Connect with us

Bantawala

ಅಪರಾಧಕ್ಕೂ ಧರ್ಮದ ಬಣ್ಣ: ಕರಾವಳಿಯ ‘ದ್ವಂದ್ವ ಆಕ್ರೋಶ’ ಮತ್ತು ಸೌಹಾರ್ಧತೆಯ ತುರ್ತು ಅಗತ್ಯ

Published

on

ಬಿಸಿ ರೋಡ್‌ನಲ್ಲಿ ಇತ್ತೀಚೆಗೆ ನಡೆದ ಯುವತಿ ಲಾವಣ್ಯಾಳ ಬರ್ಬರ ಹತ್ಯೆಯ ಘಟನೆ ಇಡೀ ಕರಾವಳಿ ಜಿಲ್ಲೆಗಳನ್ನು ಮತ್ತೊಮ್ಮೆ ನಡುಗಿಸಿದೆ. ಆದರೆ, ಇಂತಹ ಭೀಕರ ಘಟನೆಗಳು ನಡೆದಾಗ ಇಂದಿನ ಸಮಾಜದ ಮೊದಲ ಪ್ರತಿಕ್ರಿಯೆ ಏನಾಗಿರುತ್ತದೆ ಗೊತ್ತೇ? “ಕೊಲೆ ಮಾಡಿದವನು ಯಾರು? ಕೊಲೆಯಾದವಳು ಯಾರು? ಇಬ್ಬರೂ ಯಾವ ಧರ್ಮದವರು?”

ನ್ಯಾಯದ ಪರಿಕಲ್ಪನೆ ಎಷ್ಟು ವಿಕೃತಗೊಂಡಿದೆ ಎಂದರೆ, ಅಪರಾಧ ನಡೆದಾಗ ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂಬ ಆಕ್ರೋಶಕ್ಕಿಂತ ಹೆಚ್ಚಾಗಿ, ಅಲ್ಲಿ ಆರೋಪಿ ಮತ್ತು ಸಂತ್ರಸ್ತೆಯ ಧರ್ಮ ಹುಡುಕುವ ಹಪಾಹಪಿ ಎದ್ದು ಕಾಣುತ್ತಿದೆ. ಇಬ್ಬರೂ ಒಂದೇ ಧರ್ಮದವರಾಗಿದ್ದರೆ ಸಮಾಜ ಮೌನಕ್ಕೆ ಶರಣಾಗುತ್ತದೆ; ಅದೇ ಧರ್ಮಗಳು ಬೇರೆ ಬೇರೆಯಾಗಿದ್ದರೆ ಬೀದಿಗಿಳಿದು ಆಕ್ರೋಶದ ದೊಂದಿಗಳನ್ನು ಹೊತ್ತಿಸಲು ಸಮಾಜ ಸನ್ನದ್ಧವಾಗುತ್ತದೆ. ಈ ದ್ವಂದ್ವ ನಿಲುವು ಕರಾವಳಿಯ ಅತಿ ದೊಡ್ಡ ದುರಂತವಾಗಿದೆ.

ಧರ್ಮದ ಹಂಗಿಲ್ಲದ ಕ್ರೌರ್ಯ: ಇತಿಹಾಸದ ಕಟು ಸತ್ಯಗಳು

ನಾವು ಇತಿಹಾಸ ಮತ್ತು ಇತ್ತೀಚಿನ ಘಟನೆಗಳನ್ನು ಗಮನಿಸಿದಾಗ, ಕ್ರೌರ್ಯಕ್ಕೆ ಯಾವುದೇ ಧರ್ಮದ ಹಂಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ:

ಆಗಸ್ಟ್ 2023ರ ಪುತ್ತೂರು ಘಟನೆ: ಪುತ್ತೂರು ಮಹಿಳಾ ಪೊಲೀಸ್ ಠಾಣೆ ಬಳಿ 18 ವರ್ಷದ ಯುವತಿ ಗೌರಿ ಎಂಬಾಕೆಯನ್ನು ಆಕೆಯದ್ದೇ ಆತ್ಮರಕ್ಷಣೆಯ ಚೂರಿಯಿಂದ ಪದ್ಮರಾಜ್ ಎಂಬಾತ ಕುತ್ತಿಗೆ ಸೀಳಿ ಕೊಂದಿದ್ದನು.

ಜುಲೈ 6, 2026ರ ಮಂಚಿ ಮೋಂತಿಮಾರು ಘಟನೆ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ತಂಗುದಾಣದಲ್ಲಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೋರ್ವಳ ಮೇಲೆ ಭಗ್ನ ಪ್ರೇಮಿಯೊಬ್ಬ ಕತ್ತಿಯಿಂದ ಮನಬಂದಂತೆ ಕಡಿದು ಕೊಲೆಗೆ ಯತ್ನಿಸಿದ್ದನು.

ಈ ಎರಡೂ ಘಟನೆಗಳಲ್ಲಿ ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಧರ್ಮಕ್ಕೆ ಸೇರಿದ್ದ ಕಾರಣ ಕರಾವಳಿಯಲ್ಲಿ ಯಾವುದೇ ಗಲಭೆಗಳು ಆಗಲಿಲ್ಲ, ಯಾರೂ ದೊಡ್ಡ ಮಟ್ಟದಲ್ಲಿ ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡಲಿಲ್ಲ. ಒಂದೇ ಧರ್ಮದವರಾಗಿದ್ದರೆ ಯುವತಿಯರ ರಕ್ತಕ್ಕೆ ಬೆಲೆ ಇಲ್ಲವೇ? ಅತ್ಯಾಚಾರ, ಕೊಲೆಗಳ ವಿರುದ್ಧದ ನಮ್ಮ ಆಕ್ರೋಶ ಕೇವಲ ‘ಕೋಮು ಸಂಕೇತ ಪ್ರದರ್ಶನ’ದ (Communal Signaling) ಸಾಧನ ಮಾತ್ರವೇ ಎಂಬ ಪ್ರಶ್ನೆ ಮೂಡುತ್ತದೆ.

ಸುರತ್ಕಲ್ ಪ್ರಕರಣ: ಕಣ್ಣು ತೆರೆಸಿದ ಕಮಿಷನರ್ ಮಾತುಗಳು

ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ 17 ವರ್ಷದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣವು ಸಮಾಜದ ಹೈಪೋಕ್ರಸಿಯನ್ನು ಸಂಪೂರ್ಣವಾಗಿ ಬೆತ್ತಲಾಗಿಸಿದೆ. ಈ ಪ್ರಕರಣದ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅವರು ಹಂಚಿಕೊಂಡಿರುವ ವಿಚಾರಗಳು ಕಟು ಸತ್ಯದಿಂದ ಕೂಡಿವೆ:

ಆಘಾತಕಾರಿ ಡೆತ್ ನೋಟ್: ಆಕೆ ಬರೆದಿಟ್ಟಿರುವ ಮರಣ ಪತ್ರದಲ್ಲಿ, “ಅವನು ಹಿಂದೂ ಸಂಘಟನೆಗಳೊಂದಿಗೆ ಇದ್ದರೂ, ಆ ಸಂಘಟನೆಗಳು ತನಗೆ ಯಾವುದೇ ಸಹಾಯ ಮಾಡಲಿಲ್ಲ” ಎಂದು ಅತ್ಯಂತ ನೊಂದು ಬರೆದಿದ್ದಳು. ಸುರತ್ಕಲ್ ಪೊಲೀಸರು ಘಟನೆ ನಡೆದ ದಿನವೇ ಆರೋಪಿ ಅನೀಶ್ ಪೂಜಾರಿಯನ್ನು ಬಂಧಿಸಿ, ಆತನ ವಿರುದ್ಧ ಪೋಕ್ಸೊ (POCSO) ಕಾಯ್ದೆ, ಅತ್ಯಾಚಾರ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಇಷ್ಟೊಂದು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ಸಮಾಜದ ಕೆಲವು ವರ್ಗಗಳು ಮಾತ್ರ ಈ ಬಾಲಕಿಗೆ ನ್ಯಾಯ ಸಿಗಬೇಕು ಎಂದು ಧ್ವನಿಯೆತ್ತುತ್ತಿವೆ. ಪುತ್ತೂರಿನ ಪುರುಷರ ಕಟ್ಟೆಯಲ್ಲಿ ಕೇವಲ ಚೂರಿ ತೋರಿಸಿದ ಘಟನೆಗೆ ಕರಾವಳಿಯೇ ಮೈಕೊಡವಿ ನಿಲ್ಲುತ್ತದೆ; ಆದರೆ ಅಪ್ರಾಪ್ತ ಹುಡುಗಿಯ ಸಾವಿಗೆ ನ್ಯಾಯ ಕೇಳಲು ಹೋರಾಟ ಮಾಡುವವರು ಮೌನಕ್ಕೆ ಶರಣಾಗುತ್ತಾರೆ. ಆರೋಪಿ ಬೇರೆ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ತಕ್ಷಣವೇ ಬೀದಿಗಿಳಿದು ನ್ಯಾಯಕ್ಕಾಗಿ ಆಗ್ರಹಿಸುತ್ತೇವೆ; ಆದರೆ ಅದೇ ಆರೋಪಿ ನಮ್ಮದೇ ಸಮುದಾಯಕ್ಕೆ ಸೇರಿದವನಾಗಿದ್ದರೆ ನಾವು ಮೌನವಾಗುತ್ತೇವೆ ಏಕೆ ? ಎಂಬುವುದೇ ನಾವು ಕೇಳಿಕೊಳ್ಳಬೇಕಾದ ಆತ್ಮಸಾಕ್ಷಿಯ ಪ್ರಶ್ನೆ

ರಾಜಕೀಯ ಭೇದ ಮರೆತ ನಾಯಕರು: ಸೌಹಾರ್ಧತೆಯ ಹೊಸ ಆಶಾಕಿರಣ

ಈ ಎಲ್ಲಾ ದ್ವಂದ್ವಗಳ ನಡುವೆ, ನಿನ್ನೆ ಬರ್ಬರವಾಗಿ ಕೊಲೆಯಾದ ಲಾವಣ್ಯಾಳ ಮನೆಗೆ ಮೃತದೇಹ ಆಗಮಿಸುತ್ತಿದ್ದಂತೆ ಕರಾವಳಿಯಲ್ಲಿ ಸೌಹಾರ್ಧತೆಯ ಒಂದು ಅಪರೂಪದ ಮತ್ತು ಶ್ಲಾಘನೀಯ ಚಿತ್ರಣ ಕಂಡುಬಂತು.

ಮಾಜಿ ಸಚಿವ ರಮಾನಾಥ ರೈ, ಉಸ್ತುವಾರಿ ಸಚಿವ ಯು. ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶ್ರೀಮತಿ ಮಮತಾ ಗಟ್ಟಿ, ಹಿಂದೂ ಸಂಘಟನೆಯ ಶರಣ್ ಪಂಪ್ವೆಲ್, ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಅರುಣ್ ಪುತ್ತಿಲ ಸೇರಿದಂತೆ ಹಲವಾರು ಮುಖಂಡರು ಪಕ್ಷ ಮತ್ತು ಸಿದ್ದಾಂತದ ಭೇದ ಮರೆತು ಒಟ್ಟಾಗಿ ಆಗಮಿಸಿ ಮೃತಳ ಅಂತಿಮ ದರ್ಶನ ಪಡೆದರು. ಸಾಂತ್ವಾನ ನೀಡಿದರು. ಕುಟುಂಬಕ್ಕೆ ದೈರ್ಯವನ್ನು ತುಂಬಿದರು.

ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇಂತಹ ದುಃಖದ ಸಮಯದಲ್ಲಿ ಒಟ್ಟಾಗಿ ನಿಂತಿರುವುದು ಕರಾವಳಿಯ ಭವಿಷ್ಯದ ಸೌಹಾರ್ಧತೆಗೆ ದಾರಿದೀಪವಾಗಿದೆ. ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಾಗ ರಾಜಕೀಯ ಮಾಡುವುದನ್ನು ಬಿಟ್ಟು, ನಾವೆಲ್ಲರೂ ಒಂದಾಗಿ ಅಪರಾಧಿಗಳ ವಿರುದ್ಧ ಧ್ವನಿ ಎತ್ತಬಲ್ಲೆವು ಎಂಬುದಕ್ಕೆ ಈ ನಡೆ ಸಾಕ್ಷಿಯಾಗಿದೆ. ಅಪರಾಧ ನಡೆದಾಗ ಅಪರಾಧಿಯ ಮುಖವಾಡ ಕಳಚಿ ಆತನ ಧರ್ಮ ಹುಡುಕುವ ನಮ್ಮ ಸಮಾಜದ ವಿಕೃತ ಹೈಪೋಕ್ರಸಿಗೂ ತುರ್ತಾಗಿ ಚಿಕಿತ್ಸೆಯಾದಾಗ ಸೌಹಾರ್ದತೆ ವಿಜೃಂಬಿಸುತ್ತದೆ.

ಸೌಹಾರ್ಧತೆಯ ಕರಾವಳಿ ನಮ್ಮದಾಗಲಿ

ನಾವು ನಿಜವಾಗಿಯೂ ನ್ಯಾಯ ಮತ್ತು ಮಾನವೀಯತೆಗೆ ಬದ್ಧರಾಗಿದ್ದರೆ, ಎಲ್ಲಾ ಅಪರಾಧಿಗಳನ್ನು ಒಂದೇ ಮಾನದಂಡದಲ್ಲಿ ನೋಡಬೇಕು. ಅಪರಾಧವು ಒಂದು ಜಾಗತಿಕ ಮತ್ತು ಮಾನಸಿಕ ಸಮಸ್ಯೆಯಾಗಿದೆ. ಯಾವುದೇ ಧರ್ಮ ಅಥವಾ ಸಮುದಾಯವೂ ಅಪರಾಧಿಗಳ ಅಸ್ತಿತ್ವದಿಂದ ಮುಕ್ತವಾಗಿಲ್ಲ; ಅಪರಾಧಿಗಳು ಎಲ್ಲಾ ಧರ್ಮ, ಜಾತಿ ಮತ್ತು ವರ್ಗಗಳಲ್ಲೂ ಇದ್ದಾರೆ.

ಸುರತ್ಕಲ್‌ನ ಮೃತ ಬಾಲಕಿಗೆ, ಮಂಚಿ ಮೋಂತಿಮಾರ್‌ನ ವಿದ್ಯಾರ್ಥಿನಿಗೆ, ಬಿಸಿ ರೋಡ್‌ನ ಲಾವಣ್ಯಾಳಿಗೆ ನ್ಯಾಯ ಸಿಗಬೇಕಿದೆ. ‘ಅಪರಾಧಿ ಅಪರಾಧಿಯೇ, ನ್ಯಾಯ ಎಲ್ಲರಿಗೂ ಒಂದೇ’. ಧರ್ಮದ ಹೆಸರಿನಲ್ಲಿ ವಿಕೃತ ಆಕ್ರೋಶ ವ್ಯಕ್ತಪಡಿಸುವ ಸಮಾಜಕ್ಕೆ ಪೊಲೀಸ್ ಕಮಿಷನರ್ ಅವರು ಬಿಚ್ಚಿಟ್ಟ ಸತ್ಯಗಳು ಕಣ್ಣು ತೆರೆಸುವಂತಾಗಲಿ. ಅಪರಾಧಿಗೆ ಜಾತಿಯ ಅಥವಾ ಧರ್ಮದ ಬಣ್ಣ ಹಚ್ಚಿ ರಾಜಕೀಯ ಮಾಡುವುದನ್ನು ನಿಲ್ಲಿಸಿ, ಮುಂದಿನ ದಿನಗಳಲ್ಲಿ ಕರಾವಳಿಯು ಸೌಹಾರ್ಧತೆ, ಶಾಂತಿ ಮತ್ತು ಸುರಕ್ಷತೆಯ ನೆಲೆವೀಡಾಗಿ ಬೆಳಗಲಿ ಎಂಬುವುದೇ ಎಲ್ಲರ ಆಶಯವಾಗಬೇಕು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Continue Reading

Bantawala

ದಕ್ಷಿಣ ಕನ್ನಡ: ರಾಯಿ ಸಮೀಪ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯ ಮೃತದೇಹ ಸಂಗಬೆಟ್ಟುವಿನಲ್ಲಿ ಪತ್ತೆ

Published

on

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಸಮೀಪ ಶನಿವಾರ ತಡರಾತ್ರಿ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ 48 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ರಾಯಿ ನಿವಾಸಿ ಜೀವನ್ ಪಿಂಟೊ (48) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಶನಿವಾರ ತಡರಾತ್ರಿ ಜೀವನ್ ಪಿಂಟೊ ಅವರು ತೋಡಿನ ಆಚೆಗಿರುವ ತಮ್ಮ ಮಾವನ ಮನೆಗೆ ತೆರಳಲು ಕಾಲುಸಂಕದ ಮೇಲೆ ನದಿ ದಾಟುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿತ್ತು. ಘಟನಾ ಸ್ಥಳದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್‌ಲೈಟ್ ಪತ್ತೆಯಾಗಿದ್ದರೂ, ಅವರು ನೀರಿಗೆ ಬಿದ್ದಿದ್ದಾರೋ ಅಥವಾ ಬೇರೆಡೆ ತೆರಳಿದ್ದಾರೋ ಎಂಬುದು ಅಧಿಕೃತವಾಗಿ ದೃಢಪಟ್ಟಿರಲಿಲ್ಲ.

ಸತತ ಶೋಧ ಕಾರ್ಯಾಚರಣೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ನದಿಯಲ್ಲಿ ಹರಿಯುತ್ತಿರುವ ಪ್ರಬಲ ನೀರಿನ ಸೆಳೆತದ ನಡುವೆಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗುತಜ್ಞರು ಮತ್ತು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ಜಂಟಿಯಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು.

ಸತತ ಕಾರ್ಯಾಚರಣೆಯ ಫಲವಾಗಿ ಸೋಮವಾರ ಬೆಳಿಗ್ಗೆ ಸಂಗಬೆಟ್ಟು ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ತಕ್ಷಣವೇ ಮೃತದೇಹವನ್ನು ನದಿಯಿಂದ ಹೊರತೆಗೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕಾನೂನು ಹಾಗೂ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.

Continue Reading

Bantawala

ಬಸ್‌ನಲ್ಲಿ ಅಸಭ್ಯ ವರ್ತನೆ: ವಿಕೃತಕಾಮಿ ವೃದ್ಧ ಅರ್ಚಕನ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಕೇಸ್‌ ದಾಖಲು!

Published

on

ಬಂಟ್ವಾಳ: ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಎದುರು ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವೃದ್ಧನೊಬ್ಬನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ:

ಜುಲೈ 30ರಂದು ಮಂಗಳೂರಿನ ಸ್ಟೇಟ್ ಬ್ಯಾಂಕ್‌ನಿಂದ ಉಪ್ಪಿನಂಗಡಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಧ್ಯಾಹ್ನ 2.10ರ ಸುಮಾರಿಗೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಬಸ್‌ ಏರಿದ್ದ ಸುಮಾರು 60–70 ವರ್ಷ ಪ್ರಾಯದ ವ್ಯಕ್ತಿಯೊಬ್ಬ, ಚಾಲಕನ ಎಡಭಾಗದ ಅಡ್ಡ ಸೀಟಿನಲ್ಲಿ ಕುಳಿತುಕೊಂಡಿದ್ದ. ಪ್ರಯಾಣದ ವೇಳೆ ಎದುರಿನ ಸೀಟಿನಲ್ಲಿದ್ದ ಮಹಿಳೆಯರಿಗೆ ಕಾಣುವಂತೆ ಅಸಭ್ಯವಾಗಿ ಗುಪ್ತಾಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದಾನೆ.

ಮಹಿಳೆಯ ಧೈರ್ಯ, ವೈರಲ್ ವೀಡಿಯೋ:

ವೃದ್ಧನ ನೀಚ ಕೃತ್ಯವನ್ನು ಕಂಡು ಆಕ್ರೋಶಗೊಂಡ ಬಸ್‌ನಲ್ಲಿದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಆತನ ವಿಕೃತಿಯನ್ನು ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಇದನ್ನು ಗಮನಿಸಿದ ವೃದ್ಧ, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಗಾಬರಿಯಿಂದ ಬಸ್‌ನಿಂದ ಇಳಿದು ಪರಾರಿಯಾಗಿದ್ದ. ಬಳಿಕ ಈ ವಿಷಯ ಬಸ್ ಚಾಲಕನ ಗಮನಕ್ಕೂ ಬಂದಿತ್ತು. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತು ಪತ್ತೆ ಹಚ್ಚಿದ್ದು, ಆತ ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ ಹಾಗೂ ವೃತ್ತಿಯಲ್ಲಿ ಅರ್ಚಕ ಎಂದು ತಿಳಿದುಬಂದಿದೆ.

ಬಂಟ್ವಾಳ ಠಾಣೆಯಲ್ಲಿ ದೂರು:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.ಕ್ರ. 107/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading

Trending

Copyright © 2025 Deevatige

error: Content is protected !!