Connect with us

complaint

ಪುತ್ತೂರು ಶಾಸಕ ಅಶೋಕ್ ರೈಗೆ ಕಾನೂನು ಸಂಕಷ್ಟ: ಮಾಜಿ ಶಾಸಕ ಸಂಜೀವ ಮಠಂದೂರು ಅವರಿಂದ ಕ್ರಿಮಿನಲ್ ಕೇಸ್ ದಾಖಲು!

Published

on

ಪುತ್ತೂರು: ಮಾಜಿ ಶಾಸಕರ ವಿರುದ್ಧ ಲಂಚ ಸ್ವೀಕಾರದ ಸುಳ್ಳು ಆರೋಪ ಮಾಡಿ ಮಾನಹಾನಿ ಉಂಟುಮಾಡಿದ ಆರೋಪದಡಿ, ಪುತ್ತೂರಿನ ಹಾಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಪುತ್ತೂರಿನ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸುಳ್ಳು ಆರೋಪದ ಕಿಡಿ: ಕಳೆದ ಮೇ 25, 2026 ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಕಚೇರಿಯಲ್ಲಿ ಮಾಧ್ಯಮದವರನ್ನು ಕರೆಸಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ, “ಪುತ್ತೂರಿನ ಇದೇ ಹಿಂದಿನ ಮಾಜಿ ಶಾಸಕರು ಅವರ ಸಮಯದಲ್ಲಿ ಹಕ್ಕು ಪತ್ರ ನೀಡಲು ಎಕ್ರೆಗೆ 2 ಲಕ್ಷ ಹಣವನ್ನು ತೆಗೆದುಕೊಳ್ಳುತ್ತಿದ್ದರು. ನನ್ನ ಬಳಿ ಇದಕ್ಕೆ 45 ಜನ ಸಾಕ್ಷಿಗಳಿದ್ದಾರೆ” ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರ ವಿರುದ್ಧ ಸಾರ್ವಜನಿಕವಾಗಿ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದರು.

ಮಾನಹಾನಿ ವಿರುದ್ಧ ಪೊಲೀಸ್ ದೂರು ಹಾಗೂ ಕೋರ್ಟ್ ಮೆಟ್ಟಿಲೇರಿದ ಮಾಜಿ ಶಾಸಕ: ಹಾಲಿ ಶಾಸಕರ ಈ ಹೇಳಿಕೆಯು ಸಮಾಜದಲ್ಲಿ ತಮ್ಮ ತೇಜೋವಧೆ ಮಾಡುವ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದ ಸುಳ್ಳು ಹೇಳಿಕೆಯಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮೊದಲು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರ ಮುಂದುವರಿದ ಭಾಗವಾಗಿ, ನಿನ್ನೆ (ಜುಲೈ 4, 2026) ಪುತ್ತೂರಿನ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ದಾಖಲೆ ಸಹಿತ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ.

ನ್ಯಾಯಾಲಯದಲ್ಲಿ ವಾದ ಮಂಡನೆ: ದೂರುದಾರರಾದ ಮಾಜಿ ಶಾಸಕ ಸಂಜೀವ ಮಠಂದೂರು ಅವರ ಪರವಾಗಿ ಪ್ರಖ್ಯಾತ ವಕೀಲರಾದ ಶಿವಾನಂದ .ಎಂ. ವಕ್ಕೆತ್ತಿರಿ ವಿಟ್ಲ ಅವರು ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸಿದರು. ದೂರನ್ನು ಸ್ವೀಕರಿಸಿ, ಪ್ರಾಥಮಿಕ ವಾದ ಆಲಿಸಿದ ನ್ಯಾಯಾಲಯವು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.

ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಈ ಹಕ್ಕುಪತ್ರ ವಿವಾದ ಮತ್ತು ಕಾನೂನು ಹೋರಾಟ ಸದ್ಯ ಪುತ್ತೂರು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಅಲೆಕ್ಕಾಡಿಯಲ್ಲಿ ಜೀವಭಯದಲ್ಲೇ ಸಾರ್ವಜನಿಕರ ಸಂಚಾರ: ಹಿರಿದಾದ ಮರ, ವಿದ್ಯುತ್ ತಂತಿಗಳ ಜಾಲ – ದುರಂತ ಸಂಭವಿಸುವ ಮುನ್ನ ಮುನ್ನೆಚ್ಚರಿಕೆ ವಹಿಸದಿದ್ದರೆ ಅಪಾಯ ಖಚಿತ!

Published

on

ಮುರುಳ್ಯ / ಸುಳ್ಯ: ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮದ್ಯೆ ಬರುವ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಬಸ್ ತಂಗುದಾಣದ ಬಳಿ ಸಾರ್ವಜನಿಕರ ಜೀವಕ್ಕೆ ಭಾರಿ ಬೆದರಿಕೆ ಎದುರಾಗಿದೆ. ರಸ್ತೆ ಬದಿಯಲ್ಲಿರುವ ಹಿರಿದಾದ ಅಕೇಶಿಯಾ ಹಾಗೂ ಅಪಾಯಕಾರಿ ನೀಲಗಿರಿ ಮರಗಳು ತಂಗುದಾಣ ಹಾಗೂ ವಿದ್ಯುತ್ ಲೈನ್‌ಗಳ ಮೇಲೆ ವಾಲಿ ನಿಂತಿದ್ದು, ಯಾವಾಗ ಬೇಕಾದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ.

ಸ್ಥಳೀಯರ ಆತಂಕವೇನು?

ಅಲೆಕ್ಕಾಡಿ ಬಸ್ ನಿಲ್ದಾಣವು ಪ್ರತಿನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು ಹಾಗೂ ಸಾರ್ವಜನಿಕರಿಂದ ರಶ್ ಆಗಿರುತ್ತದೆ. ಬಸ್ ಕಾಯುವ ಪ್ರಯಾಣಿಕರು ಹಾಗೂ ಆಟೋ ರಿಕ್ಷಾಗಳು ನಿಲ್ಲುವ ಸ್ಥಳದ ಮೇಲೆಯೇ ಈ ಬೃಹತ್ ಮರಗಳ ಕೊಂಬೆಗಳು ಮತ್ತು ವಿದ್ಯುತ್ ಮಾರ್ಗಗಳು (Power lines) ಹಾದುಹೋಗಿವೆ.

ಕಳೆದ ವರ್ಷವೇ ಈ ಸಂಬಂಧ ಗ್ರಾಮಸ್ಥರು ಪಂಜ ವಲಯ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಆದರೆ ಅರಣ್ಯ ಇಲಾಖೆ ಕೇವಲ ಒಂದೇ ಒಂದು ಮರವನ್ನು ತೆರವುಗೊಳಿಸಿ ಕೈತೊಳೆದುಕೊಂಡಿದೆ ಹೊರತು ಪೂರ್ಣ ಪ್ರಮಾಣದ ಪರಿಹಾರ ಕಲ್ಪಿಸಿಲ್ಲ.

ಮತ್ತೆ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಗೆ ದೂರು:

ಇದೀಗ ಮಳೆಗಾಲ ತೀವ್ರಗೊಳ್ಳುತ್ತಿದ್ದು, ಗಾಳಿ-ಮಳೆಗೆ ಈ ಮರಗಳು ಬಿದ್ದರೆ ಕನಿಷ್ಠ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಸಮಗೊಳ್ಳುವ ಜತೆಗೆ, ಸ್ಥಳದಲ್ಲಿದ್ದವರ ಪ್ರಾಣಕ್ಕೇ ಕಂಟಕವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಲೆಕ್ಕಾಡಿಯ ನಾಗರಿಕರು ಮುರುಳ್ಯ ಗ್ರಾಮ ಪಂಚಾಯತ್, ಪಂಜ ವಲಯ ಅರಣ್ಯಾಧಿಕಾರಿಗಳು ಹಾಗೂ ಮೆಸ್ಕಾಂ ಇಲಾಖೆಗೆ ಪುನಃ ಮನವಿ ಸಲ್ಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಐ ಬ್ಯಾನರ್ ಅಭಿಯಾನ:

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು “ಅಲೆಕ್ಕಾಡಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕರಿಗೆ ಜೀವಭಯ!” ಎಂಬ ಎಐ (AI) ವಿನ್ಯಾಸದ ಜಾಗೃತಿ ಪೋಸ್ಟರ್‌ಗಳು ಹಾಗೂ ಅರ್ಜಿ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಮಾಡುತ್ತಿದ್ದು, ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ.

ತಕ್ಷಣವೇ ಕ್ರಮಕ್ಕೆ ಆಗ್ರಹ:

ಯಾವುದೇ ಅನಾಹುತ ಅಥವಾ ಜೀವಹಾನಿ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯ ಆಡಳಿತ ಜಂಟಿ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿರುವ ಮರಗಳು ಮತ್ತು ಕೊಂಬೆಗಳನ್ನು ತಕ್ಷಣವೇ ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ

Continue Reading

Belthangady

ಸೌಜನ್ಯ ಪ್ರಕರಣ: ಇದು ಮರು ತನಿಖೆಯಷ್ಟೇ ಅಲ್ಲ, ತನಿಖಾಧಿಕಾರಿಗಳ ಹೊಣೆಗಾರಿಕೆಯ ಪ್ರಶ್ನೆ!

Published

on

ವಿಶೇಷ ವಿಶ್ಲೇಷಣಾ ವರದಿ

ಧರ್ಮಸ್ಥಳ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಇತ್ತೀಚಿನ ವಿಚಾರಣೆ ಹಾಗೂ ಮರು ತನಿಖೆಯ ಸಾಧ್ಯತೆಯ ಬೆಳವಣಿಗೆಗಳು, ಕೇವಲ ಒಂದು ಹಳೆಯ ಕ್ರಿಮಿನಲ್ ಕಡತವನ್ನುಇನ್ನೊಂದು ಸಂಸ್ಥೆಗೆ ವರ್ಗಾಯಿಸುವ ಪ್ರಕ್ರಿಯೆಯಾಗಬಾರದು. ಇದು ಭಾರತೀಯ ತನಿಖಾ ವ್ಯವಸ್ಥೆಗೆ ತನ್ನ ವಿಶ್ವಾಸಾರ್ಹತೆಯನ್ನು ನಾಗರಿಕ ಸಮಾಜದ ಎದುರು ಸಾಬೀತು ಪಡಿಸುವ ಮತ್ತು ನಂಬಿಕೆ ಹಾಗೂ ಗೌರವವನ್ನು ಉಳಿಸಿಕೊಳ್ಳುವ ಅತ್ಯಂತ ಗಂಭೀರ ಸುಸಂದರ್ಭವಾಗಿದೆ.

ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದ ಬಳಿಕ, ನ್ಯಾಯಾಲಯವು ಸಿಬಿಐ ತನಿಖೆಯ ವೈಖರಿಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎತ್ತಿದ್ದು, ಹೊಸ ತನಿಖೆಯ ಭರವಸೆ ಮೂಡಿದೆ. ಆದರೆ, ಈ ಹಂತದಲ್ಲಿ ಉದ್ಭವಿಸುವ ಅತ್ಯಂತ ಗಂಭೀರ ಪ್ರಶ್ನೆ ಎಂದರೆ—“ಹಿಂದಿನ ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂಬುದನ್ನು ನ್ಯಾಯಾಲಯವೇ ಒಪ್ಪಿಕೊಂಡ ಮೇಲೆ, ಆ ಲೋಪಗಳಿಗೆ ಕಾರಣರಾದ ತನಿಖಾಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಬೇಡವೇ?”

ತನಿಖಾಧಿಕಾರಿಯ ಕರ್ತವ್ಯ ಲೋಪವನ್ನು ತನಿಖೆ ಮಾಡೋರು ಯಾರು?

ಒಬ್ಬ ಸಾಮಾನ್ಯ ನಾಗರಿಕ ಕಾನೂನು ಉಲ್ಲಂಘಿಸಿದರೆ ಅಥವಾ ತಪ್ಪು ಮಾಡಿದರೆ ಆತನ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆದರೆ ಒಂದು ಜವಾಬ್ದಾರಿಯುತ ಅಧಿಕಾರವನ್ನು ಹೊಂದಿರುವ ತನಿಖಾಧಿಕಾರಿಯೇ ತನಿಖೆಯಲ್ಲಿ ಗಂಭೀರ ಲೋಪವೆಸಗಿದಾಗ ಈ ತಪ್ಪಿತಸ್ಥಅಧಿಕಾರಿಯ ಕರ್ತವ್ಯಲೋಪವನ್ನು ಪ್ರಶ್ನಿಸುವವರು ಯಾರು ಎಂಬುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆ!

ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ನಡೆಯಬೇಕು ಎಂಬ ಬೇಡಿಕೆ ಎಷ್ಟರಮಟ್ಟಿಗೆ ನ್ಯಾಯಸಮ್ಮತವೋ, ಅಷ್ಟೇ ಪ್ರಾಮುಖ್ಯತೆಯನ್ನು ಈ ಹಿಂದೆ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ ಅಧಿಕಾರಿಗಳ ಕರ್ತವ್ಯ ಪರಿಶೀಲನೆಗೂ ನೀಡಬೇಕಾಗಿದೆ. ಮರು ತನಿಖೆ ಎಂದರೆ ಕೇವಲ “ಹೊಸ ಆರೋಪಿಯನ್ನು ಹುಡುಕುವುದು” ಮಾತ್ರವಲ್ಲ; “ಹಿಂದಿನ ತನಿಖೆಗಳು ಏಕೆ ಮತ್ತು ಯಾರಿಂದ ಮತ್ತು ಹೇಗೆ ವಿಫಲವಾದವು?” ಎಂಬುದರ ಸತ್ಯಾಸತ್ಯತೆಯನ್ನು ಹೊರಗೆಳೆಯುವುದೂ ಆಗಿದೆ.

ಮೂರೂ ಹಂತಗಳ ವೈಫಲ್ಯ: ಪ್ರಶ್ನೆಗೆ ಸಿಲುಕಿದ ತನಿಖಾ ಸಂಸ್ಥೆಗಳು

ಈ ಪ್ರಕರಣದಲ್ಲಿ ತನಿಖೆಯು ಮೂರು ಪ್ರಮುಖ ಹಂತಗಳನ್ನು ದಾಟಿ ಬಂದಿದೆ:

  1. ಸ್ಥಳೀಯ ಪೊಲೀಸ್ ತನಿಖೆ (ಜಿಲ್ಲಾ ಮಟ್ಟ)
  2. ರಾಜ್ಯ ಸಿಐಡಿ ತನಿಖೆ (ರಾಜ್ಯ ಸರ್ಕಾರದ ಅಧೀನ)
  3. ಸಿಬಿಐ ತನಿಖೆ (ಕೇಂದ್ರ ಸರ್ಕಾರದ ಅಧೀನ)

ಈ ಮೂರೂ ಹಂತಗಳ ತನಿಖೆಗಳು ಮುಗಿದ ಮೇಲೆಯೂ ಸಮಾಜದಲ್ಲಿ ಮತ್ತು ಸಂತ್ರಸ್ತ ಕುಟುಂಬದಲ್ಲಿ ಸತ್ಯದ ಬಗ್ಗೆ ಅನುಮಾನಗಳು ಇನ್ನೂ ಉಳಿದಿವೆ ಎಂದರೆ, ಪ್ರಶ್ನೆ ಕೇವಲ ಆರೋಪಿಯ ಮೇಲಷ್ಟೇ ಅಲ್ಲ— ಈವರೆಗೆ ತನಿಖೆ ನಡೆಸಿದ ತನಿಖಾಸಂಸ್ಥೆಗಳ ಮೇಲೆ ಹಾಗೂ ಆಡಳಿತ ವ್ಯವಸ್ಥೆಗಳ ಮೇಲೆ ಅಪನಂಬಿಕೆ ಬಂದಿದೆ. ಇದನ್ನು ಹೋಗಲಾಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ.

ಅಧಿಕಾರದ ಸರಪಳಿಗಳು ಬೇರೆ ಬೇರೆಯಾಗಿರಬಹುದು; ಆದರೆ ಭಾರತೀಯ ಸಂವಿಧಾನದ ಮುಂದೆ ಪ್ರತಿಯೊಂದು ತನಿಖಾ ಸಂಸ್ಥೆಯ ಕರ್ತವ್ಯವೂ ಒಂದೇ:

  • ಸತ್ಯವನ್ನು ಪತ್ತೆಹಚ್ಚುವುದು
  • ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು
  • ಯಾವುದೇ ಕಾರಣಕ್ಕೂ ನಿರಪರಾಧಿಯನ್ನು ಬಲಿಪಶು ಮಾಡದಿರುವುದು
  • ನಿಜವಾದ ಅಪರಾಧಿಯನ್ನು ಯಾವುದೇ ಪ್ರಭಾವಕ್ಕೂ ಒಳಗಾಗದೆ ರಕ್ಷಿಸದಿರುವುದು

ಈ ಮೂಲಭೂತ ಕರ್ತವ್ಯದಲ್ಲಿ ವಿಫಲವಾಗುವುದು ಕೇವಲ ಆಡಳಿತಾತ್ಮಕ ತಪ್ಪಲ್ಲ. ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ಅದು ಕರ್ತವ್ಯಲೋಪ, ತನಿಖಾ ನಿರ್ಲಕ್ಷ್ಯ, ಸಾಕ್ಷ್ಯ ನಾಶ/ನಿರ್ವಹಣೆಯ ವೈಫಲ್ಯ ಅಥವಾ ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ.

ಹೊಸ ತನಿಖಾ ಸಂಸ್ಥೆಯ ಮುಂದೆ ಇರಬೇಕಾದ ನೈಜ ಆದ್ಯತೆಗಳು

ಒಂದು ವೇಳೆ ಈ ಪ್ರಕರಣದಲ್ಲಿ ಹೊಸದಾಗಿ ವಿಶೇಷ ತನಿಖಾ ತಂಡ ರಚನೆಯಾದರೆ, ಅದರ ಮೊದಲ ಕರ್ತವ್ಯ ಕೇವಲ “ಯಾರು ಅಪರಾಧಿ?” ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಷ್ಟೇ ಆಗಿರಬಾರದು. ಹಾಗೂ ಪ್ರಕರಣ ದಾರಿತಪ್ಪಲು ಕಾರಣರು ಯಾರು.? ಎಂಬುವುದರ ಪತ್ತೆಗಾಗಿ:

  • ಹಿಂದಿನ ತನಿಖೆಯಲ್ಲಿ ಯಾವ ಅಧಿಕಾರಿಗಳು ಯಾವ ರೀತಿಯ ಕರ್ತವ್ಯ ನಿರ್ವಹಿಸಿದರು?
  • ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು ಮತ್ತು ಯಾವುದನ್ನು ಉದ್ದೇಶಪೂರ್ವಕವಾಗಿ ಅಥವಾ ನಿರ್ಲಕ್ಷ್ಯದಿಂದ ಸಂಗ್ರಹಿಸಲಿಲ್ಲ?
  • ಯಾವ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಯಿತು ಹಾಗೂ ಯಾವುದನ್ನು ಕಡೆಗಣಿಸಲಾಯಿತು?
  • ತನಿಖೆಯು ತಪ್ಪು ದಿಕ್ಕಿಗೆ ತಿರುಗಲು ಯಾವ ಅಧಿಕಾರಿಯ ನಿರ್ಧಾರ ಕಾರಣವಾಯಿತು?

ನೂತನ ತನಿಖಾ ಸಂಸ್ಥೆ ಎಂದರೆ ಅದು ಕೇವಲ ಹೆಸರು ಬದಲಾವಣೆ ಎಂದಾಗಬಾರದು. ಅದು ಹಿಂದಿನ ತನಿಖಾ ಲೋಪಗಳ ಮೇಲೆಯೂ ಸ್ವತಂತ್ರವಾಗಿ ಬೆಳಕು ಚೆಲ್ಲುವ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವ ಸಂಸ್ಥೆಯಾಗಬೇಕು.

ಸಂವಿಧಾನದ ಆಶಯ ಮತ್ತು ರಾಜಕೀಯ ಹಿತಾಸಕ್ತಿಗಳ ಸಂಘರ್ಷ

ಭಾರತೀಯ ಸಂವಿಧಾನದ ಕಲಂ 14 (ಕಾನೂನಿನ ಮುಂದೆ ಎಲ್ಲರೂ ಸಮಾನ) ಮತ್ತು ಕಲಂ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆ) ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಯುತ ಪ್ರಕ್ರಿಯೆ ಮತ್ತು ತನಿಖೆಯನ್ನು ಖಾತರಿಪಡಿಸುತ್ತವೆ. ತನಿಖೆಯೇ ಪಕ್ಷಪಾತಪೂರ್ಣವಾಗಿದ್ದರೆ ಅಥವಾ ಗಂಭೀರ ಲೋಪಗಳಿಂದ ಕೂಡಿದ್ದರೆ, ಸಮಗ್ರ ನ್ಯಾಯವ್ಯವಸ್ಥೆಯ ಬುನಾದಿಯೇ ದುರ್ಬಲಗೊಳ್ಳುತ್ತದೆ.

ಇಲ್ಲಿ ಮತ್ತೊಂದು ಪ್ರಮುಖ ಪ್ರಶ್ನೆ ಎದುರಾಗುತ್ತದೆ: ತನಿಖಾ ಸಂಸ್ಥೆಗಳು ಇರುವುದು ಯಾರಿಗೆ? ಸರ್ಕಾರಗಳಿಗಾಗಿಯೇ? ಅಧಿಕಾರಿಗಳಿಗಾಗಿಯೇ? ರಾಜಕೀಯ ಪಕ್ಷಗಳಿಗಾಗಿಯೇ? ಅಥವಾ ದೇಶದ ನೊಂದ ಕುಟುಂಬದ ಜನಸಾಮಾನ್ಯರಿಗಾಗಿಯೇ?

ಕೇಂದ್ರದಲ್ಲಿ ಅಧಿಕಾರ ಪಡೆದಿರುವ ಪಕ್ಷದ ಬೆಂಬಲಿತರು ಕೇಂದ್ರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷದ ಬೆಂಬಲಿತರು ರಾಜ್ಯದ ಅಧೀನ ದಲ್ಲಿರುವ ತನಿಖಾ ಸಂಸ್ಥೆಗಳ ವೈಫಲ್ಯಗಳನ್ನು ಅಥವಾ ಲೋಪಗಳನ್ನು ಸಮರ್ಥಿಸಿಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ. ಸರ್ಕಾರ ಎಂದರೆ ಒಂದು ರಾಜಕೀಯ ಪಕ್ಷದ ಗೊಂಬೆಯಲ್ಲ; ಅದು ಸಂವಿಧಾನದಡಿಯಲ್ಲಿ ಸರ್ವರಿಗೂ ಸಮಾನ ನ್ಯಾಯ ಒದಗಿಸುವ ಸ್ಥಾಪಿತವಾದ ಸಾರ್ವಜನಿಕ ವ್ಯವಸ್ಥೆ. ಪೊಲೀಸ್ ಅಥವಾ ಯಾವುದೇ ಸರಕಾರಿ ಇಲಾಖೆಯ ಅಧಿಕಾರಿ ಎಂದರೆ ಯಾವುದೇ ಪಕ್ಷದ ಕಾರ್ಯಕರ್ತನಲ್ಲ. ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಅಧಿಕಾರಿಗಳು ಬದಲಾಗುತ್ತಿರ ಬಹುದು, ಆದರೆ ನ್ಯಾಯದ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.

ಬೇಕಾಗಿದೆ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ)

ತನಿಖಾಧಿಕಾರಿ ಮಾಡುವ ಒಂದು “ಉದ್ದೇಶಪೂರ್ವಕ ಕರ್ತವ್ಯ ಲೋಪ”ದಿಂದಾಗಿ ಒಬ್ಬ ನಿರಪರಾಧಿ ವರ್ಷಗಟ್ಟಲೆ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು, ನಿಜವಾದ ಅಪರಾಧಿ ಸಮಾಜದಲ್ಲಿ ಮುಕ್ತವಾಗಿ ಓಡಾಡಬಹುದು, ಮತ್ತು ಒಂದು ಬಡ ಕುಟುಂಬ ಜೀವನಪೂರ್ತಿ ನ್ಯಾಯಕ್ಕಾಗಿ ರಸ್ತೆಯಲ್ಲಿ ಅಲೆಯಬೇಕಾಗಬಹುದು. ಆದ್ದರಿಂದ, ಸೌಜನ್ಯ ಪ್ರಕರಣದ ಮರು ತನಿಖೆಯ ಜೊತೆಗೆ ಒಂದು ಸ್ವತಂತ್ರ “Investigation Accountability Inquiry” (ತನಿಖಾ ಹೊಣೆಗಾರಿಕೆ ವಿಚಾರಣೆ) ಅತ್ಯಗತ್ಯವಾಗಿದೆ.

  • ಒಂದು ಮಗ್ಗಲಿನಲ್ಲಿ: ಅಪರಾಧದ ನೈಜ ತನಿಖೆ (ಅಪರಾಧಿಯನ್ನು ಪತ್ತೆಹಚ್ಚುವುದು).
  • ಮತ್ತೊಂದು ಮಗ್ಗಲಿನಲ್ಲಿ: ಹಿಂದಿನ ತನಿಖೆಗಳ ವೈಫಲ್ಯ ಮತ್ತು ಲೋಪಗಳ ಕುರಿತು ಸ್ವತಂತ್ರ ವಿಚಾರಣೆ.

ಇದು ವೈಯುಕ್ತಿಕ ದ್ವೇಷ ಸಾಧನೆ ಅಲ್ಲ, ಬದಲಾಗಿ “ಕಾನೂನಿಗಿಂತ ಯಾರೂ ಮೇಲಲ್ಲ—ತನಿಖೆಯ ಹೆಸರಿನಲ್ಲಿ ಕರ್ತವ್ಯಲೋಪ ಎಸಗಿದರೆ ಶಿಕ್ಷೆಯನ್ನು ಅನುಭವಿಸಲೇ ಬೇಕು “ ಎಂಬ ಸಂವಿಧಾನದ ಆಶಯವನ್ನು ಸ್ಥಾಪಿಸುವುದಕ್ಕಾಗಿ. ಆಗಿದೆ.

ನ್ಯಾಯದ ಕೊನೆಯ ಭರವಸೆ: ಸುಪ್ರೀಂ ಕೋರ್ಟ್ ಮಧ್ಯಪ್ರವೇಶ

ಸೌಜನ್ಯಗೆ ನ್ಯಾಯ ಸಿಗಬೇಕಾದರೆ ನಿಜವಾದ ಅಪರಾಧಿ ಯಾರು ಎಂಬುದು ಪತ್ತೆಯಾಗುವುದು ಎಷ್ಟು ಮುಖ್ಯವೋ, ಈ ನ್ಯಾಯವನ್ನು ಹುಡುಕುವ ವ್ಯವಸ್ಥೆಯೇ ಏಕೆ ವಿಫಲವಾಯಿತು ಎಂಬ ಸತ್ಯ ಹೊರಬರುವುದೂ ಅಷ್ಟೇ ಮುಖ್ಯ. ಇಲ್ಲದಿದ್ದರೆ, ಇಂದು ಸೌಜನ್ಯ ಪ್ರಕರಣ, ನಾಳೆ ಮತ್ತೊಂದು ಬಡ ಕುಟುಂಬದ ಮಗಳ ಪ್ರಕರಣ—ಮತ್ತೆ ಅದೇ ಕಡತಗಳನ್ನು ತಿರುಚಿ ನೋಡಿ ನಕಲು ಮಾಡುವುದು, ಮುಖವಾಡ ಬದಲಿಸಿದ ಅದೇ ಅಧಿಕಾರಿಗಳು, ಅದೇ ದಾಖಲೆಗಳು ಮತ್ತು ಕೊನೆಗೆ “ಸಾಕ್ಷ್ಯಾಧಾರಗಳ ಕೊರತೆ, ಕೇಸ್‌ ಕ್ಲೋಸ್” ಎಂಬ ಅದೇ ಹಳೆಯ ವ್ಯವಸ್ಥೆಯೇ ಪುನರಾವರ್ತನೆಯಾಗುತ್ತಲೇ ಇರುತ್ತದೆ ಎಂಬುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ನೋವಿನ ಮಾತುಗಳು.

ಸುಪ್ರೀಂ ಕೋರ್ಟ್‌ನ ಈ ಇತ್ತೀಚಿನ ಮಧ್ಯಪ್ರವೇಶವು ದೇಶದ ನ್ಯಾಯವ್ಯವಸ್ಥೆಗೆ ಸಿಕ್ಕಿರುವ ಒಂದು ಐತಿಹಾಸಿಕ ಅವಕಾಶವಾಗಿದೆ. ಈ ಅವಕಾಶವನ್ನು ಕೇವಲ ಒಂದು ಪ್ರಕರಣದ ಮರು ತನಿಖೆಗೆ ಸೀಮಿತಗೊಳಿಸದೆ, ಭಾರತದಲ್ಲಿ ತನಿಖಾ ಸಂಸ್ಥೆಗಳ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಹೊಸ ಮಾನದಂಡವನ್ನು ಸ್ಥಾಪಿಸಲು ಬಳಸಿಕೊಳ್ಳಬೇಕಿದೆ.

ಸೌಜನ್ಯಗೆ ನ್ಯಾಯ ಸಿಗಬೇಕು, ಸತ್ಯಕ್ಕೆ ಜಯವಾಗಬೇಕು ಮತ್ತು ತನಿಖಾ ವೈಫಲ್ಯವೆಸಗಿದ ವ್ಯವಸ್ಥೆಯೂ ನ್ಯಾಯದ ಮುಂದೆ ತಲೆಬಾಗಲೇಬೇಕು.

Continue Reading

Article

ನಿಯಮದ ಹೆಸರಿನಲ್ಲಿ ಅಮಾನವೀಯತೆ; KSRTC ನಿರ್ವಾಹಕನ ಹಠಕ್ಕೆ ಕಬಕದಲ್ಲಿ ಕಣ್ಣೀರಿಟ್ಟ ವಿಟ್ಲದ ಶಾಲಾ ಬಾಲಕ!

Published

on

ವಿಟ್ಲ: “ಸಾರ್ವಜನಿಕ ಸೇವೆ” ಎಂಬ ಬೋರ್ಡ್ ಹಾಕಿಕೊಂಡು ರಸ್ತೆಗಿಳಿಯುವ ಸರ್ಕಾರಿ ಬಸ್‌ಗಳು ಸಾರ್ವಜನಿಕರ ಪ್ರಾಣ ಹಿಂಡುವ ಕೆಲಸಕ್ಕೆ ಕೈಹಾಕಿವೆಯೇ? ನಿಯಮಗಳ ಹೆಸರಿನಲ್ಲಿ ಕನಿಷ್ಠ ಮಾನವೀಯತೆಯನ್ನೂ ಮರೆತು ವರ್ತಿಸುವ ಸಾರಿಗೆ ಸಿಬ್ಬಂದಿಯ ಉಡಾಫೆಗೆ ಕೊನೆಯೇ ಇಲ್ಲವೇ? ಹೌದು, ಇಂದು ಶನಿವಾರ ಮಧ್ಯಾಹ್ನ ವಿಟ್ಲದಲ್ಲಿ ನಡೆದ ಘಟನೆಯೊಂದು ಇಡೀ ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಸಿನ ನಿರ್ವಾಹಕ (ಕಂಡೆಕ್ಟರ್) ಹಾಗೂ ಸಂಚಾರ ನಿಯಂತ್ರಕರ (ಟ್ರಾಫಿಕ್ ಕಂಟ್ರೋಲರ್) ಬೇಜವಾಬ್ದಾರಿತನಕ್ಕೆ ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ಅಮಾಯಕ ಬಾಲಕನೊಬ್ಬ ಕಬಕ ನಿಲ್ದಾಣದಲ್ಲಿ ಕಣ್ಣೀರು ಹಾಕುತ್ತಾ ನಿಲ್ಲುವಂತಾದ ಘೋರ ಘಟನೆ ನಡೆದಿದೆ.

ಪುತ್ತೂರು ಪುತ್ತೂರು ಎಂದು ಕೂಗಿ ಜನ ತುಂಬಿಸಿದ್ರು, ಕಂಬಳಬೆಟ್ಟು ಅಂದರೂ ಕಬಕಕ್ಕೆ ಟಿಕೆಟ್ ಕೊಟ್ಟರು!

ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಪರಿಸರದ ನಿವಾಸಿಯಾಗಿರುವ ಈ ಬಾಲಕ ಎಂದಿನಂತೆ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಮರಳಲು ವಿಟ್ಲ ಸಂತೆ ಮಾರುಕಟ್ಟೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ. ಈ ವೇಳೆ ಕಾಸರಗೋಡು-ಧರ್ಮಸ್ಥಳ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ಸು (KA19 F 3299) ಅಲ್ಲಿಗೆ ಬಂದಿದೆ. ನಿರ್ವಾಹಕ ಜೋರಾಗಿ “ಪುತ್ತೂರು.. ಪುತ್ತೂರು..” ಎಂದು ಕೂಗುತ್ತಾ ಜನರನ್ನು ತುಂಬಿಸುತ್ತಿದ್ದರಿಂದ, ಪುತ್ತೂರು ರಸ್ತೆಯ ಕಂಬಳಬೆಟ್ಟುವಿಗೆ ಹೋಗಬೇಕಾಗಿದ್ದ ಬಾಲಕ ಸಹಜವಾಗಿಯೇ ಆ ಬಸ್ಸನ್ನು ಹತ್ತಿದ್ದಾನೆ.

ಬಸ್ ಹತ್ತಿದ ಬಾಲಕ ತನಗೆ ‘ಕಂಬಳಬೆಟ್ಟು’ ಎಂದು ಹೇಳಿ ಹಣ ನೀಡಿದ್ದಾನೆ. ಆದರೆ ನಿರ್ವಾಹಕ ಆತನಿಗೆ ಕಬಕಕ್ಕೆ ಟಿಕೆಟ್ ನೀಡಿ ಸೈಲೆಂಟಾಗಿದ್ದಾನೆ. ಚಿಕ್ಕ ಮಗುವಾಗಿದ್ದರಿಂದ ಬಾಲಕನಿಗೆ ಟಿಕೆಟ್‌ನಲ್ಲಿ ಏನಿದೆ ಎಂದು ಗಮನಿಸಲು ಸಾಧ್ಯವಾಗಿಲ್ಲ.

“ಇಲ್ಲಿ ಸ್ಟಾಪ್ ಇಲ್ಲ, ಇಳಿಸಲ್ಲ!” – ಗೋಗರೆದರೂ ಕರಗದ ಕಂಡೆಕ್ಟರ್ ಹೃದಯ

ಬಸ್ಸು ಕಂಬಳಬೆಟ್ಟು ದರ್ಗಾ ಬಳಿ ತನ್ನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಲಕ ಇಳಿಯುವುದಕ್ಕಾಗಿ ನಿರ್ವಾಹಕನಲ್ಲಿ ವಿನಂತಿಸಿದ್ದಾನೆ. ಆದರೆ ಆ ವೇಳೆ ಕಂಡೆಕ್ಟರ್ ನೀಡಿದ ಉತ್ತರ ಬಾಲಕನಿಗೆ ಆತಂಕದ ಸುನಾಮಿಯನ್ನೇ ಎಬ್ಬಿಸಿದೆ!

“ಇಲ್ಲಿ ಸ್ಟಾಪ್ ಇಲ್ಲ, ಮುಂದಿನ ಸ್ಟಾಪ್ ಇರೋದೇ ಕಬಕದಲ್ಲಿ. ಅಲ್ಲಿಯ ತನಕ ಗಾಡಿ ನಿಲ್ಲಿಸಲ್ಲ, ನೀನು ಅಲ್ಲೇ ಇಳಿಬೇಕು” ಎಂದು ನಿರ್ವಾಹಕ ಗಡುಸಾಗಿ ಹೇಳಿದ್ದಾನೆ.

ತನ್ನ ನಿಲ್ದಾಣದಿಂದ ಬರೋಬ್ಬರಿ 4 ಕಿಲೋಮೀಟರ್ ದೂರವಿರುವ ಕಬಕದಲ್ಲಿ ಇಳಿಯಬೇಕು ಎಂದು ಕೇಳಿ ಬಾಲಕ ತೀವ್ರ ಗಾಬರಿಗೊಂಡಿದ್ದಾನೆ. ತಾನು ಒಬ್ಬನೇ ಇರುವುದು, ಕಂಬಳಬೆಟ್ಟು ಬಿಟ್ಟು ಬೇರೆಲ್ಲೂ ಹೋದವನಲ್ಲ ಎಂಬ ಭಯದಿಂದ ತನಗೆ ಇಳಿಯಲು ಅವಕಾಶ ಮಾಡಿಕೊಡುವಂತೆ ನಿರ್ವಾಹಕನ ಬಳಿ ಪದೇ ಪದೇ ಗೋಗರೆದಿದ್ದಾನೆ. ಆದರೂ ಆ ಕಂಡೆಕ್ಟರ್ ಹೃದಯ ಕರಗಲಿಲ್ಲ. ಬಸ್ಸೇನೂ ಆಕಾಶದಲ್ಲಿ ಹಾರುವ ವಿಮಾನವಲ್ಲ, ಹಳಿಗಳ ಮೇಲೆ ಓಡುವ ರೈಲೂ ಅಲ್ಲ; ಬಾಲಕ ತಪ್ಪು ಗ್ರಹಿಕೆಯಿಂದ ಬಸ್ ಹತ್ತಿದ್ದಾನೆ ಎಂದು ತಿಳಿದಿದ್ದರೂ, ಕನಿಷ್ಠ ಮಾನವೀಯತೆಯ ನೆಲೆಗಟ್ಟಿನಲ್ಲಿ ಬಸ್ ನಿಲ್ಲಿಸಿ ಆ ಮಗುವನ್ನು ಇಳಿಸುವ ಸೌಜನ್ಯವನ್ನು ಆತ ತೋರಿಸಲಿಲ್ಲ. ಕೊನೆಗೂ ಹಠ ಹಿಡಿದು ಆ ಪುಟ್ಟ ಮಗುವನ್ನು 4 ಕಿ.ಮೀ ದೂರದ ಕಬಕದಲ್ಲೇ ಇಳಿಸಿ ಬಸ್ ಮುನ್ನಡೆಸಿದ್ದಾನೆ!

ಕಬಕದಲ್ಲಿ ಕಣ್ಣೀರಿಡುತ್ತಾ ನಿಂತ ಬಾಲಕ!

ಯಾವತ್ತೂ ಹೆತ್ತವರನ್ನು ಬಿಟ್ಟು ಏಕಾಂಗಿಯಾಗಿ ವಿಟ್ಲ ಮತ್ತು ಕಂಬಳಬೆಟ್ಟು ಪರಿಸರ ದಾಟದ ಆ 6ನೇ ತರಗತಿಯ ಮಗು, ಅಪರಿಚಿತ ಕಬಕ ನಿಲ್ದಾಣದಲ್ಲಿ ದಿಕ್ಕುತೋಚದೆ, ಭಯ ಮತ್ತು ನೋವಿನಿಂದ ಕಣ್ಣೀರು ಹಾಕುತ್ತಾ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲುವಂತಾಯಿತು. ತಪ್ಪು ಸಾರಿಗೆ ಸಿಬ್ಬಂದಿಯದ್ದೇ ಆಗಿತ್ತು. ಏಕೆಂದರೆ ಅದು ನಿಗದಿತ ನಿಲುಗಡೆಯ (ಲಿಮಿಟೆಡ್ ಸ್ಟಾಪ್) ಬಸ್ಸಾಗಿದ್ದರೆ, ವಿಟ್ಲದಲ್ಲಿ ಜನರನ್ನು ಹತ್ತಿಸುವಾಗಲೇ ಕಂಬಳಬೆಟ್ಟುವಿಗೆ ಸ್ಟಾಪ್ ಇಲ್ಲ ಎಂಬ ಮಾಹಿತಿಯನ್ನು ನಿರ್ವಾಹಕ ನೀಡಬೇಕಿತ್ತು. ಅದನ್ನು ಬಿಟ್ಟು ಕೇವಲ ಹಣದ ಆಸೆಗೆ “ಪುತ್ತೂರು ಪುತ್ತೂರು” ಎಂದು ಕೂಗಿ ಜನ ತುಂಬಿಸಿ, ಕೊನೆಗೆ ಮಗುವಿನ ರೋದನೆಗೂ ಕರಗದೆ ನಡೆದುಕೊಂಡ ಈ ಅಮಾನವೀಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಂಚಾಯತ್ ಅಧ್ಯಕ್ಷರ ಕರೆಗೂ ಉಡಾಫೆ ಉತ್ತರ ನೀಡಿದ ನಿಯಂತ್ರಕ!

ಈ ಅನ್ಯಾಯದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ಅವರು ವಿಟ್ಲ ಸಂಚಾರ ನಿಯಂತ್ರಕರಿಗೆ (Traffic Controller) ಕರೆ ಮಾಡಿ ಸಾರಿಗೆ ಸಿಬ್ಬಂದಿಯ ಈ ಬೇಜವಾಬ್ದಾರಿತನ ಮತ್ತು ದುರ್ವರ್ತನೆಯ ಬಗ್ಗೆ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆಯುವ ಆ ಕಡೆಯ ಅಧಿಕಾರಿ, ತಪ್ಪು ಮಾಡಿದ ಸಿಬ್ಬಂದಿಗೆ ಬುದ್ಧಿ ಕಲಿಸುವ ಬದಲು, ಅತ್ಯಂತ ಉಡಾಫೆಯ ಉತ್ತರ ನೀಡುವ ಮೂಲಕ ತನ್ನ ಕೈಕೆಳಗಿನ ನೌಕರನ ಅಮಾನವೀಯ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಸಾರಿಗೆ ಸಂಸ್ಥೆಯ ಅಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾರ್ವಜನಿಕರ ಪ್ರಶ್ನೆ: ನಿಯಮಗಳು ಮನುಷ್ಯರಿಗಾಗಿಯೇ? ಅಥವಾ ಮನುಷ್ಯರನ್ನು ಹಿಂಸಿಸಲಿಕ್ಕಾಗಿಯೇ?

ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ದುರ್ಬಲರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಸಾರಿಗೆ ಸಂಸ್ಥೆಯ ಕನಿಷ್ಠ ನಿಯಮ. ಆದರೆ ಇಲ್ಲಿ ನಿಯಮಗಳ ಪೊಳ್ಳು ವಾದ ಮಂಡಿಸಿ, ಮಗುವೊಂದನ್ನು ತಾಯಿಯಿಂದ ದೂರವಾಗಿಸಿ ಬೀದಿಯಲ್ಲಿ ನಿಲ್ಲಿಸಿದ ಈ ಸರ್ಕಾರಿ ವ್ಯವಸ್ಥೆ ನಿಜಕ್ಕೂ ಸಾರ್ವಜನಿಕ ವಿರೋಧಿಯಾಗಿದೆ. ಹವಾಮಾನ ವೈಪರೀತ್ಯವಿರಲಿ, ಯಾವುದೇ ತಾಂತ್ರಿಕ ತೊಂದರೆಯಿರಲಿ, ಬಸ್ಸನ್ನು ಒಂದು ನಿಮಿಷ ನಿಲ್ಲಿಸಿ ಮಗುವನ್ನು ಇಳಿಸಿದ್ದರೆ ಆಕಾಶವೇನೂ ತಲೆಮೇಲೆ ಬೀಳುತ್ತಿರಲಿಲ್ಲ.

ಈ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಗುವಿನ ಭಯ-ಆತಂಕಕ್ಕೆ ಕಾರಣನಾದ ಆ ಹಠಮಾರಿ ಕಂಡೆಕ್ಟರ್ ಮತ್ತು ಆತನನ್ನು ಸಮರ್ಥಿಸಿಕೊಂಡ ವಿಟ್ಲ ಸಂಚಾರ ನಿಯಂತ್ರಕನ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಾರ್ವಜನಿಕರೇ ಇಂತಹ ಬಸ್ಸುಗಳನ್ನು ತಡೆದು ನಿಲ್ಲಿಸಿ ಪಾಠ ಕಲಿಸುವ ದಿನ ದೂರವಿಲ್ಲ!




Continue Reading

Trending

Copyright © 2025 Deevatige

error: Content is protected !!