Connect with us

karkala

ಲಂಚದ ಆರೋಪ: ಕಾರ್ಕಳ ಡಿವೈಎಸ್‌ಪಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳು ಅಮಾನತು!

Published

on

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಪೊಲೀಸ್ ಇಲಾಖೆಯನ್ನೇ ತಲ್ಲಣಗೊಳಿಸುವಂತಹ ಘಟನೆಯೊಂದು ನಡೆದಿದ್ದು, ಲಂಚದ ಬೇಡಿಕೆಯಿಟ್ಟ ಆರೋಪದ ಮೇಲೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ (Suspended).

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ರಹಸ್ಯ ಕಾರ್ಯಾಚರಣೆಯ (Sting Operation) ವಿಡಿಯೋ ಆಧರಿಸಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಈ ಕಠಿಣ ಕ್ರಮ ಕೈಗೊಂಡಿದೆ.

ಅಮಾನತಾದ ಅಧಿಕಾರಿಗಳ ವಿವರ:

  • ವಿಜಯ ಪ್ರಸಾದ್‌ – ಡಿವೈಎಸ್‌ಪಿ (DySP), ಕಾರ್ಕಳ
  • ಸಂದೀಪ್‌ – ಸರ್ಕಲ್‌ ಇನ್ಸ್‌ಪೆಕ್ಟರ್‌ (CPI), ಕಾರ್ಕಳ
  • ಶಿವಾನಂದ – ಡಿವೈಎಸ್‌ಪಿ ಕಚೇರಿ ಸಿಬ್ಬಂದಿ

ಘಟನೆಯ ಹಿನ್ನೆಲೆ

ಕಾರ್ಕಳ ಪೊಲೀಸ್‌ ಕಚೇರಿಯಲ್ಲೇ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲು ಹಾಗೂ ವಿವಿಧ ಪ್ರಕರಣಗಳ ಇತ್ಯರ್ಥಕ್ಕಾಗಿ ಲಕ್ಷಾಂತರ ರೂಪಾಯಿ ಲಂಚದ ಬೇಡಿಕೆ ಇಡಲಾಗಿದೆ ಎನ್ನಲಾದ ವೀಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಸಾರ್ವಜನಿಕ ವಲಯದಲ್ಲಿ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಹಿರಿಯ ಅಧಿಕಾರಿಗಳು ತಕ್ಷಣವೇ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಸ್ಪಷ್ಟನೆ

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್‌ ಶಂಕರ್‌, “ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಹಾಗೂ ಬಂದಿರುವ ಗಂಭೀರ ಆರೋಪಗಳ ಆಧಾರದ ಮೇಲೆ ಹೆಚ್ಚುವರಿ ಎಸ್‌ಪಿ (Addl SP) ಅವರಿಂದ ತಕ್ಷಣವೇ ಪ್ರಾಥಮಿಕ ತನಿಖೆ ನಡೆಸಲಾಗಿದೆ. ಅವರು ಸಲ್ಲಿಸಿದ ವರದಿಯ ಅನ್ವಯ, ಇಲಾಖಾ ಶಿಸ್ತು ಕ್ರಮ ಪೂರ್ಣಗೊಳ್ಳುವವರೆಗೆ ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್‌, ಸಿಪಿಐ ಸಂದೀಪ್‌ ಮತ್ತು ಸಿಬ್ಬಂದಿ ಶಿವಾನಂದ ಅವರನ್ನು ಅಮಾನತುಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.

ಪೊಲೀಸ್ ಕಚೇರಿಯಲ್ಲೇ ನಡೆದ ಈ ಲಂಚದ ಪ್ರಕರಣ ಸಾರ್ವಜನಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇಲಾಖಾ ಮಟ್ಟದ ಹೆಚ್ಚಿನ ತನಿಖೆ ಪ್ರಸ್ತುತ ಮುಂದುವರಿದಿದೆ

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ, ಜೀವಬೆದರಿಕೆ: ಕಾರ್ಕಳದಲ್ಲಿ ಆರೋಪಿ ಬಂಧನ

Published

on

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹಾಗೂ ಜಾತಿ ನಿಂದನೆಯ ಕಮೆಂಟ್ ಮಾಡಿ, ದ್ವೇಷ ಹರಡಲು ಯತ್ನಿಸಿದ ಆರೋಪದ ಮೇಲೆ ಕಾರ್ಕಳ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಕೆರ್ವಾಶೆ ನಲ್ಕೆದಬೆಟ್ಟು ನಿವಾಸಿ, ಭೋಜ ಬಂಗೇರ ಅವರ ಪುತ್ರ ಸುದೀರ್ ಬಂಗೇರ (48) ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ: ಫೇಸ್‌ಬುಕ್‌ನ “NAMMA KARLA” ಎಂಬ ಪೇಜ್‌ನಲ್ಲಿ ಗೃಹ ಸಚಿವರ ಕುರಿತಾದ ಪೋಸ್ಟ್‌ ಒಂದಕ್ಕೆ ಆರೋಪಿ ಸುದೀರ್ ಬಂಗೇರ ಅವಹೇಳನಕಾರಿ ಕಮೆಂಟ್ ಮಾಡಿದ್ದನು. ಕಮೆಂಟ್‌ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಚಿವರ ಜಾತಿಯನ್ನು ಉಲ್ಲೇಖಿಸಿ ನಿಂದನೆ ಮಾಡಲಾಗಿತ್ತು. ಇದು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ವೈರತ್ವ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ ಎಂದು ಸುರೇಶ್ ಎಂಬುವವರು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದಾಖಲಾದ ಪ್ರಕರಣಗಳು: ದೂರಿನ ಅನ್ವಯ ಕಾರ್ಕಳ ನಗರ ಪೊಲೀಸರು ಅಪರಾಧ ಸಂಖ್ಯೆ 82/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 351(3), 196, 353(2) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ (SC/ST Act) ಕಲಂ 3(1)(r) ಮತ್ತು 3(1)(u) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ




Continue Reading

crime

ಕಾರ್ಕಳ: ಮನೆ ಕಳ್ಳತನ ಪ್ರಕರಣ 24 ಗಂಟೆಯೊಳಗೆ ಭೇದಿಸಿದ ಪೊಲೀಸರು; ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

Published

on

ಕಾರ್ಕಳ: ನಗರದ ಪತ್ತೊಂಜಿ ಕಟ್ಟೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಕಾರ್ಕಳ ನಗರ ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ಪತ್ತೊಂಜಿ ಕಟ್ಟೆಯ ನಿವಾಸಿ ಶಂಕರ ಕುಲಾಲ್ ಅವರು ಏಪ್ರಿಲ್ 23ರ ಬೆಳಿಗ್ಗೆ ಮನೆಯಿಂದ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಏಪ್ರಿಲ್ 24ರ ಸಂಜೆ 6 ಗಂಟೆಯ ಒಳಗಿನ ಅವಧಿಯಲ್ಲಿ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿದ್ದ ಸುಮಾರು 2.64 ಲಕ್ಷ ರೂ. ಮೌಲ್ಯದ ಚಿನ್ನದ ನೆಕ್ಲೆಸ್, ಉಂಗುರಗಳು ಹಾಗೂ ಜುಮ್ಕಿ ಸೇರಿದಂತೆ ವಿವಿಧ ಆಭರಣಗಳನ್ನು ದೋಚಿದ್ದರು. ಈ ಬಗ್ಗೆ ಶಂಕರ ಕುಲಾಲ್ ಅವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಿಂಚಿನ ಕಾರ್ಯಾಚರಣೆ: ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್., ಪಿಎಸ್ಐಗಳಾದ ಮುರುಳೀಧರ ನಾಯ್ಕ, ಶಿವಕುಮಾರ್ ಎಸ್.ಆರ್. ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ ಕೇವಲ 24 ಗಂಟೆಯೊಳಗೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬಂಧಿತರು ಮತ್ತು ವಶಪಡಿಸಿಕೊಂಡ ಸೊತ್ತು:

ಆನಂದ ಕುಲಾಲ್ (40) ಬೈರಂಪಳ್ಳಿ ಗ್ರಾಮದ ನಿವಾಸಿಯಾಗಿದ್ದು, ಕಳ್ಳತನ ಮಾಡಿದ ಪ್ರಮುಖ ಆರೋಪಿ. ಜಯರಾಮ ಆಚಾರ್ಯ (54) ಅಜೆಕಾರು ಮರ್ಣೆ ಗ್ರಾಮದ ನಿವಾಸಿಯಾಗಿದ್ದು, ಕಳವು ಮಾಡಿದ ಚಿನ್ನವನ್ನು ವಿಲೇವಾರಿ ಮಾಡಲು ಸಹಕರಿಸಿದ ಆರೋಪದಡಿ ಬಂಧಿಸಲಾಗಿದೆ.

ಆರೋಪಿಗಳಿಂದ ಒಟ್ಟು 39 ಗ್ರಾಂ ತೂಕದ, ಅಂದಾಜು 5.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅತ್ಯಲ್ಪ ಅವಧಿಯಲ್ಲಿ ಕಳ್ಳರನ್ನು ಪತ್ತೆಹಚ್ಚಿದ ಪೊಲೀಸ್ ತಂಡದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.


Continue Reading

crime

ಕಾರ್ಕಳ: ಬೆಳ್ತಂಗಡಿ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣ – ಪತ್ನಿ ಸೌಮ್ಯ ಶೆಟ್ಟಿ ಅರೆಸ್ಟ್

Published

on

ಕಾರ್ಕಳ: ಇಡೀ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಬೆಳ್ತಂಗಡಿಯ ಯುವ ಉದ್ಯಮಿ ಸುದೀಪ್ ರೈ (36) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅವರ ಪತ್ನಿ ಕಾರ್ಕಳದ ಸೌಮ್ಯ ಶೆಟ್ಟಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ ಅವರು ಕಾರ್ಕಳದ ಕಜೆ ನಿವಾಸಿ ಸೌಮ್ಯ ಶೆಟ್ಟಿ ಎಂಬುವವರನ್ನು ಮನೆಯವರಿಗೆ ತಿಳಿಸದೆ ಕಳೆದ ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಕೇವಲ ಒಂದು ತಿಂಗಳಲ್ಲೇ, ಅಂದರೆ ಮಾರ್ಚ್ 17ರಂದು ಸೌಮ್ಯ ಶೆಟ್ಟಿಯವರ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸುದೀಪ್ ಸಾವನ್ನಪ್ಪಿದ್ದರು.

ಟ್ವಿಸ್ಟ್ ನೀಡಿದ ತನಿಖೆ:

ಸುದೀಪ್ ಅವರ ಸಾವಿನ ಹಿಂದೆ ಸೌಮ್ಯ ಶೆಟ್ಟಿಯವರ ಕಿರುಕುಳ ಹಾಗೂ ವಂಚನೆಯಿದೆ ಎಂದು ಸುದೀಪ್ ಅವರ ತಂದೆ ದಾಮೋದರ ರೈ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆಯ ವೇಳೆ ಸೌಮ್ಯ ಶೆಟ್ಟಿಯವರ ಮೇಲೆ ಹನಿಟ್ರ್ಯಾಪ್ ಹಾಗೂ ಹಲವು ಮದುವೆಯಾಗಿರುವ ಗಂಭೀರ ಆರೋಪಗಳು ಕೇಳಿಬಂದಿದ್ದವು.

  • ಆರೋಪಗಳು: ಸೌಮ್ಯ ಶೆಟ್ಟಿ ಈ ಹಿಂದೆ ಹಲವರನ್ನು ವಿವಾಹವಾಗಿ ವಂಚಿಸಿದ್ದಾರೆ ಎಂಬ ಆರೋಪಗಳು ಮತ್ತು ಹಳೆಯ ಪ್ರಿಯತಮನ ಹೇಳಿಕೆಗಳು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದವು.
  • ಬಂಧನ: ಸುದೀಪ್ ರೈ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಾಗೂ ದೂರಿನಲ್ಲಿ ಉಲ್ಲೇಖಿಸಲಾದ ಗಂಭೀರ ಅಂಶಗಳನ್ನು ಆಧರಿಸಿ ಕಾರ್ಕಳ ಪೊಲೀಸರು ಸೌಮ್ಯ ಶೆಟ್ಟಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣವು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದ್ದು, ಪೊಲೀಸರು ಈಕೆಯ ಇತರ ವಂಚನೆ ಜಾಲಗಳ ಬಗ್ಗೆಯೂ ತನಿಖೆ ಚುರುಕುಗೊಳಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!