Connect with us

Article

ನಾಗ ದೇವರ ನಂಬಿಕೆಗೆ ಕನ್ನ: ಕೆಲಿಂಜದ ನಗ್ರಿಮೂಲೆಯಲ್ಲಿ ಧರ್ಮದ ಹೆಸರಿನಲ್ಲಿ ಭಕ್ತರಿಗೆ ವಂಚನೆ! ಸಾವಿರಗಟ್ಟಲೆ ಹಣ ದೋಚಿದ ʼಮರಿವಂಚಕರುʼ

Published

on

ವಿಟ್ಲ: ಧರ್ಮ ಎಂಬುದು ಮನುಷ್ಯನಿಗೆ ನೈತಿಕತೆ, ಶಾಂತಿ ಮತ್ತು ಸಮಾಧಾನವನ್ನು ನೀಡುವ ಪರಮ ಶಕ್ತಿಯಾಗಿದೆ. ಕರಾವಳಿ ಭಾಗದಲ್ಲಂತೂ ನಾಗ ದೇವರನ್ನು ಅತ್ಯಂತ ಭಕ್ತಿ-ಭಾವದಿಂದ ಆರಾಧಿಸಲಾಗುತ್ತದೆ. ನಾಗನ ಮರಣವಾದರೆ ಸೂತಕದ ಆಚರಣೆ ನಡೆಸಿ, ಪುರೋಹಿತರ ಮುಖೇನ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುವುದು ಇಲ್ಲಿ ನಡೆದುಕೊಂಡು ಬಂದಿರುವ ಧಾರ್ಮಿಕ ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಇದೇ ಧಾರ್ಮಿಕತೆಯ ಹೆಸರಿನಲ್ಲಿ ಜನರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು, ಆರ್ಥಿಕ ಹಾಗೂ ಮಾನಸಿಕವಾಗಿ ದೋಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹುದೇ ಒಂದು ಸದ್ದಿಲ್ಲದ ವಂಚನಾ ಜಾಲದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ-ಕಲ್ಲಡ್ಕ ಮಾರ್ಗದ ಕೆಲಿಂಜ ಸಮೀಪದ ನಗ್ರಿಮೂಲೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದು ಹೋಗಿದೆ.

ಘಟನೆಯ ಹಿನ್ನೆಲೆ: ನಾಗನ ಹೆಸರಿನಲ್ಲಿ ಸತ್ತ ಕೇರೆ ಮುಂದಿಟ್ಟು ವಸೂಲಿ

ಇಂದು ಬೆಳಿಗ್ಗೆ ಸುಮಾರು 7.00 ರ ವೇಳೆಗೆ ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ಜನ ಸಂಚರಿಸುವ ಸಮಯದಲ್ಲಿ, ನಗ್ರಿಮೂಲೆಯ ರಸ್ತೆ ಬದಿಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳು ನಿಂತುಕೊಂಡಿದ್ದರು. ಅವರ ಹತ್ತಿರದಲ್ಲಿಯೇ ರಸ್ತೆ ಬದಿಯಲ್ಲಿ ಒಂದು ಬಿಳಿ ಬಟ್ಟೆಯನ್ನು ಹಾಸಲಾಗಿತ್ತು. ಆ ಬಟ್ಟೆಯ ಮೇಲೆ ವಿಪರೀತ ವಾಸನೆ ಬರುತ್ತಿದ್ದ ಸತ್ತ ಹಾವಿನ (ಕೇರೆ ಹಾವು ) ಕಳೇಬರವೊಂದನ್ನು ಇಡಲಾಗಿತ್ತು.

ದಾರಿಯಲ್ಲಿ ಹೋಗುವ ಸಾರ್ವಜನಿಕರನ್ನು ಕೈಬೀಸಿ ಕರೆಯುತ್ತಿದ್ದ ಈ ಇಬ್ಬರು ಖದೀಮರು, “ನಾವು ಈ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ನಾಗರಹಾವು ಮರಣ ಹೊಂದಿರುವುದು ಕಂಡುಬಂತು. ಹಿಂದೂಗಳಾದ ನಾವು ನಾಗನ ಕಳೇಬರವನ್ನು ನೋಡಿ ಹಾಗೆಯೇ ಮುಂದೆ ಹೋಗುವಂತಿಲ್ಲ. ಅದಕ್ಕೆ ಸಮರ್ಪಕವಾದ ಅಂತ್ಯಸಂಸ್ಕಾರ ಮಾಡಿಯೇ ಹೋಗಬೇಕು ಎಂದು ತೀರ್ಮಾನಿಸಿದ್ದೇವೆ. ಆದ್ದರಿಂದ ಸಂಸ್ಕಾರಕ್ಕೆ ತಗಲುವ ವೆಚ್ಚವನ್ನು ಭಕ್ತರಿಂದ ಅಪೇಕ್ಷಿಸುತ್ತಿದ್ದೇವೆ” ಎಂದು ನಂಬಿಸುವಂತೆ ನಾಟಕವಾಡಿದ್ದಾರೆ.

ಭಯಭಕ್ತಿಯಿಂದ ಹಣ ಸುರಿದ ಭಕ್ತರು

ನಾಗನ ಭೂಮಿಯಾದ ತುಳುನಾಡಿನಲ್ಲಿ ನಾಗದೋಷ ಹಾಗೂ ನಾಗನ ಶಾಪದ ಬಗ್ಗೆ ಜನರಲ್ಲಿ ಅಪಾರ ಭಯ ಮತ್ತು ಭಕ್ತಿಯಿದೆ. ಹಾವಿನ ಕಳೇಬರವನ್ನು ಕಂಡರೆ ಅಂತ್ಯಸಂಸ್ಕಾರ ಮಾಡದೆ ಹೋಗಬಾರದು ಎಂಬ ವಾಡಿಕೆಯೂ ಇರುವುದರಿಂದ, ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರು ಗಾಡಿಗಳನ್ನು ನಿಲ್ಲಿಸಿ ಆ ಬಿಳಿ ಬಟ್ಟೆಯ ಮೇಲೆ ಹಣವನ್ನು ಸುರಿಯಲಾರಂಭಿಸಿದರು. ಬೆಳಿಗ್ಗೆ 6:30ರಿಂದ ಸುಮಾರು 8 ಗಂಟೆಯವರೆಗೂ ಈ ಸುದ್ದಿ ಜನರಿಂದ ಜನರಿಗೆ ಹರಡಿ, ಬೇರೆ ಬೇರೆ ಕಡೆಯಿಂದಲೂ ಜನರು ಬಂದು ಹಣ ಹಾಕಿ ಹೋಗಿದ್ದಾರೆ. ಈ ತುಳುನಾಡಿನಲ್ಲಿ ಎಲ್ಲಿ ನಾಗನ ಮರಣವಾದರೂ ಅದರ ಸಂಸ್ಕಾರದಲ್ಲಿ ಪಾಲ್ಗೊಂಡರೆ ಯಾವುದೇ ನಾಗದೋಷಗಳ ಪರಿಹಾರವಾಗುತ್ತದೆ, ಮತ್ತು ಈ ಬಗ್ಗೆ ನಿರ್ಲಕ್ಷ ಮಾಡಿದರೆ ಸಮಸ್ಯೆಗಳು ಕಾಡುತ್ತವೆ ಎಂದು ನಂಬಿದ ಜನ ಇಷ್ಟೊಂದು ನಾಗನ ಮರಣದ ಬಗ್ಗೆ ಹೇಳಿದಾಗ ಕೇಳಿಸಿಕೊಂಡು ಹೋಗುವುದೇ ಇಲ್ಲ. ತನ್ನ ಶಕ್ತಿಯಾನುಸಾರ ಅದರ ಸಂಸ್ಕಾರಕ್ಕೆ ಹಣ ನೀಡಿಯೇ ನೀಡುತ್ತಾನೆ. ಜನ ಗಾಡಿ ನಿಲ್ಲಿಸಿ ಹಣವನ್ನು ಬಿಳಿ ಬಟ್ಟೆಯ ಮೇಲೆ ನಾಗನ ಕಲೆಬರವನ್ನೂ ನೋಡದೆ ಸುರಿದಿದ್ದಾರೆ.

ವಂಚನೆ ಬಯಲಿಗೆಳೆದ ಸ್ಥಳೀಯರ ಪ್ರಶ್ನೆಗಳು

ಆದರೆ, ಅಲ್ಲಿಗೆ ಬಂದ ಕೆಲವು ಸ್ಥಳೀಯ ಹಿರಿಯರು ಮತ್ತು ಜಾಗೃತ ನಾಗರಿಕರು ಇವರ ವರ್ತನೆಯನ್ನು ಕಂಡು ಪ್ರಶ್ನಿಸಲು ಆರಂಭಿಸಿದಾಗ ವಂಚಕರ ಅಸಲಿ ಮುಖವಾಡ ಕಳಚಲಾರಂಭಿಸಿತು ಆದರೆ ಅವರನ್ನು ರೆಡ್‌ ಹ್ಯಾಂಡಾಗಿ ಹಿಡಿಯಲು ನಾಗನ ಕಳೇಬರದ ಬಗ್ಗೆ ಮಾಹಿತಿ ಇಲ್ಲದೆ ಭಯವಾಗಿತ್ತು.

ಸ್ಥಳೀಯ ಹಿರಿಯರ ಪ್ರಶ್ನೆ: “ಈ ಹಾವನ್ನು ಎಲ್ಲಿ ಸಂಸ್ಕಾರ ಮಾಡುತ್ತೀರಿ? ಯಾವ ಪುರೋಹಿತರನ್ನು ಮಾತನಾಡಿಸಿದ್ದೀರಿ?” ಎಂದು ಹಿರಿಯರೊಬ್ಬರು ಪ್ರಶ್ನಿಸಿದಾಗ, ವಂಚಕರು ಮುಖಭಂಗ ಅನುಭವಿಸಿ, “ನಾವು ಇಲ್ಲಿ ಮಾಡುವುದಿಲ್ಲ, ಸುರತ್ಕಲ್‌ನಲ್ಲಿ ಕಡಿಮೆ ಖರ್ಚಿಗೆ ನಾಗನ ಅಂತ್ಯಸಂಸ್ಕಾರ ಮಾಡುತ್ತಾರೆ, ಅಲ್ಲಿಗೇ ತೆಗೆದುಕೊಂಡು ಹೋಗುತ್ತೇವೆ” ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಆಗ ಆ ಹಿರಿಯರು “ಇಲ್ಲಿಯೂ ಕಡಿಮೆ ಖರ್ಚಿನಲ್ಲಿ ಮಾಡಿಕೊಡುತ್ತಾರೆ” ಎಂದು ಹೇಳಿದವರೇ ತನ್ನ ಪಾಲಿನ ದೋಷದ ಹಣ ನೀಡಿ ತೆರಳಿದ್ದಾರೆ.

ಸ್ಥಳೀಯ ಮುಸ್ಲಿಂ ರಿಕ್ಷಾ ಚಾಲಕರ ವೀಕ್ಷಣೆ: ಮತ್ತೊಬ್ಬ ಸ್ಥಳೀಯ ಮುಸ್ಲಿಂ ಸಮುದಾಯದ ರಿಕ್ಷಾ ಚಾಲಕರು ಇವರನ್ನು ತರಾಟೆಗೆ ತೆಗೆದುಕೊಂಡು, “ನೀವು ಬೇರೆ ಕಡೆಯವರು ಬಂದು ಇಲ್ಲಿ ಯಾಕೆ ಹಾವಿನ ಸಂಸ್ಕಾರಕ್ಕೆ ತೊಡಗಿದ್ದೀರಿ? ನಮ್ಮ ಊರಿನವರಿಗೆ ಹೇಳಿದ್ದರೆ ನಾವೆಲ್ಲರೂ ಸೇರಿ ಮಾಡುತ್ತಿದ್ದೆವು” ಎಂದಾಗ, ವಂಚಕರ ಮಾತಿನಲ್ಲಿ ವಂಚನೆ ಬಯಲಾಗುವ ಭಯ ಎದ್ದು ಕಾಣುತ್ತಿತ್ತು ಅವರನ್ನು ಮುಂದೆ ಪ್ರಶ್ನಿಸಲು ನಮಗೆ ಧರ್ಮದ ಮದ್ಯೆ ಭಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಾಗೃತ ಭಕ್ತನ ಸಾಹಸ: ಅಷ್ಟರಲ್ಲಿ ₹500 ಹಣ ಹಾಕಿದ ಮತ್ತೊಬ್ಬ ವ್ಯಕ್ತಿ, “ಇದು ಇಂದು ಸತ್ತ ಕಳೇಬರ ಅಲ್ಲ, ವಿಪರೀತ ವಾಸನೆ ಬರುತ್ತಿದೆ. ಇದು ನಾಗರಹಾವು ಹೌದೇ ಅಲ್ಲವೇ ಎಂದು ಜಾಲಿಕಟ್ಟವನ್ನು ನೋಡಲು ಹೊಟ್ಟೆಯ ಕೆಳಭಾಗವನ್ನು ತಿರುಗಿಸಲು ಯತ್ನಿಸಿದಾಗ”, ಕಲೆಕ್ಷನ್‌ಗೆ ನಿಂತಿದ್ದ ಖದೀಮರು “ಅದನ್ನು ಮುಟ್ಟಬೇಡಿ” ಎಂದು ಜೋರು ಮಾಡಿ ತಡೆಯೊಡ್ಡಿದ್ದಾರೆ.

10 ಸಾವಿರಕ್ಕೂ ಮಿಕ್ಕಿ ಹಣ ದೋಚಿ ಪರಾರಿ!

ಊರಿನ ಹಲವರಲ್ಲಿ ಕೆಲವರು ಒಟ್ಟಾಗಿ “ನಮ್ಮ ಊರಿನಲ್ಲಿ ಆಗಿರುವುದಕ್ಕೆ ಇವರೇಕೆ ಹಣ ವಸೂಲಿ ಮಾಡಬೇಕು, ನಾವೇ ಎಲ್ಲ ಸೇರಿ ಸಂಸ್ಕಾರ ಮಾಡಬಹುದಿತ್ತು” ಎಂದು ಮಾತನಾಡಿ ಕೊಳ್ಳುವಷ್ಟರಲ್ಲಿಯೇ, ಅಂದರೆ ಸುಮಾರು ಬೆಳಿಗ್ಗೆ 9 ಗಂಟೆಯ ವೇಳೆಗೆ ಒಂದು ಅಚ್ಚರಿಯ ಸುದ್ದಿ ಪ್ರದೇಶದಲ್ಲಿ ಹರಿದಾಡಿದೆ. ಬಿಳಿಬಟ್ಟೆ ಹಣ ಮತ್ತು ಕಲೆಕ್ಷನ್‌ ಮಾಡುವವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಅವರ ಮೇಲಿನ ಸಂಶಯಗಳು ಒಂದೊಂದಾಗಿ ಊರಿಡಿ ಹರಿಯಲಾರಂಭಿಸಿದೆ. . ಕೊನೆಗೂ ಧಾರ್ಮಿಕತೆಯ ಭಯ ಮೂಡಿಸಿ ಕೇವಲ ಎರಡೂವರೆ ಗಂಟೆಗಳಲ್ಲಿ ಅಮಾಯಕ ಭಕ್ತರಿಂದ ಸುಮಾರು ₹10,000ಕ್ಕೂ ಮಿಕ್ಕಿದ ಹಣವನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ ಎಂದು ತಿಳಿದು ಸಾರ್ವಜನಿಕರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಮಾಧ್ಯಮದ ಕಳಕಳಿಯ ವಿನಂತಿ ಮತ್ತು ಎಚ್ಚರಿಕೆ:

ಇಂದಿನ ದಿನಗಳಲ್ಲಿ ದೇವಸ್ಥಾನ, ಮಠ, ಬ್ರಹ್ಮಕಲಶೋತ್ಸವ, ವಿಶೇಷ ಪೂಜೆಗಳು, ಹುಂಡಿ ಹಣ, ದೇಣಿಗೆ ಅಥವಾ ದೋಷ ನಿವಾರಣೆಯ ಹೆಸರಿನಲ್ಲಿ ಅಮಾಯಕ ಭಕ್ತರ ಭಯ ಹಾಗೂ ಭಕ್ತಿಯನ್ನು ದುರುಪಯೋಗಪಡಿಸಿಕೊಂಡು ಹಣ ನುಂಗಿ ನೀರು ಕುಡಿಯುವ ಮಹಾವಂಚಕರ ಮಧ್ಯೆ, ಇಂತಹ ‘ಮರಿ ವಂಚಕರು’ ಕೂಡ ಹುಟ್ಟಿಕೊಳ್ಳುತ್ತಿರುವುದು ಖೇದಕರ.ಧರ್ಮದ ಹೆಸರಿನಲ್ಲಿ ಯಾರಾದರೂ ಇಂತಹ ಮೋಸ, ಬೆದರಿಕೆ ಅಥವಾ ಆರ್ಥಿಕ ಶೋಷಣೆ ಮಾಡಲು ಮುಂದಾದರೆ, ಸಾರ್ವಜನಿಕರು ತಕ್ಷಣವೇ ಜಾಗೃತರಾಗಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ನಮ್ಮ ಮಾಧ್ಯಮವು ಸಾರ್ವಜನಿಕರಲ್ಲಿ ಕಳಕಳಿಯ ವಿನಂತಿ ಮಾಡುತ್ತದೆ. ಅಂಧಶ್ರದ್ಧೆಗೆ ಬೀಳದೆ, ಜಾಗೃತವಾಗಿರುವುದೇ ಇಂತಹ ಖದೀಮರಿಗೆ ನೀಡುವ ಸರಿಯಾದ ಉತ್ತರ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಆಕಾಶದ ಕಾಣುತ್ತಿದೆ ಅಚ್ಚರಿ: ಚಂದ್ರನ ಪಕ್ಕ‌ ಇಂದು ಮಿನುಗುತ್ತಿರುವ ‘ಬೆಳ್ಳಿ ಚುಕ್ಕೆ’ ಶುಕ್ರ ಗ್ರಹದ ರಹಸ್ಯ!

Published

on

ಆಕಾಶದಲ್ಲಿ ಚಂದ್ರನ ಸನಿಹದಲ್ಲಿ ಅತಿ ಹೆಚ್ಚು ಪ್ರಕಾಶಮಾನವಾಗಿ ಮಿನುಗುತ್ತಿರುವುದು ಯಾವುದೇ ನಕ್ಷತ್ರವಲ್ಲ, ಬದಲಾಗಿ ಸೌರವ್ಯೂಹದ ಅತ್ಯಂತ ಪ್ರಕಾಶಮಾನವಾದ ಶುಕ್ರ ಗ್ರಹ (Venus). ಸಂಜೆಯ ಪಶ್ಚಿಮ ದಿಗಂತದಲ್ಲಿ ಬಾಲಚಂದ್ರ ಹಾಗೂ ಈ ಬೆಳ್ಳಿ ಚುಕ್ಕೆಯು ಪರಸ್ಪರ ಅತ್ಯಂತ ಹತ್ತಿರದಲ್ಲಿ ಗೋಚರಿಸುತ್ತಿರುವುದು ಎಲ್ಲೆಡೆ ಭಾರಿ ಕುತೂಹಲ ಮೂಡಿಸಿದೆ.

ಇದು ನಕ್ಷತ್ರವೇಕಲ್ಲ? ಶುಕ್ರ ಗ್ರಹದ ವಿಶೇಷತೆ

ಸ್ವಂತ ಬೆಳಕಿಲ್ಲದಿದ್ದರೂ ಕಾಂತಿ: ಸಾಮಾನ್ಯ ನಕ್ಷತ್ರಗಳು ತಮ್ಮ ಸ್ವಂತ ಬೆಳಕಿನಿಂದ ಮಿನುಗುತ್ತವೆ. ಆದರೆ ಶುಕ್ರ ಗ್ರಹಕ್ಕೆ ಸ್ವಂತ ಬೆಳಕಿಲ್ಲ. ಇದು ಸೂರ್ಯನ ಬೆಳಕನ್ನು ಅತ್ಯಧಿಕ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ ರಾತ್ರಿ ಆಕಾಶದಲ್ಲಿ ಚಂದ್ರ ಬಿಟ್ಟರೆ ಅತಿ ಹೆಚ್ಚು ಕಾಂತಿಯುತವಾಗಿ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇದನ್ನು ‘ಸಂಜೆ ನಕ್ಷತ್ರ’ ಅಥವಾ ‘ಬೆಳ್ಳಿ ಚುಕ್ಕೆ’ ಎಂದು ಕರೆಯಲಾಗುತ್ತದೆ.

ದಟ್ಟ ವಾತಾವರಣ: ಶುಕ್ರ ಗ್ರಹವು ಸೂರ್ಯನಿಗೆ ಹತ್ತಿರವಿರುವ ಗ್ರಹವಾಗಿದ್ದು, ಇದರ ದಟ್ಟವಾದ ವಾತಾವರಣವು ಸೂರ್ಯನ ಬೆಳಕನ್ನು ಬಲವಾಗಿ ಪ್ರತಿಫಲಿಸುತ್ತದೆ.

ಸಂಯೋಗ (Conjunction) ಮತ್ತು ಚಂದ್ರ ಮರೆಮಾಚುವಿಕೆ (Lunar Occultation)

ಗ್ರಹ-ಚಂದ್ರ ಯುತಿ: ಖಗೋಳಶಾಸ್ತ್ರದ ಪ್ರಕಾರ, ಭೂಮಿ, ಚಂದ್ರ ಮತ್ತು ಶುಕ್ರ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ನಿರ್ದಿಷ್ಟ ಸಾಪೇಕ್ಷ ಸ್ಥಾನಕ್ಕೆ ಬಂದಾಗ ಒಂದೇ ನೇರ ಸಾಲಿನಲ್ಲಿ (Conjunction) ಅತಿ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತವೆ. ಭೂಮಿಯಿಂದ ನೋಡುವಾಗ ಈ ಎರಡೂ ಆಕಾಶಕಾಯಗಳು ಅಕ್ಕಪಕ್ಕದಲ್ಲಿ ಇದ್ದಂತೆ ಭಾಸವಾಗುತ್ತವೆ.

ಚಂದ್ರ ಮರೆಮಾಚುವಿಕೆ: ಭಾರತದ ಕೆಲ ಭಾಗಗಳಲ್ಲಿ ಚಂದ್ರನು ಶುಕ್ರ ಗ್ರಹದ ಮುಂಭಾಗದಲ್ಲೇ ಹಾದುಹೋಗುವ ಅಪರೂಪದ ‘ಚಂದ್ರ ಮರೆಮಾಚುವಿಕೆ’ (Lunar Occultation) ವಿದ್ಯಮಾನವೂ ಜರಗಿದೆ. ಅಂದರೆ ಕೆಲಕಾಲ ಶುಕ್ರ ಗ್ರಹವು ಚಂದ್ರನ ಹಿಂದೆ ಮರೆಯಾಗಿ, ನಂತರ ಆಚೆ ಬಂದಿದೆ. ಇದು ಬರಿಗಣ್ಣಿಗೂ ಅತ್ಯಂತ ಆಕರ್ಷಕವಾಗಿ ಗೋಚರಿಸುವ ದೃಶ್ಯವಾಗಿದೆ.

ಚೌತಿ ಚಂದ್ರನ ನಂಬಿಕೆ ಮತ್ತು ವೈಜ್ಞಾನಿಕ ಸತ್ಯ

ಪೌರಾಣಿಕ ಹಿನ್ನೆಲೆ: ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ (ಗಣೇಶ ಚತುರ್ಥಿ) ದಿನ ಚಂದ್ರನನ್ನು ನೋಡಿದರೆ ಕಳಂಕ ಅಥವಾ ಅಪವಾದ ಬರುತ್ತದೆ (ಮಣಿಭರಣ ಕಳಂಕ) ಎಂಬುದು ಜನರಲ್ಲಿ ಶತಶತಮಾನಗಳಿಂದ ರೂಢಿಯಲ್ಲಿರುವ ನಂಬಿಕೆಯಾಗಿದೆ.

ವೈಜ್ಞಾನಿಕ ಸತ್ಯ: ಖಗೋಳ ವಿಜ್ಞಾನದ ದೃಷ್ಟಿಯಿಂದ ಚಂದ್ರನನ್ನು ನೋಡುವುದರಿಂದ ಯಾವುದೇ ಶಾಪ, ಅಪವಾದ ಅಥವಾ ಕೆಟ್ಟ ಪರಿಣಾಮಗಳು ಸಂಭವಿಸುವುದಿಲ್ಲ. ಇದು ಕೇವಲ ನೈಸರ್ಗಿಕ ಉಪಗ್ರಹವಾಗಿದ್ದು, ಭೂಮಿಯ ಸುತ್ತ ನಿರಂತರವಾಗಿ ಸುತ್ತುತ್ತದೆ. ಚತುರ್ಥಿಯ ದಿನ ಚಂದ್ರನು ಭೂಮಿಗೆ ಮತ್ತು ಸೂರ್ಯನಿಗೆ ಇರುವ ಸಾಪೇಕ್ಷ ಸ್ಥಾನದಿಂದಾಗಿ ತೆಳುವಾದ ಕಮಾನು ಅಥವಾ ಅರ್ಧಚಂದ್ರಾಕಾರದಲ್ಲಿ ಗೋಚರಿಸುತ್ತಾನೆ.

ವೀಕ್ಷಣೆ ಹೇಗೆ?

ಅಮಾವಾಸ್ಯೆಯ ನಂತರದ ಆರಂಭಿಕ ದಿನಗಳಲ್ಲಿ (ಬಾಲಚಂದ್ರನಿದ್ದಾಗ) ಪಶ್ಚಿಮ ಆಕಾಶದಲ್ಲಿ ಸಂಜೆಯ ಹೊತ್ತು ಈ ಅದ್ಭುತ ದೃಶ್ಯವು ಬರಿಗಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದೇ ಕಾರಣದಿಂದ ಜನರು ಇದನ್ನು ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Continue Reading

Article

ಸರ್ವರಲ್ಲೂ ಸಮಭಾವದ ಪ್ರತೀಕ ಗಣೇಶೋತ್ಸವ: ಹಬ್ಬಗಳು ಒಗ್ಗಟ್ಟಿನ ಸೇತುವೆಯಾಗಲಿ

Published

on

✍️ ಜ್ಯೋತಿಪ್ರಕಾಶ್‌ ಪುಣಚ, ಪ್ರಧಾನ ಸಂಪಾದಕರು, ದೀವಟಿಗೆ ಡಿಜಿಟಲ್‌ ಮೀಡಿಯಾ-9448441282

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧ್ರಾಮಿಕ ಆಚರಣೆಗಳಲ್ಲ, ಅವು ಮನುಕುಲವನ್ನು ಬೆಸೆಯುವ ಭಾವನಾತ್ಮಕ ಕೊಂಡಿಗಳು. ಅದರಲ್ಲಿಯೂ ಗಣೇಶ ಚತುರ್ಥಿಯು ವಿಘ್ನಗಳನ್ನು ನಿವಾರಿಸಿ, ಬುದ್ಧಿವಂತಿಕೆ ಹಾಗೂ ಸಮೃದ್ಧಿಯನ್ನು ತರುವ ಹಬ್ಬವಾಗಿ ಮಾತ್ರವಲ್ಲದೆ, ಸಮಾಜದಲ್ಲಿ ಸೌಹಾರ್ದತೆ ಮತ್ತು ಐಕ್ಯತೆಯನ್ನು ಸಾರುವ ಮಹತ್ವದ ಸಂದರ್ಭವಾಗಿದೆ.

ಪ್ರಕೃತಿಯ ವಿಸ್ಮಯವನ್ನು ಗಮನಿಸಿದರೆ ನಮಗೆ ದೊಡ್ಡ ಪಾಠ ಸಿಗುತ್ತದೆ. ಸೂರ್ಯನ ಬೆಳಕು, ಚಂದ್ರನ ತಂಪಾದ ಬೆಳಕು, ಬೀಸುವ ಗಾಳಿ ಮತ್ತು ಹರಿಯುವ ನದಿಗಳು ಎಂದಿಗೂ ಜಾತಿ, ಮತ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಪ್ರಕೃತಿಯು ಇಡೀ ಮಾನವ ಕುಲವನ್ನು ತನ್ನ ಮಕ್ಕಳಂತೆ ಸಮಾನವಾಗಿ ಕಾಣುತ್ತದೆ. ಅದೇ ರೀತಿ, ನಮ್ಮ ಹಬ್ಬಗಳ ಆಚರಣೆಯೂ ಕೂಡ ಭೇದಭಾವಗಳನ್ನು ಮರೆತು ಎಲ್ಲರನ್ನು ಅಪ್ಪಿಕೊಳ್ಳುವಂತಾಗಬೇಕು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವಕ್ಕೆ ಮುನ್ನುಡಿ ಬರೆದಾಗ, ಅದರ ಮುಖ್ಯ ಉದ್ದೇಶವೇ ಜಾತಿ-ಮತಗಳ ಗಡಿಯನ್ನು ಮೀರಿ ಇಡೀ ಸಮಾಜವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯವನ್ನು ಬಿತ್ತುವ ಮಾಧ್ಯಮಗಳಾಗಬೇಕಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮ, ನಂಬಿಕೆಗಳು ಮತ್ತು ಆಚರಣೆಗಳು ಶ್ರೇಷ್ಠವಾಗಿರುವುದು ಸಹಜ ಮತ್ತು ನೈಸರ್ಗಿಕ. ಆದರೆ, ತನ್ನ ಧರ್ಮದಷ್ಟೇ ಇತರರ ಧರ್ಮವನ್ನೂ ಗೌರವಿಸುವುದೇ ನಿಜವಾದ ಮಾನವತೆಯ ಪ್ರತೀಕ. ದ್ವೇಷ ಅಥವಾ ಅಸೂಯೆಗಾಗಿ ಒಗ್ಗೂಡುವುದಕ್ಕಿಂತ, ಸೌಹಾರ್ದತೆ ಮತ್ತು ಮಾನವೀಯತೆಗಾಗಿ ಒಂದಾಗುವುದೇ ಹಬ್ಬಗಳ ಅತಿ ದೊಡ್ಡ ಸಂದೇಶ.

ಈ ಗಣೇಶ ಚತುರ್ಥಿಯಂದು ವಿಘ್ನಹರ್ತನನ್ನು ಆರಾಧಿಸುವಾಗ, ನಮ್ಮ ಮನಸ್ಸಿನಲ್ಲಿರುವ ಅಹಂಕಾರ, ತಾರತಮ್ಯ ಮತ್ತು ದ್ವೇಷದ ಭಾವನೆಗಳನ್ನು ವಿಸರ್ಜಿಸೋಣ. ಪ್ರಕೃತಿಯಂತೆ ವಿಶಾಲವಾದ ಹೃದಯವನ್ನು ರೂಢಿಸಿಕೊಂಡು, ಎಲ್ಲರೊಂದಿಗೆ ಬೆರೆತು ಬಾಳುವ ಸಂಕಲ್ಪ ಮಾಡೋಣ. ಹಬ್ಬಗಳು ನಮ್ಮನ್ನು ವಿಭಜಿಸದೆ, ಸೌಹಾರ್ದತೆಯ ಬಂಧದಲ್ಲಿ ಮತ್ತಷ್ಟು ಗಟ್ಟಿಯಾಗಿ ಬೆಸೆಯಲಿ.

ಸರ್ವರಿಗೂ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು!

Continue Reading

Article

ಚಿತ್ರದಲ್ಲಿ ತಾಯಿಯನ್ನು ಹುಡುಕಿದ ಕರು: ಪ್ರಕೃತಿಯ ಮಮತೆ ಮತ್ತು ಮಾನವನ ಕಠೋರತೆಗೆ ಹಿಡಿದ ಕನ್ನಡಿ

Published

on

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ಸಣ್ಣ ವಿಡಿಯೋ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ತಾಯಿಯ ಪ್ರೀತಿ, ಮಮತೆ ಮತ್ತು ಅಪ್ಪುಗೆಗಾಗಿ ಒಂದು ಜೀವ ಎಷ್ಟು ತವಕಿಸುತ್ತದೆ ಎಂಬುದಕ್ಕೆ ಈ ಸನ್ನಿವೇಶ ಸಾಕ್ಷಿಯಾಗಿದೆ.

ರಸ್ತೆಯ ಬದಿಯಲ್ಲಿ ನಿಂತಿದ್ದ ಹಾಲಿನ ಡೈರಿಯ ಲಾರಿಯೊಂದರ ಹಿಂಭಾಗದಲ್ಲಿ ಹಸುವಿನ ದೊಡ್ಡ ಚಿತ್ರವಿತ್ತು (ಪೋಸ್ಟರ್). ಹಾದಿಯಲ್ಲಿ ಅನಾಥವಾಗಿ ಅಲೆಯುತ್ತಿದ್ದ ಸಣ್ಣ ಕರುವೊಂದು ಆ ಚಿತ್ರವನ್ನು ಕಂಡ ತಕ್ಷಣ, ಅದು ತನ್ನದೇ ಹೆತ್ತ ತಾಯಿ ಎಂದು ಭಾವಿಸಿದೆ. ಓಡೋಡಿ ಬಂದು “ಅಂಬಾ…” ಎಂದು ಕರೆದಿದೆ. ಚಿತ್ರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ, ತಾಯಿಯ ಬಳಿಗೆ ಹೋಗಲು ಹಂಬಲಿಸಿ ಲಾರಿಯ ಹಿಂಭಾಗಕ್ಕೆ ತನ್ನ ಮುಂಗಾಲುಗಳನ್ನಿಟ್ಟು ನಿಂತಿದೆ. ಹಸುವಿನ ಚಿತ್ರದಲ್ಲಿದ್ದ ಕೆಚ್ಚಲಿಗೆ ಬಾಯಿ ಹಾಕಿ ಹಾಲು ಕುಡಿಯಲು ನಿರಂತರ ಪ್ರಯತ್ನ ನಡೆಸಿದೆ.

ಆದರೆ, ಅದು ಕೇವಲ ನಿರ್ಜೀವ ಪೋಸ್ಟರ್ ಎಂಬ ಸತ್ಯ ಆ ಮುಗ್ಧ ಕರುವಿಗೆ ತಿಳಿಯಲಿಲ್ಲ. “ತಾಯಿ ನನ್ನನ್ನು ಏಕೆ ಹತ್ತಿರಕ್ಕೆ ಕರೆದುಕೊಳ್ಳುತ್ತಿಲ್ಲ, ಏಕೆ ಹಾಲು ನೀಡುತ್ತಿಲ್ಲ?” ಎಂದು ಅದು ನಿರಾಶೆಯಿಂದ ಗೋಗರೆಯುವ ದೃಶ್ಯ ಪ್ರತಿಯೊಬ್ಬರ ಕರುಳನ್ನು ಹಿಂಡುವಂತಿದೆ.

ಹೈನುಗಾರಿಕೆ ಮತ್ತು ನಮ್ಮ ನೈತಿಕತೆ:

ಈ ಸನ್ನಿವೇಶವು ಕೇವಲ ಒಂದು ವೈರಲ್ ವಿಡಿಯೋ ಅಲ್ಲ; ಬದಲಿಗೆ ಪ್ರಸ್ತುತ ಸಮಾಜದಲ್ಲಿ ಸಾಗುತ್ತಿರುವ ಹೈನುಗಾರಿಕೆ ಉದ್ಯಮದ ಕಠೋರ ನೈಜತೆಗೆ ಹಿಡಿದ ಕನ್ನಡಿ. ಪ್ರತಿಯೊಂದು ಪ್ರಾಣಿ-ಪಕ್ಷಿಗೂ ತಾಯಿಯ ಮಮತೆ ಅತ್ಯಗತ್ಯ. ಆದರೆ ಮನುಷ್ಯ ತನ್ನ ಸ್ವಾರ್ಥ ಮತ್ತು ಲಾಭಕ್ಕಾಗಿ ಕರು ಕುಡಿಯಬೇಕಾದ ಹಾಲನ್ನು ಸಂಪೂರ್ಣವಾಗಿ ಹಿಂಡಿ ಮಾರಾಟ ಮಾಡುತ್ತಿದ್ದಾನೆ.

ಅದರಲ್ಲೂ ವಿಶೇಷವಾಗಿ ಗಂಡು ಕರು ಹುಟ್ಟಿದರೆ, ಹಾಲು ನೀಡಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಅದನ್ನು ಬೀದಿಗೆ ತಳ್ಳುವುದು ಅಥವಾ ಅನಾಥವಾಗಿ ಬಿಟ್ಟುಬಿಡುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. ತಾಯಿಯ ಹಾಲಿನಿಂದಲೂ, ತಾಯಿಯ ಪ್ರೀತಿಯಿಂದಲೂ ವಂಚಿತವಾದ ಇಂತಹ ಮುಗ್ಧ ಜೀವಿಗಳು ರಸ್ತೆ ರಸ್ತೆಗಳಲ್ಲಿ ಅಲೆಯುತ್ತಾ, ನಿರ್ಜೀವ ಚಿತ್ರಗಳಲ್ಲೂ ತಮ್ಮ ತಾಯಿಯನ್ನು ಹುಡುಕುವ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ಶೋಚನೀಯ.

ಈ ವಿಡಿಯೋ ನಮಗೆಲ್ಲರಿಗೂ ಒಂದು ಪ್ರಶ್ನೆಯನ್ನು ಎಸೆದಿದೆ — ಮನುಷ್ಯನ ಸ್ವಾರ್ಥಕ್ಕಾಗಿ ಮೂಕ ಪ್ರಾಣಿಗಳ ಕರುಳ ಬಳ್ಳಿಯ ಬಂಧವನ್ನು ಹೀಗೆ ತುಂಡರಿಸುವುದು ಎಷ್ಟು ಸರಿ? ಪ್ರಾಣಿಗಳ ಮೇಲಿನ ದಯೆ ಮತ್ತು ಕರುಣೆ ಕೇವಲ ಮಾತಿಗೆ ಸೀಮಿತವಾಗದೇ ಕಾರ್ಯಾಚರಣೆಗೆ ಬರಬೇಕಿದೆ

Continue Reading

Trending

Copyright © 2025 Deevatige

error: Content is protected !!