arrest
ಅಕ್ರಮ ಜಾನುವಾರು ಸಾಗಾಟ: ಮೂಡಬಿದ್ರೆ ಪೊಲೀಸರಿಂದ ಇಬ್ಬರು ಹಳೇ ಆರೋಪಿಗಳ ಬಂಧನ!
ಮಂಗಳೂರು: ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐಷಾರಾಮಿ ಕಾರಿನಲ್ಲಿ ಅತ್ಯಂತ ಹಿಂಸಾತ್ಮಕವಾಗಿ ಕಾನೂನುಬಾಹಿರವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸರಣಿ ಅಪರಾಧ ಹಿನ್ನೆಲೆಯುಳ್ಳ ಆರೋಪಿಗಳನ್ನು ಪೊಲೀಸರು ಕಾರು ಹಾಗೂ ಜಾನುವಾರು ಸಹಿತ ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ದಿನಾಂಕ 14/05/2026 ರಂದು ಬೆಳಗ್ಗೆ ಮೂಡಬಿದ್ರೆ ಠಾಣಾ ಪಿಎಸ್ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು.
ಬೆಳಗ್ಗೆ ಸುಮಾರು 07.30ರ ವೇಳೆಗೆ ಬೆಳುವಾಯಿ ಕಡೆಯಿಂದ ಬಂದ ಬೂದು ಬಣ್ಣದ ಮಾರುತಿ ಬ್ರೀಜಾ ಕಾರಿಗೆ (KA 19 MK 4265) ನಿಲ್ಲಿಸಲು ಸೂಚಿಸಿದಾಗ, ಚಾಲಕ ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ತಕ್ಷಣ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದಾರೆ. ಆರೋಪಿಗಳು ಗುಂಡುಕಲ್ಲು 5 ಸೈಂಟ್ಸ್ ರಸ್ತೆಗೆ ತಿರುಗಿ, ಅಲ್ಲಿನ ನಿವಾಸಿ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಗೆ ಕಾರು ನಿಲ್ಲಿಸಿ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿ ಬೆನ್ನಟ್ಟಿ ಇಬ್ಬರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರಿನ ಸೀಟ್ ಕಿತ್ತೆಸೆದು ಕರುವಿನ ಹಿಂಸಾತ್ಮಕ ಸಾಗಾಟ!
ಬಂಧಿತ ಆರೋಪಿಗಳನ್ನು ಮೂಡಬಿದ್ರೆ ಠಾಣಾ ಎಂ.ಓ.ಬಿ (ರೌಡಿಶೀಟರ್) ಆಗಿರುವ ಹಂಡೇಲಿನ ಮಹಮ್ಮದ್ ಆರೀಪ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ @ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಪೊಲೀಸರು ಮಾರುತಿ ಬ್ರೀಜಾ ಕಾರನ್ನು ಪರಿಶೀಲಿಸಿದಾಗ ಸಾಗಾಟದ ಕ್ರೌರ್ಯ ಬೆಳಕಿಗೆ ಬಂದಿದೆ. ಕಾರಿನ ಹಿಂಬದಿಯ ಸೀಟನ್ನು ಸಂಪೂರ್ಣವಾಗಿ ತೆಗೆದು, ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ಹಾಕಿ, ಒಂದು ಗಂಡು ಕರುವಿನ ಕಾಲು ಮತ್ತು ತಲೆಯನ್ನು ಹಗ್ಗದಿಂದ ಅತ್ಯಂತ ಹಿಂಸಾತ್ಮಕವಾಗಿ ಕಟ್ಟಿ ತುಂಬಿಸಲಾಗಿತ್ತು.
ಕಳ್ಳತನ ಮಾಡಿ ಮಾಂಸ ಮಾರಾಟದ ಸಂಚು:
ವಿಚಾರಣೆ ವೇಳೆ ಆರೋಪಿಗಳು ತಲ್ಲಣಗೊಳಿಸುವ ಮಾಹಿತಿ ಬಾಯ್ಬಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಬೇರೆ ಬೇರೆ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿಕೊಂಡು ಬಂದು, ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ನಿವಾಸಿ ಸಾಹುಲ್ ಹಮೀದ್ ರವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಅಥವಾ ದನಗಳನ್ನು ಕಡಿಯಲೆಂದೇ ಇತರರಿಗೆ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಸದ್ಯ ಜಾನುವಾರು, ಮಾರುತಿ ಬ್ರೀಜಾ ಕಾರು ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಆರೋಪಿಗಳ ಮೇಲಿರುವ ಹಳೇ ಕ್ರಿಮಿನಲ್ ಪ್ರಕರಣಗಳ ಜಾತಕ:
ಬಂಧಿತ ಇಬ್ಬರೂ ಆರೋಪಿಗಳು ಹಲವು ಪೊಲೀಸ್ ಠಾಣೆಗಳಲ್ಲಿ ಜಾನುವಾರು ಕಳ್ಳತನ, ಗಾಂಜಾ ಹಾಗೂ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಳೇ ಮುದ್ರೆ ಹೊಂದಿದ್ದಾರೆ.
1. ಮೊಹಮ್ಮದ್ ಆರಿಫ್ ಮೇಲಿನ ಪ್ರಕರಣಗಳು:
- ಬಜಪೆ ಪೊಲೀಸ್ ಠಾಣೆ (ಮೊ.ಸಂ. 150/2024): ಬಿಎನ್ಎಸ್ ಕಾಯ್ದೆ ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ (ಮುಂದಿನ ವಿಚಾರಣೆ ದಿನಾಂಕ: 22/06/2026).
- ಬಣಕಲ್ ಪೊಲೀಸ್ ಠಾಣೆ (ಮೊ.ಸಂ. 31/2024): ದನ ಕಳ್ಳತನ, ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ (ಮುಂದಿನ ವಿಚಾರಣೆ ದಿನಾಂಕ: 30/05/2026).
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 56/2025): ಬಿಎನ್ಎಸ್ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ತನಿಖೆಯ ಹಂತದಲ್ಲಿದೆ (UI).
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 130/2025): ಬಿಎನ್ಎಸ್ ಸೆಕ್ಷನ್ 303(2) ಅಡಿಯಲ್ಲಿ ತನಿಖೆಯಲ್ಲಿದೆ (UI).
2. ಇಮ್ರಾನ್ @ ಇಬ್ರಾಹಿಂ ಮೇಲಿನ ಪ್ರಕರಣಗಳು:
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 133/2024): ಎನ್ಡಿಪಿಎಸ್ (ಗಾಂಜಾ/ಮಾದಕ ದ್ರವ್ಯ) ಕಾಯ್ದೆಯಡಿ ಪ್ರಕರಣ.
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 6/2025): ಕರ್ನಾಟಕ ಜೂಜಾಟ ಪ್ರತಿಬಂಧಕ (KP Act) ಕಾಯ್ದೆಯಡಿ ಪ್ರಕರಣ.
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 40/2025): ಕರ್ನಾಟಕ ಜೂಜಾಟ ಪ್ರತಿಬಂಧಕ (KP Act) ಕಾಯ್ದೆಯಡಿ ಪ್ರಕರಣ.
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 56/2025): ಬಿಎನ್ಎಸ್ ಹಾಗೂ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ.
- ಮೂಡಬಿದ್ರೆ ಪೊಲೀಸ್ ಠಾಣೆ (ಮೊ.ಸಂ. 130/2025): ಬಿಎನ್ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ.
- ಕಾರ್ಕಳ ನಗರ ಪೊಲೀಸ್ ಠಾಣೆ (ಮೊ.ಸಂ. 169/2025): ಬಿಎನ್ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮಾರ್ಗದರ್ಶನದಲ್ಲಿ ಮೂಡಬಿದ್ರೆ ಪೊಲೀಸರು ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ



arrest
7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖ್ಯಾತ ವಾರಂಟ್ ಆರೋಪಿ ಉಮ್ಮರ್ ನವಾಫ್ ಬಂಧನ: ಮಂಗಳೂರು ಪೊಲೀಸರ ಕಾರ್ಯಾಚರಣೆ
ಮಂಗಳೂರು: ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, 30ಕ್ಕೂ ಹೆಚ್ಚು ವಾರಂಟ್ ಹಾಗೂ 13ಕ್ಕೂ ಅಧಿಕ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಗಳೂರು ದಕ್ಷಿಣ ಉಪವಿಭಾಗದ ವಿಶೇಷ ಕರ್ತವ್ಯ ಪಡೆ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಉಳ್ಳಾಲ ತಾಲೂಕಿನ ಮಾರ್ಗತಲೆ ಮೂಲದ, ಪ್ರಸ್ತುತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಡಪ್ಪು ನಿವಾಸಿ ಉಮ್ಮರ್ ನವಾಫ್ (33) ಬಂಧಿತ ಆರೋಪಿ.
30ಕ್ಕೂ ಹೆಚ್ಚು ವಾರಂಟ್, ಪ್ರೋಕ್ಲಮೇಷನ್ ಜಾರಿ
ಬಂಧಿತ ಉಮ್ಮರ್ ನವಾಫ್ ವಿರುದ್ಧ ಕೊಲೆ ಯತ್ನ, ಅಪಹರಣ, ದರೋಡೆ, ಹಫ್ತಾ ವಸೂಲಿ, ಸಾರ್ವಜನಿಕ ಆಸ್ತಿಗೆ ಹಾನಿ ಹಾಗೂ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಉಳ್ಳಾಲ, ಪಣಂಬೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ 13ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಘನ ನ್ಯಾಯಾಲಯವು 30ಕ್ಕೂ ಹೆಚ್ಚು ವಾರಂಟ್ಗಳನ್ನು ಹೊರಡಿಸಿತ್ತು. ಅಲ್ಲದೆ, ಉಳ್ಳಾಲ ಠಾಣೆಯ ಮೂರು ಪ್ರಕರಣಗಳಲ್ಲಿ ಈತನ ವಿರುದ್ಧ ನ್ಯಾಯಾಲಯದ ಆದೇಶದಂತೆ ‘ಪ್ರೋಕ್ಲಮೇಷನ್’ ಜಾರಿಗೊಳಿಸಲಾಗಿತ್ತು ಹಾಗೂ ಒಂದು ಪ್ರಕರಣದಲ್ಲಿ ಎಲ್.ಪಿ.ಸಿ (LPC) ಮಾಡಲಾಗಿತ್ತು.
ಆರೋಪಿ ಉಮ್ಮರ್ ನವಾಫ್ ಮೇಲಿರುವ ಪ್ರಕರಣಗಳ ವಿವರಗಳು:
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 222/17):
- ಕಲಂಗಳು: 143, 147, 148 (ಕಾನೂನುಬಾಹಿರ ಗುಂಪುಗಾರಿಕೆ, ಗಲಭೆ), 341 (ಅಕ್ರಮ ತಡೆ), 504, 506 (ಶಾಂತಿ ಭಂಗ, ಜೀವ ಬೆದರಿಕೆ), 324 (ಹಾಕಾಹಾಕಿ/ಹೊಡೆದಾಟ) ಮತ್ತು 307 (ಕೊಲೆ ಯತ್ನ).
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 23/17):
- ಕಲಂಗಳು: 427 IPC (ಆಸ್ತಿಗೆ ಹಾನಿ) ಮತ್ತು KPDLP ಕಾಯ್ದೆಯ 2(a), 2(b) (ಸಾರ್ವಜನಿಕ ಆಸ್ತಿ ನಷ್ಟ ತಡೆ ಕಾಯ್ದೆ).
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 247/14):
- ಕಲಂಗಳು: 448 (ಅಕ್ರಮ ಪ್ರವೇಶ) ಮತ್ತು 395 (ದರೋಡೆ).
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 289/17):
- ಕಲಂಗಳು: 504, 506, 364(a) (ಅಪಹರಣ ಮತ್ತು ಕಪ್ಪಕ್ಕೆ ಬೇಡಿಕೆ), 387 (ಹಫ್ತಾ ವಸೂಲಿಗೆ ಬೆದರಿಕೆ), 395 (ದರೋಡೆ), 149 IPC.
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 276/15) – (ನ್ಯಾಯಾಲಯದಿಂದ LPC ಮಾಡಲಾದ ಪ್ರಕರಣ):
- ಕಲಂಗಳು: 143, 144, 148, 448, 451, 452 (ಅಕ್ರಮ ಮನೆ ಪ್ರವೇಶ), 326, 307 (ಕೊಲೆ ಯತ್ನ), 397 (ಮಾರಕ ಆಯುಧದೊಂದಿಗೆ ದರೋಡೆ/ಕಳವು), 506, 149 IPC.
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 206/2012) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
- ಕಲಂಗಳು: 143, 147, 148, 323, 427, 504, 506, 149 IPC.
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 27/2017) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
- ಕಲಂಗಳು: 387 IPC (ಭಯ ಹುಟ್ಟಿಸಿ ಹಣ/ಆಸ್ತಿ ವಸೂಲಿ ಮಾಡುವುದು).
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 103/2021):
- ಕಲಂಗಳು: 364 IPC (ಕೊಲೆ ಮಾಡುವ ಉದ್ದೇಶದಿಂದ ಅಪಹರಣ).
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 71/23):
- ಕಲಂಗಳು: 504, 506, 307 (ಕೊಲೆ ಯತ್ನ), 324, 427 IPC.
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 183/17) – (ಪ್ರೋಕ್ಲಮೇಷನ್ ಜಾರಿಯಾದ ಪ್ರಕರಣ):
- ಕಲಂಗಳು: 143, 147, 148, 448, 504, 324, 323, 506, 427 R/w 149 IPC.
- ಉಳ್ಳಾಲ ಪೊಲೀಸ್ ಠಾಣೆ (ಮೊ.ನಂ 159/23):
- ಕಲಂಗಳು: 341, 394 (ಕಳವು ಮಾಡುವಾಗ ಗಾಯಗೊಳಿಸುವುದು), 307 (ಕೊಲೆ ಯತ್ನ) R/w 34 IPC.
- ಪಣಂಬೂರು ಪೊಲೀಸ್ ಠಾಣೆ (PNB ಮೊ.ನಂ 158/2012):
- ಕಲಂಗಳು: 379 IPC (ಕಳವು).
- ಬರ್ಕೆ ಪೊಲೀಸ್ ಠಾಣೆ (ಮೊ.ನಂ 04/15):
- ಕಲಂಗಳು: 353 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ), 427 R/w 34 IPC.
ಪೊಲೀಸರ ಸಕಾಲಿಕ ಕಾರ್ಯಾಚರಣೆ
ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ಮಾರ್ಗದರ್ಶನದಲ್ಲಿ, ದಕ್ಷಿಣ ಉಪವಿಭಾಗ ಕಚೇರಿಯ ವಿಶೇಷ ಕರ್ತವ್ಯ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಿನಾಂಕ 02-08-2026 ರಂದು ಸುಳಿವು ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

arrest
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ: ಪೊಲೀಸ್ ಇಲಾಖೆಯ ವಿವಿಧ ಪ್ರಮುಖ ಕಾರ್ಯಾಚರಣೆಗಳು – ಮೂವರು ಆರೋಪಿಗಳ ಬಂಧನ, ಪ್ರಕರಣಗಳಲ್ಲಿ ಮಹತ್ವದ ಬೆಳವಣಿಗೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಮೂರು ಪ್ರಮುಖ ಕಾರ್ಯಾಚರಣೆಗಳು ಹಾಗೂ ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ, 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯ ಬಂಧನ ಹಾಗೂ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದ ಘಟನೆಗಳು ನಡೆದಿವೆ.
ವರದಿಗಳ ವಿವರ ಇಲ್ಲಿದೆ:

1. ಬೆಳ್ತಂಗಡಿಯಲ್ಲಿ 7.60 ಲಕ್ಷ ರೂ. ಮೌಲ್ಯದ ಎಂಡಿಎಂಎ, ಗಾಂಜಾ ಜಪ್ತಿ: ಓರ್ವನ ಬಂಧನ
ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ಜುಲೈ 29ರ ರಾತ್ರಿ ಬೆಳ್ತಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಆನಂದ ಎಂ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಅನುಮಾನಾಸ್ಪದವಾಗಿ ಆಟೋ ರಿಕ್ಷಾ (KA18 A 7203) ಬಳಿ ನಿಂತಿದ್ದ ಬೆಳ್ತಂಗಡಿ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಆತನ ತಪಾಸಣೆ ನಡೆಸಿದಾಗ 27 ಗ್ರಾಂ ಗಾಂಜಾ ಹಾಗೂ ಮೊಬೈಲ್ ಪತ್ತೆಯಾಗಿದೆ. ಸ್ಥಳದಲ್ಲಿದ್ದ ರಿಕ್ಷಾ ಹಾಗೂ ಕಾರನ್ನು ಪರಿಶೀಲಿಸಿದಾಗ ಸುಮಾರು 7,60,000 ರೂಪಾಯಿ ಮೌಲ್ಯದ 76.59 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ MDMA (ಎಂಡಿಎಂಎ) ಪತ್ತೆಯಾಗಿದೆ. ಮಾದಕ ವಸ್ತು ಸರಬರಾಜು ಮಾಡಲು ಬಂದಿದ್ದ ಮತ್ತೋರ್ವ ಆರೋಪಿ ಅಮ್ಜತ್ ಖರಾರ್ ಎಂಬಾತ ತನ್ನ KA21 MA 4990 ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ (ಅಕ್ರ 82/2026) ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2. 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿ ಸಿಸಿಬಿ ವಶಕ್ಕೆ
ಮಂಗಳೂರು: 2015ರಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯತ್ನ (307) ಪ್ರಕರಣದಲ್ಲಿ ಭಾಗಿಯಾಗಿ, ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (34) ಎಂದು ಗುರುತಿಸಲಾಗಿದೆ. ಈತನು 2015ರಲ್ಲಿ ಮಂಗಳೂರಿನ ಆಕಾಶಭವನದಲ್ಲಿ ನಡೆದ ಮದುವೆಯೊಂದರ ಮದುರಂಗಿ ಶಾಸ್ತ್ರದ ವೇಳೆ ನಡೆದ ಗಲಾಟೆಯಲ್ಲಿ ಅಶೋಕ ಕುಮಾರ ಕೊಟ್ಟಾರಿ ಎಂಬುವರ ಮೇಲೆ ಇತರ ಆರೋಪಿಗಳೊಂದಿಗೆ ಸೇರಿ ತಲವಾರಿನಿಂದ ಕಡಿದು ಮಾರಣಾಂತಿಕ ಹಲ್ಲೆ ನಡೆಸಿದ್ದನು (ಕಾವೂರು ಠಾಣೆ ಅ.ಕ್ರ 135/2015).
ಪ್ರಕರಣ ದಾಖಲಾದ ದಿನದಿಂದ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ನ್ಯಾಯಾಲಯವು ಎಲ್ಪಿಸಿ (LPC) ವಾರಂಟ್ (25/2025) ಹೊರಡಿಸಿತ್ತು. ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಜುಲೈ 29, 2026 ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರು ಎಂಬಲ್ಲಿ ಈತನನ್ನು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

3. ಅಪ್ರಾಪ್ತೆಯ ಮೇಲಿನ ದೌರ್ಜನ್ಯ, ನಗ್ನ ವಿಡಿಯೋ ಸ್ಕ್ರೀನ್ಶಾಟ್ ಇಟ್ಟು ಬೆದರಿಕೆ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಮಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ್ದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದ (ಅ.ಕ್ರ. 130/2025) ಆರೋಪಿಗೆ ಮಂಗಳೂರಿನ ಎಫ್ಟಿಎಸ್ಸಿ-2 (FTSC-2) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕುಂಜತ್ತಬೈಲ್ ದೇವಿ ನಗರ ನಿವಾಸಿ ಸೋನು ಮ್ಯಾಕ್ಲಿನ್ ನೊರೊನ್ಹ (20) ಶಿಕ್ಷೆಗೆ ಒಳಗಾದ ಆರೋಪಿ. ಈತನು 2024ರಿಂದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ನಂಬಿಸಿ, ಶಕ್ತಿನಗರ ಹಾಗೂ ಅಳಪೆ ಗ್ರಾಮದ ಮನೆಗಳಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದನು. ಅಲ್ಲದೆ, ಬಾಲಕಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಕಾಲ್ ಮಾಡಿ ಅದರ ಸ್ಕ್ರೀನ್ಶಾಟ್ ತೆಗೆದುಕೊಂಡು, ದೈಹಿಕ ಸಂಪರ್ಕಕ್ಕೆ ಬರದಿದ್ದರೆ ಚಿತ್ರಗಳನ್ನು ವೈರಲ್ ಮಾಡುವುದಾಗಿ ಹಾಗೂ ಕುಟುಂಬಸ್ಥರನ್ನು ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು.
ಕಂಕನಾಡಿ ನಗರ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕರಾದ ಸಹನಾ ದೇವಿ ಸರ್ಕಾರದ ಪರ ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಾಧೀಶರಾದ ಮಾನು ಕೆ.ಎಸ್. ರವರು ಆರೋಪಿಗೆ:
ಪೋಕ್ಸೋ ಕಲಂ 6 ಹಾಗೂ BNS ಕಲಂ 64(2)(m) ಅಡಿಯಲ್ಲಿ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ,
BNS ಕಲಂ 77, ಪೋಕ್ಸೋ ಕಲಂ 15 ಹಾಗೂ IT ಕಾಯ್ದೆಯ ಕಲಂ 66(E) ಅಡಿಯಲ್ಲಿ ತಲಾ 1 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
arrest
ಬಿ.ಸಿ.ರೋಡ್ ಯುವತಿ ಕೊಲೆ ಪ್ರಕರಣ: ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆದ ಆರೋಪಿ ಚೇತನ್ ಪೊಲೀಸ್ ಕಸ್ಟಡಿಗೆ
ಬಂಟ್ವಾಳ: ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಹಾಡುಹಗಲೇ ಯುವತಿಯ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿ, ವಿಷ ಸೇವಿಸಿದ ಸ್ಥಿತಿಯಲ್ಲಿಯೇ ಪತ್ತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಗ್ನ ಪ್ರೇಮಿ ಚೇತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ದಿನಾಂಕ 16.07.2026 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ. ಸಿ. ರೋಡ್ನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಯುವತಿಯ ಮೇಲೆ ದಾಳಿ ನಡೆಸಿ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿದ ಬಳಿಕ ವಿಷ ಸೇವಿಸಿ ತಲೆಮರೆಸಿಕೊಳ್ಳಲು ಯತ್ನಿಸಿದ್ದ ಆರೋಪಿ ಚೇತನ್ನನ್ನು ಮರುದಿವಸವೇ ಪೊಲೀಸರು ಬಲೆಗೆ ಬೀಳಿಸಿ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.
4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಚೇತನ್ ದಿನಾಂಕ 28.07.2026 ರಂದು ಸಂಪೂರ್ಣ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಬಂಟ್ವಾಳ ಪೊಲೀಸರು ಆತನನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿರುವುದರಿಂದ, ನ್ಯಾಯಾಲಯವು ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಕೊಲೆಗೆ ಬಳಸಿದ ಮಾರಕಾಸ್ತ್ರಗಳ ವಶ ಹಾಗೂ ಘಟನೆಯ ಹಿಂದಿರುವ ಸಂಪೂರ್ಣ ಮಾಹಿತಿಯನ್ನು ಪೊಲೀಸರು ಕಸ್ಟಡಿ ಅವಧಿಯಲ್ಲಿ ಕಲೆಹಾಕಲಿದ್ದಾರೆ.
-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
