Connect with us

Bantawala

ವಿಟ್ಲದ ಇತಿಹಾಸ ಪ್ರಸಿದ್ಧ ‘ಶ್ರೀ ಯೋಗೀಶ್ವರ (ಜೋಗಿ) ಮಠ’ ಪುನರ್ ನಿರ್ಮಾಣ: ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ; ದಾನಿಗಳಿಗೆ ಸಮಿತಿ ಮನವಿ

Published

on

ವಿಟ್ಲ: ನಾಥ ಪಂಥದ ವಿಶಿಷ್ಟ ಪೂಜಾ ಕೇಂದ್ರ ಹಾಗೂ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಿಟ್ಲ ಸೀಮೆಯ ಅತ್ಯಂತ ಪ್ರಾಚೀನ ಕ್ಷೇತ್ರವಾದ ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಮತ್ತು ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾಮಗಾರಿ ಇದೀಗ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ.

ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಈ ಮಠ ಹಾಗೂ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ವಿಟ್ಲ ಶ್ರೀ ಮಠದ ವ್ಯಾಪ್ತಿಯ ಜೋಗಿ ಸಮಾಜದವರು, ಮಠದ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ಮಾಜಿ ಹಿಡುವಳಿದಾರರು ಹಾಗೂ ಊರಿನ ಪ್ರಮುಖ ಧಾರ್ಮಿಕ ಮುಂದಾಳುಗಳು ಒಟ್ಟಾಗಿ ಸೇರಿ ‘ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಪುನರ್ ನಿರ್ಮಾಣ ಸಮಿತಿ (ರಿ.) ವಿಟ್ಲ’ ವನ್ನು ರಚಿಸಿಕೊಂಡು ಈ ಪವಿತ್ರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಭವ್ಯ ಇತಿಹಾಸ ಮತ್ತು ಮಾರ್ಗದರ್ಶನ: ನಾಥ ಪಂಥದ ಪ್ರಥಮ ಗುರುವೆನಿಸಿದ ಮತ್ಸ್ಯೇಂದ್ರನಾಥರ ಶಿಷ್ಯರಾದ ಶ್ರೀ ಗೋರಕ್ಷನಾಥರಿಂದ ಸ್ಥಾಪಿತವಾದ ಸೈದ್ಧಾಂತಿಕ ಹಿನ್ನೆಲೆಯುಳ್ಳ ಈ ಕ್ಷೇತ್ರಕ್ಕೆ ವಿಟ್ಲ ಯೋಗೀಶ್ವರ ಮಠದ ಮಠಾಧೀಶರಾದ ಶ್ರೀ ಶ್ರದ್ಧಾನಾಥಜೀ ಅವರ ಮಾರ್ಗದರ್ಶನವಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯ ಶ್ರೀ ಬಂಗಾರ ಅರಸು ಅವರ ಗೌರವಾಧ್ಯಕ್ಷತೆಯಲ್ಲಿ 155 ಜನರ ಸಮಿತಿಯು ಅಕ್ಟೋಬರ್ 15, 2023 ರಂದು ಆರಾಧ್ಯ ದೇವರಾದ ಶ್ರೀ ಕಾಶಿಕಾಲಭೈರವ, ಶ್ರೀ ಮಂಜುನಾಥ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಹಾಕಿತ್ತು.

ರೂ. 2.50 ಕೋಟಿ ವೆಚ್ಚದ ಬೃಹತ್ ಯೋಜನೆ: ಪುತ್ತೂರಿನ ಪ್ರಸಿದ್ಧ ವಾಸ್ತುಶಿಲ್ಪಿ ಶ್ರೀ ಜಗನ್ನಿವಾಸರಾವ್ ಅವರು ಈ ಕ್ಷೇತ್ರಕ್ಕಾಗಿ ಒಟ್ಟು ರೂ. 2.50 ಕೋಟಿ ವೆಚ್ಚದ ಯೋಜನೆಯ ನೀಲಿ ನಕಾಶೆಯನ್ನು ತಯಾರಿಸಿಕೊಟ್ಟಿದ್ದಾರೆ. ವಿಟ್ಲ ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ ಈಗಾಗಲೇ ದೇವರ ಬಾಲಾಲಯ ಪ್ರತಿಷ್ಠೆ, ಶಿಲಾನ್ಯಾಸ, ಪಾದುಕಾನ್ಯಾಸ, ಶತರುದ್ರಾಭಿಷೇಕ ಹಾಗೂ ಮಹಾರುದ್ರಾಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿವೆ.

ಪ್ರಗತಿಯಲ್ಲಿರುವ ಕಾಮಗಾರಿಗಳು: ಪ್ರಸ್ತುತ ಕ್ಷೇತ್ರದಲ್ಲಿ ಶಿಲಾಮಯವಾದ ಶ್ರೀ ಮಂಜುನಾಥ ದೇವರ ಗುಡಿ ಹಾಗೂ ಶಿಲಾಮಯ ಕಾಶಿ ಕಾಲಭೈರವ ದೇವರ ಗುಡಿ ಮತ್ತು ತೀರ್ಥಬಾವಿ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಎರಡು ಗುಡಿಗಳ ಶಿಖರದ ದಾರುಶಿಲ್ಪದ (ಮರದ ಕೆತ್ತನೆ) ಕೆಲಸಗಳು ಪ್ರಗತಿಯಲ್ಲಿವೆ.

ಇಲ್ಲಿಯವರೆಗೆ ಸಮಾಜ ಬಾಂಧವರಿಂದ, ಮಠದ ವ್ಯಾಪ್ತಿಯ ಮಾಜಿ ಹಿಡುವಳಿದಾರರಿಂದ ಹಾಗೂ ಊರ-ಪರಊರ ದಾನಿಗಳಿಂದ ಒಟ್ಟು ರೂ. 1,26,17,690.00 (ಒಂದು ಕೋಟಿ ಇಪ್ಪತ್ತಾರು ಲಕ್ಷಕ್ಕೂ ಅಧಿಕ) ದೇಣಿಗೆ ಸಂಗ್ರಹವಾಗಿದ್ದು, ಬೇಸ್ ಮೆಂಟ್ (ಪಂಚಾಂಗ), ಕಪ್ಪು ಕಲ್ಲಿನ ರಚನೆ, ಕಿರಾಲುಬೋಗಿ ಮರ ಹಾಗೂ ಶಿಲಾಮಯ ಗುಡಿಯ ಶಿಲೆಗಳ ಜೋಡಣೆ, ಸಭಾಭವನದ ಮಾದರಿ ಶೆಡ್ ಹಾಗೂ ತೀರ್ಥಬಾವಿಯ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ.

ದಾನಿಗಳಿಗೆ ಮುಕ್ತ ಅವಕಾಶ – ತಾಮ್ರದ ಹೊದಿಕೆ ಯೋಜನೆ: ದೇಗುಲದ ಗುಡಿಗೆ ತಾಮ್ರದ ಹೊದಿಕೆಯ ಶಿಖರಕ್ಕಾಗಿ ಸಮಿತಿಯು ವಿಶೇಷ ಯೋಜನೆಯನ್ನು ರೂಪಿಸಿದೆ. ಒಂದು ಚದರ ಅಡಿಗೆ ತಾಮ್ರದ ಹೊದಿಕೆಗೆ ರೂ. 3,000/- ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ತಲಾ 5 ಕೂಪನ್‌ಗಳಿರುವ ಪುಸ್ತಕದ ಮೂಲಕ ದೇಣಿಗೆ ನೀಡಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದಾಗಿದೆ.

ಇದಲ್ಲದೆ, ಸುತ್ತು ಗೋಪುರಕ್ಕೆ ಅಗತ್ಯವಿರುವ 16 ಶಿಲಾ ಸ್ತಂಭಗಳಿಗೆ (ತಲಾ ರೂ. 30,000/-), ಮುಖ್ಯ ದ್ವಾರ ಬಂದ್ಸ್, ಮಂಜುನಾಥ ಹಾಗೂ ಕಾಶಿಕಾಲಭೈರವ ಗುಡಿಯ ತೇಗದ ಕೆತ್ತನೆಯ ಬಾಗಿಲುಗಳು (ತಲಾ ರೂ. 4 ಲಕ್ಷ), ಗ್ರ್ಯಾನೈಟ್ ಫ್ಲೋರಿಂಗ್ ಹಾಗೂ ತಾಮ್ರದ ಕಲಶಗಳು ಸೇರಿದಂತೆ ಇನ್ನು ಹಲವಾರು ಪ್ರಮುಖ ಕಾಮಗಾರಿಗಳಿಗೆ ಸುಮಾರು ರೂ. 1.25 ಕೋಟಿ ಹಣದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನಾಥ ಪಂಥದ ಈ ಪವಿತ್ರ ಮಠದ ಪುನರ್ ನಿರ್ಮಾಣ ಕಾರ್ಯದಲ್ಲಿ ಮಹಾದಾನಿಗಳು, ಭಗವದ್ಭಕ್ತರು ತನು-ಮನ-ಧನದ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರಾದ ಯಶವಂತ ವಿಟ್ಲ, ಕಾರ್ಯಾಧ್ಯಕ್ಷರಾದ ಡಾ| ಗೀತಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಳ್ತೂರು ಹಾಗೂ ಕೋಶಾಧಿಕಾರಿ ಸತೀಶ್ ಕುಮಾರ್ ಕೂಟತ್ತಜೆ ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ದೇಣಿಗೆ ನೀಡಲು ಬ್ಯಾಂಕ್ ಖಾತೆ ವಿವರಗಳು:

ಭಕ್ತರು ತಮ್ಮ ದೇಣಿಗೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು ಅಥವಾ ಪ್ರಕಟಣೆಯಲ್ಲಿರುವ QR ಕೋಡ್ ಬಳಸಿ ಗೂಗಲ್ ಪೇ (Google Pay) ಮೂಲಕವೂ ಕಳುಹಿಸಬಹುದು.

  • ಬ್ಯಾಂಕ್ ಹೆಸರು: ವಿಟ್ಲ ಕೆನರಾ ಬ್ಯಾಂಕ್‌ (Canara Bank, Vittal)
  • ಖಾತೆ ಸಂಖ್ಯೆ (A/c No.): 110166014883
  • ಐಎಫ್‌ಎಸ್‌ಸಿ ಕೋಡ್ (IFSC Code): CNRB0010141
  • ಮೈಕರ್ ಕೋಡ್ (MICR Code): 575015098

ಪರ್ಯಾಯ ಖಾತೆ:

  • ಬ್ಯಾಂಕ್ ಹೆಸರು: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌
  • ಖಾತೆ ಸಂಖ್ಯೆ (A/c No.): 2001-11984

ಸಂಪರ್ಕ ಸಂಖ್ಯೆಗಳು:

7259133438, 9448456723, 9449239453, 9845635250, 6360869922

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Bantawala

ಕರಾವಳಿಯಲ್ಲಿ ಭೋರ್ಗರೆಯುತ್ತಿರುವ ಮುಂಗಾರು: ನದಿಗಳ ಆರ್ಭಟಕ್ಕೆ ಕಂಗೆಟ್ಟ ದಕ್ಷಿಣ ಕನ್ನಡ, ರೈತರಲ್ಲಿ ಹರ್ಷ – ಜನರಲ್ಲಿ ನೆರೆ ಆತಂಕ

Published

on

ದಕ್ಷಿಣ ಕನ್ನಡ: ಕರಾವಳಿ ಹಾಗೂ ಪಶ್ಚಿಮ ಘಟ್ಟ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆ ಧಾರೆ ಎರೆಯುತ್ತಿರುವುದರಿಂದ ನದಿ, ಕಳೆಗಳು ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಒಂದೆಡೆ ದೀರ್ಘಾವಧಿಯ ನಂತರ ನದಿಗಳು ತುಂಬಿ ಹರಿಯುತ್ತಿರುವುದು ಕೃಷಿಕರಲ್ಲಿ ಹರ್ಷ ತಂದಿದ್ದರೆ, ಇನ್ನೊಂದೆಡೆ ಪ್ರವಾಹ, ಸೇತುವೆ ಕೊಚ್ಚಿಹೋಗಿರುವುದು ಹಾಗೂ ಮನೆ ಹಾನಿಯಂತಹ ಸಾಲು ಸಾಲು ದುರಂತಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ.

1. ಸುಬ್ರಹ್ಮಣ್ಯ: ಕುಮಾರಧಾರಾ ಆರ್ಭಟ, ಮುಳುಗಿದ ಸ್ನಾನಘಟ್ಟ

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಎಡೆಬಿಡದ ಮಳೆಯಿಂದಾಗಿ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ.

ಸ್ನಾನಘಟ್ಟ ಮುಳುಗಡೆ: ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಪರ್ಯಾಯ ವ್ಯವಸ್ಥೆ: ಭಕ್ತರು ನದಿಗೆ ಇಳಿಯದಂತೆ ಪೊಲೀಸರು ಹಾಗೂ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕಾವಲು ಕಾಯುತ್ತಿದ್ದು, ಪ್ರವಾಸಿಗರ ಭದ್ರತೆಗಾಗಿ ದೊಡ್ಡ ಡ್ರಮ್‌ಗಳಲ್ಲಿ ನೀರು ತುಂಬಿಸಿ ಪರ್ಯಾಯ ಸ್ನಾನದ ವ್ಯವಸ್ಥೆ ಕಲ್ಪಿಸಲಾಗಿದೆ.

2. ಜೀವ ಕಳೆ ಪಡೆದ ನೇತ್ರಾವತಿ

ಬಂಟ್ವಾಳ ಹಾಗೂ ಧರ್ಮಸ್ಥಳ ಭಾಗದಲ್ಲಿ ನೇತ್ರಾವತಿ ನದಿ ಈ ವರ್ಷದಲ್ಲಿಯೇ ಮೊದಲ ಬಾರಿಗೆ ಭಾರೀ ಮಟ್ಟದಲ್ಲಿ ಏರಿಕೆ ಕಂಡಿದೆ.

ಬಂಟ್ವಾಳದ ಕಂಚಿಕಾರಪೇಟೆಯಲ್ಲಿ ನದಿಯ ಮಟ್ಟ 5.6 ರಿಂದ 5.88 ಮೀಟರ್‌ಗೆ ಏರಿಕೆಯಾಗಿದ್ದು (ಅಪಾಯದ ಮಟ್ಟ: 8.5 ರಿಂದ 9.0 ಮೀ), ಕೃಷಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬಂಟ್ವಾಳದ ಎಎಂಆರ್ (AMR) ಡ್ಯಾಂ ಗರಿಷ್ಠ ಮಟ್ಟ (18.90 ಮೀ) ತಲುಪಿದ್ದು, ತುಂಬೆ ಡ್ಯಾಂನ 8 ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಉಪ್ಪಿನಂಗಡಿ ಸಂಗಮಕ್ಕೆ ಇನ್ನೆರಡು ದಿನ ಬೇಕು

ಪ್ರಸಿದ್ಧ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಸನ್ನಿಧಿಯಲ್ಲಿ ನೇತ್ರಾವತಿಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ, ಕುಮಾರಧಾರಾದಲ್ಲಿ ನೀರು ಕಡಿಮೆಯಿರುವುದರಿಂದ ‘ಸಂಗಮ’ಕ್ಕೆ ಇನ್ನು ಎರಡು ದಿನಗಳ ನಿರಂತರ ಮಳೆಯ ಅಗತ್ಯವಿದೆ. ಈಗ ಸುರಿಯುತ್ತಿರುವಂತೆಯೇ ನಿರಂತರವಾಗಿ ಮಳೆ ಸುರಿಯುತ್ತಲೇ ಇದ್ದರೆ ಇನ್ನೆರಡು ದಿನಗಳಲ್ಲಿ ಸಂಗಮದ ಸೂಚನೆ ಸಿಗಬಹುದು.

3. ಬೆಳ್ತಂಗಡಿಯಲ್ಲಿ ನೆರೆ ಅಭಯ: ಮುಳುಗಿದ ದೇವಾಲಯಗಳು, ಕಡಿತಗೊಂಡ ಸಂಪರ್ಕ

ಬೆಳ್ತಂಗಡಿ ತಾಲೂಕಿನಲ್ಲಿ ಮುಂಗಾರಿನ ಆರ್ಭಟ ತೀವ್ರವಾಗಿದ್ದು, ಕಪಿಲ, ಫಲ್ಗುಣಿ, ಮೃತ್ಯುಂಜಯ ಹಾಗೂ ಸೋಮವತಿ ನದಿಗಳು ಉಕ್ಕಿ ಹರಿಯುತ್ತಿವೆ.

ದೇವಸ್ಥಾನಗಳು ಜಲಾವೃತ: ಕಪಿಲ ನದಿ ಉಕ್ಕಿ ಹರಿದ ಪರಿಣಾಮ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನ ಹಾಗೂ ಅಮ್ಮುಂಜೆ ದೇವಸ್ಥಾನಗಳು ಜಲಾವೃತಗೊಂಡಿವೆ.

ಸೇತುವೆ ಕೊಚ್ಚಿ ಸಾವು-ನೋವಿನ ಭೀತಿ: ಉಜಿರೆ-ಕನ್ಯಾಡಿ ವ್ಯಾಪ್ತಿಯ ಅಂಬಡಬೆಟ್ಟದಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಸಾಕಷ್ಟು ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಮಾಲಾಡಿ ಸೊಣಂದೂರಿನಲ್ಲಿ ಕಿರು ಸೇತುವೆ ಕುಸಿದಿದೆ.

ಅಣೆಕಟ್ಟು ಹಲಗೆ ತೆರವು ಮಾಡದೆ ಅನಾಹುತ: ಪಜಿರಡ್ಕ ಕಿಂಡಿ ಅಣೆಕಟ್ಟಿನಲ್ಲಿ ಹಲಗೆಗಳನ್ನು ಸರಿಯಾದ ಸಮಯಕ್ಕೆ ತೆರವುಗೊಳಿಸದ ಕಾರಣ 5 ಕಿ.ಮೀ ವ್ಯಾಪ್ತಿಯಲ್ಲಿ ಕಾಯರ್ತೋಡಿ, ಕುಡೆಂಚಿ, ಆನಂಗಳ್ಳಿ ಸೇರಿದಂತೆ ಹಲವು ತೋಟಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ವೇಣೂರಿನಲ್ಲಿ ಹಲವು ಬಸ್‌ಗಳು ನೆರೆ ನೀರಿನಲ್ಲಿ ಸಿಲುಕಿಕೊಂಡರೆ, ಗಾಳಿ-ಮಳೆಗೆ ನೂರಾರು ಅಡಕೆ, ರಬ್ಬರ್ ಮರಗಳು ಧರಾಶಾಹಿಯಾಗಿವೆ.

4. ಸಾಲು ಸಾಲು ಮನೆ ಕುಸಿತ, ವಿದ್ಯುತ್ ವ್ಯತ್ಯಯ

ಬಂಟ್ವಾಳ ತಾಲೂಕಿನ ತೆಂಕಬೆಳ್ಳೂರಿನ ಜಯ ಸಪಲ್ಯ, ರಾಯಿ ಗ್ರಾಮದ ಸೀತಾವತಿ ವಿಶ್ವನಾಥ ಪೂಜಾರಿ ಹಾಗೂ ನರಿಕೊಂಬುವಿನ ಪ್ರಶಾಂತ್ ಎಂಬುವವರ ಮನೆಗಳ ಮೇಲೆ ಚಾವಣಿ ಮತ್ತು ತೆಂಗಿನ ಮರಗಳು ಬಿದ್ದು ಮನೆಗಳಿಗೆ ಹಾನಿಯಾಗಿದೆ. ಸುदैವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

🚨 ಭಾರೀ ಮಳೆ ಮುನ್ಸೂಚನೆ: ತುರ್ತು ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಕಟ್ಟುನಿಟ್ಟಿನ ಸೂಚನೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, ಎಲ್ಲ ತಾಲೂಕು ಆಡಳಿತಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಸೂಚಿಸಿದ್ದಾರೆ. ಹವಾಮಾನ ಇಲಾಖೆಯು ದಕ್ಷಿಣ ಕನ್ನಡ,ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್‌ ಆಲರ್ಟ್‌ ಘೋಷಿಸಿದೆ

ಶನಿವಾರ (ಆಗಸ್ಟ್ 1) ಅಧಿಕಾರಿಗಳೊಂದಿಗೆ ಆನ್‌ಲೈನ್ ಮೂಲಕ ಪರಿಶೀಲನಾ ಸಭೆ ನಡೆಸಿದ ಅವರು, ಮಳೆ ಅನಾಹುತಗಳನ್ನು ಸಮರ್ಥವಾಗಿ ನಿಭಾಯಿಸಲು ಹಾಗೂ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಲು ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದರು.

🚨 ಜಿಲ್ಲಾಧಿಕಾರಿಗಳು ನೀಡಿದ ಪ್ರಮುಖ ಅಭಯ ಹಾಗೂ ಕಟ್ಟುನಿಟ್ಟಿನ ಸೂಚನೆಗಳು:

24 ಗಂಟೆ ಕಂಟ್ರೋಲ್ ರೂಂ ಸಕ್ರಿಯ: ಮಳೆ ಅನಾಹುತಗಳನ್ನು ನಿವರ್ಹಿಸಲು ಜಿಲ್ಲೆಯ ಎಲ್ಲ ತಾಲೂಕು ಆಡಳಿತಗಳು ದಿನದ 24 ಗಂಟೆಯೂ ಸಾರ್ವಜನಿಕರ ಸೇವೆಗೆ ಲಭ್ಯವಿರಬೇಕು. ಕಂಟ್ರೋಲ್ ರೂಂಗಳು ದಿನಪೂರ್ತಿ ಕಾರ್ಯನಿರ್ವಹಿಸಬೇಕು.

ಗುಡ್ಡ ಕುಸಿತ ಸ್ಥಳಗಳಲ್ಲಿ ನಿಗಾ – ಜನರ ಸ್ಥಳಾಂತರ: ಜಿಲ್ಲೆಯಲ್ಲಿ ಗುಡ್ಡ ಕುಸಿತ ಮತ್ತು ಮಣ್ಣು ಜರಿತ ಪ್ರಕರಣಗಳು ವರದಿಯಾಗುತ್ತಿವೆ. ಈಗಾಗಲೇ ಗುರುತಿಸಿರುವ ಸಂಭಾವ್ಯ ಕುಸಿತ ಸ್ಥಳಗಳಲ್ಲಿ ತೀವ್ರ ನಿಗಾ ವಹಿಸಬೇಕು. ಅಪಾಯದ ಸಾಧ್ಯತೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.

ತಾತ್ಕಾಲಿಕ ತಡೆಗೋಡೆ ವ್ಯವಸ್ಥೆ: ಮಣ್ಣು ಜರಿಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಮರಳು ಚೀಲಗಳನ್ನು ಇಟ್ಟು ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಅಗತ್ಯಬಿದ್ದರೆ ಖಾಸಗಿ ಜಮೀನುಗಳಲ್ಲೂ ಇಂತಹ ತುರ್ತು ಕ್ರಮಗಳನ್ನು ಕೈಗೊಳ್ಳಬಹುದು.

24 ಗಂಟೆಯೊಳಗೆ ಪರಿಹಾರ ವಿತರಣೆ: ಪ್ರಾಕೃತಿಕ ವಿಕೋಪದಿಂದ ಸಾವುನಪ್ಪಿದವರ ಕುಟುಂಬಗಳಿಗೆ 24 ಗಂಟೆಯೊಳಗೆ ಪರಿಹಾರ ಚೆಕ್ ನೀಡಬೇಕು. ಮಳೆ ಅನಾಹುತದಿಂದ ಸ್ಥಳಾಂತರಗೊಂಡ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗಮನಹರಿಸಬೇಕು.

ಹೆದ್ದಾರಿ ತಡೆ ತೆರವಿಗೆ ಜೆಸಿಬಿ/ಯಂತ್ರೋಪಕರಣ ಸಿದ್ಧ: ಚಾರ್ಮಾಡಿ, ಸಂಪಾಜೆ, ಶಿರಾಡಿ ಸೇರಿದಂತೆ ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ಭೂಕುಸಿತ, ಗುಡ್ಡ ಜರಿತದಂತಹ ಪ್ರಕರಣಗಳು ಸಂಭವಿಸಿದಲ್ಲಿ ತಕ್ಷಣವೇ ರಸ್ತೆ ತೆರವುಗೊಳಿಸಲು ಅಗತ್ಯ ಯಂತ್ರೋಪಕರಣಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. (ಇದುವರೆಗೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಯಾದ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ಡಿಸಿ ತಿಳಿಸಿದ್ದಾರೆ).

ರಕ್ಷಣಾ ಪಡೆಗಳು ಹೈ ಅಲರ್ಟ್: ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ (SDRF) ಮತ್ತು ಎನ್‌ಡಿಆರ್‌ಎಫ್ (NDRF) ತಂಡಗಳು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸದಾ ಸನ್ನದ್ಧವಾಗಿರಬೇಕು.

ರಕ್ಷಣಾ ಪಡೆ ರಂಗಕ್ಕೆ: ಮುಳುಗು ತಜ್ಞರು, NDRF ಹಾಗೂ SDRF ನ 65 ಸಿಬ್ಬಂದಿಗಳನ್ನು 28 ಬೋಟ್‌ಗಳೊಂದಿಗೆ ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ಎಚ್ಚರಿಕೆ ಸಂದೇಶ: ನದಿ ತೀರದ ನಿವಾಸಿಗಳು, ಮೀನುಗಾರರು ಮತ್ತು ಪ್ರವಾಸಿಗರು ಸಮುದ್ರ ಹಾಗೂ ಜಲಾಶಯದ ಕಡೆಗೆ ತೆರಳದಂತೆ ಕಟ್ಟುನಿಟ್ಟಿನ ಆಡಳಿತಾತ್ಮಕ ಸೂಚನೆ ನೀಡಲಾಗಿದೆ.

ಮುನ್ಸೂಚನೆ: ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು, ಪರಿಸ್ಥಿತಿ ತಿಳಿಯಾಗುವವರೆಗೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ.

ಸಭೆಯಲ್ಲಿ ಉಪಸ್ಥಿತಿ: ಈ ಆನ್‌ಲೈನ್ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹಮೂರ್ತಿ , ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು

Continue Reading

Trending

Copyright © 2025 Deevatige

error: Content is protected !!