಸ್ವಾಗತಿಸಿದರು. ಕುಳಾಲು ಸುಭಾಷ್ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೃಂದಾ ಪೂಜಾರಿ ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.




Continue Reading

Trending

Copyright © 2025 Deevatige

error: Content is protected !!