Connect with us

Bantawala

ಹಕ್ಕು ಪತ್ರ ವಿತರಣೆ ವಿವಾದ: ಅಧಿಕಾರಿಗಳ ಭರವಸೆ ಹುಸಿ; ಮತ್ತೆ ಧರಣಿ ಕುಳಿತ ಕುಟುಂಬಗಳು! ಕಾನೂನು ತೊಡಕು ಬಿಚ್ಚಿಟ್ಟ ಶಾಸಕರು

Published

on

ಬಂಟ್ವಾಳ/ಪುತ್ತೂರು: ಹಕ್ಕು ಪತ್ರ ವಿತರಣೆಯ ಭರವಸೆ ನೀಡಿ ಅಧಿಕಾರಿಗಳು ಕೈಕೊಟ್ಟಿದ್ದಾರೆ ಎಂದು ಆರೋಪಿಸಿ ಪುಣಚ ಗ್ರಾಮದ ದಲಿತ ಕುಟುಂಬಗಳು ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಮತ್ತೊಮ್ಮೆ ಅಹೋರಾತ್ರಿ ಧರಣಿ ಆರಂಭಿಸಿವೆ. “ನ್ಯಾಯ ಸಿಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಆದರೆ, ಈ ಪ್ರತಿಭಟನೆಯ ಹಿಂದೆ ರಾಜಕೀಯ ಷಡ್ಯಂತ್ರವಿದ್ದು, ತಾಂತ್ರಿಕವಾಗಿ ಅವರಿಗೆ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಭರವಸೆ ಹುಸಿ: ತಾರಕಕ್ಕೇರಿದ ಮತ್ತೊಂದು ಪ್ರತಿಭಟನೆ!

ಮೇ 26 ರಂದು ಪೆರ್ನೆ ಗ್ರಾಮ ಪಂಚಾಯತ್‌ನಲ್ಲಿ ಹಕ್ಕು ಪತ್ರ ವಿತರಣೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಸಭೆಯನ್ನು ರದ್ದುಗೊಳಿಸಿದ್ದರು. ಈ ಹಿಂದೆ ಹಕ್ಕು ಪತ್ರ ನೀಡುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ ಸುಳ್ಳಾದ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಮೂರು ಕುಟುಂಬಗಳು ತಾಲೂಕು ಕಚೇರಿ ಮುಂಭಾಗದಲ್ಲೇ ಮತ್ತೆ ಧರಣಿ ಕುಳಿತಿವೆ. ಇವರಿಗೆ ಪುತ್ತೂರು ಬಿಜೆಪಿ ಮುಖಂಡರು ಸಾಥ್ ನೀಡಿದ್ದು, ಬಡವರಿಗೆ ನ್ಯಾಯ ಸಿಗುವವರೆಗೂ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಗಿರಿಧರ್ ನಾಯ್ಕ್ ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ಹಕ್ಕು ಪತ್ರ ನೀಡಲು ಸಾಧ್ಯವಿಲ್ಲ: ವಿಡಿಯೋದಲ್ಲಿ ಶಾಸಕರ ಸ್ಪಷ್ಟನೆ

ಈ ಇಡೀ ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಅಶೋಕ್ ಕುಮಾರ್ ರೈ ಅವರು, ಪ್ರತಿಭಟನೆ ನಡೆಸುತ್ತಿರುವ ಕುಟುಂಬಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಹಕ್ಕು ಪತ್ರ ನೀಡಲು ಇರುವ ತಾಂತ್ರಿಕ ತೊಂದರೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

15 ವರ್ಷಗಳ ವಾಸ್ತವ್ಯದ ದಾಖಲೆ ಇಲ್ಲ: “ನಿಯಮಾವಳಿಗಳ ಪ್ರಕಾರ 94ಸಿ ಅಡಿಯಲ್ಲಿ ಹಕ್ಕು ಪತ್ರ ಪಡೆಯಬೇಕಾದರೆ ಫಲಾನುಭವಿಗಳು ಆ ಜಾಗದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸವಾಗಿರಬೇಕು. ಆದರೆ, ಈ ಕುಟುಂಬಗಳು ಅಲ್ಲಿ ವಾಸವಿದ್ದವು ಎಂಬುದಕ್ಕೆ ಯಾವುದೇ ರೀತಿಯ ಸರ್ಕಾರಿ ಅಥವಾ ಕಾನೂನಾತ್ಮಕ ದಾಖಲೆಗಳು ಲಭ್ಯವಿಲ್ಲ” ಎಂದು ಶಾಸಕರು ತಿಳಿಸಿದ್ದಾರೆ.

ಇತ್ತೀಚಿನ ಅರ್ಜಿಗಳು: ಸದರಿ ಕುಟುಂಬಗಳು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವುದು ಕೇವಲ 2020 ರಲ್ಲಿ. ಅರ್ಜಿ ಸಲ್ಲಿಸಿದ ತಕ್ಷಣ ಜಾಗ ಸಿಗುವುದಿಲ್ಲ, ಅದಕ್ಕೆ ಪೂರಕ ದಾಖಲೆಗಳು ಬೇಕಾಗುತ್ತವೆ.

ರಾಜಕೀಯ ಹೋರಾಟದಿಂದ ಬಡವರಿಗೆ ಅನ್ಯಾಯ: “ಬಿಜೆಪಿಯವರು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಬಡ ಕುಟುಂಬಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ರಾಜಕೀಯ ಹೋರಾಟದಿಂದಾಗಿ ಆ ಐದು ಕುಟುಂಬಗಳಿಗೆ ಕಾನೂನಾತ್ಮಕವಾಗಿ ಹಕ್ಕು ಪತ್ರ ಸಿಗುವುದು ಮತ್ತಷ್ಟು ಕಷ್ಟವಾಗುತ್ತಿದೆ. ಬಡವರಿಗೆ ಯಾವುದೇ ಸತ್ಯ ಗೊತ್ತಿಲ್ಲದೆ ಇವರ ಜೊತೆ ಬಂದು ಕುಳಿತಿದ್ದಾರೆ,” ಎಂದು ಶಾಸಕರು ವೀಡಿಯೊದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

3 ಜನರಿಂದ ಆಕ್ಷೇಪಣೆ (Objection): ಈ ಜಾಗದ ವಿಷಯದಲ್ಲಿ ಈಗಾಗಲೇ ಮೂರು ಜನರಿಂದ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ತಹಶೀಲ್ದಾರ್ ಅವರಿಗೂ ಕಾನೂನು ಮೀರಿ ಹಕ್ಕು ಪತ್ರ ನೀಡುವ ಯಾವುದೇ ವಿವೇಚನಾ ಅಧಿಕಾರ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ

ಅಕ್ರಮ-ಸಕ್ರಮ ಸಮಿತಿ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, “ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದ ಸಮಿತಿಯು ಕೇವಲ ಒಂದು ವರ್ಷದಲ್ಲಿ 1,600 ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡಿ, 1,500 ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಇಡೀ ರಾಜ್ಯದಲ್ಲೇ ಗಿನ್ನಿಸ್ ದಾಖಲೆ ಬರೆದಿದೆ. ಇಂತಹ ಜನಪರ ಶಾಸಕರ ವಿರುದ್ಧ ಬಿಜೆಪಿಯವರು ಕೀಳುಮಟ್ಟದ ಕೆಸರೆರಚಾಟ ನಡೆಸುತ್ತಿದ್ದಾರೆ. ಬಡವರ ಪರ ಕಾಳಜಿ ಇದ್ದರೆ ನೇರವಾಗಿ ಶಾಸಕರ ಕಚೇರಿಗೆ ಬಂದು ಮಾತನಾಡಲಿ,” ಎಂದು ಸವಾಲು ಹಾಕಿದ್ದಾರೆ.

ಒಟ್ಟಾರೆಯಾಗಿ, ಒಂದೆಡೆ ಬಡ ಕುಟುಂಬಗಳು ನ್ಯಾಯಕ್ಕಾಗಿ ಬೀದಿಯಲ್ಲಿ ಕುಳಿತಿದ್ದರೆ, ಇನ್ನೊಂದೆಡೆ ಕಾನೂನಿನ ತೊಡಕುಗಳು ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಂದಾಗಿ ಈ ಹಕ್ಕು ಪತ್ರ ವಿವಾದ ಕರಾವಳಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಪುಣಚದಲ್ಲಿ ಇನ್‌ಸ್ಟಾಗ್ರಾಂ ಪರಿಚಯ, ನಗ್ನ ಫೋಟೋ ಬ್ಲ್ಯಾಕ್‌ಮೇಲ್ ಜಾಲ; 10 ಪವನ್ ಚಿನ್ನ ದೋಚಿ ಯುವತಿಗೆ ವಂಚನೆ!

Published

on

ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ನಡೆದ ಈ ಘಟನೆಯು ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಒಂದು ಕಣ್ಣಾಡಿಸುವ ಉದಾಹರಣೆಯಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವಂಚಕನೊಬ್ಬ, ಯುವತಿಯೊಬ್ಬಳ ನಗ್ನ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿ 10 ಪವನ್‌ಗೂ ಅಧಿಕ ಚಿನ್ನಾಭರಣವನ್ನು ದೋಚಿರುವ ಕೃತ್ಯ ಆತಂಕಕಾರಿಯಾಗಿದೆ. ಅಪರಿಚಿತರೊಂದಿಗೆ ಜಾಲತಾಣಗಳಲ್ಲಿ ಸ್ನೇಹ ಬೆಳೆಸುವ ಮುನ್ನ ಯುವಜನತೆ, ವಿಶೇಷವಾಗಿ ಯುವತಿಯರು ಎಷ್ಟು ಎಚ್ಚರಿಕೆಯಿಂದ ಇರಬೇಕು ಎಂಬುದನ್ನು ಈ ಘಟನೆ ನಮಗೆ ಕಲಿಸುತ್ತದೆ.


ಕಳೆದ ಜುಲೈ ತಿಂಗಳಲ್ಲಿ ಯುವತಿಯ ಇನ್‌ಸ್ಟಾಗ್ರಾಂ ಖಾತೆಗೆ ಸುಪ್ರೀತ ಗೌಡ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದನ್ನು ಸ್ವೀಕರಿಸಿದ ಯುವತಿಯಿಂದ ಆರೋಪಿಯು ವಾಟ್ಸಾಪ್ ನಂಬರ್ ಪಡೆದುಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಮೆಸೇಜ್‌ ಮಾಡುತ್ತಲೇ ನಂತರ ಹೇಗೋ ಮಾಡಿ ಯುವತಿಯ ನಗ್ನ ಪೋಟೋವನ್ನು ತನ್ನಲ್ಲಿಟ್ಟುಕೊಂಡು ಆಕೆಯನ್ನು ಬೆದರಿಸಲು ಆರಂಭಿಸಿದ್ದಾನೆ.
​ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಸುಪ್ರೀತ್ ಗೌಡ, ತನ್ನ ಇನ್ನೊಬ್ಬ ಗೆಳೆಯನೊಂದಿಗೆ ಸೇರಿಕೊಂಡು ಯುವತಿಯಿಂದ ಹಣ ಪೀಕಿಸಲು ಯುವತಿಯನ್ನು ಬ್ಲಾಕ್‌ ಮೈಲ್‌ ಮಾಡಲು ಆರಂಭಿಸಿದ್ದಾನೆ. ನನ್ನಲ್ಲಿ ಹಣ ಇಲ್ಲ ಎಂದಾಗ ಆಕೆಯ ಬಳಿ ಇರುವ ಚಿನ್ನಾಭರಣವನ್ನು ನೀಡುವಂತೆ “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ತೆಗೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದನೆನ್ನಲಾಗಿದೆ.

ಘಟನೆಯ ಸಂಪೂರ್ಣ ವಿವರ:
ಪರಿಚಯ ಮತ್ತು ಸ್ನೇಹ: ಪುಣಚ ಗ್ರಾಮದ 20 ವರ್ಷದ ಯುವತಿಯೊಬ್ಬರ ಇನ್‌ಸ್ಟಾಗ್ರಾಂ ಖಾತೆಗೆ ಕಳೆದ ಜುಲೈ ತಿಂಗಳಲ್ಲಿ ‘ಸುಪ್ರೀತ್ ಗೌಡ’ ಎಂಬ ಹೆಸರಿನ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಇದನ್ನು ಸ್ವೀಕರಿಸಿದ ಬಳಿಕ, ಆರೋಪಿಯು ಆಕೆಯ ವಾಟ್ಸಾಪ್ ನಂಬರ್ ಪಡೆದುಕೊಂಡು ನಿರಂತರವಾಗಿ ಚಾಟ್ ಮಾಡಲು ಆರಂಭಿಸಿದ್ದಾನೆ. ಹೀಗೆ ಚಾಟಿಂಗ್ ಮುಂದುವರಿಸಿದ ಆರೋಪಿ, ಹೇಗೋ ಮಾಡಿ ಯುವತಿಯ ನಗ್ನ (ಖಾಸಗಿ) ಫೋಟೋವನ್ನು ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ. ಬಳಿಕ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ.
ಚಿನ್ನಾಭರಣ ದೋಚಿದ ಕೃತ್ಯ: “ನಿನ್ನ ಬಳಿ ಇರುವ ಚಿನ್ನವನ್ನು ಕೊಡಬೇಕು, ಇಲ್ಲವಾದಲ್ಲಿ ನಿನ್ನ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಮಾನ ತೆಗೆಯುತ್ತೇನೆ” ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ಬೆದರಿಕೆಗೆ ತೀವ್ರವಾಗಿ ಭಯಭೀತರಾದ ಯುವತಿ, ಆತ ಹೇಳಿದಂತೆ ಮಾಡಲು ಮುಂದಾಗಿದ್ದಾರೆ.
ಮನೆ ಸಮೀಪವೇ ನಡೆದ ಕೃತ್ಯ: ಕಳೆದ ಆಗಸ್ಟ್ 18ರಂದು ಸುಪ್ರೀತ್ ಗೌಡ ತನ್ನ ಗೆಳೆಯನನ್ನು ಪುಣಚ ಗ್ರಾಮದಲ್ಲಿರುವ ಯುವತಿಯ ಮನೆ ಸಮೀಪಕ್ಕೆ ಬೈಕಿನಲ್ಲಿ ಕಳುಹಿಸಿದ್ದನು. ಯುವತಿಯು ಅನಿವಾರ್ಯವಾಗಿ ತನ್ನಲ್ಲಿದ್ದ 10 ಪವನ್‌ಗೂ ಅಧಿಕ (80 ಗ್ರಾಂ ಗೂ ಹೆಚ್ಚು) ಚಿನ್ನಾಭರಣಗಳನ್ನು ಆತನ ಗೆಳೆಯನಿಗೆ ಹಸ್ತಾಂತರಿಸಿದ್ದಾಳೆ. ಅಲ್ಲದೆ, ತನ್ನ ಫೋಟೋಗಳನ್ನು ವೈರಲ್ ಮಾಡದಂತೆ ಕಣ್ಣೀರಿನಿಂದ ವಿನಂತಿಸಿಕೊಂಡಿದ್ದಾಳೆ.
ಮನೆಮಂದಿಗೆ ಮಾಹಿತಿ ಮತ್ತು ವಂಚನೆ ಬಯಲು:
ಆರೋಪಿಯ ಅತಿಯಾಸೆಗೆ ಅಂತ್ಯವಿರಲಿಲ್ಲ. ಚಿನ್ನ ಕೊಟ್ಟ ಬಳಿಕವೂ ಮತ್ತೆ ಮತ್ತೆ ಚಿನ್ನ ನೀಡುವಂತೆ ಆತ ಯುವತಿಗೆ ಪೀಡಿಸಲು ಪ್ರಾರಂಭಿಸಿದನು. ಇದರಿಂದ ಮಾನಸಿಕವಾಗಿ ನೊಂದ ಯುವತಿಯು ಕೊನೆಗೆ ಧೈರ್ಯ ಮಾಡಿ ಮನೆಯವರ ಬಳಿ ಸಂಪೂರ್ಣ ವಿಷಯವನ್ನು ತಿಳಿಸಿಬಿಟ್ಟಿದ್ದಾಳೆ.
ಯುವತಿಯ ಮನೆಯವರು ಆರೋಪಿಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ, ಆತ “ನಾನು ನಿಮ್ಮಿಂದ ಪಡೆದ ಚಿನ್ನವನ್ನು ವಾಪಸ್ ಕೊಡುತ್ತೇನೆ, ಗಡಿಬಿಡಿ ಮಾಡಬೇಡಿ” ಎಂದು ನಂಬಿಸಿದ್ದಾನೆ. ಮನೆಯವರೂ ಸಹ ಚಿನ್ನ ವಾಪಸ್ ಸಿಕ್ಕರೆ ಸಾಕು ಎಂದು ಸುಮ್ಮನಾಗಿದ್ದರು. ಆದರೆ, ಕೆಲ ದಿನಗಳ ಬಳಿಕ ಆರೋಪಿ ತನ್ನ ಮೊಬೈಲ್ ನಂಬರ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಸಂಪೂರ್ಣವಾಗಿ ತಲೆಮರೆಸಿಕೊಂಡಿದ್ದಾನೆ. ಕೊನೆಗೆ ಮೋಸಹೋಗಿರುವುದನ್ನು ಅರಿತ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆತಂಕಗಳು:
ಈ ಕೃತ್ಯದ ಹಿಂದೆ ಸುಪ್ರೀತ್ ಗೌಡನಲ್ಲದೆ ಒಂದು ದೊಡ್ಡ ವಂಚಕರ ಜಾಲವೇ (Cyber Gang) ಕೆಲಸ ಮಾಡುತ್ತಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಜಾಲವು ಇಂತಹದೇ ನೂರಾರು ಅಮಾಯಕ ಯುವತಿಯರ ಬದುಕನ್ನು ನರಕ ಸದೃಶ್ಯವನ್ನಾಗಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆರೋಪಿ ಅಥವಾ ಆತನ ಗೆಳೆಯ ಚಿನ್ನಾಭರಣಗಳನ್ನು ಪಡೆಯಲು ನೇರವಾಗಿ ಮನೆ ಸಮೀಪವೇ ಬಂದಿದ್ದರಿಂದ, ಆತನನ್ನು ಸುಲಭವಾಗಿ ಖೆಡ್ಡಾಕ್ಕೆ ಬೀಳಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಯುವಜನತೆ ಎಷ್ಟು ಜಾಗರೂಕರಾಗಿರಬೇಕು ಎಂಬುದಕ್ಕೆ ಈ ಘಟನೆಯೇ ಕನ್ನಡಿಯಾಗಿದೆ.
ಯುವಜನತೆ ಮತ್ತು ಪೋಷಕರಿಗೆ ಪ್ರಮುಖ ಜಾಗೃತಿ ಸಂದೇಶ ಹಾಗೂ ಎಚ್ಚರಿಕೆಗಳು:
ಅಪರಿಚಿತರ ಸ್ನೇಹಕ್ಕೆ ಮುಕ್ತ ಆಹ್ವಾನ ಬೇಡ: ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವೇ ಇಲ್ಲದ ವ್ಯಕ್ತಿಗಳು ಕಳುಹಿಸುವ ‘ಫ್ರೆಂಡ್ ರಿಕ್ವೆಸ್ಟ್’ಗಳನ್ನು ಯಾವುದೇ ಕಾರಣಕ್ಕೂ ಕುರುಡಾಗಿ ಸ್ವೀಕರಿಸಬೇಡಿ. ಸುಂದರ ಪ್ರೊಫೈಲ್ ಚಿತ್ರಗಳು ಅಥವಾ ನಕಲಿ ಖಾತೆಗಳ ಹಿಂದೆ ವಂಚಕರೇ ಇರುತ್ತಾರೆ ಎಂಬುದನ್ನು ಮರೆಯದಿರಿ.

ವೈಯಕ್ತಿಕ ಫೋಟೋ/ಮಾಹಿತಿಗಳನ್ನು ಹಂಚಿಕೊಳ್ಳಬೇಡಿ: ವಾಟ್ಸಾಪ್ ಅಥವಾ ಇತರೆ ಚಾಟಿಂಗ್ ಆಪ್‌ಗಳಿಗೆ ಬಂದ ಕೂಡಲೇ ನಿಮ್ಮ ವೈಯಕ್ತಿಕ ಫೋಟೋಗಳು, ನಂಬರ್‌ಗಳು ಅಥವಾ ಖಾಸಗಿ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸೈಬರ್ ವಂಚಕರು ಇಂತಹವುಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ.

ಬೆದರಿಕೆಗೆ ಹೆದರಿ ಕುಳಿತುಕೊಳ್ಳಬೇಡಿ (ಬ್ಲ್ಯಾಕ್‌ಮೇಲ್‌ಗೆ ಮಣಿಯಬೇಡಿ): ಯಾರಾದರೂ ನಿಮ್ಮ ಫೋಟೋಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಿದರೆ, ಹಣ ಅಥವಾ ಒಡವೆಗಳನ್ನು ಕೇಳಿದರೆ, ಭಯಪಟ್ಟುಕೊಂಡು ಅವರ ಮಾತುಗಳಿಗೆ ತಲೆಬಾಗಬೇಡಿ. ವಂಚಕರು ಹಣ ನೀಡಿದರೂ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಲೇ ಇರುತ್ತಾರೆ.

ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿ: ಯಾವುದೇ ಸಮಸ್ಯೆಯುಂಟಾದರೂ ಮುಚ್ಚಿಡದೆ ತಕ್ಷಣವೇ ತಂದೆ-ತಾಯಿ ಅಥವಾ ವಿಶ್ವಾಸಾರ್ಹ ಹಿರಿಯರ ಬಳಿ ವಿಷಯವನ್ನು ಹಂಚಿಕೊಳ್ಳಿ. ನಿಮ್ಮ ಮಾನ-ಮರ್ಯಾದೆಗೆ ಹೆದರಿಕೊಂಡು ಮೌನವಾಗಿರುವುದು ವಂಚಕರಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ.

ಕೂಡಲೇ ಸೈಬರ್ ಕ್ರೈಮ್ ಅಥವಾ ಪೊಲೀಸರನ್ನು ಸಂಪರ್ಕಿಸಿ: ಅಪರಿಚಿತರಿಂದ ಯಾವುದೇ ರೀತಿಯ ಬೆದರಿಕೆ, ಕಿರುಕುಳ ಅಥವಾ ವಂಚನೆ ಎದುರಾದ ತಕ್ಷಣವೇ ಯಾವುದೇಂಜಿಕೆಗೆ ಒಳಗಾಗದೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸೈಬರ್ ಕ್ರೈಮ್‌ಗೆ ದೂರು ನೀಡಿ.

ಸಾಮಾಜಿಕ ಜಾಲತಾಣಗಳು ಮನರಂಜನೆಗೆ ಇರಬೇಕೇ ಹೊರತು, ನಮ್ಮ ಬದುಕನ್ನು ನರಕ ಮಾಡಿಕೊಳ್ಳಲು ಅಲ್ಲ. ಸ್ವಲ್ಪ ಎಚ್ಚರಿಕೆ ವಹಿಸಿದರೆ ಇಂತಹ ಸೈಬರ್ ಕಳ್ಳರ ಬಲೆಗೆ ಬೀಳುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಜಾಗರೂಕರಾಗಿರಿ, ಸುರಕ್ಷಿತವಾಗಿರಿ!

Continue Reading

Bantawala

ಬಂಟ್ವಾಳ: ಪೋಕ್ಸೋ ಪ್ರಕರಣ ಸಾಬೀತು – ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ನ್ಯಾಯಾಲಯ ಆದೇಶ

Published

on

ಮಂಗಳೂರು: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪದ ಪೋಕ್ಸೋ ಪ್ರಕರಣದಲ್ಲಿ ಆರೋಪಿಯ ಮೇಲಿನ ಅಪರಾಧ ಸಾಬೀತಾಗಿದ್ದು, ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (FTSC-2) ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ವಾಸ ಮತ್ತು ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬೆಳ್ತಂಗಡಿ ಗುರುವಾಯನಕೆರೆ ನಿವಾಸಿ ಅಬ್ದುಲ್ ಲತಿಫ್ ಶಿಕ್ಷೆಗೊಳಗಾದ ಅಪರಾಧಿ. ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಆರೋಪವಿದ್ದು, ಪ್ರಮುಖ ಆರೋಪಿಯ ದೋಷವು ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಪ್ರಕರಣದ ಹಿನ್ನೆಲೆ ಮತ್ತು ತನಿಖೆ:

ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಧಿಸೂಚನೆ ಸಂಖ್ಯೆ 141/2025 ರ ಅಡಿಯಲ್ಲಿ ಪೋಕ್ಸೋ ಕಾಯ್ದೆ-2012ರ ಕಲಂ: 4, 6, 8, 12, 19(1)(b), 21 ಹಾಗೂ BNS-2023ರ ಕಲಂ: 64(2)(f), 75 r/w 3(5) ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆಯನ್ನು ಅರಿತುಕೊಂಡ ಬಂಟ್ವಾಳ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಹಾಗೂ ತನಿಖಾಧಿಕಾರಿ ಅನಂತ ಪದ್ಮನಾಭ ಅವರು ಕೂಲಂಕಷವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:

ಮಂಗಳೂರಿನ ಮಾನ್ಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ (FTSC-2) ನಡೆದ ವಿಚಾರಣೆಯ ಸಂದರ್ಭದಲ್ಲಿ, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾದೇವಿ ಬೋಳೂರು ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಸಾಕ್ಷಿಗಳನ್ನು ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಮಾನು ಕೆ.ಎಸ್. ಅವರು, ಆರೋಪಿ ಅಬ್ದುಲ್ ಲತಿಫ್‌ನ ಕೃತ್ಯವು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಿನಾಂಕ 19.09.2026 ರಂದು ಈ ಕೆಳಗಿನ ಶಿಕ್ಷೆಯನ್ನು ಪ್ರಕಟಿಸಿ ಆದೇಶಿಸಿದ್ದಾರೆ:

  • ಕಾರಾಗೃಹ ವಾಸ: 20 ವರ್ಷಗಳ ಕಠಿಣ ಕಾರಾಗೃಹ ವಾಸ.
  • ದಂಡದ ಮೊತ್ತ: ರೂ. 80,000/- (ಎಂಭತ್ತು ಸಾವಿರ ರೂಪಾಯಿಗಳು).

ತ್ವರಿತ ತನಿಖೆ ಮತ್ತು ಸಮರ್ಥ ವಾದ ಮಂಡನೆಯ ಮೂಲಕ ಅಪರಾಧಿಗೆ ತಕ್ಕ ಶಿಕ್ಷೆ ದೊರೆಯುವಂತೆ ಮಾಡಿದ ತನಿಖಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Continue Reading

accident

ಬಂಟ್ವಾಳ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ದುರ್ಘಟನೆ; ಕೌಟುಂಬಿಕ ಕಲಹದ ಹಿನ್ನೆಲೆ ಮಕ್ಕಳನ್ನು ಬಾವಿಗೆ ಎಸೆದ ತಾಯಿ – ಒಂದು ಮಗು ಸಾವು, ಮತ್ತೊಂದು ಮಗು ಆಸ್ಪತ್ರೆಗೆ ದಾಖಲು

Published

on

ಬಂಟ್ವಾಳ: ದಿನಾಂಕ: 19.09.2026ರಂದು ಮಧ್ಯಾಹ್ನ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪೆರ್ಣೆ ಮೈರಕಟ್ಟೆಯಲ್ಲಿ ನಡೆದ ದೊಡ್ಡ ದುರಂತವೊಂದು ಬೆಳಕಿಗೆ ಬಂದಿದೆ. ಪೆರ್ಣೆಯಲ್ಲಿ ವಾಸ್ತವವಿರುವ ಸಿನಾನ್ (32) ಹಾಗೂ ನೂರುನ್ನಿಸಾ (28) ಎಂಬ ದಂಪತಿಗಳ ನಡುವೆ ಫೋನ್ ಕರೆಯಲ್ಲಿ ವೈವಾಹಿಕ ಕಲಹ ನಡೆದಿದ್ದು, ಈ ವೇಳೆ ಕೋಪಗೊಂಡ ಆರೋಪಿತೆ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಸುಮಾರು ಮೂರುವರೆ ವರ್ಷದ ಮಗು ಹಾಗೂ ಗಂಡನ ತಂಗಿಯ ಮಗುವನ್ನು ಮನೆ ಸಮೀಪದ ಕುಡಿಯುವ ನೀರಿನ ಬಾವಿಗೆ ಎಸೆದಿರುವುದಾಗಿ ಎಸ್‌ಪಿ ಮಾಹಿತಿ ನೀಡಿದ್ದಾರೆ.

ಆದರೆ, ಬೆಳಿಗ್ಗೆ ಸ್ಥಳೀಯ ವಾಹಿನಿಗಳಲ್ಲಿ ಹಾಗೂ ಆರಂಭಿಕ ವರದಿಗಳಲ್ಲಿ ಮಕ್ಕಳು ಆಟವಾಡುತ್ತಾ ಆಕಸ್ಮಿಕವಾಗಿ ಬಾವಿಗೆ ಬಿದ್ದಿವೆ ಎಂದು ಪ್ರಸಾರವಾಗಿತ್ತು. ಪ್ರತ್ಯಕ್ಷದರ್ಶಿಗಳು ಹಾಗೂ ಆರಂಭಿಕ ಮಾಹಿತಿಯಂತೆ, ಪೆರ್ಣೆ ಮೈರಕಟ್ಟೆಯಲ್ಲಿ ಮಕ್ಕಳು ಬಾವಿಯ ಸಮೀಪವಿದ್ದ ವೇಳೆ ಆಲಿಯಾ (4) ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಿಸಿ ಮೇಲಕ್ಕೆ ಕರೆತಂದಿದ್ದರು. ಬಳಿಕ ಮತ್ತೊಂದು ಮಗು ಕೂಡ ಬಾವಿಗೆ ಬಿದ್ದಿರುವ ಬಗ್ಗೆ ಆಲಿಯಾ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು, ಸ್ಥಳೀಯರು ಪರಿಶೀಲಿಸಿದಾಗ ರಬೀಹ್ (2) ಬಾವಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿತ್ತು. ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದರೂ ರಬೀಹ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪ್ರಸಾರವಾಗಿತ್ತು.

ನೈಜ ಸತ್ಯ ಬಯಲುಗೊಳಿಸಿದ ಪೊಲೀಸರು:

ಸ್ಥಳೀಯ ಮಾದ್ಯಮಗಳಲ್ಲಿ ಆರಂಭದಲ್ಲಿ ಆಕಸ್ಮಿಕ ಸಾವು ಎಂದು ಬಿತ್ತರವಾಗಿದ್ದರೂ, ಪೊಲೀಸ್ ತನಿಖೆಯಿಂದ ಅಸಲಿ ವಿಚಾರ ಹೊರಬಂದಿದೆ. ದಂಪತಿಗಳ ನಡುವಿನ ಫೋನ್ ಕರೆಯ ಕೌಟುಂಬಿಕ ಕಲಹದ ರಭಸದಲ್ಲಿ ಕೋಪಗೊಂಡ ಆರೋಪಿತೆ ನೂರುನ್ನಿಸಾ ತಾನೇ ಸ್ವತಃ ಮಕ್ಕಳನ್ನು ಬಾವಿಗೆ ಎಸೆದಿರುವುದು ಎಸ್‌ಪಿ ನೀಡಿರುವ ಅಧಿಕೃತ ಮಾಹಿತಿಯಿಂದ ತಿಳಿದುಬಂದಿದೆ. ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಮಕ್ಕಳನ್ನು ಮೇಲಕ್ಕೆ ಎತ್ತಿದ1ರ ಪೈಕಿ ಗಂಡನ ತಂಗಿಯ ಮಗು (ರಬೀಹ್ – 3) ಮೃತಪಟ್ಟಿದ್ದು, ಆರೋಪಿತೆಯ ಮಗು (ಆಲಿಯಾ – 4) ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 121/2026 ರಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿತೆ ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Continue Reading

Trending

Copyright © 2025 Deevatige

error: Content is protected !!