INTERNATIONAL
ಅಮೆರಿಕಕ್ಕೆ ಸಾಥ್ ನೀಡಿದರೆ ಹುಷಾರ್: ಗಲ್ಫ್ ರಾಷ್ಟ್ರಗಳಿಗೆ ಇರಾನ್ ಖಡಕ್ ಎಚ್ಚರಿಕೆ!
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರಣಿ ಎಚ್ಚರಿಕೆಗಳ ಬೆನ್ನಲ್ಲೇ ಇರಾನ್ ಈಗ ನೆರೆಹೊರೆಯ ಗಲ್ಫ್ ರಾಷ್ಟ್ರಗಳಿಗೆ ಬಹಿರಂಗ ಎಚ್ಚರಿಕೆ ನೀಡಿದೆ.
ಅಮೆರಿಕದ ಒತ್ತಡಕ್ಕೆ ಮಣಿದು ಇರಾನ್ ವಿರುದ್ಧ ಮಿಲಿಟರಿ ಕಾರ್ಯಾಚರಣೆಗೆ ಬೆಂಬಲ ನೀಡಿದರೆ ಅಥವಾ ಸಹಕರಿಸಿದರೆ ಅದರ ಪರಿಣಾಮ ಭೀಕರವಾಗಿರುತ್ತದೆ ಎಂದು ಇರಾನ್ ಎಚ್ಚರಿಸಿದೆ.
‘ನಮ್ಮ ಗಣಿತವೇ ಬೇರೆ’ – ಇರಾನ್ ಉಪಾಧ್ಯಕ್ಷ
ಇರಾನ್ನ ಉಪಾಧ್ಯಕ್ಷ ಎಸ್ಮಾಯಿಲ್ ಸಘಾಬ್ ಎಸ್ನಹಾನಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ. ತಮ್ಮ ಸಂದೇಶದಲ್ಲಿ ವಿಚಿತ್ರ ಗಣಿತವೊಂದನ್ನು ಉಲ್ಲೇಖಿಸಿರುವ ಅವರು, “ನಮ್ಮ ಗಣಿತವೇ ಬೇರೆ, ಇಲ್ಲಿ ಒಂದು ತೈಲ ಬಾವಿ ಎಂದರೆ ನಾಲ್ಕು ತೈಲ ಬಾವಿಗಳಿಗೆ ಸಮ” ಎಂದು ಹೇಳಿದ್ದಾರೆ. ದಾಳಿ ನಡೆಸುವವರಿಗೆ ಬೆಂಬಲ ನೀಡುವ ದೇಶಗಳ ಮೇಲೆ ದೊಡ್ಡ ಮಟ್ಟದ ಹಾನಿ ಮಾಡುವ ಮುನ್ಸೂಚನೆ ಇದಾಗಿದೆ.
ಟ್ರಂಪ್ ಲೇವಡಿಗೆ ಇರಾನ್ ತಿರುಗೇಟು
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಆರ್ಥಿಕವಾಗಿ ಕುಸಿಯುತ್ತಿದೆ ಮತ್ತು ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿಕೆ ನೀಡಿದ್ದರು. “ಇರಾನ್ ಈಗ ಹಸಿವಿನಿಂದ ಬಳಲುತ್ತಿದೆ ಮತ್ತು ದಿನಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿದೆ” ಎಂದು ಟ್ರಂಪ್ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್ ಈಗ ತನ್ನ ತೈಲ ಪೂರೈಕೆಯ ಪ್ರಮುಖ ಮಾರ್ಗಗಳಾದ ಹಾರ್ಮುಜ್ ಜಲಸಂಧಿ ಮತ್ತು ಬಾಬ್ ಎಲ್-ಮಂಡೇಬ್ ಅನ್ನು ಅಸ್ತ್ರವಾಗಿ ಬಳಸಲು ಮುಂದಾಗಿದೆ.
ಜಲಸಂಧಿ ಬಂದ್ ಬೆದರಿಕೆ
ಇರಾನ್ ಸಂಸತ್ತಿನ ಸ್ಪೀಕರ್ ಎಂ.ಬಿ. ಘಾಲಿಬಾಫ್ ಪ್ರತಿಕ್ರಿಯಿಸಿ, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಇರಾನ್ ತನ್ನದೇ ಆದ ಹಿಡಿತ ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕವು ಇರಾನ್ ಅನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಇರಾನ್ ವಿಶ್ವಕ್ಕೆ ತೈಲ ಪೂರೈಕೆಯಾಗುವ ಪ್ರಮುಖ ಜಲಸಂಧಿಗಳನ್ನು ಬಂದ್ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
“ಒಂದು ವೇಳೆ ಈ ಪರಿಸ್ಥಿತಿ ಹೀಗೆಯೇ ಮುಂದುವರಿದು ಬೇಸಿಗೆಯ ಅವಧಿಯವರೆಗೂ ತೈಲ ಪೂರೈಕೆಯಲ್ಲಿ ವ್ಯತ್ಯಯವಾದರೆ, ಅಮೆರಿಕದಲ್ಲಿ ಇಂಧನ ದರ ಗಗನಕ್ಕೇರಲಿದೆ. ಇದು ಅಲ್ಲಿನ ಮುಂಬರುವ ಚುನಾವಣೆಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿದ್ದು, ಟ್ರಂಪ್ ಸರ್ಕಾರಕ್ಕೆ ಭಾರಿ ಹೊಡೆತ ನೀಡಲಿದೆ” ಎಂದು ಘಾಲಿಬಾಫ್ ಹೇಳಿದ್ದಾರೆ.
ಗಲ್ಫ್ ರಾಷ್ಟ್ರಗಳಿಗೆ ತಲೆನೋವು
ಒಟ್ಟಾರೆಯಾಗಿ ಅಮೆರಿಕ ಮತ್ತು ಇರಾನ್ ನಡುವಿನ ಈ ಶೀತಲ ಸಮರ ಈಗ ಗಲ್ಫ್ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದೆ. ಅಮೆರಿಕದ ಜೊತೆಗೋ, ಇರಾನ್ ಜೊತೆಗೋ ನಿಲ್ಲುವ ಅನಿವಾರ್ಯತೆಗೆ ಸಿಲುಕಿರುವ ಗಲ್ಫ್ ದೇಶಗಳು ತೀವ್ರ ಒತ್ತಡ ಎದುರಿಸುತ್ತಿವೆ.



INTERNATIONAL
ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಗೆ 89ರ ಸಂಭ್ರಮ
• ಜ್ಯೋತಿಪ್ರಕಾಶ್ ಪುಣಚ
ಸಾಮಾಜಿಕ ಕ್ರಾಂತಿಗಳ ಹರಿಕಾರ, ಮಂಗಳೂರಿನ ಸಾಂಸ್ಕೃತಿಕ ರಾಯಭಾರಿ "ಬಡವರ ಬಂಧು’ ಬಿ. ಜನಾರ್ಧನ ಪೂಜಾರಿ
ಅಪ್ರತಿಮ ಪ್ರಾಮಾಣಿಕತೆ, ಬಡವರ ಬಗೆಗಿನ ತುಡಿತ ಹಾಗೂ ಸಾರ್ವಜನಿಕ ಜೀವನದಲ್ಲಿ ಶಿಸ್ತಿಗೆ ಹೆಸರಾದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಇಂದು (ಏಪ್ರಿಲ್ 27) ತಮ್ಮ 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಒಂದಿಷ್ಟು…
ಹೌದು, ನಮ್ಮ ದೇಶ ಸ್ವಾತಂತ್ರ್ಯವನ್ನು ಪಡೆದು ರಜತ ಸಂಭ್ರಮದ ಅಂಚಿನಲ್ಲಿರುವ ಸಮಯವದು. ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತಿ ಪಡೆದು ಸಂತೃಪ್ತ ಜೀವನದ ಕನಸು ಕಂಡ ರೈತಾಪಿ ಜನಾಂಗ ಶ್ರೀಮಂತರ ದಬ್ಬಾಳಿಕೆಯಡಿಯಲ್ಲಿ ಜೀವನ ನಡೆಸಬೇಕಾಗಿತ್ತು ! ಗೇಣಿದಾರರು ಭೂಮಾಲಿಕರ ಹಿಡಿತದಲ್ಲಿ ನರಳುತ್ತಾ ಬದುಕು ಸವೆಸುತ್ತಿದ್ದರು. ನಮ್ಮ ದೇಶದ ಗ್ರಾಮೀಣ ಪ್ರದೇಶಗಳು ಸಾಮಾಜಿಕ ಪಿಡುಗುಗಳಿಂದ ತತ್ತರಿಸುತಿತ್ತು. ಉಚ್ಛಜಾತಿ, ನೀಚಜಾತಿ, ಸ್ಪರ್ಶಕ್ಕೆ ಅಯೋಗ್ಯರು, ಸಹ ಪಂಕ್ತಿಗೆ ಸೇರದವರು, ಅಸ್ವತಂತ್ರರು, ವಿದ್ಯಾಹೀನರು ಒಂದು ಹೊತ್ತಿನ ಹಿಡಿಯಕ್ಕಿಗೂ ಸಿರಿವಂತರ ಜೀತದಾಳುಗಳಾಗಿ ದುಡಿಯಲೇ ಬೇಕಾದವರು. ಧನಿಗಳ ಅಣತಿಯಂತೆ ಒಪ್ಪೊತ್ತಿನ ಊಟಕ್ಕಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಾ ಬದುಕು ಸಾಗಿಸಲು ಪರದಾಡುತ್ತಿದ್ದ ನಿರ್ಗತಿಕರು. ಹೀಗೆ ಜಾತಿ-ನೀತಿ, ಉಳ್ಳವರು-ಬಲ್ಲವರು ಎಂಬ ದುಷ್ಟ ಶಕ್ತಿಗಳ ಕಪಿಮುಷ್ಟಿಯೊಳಗೆ ಚಿತ್ರಹಿಂಸೆ ಪಡುತ್ತಾ ಈ ಜಗತ್ತಿನಲ್ಲಿ ಬದುಕುವುದೇ ಘೋರ ಅಪರಾಧವೆಂದು ಸಾವು ಬದುಕಿನ ಹೋರಾಟದ ಮದ್ಯೆ ಧನಿಗಳವರ ದೌರ್ಜನ್ಯ ಅಟ್ಟಹಾಸಗಳಿಗೆ ಬೆದರಿ ದಾಸ್ಯದ ಬದುಕಿನಿಂದ ಬಿಡುಗಡೆಯನ್ನು ಬಯಸುತ್ತಾ ಕತ್ತಲಿನಲ್ಲಿ ಕದ್ದುಮುಚ್ಚಿ ಜೀವನ ನಡೆಸುತ್ತಿದ್ದ ಗ್ರಾಮೀಣ ಪ್ರದೇಶದ ಬಡವರ ಬದುಕು ಶೋಚನೀಯವಾಗಿತ್ತು. ಉಳ್ಳವರ ದಬ್ಬಾಳಿಕೆಯಲ್ಲಿ ನ್ಯಾಯವೆಂಬುವುದೇ ಬಡ ವರ್ಗದವರಿಗೆ ಮರೀಚಿಕೆಯಾಗಿತ್ತು. ಆ ಸಂದರ್ಭಕ್ಕೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಾಮಾಣಿಕತೆಯಿಂದ ಬಡ ನಿರ್ಗತಿಕರ ಪರವಾಗಿ ನಿಂತು ಉಚಿತ ನ್ಯಾಯದಾನ, ಹೋರಾಟ ಮತ್ತು ಸಮಾಜ ಸೇವೆಯ ಮೂಲಕ ಬಡವರ ಆಶಾಕಿರಣವಾಗಿ ವಕೀಲ ವೃತ್ತಿಯಲ್ಲಿ ಕೇಳಿಬರುತ್ತಿದ್ದ ಎತ್ತರದ ಹೆಸರು ಬಿ. ಜನಾರ್ಧನ ಪೂಜಾರಿ.
ಮಂಗಳೂರು ಬೊಕ್ಕಪಟ್ನದ ಸ್ವಾಭಿಮಾನಿ ಬಡಕುಟುಂಬದಲ್ಲಿ 1937 ಎಪ್ರಿಲ್ 27ರಂದು ಜನಾರ್ಧನ ಪೂಜಾರಿಗಳ ಜನನ. ತಂದೆ ದಿವಂಗತ ಜಾರಪ್ಪ ಪೂಜಾರಿ. ತಾಯಿ ದಿವಂಗತ ಚೆನ್ನಮ್ಮ. ಹಸಿವು ಬಡತನ ಅಸ್ಪçಶ್ಯತೆ ಶೋಷಣೆಯನ್ನು ಸ್ವತಃ ತಾನು ಅನುಭವಿಸುತ್ತಾ, ತನ್ನ ಕಠಿಣ ಪರಿಶ್ರಮದಿಂದ ಬೆಳೆದು ಬಂದ ಪೂಜಾರಿಯವರು ಶಾಲಾ ಕಾಲೇಜಿನಲ್ಲಿ ಮೆರಿಟ್ ಸ್ಕಾಲರ್ ಶಿಪ್ ಪಡೆದು ಕಾನೂನು ಪದವಿ ಪಡೆದರು. ತನ್ನ ಅಧ್ಯಯನದ ಮಧ್ಯೆಯೇ ತನ್ನ ಜೀವನವನ್ನು ಶೋಷಿತ ವರ್ಗದ ಪರಿವರ್ತನೆಗಾಗಿ, ಸವೆಸಿ ಸಮಾಜದಲ್ಲಿ ಸಮಾನತೆಯ ವ್ಯವಸ್ಥೆಯನ್ನು ರೂಪಿಸಿ ಜಗತ್ತಿನ ಸಮನ್ವಯತೆಯ ಹರಿಕಾರರಾದ ಮಹಾಕ್ರಾಂತಿ ಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳಿಂದ ಪ್ರಭಾವಿತರಾಗಿ ಅದನ್ನು ಮೈಗೂಡಿಸಿಕೊಂಡರು.

ಮಾನವೀಯತೆಯ ನೆಲೆಯನ್ನು ಕಡಿದುಕೊಂಡು ನರಳಾಡುತ್ತಿದ್ದ ಸಮಾಜವನ್ನು ಆಧ್ಯಾತ್ಮಿಕ ಶಕ್ತಿ, ಧೀ ಶಕ್ತಿ, ಸಾಹಿತ್ಯಗಳ ಮೂಲಕ ಪರಿವರ್ತನೆಗೈದು ಜಾತೀಯತೆಯ ಕಗ್ಗತ್ತಲಿನಲ್ಲಿದ್ದ ಸಮಾಜಕ್ಕೆ ನಿಜವಾದ ಮಾನವೀಯ ಆದರ್ಶಗಳ ಬೆಳಕು ತೋರಿಸಿ ಶೋಷಿತ, ದಲಿತರ ಉದ್ಧಾರ ಮಾಡಿದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳಂತೆ ತಮ್ಮ ಪೂರ್ಣ ಜೀವಿತವನ್ನು ದೀನ ದಲಿತರ, ಶೋಷಿತರ ಆಕ್ರಂಧನ ರೋಧನಗಳಿಗೆ ಸಾಂತ್ವನ ನೀಡಲು ಬಯಸಿದರು. ಭಗವಂತನ ಸೃಷ್ಠಿಯಲ್ಲಿ ಸಮಾನತೆ ಪಡೆದುಕೊಂಡು ಬಂದಿರುವ ಮಾನವ ಕುಲಕ್ಕೆ ಸಮಾಜದಲ್ಲಿ ಸಮಾನರಾಗಿ ಜೀವಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲೂ ಪ್ರತಿವಾದಿಸಿದರು. ಸತ್ಯವನ್ನು ಸತ್ಯವೆಂದೇ ಒಪ್ಪಿಕೊಳ್ಳಬೇಕು. ಬೇರೆಯವರ ಹಿತಕ್ಕಾಗಿ, ನಮ್ಮ ಒಳಿತಿಗಾಗಿ ಸತ್ಯವನ್ನು ಮರೆಮಾಚಬಾರದು ಎಂಬ ಗುರುಗಳ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರು. ಬಡವರ, ದಲಿತರ ನಿರ್ಗತಿಕರ ನೋವು ಸಂಕಷ್ಟಗಳಿಗೆ ಸಹಾಯಹಸ್ತ ಚಾಚಿದರು. ಬಡವರ ಪರವಾಗಿ ಧರ್ಮಾರ್ಥವಾಗಿ ನ್ಯಾಯಾಲಯದಲ್ಲಿ ವಾದಿಸಿ ನ್ಯಾಯ ಒದಗಿಸಿಕೊಡುವುದರ ಮೂಲಕ ಗುರು ತತ್ವಗಳ ಅನುಷ್ಠಾನವನ್ನು ಆರಂಭಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಸುಮಾರು 19 ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿ ಓರ್ವ ಪ್ರಸಿದ್ಧ ಹೆಸರಾಂತ ಕ್ರಿಮಿನಲ್ ವಕೀಲರಾಗಿ ಹೆಸರು ಪಡೆಯುವುದರೊಂದಿಗೆ “ದೀನದಲಿತರ ಬಂಧು” ಎಂದೇ ಪ್ರಸಿದ್ಧಿಯಾದರು. 1968ರಲ್ಲಿ ವಿವಾಹವಾಗಿ, ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಗೇಣಿದಾರ ರೈತರ ಆಪದ್ಬಾಂಧವ
ಭೂಹಿಡುವಳಿದಾರರಿಂದ ಗೇಣಿದಾರ ರೈತರು ಪಡುತ್ತಿರುವ ಸಂಕಷ್ಟವನ್ನು ಮನಗಂಡ ಭಾರತದ ಅಂದಿನ ಪ್ರಧಾನಿಯಾಗಿದ್ದ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು 1972ರಲ್ಲಿ “ಉಳುವವನೇ ಹೊಲದೊಡೆಯ” ಎಂಬ ಭೂಮಸೂದೆಯನ್ನು ದೇಶದಾದ್ಯಂತ ಜಾರಿ ಮಾಡಿ ಅನುಷ್ಠಾನ ಗೊಳಿಸುವ ಮೂಲಕ ಗೇಣಿದಾರನನ್ನೇ ಭೂಮಾಲಕನನ್ನಾಗಿಸಿ ಸಿರಿವಂತರ ದರ್ಪ ದೌರ್ಜನ್ಯಗಳಿಗೆ ಕಡಿವಾಣ ಹಾಕಿದರು. ಆ ಸಂದರ್ಭಕ್ಕೆ ಭೂಮಾಲಿಕರು ಒಗ್ಗಟ್ಟಾಗಿ ಸೇರಿಕೊಂಡು ಬಹುಸಂಖ್ಯೆಯಲ್ಲಿದ್ದ ಗೇಣಿದಾರ ರೈತರ ಮನೆ, ಕೊಟ್ಟಿಗೆ ಹಟ್ಟಿಗಳನ್ನು ರಾತ್ರೋ ರಾತ್ರಿಯೇ ಮುರಿದು, ಬೆಂಕಿಯಿಟ್ಟು ನಾಶ ಪಡಿಸಿದ್ದಲ್ಲದೆ, ಅವರನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಿ ಊರಿನಿಂದಲೇ ಓಡಿಸಿ ಬೀದಿಪಾಲು ಮಾಡುತ್ತಿದ್ದರು. ಆ ಸಂದರ್ಭಕ್ಕೆ ಉಳ್ಳವರ ದಬ್ಬಾಳಿಕೆಯ ವಿರುದ್ಧ ತೊಡೆ ತಟ್ಟಿ ಬಡವರ ನ್ಯಾಯದ ಪರವಾಗಿ ದೈರ್ಯವಾಗಿ ನಿಂತು ಮನೆ ಜಮೀನು ಕಳೆದು ಕೊಂಡ ರೈತಾಪಿ ಬಡ ಜನರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ, ಕಾನೂನು ಮೂಲಕ ಹೋರಾಡಿ, ಭೂಮಸೂದೆಯ ಕಾಯ್ದೆಯಂತೆ ಉಳುವವನಿಗೇ ಭೂಮಿ ಸಿಗುವಂತೆ ಮಾಡಿ ಅದೆಷ್ಟೋ ರೈತರ ಕಣ್ಣೀರು ಒರೆಸಿ ಅಪದ್ಬಾಂಧವನಾಗಿ ನಿರ್ಗತಿಕರ ಸೇವೆ ಮಾಡುವ ಮೂಲಕ ದೀನ ದಲಿತರ ನೇತಾರನಾಗಿ ಜನಾರ್ಧನ ಪೂಜಾರಿಗಳವರು ಗುರುತಿಸಿಕೊಂಡರು.

ಕೈಬೀಸಿ ಕರೆದ ರಾಜಕೀಯ ಕ್ಷೇತ್ರ.
ಬಡವರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಬಡರೈತರ ಪರವಾಗಿ ಹಣ ಪಡೆದುಕೊಳ್ಳದೆ ಉಚಿತವಾಗಿ ರೈತಾಪಿ ವರ್ಗದವರ ಸಮಸ್ಯೆಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ ನ್ಯಾಯ ಒದಗಿಸಿಕೊಟ್ಟು ಬದುಕು ನೀಡುತ್ತಿದ್ದ ಜನಪರ ಅಪತ್ಬಾಂಧವ ಎಂದೇ ಮನೆಮಾತಾಗಿದ್ದ ಪೂಜಾರಿಯವರ ವ್ಯಕ್ತಿತ್ವ ಊರಿಗೆ ಊರೇ ಹರಿದಾಡಿತು.
ಪೂಜಾರಿಯವರು ಭೂಮಸೂದೆ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಬಡ ರೈತರ ಪರವಾಗಿ ತಳೆದ ನಿಲುವು, ನ್ಯಾಯದ ಮೇಲಿನ ಹೋರಾಟ, ದಬ್ಬಾಳಿಕೆಯ ವಿರುದ್ಧ ತೋರುತ್ತಿದ್ದ ದೈರ್ಯ, ಜನಾಕರ್ಷಣೆಯ ಸಂಘಟನಾ ಚತುರತೆಯಿಂದಾಗಿ ಇವರಲ್ಲಿದ್ದ ಅಸಾಧಾರಣವಾದ ಅಸದೃಶ್ಯವಾದ ಮೇರು ವ್ಯಕ್ತಿತ್ವ ಅಂದಿನ ಕರ್ನಾಟಕದ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸುಗಳ ಕಣ್ಣಿಗೆ ಬಿತ್ತು. ಪೂಜಾರಿಯವರ ಜನಪರ ಸೇವೆಯನ್ನು ಬಡಜನತೆಯ ಮೇಲಿನ ಕಾಳಜಿ, ಮೇರು ವ್ಯಕ್ತಿತ್ವವನ್ನು ಮುಖ್ಯ ಮಂತ್ರಿಗಳು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಪರಿಚಯಿಸಿದರಲ್ಲದೆ, ಅವರ ಮನವೊಲಿಸಿ ಜಿಲ್ಲೆಯ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ವಿದ್ಯಾವಂತನಾಗಿಯೂ ಬುದ್ದಿವಂತನಾಗಿಯೂ ನಮ್ಮ ಪಕ್ಷದ ದ್ಯೇಯದಂತೆ ಬಡವರ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುವ ಪೂಜಾರಿಗಿಂತ ಇನ್ನೊಬ್ಬ ವ್ಯಕ್ತಿಯಿಲ್ಲ ಎಂಬುವುದಾಗಿ ನೇರವಾಗಿ ತಿಳಿಹೇಳಿ ಪೂಜಾರಿಯವರಿಗೆ ಟಿಕೇಟ್ ತೆಗೆಸಿಕೊಟ್ಟರು. ಇಡೀ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಜನಪ್ರಿಯವಾಗಿದ್ದ ಪೂಜಾರಿಯವರು ಬಹುಮತದಿಂದ ಮಂಗಳೂರು ಲೋಕಸಭಾ ಸಂಸದರಾಗಿ ರಾಜಕೀಯ ಸೇವೆ ಆರಂಭಿಸಿದರು.

ಮಂಗಳೂರು ಕ್ಷೇತ್ರದಿಂದ ಸತತ 4 ಬಾರಿ ಆಯ್ಕೆ; ಎರಡು ಬಾರಿ ರಾಜ್ಯ ಸಭೆಗೆ.
ಪೂಜಾರಿಯವರನ್ನು ಜನತೆ ಮಂಗಳೂರು ಲೋಕಸಭಾ ಕ್ಷೇತ್ರದಿಂದ 1977. 1980, 1984, ಮತ್ತು 1989ರಲ್ಲಿ, ಹೀಗೆ ಒಟ್ಟು 4 ಬಾರಿ ಆರಿಸಿ ಕಳುಹಿಸಿದ್ದಾರೆ. 1977ರಲ್ಲಿ ಬಿಎಲ್ಡಿ ಪಕ್ಷದ ಎ.ಕೆ ಸುಬ್ಬಯ್ಯ ಅವರನ್ನು 78328 ಮತಗಳ ಅಂತರದಿAದ ಪರಾಭವ ಗೊಳಿಸಿ 6ನೇ ಲೋಕ ಸಭೆಯನ್ನು ಪ್ರವೇಶಿಸಿದ್ದಾರೆ. 1980ರಲ್ಲಿ ಜೆಎನ್ಪಿಯ ಕರಂಬಳ್ಳಿ ಸಂಜೀವ ಶೆಟ್ಟಿ ಅವರಿಂದ 1,28897 ಹೆಚ್ಚು ಮತಗಳನ್ನು ಪಡೆದು 7ನೇ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದಾರೆ. 1984ರಲ್ಲಿ ಬಿಜೆಪಿಯ ಕೆ. ರಾಮಭಟ್ಟರನ್ನು 1,19399 ಮತಗಳಿಂದ ಸೋಲಿಸಿ ಮಂಗಳೂರಿನ ಸಂಸದರಾಗಿ 8ನೇ ಲೋಕ ಸಭೆಯನ್ನಲಂಕರಿಸಿದ್ದಾರೆ. 1989 ರಲ್ಲಿ ಬಿಜೆಪಿಯ ಧನಂಜಯ ಕುಮಾರ್ ಅವರಿಂದ 91,097 ಮತಗಳನ್ನು ಹೆಚ್ಚು ಪಡೆದು ಸತತವಾಗಿ 4 ಬಾರಿಗೆ 9ನೇ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. 1994 ರಿಂದ 2000ದವರೆಗೆ ಮತ್ತು 2002ರಿಂದ 2008ರವರೆಗೆ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ಹಣಕಾಸು ಸಚಿವರಾಗಿ ; ಬಡವರ ಬಾಗಿಲಿಗೆ ಬ್ಯಾಂಕ್
ರಾಜಕೀಯ ಕ್ಷೇತ್ರದಲ್ಲಿ ಓರ್ವ ಜನಪ್ರತಿನಿಧಿಯಾಗಿ ಜನಪರವಾದ ಕರ್ತವ್ಯಗಳನ್ನು ಮಾಡಲೇ ಬೇಕು. ಅದನ್ನು ಕೇಳುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ ಎಂದು ಪ್ರತಿಪಾದಿಸುತ್ತಾ ಬಂದ ಪೂಜಾರಿಯವರ ಧಣಿವರಿಯದ ದುಡಿಮೆ, ಶಿಸ್ತುಬದ್ಧವಾದ ಜೀವನ ಭ್ರಷ್ಟಾಚಾರರಹಿತವಾದ ವ್ಯವಹಾರ, ಯಾವುದೇ ಆಮಿಷಗಳಿಗೂ ಒಂದಿಷ್ಟೂ ಬಗ್ಗದ ನಿಸ್ವಾರ್ಥವಾದ ಬದುಕು , ಬಡವರ ಪರವಾಗಿ ಧ್ವನಿಯೆತ್ತುವ ದೈರ್ಯವನ್ನು ಮನಗಂಡ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು 1982 ರಲ್ಲಿ ಭಾರತ ಸರಕಾರದ ಹಣಕಾಸು ಸಚಿವರನ್ನಾಗಿ ನೇಮಕ ಮಾಡಿದರು. 1982ರಿಂದ 1987ರವರೆಗೆ ಹಣಕಾಸು ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಲಿ ಅವರು ನಡೆಸಿದ ಸಾಲಮೇಳಗಳು ಬಹಳಷ್ಟು ಪ್ರಸಿದ್ಧಿಯನ್ನು ಪಡೆದು ಪೂಜಾರಿಯವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಿತು.. ಸಾಲಮೇಳಗಳು ಹೇಗಿತ್ತು ಎಂದರೆ ಬ್ಯಾಂಕಿನ ಮೆಟ್ಟಿಲು ಹತ್ತದ ಬಡ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ಸ್ವ ಉದ್ಯೋಗ ಮಾಡುವುದಕ್ಕಾಗಿ ಲೋನ್ ಮೇಳವನ್ನು ಆಯೋಜಿಸಿ ಅಲ್ಲಿಗೆ ಬ್ಯಾಂಕ್ ಅಧಿಕಾರಿಗಳು ಬಂದು ಅರ್ಜಿ ಪಡೆದು ಜಾಮೀನುರಹಿತವಾಗಿ ಸ್ಥಳದಲ್ಲಿಯೇ ಸಾಲ ವಿತರಣೆ ಮಾಡಬೇಕಾಗಿತ್ತು. ಈ ಬಗ್ಗೆ ಅಧಿಕಾರಿ ವರ್ಗದಿಂದ ಮತ್ತು ಶ್ರೀಮಂತ ವರ್ಗದಿಂದ ಅಪಸ್ವರಗಳು ವಿರೋಧಗಳು ಬಂದವಾದರೂ ಪೂಜಾರಿಯವರು ಅದನ್ನೆಲ್ಲ ಕ್ಯಾರೇ ಮಾಡದೆ ಸಾಲಮೇಳವನ್ನು ಇನ್ನಷ್ಟು ಹೆಚ್ಚಿಸಿ ಬಡಜನರ ಆಶಾಕಿರಣವಾದರು. 1988ರಿಂದ 89ರವರೆಗೆ ಅವರು ಗ್ರಾಮೀಣಾಭಿವೃದ್ಧಿ ಸಚಿವರಾದರು. 1990ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ ಗಾಂಧಿಯವರು ಅಖಿಲ ಬಾರತೀಯ ಕಾಂಗ್ರೇಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷರಾಗಿಯೂ ನೇಮಿಸಿದರು. 1996ರವರೆಗೆ ಪಕ್ಷದ ಹುದ್ದೆಯನ್ನು ನಿಭಾಯಿಸಿದ ಪೂಜಾರಿಯವರು ಸೋನಿಯಾ ಗಾಂಧಿಯವರಿಂದ ಮತ್ತೆ 2003ರಿಂದ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಮಿಟಿಯ ಅಧ್ಯಕ್ಷರಾಗಿ ನೇಮಕವಾಗಿ 2005ರವರೆಗೆ ಕರ್ತವ್ಯ ನಿರ್ವಹಿಸಿದರು.

ಪ್ರಾಮಾಣಿಕತೆಗೆ ಮನ್ನಣೆ ನೀಡಿದ ಗಾಂಧೀ ಕುಟುಂಬ
ಲೋಕ ಸಭೆಗೆ 4 ಬಾರಿ ಆಯ್ಕೆಯಾಗಿ, ರಾಜ್ಯ ಸಭೆಗೆ ಎರಡು ಬಾರಿ ಪ್ರವೇಶ ಪಡೆದು ಸುಮಾರು 25 ವರ್ಷಗಳ ಸುಧೀರ್ಘ ಅವಧಿಯಲ್ಲಿ ವಿವಿಧ ಖಾತೆಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ ಪೂಜಾರಿಗಳು ಅಪಾರ ಮೇದಾವಿಗಳು, ಅನುಭವಿಗಳೂ ಆಗಿದ್ದಾರೆ. ಹಣಕಾಸು ಸಚಿವರಾಗಿ ಆರ್ಥಿಕ ಸ್ವಾವಲಂಬನೆಗಾಗಿ ನಿರ್ಗತಿಕರಿಗೆ ಅವರು ಮಾಡಿದ ಬ್ಯಾಂಕ್ ಸಾಲಮೇಳಗಳು ಭಾರತದ ಇತಿಹಾಸದಲ್ಲಿಯೇ ಒಂದು ಚರಿತ್ರಾರ್ಹ ವಿಷಯವಾಗಿ ಸೇರಿಕೊಂಡಿದೆೆ. ಭೂ ಮಸೂದೆಯಿಂದ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡ ಬಡ ರೈತಾಪಿ ವರ್ಗ ಸಾಲ ಮೇಳಗಳಿಂದ ಆರ್ಥಿಕ ಸ್ಥಿರತೆಯನ್ನು ಪಡೆದುಕೊಂಡು ಕಾಂಗ್ರೇಸ್ ಪಕ್ಷದ ಉಳಿವಿನ ಭದ್ರ ಬುನಾದಿಯಾಗಿರುವುದು ಮುಂದೆ ಪೂಜಾರಿಯವರ ಸತತ ಗೆಲುವಿನಲ್ಲಿ ಕಾಣಬಹುದಾಗಿದೆ. ಬಡಜನತೆಯ ಪಕ್ಷ ಕಾಂಗ್ರೇಸ್ ಎಂಬುವುದನ್ನು ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ಭೂಮಸೂದೆ ಜಾರಿ ಮಾಡುವ ಮೂಲಕ ಸಾಬೀತು ಮಾಡಿದ ಬೆನ್ನಲ್ಲೇ ಬಡ ಜನರ ನಿರುದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಆರ್ಥಿಕ ಪುನಃಶ್ಚೇತನಕ್ಕಾಗಿ ಪೂಜಾರಿಯವರು ಬ್ಯಾಂಕ್ಗಳಿಂದ ಸಾಲ ನೀಡಿಕೆ ಯೋಜನೆ ಕಾಂಗ್ರೇಸ್ ಪಕ್ಷದ ದ್ಯೇಯ ಧೋರಣೆಗಳನ್ನು ಎತ್ತಿ ಹಿಡಿಯಿತು. ಜನಪರವಾದ ಯೋಜನೆಗಳನ್ನು ರೂಪಿಸಿಕೊಂಡು ಪಕ್ಷವನ್ನು ಮುನ್ನಡೆಸಿರುವುದನ್ನು ಶ್ರೀಮತಿ ಇಂದಿರಾ ಗಾಂಧಿಯವರು ನಂತರ ಶ್ರೀ ರಾಜೀವ ಗಾಂಧಿಯವರು ನಂತರ ಶ್ರೀಮತಿ ಸೋನಿಯ ಗಾಂಧಿಯವರು ಮನಗಂಡು ಪೂಜಾರಿಯವರಿಗೆ ಪಕ್ಷದಲ್ಲಿ ವಿಶೇಷವಾದ ಸ್ಥಾನವನ್ನು ಕಲ್ಪಿಸಿದ್ದಾರೆ. ಪ್ರಾಮಾಣಿಕತೆ, ನಿಷ್ಠೆ, ಶುದ್ಧಹಸ್ತ, ಕಠಿಣದುಡಿಮೆಯ ಪೂಜಾರಿಯಂತವರು ಹತ್ತು ಜನ ನಮ್ಮ ಪಕ್ಷದಲ್ಲಿದ್ದರೆ ನಮ್ಮ ಪಕ್ಷಕ್ಕೆ ಸಾವಿಲ್ಲ ಎಂದು ಮಾಜಿ ಪ್ರಧಾನಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರು ಪೂಜಾರಿಯವರ ಬಗ್ಗೆ ಪ್ರಾಮಾಣಿಕ ಮಾತನ್ನು ಹೇಳಿದ್ದರು. ಪೂಜಾರಿಯೆಂದರೆ ಬಡವರ ಪೂಜಾರಿ, ಯಾವುದೇ ಆಮಿಷಗಳಿಂದ ಖರೀದಿಸಲಾಗದ ಓರ್ವ ರಾಜಕಾರಣಿ ದೇಶದಲ್ಲಿದ್ದರೆ ಅದು ಪೂಜಾರಿ ಮಾತ್ರ ಎಂಬುವುದಾಗಿ ಪೂಜಾರಿಯವರ ರಾಜಕೀಯ ನಿಷ್ಠೆಯನ್ನು ರಾಜೀವ ಗಾಂಧಿಯವರು ಅದೆಷ್ಟೋ ಬಾರಿ ಪುನರುಚ್ಚರಿಸಿದ್ದರು. ಇದು ಪೂಜಾರಿಯವರ ರಾಜಕೀಯ ಚಾಣಕ್ಷತೆಗೆ ಸವಾಲಾಗಿ ಈಗಲೂ ಅವರ ವಿರುದ್ಧವಾಗಿ ‘ಕೈ’ಯಾಡಿಸದಂತೆ ಮಾಡಿದೆ. ಪೂಜಾರಿಯವರಿಗೆ ಪೂಜಾರಿಯವರೇ ಸಾಟಿಯೆಂಬುವುದನ್ನು ಪರೀಕ್ಷಿಸಲು ಕೂಡಾ ರಾಜಕಾರಣಿಗಳಿಗೆ ಆತ್ಮವಿಶ್ವಾಸವಿಲ್ಲದಾಗಿದೆ. ಪೂಜಾರಿಯವರಿಗೆ ಕುಲದ ಬಲವಾಗಲಿ, ಹಣದ ಬಲವಾಗಲಿ, ಹಿರಿಯರ ಬಲವಾಗಲಿ ಪ್ರಭಾವದ ಬಲವಾಗಲಿ ಇರಲಿಲ್ಲ. ಆದರೆ ಅವರು ತಮ್ಮ ಆತ್ಮ ವಿಶ್ವಾಸ, ಛಲ ಪರಿಶ್ರಮ ಪ್ರತಿಭೆ ಮತ್ತು ಬುದ್ದಿವಂತಿಕೆಯಿಂದ ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಉನ್ನತ ಸ್ಥಾನವನ್ನಲಂಕರಿಸಿ ಪ್ರಾಮಾಣಿಕತೆ ಮತ್ತು ನಿಷ್ಠೆಯ ಮೂಲಕ ಯಶಸ್ಸಿನ ಉತ್ತುಂಗವನ್ನೇರಿ ಹೆಸರು ಪಡೆಯುತ್ತಿದ್ದಾರೆ. ದೀನದಲಿತರ ಸೇವಾ ಬಲ ಅವರಿಗೆ ರಕ್ಷೆಯಾಗಿ ನಿಂತಿದೆ.

ಜನಪರ ದೂರಗಾಮಿ ಯೋಜನೆಗಳ ರೂವಾರಿ
ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲಮೇಳ ಅಲ್ಲದೆ ಕೇವಲ ಮಂಗಳೂರಿಗೆ ಸೀಮಿತವಾಗದೆ ಇಡೀ ಕರ್ನಾಟಕದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಂತಹ ಯೋಜನೆಗಳಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿ (KIOCL) ಮಂಗಳೂರಿನ ಎಂಆರ್ಪಿಎಲ್, ಮಂಗಳೂರು ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ, ಸುರತ್ಕಲ್ನ (ಕೆಆರ್ಇಸಿ) ಇಂಜಿನೀಯರಿಂಗ್ ಕಾಲೇಜನ್ನು ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (NITK)) ಆಗಿ ಮೇಲ್ದರ್ಜೆಗೆ, ಎನ್ಎಮ್ಪಿಟಿಯ ವಿಸ್ತರಣೆ ಮತ್ತು ಅಭಿವೃದ್ಧಿ, ಮಂಗಳೂರು ಬೆಂಗಳೂರಿಗೆ ರಾತ್ರಿ ಹಗಲು ರೈಲು ಸೇವೆ, ಬಂಟ್ವಾಳ ಸುರತ್ಕಲ್ ಮದ್ಯೆ ಸುಮಾರು 60 ಕಿ.ಮೀ. ಚತುಷ್ಪಥ ರಸ್ತೆ ಅಭಿವೃದ್ಧಿ ಹೀಗೆ ಹಲವಾರು ಯೋಜನೆಗಳ ರೂವಾರಿಯಾಗಿದ್ದು, ಇದೀಗ ಈ ಬಹುಪಯೋಗಿ ಯೋಜನೆಗಳೆಲ್ಲವೂ ಬಹುತೇಕ ಕಾರ್ಯಗತವಾಗುವುದರೊಂದಿಗೆ ಅವರ ವಿಚಾರಶೀಲ ವ್ಯಕ್ತಿತ್ವ ಇದೀಗ ನಮ್ಮ ಮುಂದೆ ಕಾಣುತ್ತಿದೆ.

“ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ”
ಮೌಢ್ಯ ಅಂದಾನುಕರಣೆ, ಕಂದಾಚಾರಗಳಲ್ಲಿ ಶತಶತಮಾನಗಳಲ್ಲಿ ಬಳಲುತ್ತಿದ್ದ ಮಾನವ ಜೀವಿಗಳನ್ನು ವಿದ್ಯೆ ಹಾಗೂ ಸಂಘಟನಾ ಶಕ್ತಿಗಳಿಂದ ಮಾತ್ರ ಸುಸಂಸ್ಕೃತರನ್ನಾಗಿಸಲು ಸಾಧ್ಯ ಎಂದು ಚಿಂತಿಸಿದ ನಾರಾಯಣ ಗುರುಗಳ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ಸಾರ್ವಕಾಲಿಕ ಅಮರ ಸಂದೇಶದ ಅನುಷ್ಠಾನಕ್ಕೆ ಪೂಜಾರಿಯವರು ಪಣತೊಟ್ಟರು. ಸಹಸ್ರಾರು ಡೊನೆಷನ್ ನೀಡಿ ಶ್ರೀಮಂತರು ಮಾತ್ರ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭಕ್ಕೆ ಪೂಜಾರಿಯವರ ಮನೆ ಬಾಗಿಲಿನ ಮುಂದೆ ಅದೆಷ್ಟೋ ತೀರಾ ಹಿಂದುಳಿದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಒಂದು ಸೀಟು ತೆಗೆದುಕೊಡುವಂತೆ ಅಂಗಲಾಚಿ ಕಣ್ಣಿರು ಸುರಿಸುತ್ತಿದ್ದರು. ಜಿಲ್ಲೆಯ ಬೆರಳೆಣಿಕೆಯ ಶ್ರೀಮಂತ ಶೈಕ್ಷಣಿಕ ಕೇಂದ್ರಗಳಲ್ಲಿ ಎಲ್ಲರಿಗೂ ಸೀಟು ತೆಗೆಸಿಕೊಡುವುದು ಕಷ್ಟಸಾಧ್ಯವಾದಾಗ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕೆಂದು ಬಡವರಿಗಾಗಿಯೇ ಒಂದು ವಿದ್ಯಾಲಯವೊಂದನ್ನು ತೆರೆಯುವ ಯೋಚನೆಗೆ ಯೋಜನೆ ರೂಪಿಸಿದರು.ತೀರಾ ಹಿಂದುಳಿದವರು ಕೂಡಾ ವಿದ್ಯಾರ್ಜನೆಯಿಂದ ವಿಮುಖರಾಗಬಾರದು ಎಂದರಿತು ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕೆಂದು ಹಿಂದುಳಿದ ವರ್ಗದವರಿಗಾಗಿಯೇ ಆರಂಭಿಸಿದ ಶ್ರೀ ಗೋಕರ್ಣನಾಥ ಕಾಲೇಜಿನ ಸ್ಥಾಪನೆ ಮತ್ತು ಅಭಿವೃದ್ಧಿಯ ಶಿಲ್ಪಿಯಾಗಿ ಪೂಜಾರಿ ಕಾಣುತ್ತಾರೆ. ತನ್ನ ಅಧಿಕಾರವಧಿಯಲ್ಲಿ ಹಲವಾರು ಶಾಲೆಗಳ ಮಂಜೂರಾತಿ, ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹಲವಾರು ಶಾಲಾ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಅಪೇಕ್ಷಿಸಿದ ಬಡ ವಿದ್ಯಾರ್ಥಿಗಳಿಗೆ ಡೊನೇಷನ್ ಮುಕ್ತವಾಗಿ ಕಲಿಕೆಗೆ ನೆರವಾಗಿದ್ದಾರೆ. ಶಾಲಾ ಹಿಂದುಳಿದ ವರ್ಗಗಳಿಗಾಗಿ ಬಡವರಿಗಾಗಿ ಇರುವ ವಸತಿ ನಿಲಯಗಳ ಗುಣ ಮಟ್ಟವನ್ನು ಏರಿಸಿ ವಿದ್ಯಾರ್ಥಿಗಳಿಗೆ ಭವಿಷ್ಯತ್ತನ್ನು ನೀಡಿದ್ದಾರೆ. ಸಂಘ ಸಂಸ್ಥೆಗಳಿಂದ ವಿದ್ಯಾನಿಧಿಯ ಕ್ರೋಢಿಕರಣ ಮಾಡಿ ಆ ಮೂಲಕ ವಿದ್ಯಾರ್ಜನೆ ಬಯಸಿದ ಹಲವಾರು ನಿರ್ಗತಿಕರಿಗೆ ಸಹಾಯ ನೀಡಿದ್ದಾರೆ. ಸಂಘದ ವತಿಯಿಂದ ದೇವಾಲಯದ ಸಹಕಾರದಲ್ಲಿ ಪ್ರತೀ ವರ್ಷ ಬಡ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.

ಹಿಂದುಳಿದ ವರ್ಗದ ಕುದ್ರೋಳಿ ದೇಗುಲ ಇಂದು ವಿಶ್ವ ವಿಖ್ಯಾತ
1912ರಲ್ಲಿ ಮಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಹಿಂದುಳಿದ ವರ್ಗದ ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲದ ನವೀಕರಣದ ಮತ್ತು ಅಭಿವೃದ್ಧಿಯ ಹರಿಕಾರರಾಗಿ ಪೂಜಾರಿಯವರು ಮಾಡಿರುವ ಸಾಧನೆ ಪ್ರತಿಯೊಬ್ಬ ಅಸ್ತಿಕ ಇಷ್ಟಪಡಲೇ ಬೇಕು. ಬ್ರಹ್ಮಶ್ರೀ ಗುರುಗಳ ಆಶಯದಂತೆ ಯಾವುದೇ ಜನಪ್ರತಿನಿಧಿಗಳ ಮುಂದೆ ಮಂಡಿಯೂರದೆ ಸಂಕಲ್ಪಿತ ಶಕ್ತಿ, ಬಡ ಜನತೆಯ ಅವಿರತ ಪರಿಶ್ರಮ, ಭಕ್ತಾದಿಗಳ ಬೆವರಹನಿಯ ಪ್ರತೀಕವಾಗಿ ಕುದ್ರೋಳಿ ದೇವಸ್ಥಾನದ ನವೀಕರಣವಾಗಿದೆ. ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದ ‘ಮೈಸೂರು ದಸರಾ’ ಬಿಟ್ಟರೆ ಎರಡನೇ ಸ್ಥಾನದಲ್ಲಿ ದುರ್ಗಾದೇವಿಯ ಆರಾಧನೆಯಾಗುವ “ಮಂಗಳೂರು ದಸರಾ” ದ ರೂವಾರಿಗಳು ಕೂಡಾ ಶ್ರೀ ಪೂಜಾರಿಗಳವರು. ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ನವದುರ್ಗೆಯರ ಪ್ರತಿಷ್ಠೆ, ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಣ್ಮಣ ಸೂರೆಗೊಳ್ಳುವ ವಿದ್ಯುತ್ ದೀಪಾಲಂಕಾರಗಳು, ವೇಷ ಭೂಷಣಗಳು, ನೂರಾರು ಸ್ಥಬ್ಧ ಚಿತ್ರ ಮೆರವಣಿಗೆಗಳು ಜೊತೆಗೆ ಲಕ್ಷಾಂತರ ಭಕ್ತಾದಿಗಳ ಪಾಲ್ಗೊಳ್ಳುವಿಕೆಯಲ್ಲಿ ವಿಜೃಂಭಣೆಯ ದಸರಾ ಶೋಭಾ ಯಾತ್ರೆ ಇವೆಲ್ಲದರ ನಿರ್ಮಾತೃ-ಕರ್ತೃಶಕ್ತಿಯಾಗಿ ಪೂಜಾರಿಯವರ ಪರಿಶ್ರಮ, ಸಾಧನೆಯ ತಪಸ್ಸು, ಧನ್ಯತೆಯ ಭಾವವನ್ನು ಪ್ರತಿಯೊಬ್ಬರೂ ಗುರುತಿಸುತ್ತಾರೆ. ಸುಮಾರು 27 ವರ್ಷಗಳ ಹಿಂದೆ ಮೈಸೂರು ದಸರಾದಲ್ಲಿ ಪಾಲ್ಗೊಂಡ ಪೂಜಾರಿಯವರು ಅಲ್ಲಿನ ವೈಭವದ ದಸರಾವನ್ನು ನನ್ನ ಕ್ಷೇತ್ರದ ಜನತೆಗೂ ನೀಡಬೇಕೆಂಬ ಸಂಕಲ್ಪದಲ್ಲಿ ಮಂಗಳೂರು ದಸರಾ ಆರಂಭವಾಯಿತು. ದೇವರನ್ನು ಆನೆಯ ಅಂಭಾರಿ ಮೇಲೆ ಹೊತ್ತೊಯ್ಯುವ ಮೈಸೂರು ದಸರಾದ ವೈಭವದಂತೆ ಇಲ್ಲಿ ಶ್ರೀ ಶಾರದಾ ಮಾತೆ ಸಹಿತ ನವದುರ್ಗೆಯರು ಶ್ರೀ ಮಹಾ ಗಣಪತಿ ಮತ್ತು ಶ್ರೀ ನಾರಾಯಣ ಗುರುಗಳ ಪೂಜಿತ ಮೂರ್ತಿಗಳ ಸುಮಾರು 10 ಕಿ.ಮೀ. ದೂರದ ಮೆರವಣೆಗೆಯನ್ನು ಸಂಪನ್ನ ಗೊಳಿಸಿದರು. ಇಂದು ಇಡೀ ವಿಶ್ವದಲ್ಲಿಯೇ ಗುರುತಿಸಲ್ಪಟ್ಟ ಮೈಸೂರು ದಸರಾಕ್ಕೆ ಸರಿ ಸಮನಾಗಿ ವಿದ್ಯುತ್ ದೀಪಾಲಂಕೃತವಾಗಿ ಜಗಜಗಿಸುವ ಮಂಗಳೂರು ದಸರಾಕ್ಕೆ ನೆರೆಯ ರಾಜ್ಯಗಳಿಂದಲೂ, ದೇಶ ವಿದೇಶಗಳಿಂದಲೂ ಜನರು ಬಂದು ಕಣ್ಮನ ತುಂಬಿ ಕೊಳ್ಳುತ್ತಾರೆ. ಮಂಗಳೂರು ದಸರಾ ಎಂದರೆ ಥಟ್ಟನೆ ಪೂಜಾರಿಯವರ ಅಪೂರ್ವವಾದ ಮತ್ತು ಅಪರೂಪವಾದ ಸಾಧನಾ ಶಕ್ತಿ ನಮ್ಮ ಕಣ್ತುಂಬಿ ಬರುತ್ತದೆ. ಅವರ ಸಾಧನೆಯನ್ನು ವರ್ಣಿಸಲು ಶಬ್ದಗಳೇ ಇಲ್ಲವಾಗುತ್ತದೆ. ಅವರ ಕೆಲಸ ಕಾರ್ಯಗಳಲ್ಲಿನ ದೈವಿಕ ಪ್ರೇರಣೆಗಳು ಆ ಮೂಲಕ ವಿಶೇಷವಾದ ಯೋಚನೆಗಳು, ವಿಭಿನ್ನತೆ ಮತ್ತು ಪರಿಪೂರ್ಣತೆ ಎಂತಹ ಮೇಧಾವಿಗಳನ್ನು ಕೂಡಾ ಮೂಕರನ್ನಾಗಿಸುತ್ತದೆ. ಕುದ್ರೋಳಿ ಶ್ರೀ ಗೋಕರ್ಣನಾಥ ದೇಗುಲ ಸಹಿತವಾಗಿ ಎಣ್ಮೂರು ಕೋಟಿ ಚೆನ್ನಯರ ಆದಿ ಬೈದ್ಯರ್ಕಳ ಗರೋಡಿಯ ಅಭಿವೃದ್ಧಿ, ಕಂಕನಾಡಿ ಶ್ರೀ ಬ್ರಹ್ಮ ಬೈದ್ಯರ್ಕಳ ಗರೋಡಿ ನವೀಕರಣ, ಕಟಪಾಡಿ ಶ್ರೀ ವಿಶ್ವನಾಥ ದೇಗುಲ ನವೀಕರಣ, ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಮಂದಿರ ನಿರ್ಮಾಣದಲ್ಲಿಯೂ ಓರ್ವ ಧಾರ್ಮಿಕ ಸೇನಾನಿಯಾಗಿ ಅವರ ತ್ರಿವಿಧ ಸಹಕಾರವನ್ನು ಕಾಣಬಹುದಾಗಿದೆ. ಜಿಲ್ಲೆ ಮಾತ್ರವಲ್ಲದೆ ಚಿಕ್ಕಮಗಳೂರು, ಕಾರಾವರ, ಉಡುಪಿ ಕಾಸರಗೋಡು ಮೊದಲಾದ ಕಡೆ ಹಲವಾರು ದೇವಾಲಯಗಳ ನವೀಕರಣ, ಗರೋಡಿ, ದೈವಸ್ಥಾನಗಳ ನವೀಕರಣ ಮತ್ತು ಗುರುಮಂದಿರ ನಿರ್ಮಾಣ ದಾರ್ಮಿಕ ಕೇಂದ್ರಗಳ ಅಭಿವೃದ್ಧಿ- ಹೀಗೆ ಅಜೀರ್ಣವಸ್ಥೆಯಲ್ಲಿದ್ದ ಬಹುತೇಕ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರದಲ್ಲಿ ಪೂಜಾರಿಗಳವರು ಪೂರ್ಣ ಪ್ರಮಾಣದ ಸಹಕಾರವನ್ನು ನೀಡಿದ್ದಾರೆ.

ನುಡಿದದ್ದೇ ಮಾತು ; ಮಾತಿನಂತೆ ನಡೆ
ಅದು ಕುದ್ರೋಳಿ ದೇಗುಲದ ನವೀಕರಣದ ಸಂದರ್ಭವಾಗಿತ್ತು. ಪೂಜಾರಿಯವರು ದಿಲ್ಲಿಯಿಂದ ಬರುವಾಗ ವಿಮಾನದಲ್ಲಿ ಮ್ಯಾಗಸೀನ್ ಒಂದು ನೋಡಲು ಸಿಕ್ಕಿತು. ಅದರಲ್ಲಿದ್ದ ಮೈಸೂರಿನ ಭವ್ಯವಾದ ಜಗನ್ ಮೋಹನ್ ಪ್ಯಾಲೇಸ್ ಚಿತ್ರ ಅವರ ಮನಸೂರೆಗೊಂಡಿತು. ಕುದ್ರೋಳಿ ಕ್ಷೇತ್ರದಲ್ಲಿರುವ ಕೊರಗಪ್ಪ ಮಂದಿರದ ಮುಖದ್ವಾರ ಶಿಲ್ಪವನ್ನು ಈ ರೀತಿಯಲ್ಲಿಯೇ ಯಾಕೆ ಪುನರ್ ನಿರ್ಮಿಸಬಾರದು ಎನ್ನುವ ಯೋಚನೆ ಬಂದದ್ದೇ ತಡ ತಕ್ಷಣ ಕ್ಷೇತ್ರದ ಇಂಜಿನೀಯರ್ಗಳನ್ನು ಕರೆಸಿಕೊಂಡು ವಿಚಾರವನ್ನು ತಿಳಿಸಿ ಮೈಸೂರ್ ಪ್ಯಾಲೇಸ್ ನೋಡಲು ಕಳುಹಿಸಿಯೇ ಬಿಟ್ಟರು. ಈ ರೀತಿಯಲ್ಲಿ ಮಾಡಬೇಕು ಎಂಬುವುದಾಗಿ ಅವರಿಂದ ನುಡಿಯಾದರೆ ಮತ್ತೆ ಬದಲಾವಣೆಯೆಂಬುವುದೇ ಬಾರದು. ಯಾರು ವಿರೋಧಿಸಿದರೂ ಸರಿ,ಸಂಪೂರ್ಣಗೊಂಡಾಗ ಅವರಿಂದಲೇ ಭೇಷ್ ಎನಿಸಿಕೊಂಡ ಕೆಲಸಕಾರ್ಯಗಳು ನೂರಾರು ನಮ್ಮ ಮುಂದೆ ಕಾಣುತ್ತದೆ. ಮುಂಬಯಿಯ ಬಿಲ್ಲವರ ಬಹು ವರ್ಷಗಳ ಕನಸಾದ ಬಿಲ್ಲವ ಭವನಕ್ಕೆ ಮುಂಬಯಿ ವಿಮಾನ ನಿಲ್ದಾಣದ ಬಳಿ ಮಹಾರಾಷ್ಟç ಸರಕಾರದಿಂದ ನಿವೇಶನ ಒದಗಿಸಿಕೊಟ್ಟ ಕೀರ್ತಿ ಪೂಜಾರಿಯವರಿಗೆ ಸಲ್ಲಲೇ ಬೇಕು. ಮುಂಬಯಿಯಲ್ಲಿ ಬಿಲ್ಲವರ ಸಂಘ ಅಭಿವೃದ್ಧಿಯಾಗುವಲ್ಲಿ, ಬಿಲ್ಲವರ ಸಂಘ ಪ್ರಯೋಜಿಸಿರುವ ಭಾರತ್ ಬ್ಯಾಂಕಿಗೆ ಹದಿನೇಳು ಶಾಖೆ ತೆರೆಯಲು ಪರವಾನಿಗೆ ತೆಗೆದುಕೊಟ್ಟು ಇಂದು ಭಾರತ್ ಬ್ಯಾಂಕ್ ನೂರಾರು ಶಾಖೆಗಳನ್ನು ಹೊಂದಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೆ ಅದರ ಹಿಂದಿನ ಶಕ್ತಿಯಾಗಿ ಪೂಜಾರಿಯವರ ಸಹಾಯ ಹಸ್ತವನ್ನು ಮನಗಾಣಲೇ ಬೇಕು.
ಅವರು ನಡೆದಿರುವುದೇ ಆದರ್ಶ ಬದುಕಿಗೆ ದಾರಿ ; ನುಡಿದಿರುವುದೇ ಸ್ವಸ್ಥ್ಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ. ಕೋಪವನ್ನು ಸ್ವೀಕರಿಸಿಕೊಂಡವರು ಅವರ ಆಶೀರ್ವಾದವನ್ನು ಪಡೆದು ಸಮಾಜದಲ್ಲಿ ಉನ್ನತಿಯನ್ನು ಪಡೆದರು. ಅವರ ತಾಳ್ಮೆಯನ್ನು ಅಪಹಾಸ್ಯ ಮಾಡಿದವರು ಅವರಲ್ಲಿ ದೈವೀ ಶಕ್ತಿಯನ್ನು ಕಂಡು ಅವರ ವ್ಯಕ್ತಿತ್ವಕ್ಕೆ ತಲೆಬಾಗಿದರು. ಅವರ ಭ್ರಷ್ಟಾಚಾರರಹಿತ ಹಗರಣರಹಿತವಾದ ರಾಜಕೀಯ ಜೀವನವನ್ನು ಮನಗಂಡವರು ಇಡೀ ದೇಶದಲ್ಲಿಯೇ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹಬದ್ದೂರ್ ಶಾಸ್ತಿçಯಂತಹ ಒಬ್ಬ ಪ್ರಾಮಾಣಿಕ ರಾಜಕಾರಣಿಯನ್ನು ಕಾಣ ಬಯಸುವುದಾದರೆ ಆ ನಂತರ ಪೂಜಾರಿ ಮಾತ್ರ ಎನ್ನುತ್ತಾರೆ.

ಸಾಮಾಜಿಕ ಕ್ರಾಂತಿಯ ಹರಿಕಾರ
ಒಬ್ಬ ಹಿಂದುಳಿದ ವರ್ಗದ ಪೂಜಾರಿಯವರು ರಾಜಕೀಯ ಸಾಮಾಜಿಕ ದಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಬೆಳವಣಿಗೆಯಲ್ಲಿ ತನ್ನದೇ ಆದ ಪ್ರತಿಭೆಯನ್ನು ಪ್ರದರ್ಶಿಸಿ ಜನಮನದಲ್ಲಿ ದೇವರನ್ನು ಕಾಣುತ್ತಾ ಮಾಡಿರುವ ಜನ ಮೆಚ್ಚಿದ ಕೆಲಸ ಕಾರ್ಯಗಳು ಕ್ರಾಂತಿಕಾರಿ ಬದಲಾವಣೆಗಳು ಅಪಾರ. ಬಡ ನಿರ್ಗತಿಕರು ಮತ್ತು ಅವರಿಗೆ ಸಹಾಯಹಸ್ತವನ್ನು ನೀಡುವ ದಾನಿಗಳು ಹಾಗೂ ಭಕ್ತಾದಿಗಳೇ ಅವರ ಕುಟುಂಬ. ಮಾನವರಲ್ಲಿ ದೇವರನ್ನು ಕಾಣುವ ಅವರು ತಂತ್ರ ಮಂತ್ರಗಳಿAತಲೂ ಪ್ರಾಮಾಣಿಕತೆ ಮತ್ತು ಪರಿಶುದ್ಧವಾದ ಭಕ್ತಿಯಿಂದ ದೇವರನ್ನು ಒಲಿಸಿಕೊಲ್ಲಬಹುದು ಎಂದು ನಂಬಿದವರು. ಅಸ್ಪçಶ್ಯತಾ ಕಾಯ್ದೆ, ಭೂ ಮಸೂದೆ ಕಾಯ್ದೆಯ ಪ್ರಯೋಜನವನ್ನು ಜನತೆಗೆ ತಲುಪಿಸುವಲ್ಲಿ, ಸಾಮಾಜಿಕ ಪಿಡುಗುಗಳಿಂದ ಜನರನ್ನು ಸಂರಕ್ಷಿಸುವಲ್ಲಿ ಪೂಜಾರಿಯವರ ಪಾತ್ರ ಮಹತ್ತರವಾದುದು. ಜಾತಿ ಮತ ಮುಖ್ಯವಲ್ಲ. ಶುದ್ಧ ಜೀವನ ಮತ್ತು ದೇವರಲ್ಲಿ ಭಕ್ತಿ ಮುಖ್ಯ ಎಂದು ಹೇಳುತ್ತಿರುವ ಪೂಜಾರಿಗಳವರು ಪುರುಷರಿಗಿರುವಷ್ಟು ಸಮಾನತೆ ಮಹಿಳೆಯರಿಗೆ ಬೇಕು. ಮಹಿಳೆಯರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಸ್ರೀಯರನ್ನು ನಿರಂತರವಾಗಿ ಶೋಷಿಸುವ ಯಾರದೋ ಸ್ವಾರ್ಥಕ್ಕಾಗಿ ಪರಂಪರಾಗತವಾಗಿ ಪಾಲಿಸಿಕೊಂಡು ಬಂದಿರುವ ಮೌಢ್ಯಾಚರಣೆ ಸರಿಯಲ್ಲ ಎಂದು ಕಳೆದ ಹಲವಾರು ವರ್ಷಗಳಿಂದ ಪೂಜಾರಿಯವರು ಹೇಳಿಕೊಳ್ಳುತ್ತಲೇ ಅದರ ಸಂಪೂರ್ಣ ನಿಷೇಧಕ್ಕೆ ಜನಜಾಗೃತಿ ಮಾಡಿದ್ದಾರೆ. ಹಲವು ದಶಕಗಳ ಹಿಂದೆ ಅಮಾನುಷವಾಗಿ ಆಚರಿಸಿಕೊಂಡು ಬರುತ್ತಿದ್ದ “ಸತಿ ಸಹಗಮನ ಪದ್ಧತಿ”ಯಂತೆ ಮುಂದುವರಿಯುತ್ತಿರುವ ಈ ಕಾಲದಲ್ಲಿಯೂ ಪತಿ ಮರಣ ಹೊಂದಿದ ಸ್ರೀಗೆ ವಿಧವೆಯೆಂಬ ಪಟ್ಟ ಕಟ್ಟಿ ಆಕೆಯ ಬದುಕನ್ನೇ ಚಿವುಟಿ ಹಾಕುವ ಅನಿಷ್ಟ ಸಂಪ್ರದಾಯ ಉಳಿದುಕೊಂಡಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿ ಅದಕ್ಕೆ ಇತಿಶ್ರೀ ಹಾಡಲು ಪೂಜಾರಿಯವರು ಹಲವಾರು ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ತನ್ನ ಬಂಧುಗಳು ಒಂದಲ್ಲ ಒಂದು ದಿನ ವಿಧವೆಯರಾದಾಗ ಅವರನ್ನು ಯಾವುದೇ ಶುಭ ಸಮಾರಂಭಗಳಿಂದ ದೂರವಿರಿಸುವುದನ್ನು ಪ್ರತಿಯೊಬ್ಬರೂ ಆಕ್ಷೇಪಿಸಿ ಬಂಧುತ್ವದ ಬಗ್ಗೆ ಯೋಚಿಸಬೇಕಾದ ಅಗತ್ಯತೆಯನ್ನು ತಿಳಿಹೇಳುತ್ತಾರೆ. ಈ ಬಗ್ಗೆ ದಲಿತ ವಿಧವಾ ಮಹಿಳೆಯ ಪಾದ ಪೂಜೆಯನ್ನು ಕುದ್ರೋಳಿ ಕ್ಷೇತ್ರದಲ್ಲಿ ಪೂಜಾರಿಗಳು ತಾನೇ ಮಾಡುತ್ತಾರೆ. ವಿಧವಾ ಸ್ರೀಯರಿಂದ ಹೋಮ ಹವನಗಳಿಗೆ ಪೂರ್ಣಾಹುತಿ ನೀಡಿಸುತ್ತಾರೆ. ಕುಂಕುಮ ಮಲ್ಲಿಗೆ ಹೂಗಳನ್ನು ನೀಡಿ ಸಮಾನ ವಾಹಿನಿಗೆ ತಂದು ಅವರಿಗೆ ಗೌರವವನ್ನು ನೀಡುತ್ತಾರೆ. ವಿಧವ ಸ್ರೀಯರಿಂದ ಕ್ಷೇತ್ರದ ಬೆಳ್ಳಿ ರಥವನ್ನು ಎಳೆಸುತ್ತಾರೆ. ಮಾತ್ರವಲ್ಲದೆ ಕ್ಷೇತ್ರದಲ್ಲಿ ವಿಧವಾ ಅರ್ಚಕಿಯರಿಂದ ದೇವರಿಗೆ ಪೂಜೆ ಮಾಡಿಸುತ್ತಾರೆ. ಈ ಕ್ರಾಂತಿಕಾರಿ ಬದಲಾವಣೆಯನ್ನು ಪಂಡಿತರು ಪಾಮರರು ತೀರಾ ಆಕ್ಷೇಪಿಸಿದಾಗ ಅವರಿಗೆ ಸ್ವಾರ್ಥದ ಸಂಕೋಲೆಯನ್ನು ಕಳಚಿ ಹೊರಬರುವಂತೆ, ಮನುಷ್ಯ ಜನ್ಮದ ಬದುಕುವ ಸ್ವರೂಪದ ಬಗ್ಗೆ ಮರುಪ್ರಶ್ನೆಗಳನ್ನೆಸೆದು ಅನಿಷ್ಠ ಪದ್ಧತಿಯನ್ನು ಬಹಿಷ್ಕರಿಸುವಂತೆ ಪೂಜಾರಿಯವರು ಜನರಿಗೆ ಕರೆ ನೀಡುತ್ತಾರೆ.
ಪೂಜಾರಿಗಳು ಓರ್ವ ನಿಷ್ಠಾವಂತ ರಾಜಕಾರಣಿಯಾಗಿ ಅಪಾರ ಬಂಧು ಬಳಗ ಹಿತೈಷಿಗಳನ್ನು ಹೊಂದಿದ್ದಾರೆ. ಪತ್ನಿ ಮಾಲತಿ ಪೂಜಾರಿ. ಒಂದು ಹೆಣ್ಣು ಮತ್ತು ಮೂವರು ಗಂಡು ಮಕ್ಕಳು. ಒರ್ವ ಅಕಾಲಿಕವಾಗಿ ಮರಣವನ್ನಪ್ಪಿದ್ದಾರೆ. ಮಾಜಿ ಮಂತ್ರಿಗಳ ಮಕ್ಕಳೆಂಬ ಯಾವುದೇ ಅಹಂನ್ನು ಬೆಳೆಸಿಕೊಳ್ಳದೆ, ಮೂವರಿಗೂ ಪೂಜಾರಿಗಳ ಮಾರ್ಗದರ್ಶನದಲ್ಲಿಯೇ ಮದುವೆಯಾಗಿ ಸರಳ ಜೀವನವನ್ನು ನಡೆಸುತ್ತಿದ್ದಾರೆ.

ಎಲ್ಲಾ ಜಾತಿ ಧರ್ಮಗಳ ಶ್ರದ್ಧಾ ಕೇಂದ್ರ ಕುದ್ರೋಳಿ ಕ್ಷೇತ್ರ
ಒಂದೇ ಜಾತಿ ಒಂದೇ ಮತ ಎಂಬ ಗುರುಗಳ ಸಂದೇಶದಂತೆ ಕುದ್ರೋಳಿ ಕ್ಷೇತ್ರವನ್ನು ಕೇವಲ ಬಿಲ್ಲವರಿಗಾಗಿ ಮಾತ್ರ ಮೀಸಲಿರಿಸದೆ ಎಲ್ಲಾ ಜನಾಂಗಗಳ ಶ್ರದ್ಧಾ ಕೇಂದ್ರವಾಗಿ ರೂಪಿಸಿದವರು ಪೂಜಾರಿಗಳವರು. ಯಾವುದೇ ಕಾರ್ಯಕ್ರಮಗಳು ನಡೆದಾಗ ಜಾತಿ ಧರ್ಮವನ್ನು ಮೀರಿ ಕಾರ್ಯಕ್ರಮದಲ್ಲಿ ಎಲ್ಲಾ ಜಾತಿ ಮತ ಧರ್ಮದವರನ್ನು ಆಮಂತ್ರಿಸುವ ಆ ಮೂಲಕ ಮಾನವ ಧರ್ಮಕ್ಕೆ ಗೌರವವನ್ನು ನೀಡುವ ಪದ್ಧತಿಯನ್ನು ಪೂಜಾರಿಗಳು ರೂಢಿಸಿಕೊಂಡು ಬಂದಿದ್ದಾರೆ. ತಮ್ಮ ಜಾತಿ ಸಂಘಟನೆಯನ್ನು ಬೆಳೆಸಿ ಇಡೀ ಸಮಾಜಕ್ಕೆ ಒಂದು ಆದರ್ಶ ಸಂಘಟನೆಯನ್ನಾಗಿ ಬೆಳೆಸಿ ಆ ಮೂಲಕ ಬಡ ನಿರ್ಗತಿಕರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನ ಮಾಡುತ್ತಿದ್ದಾರೆ. 89ರ ಇಳಿ ವಯಸ್ಸಿನಲ್ಲಿಯೂ ಪೂಜಾರಿಯರಲ್ಲಿರುವ ಸ್ವತಂತ್ರವಾದ ವಿಚಾರಶೀಲ ಶಕ್ತಿಗಳ ಮೂಲಕ ಅದೆಷ್ಟೋ ಯೋಜನೆಗಳು ಕಾರ್ಯರೂಪಕ್ಕೆ ಬರಲು ತವಕಿಸುತ್ತಿದೆ. ಮಹತ್ತರವಾದ ಕ್ರಾಂತಿಕಾರಿ ಯೋಜನೆಗಳ ಅನುಷ್ಠಾನದ ಜೊತೆ ಜೊತೆಗೆ ಸಮಾಜದ ಎಲ್ಲಾ ಹಿಂದುಳಿದ ವರ್ಗದವರನ್ನು ಗುರುತಿಸಿ ಅವರನ್ನು ಬೆಳೆಸುವ ಯೋಜನೆ ಆರಂಭವಾಗಿದೆ. ವಿದ್ಯಾದಾನ ನಿಧಿ, ಅನ್ನದಾನ ನಿಧಿ, ಸಾಮಾಜಿಕ ನಿಧಿ ಮತ್ತು ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿದ ಯೋಜನೆಗಳ ರೂವಾರಿ ಪೂಜಾರಿಗಳವರ ಆಶಯಗಳು ಫಲಪ್ರದವಾಗಲಿ ಎಂದು ಆಶಿಸುತ್ತಾ ಕುಲದೇವರು ಶ್ರೀ ಗೋಕರ್ಣನಾಥ ಅವರಿಗೆ ಆರೋಗ್ಯವನ್ನು ಕರುಣಿಸಲಿ. ನಿಮ್ಮ ಕ್ರಾಂತಿಕಾರಿ ಪರಿವರ್ತನೆಗಳು, ಸಾಂದರ್ಭಿಕವಾದ ಮಾರ್ಗದರ್ಶನಗಳು ದೇವರ ಅನುಗ್ರಹವಾಗಿ ಮೂಡಿ ಬರಲಿ ಎಂಬುವುದೇ ನಮ್ಮ ಪ್ರಾರ್ಥನೆ.
ಆತ್ಮಕಥೆ: ‘ಸಾಲ ಮೇಳದ ಸಂಗ್ರಾಮ’ ಜನಾರ್ದನ ಪೂಜಾರಿ ಅವರ ಸುದೀರ್ಘ ರಾಜಕೀಯ ಜೀವನದ ಏರಿಳಿತಗಳು, ಅವರು ಎದುರಿಸಿದ ಸವಾಲುಗಳು ಮತ್ತು ಅವರ ಸಿದ್ಧಾಂತಗಳನ್ನು ಒಳಗೊಂಡ ಆತ್ಮಕಥೆ ‘ಸಾಲ ಮೇಳದ ಸಂಗ್ರಾಮ’ ಈಗಾಗಲೇ ಲೋಕಾರ್ಪಣೆಗೊಂಡಿದೆ. 2018ರಲ್ಲಿ ಬಿಡುಗಡೆಯಾದ ಈ ಕೃತಿಯಲ್ಲಿ ಅವರು ತಮ್ಮ ಜೀವನದ ಹಾದಿ ಹಾಗೂ ರಾಜಕೀಯ ರಂಗದ ಅನುಭವಗಳನ್ನು ನೇರ ಮತ್ತು ನಿಷ್ಠುರ ನುಡಿಗಳಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕವು ಇಂದಿಗೂ ಅನೇಕರಿಗೆ ಸ್ಪೂರ್ತಿಯ ಸೆಲೆಯಾಗಿದೆ.
ರಾಜಕೀಯ ಎಂದರೆ ಅಧಿಕಾರವಲ್ಲ, ಅದು ಸೇವೆ” ಎಂದು ನಂಬಿದವರು ಪೂಜಾರಿ. ತಮ್ಮ ದೀರ್ಘಕಾಲದ ರಾಜಕೀಯ ಜೀವನದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಪ್ಪು ಚುಕ್ಕೆಯಿಲ್ಲದೆ ಬದುಕಿದ ಇವರು, ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
89ನೇ ಜನ್ಮದಿನದ ಈ ಶುಭ ಸಂದರ್ಭದಲ್ಲಿ, ದಕ್ಷಿಣ ಕನ್ನಡದ ಈ “ಅಪರೂಪದ ರಾಜಕಾರಣಿ”ಗೆ ನಾಡಿನಾದ್ಯಂತ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.



accident
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ
ವಾಷಿಂಗ್ಟನ್: ಪತ್ರಕರ್ತರಿಗಾಗಿ ಆಯೋಜಿಸಿದ್ದ ಜನಪ್ರತಿನಿಧಿಗಳ ಔತಣಕೂಟದಲ್ಲಿ ದುಷ್ಕರ್ಮಿಯೊಬ್ಬ ಎಂಟು ಸುತ್ತು ಗುಂಡಿನ ದಾಳಿ ನಡೆಸಿದ್ದು, ಡೊನಾಲ್ಡ್ ಟ್ರಂಪ್ ಟೇಬಲ್ ಅಡಿಗೆ ತೂರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ಕ್ಯಾಲಿಫೋರ್ನಿಯಾ ಮೂಲದ 30 ವರ್ಷದ ಯುವಕ ಔತಣಕೂಟಕ್ಕೆ ನುಗ್ಗಿ ಟ್ರಂಪ್ ಗುರಿಯಾಗಿಸಿ 8 ಸುತ್ತು ಗುಂಡು ಹಾರಿಸಿದ್ದಾನೆ. ತಕ್ಷಣ ಎಚ್ಚೆತ್ತ ಟ್ರಂಪ್ ಟೇಬಲ್ ಅಡಿ ತೂರಿ ಅಪಾಯದಿಂದ ಪಾರಾಗಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬಂದೂಕುಧಾರಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಓರ್ವ ಭದ್ರತಾ ಸಿಬ್ಬಂದಿಗೆ ಗಾಯವಾಗಿದೆ.
ಬಂಧಿತನ ಬಗ್ಗೆ: ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.
ಟ್ರಂಪ್ ಪ್ರತಿಕ್ರಿಯೆ: ಬಂಧನದ ಬಳಿಕ ಪ್ರತಿಕ್ರಿಯಿಸಿದ ಟ್ರಂಪ್, “ಇದು ನನ್ನ ಮೇಲಿನ ಮೊದಲ ದಾಳಿಯಲ್ಲ. ಟ್ರಂಪ್ ಗುರಿಯಾಗಿಸಿ ನಡೆದ ಎರಡನೇ ದಾಳಿ ಇದು. ಆದರೆ ನಾನು ಪ್ರಾಣಕ್ಕೆ ಅಂಜುವವನಲ್ಲ” ಎಂದು ಖಾರವಾಗಿ ಹೇಳಿದ್ದಾರೆ.
2024ರ ಜುಲೈ 13ರಂದು ಬಟ್ಲರ್ ರ್ಯಾಲಿಯಲ್ಲಿ ಟ್ರಂಪ್ ಮೇಲೆ ನಡೆದಿದ್ದ ಹತ್ಯೆ ಯತ್ನದ ಬಳಿಕ ಇದು ಎರಡನೇ ದಾಳಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ

INTERNATIONAL
ವಿಶ್ವಕ್ಕೆ ನಿರಾಳ: ಅಮೆರಿಕ-ಇರಾನ್ ಮಧ್ಯೆ ಕದನ ವಿರಾಮ ಘೋಷಣೆ! ಪಾಕಿಸ್ತಾನದ ಮಧ್ಯಸ್ಥಿಕೆ !!
ವಾಷಿಂಗ್ಟನ್/ತೆಹ್ರಾನ್: ಕಳೆದ ಐದು ವಾರಗಳಿಂದ ಜಗತ್ತನ್ನೇ ಆತಂಕದ ಮಡುವಿನಲ್ಲಿಟ್ಟಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ನಡೆಸಬೇಕಿದ್ದ ಭೀಕರ ಬಾಂಬ್ ದಾಳಿಯ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಹಿಂಪಡೆದಿದ್ದು, ಎರಡು ವಾರಗಳ ಕದನ ವಿರಾಮಕ್ಕೆ (Ceasefire) ಒಪ್ಪಿಗೆ ಸೂಚಿಸಿದ್ದಾರೆ.
ಪಾಕಿಸ್ತಾನದ ಮಧ್ಯಸ್ಥಿಕೆ ಮತ್ತು ಟ್ರಂಪ್ ನಿರ್ಧಾರ
ಇರಾನ್ ಮೇಲಿನ ದಾಳಿಗೆ ಕೇವಲ ಎರಡು ಗಂಟೆಗಳ ಗಡುವು ಬಾಕಿ ಇರುವಾಗ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ನಡೆಸಿದ ಸಂಧಾನ ಯಶಸ್ವಿಯಾಗಿದೆ. ಅವರ ಮನವಿಯ ಮೇರೆಗೆ ಟ್ರಂಪ್ ತಮ್ಮ ಆಕ್ರಮಣಕಾರಿ ನಿಲುವನ್ನು ಸಡಿಲಿಸಿದ್ದಾರೆ.

ಇರಾನ್ ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸುರಕ್ಷಿತವಾಗಿ ತೆರೆಯಲು ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ದಾಳಿಯನ್ನು ಅಮಾನತುಗೊಳಿಸುತ್ತಿದ್ದೇವೆ,” ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮುಕ್ತ: ಜಗತ್ತಿನ ತೈಲ ಮಾರುಕಟ್ಟೆಗೆ ಚೇತರಿಕೆ
ವಿಶ್ವದ ತೈಲ ಪೂರೈಕೆಯ ಮಹತ್ವದ ಕೊಂಡಿಯಾದ ಹಾರ್ಮುಜ್ ಜಲಸಂಧಿ (Strait of Hormuz) ಕಳೆದ ಐದು ವಾರಗಳಿಂದ ಬಂದ್ ಆಗಿತ್ತು. ಇರಾನ್ ಈಗ ಈ ಮಾರ್ಗವನ್ನು ತೆರೆಯಲು ಒಪ್ಪಿಕೊಂಡಿರುವುದು ಜಾಗತಿಕ ಆರ್ಥಿಕತೆಗೆ ದೊಡ್ಡ ಮಟ್ಟದ ಬೂಸ್ಟ್ ನೀಡಲಿದೆ.

ಇರಾನ್ ಮಂಡಿಸಿದ 10 ಅಂಶಗಳ ಶಾಂತಿ ಪ್ರಸ್ತಾವನೆ
ಇರಾನ್ ನೀಡಿರುವ 10 ಪ್ರಮುಖ ಬೇಡಿಕೆಗಳ ಆಧಾರದ ಮೇಲೆ ಶಾಂತಿ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ. ಈ ಪ್ರಸ್ತಾವನೆಯ ಮುಖ್ಯಾಂಶಗಳು ಹೀಗಿವೆ:
- ಪರಸ್ಪರ ಆಕ್ರಮಣ ಮಾಡದಿರುವ ಬದ್ಧತೆ.
- ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ನ ನಿಯಂತ್ರಣ ಮುಂದುವರಿಕೆ.
- ಯುರೇನಿಯಂ ಪುಷ್ಟೀಕರಣಕ್ಕೆ ಅಧಿಕೃತ ಮಾನ್ಯತೆ.
- ಇರಾನ್ ಮೇಲಿನ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧಗಳ ತೆರವು.
- UN ಮತ್ತು IAEA ನಿರ್ಣಯಗಳ ರದ್ದತಿ.
- ಜಲಸಂಧಿಯ ಆದಾಯವನ್ನು ಮೂಲಸೌಕರ್ಯ ಪುನರ್ ನಿರ್ಮಾಣಕ್ಕೆ ಬಳಸುವುದು.
- ಇರಾನ್ಗೆ ಯುದ್ಧದ ಹಾನಿಗಾಗಿ ಪರಿಹಾರ ಪಾವತಿ.
- ಮಧ್ಯಪ್ರಾಚ್ಯದಿಂದ ಅಮೆರಿಕದ ಯುದ್ಧ ಪಡೆಗಳ ಹಿಂತೆಗೆತ.
- ಎಲ್ಲಾ ರಂಗಗಳಲ್ಲಿ ಸಂಪೂರ್ಣ ಯುದ್ಧ ಸ್ಥಗಿತ.
- ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳಿಗೆ ತಡೆ.
ಇಸ್ರೇಲ್ ಬೆಂಬಲ ಮತ್ತು ವಿಶ್ವಸಂಸ್ಥೆಯ ಪ್ರತಿಕ್ರಿಯೆ
ಇರಾನ್ನ ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಅಮೆರಿಕದ ಈ ಹಿಂದಿನ ನಿರ್ಧಾರಕ್ಕೆ ವಿಶ್ವಸಂಸ್ಥೆ ಮತ್ತು ಪೋಪ್ ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಈಗಿನ ಬದಲಾದ ಪರಿಸ್ಥಿತಿಯಲ್ಲಿ ಇಸ್ರೇಲ್ ಕೂಡ ಈ ಕದನ ವಿರಾಮಕ್ಕೆ ತನ್ನ ಬೆಂಬಲ ಸೂಚಿಸಿದೆ ಎಂದು ವರದಿಯಾಗಿದೆ.
ಈ ಎರಡು ವಾರಗಳ ಕಾಲಾವಧಿಯು ಉಭಯ ದೇಶಗಳ ನಡುವಿನ ಸುದೀರ್ಘ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಒಂದು ಸುವರ್ಣ ಅವಕಾಶವಾಗಿದೆ. ಟ್ರಂಪ್ ಅವರ ಈ ನಿರ್ಧಾರವು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯೆಂದು ಪರಿಗಣಿಸಲಾಗಿದೆ.

-
crime4 weeks agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime3 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala4 weeks agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala4 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada4 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala4 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala2 months agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
