Connect with us

crime

ಹಣಕ್ಕಾಗಿ ತಂಗಿಯ ಅಸ್ಥಿಪಂಜರ ಹೊತ್ತು ಬ್ಯಾಂಕಿಗೆ ಬಂದ ಅಣ್ಣ!

Published

on

ಒಡಿಶಾದಲ್ಲಿ ನಡೆದ ಮನಕಲಕುವ ಘಟನೆ

ಭುವನೇಶ್ವರ: ಬಡವನ ಹಸಿವು ಮತ್ತು ಬ್ಯಾಂಕುಗಳ ಕಟ್ಟುನಿಟ್ಟಿನ ನಿಯಮಗಳ ನಡುವಿನ ಸಂಘರ್ಷ ಎಂತಹ ಭೀಕರ ರೂಪ ತಾಳಬಲ್ಲದು ಎಂಬುದಕ್ಕೆ ಒಡಿಶಾದ ಕೆಂಝರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಂಗಿಯ ಖಾತೆಯಲ್ಲಿದ್ದ ₹19,300 ಹಣವನ್ನು ಪಡೆಯಲು ದಾರಿಕಾಣದ ಅಣ್ಣನೊಬ್ಬ, ಎರಡು ತಿಂಗಳ ಹಿಂದೆ ಹೂತಿಟ್ಟಿದ್ದ ತಂಗಿಯ ಅಸ್ಥಿಪಂಜರವನ್ನೇ ಅಗೆದು ತೆಗೆದು ಹೆಗಲ ಮೇಲೆ ಹೊತ್ತು ಬ್ಯಾಂಕಿಗೆ ಬಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಘಟನೆ ವಿವರ: ಕೆಂಝರ್ ಜಿಲ್ಲೆಯ ದಿಯಾನಾಲಿ ಗ್ರಾಮದ ಜಿತು ಮುಂಡಾ ಎಂಬುವವರೇ ಈ ದುರ್ದೈವಿ. ಇವರ ತಂಗಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ಕಾಕ್ರಾ ಅವರ ಪತಿ ಮತ್ತು ಏಕೈಕ ಮಗು ಮೊದಲೇ ತೀರಿಕೊಂಡಿದ್ದರಿಂದ ಜಿತು ಅವರೇ ಏಕೈಕ ವಾರಸುದಾರರಾಗಿದ್ದರು.

ಒಡಿಶಾ ಗ್ರಾಮೀಣ ಬ್ಯಾಂಕಿನ ಮಲ್ಲಿಪಾಸಿ ಶಾಖೆಯಲ್ಲಿದ್ದ ತಂಗಿಯ ಹಣವನ್ನು ಪಡೆಯಲು ಜಿತು ಹಲವಾರು ಬಾರಿ ಬ್ಯಾಂಕಿಗೆ ಅಲೆದಿದ್ದರು. ಆದರೆ ಬ್ಯಾಂಕ್ ಮ್ಯಾನೇಜರ್ ಮಾತ್ರ, “ಹಣ ಬೇಕಿದ್ದರೆ ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಅವರ ಸಾವಿನ ಪ್ರಮಾಣ ಪತ್ರ ಮತ್ತು ಕಾನೂನುಬದ್ಧ ವಾರಸುದಾರರ ದಾಖಲೆಗಳನ್ನು ನೀಡಬೇಕು” ಎಂದು ಕಟ್ಟುನಿಟ್ಟಾಗಿ ಹೇಳಿದ್ದರು.

ಕಾಗದದ ಮುಂದೆ ಕರುಣೆ ಸೋತಾಗ: ವಿದ್ಯಾಭ್ಯಾಸವಿಲ್ಲದ ಬುಡಕಟ್ಟು ಸಮುದಾಯದ ಜಿತು ಅವರಿಗೆ ಈ ಕಾಗದ ಪತ್ರಗಳ ವ್ಯವಹಾರ ಕಿಂಚಿತ್ತೂ ತಿಳಿದಿರಲಿಲ್ಲ. ತಂಗಿಯ ಸಾವಿನ ಪ್ರಮಾಣ ಪತ್ರ ಕೂಡ ಅವರ ಬಳಿ ಇರಲಿಲ್ಲ. ಎಷ್ಟೇ ಬೇಡಿಕೊಂಡರೂ ಬ್ಯಾಂಕ್ ಅಧಿಕಾರಿಗಳು ಕರುಣೆ ತೋರಿಸದಿದ್ದಾಗ ಅಸಹಾಯಕ ಜಿತು ಅಂತಿಮವಾಗಿ ನಿರ್ಧಾರ ಕೈಗೊಂಡರು.

ಸೋಮವಾರ ಸ್ಮಶಾನಕ್ಕೆ ಹೋಗಿ ಎರಡು ತಿಂಗಳ ಹಿಂದೆ ಹೂತಿಟ್ಟಿದ್ದ ತಂಗಿಯ ಶವದ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಅದೇ ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿಕೊಂಡು, ಸುಡುವ ಬಿಸಿಲಿನಲ್ಲಿ ಮೂರು ಕಿಲೋಮೀಟರ್ ದೂರ ನಡೆದು ಬ್ಯಾಂಕಿನ ಮುಂದೆ ನಿಂತಿದ್ದಾರೆ.

ಬೆಚ್ಚಿಬಿದ್ದ ಬ್ಯಾಂಕ್ ಸಿಬ್ಬಂದಿ: ಹೆಗಲ ಮೇಲಿದ್ದ ಅಸ್ಥಿಪಂಜರವನ್ನು ಕಂಡು ಬ್ಯಾಂಕಿನಲ್ಲಿದ್ದ ಸಿಬ್ಬಂದಿ ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದ ಜನರು ಬ್ಯಾಂಕ್ ಅಧಿಕಾರಿಗಳ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಒಬ್ಬ ಬಡವ ತನಗೆ ಸೇರಬೇಕಾದ ಹಣ ಪಡೆಯಲು ಇಷ್ಟೊಂದು ಕಷ್ಟಪಡಬೇಕೇ? ಬ್ಯಾಂಕ್ ಸಿಬ್ಬಂದಿ ಗ್ರಾಮ ಪಂಚಾಯತ್ ಮೂಲಕ ಅಥವಾ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಹಣ ನೀಡಬಹುದಿತ್ತು. ಆದರೆ ಅವರಿಗೆ ಕರುಣೆಗಿಂತ ಕಾಗದವೇ ಮುಖ್ಯವಾಯಿತು” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಪೊಲೀಸರ ಮಧ್ಯಪ್ರವೇಶ: ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಜಿತು ಅವರನ್ನು ಸಮಾಧಾನಪಡಿಸಿದ ಪೊಲೀಸರು, ಶೀಘ್ರದಲ್ಲೇ ಹಣ ಸಿಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಂದ ವಿವರಣೆಯನ್ನು ಕೇಳಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ವಿಟ್ಲ ಪೊಲೀಸ್ ಸ್ಟೇಷನ್ ಸಿಸಿಟಿವಿ ಫೂಟೇಜ್ ಹಾಜರುಪಡಿಸಲು ಮಂಗಳೂರು ಪೋಕ್ಸೋ ನ್ಯಾಯಾಲಯದ ಆದೇಶ

Published

on

ಮಂಗಳೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣವೊಂದರಲ್ಲಿ (ಕ್ರೈಮ್ ನಂಬರ್ 121/2025) ಮಹತ್ವದ ಬೆಳವಣಿಗೆಯಾಗಿದ್ದು, ಘಟನೆ ನಡೆದ ದಿನದಂದು ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಫೂಟೇಜ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರಿನ ಒಂದನೇ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ವಿಟ್ಲ ಠಾಣಾ ವ್ಯಾಪ್ತಿಯ ಅಪ್ರಾಪ್ತ ಮಗಳ ಮೇಲೆ ಅನುಚಿತ ವರ್ತನೆ ತೋರಲಾಗಿದೆ ಎಂದು ತಾಯಿಯೊಬ್ಬರು ಗುರುಪ್ರಸಾದ್ ಎಂಬುವವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ, ಈ ದೂರು ಸುಳ್ಳು ಮತ್ತು ಪೂರ್ವಯೋಜಿತ ಪಿತೂರಿ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.

ಸಂಶಯಕ್ಕೆ ಕಾರಣವಾದ ಅಂಶಗಳು:

ದೂರು ನೀಡುವ ಸಂದರ್ಭದಲ್ಲಿ ದೂರುದಾರರು ಸೇಸಪ್ಪ ಬೆದ್ರಕಾಡು ಎಂಬ ವ್ಯಕ್ತಿಯ ಜೊತೆ ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ. ಈ ಸೇಸಪ್ಪ ಹಾಗೂ ಆರೋಪಿಯ ಚಿಕ್ಕಪ್ಪ ಆನಂದ ಸುರುಳಿಮೂಳೆ ನಡುವೆ ಈಗಾಗಲೇ ಹಳೆಯ ದ್ವೇಷ ಹಾಗೂ ಹಣದ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ.

ವಿಚಾರಣೆ ವೇಳೆ ಬಾಧಿತ ಹುಡುಗಿ ಮತ್ತು ಆಕೆಯ ತಾಯಿ, ತಮಗೆ ಸೇಸಪ್ಪ ಬೆದ್ರಕಾಡು ಎಂಬುವವರ ಪರಿಚಯವೇ ಇಲ್ಲ ಮತ್ತು ಅಂದು ಅವರು ನಮ್ಮ ಜೊತೆ ಠಾಣೆಗೆ ಬಂದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಪ್ರಕರಣದ ಮೇಲೆ ಸಂಶಯ ಮೂಡಲು ಕಾರಣವಾಗಿದೆ.

ಆರೋಪಿ ಗುರುಪ್ರಸಾದ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದು ಆರೋಪಿ ಪರ ವಕೀಲರ ಪ್ರಬಲ ವಾದವಾಗಿದೆ.

ನ್ಯಾಯಾಲಯದ ಆದೇಶ:

ಆರೋಪಿ ಪರ ವಕೀಲರಾದ ಶಿವಾನಂದ ವಿಟ್ಲ ಅವರು BNSS ಕಲಂ 94ರ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಘಟನೆ ನಡೆದ ದಿನದ (13.09.2025) ವಿಟ್ಲ ಪೊಲೀಸ್ ಠಾಣೆಯ ಸಿಸಿಟಿವಿ ಫೂಟೇಜ್ ಅನ್ನು ಹಾಜರುಪಡಿಸುವಂತೆ ಕೋರಿದ್ದರು. ಸರಕಾರಿ ಅಭಿಯೋಜಕರ ಆಕ್ಷೇಪಣೆಯ ಹೊರತಾಗಿಯೂ, ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಸಿಸಿಟಿವಿ ಫೂಟೇಜ್ ಸಲ್ಲಿಸಲು ಆದೇಶಿಸಿದೆ.

ಈ ಆದೇಶದಿಂದಾಗಿ ಪೋಕ್ಸೋ ಪ್ರಕರಣದಲ್ಲಿ ಹೊಸ ತಿರುವು ಲಭಿಸಿದ್ದು, ಪೊಲೀಸ್ ಠಾಣೆಯ ಸಿಸಿಟಿವಿ ದಾಖಲೆಗಳು ಪ್ರಕರಣದ ಅಸಲಿಯತ್ತನ್ನು ಹೊರಹಾಕಲಿವೆಯೇ ಎಂದು ಕಾದು ನೋಡಬೇಕಿದೆ.

Continue Reading

crime

ಉಳ್ಳಾಲ ಜುಬೇರ್ ಕೊಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಮೊದಲ ಆರೋಪಿಗೆ ಜೀವಾವಧಿ ಶಿಕ್ಷೆ

Published

on

ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜುಬೇರ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಮೊದಲನೇ ಪ್ರಮುಖ ಆರೋಪಿಗೆ ಮಂಗಳೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಿನಾಂಕ 04-10-2017 ರಂದು ರಾತ್ರಿ 7-55 ಗಂಟೆಗೆ ಮುಕ್ಕಚ್ಚೇರಿ ಮಸೀದಿ ಎದುರು ಜುಬೇರ್ ಅವರು ತಮ್ಮ ಗೆಳೆಯ ಇಲಿಯಾಸ್ ಎಂಬವರ ಜೊತೆ ಮಾತನಾಡುತ್ತಿದ್ದಾಗ, ಆರೋಪಿಗಳು ತಲ್ವಾರ್ ಹಾಗೂ ಉದ್ದದ ಕತ್ತಿಯಿಂದ ದಾಳಿ ನಡೆಸಿ ಜುಬೇರ್‌ನನ್ನು ಕೊಲೆ ಮಾಡಿದ್ದರು. ಈ ವೇಳೆ ಅಡ್ಡ ಬಂದ ಇಲಿಯಾಸ್ ಅವರಿಗೂ ತೀವ್ರ ಗಾಯಗಳಾಗಿದ್ದವು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಶ್ರೀ ಗೋಪಿಕೃಷ್ಣ ಕೆ.ಆರ್ ಅವರು ತನಿಖೆ ನಡೆಸಿ ಅಬ್ದುಲ್ ರಹಿಮಾನ್ ಸುಹೇಲ್ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಈಗಾಗಲೇ 2 ರಿಂದ 4ನೇ ಆರೋಪಿಗಳಿಗೆ 2022ರಲ್ಲಿಯೇ ಜೀವಾವಧಿ ಶಿಕ್ಷೆಯಾಗಿತ್ತು. ಆದರೆ ಮೊದಲನೇ ಆರೋಪಿ ಅಬ್ದುಲ್ ರಹಿಮಾನ್ ಸುಹೇಲ್ ಜಾಮೀನು ಪಡೆದು ವಿಚಾರಣೆಯ ಅಂತಿಮ ಹಂತದಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರು ವಾರೆಂಟ್ ಮೂಲಕ ಆತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಸುನೀತಾ ಅವರು ಎಪ್ರಿಲ್ 22, 2026 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಶ್ರೀ ಮೋಹನ್ ಅವರು ವಾದ ಮಂಡಿಸಿದ್ದರು.

Continue Reading

crime

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಪ್ರಮುಖ ಆರೋಪಿ ಶಾರೀಕ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ

Published

on

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರಿನ ನಾಗುರಿ ಬಳಿಯ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್.ಐ.ಎ (NIA) ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಈ ಭಯೋತ್ಪಾದನಾ ಕೃತ್ಯದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್‌ಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ನವೆಂಬರ್ 19, 2022 ರಂದು ಮಂಗಳೂರಿನಲ್ಲಿ ನಡೆದ ಈ ಘಟನೆಯಲ್ಲಿ, ಕುಕ್ಕರ್ ಬಾಂಬ್ ಹೊತ್ತು ಸಾಗಿಸುತ್ತಿದ್ದಾಗಲೇ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿತ್ತು. ಪ್ರಕರಣದ ತನಿಖೆ ನಡೆಸಿದ ಎನ್.ಐ.ಎ ಅಧಿಕಾರಿಗಳು ಶಾರೀಕ್ ಐಸಿಸ್ ಸಿದ್ಧಾಂತಗಳಿಂದ ಪ್ರೇರಿತನಾಗಿ ಈ ಸಂಚು ರೂಪಿಸಿದ್ದನ್ನು ಪತ್ತೆಹಚ್ಚಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಯುಎಪಿಎ ಕಾಯ್ದೆಯಡಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಿದೆ. ದೇಶದ ಭದ್ರತೆಗೆ ಧಕ್ಕೆ ತರಲು ಯತ್ನಿಸಿದ ಆರೋಪಿಗೆ ಸಿಕ್ಕಿರುವ ಈ ಕಠಿಣ ಶಿಕ್ಷೆಯು ಸಮಾಜಘಾತುಕ ಶಕ್ತಿಗಳಿಗೆ ದೊಡ್ಡ ಎಚ್ಚರಿಕೆಯಾಗಿದೆ.

Continue Reading

Trending

Copyright © 2025 Deevatige