Connect with us

cyber crime

ಶಾಸಕ ಅಶೋಕ್ ರೈ ಹೆಸರು ಹೇಳಿ ಮಹಿಳೆಗೆ ವಂಚನೆ; ಕಳೆದುಕೊಂಡ ಹಣ ಭರಿಸಿ ಮಾನವೀಯತೆ ಮೆರೆದ ಶಾಸಕರು

Published

on

₹22,500 ಕಳೆದುಕೊಂಡ ಮಹಿಳೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30 ಸಾವಿರ ನೆರವು • “ನನ್ನ ಹೆಸರು ಹೇಳಿ ವಂಚಿಸಿದ್ದು ನೋವಿನ ಸಂಗತಿ” ಎಂದ ಶಾಸಕ

ಪುತ್ತೂರು, ಜು. 29: ಪುತ್ತೂರು ಶಾಸಕ ಅಶೋಕ್ ರೈ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಸುಳ್ಯ ತಾಲೂಕಿನ ಮಹಿಳೆಯೊಬ್ಬರಿಗೆ ವಂಚನೆ ಎಸಗಿದ ಪ್ರಕರಣದಲ್ಲಿ, ಮಹಿಳೆ ಕಳೆದುಕೊಂಡ ಹಣವನ್ನು ಸ್ವತಃ ಭರಿಸುವ ಮೂಲಕ ಶಾಸಕ ಅಶೋಕ್ ರೈ ಮಾನವೀಯತೆ ಮೆರೆದಿದ್ದಾರೆ.

ಸುಳ್ಯ ಕಸಬಾ ದಕ್ಷಿಣ ಬೀರಮಂಗಲ ನಿವಾಸಿ, ಗಣೇಶ್ ಅವರ ಪತ್ನಿ ಪುಷ್ಪಾವತಿ ವಂಚನೆಗೆ ಒಳಗಾದ ಮಹಿಳೆ. ಪುಷ್ಪಾವತಿಯವರ ಪತಿ ಗಣೇಶ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ದಾನಿಗಳು ಒಟ್ಟು ₹22,500 ಹಣವನ್ನು ಪುಷ್ಪಾವತಿಯವರ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದರು.

ಜು. 27ರಂದು ಸಂಜೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ, “ಪುತ್ತೂರು ಶಾಸಕ ಅಶೋಕ್ ರೈ ಅವರು ನಿಮಗೆ ₹3 ಲಕ್ಷ ಆರ್ಥಿಕ ನೆರವು ನೀಡಲು ಒಪ್ಪಿದ್ದಾರೆ. ಆದರೆ ಹಣ ಬಿಡುಗಡೆ ಮಾಡಲು ಮೊದಲು ₹25 ಸಾವಿರ ತೆರಿಗೆ ಪಾವತಿಸಬೇಕು” ಎಂದು ನಂಬಿಸಿದ್ದಾನೆ.

ಶಾಸಕರ ಹೆಸರಿನ ಮೇಲಿನ ವಿಶ್ವಾಸದಿಂದ ಪುಷ್ಪಾವತಿ ತಮ್ಮ ಖಾತೆಯಲ್ಲಿದ್ದ ₹22,500 ಅನ್ನು ಫೋನ್‌ಪೇ ಮೂಲಕ ಆರೋಪಿಗೆ ವರ್ಗಾಯಿಸಿದ್ದಾರೆ. ಬಳಿಕ ಆರೋಪಿಯ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದ್ದು, ತಾವು ವಂಚನೆಗೆ ಒಳಗಾಗಿರುವುದು ತಿಳಿದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯ ತಿಳಿದು ಸ್ಪಂದಿಸಿದ ಶಾಸಕ

ಈ ಘಟನೆ ಬಗ್ಗೆ ಮಾಹಿತಿ ಪಡೆದ ಶಾಸಕ ಅಶೋಕ್ ರೈ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರು ಬಳಸಿಕೊಂಡು ಸಂಕಷ್ಟದಲ್ಲಿದ್ದ ಮಹಿಳೆಯನ್ನು ವಂಚಿಸಿರುವುದು ಅಮಾನವೀಯ ಕೃತ್ಯ ಎಂದು ಅವರು ಹೇಳಿದ್ದಾರೆ.

ಪತ್ರಕರ್ತರ ಮೂಲಕ ವಿಷಯ ತಿಳಿದ ಬಳಿಕ, “ನನ್ನ ಹೆಸರಿನ ಮೇಲಿನ ನಂಬಿಕೆಯಿಂದ ಮಹಿಳೆ ಹಣ ಕಳುಹಿಸಿದ್ದಾರೆ. ಅವರು ಕಳೆದುಕೊಂಡ ಹಣವನ್ನು ನಾನು ಭರಿಸುತ್ತೇನೆ” ಎಂದು ಭರವಸೆ ನೀಡಿದರು.

ಅದರಂತೆ ಮಹಿಳೆ ಕಳೆದುಕೊಂಡ ₹22,500 ಜೊತೆಗೆ ಹೆಚ್ಚುವರಿಯಾಗಿ ₹7,500 ಸೇರಿಸಿ ಒಟ್ಟು ₹30,000 ಅನ್ನು ಅವರ ಖಾತೆಗೆ ಜಮೆ ಮಾಡುವುದಾಗಿ ತಿಳಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಶಾಸಕರ ಈ ಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಮಯೋಚಿತ ನೆರವು ನೀಡಿದ ಕಾರ್ಯ ಶ್ಲಾಘನೀಯವಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ನೀಟ್ ಪ್ರತಿಭಟನೆಗೆ ಧಾರ್ಮಿಕ ಬಣ್ಣ, ಅವಹೇಳನಕಾರಿ ಪೋಸ್ಟ್: ಬಂಟ್ವಾಳದ ಕೇಪು ನಿವಾಸಿ ಬಂಧನ

Published

on

ವಿಟ್ಲ: ನೀಟ್ (NEET) ಪರೀಕ್ಷೆ ವಿರುದ್ಧ ನಡೆಯುತ್ತಿದ್ದ ಹೋರಾಟವನ್ನು ಧಾರ್ಮಿಕ ವಿಚಾರಗಳಿಗೆ ಥಳುಕು ಹಾಕಿ, ಜಾಲತಾಣಗಳಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತಹ ಅವಹೇಳನಕಾರಿ ಬರಹ ಪ್ರಸಾರ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೇಪು ನಿವಾಸಿ ಭರತ್ (36) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ದೂರುದಾರರು ‘KFC KHANDIGA’ ಎಂಬ ವಾಟ್ಸಾಪ್ ಗ್ರೂಪ್‌ನ ಸದಸ್ಯರಾಗಿದ್ದು, ಜುಲೈ 23ರಂದು ಸದ್ರಿ ಗ್ರೂಪ್‌ನಲ್ಲಿ ಹರಿಫೋಡಲಾಗಿದ್ದ ಸ್ಕ್ರೀನ್‌ಶಾಟ್ ಒಂದನ್ನು ವೀಕ್ಷಿಸಿದ್ದರು. ಅದರಲ್ಲಿ ಎರಡು ಸಮುದಾಯಗಳ ನಡುವೆ ವೈಮನಸ್ಸು ಮೂಡಿಸುವ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೋಮು ಪ್ರಚೋದನಾತ್ಮಕ ಬರಹಗಳಿದ್ದವು. ಈ ಕುರಿತು ಪರಿಶೀಲನೆ ನಡೆಸಿದಾಗ, ಆರೋಪಿ ಭರತ್ ಎಂಬಾತ ಈ ಅವಹೇಳನಕಾರಿ ಪೋಸ್ಟ್ ಅನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವುದು ಬೆಳಕಿಗೆ ಬಂದಿತ್ತು.

ಈ ಕುರಿತು ದೊರೆತ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 160/2026, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 197(1)(a), 197(1)(c) ಹಾಗೂ 353(2) ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ.

Continue Reading

Bantawala

ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನ: ಬಂಟ್ವಾಳದಲ್ಲಿ ಎಕ್ಸ್ (ಟ್ವಿಟ್ಟರ್) ಖಾತೆದಾರನ ವಿರುದ್ಧ FIR ದಾಖಲು

Published

on

ಬಂಟ್ವಾಳ: ಇತ್ತೀಚೆಗೆ ಬಿಸಿ ರೋಡಿನಲ್ಲಿ ನಡೆದ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟ್ಟರ್) ನಲ್ಲಿ ಆರೋಪಿಯ ಗುರುತಿನ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ, ಕೋಮು ಬಣ್ಣ ಬಳಿಯಲು ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಮದಕ ನಿವಾಸಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಸಿರಾಜ್ ಎಂ.ಯು. (29) ಅವರು ನೀಡಿದ ಲಿಖಿತ ದೂರಿನ ಮೇರೆಗೆ ಕಿರಣ್ ಆರಾಧ್ಯ (@KiranAradhyaadv) ಎಂಬ ಎಕ್ಸ್ ಖಾತೆದಾರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ: ದಿನಾಂಕ 16-07-2026 ರಂದು ಕಕ್ಕೆಪದವಿನ ಲಾವಣ್ಯ ಎಂಬ ಯುವತಿಯನ್ನು ಚೇತನ್ ಎಂಬಾತನು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದನು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರಣವನ್ನು ಆರೋಪಿ ಕಿರಣ್ ಆರಾಧ್ಯ ತನ್ನ ಎಕ್ಸ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಲ್ಲದೆ, ಇಂಗ್ಲಿಷ್‌ನಲ್ಲಿ “Monster with wrist watch on his left hand, pants above his ankles, killed a girl at Bantwal bus stand, Karnataka…” ಎಂದು ಬರೆದುಕೊಂಡಿದ್ದನು.

ದೂರಿನಲ್ಲಿ ಏನಿದೆ?: ಕೊಲೆ ಪ್ರಕರಣದ ಆರೋಪಿಯನ್ನು ಈಗಾಗಲೇ ಪೊಲೀಸರು ಗುರುತಿಸಿದ್ದರೂ ಸಹ, ದೂರುದಾರರ ಪ್ರಕಾರ ಆರೋಪಿ ಕಿರಣ್ ಆರಾಧ್ಯ ತನ್ನ ಪೋಸ್ಟ್‌ನಲ್ಲಿ ಆರೋಪಿಯ ಉಡುಪು ಮತ್ತು ಬಾಹ್ಯ ರೂಪವನ್ನು ಉಲ್ಲೇಖಿಸಿ, ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ತಪ್ಪು ಭಾವನೆಯನ್ನು ಸಮಾಜದಲ್ಲಿ ಮೂಡಿಸಲು ಪ್ರಯತ್ನಿಸಿದ್ದಾನೆ. ಈ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪೊಲೀಸ್ ಕ್ರಮ: ದೂರುದಾರರಾದ ಮೊಹಮ್ಮದ್ ಸಿರಾಜ್ ಅವರು ಜುಲೈ 17ರಂದು ರಾತ್ರಿ ನೀಡಿರುವ ದೂರನ್ನು ಸ್ವೀಕರಿಸಿರುವ ಬಂಟ್ವಾಳ ನಗರ ಪೊಲೀಸರು, ಆರೋಪಿ ಕಿರಣ್ ಆರಾಧ್ಯ ವಿರುದ್ಧ ಅಪರಾಧ ಸಂಖ್ಯೆ: 100/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 353(2) (ಸಾರ್ವಜನಿಕರಲ್ಲಿ ದ್ವೇಷ, ಅಸೂಯೆ ಅಥವಾ ಕೋಮು ಭಾವನೆ ಕೆರಳಿಸುವ ವರದಿ/ಹೇಳಿಕೆ ಪ್ರಕಟಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ

Continue Reading

arrest

ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ: ಹಲವು ಕೇಸ್‌ಗಳಲ್ಲಿ ತಲೆಮರೆಸಿಕೊಂಡಿದ್ದ ಕುಡ್ತಮುಗೇರು ನಿವಾಸಿ ಸೈಬರ್ ಪೊಲೀಸರ ವಶಕ್ಕೆ!

Published

on

ಮಂಗಳೂರು: ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಪಡೆದು, ಸೈಬರ್ ವಂಚನೆಯ ಹಣದ ಅಕ್ರಮ ವಹಿವಾಟಿಗೆ (ಮ್ಯೂಲ್ ಅಕೌಂಟ್) ನೀಡಿ ಸಹಕರಿಸುತ್ತಿದ್ದ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಜುಬೈರ್ (32) ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ (ಅ.ಕ್ರ. 104-2025, U/S 66(C), 66(D) IT Act -2008 ಮತ್ತು ಕಲಂ: 126 (2), 308(6), 318(4), 319(2), 3(5) BNS) ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು, ಜುಲೈ 3ರಂದು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ: ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ಬಂಧಿತ ಆರೋಪಿ ಜುಬೈರ್ ದೊಡ್ಡ ಮಟ್ಟದ ಕ್ರಿಮಿನಲ್ ಹಿನ್ನೆಲೆ ಹೊಂದಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಒಂದು ಪ್ರಕರಣ (ಅ.ಕ್ರ 180/2022) ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 04 ಪ್ರಕರಣಗಳು ದಾಖಲಾಗಿವೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತ ಮಾನ್ಯ ನ್ಯಾಯಾಲಯದ ವಿಚಾರಣೆಗೂ ಹಾಜರಾಗದೆ, ಪೊಲೀಸರ ಕೈಗೂ ಸಿಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ಸೈಬರ್ ಠಾಣೆಯ ಪೊಲೀಸರು ಆರೋಪಿಯನ್ನು ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.




Continue Reading

Trending

Copyright © 2025 Deevatige

error: Content is protected !!