Connect with us

Article

ಕಟುಕರ ಕೈಸೇರಿ ಬಚಾವಾದ ಹಾಲು ಕೊಡುವ ಹಸುಗಳು..ವಿಟ್ಲ ಪೊಲೀಸರ ಸಹಕಾರದಲ್ಲಿ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರು ಜನ್ಮ ಪಡೆದ ಗೋವುಗಳು.

Published

on

ಕರಾವಳಿಯಲ್ಲಂತೂ ಅಕ್ರಮ ಗೋಸಾಗಾಟ ರಾಜಕೀಯ ಬೆಳವಣಿಗೆಗೆ ಪೌಷ್ಟಿಕಾಂಶವೆಂದೇ ಹೇಳಬೇಕು. ಅಕ್ರಮ ದನ ಸಾಗಾಟವನ್ನು ತಡೆಹಿಡಿದು ಕಾನೂನಾತ್ಮಕವಾಗಿ ಅಕ್ರಮ ಸಾಗಾಟಗಾರನ್ನು ಪೊಲೀಸರಿಗೊಪ್ಪಿಸುವ ಮಂದಿ ಕೆಲವರಾದರೆ, ಅಕ್ರಮ ಗೋಸಾಗಾಟವನ್ನು ತಡೆಹಿಡಿದು ಸಾಗಾಟಗಾರರೊಡನೆ ಡೀಲು ಕುದುರಿಸಿ ಹಣ ಪಡೆದು ಗೋವು ಸಾಗಾಟಕ್ಕೆ ದಾರಿ ಮಾಡಿಕೊಡುವ ಗೋಪ್ರೇಮಿಗಳು ಕತ್ತಲಿನಲ್ಲಿ ಅಗಾಗ ಸಿಕ್ಕಿ ಬೀಳುತ್ತಲೇ ಇರುತ್ತಾರೆ. ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಯಾವಾಗ ಪೊಲೀಸರ ವಶಕ್ಕೆ ಸಿಕ್ಕಿತೋ ಈ ಗೋವುಗಳನ್ನು ಏನು ಮಾಡುವುದು ಎಂಬಲ್ಲಿಗೆ ಪೊಲೀಸರು ತಲೆಕೆರೆದು ಕೊಂಡಾಗ ಗೋಪ್ರೇಮಿಗಳ ಫೋನುಗಳು ಪೊಲೀಸರ ಕಿವಿ ತಟ್ಟುತ್ತದೆ. ನಮಗೆ ಗೋವುಗಳನ್ನು ಕೊಡಿ ನಾವು ಮನೆಯಲ್ಲಿ ಆರಾಮವಾಗಿ ಸಾಕುತ್ತೇವೆ ಎಂದು..ಮತ್ತೆ ಅದು ಹೋಗುವುದು ಕಟುಕರ ಕೈಗೆ ಎಂಬುವುದು ಪೊಲೀಸರಿಗೂ ಗೊತ್ತು.! ಅದಕ್ಕಾಗಿ ಅಧಿಕೃತ ಗೋಶಾಲೆಗಳ ಕದ ಬಡಿಯುವುದು ಪೊಲೀಸರ ಸಾಹಸವೇ ಸರಿ. ಚುನಾವಣಾ ಸಂದರ್ಭದಲ್ಲಿ ಗೋ ರಕ್ಷಣೆಯ ಹೆಸರಲ್ಲಿ ಮತ ಬೇಡುವ ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಗ್ರಾಮಕ್ಕೊಂದು ಗೋಶಾಲೆ ನಿರ್ಮಾಣ ಮಾಡುವ ವಾಗ್ದಾನ ನೀಡಿತ್ತು. ಆದರೆ ಅಧಿಕಾರ ದಕ್ಕಿದ ಹನ್ನೆರಡು ವರ್ಷಗಳಲ್ಲಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆ ಕಸದ ತೊಟ್ಟಿ ಸೇರಿಕೊಂಡಿದೆ. ಗೋವುಗಳು ಭಕ್ಷಕರ ಹೊಟ್ಟೆ ಸೇರಲು ದಾರಿ ಸುಗಮವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಂಡ್ಯ ಮೂಲದ ಹಿಂದೂ ಯುವಕರಿಬ್ಬರು ಸಾಲೆತ್ತೂರಿನ ಶಾಫಿ ಎಂಬಾತನಿಗೆ ನಕಲಿ ದಾಖಲೆ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಗೋವುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಗೋಸಾಗಾಟ ತಡೆಯಲು ಸಂಘಟನೆಗಳ ಕಾರ್ಯಕರ್ತರು ರೆಡಿಯಾಗಿದ್ದಾರೆಯೇ ವಿನಹ ಆ ಬಳಿಕ ಗೋವುಗಳಿಗೆ ಯಾರು ಗತಿ ಎಂಬುದನ್ನು ಈವರೆಗೂ ಯಾವುದೇ ಸಂಘಟನೆಗಳಾಗಲೀ.. ಗೋರಕ್ಷಣೆ ಬಗ್ಗೆ ವೇದಿಕೆಯಲ್ಲಿ ಮೈಕ್ ಹಿಡಿದು ಬೊಬ್ಬೆ ಹೊಡೆಯುವ ರಾಜಕೀಯ ಪಕ್ಷದ ಮುಖಂಡರಾಗಲೀ ಯೋಚಿಸುತ್ತೂ ಇಲ್ಲ..ಸಹಕಾರ ನೀಡುತ್ತಲೂ ಇಲ್ಲ ಎಂಬುದು ನೂರರಷ್ಟು ಸತ್ಯ.

ನೋಡಲಾಗುತ್ತಿಲ್ಲ ಮೂಕ ಪ್ರಾಣಿಗಳ ವೇದನೆ.
ಮೂರು ದಿನಗಳ ಹಿಂದೆ ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಪತ್ತೆ ಹಚ್ಚಿದ ಗೋವುಗಳ ಪರಿಸ್ಥಿತಿಯೂ ಇದೇ ಆಗಿದೆ. ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಎರಡು ಗೋವುಗಳು ಸಾಕಷ್ಟು ಪ್ರಮಾಣದಲ್ಲಿ ದೈಹಿಕವಾಗಿ ಗಾಯಗೊಂಡಿತ್ತು‌. ಪೊಲೀಸರು ವಶಕ್ಕೆ ಪಡೆದ ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಲು ಸಾಕಷ್ಟು ಸಮಯಾವಕಾಶ ಬೇಕಾಗುತ್ತಿದೆ.
ರಸ್ತೆಯಲ್ಲಿ ತಡೆಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಬಳಿಕ ಗೋಪ್ರೇಮಿ ಕಾರ್ಯಕರ್ತರ ಜವಾಬ್ದಾರಿ ಮುಗಿಯಿತೇ.? ಗೋವುಗಳಿಗೆ ನೀರು, ಆಹಾರ ನೀಡುವುದು ಪೊಲೀಸರ ಜವಾಬ್ದಾರಿಯೇ.? ಪೊಲೀಸ್ ಠಾಣೆಗಳಲ್ಲಿ ಹುಲ್ಲು, ಹಿಂಡಿ ಸೇರಿದಂತೆ ಇನ್ನಿತರ ಪಶುಗಳ ಆಹಾರ ದಾಸ್ತಾನು ಇದೆಯೇ.? ಕಾನೂನು ಪ್ರಕ್ರಿಯೆ ಮುಗಿಯುವ ತನಕ ಗೋವುಗಳನ್ನು ಕಟ್ಟಿಹಾಕಲು ಪೊಲೀಸ್ ಠಾಣೆಯಲ್ಲಿ ಹಟ್ಟಿ ವ್ಯವಸ್ಥೆ ಇದೆಯೇ.? ಇದೆಲ್ಲವನ್ನೂ ಮಾಡಬೇಕಾದವರು ಯಾರು ಎಂಬ ಬಗ್ಗೆ ಈವರೆಗೂ ಯಾರೊಬ್ಬರೂ ಚಿಂತಿಸದಿರುವುದು ಗೋಪ್ರೇಮಿಗಳ ನಕಲಿ ಹಿಂದುತ್ವ ಎಂಬುದನ್ನು ಬಿಡಿಸಿ ಹೇಳಬೇಕೇ.?

ಗೋವುಗಳ ಪಡೆಯಲು ಗೋಶಾಲೆಗಳ ನಕಾರ..
ಪೊಲೀಸರು ವಶಕ್ಕೆ ಪಡೆದ ಗೋವುಗಳನ್ನು ಪಡೆಯಲು ಯಾವುದೇ ಖಾಸಗಿ ಗೋಶಾಲೆಗಳ ವ್ಯವಸ್ಥಾಪಕರು ಮುಂದೆ ಬರುತ್ತಿಲ್ಲ. ಗೋಶಾಲೆಗಳಿಗೆ ಯಾವುದೇ ಸರಕಾರ ಈವರೆಗೂ ಪುಡಿಗಾಸೂ ನೀಡುತ್ತಿಲ್ಲ. ಗೋಶಾಲೆ ನಡೆಸುವವರೂ ಅವುಗಳ ಪಾಲನೆ ಮಾಡಲು ಅನಿವಾರ್ಯವಾಗಿ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದ್ದಾರೆ. ಅಕ್ರಮ ಗೋಸಾಗಾಟ ತಡೆಯುವ ಸಂಘಟನೆಗಳು, ಗೋಪ್ರೇಮಿ ರಾಜಕೀಯ ಪುಢಾರಿಗಳು ತಮ್ಮ ತಮ್ಮ ವ್ಯಾಪ್ತಿಯ ಗೋಶಾಲೆಗಳ ಬಗ್ಗೆ ಸ್ಪಂದಿಸುವುದು ಬಿಡಿ ಅತ್ತ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬುದು ನೂರರಷ್ಟು ಸತ್ಯ. ಪ್ರತಿಯೊಂದು ಗೋಶಾಲೆಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಗೋವುಗಳು ತುಂಬಿಹೋಗಿದ್ದು ಅವುಗಳ ಪಾಲನೆಗಾಗಿ ಪ್ರತಿನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಸಹಕಾರ ನೀಡುತ್ತಿಲ್ಲ ಎಂಬುದೇ ಗೋಶಾಲೆಗಳು ಗೋವುಗಳ ಪಡೆಯಲು ನಿರಾಕರಿಸಲು ಮುಖ್ಯ ಕಾರಣವಾಗಿದೆ.

ಗ್ರಾಮ ಪಂ, ಪ.ಪಂಚಾಯತ್ ಗೋಶಾಲೆ ನಿರ್ಮಿಸಲಿ..
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನಾದರೂ ತಮ್ಮ ವ್ಯಾಪ್ತಿಯಲ್ಲಿ ಗೋಶಾಲೆ ನಿರ್ಮಿಸಲು ಜನಪ್ರತಿನಿಧಿಗಳು ಒತ್ತಾಯಿಸಬೇಕು. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಇಂತಹ ಸಂದರ್ಭದಲ್ಲಿ ಸಿಕ್ಕಿದ ಗೋವುಗಳನ್ನು ಕಾನೂನು ಪ್ರಕ್ರಿಯೆ ಮುಗಿದ ಬಳಿಕ ತಮ್ಮ ಗೋಶಾಲೆಗಳಲ್ಲಿ ಸಲಹುವಂತಾಗಬೇಕು. ಇಲ್ಲವಾದರೆ ಗೋವುಗಳು ಪತ್ತೆಯಾದ ತಕ್ಷಣ ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಸಾಕುವ ನೆಪದಲ್ಲಿ ಠಾಣೆಯಿಂದ ಪಡೆಯುವ ಖಾಸಗಿ ವ್ಯಕ್ತಿಗಳು ಒಂದೆರಡು ದಿನ ಮನೆಯಲ್ಲಿರಿಸಿ ಮತ್ತೆ ಕುಟುಕರಿಗೆ ಸಾವಿರಾರು ರೂಪಾಯಿಗಳಿಗೆ ನೀಡುವ ಮೂಲಕ ದಂಧೆ ನಡೆಸುತ್ತಿದ್ದಾರೆ.

ಅನಾಥವಾದ ಗೋವುಗಳು.
ಸಾಲೆತ್ತೂರು ಕರೈ ಬಳಿ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ವಶಕ್ಕೆ ಪಡೆದ ಎರಡು ದೊಡ್ಡ ಗಾತ್ರದ ಹಾಲು ಕರೆಯುವ ಹಸುಗಳು ಮೂರು ದಿನಗಳಿಂದ ವಿಟ್ಲ ಠಾಣೆಯಲ್ಲಿ ಆಶ್ರಯ ಪಡೆದಿತ್ತು. ವಿಟ್ಲ ಪರಿಸರದ ಗೋಶಾಲೆಗಳು ಸ್ಥಳಾವಕಾಶ ಮತ್ತು ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಗೋವುಗಳ ಪಡೆಯಲು ನಿರಾಕರಿಸಿದ್ದವು. ಈ ಮಧ್ಯೆ ಮೂರ್ನಾಲ್ಕು ಖಾಸಗಿ ವ್ಯಕ್ತಿಗಳು ತಮಗೆ ಸಾಕಲು ಬೇಕೆಂದು ಹೇಳುತ್ತಾ ಗೋವುಗಳ ಪಡೆಯಲು ಕಸರತ್ತು ನಡೆಸಿದ್ದರು. ಆದರೆ ಕಾನೂನು ಚೌಕಟ್ಟಿನಲ್ಲಿ ಖಾಸಗಿ ವ್ಯಕ್ತಿಗಳಿಗೆ ಗೋವುಗಳನ್ನು ನೀಡುವಂತಿಲ್ಲ. ಅದರಿಂದಾಗಿ ನಕಲಿ ಗೋಪ್ರೇಮಿಗಳ ಕಸರತ್ತು ವಿಫಲವಾಗಿದೆ.

ಗೋವುಗಳಿಗೆ ಮರು ಜನ್ಮ ನೀಡಿದ ದೈಗೋಳಿ ಸೇವಾಶ್ರಮ..
ಹಲವು ವರ್ಷಗಳಿಂದ ನೂರಾರು ಅನಾಥ ಬಡ ಜೀವಗಳಿಗೆ, ಮಾನಸಿಕ ಸ್ಥಿಮಿತ ಕಳೆದುಕೊಂಡು ಬೀದಿ ಬೀದಿ ಅಲೆದಾಡುತ್ತಿದ್ದ ಅದೆಷ್ಟೋ ಜೀವಗಳ ಪಾಲಿಗೆ ಮಂಜೇಶ್ವರ ತಾಲೂಕಿನ ದೈಗೋಳಿಯ ಡಾ.ಉದಯಕುಮಾರ್-ಶಾರದಮ್ಮ ದಂಪತಿಗಳ ನೇತೃತ್ವದ ಶ್ರೀಸಾಯಿ ನಿಕೇತನ ಸೇವಾಶ್ರಮ ಮರು ಜನ್ಮ ನೀಡುತ್ತಿದೆ. ಇದರ ಜೊತೆಗೆ ಅಲ್ಲಿನ ಕಾಮಧೇನು ಗೋಶಾಲೆಯಲ್ಲಿ ಈಗಾಗಲೇ ಐವತ್ತಕ್ಕೂ ಹೆಚ್ಚು ಗೋವುಗಳು ಆಶ್ರಯ ಪಡೆದಿವೆ. ಅಲ್ಲೂ ಸ್ಥಳಾವಕಾಶ ದ ಕೊರತೆ ಎದ್ದು ಕಾಣುತ್ತಿದೆ. ಆದರೆ ಗಾಯಗೊಂಡ ಗೋವುಗಳ ಅಸಹಾಯಕ ಪರಿಸ್ಥಿತಿಯನ್ನು ಮನಗಂಡು ಆಶ್ರಯ ನೀಡಲು ವೈದ್ಯ ದಂಪತಿಗಳು ಮುಂದೆ ಬಂದಿರುವುದು ತಮ್ಮ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಪತ್ರಕರ್ತ ವಿ.ಟಿ.ಪ್ರಸಾದ್ ಅವರ ಬೇಡಿಕೆಗೆ ಸ್ಪಂದಿಸಿದ ದೈಗೋಳಿ ಸೇವಾಶ್ರಮದ ವೈದ್ಯ ದಂಪತಿಗಳು ತಮ್ಮ ಕಾಮಧೇನು ಗೋಶಾಲೆಗೆ ವಿಟ್ಲ ಪೊಲೀಸರ ಸಹಕಾರದಲ್ಲಿ ಕರೆದೊಯ್ದ ಎರಡು ಗೋವುಗಳನ್ನು ದಾಖಲಿಸುವ ಮೂಲಕ ಮರು ಜನ್ಮ ನೀಡಿದ್ದಾರೆ.

ಇನ್ನಾದರೂ ಗೋಸಾಗಾಟ ತಡೆಯುವ ಗೋಪ್ರೇಮಿಗಳು ಆ ಬಳಿಕ ಗೋವುಗಳ ಮುಂದಿನ ಜೀವನದ ಬಗ್ಗೆ ಸ್ಪಂದಿಸುವ ಹೃದಯವಂತಿಕೆಯಲ್ಲಿ ಅಸಲಿ ಗೋಪ್ರೇಮಿಗಳಾಗಿ ಸಮಾಜದಲ್ಲಿ ಬದುಕಲಿ ಎಂಬುದು ಹಾರೈಕೆಯಾಗಿದೆ.

ವಿ.ಟಿ.ಪ್ರಸಾದ್‌ ಹಿರಿಯ ಪತ್ರಕರ್ತರು

ಈ ವೀಡಿಯೋ ನೋಡಿ Watch the video

ಕಟುಕರ ಕೈಯಿಂದ ಬಚಾವಾದ ಗೋವುಗಳಿಗೆ ದೈಗೋಳಿ ಕಾಮಧೇನು ಗೋಶಾಲೆಯಲ್ಲಿ ಮರುಜನ್ಮ

ಈ ನ್ಯೂಸನ್ನೂ ಓದಿ

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ವಿಶೇಷ ವರದಿ: ‘ನೀನು ಸಾಯೋದು ಯಾವಾಗ?’ ಎಂದಾಗ ಅರ್ಧ ಜೀವ ಹಾರಿಹೋಗುತ್ತದೆ!ವೃದ್ಧಾಶ್ರಮಗಳೂ ಈಗ ‘ದಂಧೆ’! ಬದಲಾದ ಜೀವನಶೈಲಿ ನಡುವೆ ಹೆತ್ತವರ ಒಳಜೀವದ ಆತಂಕ; ಶಾಶ್ವತ ಪರಿಹಾರವೇನು?

Published

on

‘ಮಾತೃ ದೇವೋಭವ, ಪಿತೃ ದೇವೋಭವ’ ಎಂದು ಹೆತ್ತವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಹರಕೆ ಹೊತ್ತು ಮಕ್ಕಳನ್ನು ಪಡೆದು, ಅವರನ್ನೇ ಸರ್ವಸ್ವವೆಂದು ಬಗೆದು, ಪ್ರೀತಿ-ಕಾಳಜಿಯಿಂದ ಬೆಳೆಸಿ, ಉತ್ತಮ ಶಿಕ್ಷಣ ಹಾಗೂ ಬದುಕು ನೀಡಿದ ಪಾಲಕರಿಗೆ, ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಇರುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತಹ ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರೀತಿ, ಗೌರವ ಸಿಗಬೇಕಾದ ವಯಸ್ಸಿನಲ್ಲಿ ಹಿರಿಯ ಜೀವಗಳು ತಮ್ಮದೇ ಮನೆಯಿಂದ ದೂರವಾಗಿ ವೃದ್ಧಾಶ್ರಮಗಳಲ್ಲಿ ಅನಾಥರಂತೆ ಆಶ್ರಯ ಪಡೆಯುತ್ತಿದ್ದಾರೆ.

“ನಾಳೆ ನಮ್ಮ ವೃದ್ಧಾಪ್ಯ ಹೇಗಿರುತ್ತದೋ, ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಾರೋ ಇಲ್ಲವೋ?” ಎಂಬ ತೀವ್ರ ಆತಂಕ ಇವತ್ತು ಪ್ರತಿಯೊಬ್ಬ ಪೋಷಕರನ್ನೂ ಕಾಡುತ್ತಿದೆ. ಐಷರಾಮಿ ಬದುಕು ಪಡೆದ ಮಕ್ಕಳೇ ಇವತ್ತು, ‘ನೀನು ಸಾಯೋದು ಯಾವಾಗ?’ ಎಂದು ಮುಖಕ್ಕೆ ಹೊಡೆದಂತೆ ಕೇಳುವಾಗ, ಹಿರಿಯರಿಗೆ ಬದುಕಿರುವಾಗಲೇ ಅರ್ಧ ಜೀವ ಹಾರಿಹೋಗುತ್ತದೆ.

ಹಿರಿಯರನ್ನು ದೂರ ತಳ್ಳಲು ಪ್ರಮುಖ ಕಾರಣಗಳೇನು?

ಇಂದಿನ ಆಧುನಿಕ ಸಮಾಜದಲ್ಲಿ ಹೆತ್ತವರನ್ನು ಮಕ್ಕಳು ತಮ್ಮಿಂದ ದೂರ ಮಾಡಲು ಮತ್ತು ವೃದ್ಧರು ಆತಂಕಕ್ಕೊಳಗಾಗಲು ಬದಲಾದ ಜೀವನಶೈಲಿ ಹಾಗೂ ಮಾನಸಿಕತೆಯೇ ಪ್ರಮುಖ ಕಾರಣಗಳಾಗಿವೆ:

ಅವಿಭಕ್ತ ಕುಟುಂಬಗಳ ವಿಭಜನೆ: ಹಿಂದೆ ಭಾರತದಲ್ಲಿ ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದವು. ಮನೆಯಲ್ಲಿ ಹಿರಿಯರನ್ನು ಎಲ್ಲರೂ ಒಟ್ಟಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ವಿಭಕ್ತ (ನ್ಯೂಕ್ಲಿಯರ್) ಕುಟುಂಬ ಪದ್ಧತಿ ಹೆಚ್ಚಾಗಿದ್ದು, ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಕಡಿಮೆಯಾಗಿದೆ.

ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತ: ಆಧುನಿಕ ಜೀವನಶೈಲಿ ಮತ್ತು ಭೌತಿಕ ಆಸೆಗಳು ಹೆಚ್ಚಾದಂತೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳು ಸಂಪೂರ್ಣವಾಗಿ ಕುಸಿಯುತ್ತಿವೆ. ಹಣ, ಅಂತಸ್ತು ಮತ್ತು ಅಧಿಕಾರದ ಹಿಂದೆ ಬಿದ್ದಿರುವ ಇಂದಿನ ಪೀಳಿಗೆಗೆ ಹೆತ್ತವರ ಜವಾಬ್ದಾರಿ ಮರೆತುಹೋಗಿದೆ. ಪೋಷಕರನ್ನು ಕಡೆಗಣಿಸುವ ಪ್ರವೃತ್ತಿ ಬೆಳೆಯುತ್ತಿದೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಜಾಗತೀಕರಣ: ಜಾಗತೀಕರಣದ ಈ ಯುಗದಲ್ಲಿ ಮಕ್ಕಳು ಉದ್ಯೋಗ ಅರಸಿ ವಿದೇಶಗಳಿಗೆ ಅಥವಾ ದೂರದ ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪೋಷಕರು ಒಂಟಿಯಾಗುತ್ತಿದ್ದಾರೆ. ಇನ್ನು ಕೆಲವು ಕಡೆ ಮಕ್ಕಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ, ತಮ್ಮ ಐಷರಾಮಿ ಜೀವನಶೈಲಿಗೆ ಪೋಷಕರು ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅವರನ್ನು ಜೊತೆಯಲ್ಲಿಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ.

ಪೋಷಕರ ಅತಿಯಾದ ನಿರೀಕ್ಷೆಗಳು: ಕೆಲವೊಮ್ಮೆ ಪೋಷಕರೇ ತಮ್ಮ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ವಿದೇಶಗಳಿಗೆ ಕಳಿಸಿ, ಅವರು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಅತಿಯಾದ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತವರಿಂದಲೇ ದೂರವಾಗಲು ಈ ಅತಿಯಾದ ನಿರೀಕ್ಷೆಗಳೇ ಕಾರಣವಾಗುತ್ತಿರುವುದು ಒಂದು ವಿಪರ್ಯಾಸ.

ಪರಿಸರ ಸೌಹಾರ್ದತೆಯ ಕೊರತೆ ಮತ್ತು ವೈಯಕ್ತಿಕ ಸ್ವಾರ್ಥ: ನಗರಗಳು ಇಂದು ಕಾಂಕ್ರೀಟ್ ಕಾಡುಗಳಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧದ ಜೊತೆಗೆ ಮಾನವೀಯ ಸಂಬಂಧಗಳೂ ಕಡಿಯುತ್ತಿವೆ. ಕೇವಲ ‘ನಾನು, ನನ್ನ ಹೆಂಡತಿ, ನನ್ನ ಮಕ್ಕಳು’ ಎಂಬ ವೈಯಕ್ತಿಕ ಸ್ವಾರ್ಥ ಹೆಚ್ಚಾಗುತ್ತಿರುವುದು ಕೌಟುಂಬಿಕ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ವಯೋವೃದ್ಧರ ಆರೋಗ್ಯ ಸಮಸ್ಯೆಗಳು: ವೃದ್ಧಾಪ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಅವರಿಗೆ ನಿರಂತರ ಆರೈಕೆ ಮತ್ತು ಸಮಯದ ಅಗತ್ಯವಿರುತ್ತದೆ. ಆದರೆ ಇಂದಿನ ಓಟದ ಬದುಕಿನಲ್ಲಿ ಮನೆಯಲ್ಲಿ ಯಾರಿಗೂ ಅವರನ್ನು ನೋಡಿಕೊಳ್ಳಲು ಸಮಯವಾಗಲಿ ಅಥವಾ ಸಂಪನ್ಮೂಲಗಳಾಗಲಿ ಇರುವುದಿಲ್ಲ. ಈ ಕಾರಣ ನೀಡಿ ವೃದ್ಧರನ್ನು ವೃದ್ಧಾಶ್ರಮಗಳಿಗೆ ತಳ್ಳಲಾಗುತ್ತಿದೆ.

ವೃದ್ಧಾಶ್ರಮಗಳೂ ಈಗ ‘ದಂಧೆ’: ಆಸ್ತಿ ಲೂಟಿಯ ವ್ಯವಸ್ಥಿತ ಜಾಲ!

ಖಾಸಗಿ ವೃದ್ಧಾಶ್ರಮಗಳು ಕೇವಲ ಸೇವಾ ಮನೋಭಾವದಿಂದ ನಡೆಯುತ್ತಿಲ್ಲ. ಅನುಕೂಲಸ್ಥ ವೃದ್ಧರನ್ನು ಗುರಿಯಾಗಿಸಿಕೊಂಡು, ಅವರಿಗೆ ಐಷರಾಮಿ ಸೌಲಭ್ಯಗಳನ್ನು ನೀಡುವ ಸೋಗಿನಲ್ಲಿ ಅವರ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಲೂಟಿ ಮಾಡುವ ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿದೆ.

ಆಸ್ತಿ, ಹಣ ಇರುವವರೆಗೆ ವೃದ್ಧರಿಗೆ ರಾಜಾತಿಥ್ಯ ಸಿಗುತ್ತದೆ. ಒಮ್ಮೆ ಆಸ್ತಿ ಇವರ ಹೆಸರಿಗೆ ವರ್ಗಾವಣೆಯಾಯಿತೋ ಅಥವಾ ಹಣ ಖಾಲಿಯಾಯಿತೋ, ಅಲ್ಲಿಂದ ವೃದ್ಧರ ದುರಂತ ಅಂತ್ಯ ಶುರುವಾಗುತ್ತದೆ. ಇಂತಹ ಸೂಕ್ಷ್ಮ ನೋವುಗಳನ್ನು, ಒಳಸಂಚುಗಳನ್ನು ಇವತ್ತಿನ ಯಾವ ಮಾಧ್ಯಮಗಳೂ ವರದಿ ಮಾಡುತ್ತಿಲ್ಲ, ಇವುಗಳ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಲೇ ಇಲ್ಲ. ಆಸ್ತಿಯಿದ್ದರೂ ನೆಮ್ಮದಿಯಿಲ್ಲ, ಆಸ್ತಿ ಇಲ್ಲದಿದ್ದರೆ ಬದುಕೇ ದುರ್ಭರ ಎನ್ನುವಂತಾಗಿದೆ. ಇದು ನಮ್ಮ ‘ಸಾಂಸ್ಕೃತಿಕ ಕುಸಿತ’ಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮಕ್ಕಳ ದೌರ್ಜನ್ಯದ ವಿರುದ್ಧ ಹಿರಿಯರಿಗಿರುವ ಕಾನೂನು ಅಸ್ತ್ರಗಳು:

ಇಂತಹ ದುಸ್ಥಿತಿಯಲ್ಲಿರುವ ವೃದ್ಧರ ರಕ್ಷಣೆಗೆ ಭಾರತೀಯ ಕಾನೂನಿನಲ್ಲಿ ಅತ್ಯಂತ ಬಲಿಷ್ಠವಾದ ಕಾಯಿದೆಗಳಿವೆ. ಪ್ರತಿಯೊಬ್ಬ ವೃದ್ಧರಿಗೂ ಇದರ ಪ್ರಾಥಮಿಕ ಜ್ಞಾನ ಇರುವುದು ಇಂದಿನ ತುರ್ತು ಅಗತ್ಯವಾಗಿದೆ.

1. ದಾನಪತ್ರ ರದ್ದತಿ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

ಹಲವು ಬಾರಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಬಕ್ಷೀಸ್ (ದಾನ) ಪತ್ರದ ಮೂಲಕ ವರ್ಗಾಯಿಸುತ್ತಾರೆ. ಆಸ್ತಿ ಕೈ ಸೇರಿದ ಮೇಲೆ ಮಗ-ಮಗಳು ಹೆತ್ತವರನ್ನು ಬೀದಿಗೆ ದೂಡುತ್ತಾರೆ. ಇಂತಹ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟು ‘ವೆಂಕಟಯ್ಯ ವರ್ಸಸ್ ಕರ್ನಾಟಕ ಸರಕಾರ’ ಎಂಬ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ: “ದಾನಪತ್ರದಲ್ಲಿ ‘ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕು’ ಎಂಬ ಶರತ್ತನ್ನು ಬರೆಯದಿದ್ದರೂ, ವೃದ್ಧಾಪ್ಯದಲ್ಲಿ ಅವರು ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದಲೇ ದಾನ ನೀಡಲಾಗಿದೆ ಎಂದು ಊಹಿಸಬೇಕಾಗುತ್ತದೆ. ಆಸ್ತಿ ಪಡೆದ ನಂತರ ತಂದೆಯನ್ನು ನಿರ್ಲಕ್ಷಿಸಿದರೆ 2007ರ ಕಾಯಿದೆಯ 23ನೇ ಕಲಮಿನನ್ವಯ ಆ ಆಸ್ತಿ ವರ್ಗಾವಣೆಯನ್ನು ಮೋಸ ಅಥವಾ ಒತ್ತಾಯದಿಂದ ಬರೆಸಿಕೊಳ್ಳಲಾಗಿದೆ ಎಂದು ಪರಿಗಣಿಸಿ ರದ್ದುಪಡಿಸಬಹುದು.”

2. ತಾಯಿ-ತಂದೆಯರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಯೋಗಕ್ಷೇಮ ಕಾಯಿದೆ, 2007

ಪಾಲನೆಯ ಜವಾಬ್ದಾರಿ (ಕಲಮು 4): ಆರ್ಥಿಕ ಮೂಲವಿಲ್ಲದ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯರನ್ನು ಪೋಷಿಸುವುದು ಮಕ್ಕಳ ಅಥವಾ ಮೊಮ್ಮಕ್ಕಳ ಜವಾಬ್ದಾರಿ. ಪಾಲನೆ ಎಂದರೆ ಕೇವಲ ದುಡ್ಡಲ್ಲ; ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ವೆಚ್ಚಗಳೂ ಸೇರಿವೆ.

ತ್ವರಿತ ಅರ್ಜಿ ಸಲ್ಲಿಕೆ (ಕಲಮು 5): ಹಿರಿಯ ನಾಗರಿಕರು ಜೀವನಾಂಶಕ್ಕಾಗಿ ಉಪ-ವಿಭಾಗೀಯ ಅಧಿಕಾರಿಗಳು (AC) ಅಧ್ಯಕ್ಷರಾಗಿರುವ ಟ್ರಿಬ್ಯೂನಲ್‌ಗೆ ವಕೀಲರ ಹಂಗಿಲ್ಲದೆ ಸರಳ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಬಂದ 90 ದಿನಗಳ ಒಳಗಾಗಿ ಟ್ರಿಬ್ಯೂನಲ್ ತೀರ್ಪು ನೀಡಬೇಕು. ಕೋರ್ಟ್ ಸ್ವಯಂ ಪ್ರೇರಿತವಾಗಿಯೂ (Suo-moto) ಈ ಪ್ರಕರಣ ದಾಖಲಿಸಿಕೊಳ್ಳಬಹುದು.

ಶಿಕ್ಷೆಯ ಪ್ರಮಾಣ (ಕಲಮು 24): ತಂದೆ-ತಾಯಿಯರನ್ನು ಪರಿತ್ಯಜಿಸುವ ಮಕ್ಕಳಿಗೆ ಭಾರಿ ದಂಡ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಟ್ರಿಬ್ಯೂನಲ್ ನೀಡುವ ಆದೇಶಗಳಿಗೆ ತಡೆ (Injunction) ನೀಡುವ ಅಧಿಕಾರ ಸಿವಿಲ್ ಕೋರ್ಟ್‌ಗಳಿಗೆ ಇರುವುದಿಲ್ಲ.

3. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS-2023) / ಸಿಆರ್‌ಪಿಸಿ 125

ಹೊಸ ಕಾನೂನಾದ ಬಿಎನ್‌ಎಸ್ಎಸ್-2023ರ 144ನೇ ಕಲಮಿನನ್ವಯ ಹೆತ್ತವರನ್ನು ನೋಡಿಕೊಳ್ಳದಿದ್ದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮಕ್ಕಳಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಆದೇಶಿಸುತ್ತದೆ. ತಪ್ಪಿದರೆ ಜೈಲು ಶಿಕ್ಷೆ ಗ್ಯಾರಂಟಿ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ (ವಿಜಯ ಮನೋಹರ ಅರ್ಬತ್ ವರ್ಸಸ್ ಕಾಶಿ ರಾವ್ ರಾಜಾರಾಮ್ ಸಹಾಯ್), ಸ್ವತಂತ್ರ ಆದಾಯವಿರುವ ವಿವಾಹಿತ ಹೆಣ್ಣು ಮಕ್ಕಳಿಗೂ ಈ ಜವಾಬ್ದಾರಿ ಅನ್ವಯಿಸುತ್ತದೆ. ಇದು ಎಲ್ಲಾ ಧರ್ಮದವರಿಗೂ ಸಮಾನವಾಗಿದೆ.

4. ಹಿಂದೂ ದತ್ತಕ ಮತ್ತು ಪಾಲನಾ ಕಾಯಿದೆ 1956 (HAMA)

ಈ ಕಾಯಿದೆಯ ಕಲಮು 20, 21 ಮತ್ತು 23ರ ಅಡಿಯಲ್ಲಿ ಅಶಕ್ತ ತಾಯಿ-ತಂದೆಯರನ್ನು ಒಟ್ಟಿಗೆ ಇಟ್ಟುಕೊಳ್ಳದಿದ್ದಾಗ, ಅವರ ಸ್ಥಾನಮಾನ ಮತ್ತು ಮಕ್ಕಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಕೋರ್ಟ್ ಜೀವನಾಂಶದ ಆದೇಶ ನೀಡುತ್ತದೆ. ಆದರೆ, 2007ರ ಹಿರಿಯ ನಾಗರಿಕರ ಕಾಯಿದೆಯೇ ಅತ್ಯಂತ ತ್ವರಿತ ಮತ್ತು ಉಚಿತ ಪರಿಹಾರ ನೀಡುತ್ತದೆ.

ಶಾಶ್ವತ ಪರಿಹಾರವೇನು? ಸರಕಾರದ ಯೋಜಿತ ವೃದ್ಧಾಶ್ರಮಗಳ ತುರ್ತು ಅಗತ್ಯ

ಖಾಸಗಿ ವೃದ್ಧಾಶ್ರಮಗಳ ದಂಧೆಗೆ ಮತ್ತು ಹೆತ್ತವರ ಈ ಎಲ್ಲಾ ಆತಂಕಗಳಿಗೆ ಮುಕ್ತಿ ಹಾಡಬೇಕಾದರೆ ಸರಕಾರವೇ ಒಂದು ಮಾದರಿ ಯೋಜಿತ ವೃದ್ಧಾಶ್ರಮ ವ್ಯವಸ್ಥೆಯನ್ನು (Government Managed Senior Citizen Housing Project) ಜಾರಿಗೆ ತರಬೇಕಾಗಿದೆ.

1. ಸರಕಾರಿ ಉಸ್ತುವಾರಿ (ಕಲಮು 19): ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರವೇ ನೇರವಾಗಿ ಅತ್ಯಾಧುನಿಕ, ಸುಸಜ್ಜಿತ ವೃದ್ಧಾಶ್ರಮಗಳನ್ನು ನಿರ್ಮಿಸಿ ನಿರ್ವಹಿಸಬೇಕು. ಅಲ್ಲಿ ಖಾಸಗಿಯವರ ಆಸ್ತಿ ಲೂಟಿಯ ದಂಧೆಗೆ ಬ್ರೇಕ್ ಬೀಳುತ್ತದೆ.

2. ಆಸ್ತಿ ಮತ್ತು ಸುರಕ್ಷತೆಯ ಗ್ಯಾರಂಟಿ: ವೃದ್ಧರ ಆಸ್ತಿಯನ್ನು ಸರಕಾರದ ವಶದಲ್ಲಿಟ್ಟುಕೊಂಡು, ಅದರ ಆದಾಯದಲ್ಲೇ ಅವರ ಜೀವಿತಾವಧಿಯವರೆಗೆ ರಾಜಮರ್ಯಾದೆಯ ಊಟ, ವಸತಿ, ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು (ಕಲಮು 20ರ ಅನ್ವಯ ಸರಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಹಾಗೂ ಪ್ರತ್ಯೇಕ ಪಾಳಿ ವ್ಯವಸ್ಥೆ) ಸರಕಾರವೇ ನೀಡಬೇಕು.

3. ಸಮಾನ ಗೌರವ: ಆಸ್ತಿ ಇದ್ದವರಿಗೂ, ಇಲ್ಲದ ಬಡ ವೃದ್ಧರಿಗೂ ಸಮಾನವಾಗಿ ಪ್ರೀತಿ ಮತ್ತು ಗೌರವ ಸಿಗುವಂತಹ ವಾತಾವರಣವನ್ನು ಸರಕಾರಿ ಕೇಂದ್ರಗಳು ನಿರ್ಮಿಸಿದರೆ ಬಹುತೇಕ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ.

4. ಉಚಿತ ಸಹಾಯವಾಣಿ: ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಹಿರಿಯ ನಾಗರಿಕರ ಸಹಾಯಕ್ಕಾಗಿ 14567 ಎಂಬ ಉಚಿತ ಸಹಾಯವಾಣಿಯನ್ನು (Helpline) ತೆರೆದಿದ್ದು, ಇದರ ಮೂಲಕ ವೃದ್ಧರು ತಮಗಾಗುವ ಅನ್ಯಾಯದ ವಿರುದ್ಧ ನೆರವು ಪಡೆಯಬಹುದು.

ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಲ್ಲದ ಸಂಬಂಧಿಕರನ್ನೂ ಪ್ರೀತಿಯಿಂದ ಸಾಕಿ ಕೊನೆಯ ಕಾಲದ ಕರ್ತವ್ಯ ಮುಗಿಸುತ್ತಿದ್ದ ಉದಾತ್ತ ಸಂಸ್ಕೃತಿ ನಮ್ಮದಾಗಿತ್ತು. ಜೀವನಾಂಶ ಕೇಳಲು, ಆಸ್ತಿ ವಾಪಸ್ ಪಡೆಯಲು ಇಂದು ಕಾನೂನು, ಕೋರ್ಟುಗಳಿವೆ. ಆದರೆ ಪ್ರೀತಿ, ಕಾಳಜಿ, ಗೌರವಗಳ ಕೊರತೆಗೆ ಕಾನೂನಿನ ಬಳಿ ಉತ್ತರವಿಲ್ಲ. ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಯಿಸುವ ಇಂತಹ ಮಕ್ಕಳನ್ನು ಸಮಾಜ ಮುಕ್ತವಾಗಿ ಬಹಿಷ್ಕರಿಸಬೇಕು. ಅವರಿಗೆ ಯಾವ ವೇದಿಕೆಯಲ್ಲಿಯೂ ಸ್ಥಾನಮಾನ ನೀಡಬಾರದು.

ಕೆಲ ವರ್ಷಗಳ ಹಿಂದೆ ವೃದ್ಧಾಶ್ರಮವೊಂದರ ಉದ್ಘಾಟನೆಯಲ್ಲಿ ಹಿರಿಯರೊಬ್ಬರು, “ಈ ವೃದ್ಧಾಶ್ರಮ ಸದಾ ಖಾಲಿ ಇರಲಿ” ಎಂದು ಹಾರೈಸಿದ್ದು ಅತ್ಯಂತ ಮಾರ್ಮಿಕವಾಗಿತ್ತು. ಹಿರಿಯರ ಹಿತರಕ್ಷಣೆಯ ಕಾನೂನುಗಳ ಬಗ್ಗೆ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕಾಗಿದೆ. ಹೆತ್ತವರನ್ನು ದೇವರೆಂದು ಭಾವಿಸುವ ನಮ್ಮ ದೇಶದಲ್ಲಿ, ಇಂತಹ ಕಾಯಿದೆಗಳನ್ನು ಬಳಸುವ ಸಂದರ್ಭವೇ ಬಾರದಿರಲಿ ಎಂದು ಆಶಿಸೋಣ

Continue Reading

Article

ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಗೆ ಮರುಜೀವ: ಭರದಿಂದ ಸಾಗುತ್ತಿದೆ ಹೂಳೆತ್ತುವ ಕಾರ್ಯ, ದಾನಿಗಳ ಸಹಕಾರಕ್ಕೆ ಕರೆ

Published

on

ವಿಟ್ಲ: .ಇತಿಹಾಸ ಪ್ರಸಿದ್ಧ ವಿಟ್ಲದ ‘ಕೋಟಿಕೆರೆ’ಯ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯವು‌ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅತ್ಯಂತ ಭರದಿಂದ ಸಾಗುತ್ತಿದೆ. ದಿನೇ ದಿನೇ ಸುಂದರ ರೂಪ ಪಡೆಯುತ್ತಿರುವ ಕೆರೆಯ ಅಭಿವೃದ್ಧಿ ಕಾರ್ಯವನ್ನು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುತೂಹಲದಿಂದ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ರೂಪುಗೊಳ್ಳುತ್ತಿದೆ ತಡೆಗೋಡೆ; ಮರ-ಪೊದೆಗಳ ತೆರವು

ಕೋಟಿಕೆರೆಯ ಸಂರಕ್ಷಣೆಯ ಮೊದಲ ಹಂತವಾಗಿ, ಈ ಹಿಂದೆ ಕುಸಿದು ಬಿದ್ದಿದ್ದ ಕಲ್ಲಿನ ತಡೆಗೋಡೆಯ ಪುನರ್ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ದಟ್ಟವಾಗಿ ಹಬ್ಬಿಕೊಂಡಿದ್ದ ಪೊದೆಗಳು ಮತ್ತು ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕೊನೆಯ ಹಂತದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ಕೆರೆಯ ನೀರಿಗೆ ಬಾಗಿಕೊಂಡು ಅಪಾಯಕಾರಿಯಾಗಿದ್ದ ಭಾರಿ ಗಾತ್ರದ ನಿರುಪಯುಕ್ತ ಮರಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಹೂಳೆತ್ತುವಿಕೆಗೆ ಕ್ರೇನ್ ಕಾರ್ಯಾಚರಣೆ: ಯುವಕರ ಶ್ರಮಕ್ಕೆ ಹೈಕೋರ್ಟ್ ವಕೀಲರ ಮೆಚ್ಚುಗೆ

ಕೋಟಿಕೆರೆಯ ಉದ್ದಗಲಕ್ಕೂ ತಳಭಾಗದಲ್ಲಿ ಸುಮಾರು ಐದು ಅಡಿಗಳಷ್ಟು ಆಳದಲ್ಲಿ ತುಂಬಿಕೊಂಡಿರುವ ದಶಕಗಳ ಹಳೆಯ ದುರ್ನಾತಭರಿತ ಹೂಳನ್ನು (ಕೆಸರು) ಹೊರತೆಗೆಯುವುದು ಸದ್ಯ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಕಳೆದ ಮೂರು ದಿನಗಳಿಂದ ಹಿಟಾಚಿ ಯಂತ್ರವನ್ನು ಬಳಸಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿತ್ತಾದರೂ, ಹೂಳಿನ ಪ್ರಮಾಣ ಅಗಾಧವಾಗಿರುವುದರಿಂದ ಇದೀಗ ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ತರಲಾಗಿದೆ. ಕೆರೆಯ ತಳಭಾಗದಲ್ಲಿ ಹಿಟಾಚಿ ಯಂತ್ರವು ಹೂಳನ್ನು ಒಟ್ಟುಗೂಡಿಸುತ್ತಿದ್ದರೆ, ಮೇಲ್ಭಾಗದಲ್ಲಿ ನಿಂತಿರುವ ಕ್ರೇನ್‌ನ ರೋಪ್ ಮೂಲಕ ಕೆರೆಗೆ ಇಳಿಸಲಾದ ದೊಡ್ಡ ಬಕೆಟ್‌ಗಳಿಗೆ ಹೂಳನ್ನು ತುಂಬಿಸಿ ಮೇಲಕ್ಕೆತ್ತುವ ಜಂಟಿ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.

ಈ ಮಹತ್ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ವರದಿಯನ್ನು ವೀಕ್ಷಿಸಿದ ವಿಟ್ಲ ಮೂಲದವರೇ ಆದ ಪ್ರಖ್ಯಾತ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಯುವಕರ ಭಗೀರಥ ಪ್ರಯತ್ನ ಹಾಗೂ ಸಾಮಾಜಿಕ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಯುವಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ, ಕೆರೆಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣವೇ 11,111 ರೂಪಾಯಿ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಹೃದಯವಂತರ ಸಹಕಾರದ ಅಗತ್ಯವಿದೆ

ಕೋಟಿಕೆರೆಯ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ ಈಗಾಗಲೇ ಊರಿನ ಹಾಗೂ ಪರವೂರ ಹಲವಾರು ದಾನಿಗಳು ಮನಪೂರ್ವಕವಾಗಿ ಧನಸಹಾಯದ ಹಸ್ತ ಚಾಚಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈವರೆಗೆ ಸುಮಾರು 1,70,000 ರೂಪಾಯಿ ವೆಚ್ಚವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 2,00,000 ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ನಮ್ಮ ಹೆಮ್ಮೆಯ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಈ ಪವಿತ್ರ ಕಾರ್ಯದಲ್ಲಿ ಇನ್ನಷ್ಟು ಜನ ಹೃದಯವಂತ ದಾನಿಗಳು ಆರ್ಥಿಕ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಕೈಜೋಡಿಸಬೇಕಾಗಿ ಕೆರೆ ಅಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದು, ಈ ಬಳಗದ ಗ್ರೂಪ್ ಅಡ್ಮಿನ್ ಗಳಾದ 1) ಬಾಬು ಕೊಪ್ಪಳ, 2) ಕ್ಲಿಫರ್ಡ್ ವೇಗಸ್, 3) ಚಂದ್ರಹಾಸ ಕೊಪ್ಪಳ 4) ಅಣುಪ್ ಲಾಸ್ರಾದೊ 5) ಚಂದ್ರ ಟೈಯರ್ ಅಂಗಡಿ ಇವರುಗಳಲ್ಲಿ ಹಣ ನೀಡಬಹುದು ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀಡಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಈಗಾಗಲೇ ನಿರ್ಧರಿಸಿದ ಕೆಲಸಗಳು ಮುಕ್ತಾಯವಾದ ಬಳಿಕವೂ ಹಣ ಉಳಿದಲ್ಲಿ ಮತ್ತೆ ತಡೆಗೋಡೆ ಕಾಮಗಾರಿ ಮುಂದುವರಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.




Continue Reading

Article

ತುಳುನಾಡಿನ ಇತಿಹಾಸದ ಹೆಮ್ಮೆಯ ಸಂಕೇತ ವಿಟ್ಲದ ‘ಕೋಟಿ ಕೆರೆ’ಗೆ ಜೀರ್ಣೋದ್ಧಾರದ ಕಾಯಕಲ್ಪ: ಸಾರ್ವಜನಿಕರ ಸಹಕಾರಕ್ಕೆ “ಕೋಟಿಕೆರೆ ಅಭಿವೃದ್ಧಿ ಬಳಗ”ಮನವಿ

Published

on

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪಟ್ಟಣವಾದ ವಿಟ್ಲದ ಹೆಮ್ಮೆಯ ಸಂಕೇತ, ತುಳುನಾಡಿನ ವೀರ ಹಾಗೂ ರಾಜವಂಶದ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಇತಿಹಾಸ ಪ್ರಸಿದ್ಧ ‘ಕೋಟಿ ಕೆರೆ’ ಇಂದು ಅಳಿವಿನ ಅಂಚಿಗೆ ಬಂದು ತಲುಪಿದ್ದು, ಯಾವ ಕ್ಷಣದಲ್ಲಾದರೂ ಜರಿದು ಮುಚ್ಚಿಹೋಗುವ ಭೀತಿಯಲ್ಲಿರುವ ಈ ಕೆರೆಯನ್ನು ಉಳಿಸಿಕೊಳ್ಳಲು ವಿಟ್ಲದ ಸಾರ್ವಜನಿಕರು ಹಾಗೂ ಕೊಡುಗೈ ದಾನಿಗಳು ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಕೆರೆಯ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಕಳೆದ ವಾರದಿಂದ ಇಲ್ಲಿ ನಿರಂತರವಾಗಿ ಕಾರ್ಮಿಕರಿಂದ ಜರಿದು ಬಿದ್ದ ತಡೆಗೋಡೆಗಳನ್ನು ಸರಿಪಡಿಸುವ ಕೆಲಸಗಳು ಮತ್ತು ಜೊತೆಯಾಗಿ ಶ್ರಮದಾನದ ಮೂಲಕವೂ ಕೆಲಸಗಳು ನಡೆಯುತ್ತಲಿವೆ.

ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ವಿಟ್ಲದ ಆಪತ್ಬಾಂಧವ ಮುರಳಿ, ಅನೂಪ್ ಲಸ್ರಾದೊ, ಜಯರಾಮ ಕಡಂಬು, ಮಾಜಿ ಯೋಧರಾದ ದಯಾನಂದ ನೇತ್ರಕೆರೆ, ವೆಂಕಟರಮಣ ಭಟ್, ಫಿನಿಕ್ಸ್‌ ಕಂಪ್ಯೂಟರಿನ ಜೋಯ್‌ ಪುಡ್ತಾದೊ, ಪತ್ರಕರ್ತ ವಿಟಿ ಪ್ರಸಾದ್ ಹಾಗೂ ಚಂದ್ರ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋಟಿ ಕೆರೆಯ ಹತ್ತಿರದ ಮನೆಯವರು ಕತ್ತಿ , ಹಾರೆ ಇನ್ನಿತರ ಪರಿಕರಗಳನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಕೆರೆಯ ಸುತ್ತು ಚಾಚಿಕೊಂಡಿರುವ ಮರಗಳ ತೆರವು, ನೀರು ಕೆಸರನ್ನು ಮೇಲಕ್ಕೆತ್ತುವ , ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಉಸಿರು ಬಿಗಿದು ನಿಂತ ಕೆರೆ: ಸುಮಾರು ಹತ್ತು ವರ್ಷಗಳ ಹಿಂದೆ ಈ ಕೆರೆ ಅಳಿವಿನ ಅಂಚಿನಲ್ಲಿದ್ದಾಗ ವಿಟ್ಲದ ಉದ್ಯಮಿ ಬಾಬು ಕೊಪ್ಪಳ ಅವರು ವೈಯಕ್ತಿಕ ಮುತುವರ್ಜಿ ವಹಿಸಿ ಜರಿದು ಹೋಗಿದ್ದ 20 ಮೀಟರ್ ಭಾಗವನ್ನು ದುರಸ್ತಿ ಮಾಡಿಸಿದ್ದರು. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಈಗ ಕೆರೆಯ ನಾಲ್ಕೂ ಬದಿಯ ಕಲ್ಲುಗಳು ಜರಿದು ನೀರು ಪಾಲಾಗಿದ್ದು, ಕಟ್ಟಿದ ಕಲ್ಲು ಮತ್ತು ಮಣ್ಣು ಜರಿದು ಬಿದ್ದು ಕೆರೆಯೊಳಗೆ ತುಂಬಿ ಹೋಗಿದೆ. ಕೆರೆ ಸದ್ಯ ಉಸಿರು ಬಿಗಿದು ಹಿಡಿದು ನಿಂತಂತಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳು, ಈಜುಗಾರರು ಕಳೆದ ಏಳೆಂಟು ದಶಕಗಳ ಹಿಂದಿನಿಂದಲೇ ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದಕ್ಕೆ ಈ ಕೋಟಿ ಕೆರೆಯೇ ಸಾಕ್ಷಿಯಾಗಿದೆ. ಆ ಕಾರಣವಾಗಿಯೇ ಈ ಕೆರೆ ಮಾತ್ರ ವಿಟ್ಲದ ನಮ್ಮೆಲ್ಲರ ಹೆಮ್ಮೆಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಇಂದಿಗೂ ಉಳಿದುಕೊಂಡಿದೆ. ಅದರ ಅಭಿವೃದ್ಧಿ ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಗ್ರಾಮೀಣ ಈಜುಪಟುಗಳ ನರ್ಸರಿ! ಆಧುನಿಕ ಇತಿಹಾಸದಲ್ಲಿ ಈ ಕೆರೆಯು ಕೇವಲ ನೀರಿನ ಮೂಲವಾಗಿ ಉಳಿಯದೆ, ಗ್ರಾಮೀಣ ಭಾಗದ ಅದ್ಭುತ ಕ್ರೀಡಾ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಅನೇಕ ಮಂದಿ ಈಜು ತರಬೇತುದಾರರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆರೆಯಲ್ಲಿ ಸಾವಿರಾರು ಗ್ರಾಮೀಣ ಯುವಕರಿಗೆ ಉಚಿತವಾಗಿ ಈಜು ಕಲಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜುಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಸಹಕಾರಕ್ಕೆ ಸಮಿತಿ ವಿನಂತಿ: ಇತಿಹಾಸ ಪ್ರಸಿದ್ಧ ಈ ಕೆರೆಗೆ ಬಂದೊದಗಿರುವ ದುಸ್ಥಿತಿಯನ್ನು ಕಂಡು ಮರುಗಿದ ವಿಟ್ಲದ ಕೆಲವು ಕೊಡುಗೈ ದಾನಿಗಳು, ದೈನಂದಿನ ಈಜುಗಾರರು, ಪೋಷಕರು, ವಿಟ್ಲದ ಕಲಾರಾಧಕರು ಹಾಗೂ ಕೋಟಿಕೆರೆಯ ಅಭಿಮಾನಿಗಳು ಸೇರಿಕೊಂಡು ಇದನ್ನು ಸ್ವಾವಲಂಬನೆಯಿಂದ ಉಳಿಸಿಕೊಳ್ಳುವ ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ. ತನು, ಮನ, ಧನದ ಮೂಲಕ ಇದರ ಅಭಿವೃದ್ಧಿಯ ಸಂಕಲ್ಪಕ್ಕಾಗಿ ಪಣ ತೊಟ್ಟಿದ್ದಾರೆ.

ಮುಂದಿನ ಪೀಳಿಗೆಗೆ ಇತಿಹಾಸ ಹಾಗೂ ಪರಿಸರವನ್ನು ಉಳಿಸುವ ಈ ಪವಿತ್ರ ಕಾರ್ಯಕ್ಕೆ ವಿಟ್ಲ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬ ಸಾರ್ವಜನಿಕರು, ಅಭಿಮಾನಿಗಳು ಬಂದು ತಮ್ಮ ಸಹಕಾರವನ್ನು ನೀಡಬೇಕಾಗಿದೆ. ಇದು ಕೇವಲ ತನು-ಮನದಿಂದ ಆಗುವ ಕೆಲಸವಲ್ಲ, ಇದರ ಜೊತೆಗೆ ಧನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ನಮ್ಮ ಊರಿನ ಈ ಸುಂದರ ಕೋಟಿ ಕೆರೆಗೆ ಹೊಸ ಜೀವ ಕಳೆ ನೀಡಲು ಉದಾರ ಮನಸ್ಸಿನಿಂದ ಎಲ್ಲರೂ ಧನಸಹಾಯ ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕಾಗಿ “ಕೋಟಿಕೆರೆ ಅಭಿವೃದ್ಧಿ ಬಳಗ” ವಿನಂತಿಸಿದ್ದು, ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಹೇಳಿದೆ. ಈ ಅಭಿವೃದ್ಧಿ ಬಳಗ ಒಂದು ವಾಟ್ಸಾಪ್‌ ಗ್ರೂಫನ್ನು ರಚಿಸಿಕೊಂಡಿದ್ದು, ಇನ್ನಷ್ಟು ಮಾಹಿತಿಗಳು, ದಿನಂಪ್ರತಿಯ ಕೆಲಸಕಾರ್ಯಗಳ ವಿವರಗಳು ಅದರಲ್ಲಿ ಹಾಕಲಾಗುತ್ತಿದ್ದು, ಗ್ರೂಪನ್ನು ಸೇರಲು ಕೆಳಗೆ ಲಿಂಕನ್ನು ನೀಡಲಾಗಿದೆ.

ಕೋಟಿಕೆರೆ ಅಭಿವೃದ್ಧಿ ಬಳಗ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/FfKDbO1gjcF4g11qZIgTzT





Continue Reading

Trending

Copyright © 2025 Deevatige

error: Content is protected !!