Connect with us

karavali

⛈️ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ : ಮುಂದಿನ 4 ದಿನ ಭಾರೀ ಎಚ್ಚರಿಕೆ!

Published

on

ಮಂಗಳೂರು: ಕರಾವಳಿಯಲ್ಲಿ ಸುಡುತ್ತಿರುವ ಬಿಸಿಲಿನ ಬೇಗೆಯ ನಡುವೆಯೇ ಇದೀಗ ವರುಣನ ಆಗಮನವಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

📍 ದಕ್ಷಿಣ ಕನ್ನಡ ಜಿಲ್ಲೆಯ ಹವಾಮಾನದ ಪ್ರಮುಖಾಂಶಗಳು:

ಯೆಲ್ಲೋ ಅಲರ್ಟ್: ಏಪ್ರಿಲ್ 20 ರಿಂದ 24 ರವರೆಗೆ ಜಿಲ್ಲೆಯಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.

ಆಲಿಕಲ್ಲು ಮಳೆ: ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗಿನೊಂದಿಗೆ ಆಲಿಕಲ್ಲು ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಸಂಜೆ/ರಾತ್ರಿ ಮಳೆ: ಮಧ್ಯಾಹ್ನದವರೆಗೆ ತೀವ್ರ ಬಿಸಿಲು ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಮಳೆಯ ಆರ್ಭಟ ಜೋರಾಗಿರಲಿದೆ.

ಹೀಟ್ ವೇವ್ ಎಚ್ಚರಿಕೆ: ಮಳೆಯ ಮುನ್ಸೂಚನೆ ನಡುವೆಯೂ ಜಿಲ್ಲೆಯಲ್ಲಿ ತಾಪಮಾನ ಗರಿಷ್ಠ ಮಟ್ಟದಲ್ಲಿರಲಿದ್ದು, ಹವಾಮಾನ ಇಲಾಖೆಯು ಹೀಟ್ ವೇವ್ (ಉಷ್ಣ ಅಲೆ) ಬಗ್ಗೆಯೂ ಜಾಗರೂಕರಾಗಿರಲು ಸೂಚಿಸಿದೆ.


📅 ದಿನಾಂಕವಾರು ಮಳೆ ಮುನ್ಸೂಚನೆ:

ದಿನಾಂಕಅಲರ್ಟ್ ಸ್ಥಿತಿನಿರೀಕ್ಷಿತ ಹವಾಮಾನ
ಏಪ್ರಿಲ್ 20ಯೆಲ್ಲೋ ಅಲರ್ಟ್ಗುಡುಗು ಸಹಿತ ಭಾರೀ ಮಳೆ ಹಾಗೂ ಬಿರುಗಾಳಿ.
ಏಪ್ರಿಲ್ 21ಯೆಲ್ಲೋ ಅಲರ್ಟ್ದಕ್ಷಿಣ ಕನ್ನಡ ಸೇರಿದಂತೆ 16 ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ.
ಏಪ್ರಿಲ್ 22ಯೆಲ್ಲೋ ಅಲರ್ಟ್ಕರಾವಳಿ ಭಾಗದಲ್ಲಿ ಮಳೆ ಮುಂದುವರಿಕೆ.
ಏಪ್ರಿಲ್ 23ಯೆಲ್ಲೋ ಅಲರ್ಟ್ಜಿಲ್ಲೆಯ ಹತ್ತಕ್ಕೂ ಹೆಚ್ಚು ಕಡೆ ಸಾಧಾರಣದಿಂದ ಭಾರೀ ಮಳೆ.

⚠️ ಸಾರ್ವಜನಿಕರಿಗೆ ಸೂಚನೆ:

ದಕ್ಷಿಣ ಕನ್ನಡ ಜಿಲ್ಲೆಯ ಜನರು ಗುಡುಗು ಮತ್ತು ಮಿಂಚಿನ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲಬಾರದು. ಕರಾವಳಿ ಭಾಗದಲ್ಲಿ ಗಾಳಿಯ ವೇಗ ಹೆಚ್ಚಿರಲಿರುವುದರಿಂದ ಮೀನುಗಾರರು ಮತ್ತು ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಬಿಸಿಲಿನ ಧಗೆಯಿಂದ ಕಂಗಾಲಾಗಿದ್ದ ದಕ್ಷಿಣ ಕನ್ನಡದ ಜನತೆಗೆ ಈ ಮಳೆ ತಂಪು ನೀಡಲಿದೆಯಾದರೂ, ಗುಡುಗು-ಮಿಂಚಿನ ಅಬ್ಬರದ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಮಾಣಿಲ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಳ ಪರಿಶೀಲನೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಜೀವಕಳೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಶಕಗಳ ಬೇಡಿಕೆಗೆ ಸ್ಪಂದನೆ
ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ.

ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜನರು ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ ಸ್ಥಳೀಯರು, ಕೂಡಲೇ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ತಾಂತ್ರಿಕ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು:”ಈ ಭಾಗದ ಜನರ ದಶಕಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಹಾಗೂ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಮನವರಿಕೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗಡಿ ಭಾಗದ ಅಭಿವೃದ್ಧಿ ಹಾಗೂ ಜನರ ಸಂಕಷ್ಟ ನಿವಾರಣೆಗೆ ಈ ಸೇತುವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶ್ರೀಧರ್ ಬಾಳೆಕಲ್ಲು , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

Continue Reading

Belthangady

ಯಕ್ಷರಂಗದಲ್ಲಿ ‘ಕೃಷ್ಣ’ನ ಕ್ರೋಧ: ಪ್ರೇಕ್ಷಕರ ಶಿಳ್ಳೆಗೆ ಕೆರಳಿದ ಉಜಿರೆ ಅಶೋಕ ಭಟ್; ವೇದಿಕೆಯಲ್ಲೇ ದರ್ಪದ ಮಾತುಗಳ ಸುರಿಮಳೆ!

Published

on

ಯಕ್ಷಗಾನ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ಶಿಸ್ತಿನ ಕಲೆ. ಆದರೆ ಇತ್ತೀಚೆಗೆ ವೇದಿಕೆಯ ಮೇಲೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ನಡೆಯುತ್ತಿರುವ ಸಂಘರ್ಷಗಳು ಕಲಾಭಿಮಾನಿಗಳಲ್ಲಿ ಬೇಸರ ಮೂಡಿಸಿವೆ. ಭಾಗವತರ ಆಲಾಪನೆಗೆ ಶಿಳ್ಳೆ ಹೊಡೆದರೆಂದು ಕಲಾವಿದ ಉಜಿರೆ ಅಶೋಕ ಭಟ್ ಅವರು ಕೃಷ್ಣನ ವೇಷದಲ್ಲಿಯೇ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ನಡೆದದ್ದೇನು?
ಭಾಗವತರ ಪದ್ಯಕ್ಕೆ ಕೃಷ್ಣನ ವೇಷಧಾರಿ ಉಜಿರೆ ಅಶೋಕ ಭಟ್ ಅವರು ಅರ್ಥ ಹೇಳಲು ಸಿದ್ಧರಾಗುತ್ತಿದ್ದಂತೆ, ಭಾಗವತರ ಆಲಾಪನೆಗೆ ಪ್ರೇಕ್ಷಕರ ಸಾಲಿನಿಂದ ಕೇಳಿಬಂದ ಜೋರಾದ ಶಿಳ್ಳೆ ಮತ್ತು ಶಬ್ದಗಳಿಂದ ವಿಚಲಿತರಾಗಿದ್ದಾರೆ.. ಇದರಿಂದ ತೀವ್ರ ಅಸಮಾಧಾನಗೊಂಡ ಕಲಾವಿದರು, ಕಥೆಯ ಪ್ರಸಂಗವನ್ನು ಬದಿಗಿಟ್ಟು ನೇರವಾಗಿ ಪ್ರೇಕ್ಷಕರತ್ತ ತಿರುಗಿದರು. “ಇದು ಶಿಳ್ಳೆ ಹೊಡೆಯುವ ಜಾಗವಲ್ಲ, ಯಕ್ಷಗಾನದ ಗಂಭೀರತೆ ಅರ್ಥ ಮಾಡಿಕೊಳ್ಳಿ” ಎಂಬ ಖಡಕ್ ಮಾತುಗಳೊಂದಿಗೆ ಶಿಸ್ತಿನ ಪಾಠ ಆರಂಭಿಸಿದ್ದಾರೆ- “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ದೋಂಬರಾಟವೇ? ಇದು ಯಕ್ಷಗಾನವೇ? ಕೋಳಿ ಕಟ್ಟವೇ? ಕಂಬಳವೇ? ಎಂದು ವೇದಿಕೆಯಲ್ಲೇ ಪ್ರಶ್ನೆ ಮಾಡಿದ್ದಾರೆ. ಶಿಳ್ಳೆ ಹಾಕಿದವರು ಯಾರು? ಹುಚ್ಚರನ್ನು ಬೆಳೆಸಬೇಡಿ, ಕಲಾವಿದರನ್ನು ಬೆಳೆಸಿ, ಆಗದೆ ಇದ್ದರೆ ಬನ್ಸ್‌ ತಿಂದು ಹೋಗಿ, ಭಾಗವತರ ಕಂಠ ಹಾಳು ಮಾಡುತ್ತೀರಾ ? ನಾವು ಯಕ್ಷಗಾನ ಮಾಡಬೇಕೋ? ಎಂದು ಆಕ್ರೋಶಿತರಾಗಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ವತಿಯಿಂದ ಯಕ್ಷಗಾನ ಮಂಡಳಿಯವರು ಕುಂದಾಪುರದ ಹನ್ನಾಬೈಲಿನಲ್ಲಿ ಮಾ.26 ರಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ, ಭಾಗವತರು ಪದ ಹಾಡುತ್ತಿರುವ ಸಂದರ್ಭದಲ್ಲಿ ಆಲಾಪನೆ ಮಾಡುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪದ್ಯ ಮುಗಿದ ನಂತರ ಕೃಷ್ಣ ವೇಷಧಾರಿ ಅಶೋಕ್ ಭಟ್ ಗರಂ ಆಗಿ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತುಗಳು ವೈರಲ್‌ ಆಗಿದೆ.

ಕಲಾವಿದನ ಆಕ್ರೋಶಕ್ಕೆ ಕಾರಣವೇನು?
ಉಜಿರೆ ಅಶೋಕ ಭಟ್ ಅವರ ವಾದದ ಪ್ರಕಾರ, ಯಕ್ಷಗಾನದ ಅರ್ಥಗಾರಿಕೆ ಎನ್ನುವುದು ಏಕಾಗ್ರತೆಯಿಂದ ನಡೆಯಬೇಕಾದ ಪ್ರಕ್ರಿಯೆ. ಪ್ರೇಕ್ಷಕರು ಅನಗತ್ಯವಾಗಿ ಶಿಳ್ಳೆ ಹಾಕುವುದು ಅಥವಾ ಗದ್ದಲ ಮಾಡುವುದು ಕಲೆಯ ಗೌರವಕ್ಕೆ ಧಕ್ಕೆ ತರುತ್ತದೆ. “ನಾವು ಕಷ್ಟಪಟ್ಟು ಕಲೆ ಪ್ರದರ್ಶಿಸುವಾಗ ಶಿಸ್ತು ಇರಬೇಕು” ಎನ್ನುವುದು ಅವರ ಆಕ್ರೋಶದ ಹಿಂದಿನ ಆಶಯವಾಗಿತ್ತು.

ಪ್ರೇಕ್ಷಕ ಪ್ರಭುಗಳನ್ನು ಮರೆತರೇ ಕಲಾವಿದರು?
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಜೋರಾಗಿವೆ:
ಯಕ್ಷಗಾನದ ಪಾವಿತ್ರ್ಯತೆ ಉಳಿಯಬೇಕು, ಕಲಾವಿದನಿಗೆ ಗೌರವ ಸಿಗಬೇಕು. ಶಿಳ್ಳೆ ಹಾಕುವುದು ಕಲೆಗೆ ಮಾಡುವ ಅವಮಾನ ಎಂದು ಒಂದು ವರ್ಗ ವಾದಿಸಿದರೆ , ವೇದಿಕೆಯ ಮೇಲೆ ಕೃಷ್ಣನಂತಹ ದೈವಸ್ವರೂಪಿ ಪಾತ್ರಧಾರಿ ಕಲಾವಿದನಿಗೆ ಸಂಯಮ ಇರಬೇಕು. ಪ್ರೇಕ್ಷಕರನ್ನು ಹೀನಾಯವಾಗಿ ಕಾಣುವುದು ಒಬ್ಬ ವೃತ್ತಿಪರ ಕಲಾವಿದನ ಲಕ್ಷಣವಲ್ಲ. ಕಲಾವಿದನ ಮಾತುಗಳಲ್ಲಿ ಸ್ಪಷ್ಟವಾಗಿ ದರ್ಪ, ಅಹಂಕಾರ ಮತ್ತು ತನ್ನ ಸಾಧನೆಯ ಮೇಲಿನ ಅತಿಯಾದ ಹೆಮ್ಮೆಯ ಭಾವನೆಗಳು ಕಾಣುತ್ತಿರುವುದರಿಂದ ಆತನು ತನ್ನನ್ನು ಇತರರಿಗಿಂತ ಮೇಲಿರುವವನಾಗಿ ಚಿತ್ರಿಸಿಕೊಂಡು, ತನ್ನ ಸಾಧನೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ವೇಳೆ ಇತರರ ಕೊಡುಗೆಗಳನ್ನು ಕಡಿಮೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಅಭಿಮಾನದಿಂದ ಪ್ರೇಕ್ಷಕರು ಹಾಕುವ ಶಿಳ್ಳೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಪ್ರೇಕ್ಷಕರಿಲ್ಲದೆ ಕಲೆ ಇಲ್ಲ, ಕಲಾವಿದರಿಲ್ಲದೆ ಸಂಸ್ಕೃತಿ ಇಲ್ಲ. ಇಬ್ಬರ ನಡುವೆ ಸಮನ್ವಯ ಇರಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಅಭಿಮಾನವೇ ಕಾರಣ. ಶಿಳ್ಳೆ ಎನ್ನುವುದು ಅಭಿಮಾನದ ಸಂಕೇತವೂ ಆಗಿರಬಹುದು. ಸಣ್ಣ ತಪ್ಪುಗಳಿಗಾಗಿ ಪ್ರೇಕ್ಷಕ ಪ್ರಭುಗಳನ್ನು ವೇದಿಕೆಯ ಮೇಲಿಂದಲೇ ಹಿಯಾಳಿಸುವುದು ಕಲಾವಿದನಿಗೆ ಶೋಭೆ ತರುವುದಿಲ್ಲ. “ಕಲಾವಿದ ಬೆಳೆಯಲು ಬೇಕಾದ ಪ್ರೇಕ್ಷಕ ಸ್ನೇಹಿ ಮನೋಭಾವವನ್ನು ಅಶೋಕ ಭಟ್ ಅವರು ಮರೆತರೇ?” ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ವೇದಿಕೆಯ ಮೇಲಿಂದ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ಕಲಾವಿದನ ಅಹಂಕಾರವನ್ನು ತೋರಿಸುತ್ತದೆ. ಎಂಬುವುದು ಕಲಾಭಿಮಾನಿಗಳ ಕಡೆಯಿಂದ ಕೇಳಿಬರುತ್ತಿರುವ ವಾದಗಳು ಕಲಾವಿದನ ಈ ದರ್ಪದ ನಡೆ ಯಕ್ಷಗಾನದ ಆಂತರಿಕ ಶಿಸ್ತನ್ನು ಎತ್ತಿ ಹಿಡಿಯುವುದೋ ಅಥವಾ ಪ್ರೇಕ್ಷಕರನ್ನು ಕಲೆಯ ಸಂಭ್ರಮದಿಂದ ದೂರ ತಳ್ಳುವುದೋ ಎಂಬ ಬಗ್ಗೆ ಈಗ ಗಂಭೀರ ಚರ್ಚೆ ನಡೆಯುತ್ತಿದೆ.

ವೇದಿಕೆಯಲ್ಲಿ ಅರ್ಥ ಹೇಳಲು ಬಂದ ಪಾತ್ರಧಾರಿ ಭಾಗವತರಲ್ಲಿ ಅನುಮತಿ ಕೇಳಿದ ಬಳಿಕ ತನ್ನ ಬುದ್ಧಿವಾದದ ಮಾತು ಆರಂಭಿಸಬೇಕಾಗಿತ್ತು. ಅಥವಾ ವ್ಯವಸ್ಥಾಪಕರಲ್ಲಿ ತಿಳಿಸಬೇಕಿತ್ತು ಅದ್ಯಾವುದೂ ಇಲ್ಲದೇ ಏಕಾಏಕಿ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬುದ್ಧಿ ಮಾತಿನ ಮೂಲಕ ವೇದಿಕೆಯಲ್ಲೇ ತನ್ನ ಅಹಂಕಾರ ಪ್ರವೃತ್ತಿಯನ್ನು ಅಶೋಕ್ ಭಟ್ ಸಾಬೀತು ಪಡಿಸಿರುವುದು ಯಕ್ಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Continue Reading

Belthangady

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ: ಎಸಿ ಗೆ ಸತತ ಮೂರನೇ ಬಾರಿ ಮುಖಭಂಗ!

Published

on

ಬೆಳ್ತಂಗಡಿ: ಸೌಜನ್ಯಾ ಹತ್ಯೆ ಪ್ರಕರಣದ ನ್ಯಾಯಕ್ಕಾಗಿ ನಿರಂತರ ಹೋರಾಟ ನಡೆಸುತ್ತಿರುವ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಹಾಗೂ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ದೊಡ್ಡ ಮಟ್ಟದ ಸಮಾಧಾನ ನೀಡಿದೆ. ಪುತ್ತೂರು ಸಹಾಯಕ ಕಮಿಷನರ್ (AC) ನೀಡಿದ್ದ ಮೂರನೇ ಗಡಿಪಾರು ಆದೇಶಕ್ಕೆ ಹೈಕೋರ್ಟ್ ಮಾರ್ಚ್ 24 ರಂದು ತಡೆಯಾಜ್ಞೆ ನೀಡಿದೆ.

ಘಟನೆಯ ವಿವರ:
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ (AC) ಸ್ಟೆಲ್ಲಾ ವರ್ಗೀಸ್ ಅವರು ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ಮಹತ್ವದ ತೀರ್ಪು ಪ್ರಕಟಿಸಿದೆ.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಗಡಿಪಾರು ಆದೇಶಕ್ಕೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿತಲ್ಲದೆ, ಪ್ರತಿವಾದಿಗಳಾದ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಪುತ್ತೂರು ಉಪ ವಿಭಾಗಾಧಿಕಾರಿ , ಬಂಟ್ವಾಳ ಉಪ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಬೆಳ್ತಂಗಡಿ ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಜಾರಿಗೊಳಿಸಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಸತತ ಮೂರನೇ ಬಾರಿ ಮುಖಭಂಗ:
ಗಮನಾರ್ಹ ಸಂಗತಿಯೆಂದರೆ, ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಎಸಿ ಸ್ಟೆಲ್ಲಾ ವರ್ಗೀಸ್ ಅವರು ಗಡಿಪಾರು ಆದೇಶ ಹೊರಡಿಸುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡು ಬಾರಿಯೂ ನ್ಯಾಯಾಲಯವು ಆ ಆದೇಶಗಳನ್ನು ವಜಾಗೊಳಿಸಿತ್ತು ಅಥವಾ ತಡೆ ನೀಡಿತ್ತು. ಈಗ ಮೂರನೇ ಬಾರಿಯೂ ಹೈಕೋರ್ಟ್ ತಡೆ ನೀಡಿರುವುದರಿಂದ ಸರ್ಕಾರಿ ಅಧಿಕಾರಿಗೆ ಕಾನೂನುಬದ್ಧವಾಗಿ ಸತತ ಮೂರನೇ ಬಾರಿ ಹಿನ್ನಡೆಯಾದಂತಾಗಿದೆ.

ಹೋರಾಟ ಮತ್ತು ಗಡಿಪಾರು ರಾಜಕೀಯ
ಧರ್ಮಸ್ಥಳದ ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಮತ್ತು ನೈಜ ಆರೋಪಿಗಳ ಬಂಧನಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರು ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸುತ್ತಿದ್ದಾರೆ. ಈ ಹೋರಾಟವು ಜನಮನ್ನಣೆ ಗಳಿಸುತ್ತಿದ್ದಂತೆಯೇ, ಸಮಾಜದಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂಬ ಕಾರಣ ನೀಡಿ ಆಡಳಿತ ಯಂತ್ರವು ಅವರ ಮೇಲೆ ಗಡಿಪಾರು ಅಸ್ತ್ರವನ್ನು ಪ್ರಯೋಗಿಸಲು ಮುಂದಾಗಿತ್ತು. ಪ್ರತಿ ಬಾರಿಯೂ ಗಡಿಪಾರು ಆದೇಶ ಬಂದಾಗ ತಿಮರೋಡಿ ಅವರು ಇದು “ರಾಜಕೀಯ ಪ್ರೇರಿತ” ಮತ್ತು “ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ” ಎಂದು ಆರೋಪಿಸುತ್ತಾ ಬಂದಿದ್ದಾರೆ. ಹೈಕೋರ್ಟ್‌ನ ಈ ತಡೆಯಾಜ್ಞೆಯು ತಿಮರೋಡಿ ಬೆಂಬಲಿಗರಲ್ಲಿ ಹರ್ಷ ತಂದಿದ್ದು, ಹೋರಾಟಗಾರರ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾದಂತಾಗಿದೆ.

Continue Reading

Trending

Copyright © 2025 Deevatige

error: Content is protected !!