judgement
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ!
ಮಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿ, ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಗಂಗಾಧರ ಪಾಂಗಾಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ಸೇರಿದಂತೆ ನಾಲ್ವರು ದೋಷಿಗಳಿಗೆ ಜೀವಾವಧಿ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರಾದ ಶ್ರೀ ಜಗದೀಶ್ ವಿ.ಎನ್. ಅವರು ಆದೇಶಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ!
2014ರ ಮೇ 15 ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿಯ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಅವರು ಸ್ಕೂಟರ್ನಲ್ಲಿ ತೆರಳುತ್ತಿದ್ದಾಗ, ಹಿಂಬಾಲಿಸಿ ಬಂದ ಬೊಲೆರೋ ವಾಹನವೊಂದು ಅವರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಗಂಗಾಧರ ಪಾಂಗಾಳ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಆರಂಭದಲ್ಲಿ ಇದನ್ನು ರಸ್ತೆ ಅಪಘಾತವೆಂದು ಬಿಂಬಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ಅಪಘಾತವಲ್ಲ, ಬದಲಿಗೆ ಕೃತ್ಯ ಎಸಗಲು ರೂಪಿಸಿದ ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿತ್ತು.
ಕೊಲೆಗೆ ಕಾರಣವೇನು?
1ನೇ ಆರೋಪಿ ಸತೀಶ್ ಬೈಕಂಪಾಡಿಯನ್ನು ‘ಬೈಕಂಪಾಡಿ ಮೊಗವೀರ ಮಹಾಸಭಾ’ದ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿತ್ತು. ಈ ಅಮಾನತಿಗೆ ಮೃತ ಗಂಗಾಧರ ಪಾಂಗಾಳ ಅವರೇ ಮೂಲ ಕಾರಣವೆಂದು ಭಾವಿಸಿದ ಆರೋಪಿಗಳು, ಅವರ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದರು. ಈ ಹಳೆ ದ್ವೇಷ ತೀರಿಸಿಕೊಳ್ಳಲು ಒಳಸಂಚು ರೂಪಿಸಿದ ಆರೋಪಿಗಳು, ಗಂಗಾಧರ ಅವರನ್ನು ಸ್ಕೂಟರ್ನಲ್ಲಿ ಹಿಂಬಾಲಿಸಿ ಬಂದು ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಸಿದ್ದರು. ಗಂಗಾಧರ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ನಂತರ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದರು.
ಶಿಕ್ಷೆಗೆ ಗುರಿಯಾದ ದೋಷಿಗಳು:
ಈ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ನಾಲ್ವರು ಆರೋಪಿಗಳ ವಿವರ ಹೀಗಿದೆ:
- ಸತೀಶ್ ಬೈಕಂಪಾಡಿ (57 ವರ್ಷ) – ಎ-1 ಆರೋಪಿ (ಮೀನಕಳಿಯ ನಿವಾಸಿ)
- ಪುಷ್ಪರಾಜ್ (47 ವರ್ಷ) – ಎ-2 ಆರೋಪಿ (ಶಿವಳ್ಳಿ ಗ್ರಾಮ, ಉಡುಪಿ)
- ಹರೀಶ್ ಬೈಕಂಪಾಡಿ (61 ವರ್ಷ) – ಎ-3 ಆರೋಪಿ (ಮೀನಕಳಿಯ ನಿವಾಸಿ)
- ಭಾಸ್ಕರ್ ಬೈಕಂಪಾಡಿ (63 ವರ್ಷ) – ಎ-4 ಆರೋಪಿ (ಮೀನಕಳಿಯ ನಿವಾಸಿ)
(ಟಿಪ್ಪಣಿ: ಆರೋಪಿಗಳಾದ ಸತೀಶ್, ಹರೀಶ್ ಮತ್ತು ಭಾಸ್ಕರ್ ಬೈಕಂಪಾಡಿ ಅವರು ಸ್ವಂತ ಸಹೋದರರಾಗಿದ್ದಾರೆ.)
ನ್ಯಾಯಾಲಯ ವಿಧಿಸಿದ ಶಿಕ್ಷೆ ಮತ್ತು ದಂಡದ ವಿವರ:
ಐಪಿಸಿ ಕಲಂ 302, 120, 109 r/w 34 ಅಡಿ: ನಾಲ್ಕೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದ್ದಲ್ಲಿ 1 ವರ್ಷ ಹೆಚ್ಚುವರಿ ಸಾದಾ ಶಿಕ್ಷೆ).
ಐಪಿಸಿ ಕಲಂ 201 (ಸಾಕ್ಷ್ಯ ನಾಶ) r/w 34 ಅಡಿ: ಎಲ್ಲಾ ಆರೋಪಿಗಳಿಗೆ 2 ವರ್ಷ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. (ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ).
ಮೃತನ ಮಗಳಿಗೆ ಪರಿಹಾರ: ಆರೋಪಿಗಳಿಂದ ವಸೂಲಿ ಮಾಡಲಾಗುವ ಒಟ್ಟು ₹66,000 ದಂಡದ ಮೊತ್ತದಲ್ಲಿ, ₹50,000 ಹಣವನ್ನು ಮೃತ ಗಂಗಾಧರ ಪಾಂಗಾಳ ಅವರ ಮಗಳಿಗೆ ಪರಿಹಾರವಾಗಿ ನೀಡಲು ಹಾಗೂ ಉಳಿದ ₹16,000 ಹಣವನ್ನು ಸರ್ಕಾರಕ್ಕೆ ಪಾವತಿಸಲು ನ್ಯಾಯಾಲಯ ಆದೇಶಿಸಿದೆ.
ವಾಹನಗಳು ಜಪ್ತಿ – ಆರೋಪಿಗಳು ನ್ಯಾಯಾಂಗ ಬಂಧನಕ್ಕೆ
ಕೃತ್ಯ ಎಸಗಲು ಮತ್ತು ಸಂಚು ರೂಪಿಸಲು ಬಳಸಲಾಗಿದ್ದ ಆರೋಪಿಗಳಿಗೆ ಸೇರಿದ ಬೊಲೆರೋ, ರೀಡ್ಝ್ ಹಾಗೂ ಮಾರುತಿ ಕಾರುಗಳನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ನಿರ್ದೇಶಿಸಿದೆ. ನ್ಯಾಯಾಲಯದ ಆದೇಶದಂತೆ ನಾಲ್ಕೂ ಜನ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತನಿಖಾ ತಂಡ ಮತ್ತು ಸರ್ಕಾರಿ ಅಭಿಯೋಜಕರು:
ಪಣಂಬೂರು ಪೊಲೀಸ್ ಠಾಣೆಯ അന്നಿನ ಇನ್ಸ್ಪೆಕ್ಟರ್ಗಳಾದ ಎನ್.ಆರ್. ಮುಕ್ರಿ, ಭಾಸ್ಕರ್ ರೈ ಹಾಗೂ ರವೀಶ್ ನಾಯಕ್ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿದ್ದರು. ತನಿಖಾಧಿಕಾರಿ ಲೋಕೇಶ್ ಎ.ಸಿ. ಅವರು ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್ಶೀಟ್) ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ್ ಅವರು ಪ್ರಬಲವಾಗಿ ವಾದ ಮಂಡಿಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ
Bantawala
ವೃದ್ದೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಚಿನ್ನಾಭರಣ ದೋಚಲು ಉಸಿರುಗಟ್ಟಿಸಿ ಹತ್ಯೆ; ಐದು ವರ್ಷಗಳ ಬಳಿಕ ನ್ಯಾಯಾಲಯದ ತೀರ್ಪು
ಬಂಟ್ವಾಳ, ಜು. 29: ಬಂಟ್ವಾಳ ತಾಲೂಕಿನ ಅಮ್ಮುಂಜೆ ನಿವಾಸಿ ವೃದ್ದೆ ಬೆನಡಿಕ್ಟ್ ಕಾರ್ಲೋ (73) ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ಪ್ರಕಾರ, ವೃದ್ದೆಯ ಆರೈಕೆ ಮಾಡುತ್ತಿದ್ದ ಅಮ್ಟಾಡಿ ನಿವಾಸಿ ಏಲ್ಮಾ ಪ್ರೆಶ್ಚಿತ್ ಬರೆಟ್ರೋ (23), ವೃದ್ದೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ತನ್ನ ಸ್ನೇಹಿತ ನರಿಕೊಂಬು ನಿವಾಸಿ ಸತೀಶ್ ನಾಯಕ್ (28) ಸಹಾಯದಿಂದ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಳು. ಆ ಯತ್ನ ವಿಫಲವಾದ ಬಳಿಕ ಮತ್ತೋರ್ವ ಆರೋಪಿ ಚರಣ್ ಕುಮಾರ್ (31) ಸಹಾಯದಿಂದ 2021ರ ಜನವರಿ 25ರಂದು ರಾತ್ರಿ ಬೆನಡಿಕ್ಟ್ ಕಾರ್ಲೋರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು.
ಬಳಿಕ ಆರೋಪಿಗಳು ಒಟ್ಟು 61.070 ಗ್ರಾಂ ತೂಕದ (ಅಂದಿನ ಮೌಲ್ಯ ಸುಮಾರು ₹3 ಲಕ್ಷ) ಚಿನ್ನಾಭರಣಗಳನ್ನು ದೋಚಿ, ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2021ರಡಿ ಭಾರತೀಯ ದಂಡ ಸಂಹಿತೆಯ 302, 392, 120(ಬಿ), 201 ಹಾಗೂ 34 ಕಲಂಗಳಡಿ ಪ್ರಕರಣ ದಾಖಲಾಗಿತ್ತು.
ಆಗಿನ ಬಂಟ್ವಾಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾಗಿದ್ದ ಪ್ರಸನ್ನ ಎಂ.ಎಸ್. ಅವರು ಆರೋಪಿಗಳನ್ನು ಬಂಧಿಸಿದ್ದರು. ನಂತರ ಆಗಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
court
ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣ: ಮನೀಷ್ಗೆ ಹೈಕೋರ್ಟ್ನಿಂದ ಬೇಲ್
ಪುತ್ತೂರು, ಜು. 26: ಬಹುಚರ್ಚಿತ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಮನೀಷ್ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಜಸ್ಟಿಸ್ ವಿಶ್ವಜಿತ್ ಶೆಟ್ಟಿ ಅವರು ಎರಡೂ ಪಕ್ಷಗಳ ವಾದ-ಪ್ರತಿವಾದ ಆಲಿಸಿದ ಬಳಿಕ, ನಿಗದಿತ ಷರತ್ತುಗಳೊಂದಿಗೆ ಜಾಮೀನು ನೀಡುವಂತೆ ಆದೇಶಿಸಿದ್ದಾರೆ.
ನ್ಯಾಯಾಲಯದ ಆದೇಶದಲ್ಲಿ ಜಾಮೀನು ಮಂಜೂರು ಮಾಡಿರುವುದು ಆರೋಪಿಯನ್ನು ನಿರ್ದೋಷಿ ಎಂದು ಘೋಷಿಸಿದಂತಲ್ಲ. ಪ್ರಕರಣದ ಅಂತಿಮ ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿಗೆ ಕಾನೂನುಬದ್ಧ ಹಕ್ಕುಗಳ ಅನ್ವಯ ನ್ಯಾಯಯುತ ಅವಕಾಶ ದೊರಕಬೇಕು ಎಂಬ ಸಂವಿಧಾನಾತ್ಮಕ ತತ್ವದ ಆಧಾರದ ಮೇಲೆ ಜಾಮೀನು ನೀಡಲಾಗಿದೆ.
ಹೈಕೋರ್ಟ್ನ ಆದೇಶವನ್ನು ಮನೀಷ್ ಕುಟುಂಬಸ್ಥರು ಹಾಗೂ ಆಪ್ತರು ಸ್ವಾಗತಿಸಿದ್ದು, ಪ್ರಕರಣದ ಸಂಪೂರ್ಣ ಸತ್ಯ ನ್ಯಾಯಾಲಯದ ಮುಂದೆ ಹೊರಬಂದು ಅಂತಿಮವಾಗಿ ನ್ಯಾಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ನ್ಯಾಯಾಲಯ ವಿಧಿಸಿರುವ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ತಿಳಿಸಿದ್ದಾರೆ.
ರಾಜ್ಯಾದ್ಯಂತ ಗಮನ ಸೆಳೆದಿರುವ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಈ ಜಾಮೀನು ಆದೇಶವು ಮುಂದಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಪ್ರಕರಣದ ಅಂತಿಮ ತೀರ್ಪು ನ್ಯಾಯಾಲಯದ ವಿಚಾರಣೆ ಬಳಿಕವೇ ಹೊರಬರಲಿದ್ದು, ಅದರತ್ತ ಎಲ್ಲರ ಗಮನ ನೆಟ್ಟಿದೆ.
2023 ನವೆಂಬರ್ 6ರಂದು ಅಕ್ಷಯ್ ಕಲ್ಲೇಗ ಅವರ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಕೊಲೆಯಾದ ಅಕ್ಷಯ್ ಕಲ್ಲೇಗ ಅವರ ಗೆಳೆಯರೇ ಈ ಕೃತ್ಯ ಎಸಗಿದ್ದಾರೆಂದು ಈ ಪ್ರಕರಣದಲ್ಲಿ ಮನೀಷ್, ಚೇತನ್, ಮಂಜುನಾಥ್ ಮತ್ತು ಕೇಶವ ಎಂಬವರನ್ನು ಪೊಲೀಸರು ಬಂಧಿಸಿದ್ದರು.
Belthangady
ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!
ವಿಶೇಷ ವಿಶ್ಲೇಷಣಾ ವರದಿ
ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆಗಳು, ಕೇವಲ ಒಂದು ಹಳೆಯ ಕ್ರಿಮಿನಲ್ ಕಡತವನ್ನುಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಯಾಗಬಾರದು. ಇದು ಭಾರತೀಯ ತನಿಖಾ ವ್ಯವಸ್ಥೆಗೆ ತನ್ನ ವಿಶ್ವಾಸಾರ್ಹತೆಯನ್ನು ನಾಗರಿಕ ಸಮಾಜದ ಎದುರು ಸಾಬೀತು ಪಡಿಸುವ ಮತ್ತು ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಅತ್ಯಂತ ಗಂಭೀರ ಸುಸಂದರ್ಭವಾಗಿದೆ.
ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ, ನ್ಯಾಯಾಲಯವು ಸಿಬಿಐ ತನಿಖೆಯ ವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಹೊಸ ತನಿಖೆಯ ಭರವಸೆ ಮೂಡಿದೆ. ಆದರೆ, ಈ ಹಂತದಲ್ಲಿ ಉದ್ಭವಿಸುವ ಅತ್ಯಂತ ಗಂಭೀರ ಪ್ರಶ್ನೆ ಎಂದರೆ—“ಹಿಂದಿನ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡ ಮೇಲೆ, ಆ ಲೋಪಗಳಿಗೆ ಕಾರಣರಾದ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಬೇಡವೇ?”
ತನಿಖಾಧಿಕಾರಿಯ ಕರ್ತವ್ಯ ಲೋಪವನ್ನು ತನಿಖೆ ಮಾಡೋರು ಯಾರು?
ಒಬ್ಬ ಸಾಮಾನ್ಯ ನಾಗರಿಕ ಕಾನೂನು ಉಲ್ಲಂಘಿಸಿದರೆ ಅಥವಾ ತಪ್ಪು ಮಾಡಿದರೆ ಆತನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಒಂದು ಜವಾಬ್ದಾರಿಯುತ ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯೇ ತನಿಖೆಯಲ್ಲಿ ಗಂಭೀರ ಲೋಪವೆಸಗಿದಾಗ ಈ ತಪ್ಪಿತಸ್ಥಅಧಿಕಾರಿಯ ಕರ್ತವ್ಯಲೋಪವನ್ನು ಪ್ರಶ್ನಿಸುವವರು ಯಾರು ಎಂಬುವುದೇ ಮಿಲಿಯನ್ ಡಾಲರ್ ಪ್ರಶ್ನೆ!
ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ನಡೆಯಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ನ್ಯಾಯಸಮ್ಮತವೋ, ಅಷ್ಟೇ ಪ್ರಾಮುಖ್ಯತೆಯನ್ನು ಈ ಹಿಂದೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ಕರ್ತವ್ಯ ಪರಿಶೀಲನೆಗೂ ನೀಡಬೇಕಾಗಿದೆ. ಮರು ತನಿಖೆ ಎಂದರೆ ಕೇವಲ “ಹೊಸ ಆರೋಪಿಯನ್ನು ಹುಡುಕುವುದು” ಮಾತ್ರವಲ್ಲ; “ಹಿಂದಿನ ತನಿಖೆಗಳು ಏಕೆ ಮತ್ತು ಯಾರಿಂದ ಮತ್ತು ಹೇಗೆ ವಿಫಲವಾದವು?” ಎಂಬುದರ ಸತ್ಯಾಸತ್ಯತೆಯನ್ನು ಹೊರಗೆಳೆಯುವುದೂ ಆಗಿದೆ.
ಮೂರೂ ಹಂತಗಳ ವೈಫಲ್ಯ: ಪ್ರಶ್ನೆಗೆ ಸಿಲುಕಿದ ತನಿಖಾ ಸಂಸ್ಥೆಗಳು
ಈ ಪ್ರಕರಣದಲ್ಲಿ ತನಿಖೆಯು ಮೂರು ಪ್ರಮುಖ ಹಂತಗಳನ್ನು ದಾಟಿ ಬಂದಿದೆ:
- ಸ್ಥಳೀಯ ಪೊಲೀಸ್ ತನಿಖೆ (ಜಿಲ್ಲಾ ಮಟ್ಟ)
- ರಾಜ್ಯ ಸಿಐಡಿ ತನಿಖೆ (ರಾಜ್ಯ ಸರ್ಕಾರದ ಅಧೀನ)
- ಸಿಬಿಐ ತನಿಖೆ (ಕೇಂದ್ರ ಸರ್ಕಾರದ ಅಧೀನ)
ಈ ಮೂರೂ ಹಂತಗಳ ತನಿಖೆಗಳು ಮುಗಿದ ಮೇಲೆಯೂ ಸಮಾಜದಲ್ಲಿ ಮತ್ತು ಸಂತ್ರಸ್ತ ಕುಟುಂಬದಲ್ಲಿ ಸತ್ಯದ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ ಎಂದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಷ್ಟೇ ಅಲ್ಲ— ಈವರೆಗೆ ತನಿಖೆ ನಡೆಸಿದ ತನಿಖಾಸಂಸ್ಥೆಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಗಳ ಮೇಲೆ ಅಪನಂಬಿಕೆ ಬಂದಿದೆ. ಇದನ್ನು ಹೋಗಲಾಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ.
ಅಧಿಕಾರದ ಸರಪಳಿಗಳು ಬೇರೆ ಬೇರೆಯಾಗಿರಬಹುದು; ಆದರೆ ಭಾರತೀಯ ಸಂವಿಧಾನದ ಮುಂದೆ ಪ್ರತಿಯೊಂದು ತನಿಖಾ ಸಂಸ್ಥೆಯ ಕರ್ತವ್ಯವೂ ಒಂದೇ:
- ಸತ್ಯವನ್ನು ಪತ್ತೆಹಚ್ಚುವುದು
- ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು
- ಯಾವುದೇ ಕಾರಣಕ್ಕೂ ನಿರಪರಾಧಿಯನ್ನು ಬಲಿಪಶು ಮಾಡದಿರುವುದು
- ನಿಜವಾದ ಅಪರಾಧಿಯನ್ನು ಯಾವುದೇ ಪ್ರಭಾವಕ್ಕೂ ಒಳಗಾಗದೆ ರಕ್ಷಿಸದಿರುವುದು
ಈ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗುವುದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಾಶ/ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ.
ಹೊಸ ತನಿಖಾ ಸಂಸ್ಥೆಯ ಮುಂದೆ ಇರಬೇಕಾದ ನೈಜ ಆದ್ಯತೆಗಳು
ಒಂದು ವೇಳೆ ಈ ಪ್ರಕರಣದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡ ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಷ್ಟೇ ಆಗಿರಬಾರದು. ಹಾಗೂ ಪ್ರಕರಣ ದಾರಿತಪ್ಪಲು ಕಾರಣರು ಯಾರು.? ಎಂಬುವುದರ ಪತ್ತೆಗಾಗಿ:
- ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸಿದರು?
- ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಯಾವುದನ್ನು ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಸಂಗ್ರಹಿಸಲಿಲ್ಲ?
- ಯಾವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು ಹಾಗೂ ಯಾವುದನ್ನು ಕಡೆಗಣಿಸಲಾಯಿತು?
- ತನಿಖೆಯು ತಪ್ಪು ದಿಕ್ಕಿಗೆ ತಿರುಗಲು ಯಾವ ಅಧಿಕಾರಿಯ ನಿರ್ಧಾರ ಕಾರಣವಾಯಿತು?
ನೂತನ ತನಿಖಾ ಸಂಸ್ಥೆ ಎಂದರೆ ಅದು ಕೇವಲ ಹೆಸರು ಬದಲಾವಣೆ ಎಂದಾಗಬಾರದು. ಅದು ಹಿಂದಿನ ತನಿಖಾ ಲೋಪಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕು.
ಸಂವಿಧಾನದ ಆಶಯ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷ
ಭಾರತೀಯ ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಎಲ್ಲರೂ ಸಮಾನ) ಮತ್ತು ಕಲಂ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಪ್ರಕ್ರಿಯೆ ಮತ್ತು ತನಿಖೆಯನ್ನು ಖಾತರಿಪಡಿಸುತ್ತವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ಸಮಗ್ರ ನ್ಯಾಯವ್ಯವಸ್ಥೆಯ ಬುನಾದಿಯೇ ದುರ್ಬಲಗೊಳ್ಳುತ್ತದೆ.
ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ತನಿಖಾ ಸಂಸ್ಥೆಗಳು ಇರುವುದು ಯಾರಿಗೆ? ಸರ್ಕಾರಗಳಿಗಾಗಿಯೇ? ಅಧಿಕಾರಿಗಳಿಗಾಗಿಯೇ? ರಾಜಕೀಯ ಪಕ್ಷಗಳಿಗಾಗಿಯೇ? ಅಥವಾ ದೇಶದ ನೊಂದ ಕುಟುಂಬದ ಜನಸಾಮಾನ್ಯರಿಗಾಗಿಯೇ?
ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪಕ್ಷದ ಬೆಂಬಲಿತರು ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿತರು ರಾಜ್ಯದ ಅಧೀನ ದಲ್ಲಿರುವ ತನಿಖಾ ಸಂಸ್ಥೆಗಳ ವೈಫಲ್ಯಗಳನ್ನು ಅಥವಾ ಲೋಪಗಳನ್ನು ಸಮರ್ಥಿಸಿಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ಕಾರ ಎಂದರೆ ಒಂದು ರಾಜಕೀಯ ಪಕ್ಷದ ಗೊಂಬೆಯಲ್ಲ; ಅದು ಸಂವಿಧಾನದಡಿಯಲ್ಲಿ ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಥವಾ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗುತ್ತಿರ ಬಹುದು, ಆದರೆ ನ್ಯಾಯದ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.
ಬೇಕಾಗಿದೆ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ)
ತನಿಖಾಧಿಕಾರಿ ಮಾಡುವ ಒಂದು “ಉದ್ದೇಶಪೂರ್ವಕ ಕರ್ತವ್ಯ ಲೋಪ”ದಿಂದಾಗಿ ಒಬ್ಬ ನಿರಪರಾಧಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, ನಿಜವಾದ ಅಪರಾಧಿ ಸಮಾಜದಲ್ಲಿ ಮುಕ್ತವಾಗಿ ಓಡಾಡಬಹುದು, ಮತ್ತು ಒಂದು ಬಡ ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ರಸ್ತೆಯಲ್ಲಿ ಅಲೆಯಬೇಕಾಗಬಹುದು. ಆದ್ದರಿಂದ, ಸೌಜನ್ಯ ಪ್ರಕರಣದ ಮರು ತನಿಖೆಯ ಜೊತೆಗೆ ಒಂದು ಸ್ವತಂತ್ರ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ) ಅತ್ಯಗತ್ಯವಾಗಿದೆ.
- ಒಂದು ಮಗ್ಗಲಿನಲ್ಲಿ: ಅಪರಾಧದ ನೈಜ ತನಿಖೆ (ಅಪರಾಧಿಯನ್ನು ಪತ್ತೆಹಚ್ಚುವುದು).
- ಮತ್ತೊಂದು ಮಗ್ಗಲಿನಲ್ಲಿ: ಹಿಂದಿನ ತನಿಖೆಗಳ ವೈಫಲ್ಯ ಮತ್ತು ಲೋಪಗಳ ಕುರಿತು ಸ್ವತಂತ್ರ ವಿಚಾರಣೆ.
ಇದು ವೈಯುಕ್ತಿಕ ದ್ವೇಷ ಸಾಧನೆ ಅಲ್ಲ, ಬದಲಾಗಿ “ಕಾನೂನಿಗಿಂತ ಯಾರೂ ಮೇಲಲ್ಲ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಎಸಗಿದರೆ ಶಿಕ್ಷೆಯನ್ನು ಅನುಭವಿಸಲೇ ಬೇಕು “ ಎಂಬ ಸಂವಿಧಾನದ ಆಶಯವನ್ನು ಸ್ಥಾಪಿಸುವುದಕ್ಕಾಗಿ. ಆಗಿದೆ.
ನ್ಯಾಯದ ಕೊನೆಯ ಭರವಸೆ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ
ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗುವುದು ಎಷ್ಟು ಮುಖ್ಯವೋ, ಈ ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯ ಹೊರಬರುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ, ನಾಳೆ ಮತ್ತೊಂದು ಬಡ ಕುಟುಂಬದ ಮಗಳ ಪ್ರಕರಣ—ಮತ್ತೆ ಅದೇ ಕಡತಗಳನ್ನು ತಿರುಚಿ ನೋಡಿ ನಕಲು ಮಾಡುವುದು, ಮುಖವಾಡ ಬದಲಿಸಿದ ಅದೇ ಅಧಿಕಾರಿಗಳು, ಅದೇ ದಾಖಲೆಗಳು ಮತ್ತು ಕೊನೆಗೆ “ಸಾಕ್ಷ್ಯಾಧಾರಗಳ ಕೊರತೆ, ಕೇಸ್ ಕ್ಲೋಸ್” ಎಂಬ ಅದೇ ಹಳೆಯ ವ್ಯವಸ್ಥೆಯೇ ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂಬುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ನೋವಿನ ಮಾತುಗಳು.
ಸುಪ್ರೀಂ ಕೋರ್ಟ್ನ ಈ ಇತ್ತೀಚಿನ ಮಧ್ಯಪ್ರವೇಶವು ದೇಶದ ನ್ಯಾಯವ್ಯವಸ್ಥೆಗೆ ಸಿಕ್ಕಿರುವ ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಒಂದು ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಮಾನದಂಡವನ್ನು ಸ್ಥಾಪಿಸಲು ಬಳಸಿಕೊಳ್ಳಬೇಕಿದೆ.
ಸೌಜನ್ಯಗೆ ನ್ಯಾಯ ಸಿಗಬೇಕು, ಸತ್ಯಕ್ಕೆ ಜಯವಾಗಬೇಕು ಮತ್ತು ತನಿಖಾ ವೈಫಲ್ಯವೆಸಗಿದ ವ್ಯವಸ್ಥೆಯೂ ನ್ಯಾಯದ ಮುಂದೆ ತಲೆಬಾಗಲೇಬೇಕು.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
