Entertainment
ದೇಶದಲ್ಲಿ ಹೊಸ ಸಂಚಲನ: ಬಕ್ರೀದ್ಗೆ ‘ಗೋಹತ್ಯೆ’ ಮಾಡಲ್ಲ ಎಂದು ಒಕ್ಕೊರಲಿನಿಂದ ಘೋಷಿಸಿದ ಮುಸ್ಲಿಂ ಧರ್ಮಗುರುಗಳು!
ನವದೆಹಲಿ: ದಶಕಗಳಿಂದ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ತೀವ್ರ ಸಂಘರ್ಷ ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗೋಹತ್ಯೆ ವಿಚಾರದಲ್ಲಿ ಇದೀಗ ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತಿ ದೊಡ್ಡ ಮತ್ತು ಅಭೂತಪೂರ್ವ ತಿರುವು ಸಿಕ್ಕಿದೆ. “ನಾವು ಇನ್ಮುಂದೆ ಗೋಹತ್ಯೆ ಮಾಡುವುದಿಲ್ಲ; ಕೇಂದ್ರ ಸರ್ಕಾರ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲಿ” ಎಂದು ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳು ಹಾಗೂ ಪ್ರಭಾವಿ ಇಸ್ಲಾಮಿಕ್ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.
ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರೇ ಸ್ವತಃ ಬೀದಿಗಿಳಿದು, ತಮ್ಮ ಸಮುದಾಯದ ಯುವಕರಿಗೆ ಹಸುಗಳನ್ನು ಬಲಿ ಕೊಡದಂತೆ ಕರೆ ನೀಡುತ್ತಿರುವುದು ದೇಶಾದ್ಯಂತ ಭಾರಿ ಸಂಚಲನ ಹಾಗೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಮುಸ್ಲಿಂ ಸಂಘಟನೆಗಳ ಪ್ರಮುಖ ನಾಯಕರ ಹೇಳಿಕೆಗಳು ಮತ್ತು ಆಗ್ರಹಗಳು:
ಮೌಲಾನ ಅರ್ಷದ್ ಮದನಿ (ಅಧ್ಯಕ್ಷರು, ಜಮಿಯತ್ ಉಲೇಮಾ ಎ ಹಿಂದ್): ಭಾರತದ ಅತ್ಯಂತ ಪ್ರಭಾವಿ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲೇಮಾ ಎ ಹಿಂದ್ ಮುಖ್ಯಸ್ಥರಾದ ಮೌಲಾನ ಅರ್ಷದ್ ಮದನಿ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲಿನ ಬೇಡಿಕೆಯಿಟ್ಟಿದ್ದಾರೆ. “ಪ್ರಧಾನಿಯವರೇ, ನೀವು ನವಿಲನ್ನು ಹೇಗೆ ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ್ದೀರೋ, ಅದೇ ರೀತಿ ಹಸುವನ್ನು ಕೂಡ ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ. ನಾವೆಲ್ಲರೂ ಅದನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಈ ಮೂಲಕ ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಗುಂಪು ದಾಳಿಗಳಿಗೆ (ಮಾಬ್ ಲಿಂಚಿಂಗ್) ಶಾಶ್ವತ ಅಂತ್ಯ ಹಾಡಿ” ಎಂದು ಆಗ್ರಹಿಸಿದ್ದಾರೆ.
ಮೌಲಾನ ಶಹಾಬುದ್ದೀನ್ ರಿಜ್ವಿ (ಆಲ್ ಇಂಡಿಯಾ ಮುಸ್ಲಿಂ ಜಮಾತ್): ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ಸಿಗಬೇಕು ಎಂಬ ಮದನಿಯವರ ನಿಲುವನ್ನು ಬೆಂಬಲಿಸಿರುವ ಇವರು, ಮುಸ್ಲಿಂ ಸಮುದಾಯದ ಪರವಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಅಧಿಕೃತ ಮನವಿ ಪತ್ರ (ಮೆಮೋರಾಂಡಂ) ಸಲ್ಲಿಸುವುದಾಗಿ ಘೋಷಿಸಿದ್ದಾರೆ.
ಉಬೈದುಲ್ಲ ಕಾಸ್ಮಿ (ನಾಯಕರು, ಆಲ್ ಇಂಡಿಯಾ ಪಸ್ಮಾಂಡ ಉಲೇಮಾ ಬೋರ್ಡ್): ಮುಸ್ಲಿಂ ಯುವಕರಿಗೆ ಕಡಕ್ ಸಂದೇಶ ನೀಡಿರುವ ಇವರು, “ಕುರ್ಬಾನಿ ಎಂದರೆ ದೇವರ ಆರಾಧನೆ. ಇಸ್ಲಾಂ ಧರ್ಮದಲ್ಲಿ ಬಲಿ ಕೊಡಲು ಆಡು, ಕುರಿ ಅಥವಾ ಒಂಟೆಗಳ ಆಯ್ಕೆ ಇರುವಾಗ ಹಸುವನ್ನೇ ಏಕೆ ಕೊಲ್ಲಬೇಕು? ಎಲ್ಲಿ ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆಯೋ, ಅಲ್ಲಿ ಹಸುಗಳನ್ನು ಕೊಂದು ಮುಸ್ಲಿಂ ಯುವಕರು ಅನಾವಶ್ಯಕವಾಗಿ ಜೈಲಿಗೆ ಹೋಗಬೇಡಿ” ಎಂದು ಕಿವಿಮಾತು ಹೇಳಿದ್ದಾರೆ.
ಮೌಲಾನ ಯಾಸುಬ್ ಅಬ್ಬಾಸ್ (ಶಿಯಾ ಪರ್ಸನಲ್ ಲಾ ಬೋರ್ಡ್): “ನಮ್ಮ ಹಿಂದೂ ಸಹೋದರರು ಹಸುವನ್ನು ದೇವರಂತೆ ಪೂಜಿಸುತ್ತಾರೆ ಮತ್ತು ತಾಯಿಯ ಸ್ಥಾನ ನೀಡಿದ್ದಾರೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಸುವನ್ನು ಕೊಂದರೆ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ, ಆದ್ದರಿಂದ ದೇಶದಲ್ಲಿ ಗೋಹತ್ಯೆ ಸಂಪೂರ್ಣವಾಗಿ ಬಂದ್ ಆಗಬೇಕು” ಎಂದು ಪ್ರತಿಪಾದಿಸಿದ್ದಾರೆ.
ಸಿರಾಜ್ ಕುರೇಶಿ (ಅಧ್ಯಕ್ಷರು, ಕುರೇಶಿ ಜಮಾತ್ – ಮಾಂಸ ವ್ಯಾಪಾರಿಗಳ ಸಂಘಟನೆ): ಆಶ್ಚರ್ಯಕರವಾಗಿ, ಮಾಂಸದ ವ್ಯಾಪಾರದಲ್ಲಿ ತೊಡಗಿರುವ ಅತಿ ದೊಡ್ಡ ಸಂಘಟನೆಯ ಮುಖ್ಯಸ್ಥರಾದ ಸಿರಾಜ್ ಕುರೇಶಿ ಅವರು ಕೂಡ ಗೋಹತ್ಯೆ ನಿಲ್ಲಿಸುವ ಧರ್ಮಗುರುಗಳ ಈ ಐತಿಹಾಸಿಕ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಬದಲಾವಣೆಯ ಗಾಳಿ:
ಅಸ್ಸಾಂನಲ್ಲಿ ಮುಸ್ಲಿಂ ಸಮಿತಿಗಳ ಬಿಗಿ ನಿಯಮ: ಹಿಮಂತ ಬಿಸ್ವ ಶರ್ಮ ನೇತೃತ್ವದ ಅಸ್ಸಾಂನ ಬೊಂಗೈಗಾವ್, ದುಬ್ರಿ ಮತ್ತು ಕಚಾರ್ ಜಿಲ್ಲೆಗಳ ಇದ್ಕಾ ಕಮಿಟಿಗಳು (ಹಬ್ಬದ ಮೇಲ್ವಿಚಾರಣಾ ಸಮಿತಿಗಳು) ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಬಕ್ರೀದ್ಗೆ ಯಾರೂ ಗೋಹತ್ಯೆ ಮಾಡುವಂತಿಲ್ಲ. ಹಸುವಿನ ಮಾಂಸದ ಫೋಟೋ ಅಥವಾ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ, ಅಂತಹವರನ್ನು ಸ್ವತಃ ಮುಸ್ಲಿಂ ಸಮಿತಿಯವರೇ ಪೊಲೀಸರಿಗೆ ಹಿಡಿದುಕೊಡುವುದಾಗಿ ಎಚ್ಚರಿಸಿದ್ದಾರೆ. ಈ ಮಹತ್ತರ ಬದಲಾವಣೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾದರಿ ಘಟನೆ: ಇಷ್ಟು ದಿನ ಗೋಹತ್ಯೆಯ ಪರ ಧ್ವನಿ ಎತ್ತುತ್ತಿದ್ದ ಎಜೆಯುಪಿ ನಾಯಕ ಹುಮಾಯುನ್ ಕಬೀರ್ ಅವರು ಯು-ಟರ್ನ್ ಹೊಡೆದಿದ್ದು, ಹಸುವನ್ನು ‘ಗೋಮಾತೆ’ ಎಂದು ಕರೆದಿದ್ದಾರೆ. ಇತ್ತೀಚೆಗೆ ಬಂಗಾಳದ ಮಗ್ರಹತ್ತ ಸಂತೆಯಲ್ಲಿ ಹಿಂದೂ ವ್ಯಾಪಾರಿಗಳು ಹಸುಗಳನ್ನು ಮಾರಲು ತಂದಾಗ, ಅಲ್ಲಿನ ಮುಸ್ಲಿಂ ಯುವಕರು “ನೀವು ಪೂಜಿಸುವ ಗೋಮಾತೆಯನ್ನು ನಮಗೆ ಕಡಿಯಲು ಏಕೆ ತಂದಿದ್ದೀರಿ? ನಾವು ಇನ್ನು ಮುಂದೆ ಹಸುಗಳನ್ನು ಖರೀದಿಸುವುದಿಲ್ಲ, ವಾಪಸ್ ಕೊಂಡೊಯ್ದು ಸಾಕಿ” ಎಂದು ಕಳುಹಿಸಿಕೊಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.
ಇಸ್ಲಾಂ ಧರ್ಮಗ್ರಂಥ ಹಾಗೂ ಇತಿಹಾಸ ಏನು ಹೇಳುತ್ತದೆ?
ಇಸ್ಲಾಮಿಕ್ ಪಂಡಿತರ ಪ್ರಕಾರ, ಇಸ್ಲಾಂ ಧರ್ಮದಲ್ಲಿ ಹಸುವನ್ನೇ ಬಲಿ ಕೊಡಬೇಕೆಂದು ಎಲ್ಲಿಯೂ ಕಡ್ಡಾಯವಾಗಿ ಹೇಳಿಲ್ಲ. ಕುರಾನ್ನ ಅತಿ ದೊಡ್ಡ ಅಧ್ಯಾಯವಾದ ‘ಸೂರ್ ಅಲ್ ಬಕ್ರಾ’ ಎಂದರೆ ‘ಹಸು’ ಎಂದೇ ಅರ್ಥ. ಹದೀಸ್ ಪ್ರಕಾರ, ಹಸುವಿನ ಹಾಲು ಮತ್ತು ತುಪ್ಪ ಔಷಧಿಯ ಗುಣ ಹೊಂದಿದ್ದು, ಅದರ ಮಾಂಸ ರೋಗಕ್ಕೆ ಕಾರಣವಾಗಬಹುದು ಎನ್ನಲಾಗಿದೆ.
ಇತಿಹಾಸದಲ್ಲಿ ಮೊಘಲ್ ದೊರೆಗಳಾದ ಬಾಬರ್, ಅಕ್ಬರ್ ಮತ್ತು ಜಹಾಂಗೀರ್ ಕೂಡ ಹಿಂದೂಗಳ ಭಾವನೆಗೆ ಗೌರವ ಕೊಟ್ಟು ತಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದರು. ಜೊತೆಗೆ 1958ರ ‘ಮೊಹಮ್ಮದ್ ಹನೀಫ್ ಕುರೇಶಿ’ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಕೂಡ “ಗೋಹತ್ಯೆ ಇಸ್ಲಾಂನ ಕಡ್ಡಾಯ ಆಚರಣೆಯಲ್ಲ” ಎಂದು ಸ್ಪಷ್ಟಪಡಿಸಿತ್ತು.

ಇದರ ಹಿಂದೆ ರಾಜಕೀಯ ತಂತ್ರ ಅಡಗಿದೆಯೇ?: ವಿಶ್ಲೇಷಕರ ಅಭಿಮತ
ಮುಸ್ಲಿಂ ನಾಯಕರ ಈ ದಿಢೀರ್ ಹೆಜ್ಜೆಯ ಹಿಂದೆ ಒಂದು ಮಾಸ್ಟರ್ ರಾಜಕೀಯ ರಣತಂತ್ರವೂ ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ:
ಬಿಜೆಪಿಯ ಅಸ್ತ್ರಕ್ಕೆ ಬ್ರೇಕ್: ಇಷ್ಟು ದಿನ ಗೋಹತ್ಯೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಪಡೆಯುತ್ತಿದ್ದ ರಾಜಕೀಯ ಲಾಭ ಹಾಗೂ ಧ್ರುವೀಕರಣವನ್ನು ತಡೆಯಲು ಮುಸ್ಲಿಂ ನಾಯಕರು ಈ ತಂತ್ರ ಹೂಡಿದ್ದಾರೆ. ಮುಸ್ಲಿಮರೇ ಗೋಹತ್ಯೆ ಬೇಡ ಎಂದ ಮೇಲೆ ಬಿಜೆಪಿಗೆ ಈ ವಿಷಯದಲ್ಲಿ ಮಾತನಾಡಲು ರಾಜಕೀಯ ಜಾಗವಿರುವುದಿಲ್ಲ.
ಕೇಂದ್ರ ಸರ್ಕಾರಕ್ಕೆ ಧರ್ಮಸಂಕಟ: ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎಂದು ಮುಸ್ಲಿಮರು ಬೇಡಿಕೆ ಇಟ್ಟಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಲಿದೆ. ಏಕೆಂದರೆ ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಲ್ಲಿ ಕ್ರೈಸ್ತರು ಹೆಚ್ಚಾಗಿದ್ದಾರೆ ಮತ್ತು ಗೋಮಾಂಸ ಸೇವನೆ ಸಾಮಾನ್ಯವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ, ಆ ರಾಜ್ಯಗಳಲ್ಲಿನ ಜನರು ಬಿಜೆಪಿ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ.
ಒಟ್ಟಾರೆಯಾಗಿ, ಮುಸ್ಲಿಂ ಧರ್ಮಗುರುಗಳು ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರವು ದೇಶದ ಧಾರ್ಮಿಕ ಹಾಗೂ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಹೊಸ ‘ಗೋಕ್ರಾಂತಿ’ ಭಾರತದಲ್ಲಿ ಕೋಮು ಸೌಹಾರ್ಧತೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆಯೇ ಅಥವಾ ಕೇವಲ ರಾಜಕೀಯ ತಂತ್ರವಾಗಿ ಉಳಿಯಲಿದೆಯೇ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸಬೇಕಿದೆ.



Bantawala
ಪೆರುವಾಯಿಯಲ್ಲಿ ವಿಜೃಂಭಣೆಯ 37ನೇ ವರ್ಷದ ಶ್ರೀ ಗಣೇಶೋತ್ಸವ: ಸಾಧಕರಿಗೆ ಸನ್ಮಾನ ಮತ್ತು ಧಾರ್ಮಿಕ ಕಾರ್ಯಕ್ರಮ ಸಂಪನ್ನ
ಪೆರುವಾಯಿ: ಯುವ ಚೇತನ ಕ್ಲಬ್ (ರಿ) ಪೆರುವಾಯಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿ ಪೆರುವಾಯಿ ಇದರ ವತಿಯಿಂದ 37ನೇ ವರ್ಷದ “ಶ್ರೀ ಗಣೇಶೋತ್ಸವ”ವು ಸೆಪ್ಟೆಂಬರ್ 14 ಮತ್ತು 15 ರಂದು ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದಲ್ಲಿ ಅತ್ಯಂತ ವಿಜೃಂಭಣೆಯಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಧಾರ್ಮಿಕ ಸಭೆ ಮತ್ತು ಗಣ್ಯಾತಿಗಣ್ಯರ ಉಪಸ್ಥಿತಿ
ಉತ್ಸವದ ಎರಡನೇ ದಿನವಾದ ಮಂಗಳವಾರದಂದು (ಸೆ. 15) ಧಾರ್ಮಿಕ ಸಭೆಯು ನಡೆಯಿತು. ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡಿದರು.
ಸಭಾ ಅಧ್ಯಕ್ಷತೆಯನ್ನು ಸರಕಾರಿ ಪದವಿಪೂರ್ವ ಕಾಲೇಜು (K P S) ಕನ್ಯಾನದ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ರೈ ಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಶ್ರೀ ಧಾಮ ಮಾಣಿಲದ ಟ್ರಸ್ಟಿ ಶ್ರೀಮತಿ ರೇವತಿ ಪೆರ್ನೆ ಹಾಗೂ ವಿಟ್ಲದ ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಶ್ರೀ ರವಿಪ್ರಕಾಶ್ ಉಪಸ್ಥಿತರಿದ್ದರು.
ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಾರ್ಪಣೆ
ಕಾರ್ಯಕ್ರಮದಲ್ಲಿ ಊರಿಗೆ ಕೀರ್ತಿ ತಂದ ವಿವಿಧ ಕ್ಷೇತ್ರದ ಸಾಧಕರನ್ನು ಅದ್ಧೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು:
ವಿದ್ಯಾರ್ಥಿ ಪ್ರತಿಭೆಗಳಿಗೆ ಸನ್ಮಾನ: ಎಸ್.ಎಸ್.ಎಲ್.ಸಿ ಅಂತಿಮ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆಗೈದ ಊರಿನ 5 ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.
ಚಿನ್ನದ ಪದಕ ವಿಜೇತರಿಗೆ ಸನ್ಮಾನ: ಎಂ.ಎ. ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಹಾಗೂ ಚಿನ್ನದ ಪದಕ ಪಡೆದ ಕು. ದೀಕ್ಷಾ. T ಅವರನ್ನು ವಿಶೇಷವಾಗಿ ಅಭಿನಂದಿಸಲಾಯಿತು.
ಪವರ್ ಮೆನ್ ಗಳ ಸೇವಾ ಸನ್ಮಾನ: ಪೆರುವಾಯಿ ಗ್ರಾಮದಲ್ಲಿ ಕಳೆದ 11 ವರ್ಷಗಳಿಂದ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವ ಪವರ್ ಮೆನ್ ಗಳಾದ ಶ್ರೀ ಲಕ್ಷಣ್ H N ಮತ್ತು ಶ್ರೀ ಯಲಗುರೇಶ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ವಿಶೇಷ ಸಾಧನೆ – ನಿವೃತ್ತ ಯೋಧರಿಗೆ ಗೌರವ: ಕಾರ್ಯಕ್ರಮದ ವಿಶೇಷ ಮೇರುವಾಗಿ, ಗಣೇಶೋತ್ಸವ ಸಮಿತಿಯ ಸದಸ್ಯರೂ ಆಗಿರುವ, ಬರೋಬ್ಬರಿ 23 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಭಾರತಾಂಬೆಯ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಶ್ರೀ ಚಂದ್ರಶೇಖರ್ ಪೂಜಾರಿ ಕಲ್ಲಡ್ಕ ಪೆರುವಾಯಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿದ ಈ ಗಣೇಶೋತ್ಸವವು ಊರಿನ ಭಕ್ತಾದಿಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು.
Entertainment
ಶುಭ ಕಾರ್ಯದಲ್ಲಿ ಭಯಾನಕ/ವಿಪರೀತ ವೇಷಭೂಷಣ – ಸಂಪ್ರದಾಯದ ಹೆಸರಿನಲ್ಲಿ ಅತಿಯಾಯಿತೇ ನವವರನ ಎಂಟ್ರಿ?
ಇದು ನೇಮೋತ್ಸವವೂ ಅಲ್ಲ.. ಯಕ್ಷಗಾನವೂ ಅಲ್ಲ… ಮದುವೆ ಹಾಗೂ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಹಾಗೂ ಶಿಸ್ತುಬದ್ಧ ಆಚರಣೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯಲು ಮತ್ತು ವೈರಲ್ ಆಗಲು ಸಂಪ್ರದಾಯದ ಗಡಿಯನ್ನು ಮೀರಿ ವಿಚಿತ್ರ ಹಾಗೂ ಭಯಾನಕ ರೀತಿಯಲ್ಲಿ ಪ್ರವೇಶ (Groom Entry) ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.
ಇತ್ತೀಚೆಗೆ ಕೇರಳದ ಮತ್ತಿಪರಂಬಿಲ್ ಮೂಲದವರ ಮದುವೆ ಸಮಾರಂಭವೊಂದರಲ್ಲಿ ನವವರ ಹಾಗೂ ಆತನ ಗೆಳೆಯರ ಬಳಗ ರಾಕ್ಷಸಿ, ಅಸ್ಥಿಪಂಜರ ಹಾಗೂ ಬೆಂಕಿಯ ದೀವಟಿಗೆ ಹಿಡಿದು ಭಯಾನಕ ವೇಷಧರಿಸಿ ಆಗಮಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗಿದೆ.
ಕೆಲವು ತಿಂಗಳ ಹಿಂದೆ ಕೊಡಗಿನಲ್ಲಿಯೂ ಮದುವೆ ಮೆರವಣಿಗೆಯೊಂದರಲ್ಲಿ ಸ್ಥಳೀಯ ಕೊರಗಜ್ಜ ದೈವದ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು, ಅದರ ವಿರುದ್ಧ ಕಾನೂನು ಕ್ರಮ ಹಾಗೂ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರ ನೆನಪಿನಲ್ಲಿದೆ. ಅಂತಹ ಘಟನೆಗಳಿಂದ ಪಾಠ ಕಲಿಯದೆ, ಈಗ ಮತ್ತೊಮ್ಮೆ ಇಂತಹ ಅತಿರೇಕದ ಸಂಪ್ರದಾಯ/ಪ್ರವೇಶಗಳು ಸಮಾಜದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಣೆಗೆ ಕಾರಣವಾಗುತ್ತಿವೆ.
ಇಂತಹ ಆಚರಣೆಗಳು ಸಮಾಜದ ಶಾಂತಿ, ಸಾಂಪ್ರದಾಯಿಕ ಮೌಲ್ಯಗಳು ಹಾಗೂ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ ಎಂದು ಸ್ಥಳೀಯರು ಹಾಗೂ ಹಿರಿಯರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Entertainment
200 ವರ್ಷಗಳ ಬಳಿಕ ದಹಿಫಲೆ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ: ರಥದಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದ ಅಜ್ಜ-ಅಜ್ಜಿ!
ಬೀಡ್ (ಮಹಾರಾಷ್ಟ್ರ): ಸಮಾಜದ ಕೆಲವೆಡೆ ಇಂದಿಗೂ ಹೆಣ್ಣು ಮಗು ಹುಟ್ಟಿದರೆ ನಿರಾಸೆ ವ್ಯಕ್ತಪಡಿಸುವ ಜನರ ನಡುವೆ, ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಅಪರೂಪದ ಹಾಗೂ ಅದ್ಧೂರಿ ಸಂಭ್ರಮವೊಂದು ನಡೆದಿದೆ. ಬರೋಬ್ಬರಿ ನಾಲ್ಕು ತಲೆಮಾರುಗಳ (ಸುಮಾರು 200 ವರ್ಷಗಳ) ದೀರ್ಘ ಕಾಯುವಿಕೆಯ ನಂತರ ಕುಟುಂಬದಲ್ಲಿ ಮೊದಲ ಬಾರಿಗೆ ಹೆಣ್ಣು ಮಗು ಜನಿಸಿದ್ದು, ದಹಿಫಲೆ ಕುಟುಂಬಸ್ಥರು ಮಗುವನ್ನು ರಥದಲ್ಲಿ ಕುಳ್ಳಿರಿಸಿ, ಡೊಳ್ಳು-ಕುಣಿತ ಮತ್ತು ವಾದ್ಯವೃಂದದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಮನೆಗೆ ಬರಮಾಡಿಕೊಂಡಿದ್ದಾರೆ.
‘ಮನೆಗೆ ಬಂದ ಮಹಾಲಕ್ಷ್ಮಿ, ಗಾರ್ಗಿ!’ ಆಸ್ಪತ್ರೆಯಿಂದ ತಾಯಿ ಮತ್ತು ಮಗು ಬಿಡುಗಡೆಯಾಗುತ್ತಿದ್ದಂತೆ, ಕುಟುಂಬಸ್ಥರು ರಥವನ್ನು ತಂದು ಹೂವುಗಳಿಂದ ಶೃಂಗರಿಸಿ ಆಸ್ಪತ್ರೆಯಿಂದಲೇ ಮೆರವಣಿಗೆ ಆರಂಭಿಸಿದರು. ನಾಲ್ಕು ತಲೆಮಾರುಗಳ ಬಳಿಕ ಜನಿಸಿದ ಈ ಮುದ್ದಾದ ಹೆಣ್ಣು ಮಗುವಿಗೆ ‘ಗಾರ್ಗಿ’ ಎಂದು ನಾಮಕರಣ ಮಾಡಲಾಗಿದೆ.
“ನಮ್ಮ ಮನೆಗೆ ಸ್ವತಃ ಮಹಾಲಕ್ಷ್ಮಿಯೇ ಬಂದಿದ್ದಾಳೆ. 200 ವರ್ಷಗಳಿಂದ ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಇರಲಿಲ್ಲ. ಆದ್ದರಿಂದಲೇ ಈ ಕ್ಷಣವನ್ನು ಸಂಭ್ರಮಿಸಲು ಆಕೆಯನ್ನು ಆಸ್ಪತ್ರೆಯಿಂದಲೇ ವಿಜೃಂಭಣೆಯಿಂದ ಕರೆತರಲು ನಿರ್ಧರಿಸಿದೆವು” ಎಂದು ಮಗುವಿನ ಅಜ್ಜಿ ಸುರೇಖಾ ದಹಿಫಲೆ ಆನಂದಬಾಷ್ಪ ಹರಿಸಿದರು.

ಭಾವುಕ ರಾದ ಅಜ್ಜ ಲಿಂಬಾಜಿ ದಹಿಫಲೆ: ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿರುವುದು ನಮಗೆ ಸಿಕ್ಕ ದೊಡ್ಡ ಭಾಗ್ಯ. ಇಷ್ಟು ವರ್ಷಗಳಿಂದ ನಮಗಿದ್ದ ದೊಡ್ಡ ಕೊರತೆ ಇಂದು ನೀಗಿದೆ. ನನ್ನ ಇಬ್ಬರು ಸೊಸೆಯಂದಿರನ್ನು ನಾನು ಹೆತ್ತ ಮಗಳಂತೆಯೇ ಸಾಕಿ ಬೆಳೆಸಿದ್ದೇನೆ, ಈಗ ಮೊಮ್ಮಗಳನ್ನು ರಥ ಹಾಗೂ ವಾದ್ಯವೃಂದದೊಂದಿಗೆ ಕರೆತರಲು ನಮಗೆ ಅತಿಯಾದ ಸಂತೋಷವಾಗುತ್ತಿದೆ” ಎಂದು ಭಾವುಕರಾಗಿ ತಮ್ಮ ಸಂತಸ ಹಂಚಿಕೊಂಡರು.
‘ಹೂವಿನಂತೆ ಸಾಕಿ ಬೆಳೆಸುತ್ತೇವೆ’: ತಂದೆಯ ಹರ್ಷ “ಸಾಮಾನ್ಯವಾಗಿ ಜನರು ಗಂಡು ಮಗುವನ್ನು ಬಯಸುತ್ತಾರೆ, ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಆನಂದವೇ ಬೇರೆ. ಹೆಣ್ಣು ಮಕ್ಕಳಿಗೆ ತಂದೆಯ ಮೇಲೆ ಹೆಚ್ಚಿನ ಪ್ರೀತಿ ಇರುತ್ತದೆ. ನಾವು ನಮ್ಮ ಮಗಳನ್ನು ಹೂವಿನಂತೆ ಸಾಕಿ ಬೆಳೆಸುತ್ತೇವೆ” ಎಂದು ಮಗುವಿನ ತಂದೆ ಹೆಮ್ಮೆಯಿಂದ ಹೇಳಿದರು.
ಸಮಾಜಕ್ಕೆ ಮಾದರಿಯಾದ ದಹಿಫಲೆ ಕುಟುಂಬ: ದಹಿಫಲೆ ಕುಟುಂಬದ ಈ ವಿಶೇಷ ಆಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಅನಂತ್ ಇಂಗಳೆ, “ಇಂದಿಗೂ ಸಮಾಜದ ಕೆಲವೆಡೆ ಹೆಣ್ಣು ಮಗುವಿನ ಜನನದ ಬಗ್ಗೆ ಕಿರಿದಾದ ಮನಸ್ಥಿತಿ ಇದೆ. ಆದರೆ ದಹಿಫಲೆ ಕುಟುಂಬವು ಹೆಣ್ಣು ಮಗುವನ್ನು ರಥದಲ್ಲಿ ಕರೆತರುವ ಮೂಲಕ ಸಮಾಜಕ್ಕೆ ಉತ್ತಮ ಹಾಗೂ ಪ್ರೇರಣಾದಾಯಿ ಸಂದೇಶ ನೀಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.

-
accident1 month agoಬಿ.ಸಿ. ರೋಡ್ ಸರ್ಕಲ್ನಲ್ಲಿ ಭೀಕರ ಅಪಘಾತ: ಟಿಪ್ಪರ್-ಆಕ್ಟಿವಾ ನಡುವೆ ಡಿಕ್ಕಿ, ಸವಾರರಿಬ್ಬರೂ ದುರ್ಮರಣ
-
Bantawala2 months agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime8 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime6 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala6 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala8 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident2 months agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
accident4 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
