Fight
ವಿಟ್ಲ ತಾಲೂಕು ರಚನೆಗೆ ಮತ್ತೆ ಒತ್ತಾಯ: ಜನರ ಬೇಡಿಕೆಗೆ ಹೊಸ ಚೈತನ್ಯ
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರದೇಶವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಜೋರಾಗಿ ಕೇಳಿಬರುತ್ತಿದೆ. ಹೊಸ ಹೋರಾಟ ಸಮಿತಿಯ ರಚನೆಯೂ ಆಗಿದೆ.
ಹಲವಾರು ವರ್ಷಗಳಿಂದ ವಿಟ್ಲ, ಪೆರ್ನೆ, ಕೊಡಂಗಾಯಿ, ಅಳಿಕೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಡಳಿತಾತ್ಮಕ ಸೌಲಭ್ಯಗಳಿಗಾಗಿ ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕೇಂದ್ರಗಳಿಗೆ ಅವಲಂಬಿತರಾಗಿದ್ದಾರೆ. ದೂರ ಪ್ರಯಾಣ, ಸರ್ಕಾರಿ ಕಚೇರಿಗಳ ಸೇವೆ ಪಡೆಯುವಲ್ಲಿ ಉಂಟಾಗುವ ತೊಂದರೆ, ಜನಸಂಖ್ಯೆಯ ಹೆಚ್ಚಳ ಹಾಗೂ ವ್ಯಾಪ್ತಿಯ ವಿಸ್ತರಣೆ ಹಿನ್ನೆಲೆಯಲ್ಲಿ ವಿಟ್ಲವನ್ನು ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಬಲ ಪಡೆದಿದೆ.
ಭೌಗೋಳಿಕ ಮತ್ತು ಜನಸಂಖ್ಯೆಯ ಪ್ರಸ್ತಾವನೆ
ಪ್ರಸ್ತುತ ಬಂಟ್ವಾಳ ತಾಲೂಕು 73 ಗ್ರಾಮಗಳನ್ನೊಳಗೊಂಡು 3,51,897 ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತಾವಿತ ವಿಟ್ಲ ತಾಲೂಕಿಗೆ ಬಂಟ್ವಾಳ ತಾಲೂಕಿನಿಂದ ಸುಮಾರು 1,19,474 ಜನಸಂಖ್ಯೆಯನ್ನು ವಿಟ್ಲಕ್ಕೆ ಸೇರಿಸಿದರೂ, ಬಂಟ್ವಾಳ ತಾಲೂಕು 52 ಗ್ರಾಮಗಳು ಹಾಗೂ 2,32,423 ಜನಸಂಖ್ಯೆಯೊಂದಿಗೆ ಉಳಿಯಲಿದೆ. ಈ ಪ್ರಸ್ತಾವಿತ ವಿಟ್ಲ ತಾಲೂಕು ಈಗಾಗಲೇ ರಚನೆಯಾಗಿರುವ ಕಡಬ, ಮೂಡಬಿದಿರೆ ಹಾಗೂ ಮೂಲ್ಕಿ ತಾಲೂಕುಗಳಿಗಿಂತಲೂ ಭೌಗೋಳಿಕವಾಗಿ ದೊಡ್ಡದಾಗಿರಲಿದೆ. ಎಲ್ಲ ವಿಧದಲ್ಲೂ ವಿಟ್ಲ ತಾಲೂಕು ಆಗಲು ಸಂಪೂರ್ಣ ಅರ್ಹತೆ ಹೊಂದಿದೆ.
ಇದೀಗ ಕನಸನ್ನು ನನಸು ಮಾಡಲು ಹೊಸ ತಂಡ ಸಜ್ಜಾಗಿದೆ. ವಿಟ್ಲ ಅರಮನೆಯ ಬಂಗಾರು ಅರಸರ ಗೌರವಾಧ್ಯಕ್ಷತೆಯಲ್ಲಿ ಈ ಹೊಸ ಸಮಿತಿ ರಚನೆಯಾಗಿದೆ. ಇದರಲ್ಲಿ ಅರಮನೆಯ ಜಯರಾಮ ಬಲ್ಲಾಳ್, ಮುರುವ ನಡುಮನೆ ಮಹಾಬಲ ಭಟ್, ರಮಾನಾಥ ವಿಟ್ಲ, ವಿ.ಕೆ. ಬಶೀರ್, ರಾಮಣ್ಣ ಶೆಟ್ಟಿ ಪಾಲಿಗೆ, ಕಾನ ಈಶ್ವರ ಭಟ್ ಮತ್ತು ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಸೇರಿದಂತೆ ಪ್ರಮುಖರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ವರದಿಯ ಪ್ರಕಾರ, ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆ ಕುರಿತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆ, ವಿಟ್ಲಕ್ಕೂ ತಾಲೂಕು ಸ್ಥಾನಮಾನ ನೀಡುವಂತೆ ಸ್ಥಳೀಯರು ಒತ್ತಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ರಾಜಕೀಯ ನಾಯಕರೂ ಈ ಬಗ್ಗೆ ಭರವಸೆ ನೀಡಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಸ್ಥಳೀಯ ಮುಖಂಡರು ಮಾತನಾಡಿ, “ವಿಟ್ಲ ವ್ಯಾಪಾರ, ಶಿಕ್ಷಣ, ಬ್ಯಾಂಕಿಂಗ್ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಕೇಂದ್ರವಾಗಿದೆ. ತಾಲೂಕು ಕಚೇರಿ ಸ್ಥಾಪನೆಯಾದರೆ ಜನರಿಗೆ ಆಡಳಿತಾತ್ಮಕ ಸೇವೆಗಳು ಇನ್ನಷ್ಟು ಸುಲಭವಾಗಿ ದೊರೆಯಲಿವೆ” ಎಂದು ತಿಳಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿಯೂ “ವಿಟ್ಲ ತಾಲೂಕು ಆಗಲಿ” ಎಂಬ ಅಭಿಯಾನ ಮತ್ತೆ ಚುರುಕುಗೊಂಡಿದ್ದು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ
Bantawala
ಅಳಿಕೆ: ಎಸ್ಐಆರ್ ಪರಿಷ್ಕರಣಾ ಕಾರ್ಯಾಗಾರದಲ್ಲಿ ಅಸ್ತವ್ಯಸ್ತತೆ; ಬಿಎಲ್ಒ ನಿಧಾನಗತಿ, ಬಸವಳಿದು ಹೈರಾಣಾದ ಸಾರ್ವಜನಿಕರು
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಸ್ಐಆರ್ (SIR) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಾಗಾರವು ವ್ಯವಸ್ಥೆಯ ಲೋಪ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟು ಮಾಡಿದೆ.
ಮತದಾರರ ಪಟ್ಟಿಯಲ್ಲಿ ಸಮರ್ಪಕ ದಾಖಲಾತಿಗಳ ಪರಿಷ್ಕರಣೆಗಾಗಿ ಇಂದು ಸುಮಾರು 40 ರಿಂದ 50 ಜನರಿಗೆ ನೋಟಿಸ್ ನೀಡಿ ಕರೆಯಿಸಲಾಗಿತ್ತು. ದೂರದೂರುಗಳಿಂದ ನಿಗದಿತ ಸಮಯಕ್ಕೆ ಆಗಮಿಸಿದ ಸಾರ್ವಜನಿಕರು, ಬೆಳಗ್ಗೆಯಿಂದ ಊಟ-ತಿಂಡಿಯನ್ನೂ ಮಾಡದೆ ಗಂಟೆಗಟ್ಟಲೆ ಕಾಯಬೇಕಾಗಿ ಬಂದಿತು. ಆದರೆ, ಕರ್ತವ್ಯದಲ್ಲಿದ್ದ ಬಿಎಲ್ಒ (BLO) ಅವರ ಅತ್ಯಂತ ನಿಧಾನ ಪ್ರವೃತ್ತಿ ಹಾಗೂ ನಿರ್ಲಕ್ಷ್ಯದ ಧೋರಣೆಯಿಂದಾಗಿ ಮಧ್ಯಾಹ್ನದವರೆಗೆ ಕೇವಲ 5 ಜನರ ದಾಖಲಾತಿಗಳು ಮಾತ್ರ ಪರಿಶೀಲನೆಯಾಗಿವೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯೋಗಕ್ಕೆ ರಜೆ ಹಾಕಿ ಬಂದವರು, ಚಾಲಕರು, ವಯೋವೃದ್ದರು ತಮ್ಮ ಮತದಾನದ ಹಕ್ಕನ್ನು ಪಡೆಯಲು ಬಂದಿರುವಾಗ ಆಡಳಿತ ವ್ಯವಸ್ಥೆ ಈ ರೀತಿಯ ನಿರ್ಲಕ್ಷವನ್ನು ತೋರುವುದು ಯಾಕೆ ಮತ್ತು ಅಧಿಕಾರಿಗಳಲ್ಲಿ ಸಮರ್ಪಕವಾದ ಮಾಹಿತಿ ಇಲ್ಲವೇ ? ಸಂಜೆಯಾಗುತ್ತಲೇ ಅಧಿಕಾರಿಗಳು ಜಾಗ ಖಾಲಿ ಮಾಡಿದರೆ ನಮ್ಮ ಇಡೀ ದಿವಸದ ನರಳಾಟಕ್ಕೆ ಯಾರು ಹೊಣೆ ಎಂಬುವುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.
ಜನರ ಪರದಾಟ: ನೋಟಿಸ್ನಲ್ಲಿ ಸಮಯ ನಿಗದಿಪಡಿಸಿದ್ದರೂ ಸಹ, ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಸರಿಯಾದ ವ್ಯವಸ್ಥೆಯಿಲ್ಲದೆ ಹೈರಾಣಾಗಿದ್ದಾರೆ. “ಬೆಳಗ್ಗೆಯಿಂದ ಕಾಯುತ್ತಿದ್ದರೂ ನಮಗೆ ಯಾವಾಗ ಸರದಿ ಬರುತ್ತದೆ ಎಂಬ ಕನಿಷ್ಠ ಮಾಹಿತಿ ನೀಡುತ್ತಿಲ್ಲ, ಅಧಿಕಾರಿಗಳ ಈ ಅಸಡ್ಡೆೇಕೆ?” ಎಂದು ಸಾರ್ವಜನಿಕರು ಪ್ರಶ್ನಿಸಿ, ಆಕ್ರೋಶ ಹೊರಹಾಕಿದ್ದಾರೆ.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನಾ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲತೆಯನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Condolences
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಜಂತರ್ ಮಂತರ್ ಪ್ರತಿಭಟನೆ: ರಾಜಕೀಯ ಸಂಚಲನ ಹಾಗೂ ಪ್ರಮುಖ ನಾಯಕರ ಪ್ರತಿಕ್ರಿಯೆಗಳು; “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?”
ದೆಹಲಿಯ ಜಂತರ್ ಮಂತರ್ನಲ್ಲಿ ದೇಶದ ನೀಟ್ (NEET) ಪರೀಕ್ಷಾರ್ಥಿಗಳು ಮತ್ತು ಯುವಜನತೆ ನಡೆಸಿದ ಪ್ರತಿಭಟನೆಯು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಪೋಷಕರ ಕನಸುಗಳು ನುಚ್ಚುನೂರಾದ ಹಿನ್ನೆಲೆಯಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೋರಾಟದ ತೀವ್ರತೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ ಘಟನೆಯೂ ನಡೆದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ ಮತ್ತು ಅದಕ್ಕೆ ವಿರೋಧ ಪಕ್ಷಗಳು ಹಾಗೂ ಗಣ್ಯರ ಪ್ರತಿಕ್ರಿಯೆಗಳು ರಾಜಕೀಯ ಕಾವನ್ನು ಮತ್ತಷ್ಟು ಹೆಚ್ಚಿಸಿವೆ.
1. ಶಿಕ್ಷಣ ಸಚಿವರ ರಾಜೀನಾಮೆ ಹಾಗೂ ವಿದ್ಯಾರ್ಥಿಗಳ ಆಕ್ರೋಶ
ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ರದ್ದತಿ ಹಾಗೂ ವರ್ಷಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ನಿರಾಶೆಯಿಂದಾಗಿ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳು ಮತ್ತು ಪೋಷಕರ ನಿರಂತರ ಆಕ್ರೋಶದ ಪರಿಣಾಮವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ತಮ್ಮ ಭವಿಷ್ಯವೇ ಕತ್ತಲೆಯಾಗಿದೆ ಎಂದು ಮನನೊಂದು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದು, ಇಡೀ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿತು.
2. ಪ್ರಧಾನಿ ನರೇಂದ್ರ ಮೋದಿ ಅವರ ವೀಡಿಯೋ ಸಂದೇಶ
ಪ್ರತಿಭಟನೆಯ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನೀಯ ಮಾತುಗಳ ಕುರಿತು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಪ್ರಧಾನಿ ಹೇಳಿಕೆ: “ದಾರಿತಪ್ಪಿದ ಮಕ್ಕಳಿಗೆ ಸರಿಯಾದ ಹಾದಿ ತೋರಿಸಬೇಕು, ಕಾನೂನು ಕ್ರಮವೇ ಪ್ರತಿಯೊಂದಕ್ಕೂ ಪರಿಹಾರವಲ್ಲ. ನನ್ನನ್ನು ಮತ್ತು ನನ್ನ ತಾಯಿಯನ್ನು ನಿಂದಿಸಿದ ಯುವಕರನ್ನು ನಾನು ಕ್ಷಮಿಸುತ್ತೇನೆ. ನಿಂದನೆಗಳಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಎಲ್ಲರೂ ಒಟ್ಟಾಗಿ ದೇಶಕ್ಕಾಗಿ ಕೆಲಸ ಮಾಡೋಣ” ಎಂದು ಭಾವುಕರಾಗಿ ಸಮಾಜಕ್ಕೆ ಮನವಿ ಮಾಡಿದರು.
ಪ್ರಧಾನಿ ಮೋದಿ ಅವರ ʼಕ್ಷಮೆಯʼ ಹೇಳಿಕೆ ಮತ್ತು ಪ್ರತಿಭಟನಾಕಾರರ ವಿರುದ್ಧ ದಾಖಲಾಗುತ್ತಿರುವ ಎಫ್ಐಆರ್ ಗಳ ನಡುವಿನ ವ್ಯತ್ಯಾಸವನ್ನು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. “ಒಂದೆಡೆ ಕ್ಷಮೆಯ ಮಾತು, ಮತ್ತೊಂದೆಡೆ ಪೊಲೀಸ್ ಪ್ರಕರಣಗಳು. ಇದು ಯಾವ ರೀತಿಯ ಕ್ಷಮೆ?” ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ

3. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ
ರಾಹುಲ್ ಗಾಂಧಿ ಅವರು ನೀಟ್ ಅಕ್ರಮದಿಂದಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳನ್ನು ಹಾಗೂ ಮಹಾಬಲಿಪುರಂನಲ್ಲಿ ಸಂಕಷ್ಟಕ್ಕೊಳಗಾದ ಪೋಷಕರನ್ನು ನೇರವಾಗಿ ಭೇಟಿಯಾಗಿ ಸಾಂತ್ವನ ಹೇಳಿದರು. ಪ್ರಧಾನಿ ಮೋದಿ ವೀಡಿಯೋಗೆ ತಿರುಗೇಟು ನೀಡಿದ ಅವರು:
ಕ್ಷಮೆಯ ಅಗತ್ಯವಿಲ್ಲ, ಕ್ಷಮೆಯಾಚನೆ ಬೇಕು: “ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ನೋವು ಪದಗಳಿಗೆ ಸಿಗದಂತದ್ದು. ಕಳಪೆ ಶಿಕ್ಷಣ ವ್ಯವಸ್ಥೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಶ್ರಮ ವ್ಯರ್ಥವಾಗಿದೆ. ಪ್ರಧಾನಿಯವರು ಇದುವರೆಗೆ ನೊಂದ ಯಾವುದೇ ಪೋಷಕರನ್ನಾಗಲಿ ಅಥವಾ ಭವಿಷ್ಯ ಹಾಳಾದ ವಿದ್ಯಾರ್ಥಿಗಳನ್ನಾಗಲಿ ಭೇಟಿಯಾಗಿಲ್ಲ.”
“ಭಾರತದ ವಿದ್ಯಾರ್ಥಿಗಳಿಗೆ ಪ್ರಧಾನಿಯವರ ‘ಕ್ಷಮೆ’ ಬೇಕಿಲ್ಲ, ಬದಲಾಗಿ ಪ್ರಧಾನಿಯವರೇ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
4. ಕೆಪಿಸಿಸಿ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಖಾರವಾದ ಟೀಕೆ
ಪ್ರಧಾನಿ ಅವರ ವೀಡಿಯೋವನ್ನು “ರೀಲ್” ಎಂದು ಕರೆದಿರುವ ಬಿ.ಕೆ. ಹರಿಪ್ರಸಾದ್, ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ:
“ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನಲು ಪ್ರಧಾನಿ ಮೋದಿ ಉದಾಹರಣೆ. ದಶಕಗಳಿಂದ ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ಮೌನಸಮ್ಮತಿ ನೀಡಿದವರು ಇಂದು ಮಾತೃಗೌರವದ ಪ್ರವಚನ ನೀಡುತ್ತಿರುವುದು ಬೆಂಕಿ ಹಚ್ಚಿದವನೇ ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ.”
ತಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಅವರು ರಾಜೀವ್ ಗಾಂಧಿಯವರ ಹತ್ಯೆಯಂತಹ ಅತ್ಯಂತ ಭೀಕರ ದುರಂತವನ್ನು ಅನುಭವಿಸಿದರೂ, ಪ್ರತಿಕ್ರಿಯೆಯಾಗಿ ದ್ವೇಷ ಸಾಧಿಸದೆ ಕ್ಷಮೆಯನ್ನು ಆರಿಸಿಕೊಂಡಿದ್ದರು. ಅದು ಕ್ಯಾಮೆರಾ ಮುಂದೆ ಮಾಡಿದ ಆಟವಲ್ಲ, ಅವರ ಸಂಸ್ಕಾರ ಎಂದು ನೆನಪಿಸಿದರು.
5. ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರಶ್ನೆ
ಪ್ರಧಾನಿಯವರ ಕ್ಷಮಾದಾನದ ಹೇಳಿಕೆಯನ್ನು ನೇರವಾಗಿ ಪ್ರಶ್ನೆ ಮಾಡಿರುವ ಅಭಿಜಿತ್ ದೀಪ್ಕೆ:
“ಸರ್, ನೀವು ಕೇವಲ ರೀಲ್ಸ್ನಲ್ಲಿ ಮಾತ್ರ ವಿದ್ಯಾರ್ಥಿಗಳನ್ನು ಕ್ಷಮಿಸುತ್ತೀರಾ ಅಥವಾ ಅವರ ಮೇಲೆ ದಾಖಲಾಗಿರುವ ಎಫ್ಐಆರ್ ಹಾಗೂ ಕೇಸ್ಗಳನ್ನು ಹಿಂಪಡೆಯುತ್ತೀರಾ?” ಎಂದು ಸವಾಲು ಹಾಕಿದ್ದಾರೆ.
ಪ್ರಧಾನಿ ವಿರುದ್ಧ ಹೇಳಿಕೆ ನೀಡಿದ್ದ ನೋಯ್ಡಾ ಮೂಲದ ಹದಿಹರೆಯದ ಯುವತಿಯ ಮೇಲಿನ ಎಫ್ಐಆರ್ ಪ್ರಸ್ತಾಪಿಸಿದ ಅವರು, ಬಿಜೆಪಿ ಐಟಿ ಸೆಲ್ನ ಸದಸ್ಯರು ಮಹಿಳೆಯರನ್ನು ನಿಂದಿಸಿದಾಗ ಅವರ ಮೇಲೂ ಇದೇ ರೀತಿ ಪ್ರಕರಣ ದಾಖಲಿಸಲಾಗುತ್ತದೆಯೇ ಎಂದು ಚಾಟಿ ಬೀಸಿದ್ದಾರೆ.
6. ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿಕೆ
ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್, ಸಾಮಾಜಿಕ ಜಾಲತಾಣ ‘X’ ನಲ್ಲಿ ಧ್ವನಿ ಎತ್ತಿದ್ದಾರೆ:
ಪೋಷಕರ ದೃಷ್ಟಿಕೋನ: “ಮಕ್ಕಳು ಹಿರಿಯರಿಗೆ ಕೋಪದಲ್ಲಿ ಅಥವಾ ಆಕ್ರೋಶದಲ್ಲಿ ಅವಾಚ್ಯ ಪದ ಬಳಸಿದಾಗ ಹಿರಿಯರಾಗಿ ಅವರಿಗೆ ಎಚ್ಚರಿಕೆ ನೀಡಿ ತಿದ್ದಬೇಕೇ ಹೊರತು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು, ಪೋಲಿಸ್ ದೂರು ನೀಡುವುದು ಅಥವಾ ಕಿರುಕುಳ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯ ಅಕ್ರಮ, ಶಿಕ್ಷಣ ಸಚಿವರ ರಾಜೀನಾಮೆ, ವಿದ್ಯಾರ್ಥಿಗಳ ಆತ್ಮಹತ್ಯೆ ಮತ್ತು ಪೋಷಕರ ಆಕ್ರಂದನದಿಂದ ತತ್ತರಿಸಿರುವ ಯುವಜನತೆಗೆ ಪ್ರಧಾನಿಯವರ ‘ಕ್ಷಮೆ’ಗಿಂತ ಹೆಚ್ಚಾಗಿ ನ್ಯಾಯ ಬೇಕಿದೆ ಎನ್ನುವುದು ವಿರೋಧ ಪಕ್ಷಗಳು ಮತ್ತು ಹೋರಾಟಗಾರರ ಸ್ಪಷ್ಟ ನಿಲುವಾಗಿದೆ.

Educational
NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ
ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.
ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ
ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್ಲೈನ್ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ಬೋಸ್ಟನ್ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.
ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ
ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ
ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.



-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
