Connect with us

Fight

ವಿಟ್ಲ ತಾಲೂಕು ರಚನೆಗೆ ಮತ್ತೆ ಒತ್ತಾಯ: ಜನರ ಬೇಡಿಕೆಗೆ ಹೊಸ ಚೈತನ್ಯ

Published

on

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪ್ರದೇಶವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಜೋರಾಗಿ ಕೇಳಿಬರುತ್ತಿದೆ. ಹೊಸ ಹೋರಾಟ ಸಮಿತಿಯ ರಚನೆಯೂ ಆಗಿದೆ.

ಹಲವಾರು ವರ್ಷಗಳಿಂದ ವಿಟ್ಲ, ಪೆರ್ನೆ, ಕೊಡಂಗಾಯಿ, ಅಳಿಕೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಆಡಳಿತಾತ್ಮಕ ಸೌಲಭ್ಯಗಳಿಗಾಗಿ ಬಂಟ್ವಾಳ ಹಾಗೂ ಪುತ್ತೂರು ತಾಲೂಕು ಕೇಂದ್ರಗಳಿಗೆ ಅವಲಂಬಿತರಾಗಿದ್ದಾರೆ. ದೂರ ಪ್ರಯಾಣ, ಸರ್ಕಾರಿ ಕಚೇರಿಗಳ ಸೇವೆ ಪಡೆಯುವಲ್ಲಿ ಉಂಟಾಗುವ ತೊಂದರೆ, ಜನಸಂಖ್ಯೆಯ ಹೆಚ್ಚಳ ಹಾಗೂ ವ್ಯಾಪ್ತಿಯ ವಿಸ್ತರಣೆ ಹಿನ್ನೆಲೆಯಲ್ಲಿ ವಿಟ್ಲವನ್ನು ತಾಲೂಕಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಬಲ ಪಡೆದಿದೆ.‌

ಭೌಗೋಳಿಕ ಮತ್ತು ಜನಸಂಖ್ಯೆಯ ಪ್ರಸ್ತಾವನೆ

ಪ್ರಸ್ತುತ ಬಂಟ್ವಾಳ ತಾಲೂಕು 73 ಗ್ರಾಮಗಳನ್ನೊಳಗೊಂಡು 3,51,897 ಜನಸಂಖ್ಯೆಯನ್ನು ಹೊಂದಿದೆ. ಪ್ರಸ್ತಾವಿತ ವಿಟ್ಲ ತಾಲೂಕಿಗೆ ಬಂಟ್ವಾಳ ತಾಲೂಕಿನಿಂದ ಸುಮಾರು 1,19,474 ಜನಸಂಖ್ಯೆಯನ್ನು ವಿಟ್ಲಕ್ಕೆ ಸೇರಿಸಿದರೂ, ಬಂಟ್ವಾಳ ತಾಲೂಕು 52 ಗ್ರಾಮಗಳು ಹಾಗೂ 2,32,423 ಜನಸಂಖ್ಯೆಯೊಂದಿಗೆ ಉಳಿಯಲಿದೆ. ಈ ಪ್ರಸ್ತಾವಿತ ವಿಟ್ಲ ತಾಲೂಕು ಈಗಾಗಲೇ ರಚನೆಯಾಗಿರುವ ಕಡಬ, ಮೂಡಬಿದಿರೆ ಹಾಗೂ ಮೂಲ್ಕಿ ತಾಲೂಕುಗಳಿಗಿಂತಲೂ ಭೌಗೋಳಿಕವಾಗಿ ದೊಡ್ಡದಾಗಿರಲಿದೆ. ಎಲ್ಲ ವಿಧದಲ್ಲೂ ವಿಟ್ಲ ತಾಲೂಕು ಆಗಲು ಸಂಪೂರ್ಣ ಅರ್ಹತೆ ಹೊಂದಿದೆ.

ಇದೀಗ ಕನಸನ್ನು ನನಸು ಮಾಡಲು ಹೊಸ ತಂಡ ಸಜ್ಜಾಗಿದೆ. ವಿಟ್ಲ ಅರಮನೆಯ ಬಂಗಾರು ಅರಸರ ಗೌರವಾಧ್ಯಕ್ಷತೆಯಲ್ಲಿ ಈ ಹೊಸ ಸಮಿತಿ ರಚನೆಯಾಗಿದೆ. ಇದರಲ್ಲಿ ಅರಮನೆಯ ಜಯರಾಮ ಬಲ್ಲಾಳ್, ಮುರುವ ನಡುಮನೆ ಮಹಾಬಲ ಭಟ್, ರಮಾನಾಥ ವಿಟ್ಲ, ವಿ.ಕೆ. ಬಶೀರ್, ರಾಮಣ್ಣ ಶೆಟ್ಟಿ ಪಾಲಿಗೆ, ಕಾನ ಈಶ್ವರ ಭಟ್ ಮತ್ತು ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ ಸೇರಿದಂತೆ ಪ್ರಮುಖರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವರದಿಯ ಪ್ರಕಾರ, ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆ ಕುರಿತ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆ, ವಿಟ್ಲಕ್ಕೂ ತಾಲೂಕು ಸ್ಥಾನಮಾನ ನೀಡುವಂತೆ ಸ್ಥಳೀಯರು ಒತ್ತಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ರಾಜಕೀಯ ನಾಯಕರೂ ಈ ಬಗ್ಗೆ ಭರವಸೆ ನೀಡಿದ್ದರೂ ನಿರೀಕ್ಷಿತ ಪ್ರಗತಿ ಕಂಡಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸ್ಥಳೀಯ ಮುಖಂಡರು ಮಾತನಾಡಿ, “ವಿಟ್ಲ ವ್ಯಾಪಾರ, ಶಿಕ್ಷಣ, ಬ್ಯಾಂಕಿಂಗ್ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಕೇಂದ್ರವಾಗಿದೆ. ತಾಲೂಕು ಕಚೇರಿ ಸ್ಥಾಪನೆಯಾದರೆ ಜನರಿಗೆ ಆಡಳಿತಾತ್ಮಕ ಸೇವೆಗಳು ಇನ್ನಷ್ಟು ಸುಲಭವಾಗಿ ದೊರೆಯಲಿವೆ” ಎಂದು ತಿಳಿಸಿದ್ದಾರೆ.

ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿಯೂ “ವಿಟ್ಲ ತಾಲೂಕು ಆಗಲಿ” ಎಂಬ ಅಭಿಯಾನ ಮತ್ತೆ ಚುರುಕುಗೊಂಡಿದ್ದು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Educational

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ

Published

on

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೋಸ್ಟನ್‌ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.

ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ

ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.




Continue Reading

Bantawala

ಪಂಚಾಯತ್ ರಾಜ್ ಸಂಸ್ಥೆಗಳ ಆರ್ಥಿಕ ದುರ್ಬಲೀಕರಣ: ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳದಲ್ಲಿ ನಾಳೆ ಬೃಹತ್ ಪ್ರತಿಭಟನೆ

Published

on

ಬಂಟ್ವಾಳ: ಕೇಂದ್ರ ಸರಕಾರವು ಪಂಚಾಯತ್ ರಾಜ್ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿರುವ ನೀತಿ ಹಾಗೂ ವಿವಿಧ ಜನವಿರೋಧಿ ವೈಫಲ್ಯಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ನಾಳೆ (ಮೇ 30) ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ.ಕ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಹಕಾರದೊಂದಿಗೆ ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.

ಹಿರಿಯ ನಾಯಕ ಹಾಗೂ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಮಾರ್ಗದರ್ಶನದಲ್ಲಿ ದಿನಾಂಕ 30/05/2026ರ ಶನಿವಾರ ಬೆಳಿಗ್ಗೆ 10:30ಕ್ಕೆ ಬಂಟ್ವಾಳ ತಾಲೂಕು ಆಡಳಿತ ಕಛೇರಿ ಎದುರುಗಡೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ರಮನಾಥ ರೈ ಅವರ ಆಕ್ರೋಶ ಮತ್ತು ಮನವಿ: ಪ್ರತಿಭಟನೆಯ ಕುರಿತು ವೀಡಿಯೊ ಸಂದೇಶ ನೀಡಿರುವ ಮಾಜಿ ಸಚಿವ ಬಿ. ರಮನಾಥ ರೈ ಅವರು, “ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕನಸಿನ ಕಾರ್ಯಕ್ರಮವಾಗಿದ್ದ ಪಂಚಾಯತ್ ರಾಜ್ ವ್ಯವಸ್ಥೆಗೆ ನರಸಿಂಹರಾವ್ ಸರಕಾರದ ಅವಧಿಯಲ್ಲಿ 73 ಮತ್ತು 74ನೇ ತಿದ್ದುಪಡಿ ತರುವ ಮೂಲಕ ಹೆಚ್ಚಿನ ಶಕ್ತಿ ತುಂಬಲಾಗಿತ್ತು. ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಎಲ್ಲಾ ವ್ಯವಸ್ಥೆಗಳು ನೇರವಾಗಿ ಪಂಚಾಯತ್ ರಾಜ್ ವ್ಯಾಪ್ತಿಗೆ ಬರುವಂತೆ ಮಾಡಲಾಗಿತ್ತು. ಎಸ್.ಎಂ. ಕೃಷ್ಣ ಅವರ ಸರಕಾರದ ಅವಧಿಯಲ್ಲೂ ಬೇಲೂರು ಘೋಷಣೆ ಮಾಡುವ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನೇಕ ಅಧಿಕಾರಗಳನ್ನು ನೀಡಲಾಗಿತ್ತು. ಆದರೆ ಇತ್ತೀಚಿನ ದಿವಸಗಳಲ್ಲಿ ಕೇಂದ್ರ ಸರಕಾರವು ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ಕೊಡುವ ಬದಲು ಅದನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಆಡಳಿತ ನೀತಿಯ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ನಾಳೆ ಶನಿವಾರ ಬೆಳಿಗ್ಗೆ 10:30ಕ್ಕೆ ಬಿಸಿ ರೋಡ್‌ನ ತಾಲೂಕು ಆಫೀಸ್ ಎದುರು ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅವರು ಮನವಿ ಮಾಡಿದ್ದಾರೆ.

ಪ್ರತಿಭಟನೆಯ ಪ್ರಮುಖ ಕಾರಣಗಳು: 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡದಿರುವುದು, ಉದ್ಯೋಗ ಖಾತರಿ ಯೋಜನೆಗೆ ಕಡಿವಾಣ ಹಾಕಿ ಗ್ರಾಮೀಣ ಜನರನ್ನು ಉದ್ಯೋಗ ವಂಚಿತರನ್ನಾಗಿಸಿರುವುದು, ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ನಿರಂತರ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ವಿವಿಧ ವೈಫಲ್ಯಗಳನ್ನು ಖಂಡಿಸಿ ಈ ಹೋರಾಟ ರೂಪಿಸಲಾಗಿದೆ.

ಮುಖ್ಯ ಭಾಷಣಕಾರರು: ಈ ಬೃಹತ್ ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಖ್ಯಾತ ವಾಗ್ಮಿ ಹಾಗೂ ಕೆ.ಪಿ.ಸಿ.ಸಿ ವಕ್ತಾರ ಸುದೀರ್ ಕುಮಾರ್ ಮರೊಳ್ಳಿ ಭಾಗವಹಿಸಲಿದ್ದಾರೆ. ಕೇಂದ್ರ ಸರಕಾರದ ಆಡಳಿತ ವೈಫಲ್ಯಗಳು, ಸ್ಥಳೀಯ ಸಂಸ್ಥೆಗಳ ಹಕ್ಕುಗಳಿಗೆ ಆಗುತ್ತಿರುವ ಧಕ್ಕೆ ಹಾಗೂ ಗ್ರಾಮೀಣ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ಸಮಗ್ರವಾಗಿ ಮಾತನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Continue Reading

Bantawala

ಹಕ್ಕು ಪತ್ರ ವಿತರಣೆ ವಿವಾದ: ಅಧಿಕಾರಿಗಳ ಭರವಸೆ ಹುಸಿ; ಮತ್ತೆ ಧರಣಿ ಕುಳಿತ ಕುಟುಂಬಗಳು! ಕಾನೂನು ತೊಡಕು ಬಿಚ್ಚಿಟ್ಟ ಶಾಸಕರು

Published

on

ಬಂಟ್ವಾಳ/ಪುತ್ತೂರು: ಹಕ್ಕು ಪತ್ರ ವಿತರಣೆಯ ಭರವಸೆ ನೀಡಿ ಅಧಿಕಾರಿಗಳು ಕೈಕೊಟ್ಟಿದ್ದಾರೆ ಎಂದು ಆರೋಪಿಸಿ ಪುಣಚ ಗ್ರಾಮದ ದಲಿತ ಕುಟುಂಬಗಳು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಮತ್ತೊಮ್ಮೆ ಅಹೋರಾತ್ರಿ ಧರಣಿ ಆರಂಭಿಸಿವೆ. “ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಆದರೆ, ಈ ಪ್ರತಿಭಟನೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ತಾಂತ್ರಿಕವಾಗಿ ಅವರಿಗೆ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಭರವಸೆ ಹುಸಿ: ತಾರಕಕ್ಕೇರಿದ ಮತ್ತೊಂದು ಪ್ರತಿಭಟನೆ!

ಮೇ 26 ರಂದು ಪೆರ್ನೆ ಗ್ರಾಮ ಪಂಚಾಯತ್‌ನಲ್ಲಿ ಹಕ್ಕು ಪತ್ರ ವಿತರಣೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಸಭೆಯನ್ನು ರದ್ದುಗೊಳಿಸಿದ್ದರು. ಈ ಹಿಂದೆ ಹಕ್ಕು ಪತ್ರ ನೀಡುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ ಸುಳ್ಳಾದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಮೂರು ಕುಟುಂಬಗಳು ತಾಲೂಕು ಕಚೇರಿ ಮುಂಭಾಗದಲ್ಲೇ ಮತ್ತೆ ಧರಣಿ ಕುಳಿತಿವೆ. ಇವರಿಗೆ ಪುತ್ತೂರು ಬಿಜೆಪಿ ಮುಖಂಡರು ಸಾಥ್ ನೀಡಿದ್ದು, ಬಡವರಿಗೆ ನ್ಯಾಯ ಸಿಗುವವರೆಗೂ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಗಿರಿಧರ್ ನಾಯ್ಕ್ ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ: ವಿಡಿಯೋದಲ್ಲಿ ಶಾಸಕರ ಸ್ಪಷ್ಟನೆ

ಈ ಇಡೀ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಅಶೋಕ್ ಕುಮಾರ್ ರೈ ಅವರು, ಪ್ರತಿಭಟನೆ ನಡೆಸುತ್ತಿರುವ ಕುಟುಂಬಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಹಕ್ಕು ಪತ್ರ ನೀಡಲು ಇರುವ ತಾಂತ್ರಿಕ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

15 ವರ್ಷಗಳ ವಾಸ್ತವ್ಯದ ದಾಖಲೆ ಇಲ್ಲ: “ನಿಯಮಾವಳಿಗಳ ಪ್ರಕಾರ 94ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆಯಬೇಕಾದರೆ ಫಲಾನುಭವಿಗಳು ಆ ಜಾಗದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಾಗಿರಬೇಕು. ಆದರೆ, ಈ ಕುಟುಂಬಗಳು ಅಲ್ಲಿ ವಾಸವಿದ್ದವು ಎಂಬುದಕ್ಕೆ ಯಾವುದೇ ರೀತಿಯ ಸರ್ಕಾರಿ ಅಥವಾ ಕಾನೂನಾತ್ಮಕ ದಾಖಲೆಗಳು ಲಭ್ಯವಿಲ್ಲ” ಎಂದು ಶಾಸಕರು ತಿಳಿಸಿದ್ದಾರೆ.

ಇತ್ತೀಚಿನ ಅರ್ಜಿಗಳು: ಸದರಿ ಕುಟುಂಬಗಳು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಕೇವಲ 2020 ರಲ್ಲಿ. ಅರ್ಜಿ ಸಲ್ಲಿಸಿದ ತಕ್ಷಣ ಜಾಗ ಸಿಗುವುದಿಲ್ಲ, ಅದಕ್ಕೆ ಪೂರಕ ದಾಖಲೆಗಳು ಬೇಕಾಗುತ್ತವೆ.

ರಾಜಕೀಯ ಹೋರಾಟದಿಂದ ಬಡವರಿಗೆ ಅನ್ಯಾಯ: “ಬಿಜೆಪಿಯವರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಬಡ ಕುಟುಂಬಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ರಾಜಕೀಯ ಹೋರಾಟದಿಂದಾಗಿ ಆ ಐದು ಕುಟುಂಬಗಳಿಗೆ ಕಾನೂನಾತ್ಮಕವಾಗಿ ಹಕ್ಕು ಪತ್ರ ಸಿಗುವುದು ಮತ್ತಷ್ಟು ಕಷ್ಟವಾಗುತ್ತಿದೆ. ಬಡವರಿಗೆ ಯಾವುದೇ ಸತ್ಯ ಗೊತ್ತಿಲ್ಲದೆ ಇವರ ಜೊತೆ ಬಂದು ಕುಳಿತಿದ್ದಾರೆ,” ಎಂದು ಶಾಸಕರು ವೀಡಿಯೊದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

3 ಜನರಿಂದ ಆಕ್ಷೇಪಣೆ (Objection): ಈ ಜಾಗದ ವಿಷಯದಲ್ಲಿ ಈಗಾಗಲೇ ಮೂರು ಜನರಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ತಹಶೀಲ್ದಾರ್ ಅವರಿಗೂ ಕಾನೂನು ಮೀರಿ ಹಕ್ಕು ಪತ್ರ ನೀಡುವ ಯಾವುದೇ ವಿವೇಚನಾ ಅಧಿಕಾರ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

ಅಕ್ರಮ-ಸಕ್ರಮ ಸಮಿತಿ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, “ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದ ಸಮಿತಿಯು ಕೇವಲ ಒಂದು ವರ್ಷದಲ್ಲಿ 1,600 ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡಿ, 1,500 ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಇಡೀ ರಾಜ್ಯದಲ್ಲೇ ಗಿನ್ನಿಸ್ ದಾಖಲೆ ಬರೆದಿದೆ. ಇಂತಹ ಜನಪರ ಶಾಸಕರ ವಿರುದ್ಧ ಬಿಜೆಪಿಯವರು ಕೀಳುಮಟ್ಟದ ಕೆಸರೆರಚಾಟ ನಡೆಸುತ್ತಿದ್ದಾರೆ. ಬಡವರ ಪರ ಕಾಳಜಿ ಇದ್ದರೆ ನೇರವಾಗಿ ಶಾಸಕರ ಕಚೇರಿಗೆ ಬಂದು ಮಾತನಾಡಲಿ,” ಎಂದು ಸವಾಲು ಹಾಕಿದ್ದಾರೆ.

ಒಟ್ಟಾರೆಯಾಗಿ, ಒಂದೆಡೆ ಬಡ ಕುಟುಂಬಗಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದರೆ, ಇನ್ನೊಂದೆಡೆ ಕಾನೂನಿನ ತೊಡಕುಗಳು ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಂದಾಗಿ ಈ ಹಕ್ಕು ಪತ್ರ ವಿವಾದ ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ.




Continue Reading

Trending

Copyright © 2025 Deevatige

error: Content is protected !!