Connect with us

complaint

ಅನಿತಾ ಕಾಸರಗೋಡು ವಿರುದ್ಧ ಮುಂದುವರಿದ ಆಕ್ರೋಶ: ವಿಟ್ಲ ಪೊಲೀಸ್ ಠಾಣೆ, ಉಪತಹಶೀಲ್ದಾರ್‌ಗೆ ಬಿಲ್ಲವ ಸಂಘಟನೆಗಳಿಂದ ದೂರು ಸಲ್ಲಿಕೆ

Published

on

ವಿಟ್ಲ: ಸಾಮಾಜಿಕ ಜಾಲತಾಣಗಳಲ್ಲಿ ಬಿಲ್ಲವ ಸಮಾಜದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಅನಿತಾ ಕಾಸರಗೋಡು ಎಂಬವರ ವಿರುದ್ಧ ಕರಾವಳಿಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿ ಸರಣಿ ದೂರುಗಳು ದಾಖಲಾಗುತ್ತಿವೆ.

ನಿನ್ನೆಯಿಂದ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಹಾಗೂ ಮೂಡಬಿದ್ರೆಯಲ್ಲಿ ವಿವಿಧ ಬಿಲ್ಲವ ಸಂಘಟನೆಗಳು ದೂರು ದಾಖಲಿಸಿದ್ದು, ಇಂದು (ಜೂನ್ 09) ವಿಟ್ಲದಲ್ಲೂ ಪ್ರತಿಭಟನೆಯ ಧ್ವನಿ ಮೊಳಗಿದೆ. ವಿಟ್ಲದ ಬಿಲ್ಲವ ಸಂಘ, ಮಹಿಳಾ ಘಟಕ ಮತ್ತು ಯುವವಾಹಿನಿ ಘಟಕಗಳ ಪ್ರಮುಖರು ಒಟ್ಟಾಗಿ ಸೇರಿ ವಿಟ್ಲ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ವಿಟ್ಲ ಉಪತಹಶೀಲ್ದಾರ್ ಅವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದರು.

ಕೋಮು ಸೌಹಾರ್ದತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಮತ್ತು ಒಂದು ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಆರೋಪಿ ಅನಿತಾ ಕಾಸರಗೋಡು ಅವರನ್ನು ತಕ್ಷಣವೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ಒತ್ತಾಯಿಸಿದರು.

ದೂರು ನೀಡುವ ಸಂದರ್ಭದಲ್ಲಿ ಬಿಲ್ಲವ ಸಂಘ ಹಾಗೂ ಯುವವಾಹಿನಿ ಘಟಕದ ಪ್ರಮುಖ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಕುಳ ಕಂದಾಯ ಕಛೇರಿಯಲ್ಲಿ ಧರಣ್ ದರ್ಭಾರ್..ನಾಗರಿಕರು ಹೈರಾಣ..ಜಿಲ್ಲಾಧಿಕಾರಿಗೆ ದೂರು..

Published

on

ಬಂಟ್ವಾಳ: ತಾಲೂಕಿನ ಕುಳ ಗ್ರಾಮದ ಆಡಳಿತ ಅಧಿಕಾರಿಯ (VA) ಕಚೇರಿಯು ಸಾರ್ವಜನಿಕರ ಸೇವೆಗೆ ಇರಬೇಕಾದ ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ವ್ಯಕ್ತಿಗಳ ಹಣ ವಸೂಲಿ ಕೇಂದ್ರವೋ ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ. ಕಚೇರಿಯೊಳಗೆ ಧರಣ್ ಮಾಣಿ ಎಂಬ ಖಾಸಗಿ ಬ್ರೋಕರ್‌ನನ್ನು ಕಾನೂನುಬಾಹಿರವಾಗಿ ಕೂರಿಸಿಕೊಂಡು, ಅಮಾಯಕ ಗ್ರಾಮೀಣ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಜಿಗಣೆ ದಂಧೆ ಬೆಳಕಿಗೆ ಬಂದಿದೆ.

ಕಚೇರಿ ಕೆಲಸಕ್ಕೆ ಬಂದರೆ ಜೇಬಿಗೆ ಕತ್ತರಿ!

ಕುಳ ಮತ್ತು ಇಡ್ಕಿದು ಜೋಡು ಗ್ರಾಮಗಳಾಗಿದ್ದು, ಇಲ್ಲಿನ ಕಂದಾಯ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಬಡ, ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಈ ದಲ್ಲಾಳಿ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಬೇಡಿಕೆಯಿಟ್ಟಷ್ಟು ಹಣ ನೀಡದಿದ್ದರೆ, ಅಂತವರ ಫೈಲ್‌ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಸಿ, ಜನ ಸಾಮಾನ್ಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕುಳ ಗ್ರಾಮಸ್ಥರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲ್ಲಾಳಿಗೆ ಗ್ರಾಮ ಸಹಾಯಕ ರಾಘವನ ‘ಶ್ರೀರಕ್ಷೆ’!

ಈ ಇಡೀ ಅಕ್ರಮ ದಂಧೆಯ ಹಿಂದೆ ಕುಳ ಗ್ರಾಮದ ಸಹಾಯಕನಾಗಿರುವ ಇಡೀದು ಗ್ರಾಮದ ರಾಘವ ಗೌಡ ಎಂಬಾತನ ಪೂರ್ಣ ಶ್ರೀರಕ್ಷೆ ಹಾಗೂ ಶಾಮೀಲಾತಿ ಇರುವುದು ಸಾಕ್ಷ್ಯಸಮೇತ ಬಹಿರಂಗವಾಗಿದೆ. ದಿನಾಂಕ 08/06/2026 ರಂದು ಬೆಳಿಗ್ಗೆ 9:18 ರ ಸುಮಾರಿಗೆ ಸ್ಥಳೀಯ ನಾಗರಿಕರಾದ ಸಚಿನ್ ಉರಿಮಜಲು ಅವರು ಕಚೇರಿಗೆ ಭೇಟಿ ನೀಡಿದಾಗ, ಗ್ರಾಮ ಸಹಾಯಕನ ಅಧಿಕೃತ ಪೀಠದಲ್ಲೇ ಈ ಬ್ರೋಕರ್ ಧರಣ್ ಆಸೀನನಾಗಿ ದರ್ಬಾರ್ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನು ಸಚಿನ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸಿದಾಗ, ಗ್ರಾಮ ಸಹಾಯಕ ರಾಘವ ತಕರಾರು ಎಬ್ಬಿಸಿದ್ದಲ್ಲದೆ, ಕಚೇರಿಯ ಫೈಲ್/ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಅಕ್ರಮವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾನೆ!

ತನ್ನನ್ನು ವಿಎ (ಗ್ರಾಮ ಆಡಳಿತ ಅಧಿಕಾರಿ) ಮತ್ತು ರಾಘವ ಅವರೇ ಇಲ್ಲಿಗೆ ನೇಮಿಸಿದ್ದಾರೆ ಎಂದು ಸ್ವತಃ ದಲ್ಲಾಳಿ ಧರಣ್ ಒಪ್ಪಿಕೊಂಡಿರುವುದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟಿದೆ.

ಜಾರಿಕೊಂಡ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್!

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುರ್ಚಿ ಹಾಕಿ ದರ್ಬಾರ್ ನಡೆಸುತ್ತಿರುವ ಬಗ್ಗೆ ಪತ್ರಿಕೆಯು ಗ್ರಾಮ ಆಡಳಿತ ಅಧಿಕಾರಿ (VA) ಅನಿಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ. “ನಾನು ಕುಳ ಗ್ರಾಮದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಉಳಿದ ದಿನಗಳಲ್ಲಿ ಗ್ರಾಮ ಸಹಾಯಕ ರಾಘವ ಇರುತ್ತಾರೆ. ಕಚೇರಿಯೊಳಗೆ ದಲ್ಲಾಳಿ ಇರುವ ಬಗ್ಗೆ ನನಗೆ ತಿಳಿದಿಲ್ಲ, ನಾನು ಯಾರನ್ನೂ ನೇಮಿಸಿಲ್ಲ” ಎಂದು ದಿನಾಂಕ 10/06/2026 ರಂದು ಹೇಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದಲೇ ಇಂತಹ ದಲ್ಲಾಳಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು: ಹೋರಾಟದ ಎಚ್ಚರಿಕೆ

ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಬ್ರೋಕರ್ ಧರಣ್‌ನನ್ನು ತಕ್ಷಣವೇ ಕಚೇರಿಯಿಂದ ತೆರವುಗೊಳಿಸಬೇಕು ಮತ್ತು ಆತನಿಗೆ ಕಚೇರಿಯೊಳಗೆ ಅಕ್ರಮವಾಗಿ ನೆಲೆಸಲು ಆಶ್ರಯ ನೀಡಿದ ಗ್ರಾಮ ಸಹಾಯಕ ರಾಘವ ವಿರುದ್ಧ ತಕ್ಷಣವೇ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೂರುದಾರರಾದ ಸಚಿನ್ ಉರಿಮಜಲು ಅವರು ಬಂಟ್ವಾಳ ತಹಶೀಲ್ದಾರರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸಹಾಯಕ ಕಮಿಷನರ್‌ ಅವರಿಗೆ ಜಿಪಿಎಸ್ ಫೋಟೋ ಸಾಕ್ಷ್ಯಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ.

“ಸರ್ಕಾರಿ ಕಚೇರಿಯನ್ನು ಇವರು ತಮ್ಮ ಹಿರಿಯರ ಖಾಸಗಿ ಆಸ್ತಿ ಎಂದುಕೊಂಡಿದ್ದಾರೆಯೇ? ಕೂಡಲೇ ಈ ಭ್ರಷ್ಟ ಜಾಲದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾಧ್ಯಮ ಮಿತ್ರರನ್ನು ಕರೆಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ದೂರುದಾರರು ಎಚ್ಚರಿಸಿದ್ದಾರೆ.




Continue Reading

Bantawala

ಬಿಲ್ಲವ ಸಮಾಜಕ್ಕೆ ಅವಹೇಳನ: ಆರೋಪಿ ಮಹಿಳೆ ಅನಿತಾ ಕಾಸರಗೋಡು ವಿರುದ್ಧ ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಕಾನೂನು ಕ್ರಮಕ್ಕೆ ತೀವ್ರ ಆಗ್ರಹ

Published

on

ಬಂಟ್ವಾಳ/ಬೆಳ್ತಂಗಡಿ: ಕರಾವಳಿಯ ಪ್ರತಿಷ್ಠಿತ ಹಾಗೂ ಧೀಮಂತ ಸಮಾಜವಾದ ಬಿಲ್ಲವ ಸಮುದಾಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೀಳಾಗಿ ಮಾತನಾಡಿ, ಅತ್ಯಂತ ಅವಹೇಳನಕಾರಿ ಪದಗಳನ್ನು ಬಳಸಿ ವಿಡಿಯೋ ಹರಿಬಿಟ್ಟಿರುವ ಅನಿತಾ ಕಾಸರಗೋಡು ಎಂಬ ಮಹಿಳೆಯ ವಿರುದ್ಧ ಕರಾವಳ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಬಿಲ್ಲವ ಸಂಘಟನೆಗಳು ದೂರು ಹಾಗೂ ಮನವಿ ಸಲ್ಲಿಸಿವೆ.

ಬಂಟ್ವಾಳದಲ್ಲಿ ಹಕ್ಕೋತ್ತಾಯ ಹಾಗೂ ಖಂಡನಾ ನಿರ್ಣಯ: ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಅಧ್ಯಕ್ಷ ಭುವನೇಶ್ ಪಚಿನಡ್ಕ ಇವರ ನೇತೃತ್ವದಲ್ಲಿ, ತಾಲೂಕಿನ ವಿವಿಧ ಬಿಲ್ಲವ ಸಂಘಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಕಚೇರಿಯಲ್ಲಿ ಬೃಹತ್ ಹಕ್ಕೋತ್ತಾಯ ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ನಾಯಕ ಹರಿಕೃಷ್ಣ ಬಂಟ್ವಾಳರವರು ಆರೋಪಿ ಮಹಿಳೆಯ ವಿರುದ್ಧ ಖಂಡನಾ ನಿರ್ಣಯದ ಹಕ್ಕೋತ್ತಾಯವನ್ನು ಮಂಡಿಸಿದರು. ತದನಂತರ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರಿಗೆ ಸಮಾಜದ ಪರವಾಗಿ ಅಧಿಕೃತ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರಿಗೂ ಮನವಿ ನೀಡಿ, ಸಮಾಜದಲ್ಲಿ ಶಾಂತಿ ಕದಡುವ ಹಾಗೂ ಒಂದು ಸಮುದಾಯವನ್ನು ಹೀಯಾಳಿಸುವ ಇಂತಹ ವ್ಯಕ್ತಿಗಳ ವಿರುದ್ಧ ತಕ್ಷಣವೇ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಯಿತು.

ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಬೂಡಾ (BUDA) ಅಧ್ಯಕ್ಷರು, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಬೇಬಿ ಕುಂದರ್, ತಾಲೂಕು ಸಂಘದ ಮಾಜಿ ಅಧ್ಯಕ್ಷರುಗಳು, ಸಿದ್ಧಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ಕಾರ್ಯದರ್ಶಿ ರತ್ನಾಕರ್ ಮದಂಗೋಡಿ, ಕೋಶಾಧಿಕಾರಿ ಯೋಗೀಶ್ ಕೇರ್ನಡೆ, ಉಪಾಧ್ಯಕ್ಷ ಸತೀಶ್ ಪೂಜಾರಿ, ಜಗದೀಶ್ ಕೊಯಿಲ, ಪ್ರಭಾಕರ್ ಪೂಜಾರಿ ಮೈರೆಬೆಟ್ಟು, ಗಣೇಶ್ ಪೂಜಾರಿ ದೇವಸ, ಮಹಿಳಾ ಸಮಿತಿಯ ಜಲಜ ಡಿ. ಪೂಜಾರಿ, ಸುಶೀಲ ಸುರೇಶ್ ಕೊಳಕ್ಕೆಬೈಲ್, ಕರ್ಪೆ ಗ್ರಾಮ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ, ರಘು ಪೂಜಾರಿ ಕುಪ್ಪೆಟ್ಟು, ಉಮೇಶ್ ಪೂಜಾರಿ ಬೊಲ್ಲಿ, ದಾಮೋದರ ಪೂಜಾರಿ ಸಿದ್ಧಕಟ್ಟೆ ಸೇರಿದಂತೆ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ನೂರಾರು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಬೆಳ್ತಂಗಡಿಯಲ್ಲೂ ದೂರು ದಾಖಲು: ಬಿಲ್ಲವ ಸಮಾಜಕ್ಕೆ ಅವಮಾನ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯಲ್ಲೂ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಅಧಿಕೃತವಾಗಿ ದೂರು ನೀಡಲಾಗಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ವಿಡಿಯೋಗಳ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿಯ ಬಿಲ್ಲವ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.


Continue Reading

Bantawala

ಬಿಸಿ ರೋಡ್‌ ಪೇಟೆಯಲ್ಲಿ ಫುಟ್‌ಪಾತ್ ಅತಿಕ್ರಮಣ: ಪಾದಚಾರಿಗಳು ಮತ್ತು ವಾಹನ ಸವಾರರ ಜೀವಕ್ಕೆ ಕುತ್ತು – ಜಿಲ್ಲಾಧಿಕಾರಿಗೆ ದೂರು

Published

on

ಬಿಸಿ ರೋಡ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಪೇಟೆಯಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಮತ್ತು ಪಾದಚಾರಿಗಳ ಸುರಕ್ಷತೆಯ ಪ್ರಶ್ನೆ ಬಿಗಡಾಯಿಸುತ್ತಿದೆ. ಇಲ್ಲಿನ ಹೆದ್ದಾರಿ ಬದಿಯ ಅಂಗಡಿ ಮುಂಗಟ್ಟುಗಳ ಮಾಲೀಕರು ತಮ್ಮ ವ್ಯಾಪಾರದ ಮಿತಿಯನ್ನು ಮೀರಿ ರಸ್ತೆ ಮತ್ತು ಸಾರ್ವಜನಿಕ ಕಾಲುದಾರಿಯನ್ನು (ಫುಟ್‌ಪಾತ್) ಸಂಪೂರ್ಣವಾಗಿ ಅತಿಕ್ರಮಿಸಿಕೊಂಡಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಸೇವಾ ಹೋರಾಟಗಾರರಾದ ಖಾಲಿದ್ ನಂದಾವರ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ವೀಡಿಯೋ ಪುರಾವೆಗಳೊಂದಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ನಿಯಮ ಗಾಳಿಗೆ ತೂರಿದ ಅಂಗಡಿ ಮಾಲೀಕರು: ಬಿಸಿ ರೋಡ್ ಪೇಟೆಯ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗದ ಎಡಭಾಗದಲ್ಲಿರುವ ಭಾರತ್ ಪೆಟ್ರೋಲಿಯಂ ಬಂಕ್‌ನಿಂದ ಹಿಡಿದು ಖಾಸಗಿ ಬಸ್ ನಿಲ್ದಾಣದವರೆಗಿನ ರಸ್ತೆ ಬದಿಯ ಅಂಗಡಿಯವರು ಸಾರ್ವಜನಿಕ ಸುರಕ್ಷತೆಗಾಗಿ ಮೀಸಲಿಟ್ಟ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಅಂಗಡಿಯ ಒಳಗೆ ಇಟ್ಟು ಮಾರಾಟ ಮಾಡಬೇಕಾದ ಸಾಮಗ್ರಿಗಳನ್ನು ರಸ್ತೆಯವರೆಗೂ ಚಾಚಿಕೊಂಡಿರುವ ಕಾರಣ, ಇಡೀ ಪೇಟೆ ಕಿರಿದಾಗಿ ಗೋಚರಿಸುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೂ ಈ ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ.

ಟ್ರಾಫಿಕ್ ಜಾಮ್ ಹಾಗೂ ಜೀವಕ್ಕೆ ಅಪಾಯ: ಅಂಗಡಿಗಳು ರಸ್ತೆಯನ್ನು ಆಕ್ರಮಿಸಿಕೊಂಡಿರುವುದರಿಂದ ವಾಹನಗಳಲ್ಲಿ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ, ಇಳಿಯದೆಯೇ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಇಡೀ ರಸ್ತೆ ಬ್ಲಾಕ್ ಆಗುತ್ತಿದ್ದು, ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಹೆದ್ದಾರಿಯಲ್ಲಿ ವಾಹನಗಳು ಗಂಟೆಗಟ್ಟಲೆ ಪರದಾಡುವಂತಾಗಿದ್ದು, ಅತ್ಯಂತ ಅಪಾಯಕಾರಿ ಅಪಘಾತ ವಲಯವಾಗಿ ಬಿಸಿ ರೋಡ್ ಮಾರ್ಪಟ್ಟಿದೆ.

ಪಾದಚಾರಿಗಳ ನರಕಯಾತನೆ: ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕಾದ ಬಿಸಿ ರೋಡ್‌ನಲ್ಲಿ ಸಾರ್ವಜನಿಕರು ನಡೆದಾಡಲು ಜಾಗವೇ ಇಲ್ಲದಂತಾಗಿದೆ. ಶಾಲಾ ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲೇ ಪ್ರಾಣ ಕೈಯಲ್ಲಿ ಹಿಡಿದು ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಅಂಗಡಿಗಳ ಪಾರ್ಕಿಂಗ್ ಜಾಗವನ್ನು ಹೋಟೆಲ್ ಹಾಗೂ ಅಂಗಡಿಗಳ ಮುಂಗಟ್ಟುಗಳಿಗೆ ಬಳಸಿಕೊಳ್ಳುತ್ತಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ಕ್ರಮ ಕೈಗೊಳ್ಳದ ಪುರಸಭೆ – ಜಿಲ್ಲಾಧಿಕಾರಿಗಳ ಕದ ತಟ್ಟಿದ ಹೋರಾಟಗಾರ: ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮಾಡಲು ಬೇಕಾದ ಎಲ್ಲಾ ಅಧಿಕಾರಗಳು ಸಂಬಂಧಪಟ್ಟ ಇಲಾಖೆ ಹಾಗೂ ಬಂಟ್ವಾಳ ಪುರಸಭೆಗೆ ಇದ್ದರೂ, ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ವ್ಯಾಪಾರಿಗಳು ಕೊಡುವ ಜೊಳ್ಳು ಕಾಸಿಗೆ ಕೈಚಾಚಿ ಇಡೀ ಪೇಟೆಯ ಸೌಂದರ್ಯ ಮತ್ತು ಸಾರ್ವಜನಿಕರ ಪ್ರಾಣದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಖಾಲಿದ್ ನಂದಾವರ ಅವರು ಸೂಕ್ತ ತನಿಖೆ ನಡೆಸಿ, ಅಕ್ರಮ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ದೂರು ನೀಡಿದ್ದಾರೆ. ಈ ದೂರಿನ ಪ್ರತಿಗಳನ್ನು ಮಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP), ಬಂಟ್ವಾಳ ತಹಶೀಲ್ದಾರರು ಹಾಗೂ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳಿಗೂ ಸಲ್ಲಿಸಲಾಗಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!