Connect with us

Bantawala

ಕೋಡಪದವು: ಮಗುವಿನ ಚಿನ್ನದ ಸರ ಕಸಿದು ಪರಾರಿಯಾದ ಬೈಕ್ ಸವಾರ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Published

on

ವಿಟ್ಲ: ಪಟ್ಟಣದ ಸಮೀಪದ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ಹಾಡಹಗಲೇ ಭೀಕರ ಕಳ್ಳತನವೊಂದು ನಡೆದಿದೆ. ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾಗಿದ್ದಾನೆ.

ಘಟನೆಯ ವಿವರ:
ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಕೆಟಿಎಂ (KTM) ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಅತಿ ವೇಗವಾಗಿ ಬಂದು ಮಗುವಿನ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಪಂಚಮಿ ಸೂಪರ್ ಮಾರ್ಕೆಟ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಪ್ಪು ಮತ್ತು ಕಿತ್ತಳೆ ಬಣ್ಣದ ಕೆಟಿಎಂ ಬೈಕಿನಲ್ಲಿ ಸವಾರನು ಹೆಲ್ಮೆಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.

ಜನರಲ್ಲಿ ಆತಂಕ:
ಈ ಭಾಗದಲ್ಲಿ ಕಳ್ಳತನದ ಪ್ರಕರಣಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಈ ಹಿಂದೆ ಕೂಡ ಈ ಪರಿಸರದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ, ಅಡಿಕೆ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಕಳವು ಮಾಡಿದ ಘಟನೆಗಳು ವರದಿಯಾಗಿದ್ದವು. ಈಗ ನೇರವಾಗಿ ಮಗುವಿನ ಸರವನ್ನೇ ಕಸಿದಿರುವುದು ಪೋಷಕರ ನಿದ್ದೆಗೆಡಿಸಿದೆ.

ಪೊಲೀಸರಿಗೆ ಒತ್ತಾಯ:
ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ, ಜನಸಾಮಾನ್ಯರು ಭಯರಹಿತವಾಗಿ ಜೀವನ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ಬಂಟ್ವಾಳ: ಪುಣಚದಲ್ಲಿ ಯುವಕ ನೇಣಿಗೆ ಶರಣು

Published

on

ಪುಣಚ: ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರಿಬೆಟ್ಟು ನಿವಾಸಿ ಕುಂಞಣ್ಣ ಮಣಿಯಾಣಿ ಅವರ ಪುತ್ರ ಹರ್ಷಿತ್ ಮಣಿಯಾಣಿ (29) ಶನಿವಾರ ಬೆಳಿಗ್ಗೆ ತಮ್ಮ ಮನೆಯ ಹಿಂಭಾಗದ ಗುಡ್ಡದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಘಟನೆಯ ವಿವರ: ಮೃತ ಹರ್ಷಿತ್ ಕಳೆದ ಐದಾರು ವರ್ಷಗಳಿಂದ ಪುಣಚ ಗ್ರಾಮದ ಬೈಲುಗುತ್ತು ಜಗನ್ನಾಥ ರೈ ಅವರ ಪುತ್ರಿ ಶುಕ್ಲಾ ವಿಜಯ ರೈ ಅವರ ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಪುತ್ತೂರಿನಲ್ಲಿರುವ ಅವರ ಜಮೀನಿಗೆ ಕೆಲಸದಾಳುಗಳನ್ನು ಕರೆದುಕೊಂಡು ಹೋಗುವ ಮತ್ತು ಇತರೆ ಕೆಲಸಗಳನ್ನು ಇವರು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿದ್ದರು. ಒಂದೆರಡು ಗೆಳೆಯರನ್ನು ಬಿಟ್ಟರೆ ಯಾರ ಸಂಪರ್ಕದಲ್ಲಿಯೂ ಇರಲಿಲ್ಲ. ಶುಕ್ರವಾರ ರಾತ್ರಿ ಮನೆಯವರೊಂದಿಗೆ ಊಟ ಮಾಡಿ ಹೊರಾಂಗಣದಲ್ಲಿ ಮಲಗಿದ್ದ ಹರ್ಷಿತ್, ಶನಿವಾರ ಬೆಳಿಗ್ಗೆ ಮನೆಯವರು ನೋಡುವಾಗ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಮನೆಯ ಹಿಂಭಾಗದ ಗುಡ್ಡದ ಮರವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಯಾರೊಂದಿಗೂ ಅತಿಯಾಗಿ ಮಾತನಾಡದ ಸಾಧು ಸ್ವಭಾವದವರಾಗಿದ್ದ ಹರ್ಷಿತ್, ಕಳೆದ ಒಂದು ವಾರದಿಂದ ಇನ್ನಷ್ಟು ಮೌನವಾಗಿ ಯಾರಲ್ಲೂ ಮಾತನಾಡದೆ ಯಾವುದೋ ಬೇಸರದಲ್ಲಿ ಬಳಲುತ್ತಿದ್ದರು ಎನ್ನಲಾಗಿದೆ. ತಾಯಿಯ ಅನಾರೋಗ್ಯದ ಬಗ್ಗೆಯೂ ಅತಿಯಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ. ಆದರೆ, ಇವರ ಈ ಸಾವಿಗೆ ಯಾರಾದರೂ ಬೆದರಿಕೆ ಹಾಕಿರಬಹುದೇ ಎಂಬ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಬೆದರಿಕೆಗೆ ಹೆದರಿ ಹರ್ಷಿತ್ ಈ ನಿರ್ಧಾರ ಕೈಗೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಕುಟುಂಬದಲ್ಲಿ ಶೋಕದ ಛಾಯೆ: ಮೃತ ಯುವಕ ತಂದೆ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯೊಂದಿಗೆ ವಾಸವಾಗಿದ್ದರು. ಇಬ್ಬರು ಸಹೋದರಿಯರಿಗೆ ಈಗಾಗಲೇ ವಿವಾಹವಾಗಿದೆ. ಆಘಾತದ ಮೇಲೆ ಆಘಾತವೆಂಬಂತೆ, ಹರ್ಷಿತ್ ಅವರ ತಂದೆಯ ಸಹೋದರಿಯ ಪುತ್ರ ಕೂಡ ಹಲವಾರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇದೇ ಏಪ್ರಿಲ್ 23ರಂದು ಅವರ ತಂದೆಯ ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ ನಿಗದಿಯಾಗಿದ್ದು, ಈಗಾಗಲೇ ಗೊನೆ ಮುಹೂರ್ತವೂ ನೆರವೇರಿತ್ತು. ಶುಭ ಕಾರ್ಯದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಗನ ಸಾವು ಬರಸಿಡಿಲು ಬಡಿದಂತಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

Continue Reading

Article

ಪೆರುವಾಯಿ: ಅಂಗನವಾಡಿ ಮಕ್ಕಳಿಗೆ ಕಲುಷಿತ ನೀರು ಪೂರೈಕೆ, ಪಿಡಿಒ ವಿರುದ್ಧ ಗ್ರಾಮಸ್ಥರ ಆಕ್ರೋಶ

Published

on

ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ/ಗ್ರಾಮ ಪಂಚಾಯತ್ ಕಛೇರಿ/ಭಜನಾ ಮಂದಿರಕ್ಕೆ ಕಳೆದ 6 ತಿಂಗಳಿಂದ ಕಲುಷಿತ ಕುಡಿಯುವ ನೀರು ಪೂರೈಸುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಮಕ್ಕಳ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜು ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:
ಪೆರುವಾಯಿ ಅಂಗನವಾಡಿ, ಗ್ರಾಮ ಪಂಚಾಯತ್ ಕಛೇರಿ ಹಾಗೂ ಭಜನಾ ಮಂದಿರಕ್ಕೆ ಸರಬರಾಜಾಗುತ್ತಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಯಲ್ಲಿನ ನೀರಿನ ಮಾದರಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಿಲ್ಲಾ ಪಂಚಾಯತ್ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ, ಅದು ತೀವ್ರವಾಗಿ ಕಲುಷಿತಗೊಂಡಿದ್ದು ಕುಡಿಯಲು ಯೋಗ್ಯವಲ್ಲ ಎಂದು 29-10-2025 ರಂದು ಪೆರುವಾಯಿ ಗ್ರಾಮ ಪಂಚಾಯತ್‌ಗೆ ವರದಿ ನೀಡಲಾಗಿತ್ತು.

ಜೊತೆಗೆ ಆ ನೀರನ್ನು ಬಳಸದಂತೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿತ್ತು. ಆದರೂ ಆರು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ದಿನಾಂಕ 13-04-2026 ರಂದು ಪೆರುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮತ್ತೆ ನೀರಿನ ಮಾದರಿ ಪರೀಕ್ಷಿಸಿದಾಗಲೂ ಅದೇ ತೆರೆದ ಬಾವಿಯ ನೀರು ಕಲುಷಿತವಾಗಿದೆ ಎಂಬ ವರದಿ ಬಂದಿದೆ.

ಮಕ್ಕಳ/ಗ್ರಾಮಸ್ಥರ ಆರೋಗ್ಯಕ್ಕೆ ಗಂಡಾಂತರ:
ಕಲುಷಿತ ಎಂದು ಆರು ತಿಂಗಳಲ್ಲಿ ಎರಡು ಬಾರಿ ವರದಿ ಬಂದಿದ್ದರೂ ಇಂದಿಗೂ ಅದೇ ಕಲುಷಿತ ನೀರನ್ನು ಪೆರುವಾಯಿ ಅಂಗನವಾಡಿ ಕೇಂದ್ರಕ್ಕೆ ಹಾಗೂ ಗ್ರಾಮದ ವಿವಿಧ ಕಡೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಎಳೆಯ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ನಿರ್ಲಕ್ಷ್ಯ ಅತ್ಯಂತ ಗಂಭೀರ ಮತ್ತು ಖಂಡನೀಯ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಸ್ಥರ ಆಗ್ರಹ:
ಇಂತಹ ಬೇಜವಾಬ್ದಾರಿ ಮತ್ತು ಕರ್ತವ್ಯ ಲೋಪ ಎಸಗಿದ ಪಿಡಿಒ ದೀಪಕ್ ರಾಜು ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ತುರ್ತಾಗಿ ಶುದ್ಧ, ಸುರಕ್ಷಿತ ಹಾಗೂ ಆರೋಗ್ಯಕರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಮೇಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಮಕ್ಕಳ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Continue Reading

Bantawala

ಆಕಸ್ಮಿಕ ಬೆಂಕಿ.. ಹೊತ್ತಿ ಉರಿದ ಗುಡ್ಡ..

Published

on

ವಿಟ್ಲ: ಕಂಬಳಬೆಟ್ಟು ಜನಪ್ರಿಯ ವಿದ್ಯಾಸಂಸ್ಥೆ ಹಿಂಭಾಗದಲ್ಲಿರುವ ಗುಡ್ಡ ಆಕಸ್ಮಿಕ ಬೆಂಕಿ ದುರಂತದಿಂದಾಗಿ ಹೊತ್ತಿ ಉರಿಯುತ್ತಿದೆ. ಬದನಾಜೆ ಎಂಬಲ್ಲಿನ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಭಾರಿ ಪ್ರಮಾಣದಲ್ಲಿ ಗಿಡಮರಗಳು ಬೆಂಕಿಯ ಕೆನ್ನಾಲೆಗೆಗೆ ಭಸ್ಮವಾಗಿವೆ.

ವಿಟ್ಲ-ಪುತ್ತೂರು ಮುಖ್ಯ ರಸ್ತೆಗೆ ತಾಗಿಕೊಂಡಿರುವ ಬದನಾಜೆ ಎಂಬಲ್ಲಿನ ಗುಡ್ಡದಲ್ಲಿ ಸಂಜೆಯ ಹೊತ್ತಿಗೆ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ಜರೂ ಯಾರೊಬ್ಬರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ಕತ್ತಲಾಗುತ್ತಿದ್ದಂತೆ ಬೆಂಕಿ ಮತ್ತಷ್ಟು ಪಸರಿಸಿದ ಕಾರಣ ಭಾರಿ ಪ್ರಮಾಣದಲ್ಲಿ ಗಿಡ-ಮರಗಳು ಹೊತ್ತಿ ಉರಿದಿವೆ‌. ಆ ಬಳಿಕ ಅಪಾಯವನ್ನರಿತ ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರು ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!