Connect with us

Dakshina Kannada

ಪುತ್ತೂರಿನ ಹೆಮ್ಮೆ ‘ಬಾಲವನ’ಕ್ಕೆ ಬಂತು ದುರ್ಗತಿ: ಕಾರಂತರ ಸ್ಮರಣಾ ತಾಣದ ಅವಸ್ಥೆಗೆ ಆಕ್ರೋಶ!

Published

on

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕಡಲ ತೀರದ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ ಕರ್ಮಭೂಮಿ ಪುತ್ತೂರಿನ ‘ಬಾಲವನ’ ಈಗ ಅಕ್ಷರಶಃ ನಿರ್ಲಕ್ಷ್ಯದ ಸುಳಿಗೆ ಸಿಲುಕಿದೆ. ಮಕ್ಕಳಿಗಾಗಿ ಕಾರಂತರು ಕಂಡ ಕನಸಿನ ಲೋಕ ಇಂದು ದುಸ್ಥಿತಿಯಲ್ಲಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರ ಪಾಲಿಗೆ ನಿರಾಸೆಯ ತಾಣವಾಗಿ ಮಾರ್ಪಟ್ಟಿದೆ.


ಮಕ್ಕಳ ಮನೋರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಬಾಲವನ ಇಂದು ಪಾಳುಬಿದ್ದಂತಿದೆ. ಆಟದ ಉಪಕರಣಗಳು ಮುರಿದು ಬಿದ್ದಿದೆ, ಉದ್ಯಾನದಲ್ಲಿ ಕಳೆಗಿಡಗಳು ಬೆಳೆದು ನಿಂತಿವೆ. ಬಹಳ ವರ್ಷಗಳಿಂದ ಆಟಿಕೆಗಳಿಗೆ ಬಣ್ಣ ಬಳಿದಿಲ್ಲ ಅಥವಾ ದುರಸ್ತಿ ಮಾಡಿಲ್ಲ ಎಂಬುದು ಕಂಡುಬರುತ್ತಿದೆ. ಸ್ವಚ್ಛತೆ ಇಲ್ಲದೆ ಪ್ಲಾಸ್ಟಿಕ್, ಕಸದ ರಾಶಿ ತುಂಬಿಕೊಂಡಿದೆ. ಕುಡಿಯುವ ನೀರಿನ ವ್ಯವಸ್ಥೆ, ಶುಚಿತ್ವ ಕಾಣದ ಶೌಚಾಲಯಗಳು ಸಂಪೂರ್ಣ ಹಾಳಾಗಿವೆ. ಅಲ್ಲಲ್ಲಿ ಕಾಣ ಸಿಗುವ ಬಾಟಲಿಗಳು ಕೊಳೆತ ಕಸಗಳು ಇದು ನಿರ್ಲಕ್ಷ್ಯದ ಸುಳಿಗೆ ಸಿಲುಕಿದೆ ಎಂಬುವುದನ್ನು ಸಾರಿ ಹೇಳುತ್ತಿದೆ.


ಹದಗೆಟ್ಟ ಆಟಿಕೆಗಳು; ಮಕ್ಕಳಿಗೆ ಸಂಚಕಾರ!
ಬಾಲವನಕ್ಕೆ ಬರುವ ಮಕ್ಕಳು ಸಂಭ್ರಮದಿಂದ ಆಟವಾಡಲು ಇರುವ ಸೀ-ಸಾ (See-saw), ಮೆರ್ರಿ-ಗೋ-ರೌಂಡ್, ಜಾರುಬಂಡೆಗಳು ಸಂಪೂರ್ಣ ತುಕ್ಕು ಹಿಡಿದು ಕಿತ್ತು ಹೋಗಿವೆ. ಆಟದ ಸಾಮಗ್ರಿಗಳು ಮುರಿದು ಬಿದ್ದಿದ್ದು, ಉಯ್ಯಾಲೆ ಮುರಿದು ನೆಲದ ಮೇಲಿದ್ದು, ಯಾವ ಮಗು ನೋವು ಅನುಭವಿಸಿದೆಯೋ ಗೊತ್ತಿಲ್ಲ. ಹರಿತವಾದ ಕಬ್ಬಿಣದ ಭಾಗಗಳು ಹೊರಬಂದಿವೆ. ಇದರಿಂದಾಗಿ ಇಲ್ಲಿ ಆಟವಾಡಲು ಬರುವ ಪುಟಾಣಿ ಮಕ್ಕಳಿಗೆ ಗಾಯಗಳಾಗುತ್ತಿವೆ. ಮಕ್ಕಳ ಉದ್ಯಾನವನದ ನೆಲದಲ್ಲಿ ಇರಬೇಕಾದ ಮರಳು ಮಾಯವಾಗಿದ್ದು, ಗಟ್ಟಿಯಾದ ನೆಲದ ಮೇಲೆ ಮಕ್ಕಳು ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾರುಬಂಡೆಯ ಕಬ್ಬಿಣದ ಶೀಟ್ ಕಿತ್ತು ಹೋಗಿದ್ದು, ಅದರ ಮೇಲಿಂದ ಜಾರುವ ಮಗುವಿನ ಮೈ ಕೈ ಕತ್ತರಿಸುವ ಅಪಾಯವಿದೆ.

ಸ್ವಿಮ್ಮಿಂಗ್ ಪೂಲ್ ಬಿಟ್ಟರೆ ಏನೂ ಇಲ್ಲ: ದೂರದ ಊರುಗಳಿಂದ ಬರುವ ಶಾಲಾ ಪ್ರವಾಸದ ಬಸ್ಸುಗಳು ಹಾಗೂ ಪ್ರವಾಸಿಗರು ಇಲ್ಲಿನ ಸ್ವಿಮ್ಮಿಂಗ್ ಪೂಲ್ ಹೊರತುಪಡಿಸಿ ಉಳಿದ ವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
“ಕಾರಂತರ ಹೆಸರಲ್ಲಿ ಮಾಡಿದ ಬಾಲವನ ಮಕ್ಕಳಿಗೆ ಬೇಡವಾಗಿದೆ. ಸಂಜೆ ಹೊತ್ತಿಗೆ ಇಲ್ಲಿ ಯಾರೂ ಕಾಲಿಡುವಂತಿಲ್ಲ. ನಿರ್ವಹಣೆಗೆ ಯಾರೂ ಇಲ್ಲ” ಎಂದು ಸ್ಥಳೀಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಬಾಲವನ ಯೋಗ್ಯವಲ್ಲದ ಸ್ಥಿತಿಗೆ ತಲುಪಿದೆ.

ಶಾಸಕರು ಮತ್ತು ಇಲಾಖೆಯ ಗಮನಕ್ಕೆ ಮನವಿ
“ಪುತ್ತೂರಿನಲ್ಲಿ ಏನಿದೆ ಎಂದು ಕೇಳಿದರೆ ನಾವು ಬಾಲವನ ಇದೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅತಿಥಿಗಳನ್ನು ಇಲ್ಲಿಗೆ ಕರೆಯಲು ಮುಜುಗರವಾಗುತ್ತಿದೆ,” ಎಂದು ವೀಕ್ಷಕರು ಅಳಲು ತೋಡಿಕೊಂಡಿದ್ದಾರೆ. ಪುತ್ತೂರಿನ ಶಾಸಕರು ಅಭಿವೃದ್ಧಿ ಕೆಲಸಗಳಲ್ಲಿ ಸಕ್ರಿಯರಾಗಿದ್ದು, ಬಾಲವನದ ಈ ಸಮಸ್ಯೆಯನ್ನೂ ಆದಷ್ಟು ಬೇಗ ಬಗೆಹರಿಸುತ್ತಾರೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.


ಸಾರ್ವಜನಿಕರ ಆಗ್ರಹ:
ಕನ್ನಡದ ಸಾಂಸ್ಕೃತಿಕ ಲೋಕದ ದಿಗ್ಗಜ ಶಿವರಾಮ ಕಾರಂತರು ಮಕ್ಕಳಿಗಾಗಿ ಮೀಸಲಿಟ್ಟ ಈ ಜಾಗವನ್ನು ಕೇವಲ ಪ್ರವಾಸಿ ತಾಣವಾಗಿ ನೋಡದೆ, ಒಂದು ಭಾವನಾತ್ಮಕ ಆಸ್ತಿಯಾಗಿ ಕಾಪಾಡಬೇಕಿದೆ. ಕೂಡಲೇ ಸಂಬಂಧಪಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಂಡು, ಬಾಲವನಕ್ಕೆ ಹೊಸ ಕಳೆ ನೀಡಬೇಕು ಮತ್ತು ಮಕ್ಕಳಿಗೆ ಸುರಕ್ಷಿತ ಆಟದ ವಾತಾವರಣ ನಿರ್ಮಿಸಿಕೊಡಬೇಕು. “ಕೇವಲ ಕಟ್ಟಡ ಕಟ್ಟಿದರೆ ಸಾಲದು, ಕಾರಂತರ ಆಶಯದಂತೆ ಮಕ್ಕಳ ಸೃಜನಶೀಲತೆಗೆ ವೇದಿಕೆಯಾಗಬೇಕು. ತಕ್ಷಣ ದುರಸ್ತಿ, ಭದ್ರತಾ ಸಿಬ್ಬಂದಿ ನೇಮಕ, ಸ್ವಚ್ಛತೆ ಕಾಪಾಡಬೇಕು” ಎಂದು ಕಾರಂತ ಅಭಿಮಾನಿ ಬಳಗ ಮತ್ತು ಪುತ್ತೂರು ಜನತೆ ಆಗ್ರಹಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್‌ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ

Published

on

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.

ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:

  • ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
  • ಶಾಖೆ: ದರ್ಬೆ, ಪುತ್ತೂರು
  • ಖಾತೆ ಸಂಖ್ಯೆ (A/c No): 1023202500000601
  • ಐಎಫ್‌ಎಸ್‌ಸಿ ಕೋಡ್ (IFSC): KARB0001023
  • ಗೂಗಲ್ ಪೇ ಸಂಖ್ಯೆ (G-Pay): 961163784



Continue Reading

Dakshina Kannada

ಕರಾವಳಿ ಮಕ್ಕಳಾಟ ಅಲ್ಲ, ಉಸ್ತುವಾರಿ ಆಯ್ಕೆಯಲ್ಲಿ ಎಚ್ಚರ ತಪ್ಪಿದರೆ ಇಡೀ ರಾಜ್ಯಕ್ಕೆ ಗಂಡಾಂತರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

Published

on

ಮಂಗಳೂರು: ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣದೊಂದು ಆತಂಕದ ವಾತಾವರಣ ಶುರುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಕಳವಳ ವ್ಯಕ್ತಪಡಿಸಿದ್ದಾರೆ. ಹೊಸ ಆಡಳಿತಗಾರರು ಹಾಗೂ ಉಸ್ತುವಾರಿಗಳ ಆಯ್ಕೆಯು ಕರಾವಳಿಯ ಕಾನೂನು ಸುವ್ಯವಸ್ಥೆಯ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಅವರು ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ.

ಐಪಿಎಸ್ ಅಧಿಕಾರಿಗಳ ಬದಲಾವಣೆ ಆತಂಕ:

ಜಿಲ್ಲೆಯಲ್ಲಿ ಸದ್ಯ ಕಾನೂನು ಸುವ್ಯವಸ್ಥೆಯ ಮೇಲೆ ಬಿಗಿ ಹಿಡಿತ ಹೊಂದಿರುವ ದಕ್ಷಿಣ ಕನ್ನಡದ ದಕ್ಷ ಐಪಿಎಸ್ ಅಧಿಕಾರಿಗಳನ್ನು ಬದಲಾಯಿಸುವ ಅಥವಾ ಹೊಸ ಆಡಳಿತಗಾರರು ಅವರ ಕೈಗಳನ್ನು ಕಟ್ಟಿ ಹಾಕುವ ಸಾಧ್ಯತೆಗಳೇ ಈ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಜಿಲ್ಲೆಯ ಕಂದಾಯ ಆಡಳಿತವನ್ನು ಜನಸ್ನೇಹಿಗೊಳಿಸುವ ದೊಡ್ಡ ಸವಾಲು ಕೂಡ ಹೊಸ ಆಡಳಿತದ ಮೇಲಿದೆ. ಜಿಲ್ಲೆಯ ಹಿತದೃಷ್ಟಿಯಿಂದ “ಒಂದೆರಡು ಹೆಸರುಗಳು ಸಚಿವರಾಗಿ ಬಾರದಿರಲಿ” ಎನ್ನುವುದೇ ಬಹುತೇಕ ಜನರ ಪ್ರಾರ್ಥನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಹರಿಪ್ರಸಾದ್, ರಮಾನಾಥ ರೈ ಅವರಂಥ ನಾಯಕತ್ವಕ್ಕೆ ಆಗ್ರಹ:

“ಕಳೆದ ವರ್ಷ ಸರಣಿ ಕೊಲೆಗಳು, ಮತೀಯ ಸಂಘರ್ಷದ ಚಟುವಟಿಕೆಗಳಿಂದ ಜಿಲ್ಲೆ ಹೈರಾಣಾಗಿ ಹೋಗಿದ್ದ ಸಂದರ್ಭದಲ್ಲಿ, ಪರಿಸ್ಥಿತಿಯನ್ನು ನಿಭಾಯಿಸಲು ಬಿ. ಕೆ. ಹರಿಪ್ರಸಾದ್ ಅಥವಾ ರಮಾನಾಥ ರೈ ಅವರಂತಹ ಹಿರಿಯ ನಾಯಕರ ಕೈಗೆ ಅಧಿಕಾರ ಸಿಗಬೇಕು ಎಂದು ಜನತೆ ಆಗ್ರಹಿಸುತ್ತಿದ್ದರು” ಎಂಬುದನ್ನು ಮುನೀರ್ ಕಾಟಿಪಳ್ಳ ಈ ಸಂದರ್ಭದಲ್ಲಿ ನೆನಪಿಸಿದ್ದಾರೆ.

ಬಾಲ ಬಿಚ್ಚಲು ಕಾಯುತ್ತಿವೆ ಅನಾಹುತಕಾರಿ ಶಕ್ತಿಗಳು:

ಹೊಸ ಮುಖ್ಯಮಂತ್ರಿಗಳು, ರಾಜೀನಾಮೆ ನೀಡಿರುವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ. ಸರಿಯಾದವರ ಕೈಗೆ ಜಿಲ್ಲೆಯ ಆಡಳಿತ ನೀಡದಿದ್ದಲ್ಲಿ, ಕಳೆದ ಒಂದು ವರ್ಷದಿಂದ ಉಸಿರು ಬಿಗಿಹಿಡಿದು ಕಾಯುತ್ತಿರುವ ಮತೀಯ ಶಕ್ತಿಗಳು ಮತ್ತು ಅನಾಹುತಕಾರಿ ಮಾಫಿಯಾಗಳು ಜಿಲ್ಲೆಯಲ್ಲಿ ಮತ್ತೆ ಮೇಲುಗೈ ಸಾಧಿಸಲಿವೆ. ಅವರು ಒಮ್ಮೆ ಬಾಲ ಬಿಚ್ಚಿದರೆ ಮುಂದೆ ನಿಯಂತ್ರಣ ಮಾಡುವುದು ಅಸಾಧ್ಯವಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ನಾಯಕತ್ವಕ್ಕೆ ನೇರ ಎಚ್ಚರಿಕೆ:

ಮುಂದಿನ ದಿನಗಳಲ್ಲಿ ಚುನಾವಣೆ ಬರಲಿದ್ದು, ರಾಜ್ಯ ಸರ್ಕಾರದ ಅಧಃಪತನಕ್ಕೆ ಕರಾವಳಿಯ ಅಧ್ವಾನಗಳೇ ಸಾಕಾಗುತ್ತದೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮರೆಯಬಾರದು.

ಸೈದ್ಧಾಂತಿಕವಾಗಿ ಹಾಗೂ ಆಡಳಿತಾತ್ಮಕವಾಗಿ ದೃಢವಾಗಿ ಇರುವವರಿಗೆ ಮಾತ್ರ ಜವಾಬ್ದಾರಿ ನೀಡಿ.

ವಿಪರೀತ ಹಣದ ಹುಚ್ಚು ಇರುವವರ ಕೈಗೆ ಜಿಲ್ಲೆಯ ಉಸ್ತುವಾರಿ ಅಥವಾ ಸಚಿವ ಸ್ಥಾನದ ಅವಕಾಶ ನೀಡದಂತೆ ಎಚ್ಚರ ವಹಿಸಿ.

“ಕರಾವಳಿ ಎಂಬುದು ಮಕ್ಕಳಾಟ ಅಲ್ಲ. ಇಲ್ಲಿ ಎಚ್ಚರ ತಪ್ಪಿದರೆ ಅದರ ಭೀಕರ ಪರಿಣಾಮವನ್ನು ಇಡೀ ರಾಜ್ಯವೇ ಅನುಭವಿಸಬೇಕಾಗುತ್ತದೆ” ಎಂದು ಮುನೀರ್ ಕಾಟಿಪಳ್ಳ ಅತ್ಯಂತ ಕಡಕ್ ಆಗಿ ಎಚ್ಚರಿಸಿದ್ದಾರೆ




Continue Reading

Condolences

ಬ್ರಿಟಿಷರ ವಿರುದ್ಧ ಸಿಡಿದೆದ್ದ ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣೆ: ಮಂಜ ಬೈದ್ಯರ ಹೆಸರನ್ನು ಶಾಶ್ವತವಾಗಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ – ಸಂಸದ ಕೋಟ ಶ್ರೀನಿವಾಸ ಪೂಜಾರಿ

Published

on

ಉಪ್ಪಿನಂಗಡಿ: “ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ 20 ವರ್ಷಗಳ ಮೊದಲೇ ಬ್ರಿಟಿಷರ ವಿರುದ್ಧ ಧೀರೋದಾತ್ತ ಹೋರಾಟ ನಡೆಸಿ ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯರ ದೇಶಪ್ರೇಮದ ಚರಿತ್ರೆ 190 ವರ್ಷಗಳ ಬಳಿಕ ಮುನ್ನೆಲೆಗೆ ಬರುತ್ತಿರುವುದು ವಿಶೇಷವಾಗಿದೆ. ಅವರ ಹೆಸರನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಸುವ ಕಾರ್ಯದತ್ತ ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ,” ಎಂದು ಸಂಸದ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಉಪ್ಪಿನಂಗಡಿಯ ನೇತ್ರಾವತಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಕ್ರಾಂತಿಕಾರಿ ಉಬಾರ್ ಮಂಜ ಬೈದ್ಯರ 190ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ”ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಅಧ್ಯಯನ ವರದಿ ಮಂಡನೆ ಮತ್ತು ಗಣ್ಯರ ಅನಿಸಿಕೆ: ಕಾರ್ಯಕ್ರಮದಲ್ಲಿ ಪತ್ರಕರ್ತ ಉದಯಕುಮಾರ್ ಅವರು ಮಂಜ ಬೈದ್ಯರ ಕುರಿತಾದ ಸುದೀರ್ಘ ಅಧ್ಯಯನ ವರದಿಯನ್ನು ಮಂಡಿಸಿದರು. ವೈದ್ಯರಾದ ಡಾ. ಸುಪ್ರೀತ್ ಲೋಬೋ, ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಝೀಝ್‌ ಬಸ್ತಿಕಾರ್ ಮಾತನಾಡಿ ವಿಚಾರ ಮಂಡಿಸಿದರು.

1837ರಲ್ಲಿ ಅಂದಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯ ಖಜಾನೆಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯರು, ಬ್ರಿಟಿಷ್ ಕಂಪೆನಿ ಸರ್ಕಾರದ ಅಮಾನುಷ ನಡಾವಳಿಗಳನ್ನು ಸಹಿಸದೆ ತಾವೇ ಕರ್ತವ್ಯ ನಿರ್ವಹಿಸುತ್ತಿದ್ದ ಖಜಾನೆಯ ಅಧಿಕಾರಿಗಳನ್ನು ಕಟ್ಟಿಹಾಕಿದ್ದರು. ಬಳಿಕ ಖಜಾನೆಯಲ್ಲಿದ್ದ ಧನಕನಕಗಳನ್ನು ಬಾಚಿಕೊಂಡು, ಆ ವೇಳೆ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿದ್ದ ಕಲ್ಯಾಣಸ್ವಾಮಿಗೆ ತಲುಪಿಸಿದ್ದರು. ಆ ಮೂಲಕ 13 ದಿನಗಳ ಕಾಲ ತುಳುನಾಡನ್ನು ಬ್ರಿಟಿಷರಿಂದ ಮುಕ್ತಗೊಳಿಸಿದ ಇತಿಹಾಸವನ್ನು ಸ್ಮರಿಸಿದ ಗಣ್ಯರು, ಇತಿಹಾಸದ ಪುಟಗಳಲ್ಲಿ ಮರೆಯಾಗಿದ್ದ ಇವರ ತ್ಯಾಗ 190 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವುದು ಹೆಮ್ಮೆಯ ವಿಚಾರ ಎಂದರು.

ಸರ್ಕಾರದ ಮಟ್ಟದಲ್ಲಿ ಶಾಶ್ವತ ಯೋಜನೆ: ಕೋಟ ಭರವಸೆ ಮುಂದುವರಿದು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, “ಮಂಜ ಬೈದ್ಯರ ಸಂಸ್ಮರಣೆ ಮಾಡುವ ಈ ದಿನ ನಮ್ಮೆಲ್ಲರ ಬದುಕಿನ ಸಾರ್ಥಕ್ಯದ ಕ್ಷಣವಾಗಿದೆ. ಇವರ ನೆನಪನ್ನು ಶಾಶ್ವತವಾಗಿ ಅಮರವಾಗಿಸಲು ಸರ್ಕಾರದ ನೆಲೆಯಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಾನು ಮತ್ತು ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು ಚರ್ಚಿಸಿ, ಪೂರಕವಾದ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ,” ಎಂದು ಭರವಸೆ ನೀಡಿದರು.

ಕಲ್ಲೇರಿಯಲ್ಲಿ ವೃತ್ತ ಮತ್ತು ಸ್ಮಾರಕ ನಿರ್ಮಾಣಕ್ಕೆ ಸಹಕಾರ: ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, “ಬ್ರಿಟಿಷರ ದೌರ್ಜನ್ಯ ಮತ್ತು ಕಪಿಮುಷ್ಟಿಯಿಂದ ನಮ್ಮ ಸಮಾಜ ಹಾಗೂ ಜನರನ್ನು ಪಾರು ಮಾಡಲು ಕ್ರಾಂತಿಯ ಕಿಚ್ಚು ಹೊತ್ತಿಸಿ ಪ್ರಾಣತ್ಯಾಗ ಮಾಡಿದ ಅಪ್ರತಿಮ ವೀರ ಮಂಜ ಬೈದ್ಯರು. ಸಂಸ್ಮರಣಾ ಸಮಿತಿಯ ಬೇಡಿಕೆಯಂತೆ ನನ್ನ ಕ್ಷೇತ್ರ ವ್ಯಾಪ್ತಿಯ ಕಲ್ಲೇರಿಯಲ್ಲಿ ವೃತ್ತ (ಸರ್ಕಲ್) ನಿರ್ಮಿಸಿ ಅದಕ್ಕೆ ಮಂಜ ಬೈದ್ಯರ ಹೆಸರಿಡಲು ಸಂಪೂರ್ಣ ಸಹಕಾರ ನೀಡಲಾಗುವುದು. ಇದರೊಂದಿಗೆ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಕಟ್ಟಡವೊಂದಕ್ಕೆ ಇವರ ಹೆಸರಿಡುವ ಹಾಗೂ ಅವರ ಮೂಲ ಮನೆಯ ಬಳಿ ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಎಲ್ಲರ ಸಲಹೆ ಪಡೆದು ಮುಂದುವರಿಯಲಾಗುವುದು,” ಎಂದರು.

ಒಗ್ಗಟ್ಟಿನಿಂದ ಹೋರಾಡಿದ್ದರೆ ಬ್ರಿಟಿಷರು ಆಳುತ್ತಿರಲಿಲ್ಲ: ಪ್ರತಾಪ್ ಸಿಂಹ ನಾಯಕ್ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, “ಮಂಜ ಬೈದ್ಯರಂತಹ ಕ್ರಾಂತಿಕಾರಿಗಳ ಹೋರಾಟದ ಸಮಯದಲ್ಲಿ ಇಡೀ ದೇಶವೇ ಒಂದಾಗಿ ನಿಂತಿದ್ದರೆ ಬ್ರಿಟಿಷರು ನಮ್ಮನ್ನು ಆಳಲು ಸಾಧ್ಯವಿರುತ್ತಿರಲಿಲ್ಲ. ಮಂಜ ಬೈದ್ಯರ ಬಲಿದಾನ ಇತಿಹಾಸದ ಪುಟಗಳಲ್ಲಿ ಮುನ್ನೆಲೆಗೆ ಬರಲು 190 ವರ್ಷಗಳು ಬೇಕಾಯಿತು. ಈಗಲಾದರೂ ಅವರ ತ್ಯಾಗವನ್ನು ಅಮರವಾಗಿಸುವ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ,” ಎಂದರು.

ಭವ್ಯ ಚಾಲನೆ ಹಾಗೂ ಇತಿಹಾಸದ ಹಿನ್ನೆಲೆ: ‘ವಂದೇ ಮಾತರಂ’ ಗೀತೆಯ ಗಾಯನದೊಂದಿಗೆ ಆರಂಭವಾದ ಈ ಅಪೂರ್ವ ಕಾರ್ಯಕ್ರಮಕ್ಕೆ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಧಾಕೃಷ್ಣ ನಾಯಕ್ ಅವರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸಿ, ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಭವ್ಯ ಚಾಲನೆ ನೀಡಿದರು.

1837ರಲ್ಲಿ ನಡೆದ ಐತಿಹಾಸಿಕ ‘ಅಮರ ಸುಳ್ಯ ದಂಗೆ’ಯ ಮೂಲಕ ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ, ಹಾಲೇರಿ ರಾಜವಂಶಸ್ಥರ ಧ್ವಜ ಹಾರಿಸಿ ಕೇವಲ 13 ದಿನಗಳ ಕಾಲ ತುಳುನಾಡಿಗೆ ಸ್ವಾತಂತ್ರ್ಯ ತಂದುಕೊಡಲಾಗಿತ್ತು. ತದನಂತರ ಬ್ರಿಟಿಷ್ ಸೈನ್ಯ ಇವರನ್ನು ಬಂಧಿಸಿ 1837ರ ಮೇ 27ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬಹಿರಂಗವಾಗಿ ನೇಣುಗಂಬಕ್ಕೇರಿಸಿತು. ತಾಯ್ನಾಡಿನ ದಾಸ್ಯ ಮುಕ್ತಿಗಾಗಿ ಬಲಿದಾನಗೈದ ಈ ಮಹಾನ್ ಚೇತನದ ಸ್ಮರಣೆ ಇಂದಿನ ಯುವ ಪೀಳಿಗೆಗೆ ಸದಾ ಸ್ಫೂರ್ತಿಯಾಗಿದೆ.

ಕಾರ್ಯಕ್ರಮದಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ, ವಿವಿಧ ಸಂಘಟನೆಗಳ ಪ್ರಮುಖರು, ಮಂಜ ಬೈದ್ಯರ ವಂಶಸ್ಥರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ ವೀರ ಹೋರಾಟಗಾರನಿಗೆ ಭಾವಪೂರ್ಣ ನಮನ ಸಲ್ಲಿಸಿದರು.ಜಾತಿ, ಧರ್ಮ ಮತ್ತು ರಾಜಕೀಯ ಭೇದ ಮರೆತು ಇತಿಹಾಸದ ವೀರನನ್ನು ಸ್ಮರಿಸಿದ ಕ್ಷಣಕ್ಕೆ ಉಪ್ಪಿನಂಗಡಿ ಸಾಕ್ಷಿಯಾಯಿತು.




Continue Reading

Trending

Copyright © 2025 Deevatige

error: Content is protected !!