Connect with us

Religious

ಧರ್ಮ-ಜಾತಿ ಮೀರಿದ ಮಾನವ ಧರ್ಮ: 15 ಬಡ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಪಾವತಿಸಿ ಮಾದರಿಯಾದ ‘Edu-Supporters Kanyana’

Published

on

ವಿಟ್ಲ: ಧರ್ಮ, ಜಾತಿ ಹಾಗೂ ಅಂತಸ್ತಿನ ಯಾವುದೇ ಭೇದ-ಭಾವವಿಲ್ಲದೆ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಕನ್ಯಾನದಲ್ಲಿ ಅತ್ಯುತ್ತಮ ಹಾಗೂ ಮಾದರಿ ಸಮಾಜಸೇವೆಯೊಂದು ನಡೆದಿದೆ. ಇಲ್ಲಿನ ‘Edu-Supporters Kanyana’ ಸಂಘಟನೆಯ ವತಿಯಿಂದ ಕನ್ಯಾನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 15 ಬಡ ವಿದ್ಯಾರ್ಥಿಗಳ ಒಟ್ಟು ₹90,000/- ಕಾಲೇಜು ಶುಲ್ಕವನ್ನು ಪಾವತಿಸಿ ಮಾನವೀಯತೆ ಮೆರೆಯಲಾಗಿದೆ.

ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ ಈ ನೆರವು ನೀಡಲಾಗಿದ್ದು, ಬಡತನದ ಕಾರಣಕ್ಕೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿಯ ಶಿಕ್ಷಣ ಮೊಟಕಾಗಬಾರದು ಎಂಬ ಉದಾತ್ತ ಉದ್ದೇಶವನ್ನು ಸಂಘಟನೆ ಹೊಂದಿದೆ. ಈ ಮಹತ್ಕಾರ್ಯಕ್ಕೆ ಶಿಕ್ಷಣ ಪ್ರೇಮಿ ಕೊಡುಗೈ ದಾನಿಗಳು ಹಾಗೂ ದುಲ್ ಫುಖಾರ್ ಗಲ್ಫ್ ಸಮಿತಿ ಸಂಪೂರ್ಣ ಸಹಕಾರ ನೀಡಿದೆ.

ಪ್ರಮುಖರ ಉಪಸ್ಥಿತಿ

ಶುಲ್ಕ ಪಾವತಿಸುವ ವಿಶೇಷ ಕಾರ್ಯಕ್ರಮದಲ್ಲಿ ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕನ್ಯಾನ, ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮಜೀದ್ ಕನ್ಯಾನ, ಪ್ರಮುಖರುಗಳಾದ ಆಸಿಫ್ ಬನಾರಿ, ಜಮಾಲ್ ಕನ್ಯಾನ, ರಹೀಂ ನೆಕ್ಲಾಜೆ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಾರೈಸಿದರು.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಹಾಗೂ ಆರ್ಥಿಕ ನೆರವು ನೀಡಿದ ಎಲ್ಲಾ ದಾನಿಗಳಿಗೆ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ Edu-Supporters Kanyana ಸಂಘಟನೆಯು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದೆ.

ಸಾರ್ವಜನಿಕ ಪ್ರಶಂಸೆ

ಜಾತಿ-ಧರ್ಮಗಳ ಹೆಸರಿನಲ್ಲಿ ಸ್ವಾರ್ಥ ಹಿತಾಸಕ್ತಿ ಹೆಚ್ಚುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಮಾನವ ಧರ್ಮ ಹಾಗೂ ಕೋಮು ಸೌಹಾರ್ದತೆಯನ್ನು ಎತ್ತಿಹಿಡಿದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಬೆಳಕಾದ Edu-Supporters Kanyana ಸಂಘಟನೆಯ ಈ ಸಮಾಜಮುಖಿ ಸೇವಾ ಕಾರ್ಯಕ್ಕೆ ಸಾರ್ವಜನಿಕರಿಂದ ಹಾಗೂ ಶಿಕ್ಷಣ ಪ್ರೇಮಿಗಳಿಂದ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

crime

ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್‌ಗಿರಿ: ಹಿಂದೂ ಸ್ನೇಹಿತನ ಜೊತೆಗಿದ್ದ ಮುಸ್ಲಿಂ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿ ಕಿರುಕುಳ!

Published

on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣ ಮುನ್ನೆಲೆಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉದ್ಯಾನವನವೊಂದರಲ್ಲಿ ಹಿಂದೂ ಸ್ನೇಹಿತನ ಜೊತೆ ಕುಳಿತಿದ್ದ ಮುಸ್ಲಿಂ ಯುವತಿಯನ್ನು ತರಾಟೆಗೆ ತಗೆದುಕೊಂಡ ಉರ್ದು ಮಾತನಾಡುವ ವ್ಯಕ್ತಿಯೊಬ್ಬ, ಸಾರ್ವಜನಿಕವಾಗಿಯೇ ಆಕೆಗೆ ಕಿರುಕುಳ ನೀಡಿ, ಬುರ್ಖಾ ತೆಗೆಯುವಂತೆ ಒತ್ತಾಯಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಟ್ವಿಟರ್) ನಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಘಟನೆಯ ಹಿನ್ನೆಲೆ:

ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಬೆಂಗಳೂರಿನ ಪಾರ್ಕ್‌ವೊಂದರ ಬೆಂಚ್ ಮೇಲೆ ಬುರ್ಖಾ ಧರಿಸಿದ ಮುಸ್ಲಿಂ ಯುವತಿಯೊಬ್ಬರು ತಮ್ಮ ಹಿಂದೂ ಸ್ನೇಹಿತನ ಜೊತೆ ಕುಳಿತು ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಉರ್ದು ಮಾತನಾಡುವ ವ್ಯಕ್ತಿಯೊಬ್ಬ ಅಲ್ಲಿಗೆ ಧಾವಿಸಿ, ಇಬ್ಬರನ್ನೂ ಪ್ರಶ್ನಿಸಲು ಹಾಗೂ ವಿಡಿಯೋ ಚಿತ್ರೀಕರಿಸಲು ಆರಂಭಿಸಿದ್ದಾನೆ.

ಯುವತಿಯನ್ನು ಆತ ಪ್ರಶ್ನಿಸಿದಾಗ, “ಇವರು ನನ್ನ ಸ್ನೇಹಿತರು” ಎಂದು ಯುವತಿ ಧೈರ್ಯವಾಗಿ ಉತ್ತರಿಸಿದ್ದಾಳೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ವ್ಯಕ್ತಿ, “ಹಿಂದೂ ವ್ಯಕ್ತಿಯೊಂದಿಗೆ ಸಾರ್ವಜನಿಕವಾಗಿ ಇರಲು ನಿನಗೆ ನಾಚಿಕೆಯಾಗುವುದಿಲ್ಲವೇ? ನಿಮ್ಮಂತಹವರಿಂದಲೇ ನಮ್ಮ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ” ಎಂದು ಏರುಧ್ವನಿಯಲ್ಲಿ ನಿಂದಿಸಿದ್ದಾನೆ.

ಬುರ್ಖಾ ತೆಗೆಯುವಂತೆ ದರ್ಪ:

ಯುವತಿಯ ತೀವ್ರ ವಿರೋಧದ ನಡುವೆಯೂ ಆಕೆಯ ಮೊಬೈಲ್ ಸಂಖ್ಯೆ ಹಾಗೂ ಪೋಷಕರ ನಂಬರ್ ನೀಡುವಂತೆ ಆ ವ್ಯಕ್ತಿ ಒತ್ತಾಯಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಸಾರ್ವಜನಿಕ ಸ್ಥಳದಲ್ಲೇ ಧರಿಸಿದ್ದ ಬುರ್ಖಾವನ್ನು ತೆಗೆಯುವಂತೆ ದರ್ಪ ತೋರಿದ್ದಾನೆ ಎನ್ನಲಾಗಿದೆ. ಮಹಿಳಾ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಂತೆ ಕಂಡುಬಂದ ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ:

ಕಿರಣ್ ಆರಾಧ್ಯ (@KiranAradhyaadv) ಎಂಬ ಎಕ್ಸ್ ಖಾತೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.

“ಸಾರ್ವಜನಿಕವಾಗಿ ಮಹಿಳೆಯೊಬ್ಬರ ವಿಡಿಯೋ ಚಿತ್ರೀಕರಿಸಿ, ಆಕೆಯ ಬಟ್ಟೆ (ಬುರ್ಖಾ) ತೆಗೆಯುವಂತೆ ಒತ್ತಾಯಿಸುವುದನ್ನು ಯಾವ ಧರ್ಮ ಬೋಧಿಸುತ್ತದೆ? ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ಸರ್ಕಾರದ ಕೈಯಲ್ಲಿದೆಯೇ ಅಥವಾ ಇದನ್ನು ಯಾರಿಗಾದರೂ ಹೊರಗುತ್ತಿಗೆ ನೀಡಲಾಗಿದೆಯೇ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಕಾನೂನು ಕ್ರಮಕ್ಕೆ ಆಗ್ರಹ:

ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಮಹಿಳೆಯರ ಸುರಕ್ಷತೆಗೆ ಧಕ್ಕೆ ತರುತ್ತಿರುವ ಇಂತಹ ನೈತಿಕ ಪೊಲೀಸ್‌ಗಿರಿ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಬೆಂಗಳೂರು ನಗರ ಪೊಲೀಸ್ ಮತ್ತು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ

Continue Reading

Bantawala

ವಿಟ್ಲದ ಇತಿಹಾಸ ಪ್ರಸಿದ್ಧ ‘ಶ್ರೀ ಯೋಗೀಶ್ವರ (ಜೋಗಿ) ಮಠ’ ಪುನರ್ ನಿರ್ಮಾಣ: ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿ; ದಾನಿಗಳಿಗೆ ಸಮಿತಿ ಮನವಿ

Published

on

ವಿಟ್ಲ: ನಾಥ ಪಂಥದ ವಿಶಿಷ್ಟ ಪೂಜಾ ಕೇಂದ್ರ ಹಾಗೂ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಿಟ್ಲ ಸೀಮೆಯ ಅತ್ಯಂತ ಪ್ರಾಚೀನ ಕ್ಷೇತ್ರವಾದ ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಮತ್ತು ದೇವಸ್ಥಾನದ ಪುನರ್ ನಿರ್ಮಾಣದ ಮಹಾ ಕಾಮಗಾರಿ ಇದೀಗ ಅತ್ಯಂತ ವೇಗವಾಗಿ ಪ್ರಗತಿಯಲ್ಲಿದೆ.

ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದ ಈ ಮಠ ಹಾಗೂ ದೇಗುಲವನ್ನು ಜೀರ್ಣೋದ್ಧಾರಗೊಳಿಸಲು ವಿಟ್ಲ ಶ್ರೀ ಮಠದ ವ್ಯಾಪ್ತಿಯ ಜೋಗಿ ಸಮಾಜದವರು, ಮಠದ ಮಣ್ಣಿನಲ್ಲಿ ಬದುಕು ಕಟ್ಟಿಕೊಂಡಿರುವ ಮಾಜಿ ಹಿಡುವಳಿದಾರರು ಹಾಗೂ ಊರಿನ ಪ್ರಮುಖ ಧಾರ್ಮಿಕ ಮುಂದಾಳುಗಳು ಒಟ್ಟಾಗಿ ಸೇರಿ ‘ವಿಟ್ಲ ಶ್ರೀ ಯೋಗೀಶ್ವರ (ಜೋಗಿ) ಮಠ ಪುನರ್ ನಿರ್ಮಾಣ ಸಮಿತಿ (ರಿ.) ವಿಟ್ಲ’ ವನ್ನು ರಚಿಸಿಕೊಂಡು ಈ ಪವಿತ್ರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಭವ್ಯ ಇತಿಹಾಸ ಮತ್ತು ಮಾರ್ಗದರ್ಶನ: ನಾಥ ಪಂಥದ ಪ್ರಥಮ ಗುರುವೆನಿಸಿದ ಮತ್ಸ್ಯೇಂದ್ರನಾಥರ ಶಿಷ್ಯರಾದ ಶ್ರೀ ಗೋರಕ್ಷನಾಥರಿಂದ ಸ್ಥಾಪಿತವಾದ ಸೈದ್ಧಾಂತಿಕ ಹಿನ್ನೆಲೆಯುಳ್ಳ ಈ ಕ್ಷೇತ್ರಕ್ಕೆ ವಿಟ್ಲ ಯೋಗೀಶ್ವರ ಮಠದ ಮಠಾಧೀಶರಾದ ಶ್ರೀ ಶ್ರದ್ಧಾನಾಥಜೀ ಅವರ ಮಾರ್ಗದರ್ಶನವಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ವಿಟ್ಲ ಅರಮನೆಯ ಶ್ರೀ ಬಂಗಾರ ಅರಸು ಅವರ ಗೌರವಾಧ್ಯಕ್ಷತೆಯಲ್ಲಿ 155 ಜನರ ಸಮಿತಿಯು ಅಕ್ಟೋಬರ್ 15, 2023 ರಂದು ಆರಾಧ್ಯ ದೇವರಾದ ಶ್ರೀ ಕಾಶಿಕಾಲಭೈರವ, ಶ್ರೀ ಮಂಜುನಾಥ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೇಗುಲದ ಪುನರ್ ನಿರ್ಮಾಣ ಕಾರ್ಯಕ್ಕೆ ಕೈಹಾಕಿತ್ತು.

ರೂ. 2.50 ಕೋಟಿ ವೆಚ್ಚದ ಬೃಹತ್ ಯೋಜನೆ: ಪುತ್ತೂರಿನ ಪ್ರಸಿದ್ಧ ವಾಸ್ತುಶಿಲ್ಪಿ ಶ್ರೀ ಜಗನ್ನಿವಾಸರಾವ್ ಅವರು ಈ ಕ್ಷೇತ್ರಕ್ಕಾಗಿ ಒಟ್ಟು ರೂ. 2.50 ಕೋಟಿ ವೆಚ್ಚದ ಯೋಜನೆಯ ನೀಲಿ ನಕಾಶೆಯನ್ನು ತಯಾರಿಸಿಕೊಟ್ಟಿದ್ದಾರೆ. ವಿಟ್ಲ ಸೀಮೆಯ ತಂತ್ರಿಗಳಾದ ಬ್ರಹ್ಮಶ್ರೀ ರಘುರಾಮ ತಂತ್ರಿಗಳ ಪೌರೋಹಿತ್ಯದಲ್ಲಿ ಈಗಾಗಲೇ ದೇವರ ಬಾಲಾಲಯ ಪ್ರತಿಷ್ಠೆ, ಶಿಲಾನ್ಯಾಸ, ಪಾದುಕಾನ್ಯಾಸ, ಶತರುದ್ರಾಭಿಷೇಕ ಹಾಗೂ ಮಹಾರುದ್ರಾಭಿಷೇಕದಂತಹ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ನೆರವೇರಿವೆ.

ಪ್ರಗತಿಯಲ್ಲಿರುವ ಕಾಮಗಾರಿಗಳು: ಪ್ರಸ್ತುತ ಕ್ಷೇತ್ರದಲ್ಲಿ ಶಿಲಾಮಯವಾದ ಶ್ರೀ ಮಂಜುನಾಥ ದೇವರ ಗುಡಿ ಹಾಗೂ ಶಿಲಾಮಯ ಕಾಶಿ ಕಾಲಭೈರವ ದೇವರ ಗುಡಿ ಮತ್ತು ತೀರ್ಥಬಾವಿ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಎರಡು ಗುಡಿಗಳ ಶಿಖರದ ದಾರುಶಿಲ್ಪದ (ಮರದ ಕೆತ್ತನೆ) ಕೆಲಸಗಳು ಪ್ರಗತಿಯಲ್ಲಿವೆ.

ಇಲ್ಲಿಯವರೆಗೆ ಸಮಾಜ ಬಾಂಧವರಿಂದ, ಮಠದ ವ್ಯಾಪ್ತಿಯ ಮಾಜಿ ಹಿಡುವಳಿದಾರರಿಂದ ಹಾಗೂ ಊರ-ಪರಊರ ದಾನಿಗಳಿಂದ ಒಟ್ಟು ರೂ. 1,26,17,690.00 (ಒಂದು ಕೋಟಿ ಇಪ್ಪತ್ತಾರು ಲಕ್ಷಕ್ಕೂ ಅಧಿಕ) ದೇಣಿಗೆ ಸಂಗ್ರಹವಾಗಿದ್ದು, ಬೇಸ್ ಮೆಂಟ್ (ಪಂಚಾಂಗ), ಕಪ್ಪು ಕಲ್ಲಿನ ರಚನೆ, ಕಿರಾಲುಬೋಗಿ ಮರ ಹಾಗೂ ಶಿಲಾಮಯ ಗುಡಿಯ ಶಿಲೆಗಳ ಜೋಡಣೆ, ಸಭಾಭವನದ ಮಾದರಿ ಶೆಡ್ ಹಾಗೂ ತೀರ್ಥಬಾವಿಯ ಕಾಮಗಾರಿಗಳಿಗೆ ವಿನಿಯೋಗಿಸಲಾಗಿದೆ.

ದಾನಿಗಳಿಗೆ ಮುಕ್ತ ಅವಕಾಶ – ತಾಮ್ರದ ಹೊದಿಕೆ ಯೋಜನೆ: ದೇಗುಲದ ಗುಡಿಗೆ ತಾಮ್ರದ ಹೊದಿಕೆಯ ಶಿಖರಕ್ಕಾಗಿ ಸಮಿತಿಯು ವಿಶೇಷ ಯೋಜನೆಯನ್ನು ರೂಪಿಸಿದೆ. ಒಂದು ಚದರ ಅಡಿಗೆ ತಾಮ್ರದ ಹೊದಿಕೆಗೆ ರೂ. 3,000/- ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ತಲಾ 5 ಕೂಪನ್‌ಗಳಿರುವ ಪುಸ್ತಕದ ಮೂಲಕ ದೇಣಿಗೆ ನೀಡಿ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದಾಗಿದೆ.

ಇದಲ್ಲದೆ, ಸುತ್ತು ಗೋಪುರಕ್ಕೆ ಅಗತ್ಯವಿರುವ 16 ಶಿಲಾ ಸ್ತಂಭಗಳಿಗೆ (ತಲಾ ರೂ. 30,000/-), ಮುಖ್ಯ ದ್ವಾರ ಬಂದ್ಸ್, ಮಂಜುನಾಥ ಹಾಗೂ ಕಾಶಿಕಾಲಭೈರವ ಗುಡಿಯ ತೇಗದ ಕೆತ್ತನೆಯ ಬಾಗಿಲುಗಳು (ತಲಾ ರೂ. 4 ಲಕ್ಷ), ಗ್ರ್ಯಾನೈಟ್ ಫ್ಲೋರಿಂಗ್ ಹಾಗೂ ತಾಮ್ರದ ಕಲಶಗಳು ಸೇರಿದಂತೆ ಇನ್ನು ಹಲವಾರು ಪ್ರಮುಖ ಕಾಮಗಾರಿಗಳಿಗೆ ಸುಮಾರು ರೂ. 1.25 ಕೋಟಿ ಹಣದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನಾಥ ಪಂಥದ ಈ ಪವಿತ್ರ ಮಠದ ಪುನರ್ ನಿರ್ಮಾಣ ಕಾರ್ಯದಲ್ಲಿ ಮಹಾದಾನಿಗಳು, ಭಗವದ್ಭಕ್ತರು ತನು-ಮನ-ಧನದ ಸಹಕಾರ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ಅಧ್ಯಕ್ಷರಾದ ಯಶವಂತ ವಿಟ್ಲ, ಕಾರ್ಯಾಧ್ಯಕ್ಷರಾದ ಡಾ| ಗೀತಪ್ರಕಾಶ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಕೋಳ್ತೂರು ಹಾಗೂ ಕೋಶಾಧಿಕಾರಿ ಸತೀಶ್ ಕುಮಾರ್ ಕೂಟತ್ತಜೆ ಮತ್ತು ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.

ದೇಣಿಗೆ ನೀಡಲು ಬ್ಯಾಂಕ್ ಖಾತೆ ವಿವರಗಳು:

ಭಕ್ತರು ತಮ್ಮ ದೇಣಿಗೆಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು ಅಥವಾ ಪ್ರಕಟಣೆಯಲ್ಲಿರುವ QR ಕೋಡ್ ಬಳಸಿ ಗೂಗಲ್ ಪೇ (Google Pay) ಮೂಲಕವೂ ಕಳುಹಿಸಬಹುದು.

  • ಬ್ಯಾಂಕ್ ಹೆಸರು: ವಿಟ್ಲ ಕೆನರಾ ಬ್ಯಾಂಕ್‌ (Canara Bank, Vittal)
  • ಖಾತೆ ಸಂಖ್ಯೆ (A/c No.): 110166014883
  • ಐಎಫ್‌ಎಸ್‌ಸಿ ಕೋಡ್ (IFSC Code): CNRB0010141
  • ಮೈಕರ್ ಕೋಡ್ (MICR Code): 575015098

ಪರ್ಯಾಯ ಖಾತೆ:

  • ಬ್ಯಾಂಕ್ ಹೆಸರು: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌
  • ಖಾತೆ ಸಂಖ್ಯೆ (A/c No.): 2001-11984

ಸಂಪರ್ಕ ಸಂಖ್ಯೆಗಳು:

7259133438, 9448456723, 9449239453, 9845635250, 6360869922

Continue Reading

Politics

‘ನಾನು ಅಡ್ಡ ಮತದಾನ ಮಾಡಿಲ್ಲ, ಕಾಯಾ ವಾಚಾ ಮನಸಾ ಬಿಜೆಪಿ ಪರ ಕೆಲಸ ಮಾಡಿದ್ದೇನೆ’: ಚನ್ನಕೇಶವ ಸನ್ನಿಧಿ ಹಾಗೂ ಧರ್ಮಸ್ಥಳದಲ್ಲಿ ಶಾಸಕ ಹೆಚ್.ಕೆ. ಸುರೇಶ್ ಬಿಗ್ ಆಣೆ-ಪ್ರಮಾಣ!

Published

on

ಬೇಲೂರು/ಧರ್ಮಸ್ಥಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ (Cross Voting) ಮಾಡಿದ್ದಾರೆ ಎಂಬ ತೀವ್ರ ಆರೋಪ ಎದುರಿಸುತ್ತಿದ್ದ ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು, ಐತಿಹಾಸಿಕ ಬೇಲೂರು ಶ್ರೀ ಚನ್ನಕೇಶವಸ್ವಾಮಿ ಸನ್ನಿಧಿ ಹಾಗೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವ ಮೂಲಕ ತಮ್ಮ ಮೇಲಿನ ಕಳಂಕ ತೊಳೆದುಕೊಳ್ಳಲು ಮುಂದಾಗಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಬೆನ್ನಲ್ಲೇ ಕರಾವಳಿ ಮತ್ತು ಮಲೆನಾಡು ಭಾಗದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಈ ವಿವಾದಕ್ಕೆ ಸಂಬಂಧಿಸಿದಂತೆ, ಶಾಸಕ ಹೆಚ್.ಕೆ. ಸುರೇಶ್ ಅವರು ಇಂದು ನೂರಾರು ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಧರ್ಮಸ್ಥಳದತ್ತ ಪಯಣ ಬೆಳೆಸಿದರು.

ಐತಿಹಾಸಿಕ ಬೇಲೂರು ಚನ್ನಕೇಶವ ದೇವಾಲಯದಲ್ಲಿ ಮೊದಲ ಆಣೆ:

ಧರ್ಮಸ್ಥಳಕ್ಕೆ ತೆರಳುವ ಮುನ್ನ ಶಾಸಕ ಹೆಚ್.ಕೆ. ಸುರೇಶ್ ಅವರು ತಮ್ಮದೇ ಕ್ಷೇತ್ರದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಆವರಣದಲ್ಲಿರುವ ಪವಿತ್ರ ‘ಬಲಿ ಕಲ್ಲಿನ’ ಮೇಲೆ ಕೈಯಿಟ್ಟು, “ನಾನು ಬಿಜೆಪಿಗೆ ಯಾವುದೇ ದ್ರೋಹ ಬಗೆದಿಲ್ಲ, ಅಡ್ಡ ಮತದಾನ ಮಾಡಿಲ್ಲ” ಎಂದು ಚನ್ನಕೇಶವಸ್ವಾಮಿಯ ಸಾಕ್ಷಿಯಾಗಿ ಆಣೆ ಮಾಡಿದರು. ಬಳಿಕ ಅಲ್ಲೇ ಕರ್ಪೂರ ಹಚ್ಚಿ ಭಕ್ತಿಯಿಂದ ನಮಸ್ಕರಿಸಿ, ಧರ್ಮಸ್ಥಳದತ್ತ ತಮ್ಮ ಪ್ರಯಾಣ ಮುಂದುವರಿಸಿದರು.

ಧರ್ಮಸ್ಥಳದಲ್ಲಿ ಮುಷ್ಟಿ ಕಾಣಿಕೆ ನೀಡಿ ಪ್ರಮಾಣ:

ಧರ್ಮಸ್ಥಳಕ್ಕೆ ತಲುಪಿದ ಶಾಸಕರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದೇವರ ಮುಂದೆ ಮುಷ್ಟಿ ಕಾಣಿಕೆ ಹಾಕಿ ಪ್ರಾರ್ಥಿಸಿದ ಅವರು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲೇ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು ಪ್ರಮಾಣ ಮಾಡಿದರು.

ದೇವರ ಮುಂದೆ ಶಾಸಕ ಹೆಚ್.ಕೆ. ಸುರೇಶ್ ನುಡಿದ ಮಾತುಗಳು: “ನಾನು ಯಾವುದೇ ತಪ್ಪು ಮಾಡಿಲ್ಲ. ಹೃದಯಪೂರ್ವಕವಾಗಿ, ಕಾಯಾ ವಾಚಾ ಮನಸಾ ಸದಾ ಬಿಜೆಪಿ ಪರವಾಗಿಯೇ ಕೆಲಸ ಮಾಡಿದ್ದೇನೆ. ನಾನು ಈಗಲೂ ಬಿಜೆಪಿ, ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ನನ್ನ ಮೇಲಿನ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಲು ಆ ಮಂಜುನಾಥ ಸ್ವಾಮಿಯೇ ನನಗೆ ಶಕ್ತಿ ನೀಡಬೇಕು.”

ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ನಡೆ:

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಆರೋಪ ಕೇಳಿಬಂದ ತಕ್ಷಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವುದಾಗಿ ಹೇಳಿದ್ದರು. ಆದರೆ, ಹೈಕಮಾಂಡ್ ಹಾಗೂ ಸ್ವಪಕ್ಷದ ಪ್ರಮುಖ ನಾಯಕರ ಸೂಚನೆಯ ಮೇರೆಗೆ ಪಕ್ಷವು ಅಧಿಕೃತವಾಗಿ ಈ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದಾಗ್ಯೂ, ತಮ್ಮ ಮೇಲಿನ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಶಾಸಕ ಹೆಚ್.ಕೆ. ಸುರೇಶ್ ಅವರೇ ಸ್ವತಃ ಮುಂಚೂಣಿಗೆ ನಿಂತು, ಚನ್ನಕೇಶವಸ್ವಾಮಿ ಹಾಗೂ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಬ್ಯಾಕ್-ಟು-ಬ್ಯಾಕ್ ಆಣೆ-ಪ್ರಮಾಣ ಮಾಡಿರುವುದು ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.




Continue Reading

Trending

Copyright © 2025 Deevatige

error: Content is protected !!