Connect with us

accident

ಅಜ್ಜ ಪುತ್ತಾಕನ ಕಣ್ಮುಂದೆಯೇ ವಿದ್ಯುತ್ ತಂತಿ ತಗುಲಿ ಮೊಮ್ಮಗ ದಾರುಣ ಸಾವು; ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಯಿತೇ ಎಳೆಯ ಜೀವ?

Published

on

ಬಂಟ್ವಾಳ: ತೆಂಗಿನಕಾಯಿ ಕೀಳಲೆಂದು ದೋಂಟಿ ಹಿಡಿದು ತೋಟಕ್ಕಿಳಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾದ ಘೋರ ಘಟನೆ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ನೇರಳಕಟ್ಟೆ ಸಮೀಪದ ಗಣೇಶ ನಗರದ ಪ್ಲಾಟ್‌ನ ಬಾಡಿಗೆ ಮನೆಯಲ್ಲಿ ವಾಸವಿರುವ ಮಹಮ್ಮದ್ ಶರೀಫ್ ಅವರ ಪುತ್ರ, ಪುತ್ತೂರು ಮೌಂಟೇನ್ ವ್ಯೂ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಹೀರ್ (15) ಮೃತಪಟ್ಟ ದುರ್ದೈವಿ. ಪರೀಕ್ಷೆ ಮುಗಿಸಿ ರಜೆಯಲ್ಲಿದ್ದ ಬಾಲಕ ಇಂದು ಬೆಳಿಗ್ಗೆ ತನ್ನ ಅಜ್ಜ ಪುತ್ತಾಕ (ಮಾಯಬ್ಬ) ಅವರ ಮನೆಗೆ ಬಂದಿದ್ದ ಸಂದರ್ಭ ಈ ದುರಂತ ನಡೆದಿದೆ.

ಘಟನೆಯ ವಿವರ:

ಅಜ್ಜ ಪುತ್ತಾಕ ಅವರು ತನ್ನ ಮನೆಯ ಮುಂಭಾಗದಲ್ಲಿರುವ ‌ ಬಂಟ್ವಾಳದ ಅಬ್ಬಾಸ್ ಎಂಬವರ ಜಮೀನಿನಲ್ಲಿ ತೆಂಗಿನಕಾಯಿ ಕೀಳಲು ಕೂಲಿಯಾಳನ್ನು ಕರೆತರುವಂತೆ ಮೊಮ್ಮಗ ಶಹೀರ್‌ಗೆ ತಿಳಿಸಿದ್ದರು. ಅಜ್ಜನ ಮಾತಿನಂತೆ ಕೂಲಿಯಾಳನ್ನು ಕರೆತಂದ ಶಹೀರ್, ಉತ್ಸಾಹದಿಂದ ತಾನೂ ಕಾಯಿ ಕೀಳಲು ನೆರವಾಗಲೆಂದು ನೆರೆಮನೆಯಿಂದ ವಿದ್ಯುತ್ ಪ್ರವಾಹಕ ದೋಂಟಿಯನ್ನು (Iron/Conducting Rod) ಹಿಡಿದುಕೊಂಡು ಜಮೀನಿಗೆ ಹೋಗಿದ್ದಾನೆ. ಕೂಲಿಯಾಳು ಮರ ಹತ್ತುತ್ತಿರುವಾಗಲೇ, ಶಹೀರ್ ಸಣ್ಣ ಮರವೊಂದರಿಂದ ಕಾಯಿ ಕೀಳಲು ದೋಂಟಿ ಎತ್ತಿದ್ದಾನೆ. ಈ ವೇಳೆ ಮರದ ತೀರಾ ಸಮೀಪದಲ್ಲೇ ಹಾದುಹೋಗಿದ್ದ ಹೈಟೆನ್ಷನ್ (HT) ವಿದ್ಯುತ್ ಲೈನ್‌ಗೆ ದೋಂಟಿ ಸ್ಪರ್ಶಿಸಿದೆ. ತಕ್ಷಣವೇ ತೀವ್ರಗತಿಯ ವಿದ್ಯುತ್ ಆಘಾತಕ್ಕೊಳಗಾದ ಬಾಲಕನ ದೇಹವು ದೋಂಟಿ ಹಿಡಿತದೊಂದಿಗೆ ಸ್ಥಳದಲ್ಲೇ ಸುಟ್ಟು ಕರಟಿಹೋಗಿದೆ.

ಸ್ಥಳೀಯ ಸಮಾಜ ಸೇವಕ ಇಕ್ಬಾಲ್ ಮತ್ತು ಇತರರು ಇತರರು ತಕ್ಷಣ ಧಾವಿಸಿ, ಮತ್ತಷ್ಟು ಕರಟುತ್ತಿದ್ದ ಮೃತದೇಹವನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಯ ಪ್ರಕ್ರಿಯೆಗಳನ್ನು ಮುಗಿಸಿ, ಗಡಿಯಾರಕ್ಕೆ ತಂದು ಸಾರ್ವಜನಿಕ ವೀಕ್ಷಣೆಯ ಬಳಿಕ ಮೃತದೇಹವನ್ನು ದಫನ ಸಂಸ್ಕಾರಕ್ಕಾಗಿ ಅವರ ತಂದೆಯ ಜಮಾತ್‌ ಇರುವ ಮೂಲ ನಿವಾಸವಾದ ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ನೀರಕಟ್ಟೆಗೆ ಕೊಂಡೊಯ್ಯಲಾಗಿದೆ.

ಇಲಾಖೆಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:

ಈ ಸಾವಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಮೆಸ್ಕಾಂ ಇಲಾಖೆಯ ಬೇಜವಾಬ್ದಾರಿಯೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೆದ್ದಾರಿ ಕಾಮಗಾರಿಯ ವೇಳೆ ತೆಗೆದ ಮಣ್ಣನ್ನು ಈ ಭಾಗದಲ್ಲಿ ಸುರಿಯಲಾಗಿತ್ತು. ಇದರಿಂದಾಗಿ ನೆಲದ ಮಟ್ಟ ಏರಿಕೆಯಾಗಿ, ಬಹಳ ಎತ್ತರದಲ್ಲಿದ್ದ ಅಪಾಯಕಾರಿ ಹೈಟೆನ್ಷನ್ ತಂತಿಗಳು (H T Line ) ಈಗ ತೀರಾ ಹತ್ತಿರಕ್ಕೆ ಬಂದಿವೆ. ಈ ಬಗ್ಗೆ ಅಪಾಯವನ್ನು ಅರಿತ ಸ್ಥಳೀಯರು ಅಪಾಯಕಾರಿ ಹೈಟೆನ್ಷನ್ ತಂತಿಗಳು ಹಾದುಹೋಗುವ ಕಂಬವನ್ನು ನಿಯಮಾನುಸಾರವಾಗಿ ಏರಿಸಬೇಕು ಅಂದರೆ ಎತ್ತರದ ಕಂಬವನ್ನು ಹಾಕಬೇಕು ಎಂದು ಅದೆಷ್ಟೋ ಬಾರಿ ಕೇಳಿ ಕೊಂಡಿದ್ದಾರೆ. ಹೆದ್ದಾರಿ ಏರಿಸಿರುವುದರಿಂದ ತಂತಿಗಳು ಕೆಳಗೆ ಬಂದಿವೆ, ಹೆದ್ದಾರಿ ಪ್ರಾಧಿಕಾರದವರು ಆ ಕೆಲಸವನ್ನು ಮಾಡಬೇಕು ಎಂದು ಕರೆಂಟ್ ಇಲಾಖೆಯವರು ಶಾಕ್‌ ನೀಡಿದರೆ ವಿದ್ಯುತ್‌ ಇಲಾಖೆಯ ಕಾರ್ಯ ನಿರ್ವಹಣೆ ನಮಗೆ ಬರುವುದಿಲ್ಲ ಎಂಬುವುದು ಹೆದ್ದಾರಿ ದೊಡ್ಡವರ ವಾದ . ಅಂತೂ ಇಂತೂ ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಲಾಖೆಗಳ ಈ ‘ಕಣ್ಣುಮುಚ್ಚಾಲೆ’ ಆಟಕ್ಕೆ ಇಂದು ಅಮಾಯಕ ವಿದ್ಯಾರ್ಥಿ ಬಲಿಯಾಗಿದ್ದಾನೆ.

ಪುತ್ತಾಕ ಕುಟುಂಬಕ್ಕೆ ಆಘಾತದ ಮೇಲೆ ಆಘಾತ:

ಗಡಿಯಾರ ಪುತ್ತಾಕ ಅವರು ಹೆದ್ದಾರಿಯಲ್ಲಿ ನಡೆಯುವ ಅಪಘಾತಗಳ ಸಂದರ್ಭದಲ್ಲಿ ಜೀವದ ಹಂಗು ತೊರೆದು ರಕ್ಷಣಾ ಕಾರ್ಯ ನಡೆಸುವ ಹೆಸರಾಂತ ಸಮಾಜ ಸೇವಕ. ಆದರೆ ವಿಧಿಯ ಆಟ ಮಾತ್ರ ಕ್ರೂರವಾಗಿದೆ. 13 ವರ್ಷಗಳ ಹಿಂದೆ ಪೇರಮೊಗರು ಎಂಬಲ್ಲಿ ನಡೆದ ಲಾರಿ ಅಪಘಾತದಲ್ಲಿ ಪುತ್ತಾಕ ಅವರು ತಮ್ಮ ಇಬ್ಬರು ಪುತ್ರರಾದ ಆಶಿಕ್ ಮತ್ತು ಶಫೀಕ್ ಅವರನ್ನು ಕಳೆದುಕೊಂಡಿದ್ದರು. ಅಂದು ಅಪಘಾತದ ಜಾಗದಿಂದ ಮಕ್ಕಳ ಶವವನ್ನು ಹೊರತೆಗೆದಿದ್ದ ಅಜ್ಜ, ಇಂದು ತನ್ನ ಕಣ್ಮುಂದೆಯೇ ತನ್ನ ಪ್ರೀತಿಯ ಮೊಮ್ಮಗ ವಿದ್ಯುತ್ ಆಘಾತಕ್ಕೆ ಬಲಿಯಾದುದನ್ನು ಕಂಡು ಕಂಗಾಲಾಗಿದ್ದಾರೆ. ಪತ್ನಿ ಕೂಡ ಕಳೆದ ಹಲವು ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಈ ಕುಟುಂಬಕ್ಕೆ ದುಃಖದ ಮೇಲೆ ದುಃಖ ಮಳೆಗರೆದಂತಾಗಿದೆ.

ಘಟನಾ ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಪುತ್ತೂರು: ರಸ್ತೆ ಅಪಘಾತಕ್ಕೆ ಯುವಕ ಬಲಿ – ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Published

on

ಪುತ್ತೂರು: ನಗರದ ಪಡೀಲ್ ಸಮೀಪ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಪುತ್ತೂರುತಾಲೂಕು ಬೆಳ್ಳಿಪ್ಪಾಡಿ ಗ್ರಾಮದ (ವಯಾ ದಾರಂದಕುಕ್ಕು) ಕೊಡಿಮರ ನಿವಾಸಿ ವಿಶ್ವನಾಥ ಪೂಜಾರಿ ಅವರ ಪುತ್ರ ಧನರಾಜ್ (23) ಯಾನೆ ಧನು ಮೃತಪಟ್ಟ ದುರ್ದೈವಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಧನರಾಜ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಊರಿಗೆ ಬಂದಿದ್ದರು. ಜಾತ್ರಾ ಗದ್ದೆಯಲ್ಲಿ (ಸಂತೆ ಗದ್ದೆ) ಜ್ಯೂಸ್ ಅಂಗಡಿ ಇಟ್ಟುಕೊಂಡಿದ್ದ ಅವರು, ನಿನ್ನೆ ಮುರದಲ್ಲಿ ತನ್ನ ಗೆಳೆಯನ ಮನೆಯಲ್ಲಿ ತಂಗಿದ್ದರು. ಇಂದು ಬಟ್ಟೆ ಬದಲಾಯಿಸಿ ಮತ್ತೆ ಸ್ಟಾಲ್‌ ಗೆ ಹೋಗಲು ಬೆಳಿಗ್ಗೆ ಸುಮಾರು 11:30ಕ್ಕೆ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತ: ದೊರೆತಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಧನರಾಜ್ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು ಲೈಟ್‌ ಕಂಬಕ್ಕೆ ಅಪ್ಪಳಿಸಿ. ಬಳಿಕ ಎದುರಿನಿಂದ ಬರುತ್ತಿದ್ದ ಮತ್ತೊಂದು ದ್ವಿಚಕ್ರ ವಾಹನದ ಮೇಲೆ ಹಾರಿದೆ. ಡಿಕ್ಕಿಯ ತೀವ್ರತೆಗೆ ಧನರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ , ಈ ದೃಶ್ಯ ಸ್ಥಳೀಯ ಸಿ ಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಗಾಯಾಳುಗಳ ಸ್ಥಿತಿ: ಮತ್ತೊಂದು ಬೈಕಿನಲ್ಲಿದ್ದ ಇಬ್ಬರು ಸವಾರರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕುಟುಂಬದಲ್ಲಿ ಆಕ್ರಂದನ: ವಿಶ್ವನಾಥ ಪೂಜಾರಿ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ದುಡಿಯುವ ಕೈಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಜಾತ್ರೆಯ ಸಂಭ್ರಮದಲ್ಲಿದ್ದ ಪುತ್ತೂರು ಸುತ್ತಮುತ್ತ ಈ ಘಟನೆಯಿಂದಾಗಿ ಶೋಕದ ಛಾಯೆ ಆವರಿಸಿದೆ.

ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಬೆಳ್ಳಿಪ್ಪಾಡಿ ನಿವಾಸಿ ಬೈಕ್ ಸವಾರ ಬೆಳ್ಳಿಪ್ಪಾಡಿ ಧನು ಎಂಬವರು ಮೃತಪಟ್ಟಿದ್ದು‌ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಕುಟುಂಬಕ್ಕೆ ಸಾಂತ್ವಾನ ನೀಡಿದರು


Continue Reading

accident

ಕುಕ್ಕಾಜೆ ಜಂಕ್ಷನ್ ಬಳಿ ಆಕ್ಸಿಡೆಂಟ್.. ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ..

Published

on

ಬಂಟ್ವಾಳ: ಸಾಲೆತ್ತೂರು-ಮಾರ್ನಬೈಲು ಸಂಪರ್ಕ ರಸ್ತೆಯ ಕುಕ್ಕಾಜೆ ಜಂಕ್ಷನ್ ಬಳಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇರಾ ಗ್ರಾಮದ ಕುಕ್ಕಾಜೆ ಬೈಲ್ ನಿವಾಸಿ, ಅಶೋಕ ಎಂಬವರ ಏಕೈಕ ಪುತ್ರ ಮನೀಶ್ (22) ಮೃತಪಟ್ಟ ದುರ್ದೈವಿ. ಇವರು ಮುಂಚಿಯಲ್ಲಿರುವ ವಿಕಾಸ್ ಶಾಮಿಯಾನ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆಯ ವಿವರ: ಮನೀಶ್ ಅವರು ಸಾಲೆತ್ತೂರಿನಿಂದ ಕುಕ್ಕಾಜೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಆಪೆ ರಿಕ್ಷಾ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ, ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಮನೀಶ್ ಅವರು ಕುಟುಂಬದ ಏಕೈಕ ಪುತ್ರನಾಗಿದ್ದು, ಮನೆಯ ಆಧಾರಸ್ತಂಭವಾಗಿದ್ದ ಯುವಕನ ಅಗಲಿಕೆಯಿಂದ ಕುಕ್ಕಾಜೆ ಪರಿಸರದಲ್ಲಿ ಶೋಕ ಮಡುಗಟ್ಟಿದೆ.

Continue Reading

accident

ತೋಡಿಗೆ ಬಿದ್ದ ಕಾರು..ಪ್ರಯಾಣಿಕರು ಅದೃಷ್ಟವಶಾತ್ ಪಾರು..

Published

on

ವಿಟ್ಲ: ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಸೇತುವೆಯ ಸಮೀಪ ಮಾರುತಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಪಲ್ಟಿ ಹೊಡೆದ ಘಟನೆ ಸಂಭವಿಸಿದೆ.

​ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ಉರುಳಿಬಿದ್ದಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಹಾನಿ ಸಂಭವಿಸದಿರುವುದು ನೆಮ್ಮದಿಯ ವಿಷಯವಾಗಿದೆ.

​ಅಪಘಾತಕ್ಕೀಡಾದ ಕಾರು ಸ್ಥಳೀಯ ನಿವಾಸಿಯೊಬ್ಬರಿಗೆ ಸೇರಿದ್ದೆಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣವೇ ಧಾವಿಸಿ ಗಾಯಾಳುಗಳಿಗೆ ನೆರವಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!