Connect with us

national

ಎಸ್‌ಐಆರ್ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ನಡೆಸಲಾಗುತ್ತಿರುವ ದೊಡ್ಡ ‘ಹಗರಣ’- ಮಮತಾ ಬ್ಯಾನರ್ಜಿ

Published

on

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮತದಾರರ ಪಟ್ಟಿಯಿಂದ ನೈಜ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ಕುರಿತು ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುತ್ತಿರುವುದು ಒಂದು “ದೊಡ್ಡ ಹಗರಣ” ಎಂದು ಅವರು ಬಣ್ಣಿಸಿದ್ದಾರೆ. ಒಂದು ವೇಳೆ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟರೆ, ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ (ಘೇರಾವ್) ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರದ ಇಶಾರೆಯಂತೆ ಬಿಜೆಪಿ ಪರವಾಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಮತ್ತು ವಿರೋಧ ಪಕ್ಷದ ಬೆಂಬಲಿಗರ ಹೆಸರುಗಳನ್ನು ಗುರಿಯಾಗಿಸಿಕೊಂಡು ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿಯೊಬ್ಬ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಯಾವುದೇ ಲೋಪದೋಷಗಳಿದ್ದರೆ ತಕ್ಷಣವೇ ದೂರು ನೀಡಬೇಕು ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.


ಬಂಕುರಾ ಜಿಲ್ಲೆಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿದ್ದು, ಎಸ್‌ಐಆರ್ ಕೃತಕ ಬುದ್ಧಿಮತ್ತೆ (ಎಐ) ಸಹಾಯದಿಂದ ನಡೆಸಲಾಗುತ್ತಿರುವ ದೊಡ್ಡ ‘ಹಗರಣ’ ಎಂದಿದ್ದು, “ಒಬ್ಬನೇ ಒಬ್ಬ ಕಾನೂನುಬದ್ಧ ಮತದಾರರ ಹೆಸರನ್ನು ಅಳಿಸಿದರೂ, ಟಿಎಂಸಿ ದೆಹಲಿಯ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕುತ್ತದೆ” ಎಂದು ಎಚ್ಚರಿಕ ನೀಡಿದ್ದಾರೆ.


ಟಿಎಂಸಿ ಸರ್ಕಾರದ ಅಡಿಯಲ್ಲಿ ಬಂಗಾಳ ಭಯೋತ್ಪಾದಕರ ಕೇಂದ್ರವಾಗಿದೆ ಎಂಬ ಅಮಿತ್ ಶಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, “ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೇ ಇಲ್ಲದಿದ್ದರೆ, ಪಹಲ್ಗಾಮ್ ದಾಳಿ ಹೇಗೆ ಸಂಭವಿಸಿತು? ಪಹಲ್ಗಾಮ್‌ನಲ್ಲಿ ನೀವು ದಾಳಿ ನಡೆಸಿದ್ದಾ? ದೆಹಲಿಯಲ್ಲಿ ನಡೆದ ಘಟನೆಯ ಹಿಂದೆ ಯಾರಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.


ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದೆ ಎಂಬುದು ಟಿಎಂಸಿ ಪಕ್ಷದ ಆತಂಕವಾಗಿದೆ. “ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ, ಜನರ ಮತದಾನದ ಹಕ್ಕಿಗಾಗಿ ಹೋರಾಡುತ್ತೇವೆ” ಎಂದು ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.

Continue Reading
Advertisement

F.I.R.

ಬುರ್ಖಾ ಧರಿಸಿ ಲೇಡೀಸ್ ಕೋಚ್‌ನಲ್ಲಿ ಯುವಕನ ಪಯಣ : ಮಹಿಳೆಯರಿಗೆ ಗೊತ್ತಾದಾಗ ಏನು ಮಾಡಿದರು ?

Published

on

ಮುಂಬೈ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ಪುರುಷನೊಬ್ಬನನ್ನು ಮಹಿಳಾ ಪ್ರಯಾಣಿಕರು ಪತ್ತೆಹಚ್ಚಿದ್ದಾರೆ. ಮಹಿಳೆಯರು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸುವ ಬೆದರಿಕೆ ಹಾಕಿದಾಗ, ಆತ ಚಲಿಸುವ ರೈಲಿನಿಂದ ಜಿಗಿದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಾಗಿದೆ.


ಮುಂಬೈ ಲೋಕಲ್ ರೈಲಿನ ಲೇಡಿಸ್‌ ಕೋಚ್‌ನಲ್ಲಿ ಬುರ್ಖಾ ಧರಿಸಿ ಪುರುಷನೋರ್ವ ಪ್ರಯಾಣಿಸಿದ ಘಟನೆ ನಡೆದಿದೆ ಈ ಸಂಬಂಧ ರೈಲ್ವೆ ರಕ್ಷಣಾ ಪಡೆ, ಆರ್‌ಪಿಎಫ್ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದು ಸಂಕಿತನಿಗಾಗಿ ಹುಡುಕಾಟ ಮುಂದುವರಿಸಿದೆ ಶುಕ್ರವಾರ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್ ಸಿ ಎಸ್ ಎಮ್ ಟಿ ಕಡೆಗೆ ತೆರಳುತ್ತಿದ್ದ ಲೋಕಲ್ ರೈಲಿನ ಲೇಡೀಸ್ ಭೋಗಿಯಲ್ಲಿ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ಮಹಿಳೆಯಂತೆ ಕಾಣಿಸಿಕೊಂಡಿದ್ದ ಆತನ ದೇಹ ಭಾಷೆ ಮತ್ತು ಚಲನವಲನ ಮಹಿಳೆಯಂತೆ ಇರಲಿಲ್ಲ ಎಂಬ ಕಾರಣದಿಂದ ಕೆಲವು ಮಹಿಳೆಯರು ಆತನನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಪ್ರಶ್ನಿಸಿದ ವೇಳೆ ಬುರ್ಖಾಧಾರಿಯು ಮಹಿಳೆ ಅಲ್ಲ ಪುರುಷ ಎಂಬುದು ಸ್ಪಷ್ಟವಾಗಿದ್ದು, ಇದರಿಂದ ಮಹಿಳಾ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ರೈಲ್ವೆ ರಕ್ಷಣಾ ದಳ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ.

ಅಧಿಕಾರಿಗಳ ಪ್ರಕಾರ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್‌(CSMT)ಗೆ ಹೋಗುತ್ತಿದ್ದ ಲೋಕಲ್ ರೈಲಿನ ಲೇಡೀಸ್ ಬೋಗಿಯಲ್ಲಿ ಪುರುಷನೋರ್ವ ಬುರ್ಖಾ ಧರಿಸಿ ಪಯಣಿಸುತ್ತಿದ್ದಾನೆ ಎಂಬ ಅನುಮಾನ ಆ ಬೋಗಿಯಲ್ಲಿದ್ದ ಇತರ ಮಹಿಳಾ ಪ್ರಯಾಣಿಕರಿಗೆ ಬಂದಿದೆ. ಅವರು ಆತನನ್ನು ಪ್ರಶ್ನಿಸಲು ಮುಂದಾದಾಗ ಆತ ಪುರುಷ ಎಂಬುದು ತಿಳಿದು ಬಂದಿದೆ. ಮಹಿಳೆಯರು ಆತನನ್ನು ಲೇಡೀಸ್ ಬೋಗಿಯಲ್ಲಿ ಬುರ್ಖಾ ಧರಿಸಿ ಬಂದಿದ್ದಕ್ಕೆ ಪ್ರಶ್ನಿಸಿದ್ದಲ್ಲದೇ ಆ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಮುಂಬರುವ ಘಾಟ್‌ಕೋಪರ್ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದಾರೆ

ಮಹಿಳೆಯರು ಮುಂದಿನ ಘಾಟ್ ಕೋಪರ್ ನಿಲ್ದಾಣದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದರಿಂದ ಭಯಗೊಂಡ ಶಂಕಿತ ವ್ಯಕ್ತಿ ರೈಲು ನಿಲ್ದಾಣಕ್ಕೆ ತಲುಪುವ ಮುನ್ನ ರೈಲಿನಿಂದ ಜಿಗಿದಿದ್ದಾನೆ. ಚಲಿಸುತ್ತಿದ್ದ ರೈಲಿನಿಂದಲೇ ಹಾರಿ ಕೆಳಗೆ ಬಿದ್ದ ಆತ ರೈಲು ಹಳಿಗಳ ಮೇಲೆ ಓಡಿ ತಪ್ಪಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ಪಡೆದ ತಕ್ಷಣವೇ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದ್ದು, ವಿವಿಧ ನಿಲ್ದಾಣಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಮುಲುಂಡ್ ನಿಲ್ದಾಣದಲ್ಲಿ ಕರ್ಜತ್ ಲೋಕಲ್ ರೈಲನ್ನು ತಪಾಸಣೆ ನಡೆಸಿದರೂ, ಶಂಕಿತ ವ್ಯಕ್ತಿ ಆಗಲೇ ರೈಲಿನಿಂದ ಇಳಿದು ಪರಾರಿಯಾಗಿದ್ದರಿಂದ ಪೊಲೀಸರು ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಇದಾದ ಬಳಿಕ ಆತ ಕರ್ಜತ್‌ನಿಂದ ಬರುತ್ತಿದ್ದ ಮತ್ತೊಂದು ಲೋಕಲ್ ರೈಲಿಗೆ ಪ್ಲಾಟ್‌ಫಾರ್ಮ್ ಬದಲಿಸಿ ಹತ್ತಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣ ಮಹಿಳಾ ಪ್ರಯಾಣಿಕರು ಘಟ್ಕೊಪರ್ ನಿಲ್ದಾಣದಲ್ಲಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣವೇ ರೈಲ್ವೆ ರಕ್ಷಣಾ ಪಡೆ ತನಿಖೆ ಆರಂಭಿಸಿದ್ದು, ಮಹಿಳಾ ಕೋಚ್‌ನಲ್ಲಿ ಅನಧಿಕೃತವಾಗಿ ಪ್ರವೇಶಿಸಿ ಪ್ರಯಾಣಿಸಿದ್ದ ಆರೋಪದಡಿ ಭಾರತೀಯ ರೈಲ್ವೆ ಕಾಯ್ದೆಯ ಪ್ರಕಾರ ಆರ್‌ಪಿಎಫ್ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಶಂಕಿತನ ಗುರುತು ಪತ್ತೆಹಚ್ಚಲು ವೈರಲ್ ವೀಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

Continue Reading

court

ಬೇಡವಾದ ಗರ್ಭವನ್ನು ತೆಗೆಸಿಕೊಳ್ಳುವುದು ಮಹಿಳೆಯ ವೈಯಕ್ತಿಕ ಹಕ್ಕು – ಸುಪ್ರೀಂಕೋರ್ಟ್

Published

on

ನವದೆಹಲಿ: ಮಗುವನ್ನು ಹೆರಲು ಇಷ್ಟವಿಲ್ಲದ ಮಹಿಳೆಯನ್ನು, ಅದರಲ್ಲೂ ವಿಶೇಷವಾಗಿ ಅಪ್ರಾಪ್ತ ಬಾಲಕಿಯನ್ನು ಗರ್ಭ ಮುಂದುವರಿಸುವಂತೆ ಒತ್ತಾಯಿಸುವ ಅಧಿಕಾರ ನ್ಯಾಯಾಲಯಗಳಿಗಿಲ್ಲ, ಗರ್ಭ ಧರಿಸುವುದು ಅಥವಾ ಬೇಡವಾದ ಗರ್ಭವನ್ನು ತೆಗೆಸಿಕೊಳ್ಳುವುದು ಮಹಿಳೆಯ ಸಂಪೂರ್ಣ ವೈಯಕ್ತಿಕ ಹಕ್ಕು ಎಂದು ಸುಪ್ರೀಂಕೋರ್ಟ್ ದೃಢವಾಗಿ ಹೇಳಿದೆ. ಈ ಮೂಲಕ 30 ವಾರಗಳ ಗರ್ಭಿಣಿಯಾಗಿದ್ದ 17 ವರ್ಷದ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿದೆ.

ಮಹಾರಾಷ್ಟ್ರದ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನೆರೆಮನೆಯ ಹುಡುಗನೊಂದಿಗಿನ ಸಂಬಂಧದಿಂದ ಗರ್ಭಿಣಿಯಾಗಿದ್ದಳು. ತಾನು ಮಗುವಿಗೆ ಜನ್ಮ ನೀಡಲು ಸಿದ್ಧವಿಲ್ಲ ಎಂದು ಆಕೆ ಗರ್ಭಪಾತಕ್ಕೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಳು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರ ಪೀಠವು ಬಾಲಕಿಯ ಪರವಾಗಿ ತೀರ್ಪು ನೀಡಿದೆ.

ಗರ್ಭಧಾರಣೆಯನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಹಕ್ಕು ಆ ತಾಯಿಗೆ ಸೇರಿದ್ದು. ಇಲ್ಲಿ ಸಂಬಂಧವು ಪರಸ್ಪರ ಒಪ್ಪಿಗೆಯಿಂದ ನಡೆದಿದೆಯೇ ಅಥವಾ ಲೈಂಗಿಕ ದೌರ್ಜನ್ಯದಿಂದ ನಡೆದಿದೆಯೇ ಎನ್ನುವುದಕ್ಕಿಂತ, ಆಕೆಯ ಸಂತಾನೋತ್ಪತ್ತಿ ಸ್ವಾಯತ್ತತೆ (Reproductive Autonomy) ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮುಂಬೈನ ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ತನ್ನ ವರದಿಯಲ್ಲಿ, ಗರ್ಭಧಾರಣೆ ಮುಂದುವರಿದರೆ ತಾಯಿ ಅಥವಾ ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಹೇಳಿತ್ತು. ಆದರೆ, ನ್ಯಾಯಾಲಯವು ವೈದ್ಯಕೀಯ ಅಂಶಗಳಿಗಿಂತ ಬಾಲಕಿಯ ಮಾನಸಿಕ ಸಿದ್ಧತೆ ಮತ್ತು ಘನತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿತು. ಒಂದು ವೇಳೆ ಕಾನೂನುಬದ್ಧವಾಗಿ ಸುರಕ್ಷಿತ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ, ಜನರು ಅಸುರಕ್ಷಿತ ಮತ್ತು ಅನಧಿಕೃತ ಹಾದಿ ತುಳಿಯಬಹುದು, ಇದು ಬಾಲಕಿಯ ಪ್ರಾಣಕ್ಕೆ ಸಂಚಕಾರ ತರಬಹುದು ಎಂದು ನ್ಯಾಯಮೂರ್ತಿ ನಾಗರತ್ನ ಅವರು ಆತಂಕ ವ್ಯಕ್ತಪಡಿಸಿದರು.

ಭಾರತದ ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ 2021ರ ಪ್ರಕಾರ, ಸಾಮಾನ್ಯ ಸಂದರ್ಭದಲ್ಲಿ 20 ವಾರಗಳವರೆಗೆ ಮತ್ತು ವಿಶೇಷ ಸಂದರ್ಭಗಳಲ್ಲಿ (ಅಪ್ರಾಪ್ತರು ಅಥವಾ ಸಂತ್ರಸ್ತರು) 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿದೆ. ಆದರೆ, ಈ ಪ್ರಕರಣದಲ್ಲಿ ಗರ್ಭಧಾರಣೆಯು 30 ವಾರಗಳಾಗಿದ್ದರೂ, ಬಾಲಕಿಯ ಭವಿಷ್ಯ ಮತ್ತು ಆಕೆಯ ಇಚ್ಛೆಯನ್ನು ಗೌರವಿಸಿ ಸುಪ್ರೀಂಕೋರ್ಟ್ ವಿಶೇಷಾಧಿಕಾರ ಬಳಸಿ ಅನುಮತಿ ನೀಡಿದೆ. ಮುಂಬೈನ ಜೆಜೆ ಆಸ್ಪತ್ರೆಗೆ ಕೂಡಲೇ ವೈದ್ಯಕೀಯ ಸುರಕ್ಷತಾ ಕ್ರಮಗಳೊಂದಿಗೆ ಗರ್ಭಪಾತ ಪ್ರಕ್ರಿಯೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ

Continue Reading

crime

ಡ್ರಗ್ಸ್ ಪ್ರಕರಣದಲ್ಲಿ ತಮಿಳು ಚಿತ್ರರಂಗದ ಮಾದಕ ನಟಿ ಅಂಜು ಕೃಷ್ಣ ಅಂದರ್ ; ಚಿತ್ರರಂಗದ ಸಹಾಯಕ ನಿರ್ದೇಶಕಿ ಸಹಿತ ಎಂಟು ಜನ ಪೊಲೀಸ್‌ ಬಲೆಗೆ ; ತಮಿಳುನಾಡು ಮಾದಕ ವಸ್ತು ನಿಯಂತ್ರಣ ವಿಭಾಗದ ಬಲೆಗೆ ಬಿದ್ದ ನಶೆಕೋರರು..

Published

on

ತಮಿಳು ಚಿತ್ರರಂಗದ ಮಾದಕ ನಟಿ ಅಂಜು ಕೃಷ್, ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸಹಿತ ಒಟ್ಟು 8 ಮಂದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಚೆನ್ನೈ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.

ಮಾದಕ ವಸ್ತು ನಿಯಂತ್ರಣ ವಿಭಾಗದ ಪೊಲೀಸ್ ತಂಡ ವಲಸರವಕ್ಕಂ ಎಂಬಲ್ಲಿ ವಿಘ್ನೇಶ್ವರನ್(33)ಎಂಬಾತನನ್ನು ಬಂಧಿಸಿದ್ದರು. ಆತನನ್ನು ತೀವ್ರ ವಿಚಾರಣೆ ಮಾಡಿದಾಗ ವೆಂಕಟೇಶ್ ಎಂಬಾತನಿಂದ ಮಾದಕ ವಸ್ತುಗಳನ್ನು ಖರೀದಿ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

ತಕ್ಷಣವೇ ಎಚ್ಚೆತ್ತ ಪೊಲೀಸರು ವೆಂಕಟೇಶ್ ಎಂಬಾತನ ಬಳಿ ಗ್ರಾಹಕನ ವೇಷದಲ್ಲಿ ಭೇಟಿಯಾಗಿ ಡ್ರಗ್ಸ್ ಖರೀದಿಗೆ ಮುಂದಾಗಿ ನಿಗದಿತ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆ ವ್ಯಕ್ತಿ ಡ್ರಗ್ಸ್ ಜೊತೆ ಬಂದಾಗ ಆತನನ್ನು ಬಂಧಿಸಿ, ಆತನಿಂದ ಆರು ಗ್ರಾಂ ಮೆಥಾಫೆಟಮೈನ್, ಏಳು ಗ್ರಾಂ ಓಜಿ ಗಾಂಜಾ, ಹದಿನೈದು ಗ್ರಾಂ ಗಾಂಜಾ, ಸ್ಮೋಕಿಂಗ್ ಬಾಂಗ್, ಸ್ಟ್ಯಾಂಪ್ ಮತ್ತು ಒಂಬತ್ತು ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಆ ಬಳಿಕ ಬಂಧಿತ ಆರೋಪಿಗಳು ವಿಚಾರಣೆ ಸಂದರ್ಭ ನೀಡಿದ ಖಚಿತ ಮಾಹಿತಿಯಂತೆ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಈ ಎಂಟು ಮಂದಿ ಡ್ರಗ್ಸ್ ಸಮೇತ ಸಿಕ್ಕಿಬಿದ್ದಿದ್ದಾರೆ. ನಟಿ ಅಂಜು ಕೃಷ್ಣ, ಮಲಯಾಳಂ ನಟ ಜೋಜು ನಾಯಕರಾಗಿದ್ದ ‘ಆರೋ’ ಸಿನಿಮಾದಲ್ಲಿ ನಟಿಸಿದ್ದರು.

ನಟಿ ಅಂಜು ಕೃಷ್ಣ ಮತ್ತು ಕೆಲವು ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ವಿನ್ಸಿ ನಿವೇತಾ, ಕಾರ್ತಿಕ್ ರಾಜ, ಯಶವಂತ್, ಶ್ರೀರಾಮ್ ಮತ್ತು ಅಲ್ವಿಬಿನ್ಶಾ ಎಂಬವರನ್ನು ತಮಿಳುನಾಡು ಪೊಲೀಸ್ ಇಲಾಖೆಯ ಮಾದಕ ವಸ್ತು ನಿಯಂತ್ರಣ ವಿಭಾಗದ ತಂಡ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಿಷೇಧಿತ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಾನಿ ಚೆಲ್ಲಪ್ಪ ಹೆಸರಿನ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ನಡೆದ ಆಪರೇಷನ್ನಲ್ಲಿ ನಟಿ ಸೇರಿದಂತೆ ಇತರರ ಬಂಧನವಾಗಿದೆ.

Continue Reading

Trending

Copyright © 2025 Deevatige