Connect with us

Kasaragod

ಬಿಎಲ್‌ಒ ಮುಹಮ್ಮದ್ ಸವಾದ್ ಆತ್ಮಹತ್ಯೆ ಪ್ರಕರಣ; ಸಮಗ್ರ ತನಿಖೆಗೆ ಜಿಲ್ಲಾಧಿಕಾರಿ ಆದೇಶ

Published

on

ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಒಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಕುಂಬಳೆ ಸಮೀಪದ ಮೊಗ್ರಾಲ್‌ನಲ್ಲಿ ನಡೆದಿದೆ.

ಮೊಗ್ರಾಲ್ ನಿವಾಸಿ ಮುಹಮ್ಮದ್ ಸವಾದ್ (32) ಮೃತಪಟ್ಟ ದುರ್ದೈವಿ. ಇವರು ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಶನಿವಾರ ಬೆಳಿಗ್ಗೆಯಿಂದಲೇ ನಾಪತ್ತೆಯಾಗಿದ್ದ ಸವಾದ್‌ಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಈ ವೇಳೆ ಮೊಗ್ರಾಲ್ ಸೇತುವೆಯ ಮೇಲೆ ಅವರ ಬೈಕ್ ಪತ್ತೆಯಾಗಿತ್ತು. ಬಳಿಕ ಸ್ಥಳೀಯರು ಮತ್ತು ಕುಟುಂಬಸ್ಥರು ನದಿಯಲ್ಲಿ ಹುಡುಕಾಟ ನಡೆಸಿದಾಗ ಸವಾದ್ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಅತ್ಯಂತ ಕಡಿಮೆ ಕಾಲಾವಕಾಶದಲ್ಲಿ ಹೆಚ್ಚಿನ ಕೆಲಸಗಳನ್ನು ಪೂರ್ಣಗೊಳಿಸುವಂತೆ ಬಿಎಲ್‌ಒಗಳ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣದಲ್ಲಿ, ಘಟನೆಯ ಹಿಂದಿನ ದಿನವಷ್ಟೇ ಅವರಿಗೆ ಹೆಚ್ಚಿನ ಕೆಲಸದ ಜವಾಬ್ದಾರಿ ನೀಡಲಾಗಿದ್ದು, ಮರುದಿನ ಮಧ್ಯಾಹ್ನ 12 ಗಂಟೆಯೊಳಗೆ ಅದನ್ನು ಕಡ್ಡಾಯವಾಗಿ ಮುಗಿಸುವಂತೆ ಗಡುವು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಕೇವಲ ಕೇರಳ ಮಾತ್ರವಲ್ಲದೆ, ದೇಶದಾದ್ಯಂತ ಬಿಎಲ್‌ಒಗಳು ಇಂತಹ ಕಠಿಣ ಕೆಲಸದ ಒತ್ತಡವನ್ನು ಎದುರಿಸುತ್ತಿದ್ದಾರೆ. ಒಬ್ಬ ಶಿಕ್ಷಕರಾಗಿ ಅತಿಯಾದ ಮಾನಸಿಕ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೆ ಅವರು ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸೂಕ್ತ ಕಾಲಾವಕಾಶ ನೀಡಬೇಕು ಮತ್ತು ಮಾನವೀಯ ನೆಲೆಯಲ್ಲಿ ಅವರ ಶ್ರಮವನ್ನು ಪರಿಗಣಿಸಬೇಕು ಎಂಬ ಒತ್ತಾಯಗಳು ಈಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

DEATH

ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ

Published

on

ಕಾಸರಗೋಡು: ಕೃಷಿ ಜಾಗದ ಪೊದೆ ಕಾಡು ಕಡಿದು ಶುಚೀಕರಿಸುವಾಗ ಕಣಜದ ಹುಳುಗಳ ದಾಳಿಗೆ ಒಳಗಾಗಿ ಶಿಕ್ಷಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಬಳಾಂತೋಡು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನ್ ನಿವಾಸಿ ವಿಜಯನ್ ಮಾಸ್ತರ್ (56) ಮೃತಪಟ್ಟವರು.

ಘಟನೆ ವಿವರ
ಇಂದು ಬೆಳಿಗ್ಗೆ ವಿಜಯನ್ ಮಾಸ್ತರ್ ತಮ್ಮ ಭೂಮಿಯನ್ನು ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ಗುಂಪಾಗಿ ದಾಳಿ ನಡೆಸಿವೆ.

ಕಣಜದ ಹುಳುಗಳ ತೀವ್ರ ದಾಳಿಗೆ ಒಳಗಾದ ವಿಜಯನ್ ಮಾಸ್ತರ್‌ರನ್ನು ಕೂಡಲೇ ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಲ್ವರು ಕಾರ್ಮಿಕರಿಗೆ ಗಾಯ
ಇವರ ಜೊತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳು ಕಡಿತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.

ಈ ಅಧ್ಯಯನ ವರ್ಷವೇ ಸೇವಾ ನಿವೃತ್ತಿ ಪಡೆಯಲು ಸಿದ್ಧತೆಯಲ್ಲಿದ್ದ ವಿಜಯನ್ ಮಾಸ್ತರ್ ದಾರುಣವಾಗಿ ಮೃತಪಟ್ಟಿರುವುದು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.



Continue Reading

accident

ವೈದ್ಯ ಪವಾಡಸದೃಶ ಪಾರು; ಚಲಿಸುವ ಕಾರಿನ ಮೇಲೆ ಮರ ಬಿದ್ದು ಕಾರು ಸಂಪೂರ್ಣ ಜಖಂ

Published

on

ಪೆರ್ಲ: ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಮಣಿಯಂಪಾರೆಯಲ್ಲಿ ಚಲಿಸುವ ಕಾರಿನ ಮೇಲೆ ಮರ, ವಿದ್ಯುತ್ ಕಂಬ ಹಾಗೂ ತಂತಿ ಕುಸಿದು ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಸೀತಾಂಗೋಳಿಯ ವೈದ್ಯ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂದಲೆಳೆ ಅಂತರದಲ್ಲಿ ಜೀವದಾನ

ಸೀತಾಂಗೋಳಿಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಪೆರ್ಲ ನಿವಾಸಿ ಡಾ. ವಿಷ್ಣು ಪ್ರಸಾದ್ ಬರೆಕೆರೆ ಅವರೇ ಈ ಅಪಾಯದಿಂದ ಪಾರಾದವರು. ಇವರು ಯಕ್ಷಪ್ರೇಮಿ ಮತ್ತು ಯಕ್ಷ ಪ್ರೋತ್ಸಾಹಕರಾಗಿದ್ದಾರೆ. ಡಾ.ವಿಷ್ಣುಪ್ರಸಾದ್ ಬರೆಕೆರೆ ಕ್ಲಿನಿಕ್‌ನಿಂದ ಉಕ್ಕಿನಡ್ಕ ನೆಲ್ಲಿಕುಂಜದ ದೇವಸ್ಥಾನದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಭಾರಿ ಗಾಳಿಯ ಕಾರಣ ರಸ್ತೆ ಬದಿಯಲ್ಲಿದ್ದ ಮರವು ಹಠಾತ್ತನೆ ಕಾರಿನ ಮೇಲೆ ಉರುಳಿ ಬಿತ್ತು.

ವಿದ್ಯುತ್ ವ್ಯತ್ಯಯ ಮತ್ತು ಹಾನಿ

ಅಪಘಾತದ ತೀವ್ರತೆಗೆ ಕಾರು ಭಾರೀ ಪ್ರಮಾಣದಲ್ಲಿ ಅಪ್ಪಚ್ಚಿಯಾಗಿದೆ. ಕಾರಿನೊಳಗೆ ಸಿಲುಕಿಕೊಂಡಿದ್ದ ವೈದ್ಯರನ್ನು ಸ್ಥಳೀಯ ನಾಗರಿಕರು ಕೂಡಲೇ ಕಾರ್ಯಪ್ರವೃತ್ತರಾಗಿ ಹೊರತೆಗೆದು ರಕ್ಷಿಸಿದ್ದಾರೆ. ವೈದ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತ ತಪ್ಪಿದೆ.

ಮರ ಮತ್ತು ವಿದ್ಯುತ್ ಕಂಬ ಕುಸಿದ ಪರಿಣಾಮ ರಾತ್ರಿ ಸುದೀರ್ಘ ಕಾಲ ಪರಿಸರದ ವಿದ್ಯುತ್ ವಿತರಣೆ ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಬದಿಯ ಶಿಥಿಲ ಮರಗಳು ಹಾಗೂ ವಿದ್ಯುತ್ ಕಂಬಗಳ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.




Continue Reading

DEATH

ಸಾವಿನಲ್ಲೂ ಒಂದಾದ ಪ್ರೇಮಿಗಳು: ಭಾವಿ ಪತಿಯ ಸಮಾಧಿ ಪಕ್ಕದಲ್ಲೇ ಯುವತಿಯ ಅಂತ್ಯಸಂಸ್ಕಾರ!

Published

on

ಮಂಜೇಶ್ವರ/ಕಾಸರಗೋಡು: ಪ್ರೀತಿ ಎನ್ನುವುದು ಕೇವಲ ಬದುಕಿದ್ದಾಗ ಮಾತ್ರವಲ್ಲ, ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಕರುಣಾಜನಕ ಘಟನೆ ಸಾಕ್ಷಿಯಾಗಿದೆ. ವಿಧಿಯ ಆಟಕ್ಕೆ ಸೋತ ಪ್ರೇಮಿಗಳಿಬ್ಬರು ಕೊನೆಗೂ ಸಾವಿನ ಮಡಿಲಲ್ಲಿ ಒಂದಾಗಿದ್ದಾರೆ.

ಘಟನೆಯ ಹಿನ್ನೆಲೆ:

ಮಂಜೇಶ್ವರದ ಕಿದೂರು ಕುಂಟಂಗೇರಡ್ಕ ನಿವಾಸಿ ಪ್ರಫುಲ್ಲಾ (26) ಮತ್ತು ತಮಿಳುನಾಡು ಮೂಲದ ಬ್ಯಾಂಕ್ ಉದ್ಯೋಗಿ ಮಣಿ ಅವರ ವಿವಾಹ ನಿಶ್ಚಯವಾಗಿತ್ತು. ಸುಮಾರು ನಾಲ್ಕು ತಿಂಗಳ ಹಿಂದೆ ಇವರ ನಿಶ್ಚಿತಾರ್ಥವು ಅತ್ಯಂತ ಅದ್ಧೂರಿಯಾಗಿ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ವಿಧಿ ಬೇರೆಯದೇ ಆಟವಾಡಿದ್ದ. ಸುಮಾರು ಒಂದು ತಿಂಗಳ ಹಿಂದೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮಣಿ ಸಾವನ್ನಪ್ಪಿದ್ದರು. ತನ್ನ ಭಾವಿ ಪತಿಯ ಅಗಲಿಕೆಯನ್ನು ತಾಳಲಾರದ ಪ್ರಫುಲ್ಲಾ ತೀವ್ರ ಖಿನ್ನತೆಗೊಳಗಾಗಿದ್ದರು.

ಡೆತ್‌ನೋಟ್‌ನಲ್ಲಿತ್ತು ಕೊನೆಯ ಆಸೆ:

ಮಣಿಯ ಅಗಲಿಕೆಯಿಂದ ನೊಂದಿದ್ದ ಪ್ರಫುಲ್ಲಾ, ಕಳೆದ ಭಾನುವಾರ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್‌ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ. “ನನ್ನನ್ನು ಮಣಿಯ ಸಮಾಧಿಯ ಪಕ್ಕದಲ್ಲೇ ಹೂಳಬೇಕು” ಎಂಬುದು ಆಕೆಯ ಕೊನೆಯ ಆಸೆಯಾಗಿತ್ತು.

ಸಾವಿನಲ್ಲೂ ಒಂದಾದ ಜೋಡಿ:

ಮಗಳ ಅಂತಿಮ ಬಯಕೆಯನ್ನು ಗೌರವಿಸಿದ ತಂದೆ ಜಯಾನಂದ್ ಮತ್ತು ಕುಟುಂಬಸ್ಥರು, ಮಣಿಯ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ಅವರ ಒಪ್ಪಿಗೆಯ ಮೇರೆಗೆ ಪ್ರಫುಲ್ಲಾ ಅವರ ಮೃತದೇಹವನ್ನು ಕಾಸರಗೋಡಿನಿಂದ ಸುಮಾರು ನೂರಾರು ಕಿಲೋಮೀಟರ್ ದೂರದಲ್ಲಿರುವ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಅಲ್ಲಿನ ಸ್ಮಶಾನದಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲಾ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ಸದಸ್ಯರು ಉಪಸ್ಥಿತರಿದ್ದು, ಕಂಬನಿಯ ವಿದಾಯ ಹೇಳಿದರು.

ಹೂವಿನಿಂದ ಅಲಂಕರಿಸಲ್ಪಟ್ಟ ಪಕ್ಕದ ಎರಡು ಸಮಾಧಿಗಳು ಈ ಪ್ರೇಮಕಥೆಯ ದುರಂತ ಅಂತ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಪ್ರಸ್ತುತ ಈ ಘಟನೆಯ ವೀಡಿಯೊ ಮತ್ತು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.

Continue Reading

Trending

Copyright © 2025 Deevatige

error: Content is protected !!