Connect with us

Educational

ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ: ಕಠಿಣ ಪ್ರಶ್ನೆಗಳಿಂದ ಕಂಗಾಲಾದ ವಿದ್ಯಾರ್ಥಿಗಳು; ಕೃಪಾಂಕ ನೀಡಲು ಹೆಚ್ಚಿದ ಒತ್ತಾಯ!

Published

on

ರಾಜ್ಯಾದ್ಯಂತ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪಠ್ಯಕ್ರಮದ ಹೊರತಾದ ಮತ್ತು ಅತ್ಯಂತ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ (Grace Marks) ನೀಡಬೇಕೆಂದು ಗಣಿತ ಶಿಕ್ಷಕರ ಸಂಘ ಹಾಗೂ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕೆಯಲ್ಲಿ ಒಟ್ಟು 16 ಅಂಕಗಳ ಪ್ರಶ್ನೆಗಳು ಪಠ್ಯಕ್ರಮದಲ್ಲಿ (Syllabus) ಇರಲಿಲ್ಲ ಮತ್ತು 21 ಅಂಕಗಳ ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು ಎಂದು ಶಿಕ್ಷಕರು ಆರೋಪಿಸಿದ್ದಾರೆ. ನಿಯಮದ ಪ್ರಕಾರ ಪ್ರಶ್ನೆಪತ್ರಿಕೆಯಲ್ಲಿ ಶೇ. 20ರಷ್ಟು ಕಠಿಣ, ಶೇ. 20ರಷ್ಟು ಸುಲಭ ಹಾಗೂ ಶೇ. 40ರಷ್ಟು ಮಧ್ಯಮ ಮಟ್ಟದ ಪ್ರಶ್ನೆಗಳಿರಬೇಕು. ಆದರೆ, ಈ ಬಾರಿ 35ಕ್ಕೂ ಹೆಚ್ಚು ಅಂಕಗಳಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ಮಂಡಳಿಯು ನಿಯಮ ಉಲ್ಲಂಘಿಸಿದೆ ಎನ್ನಲಾಗಿದೆ. ಅನ್ವಯಿಕ ಪ್ರಶ್ನೆಗಳು ಹೆಚ್ಚಾಗಿದ್ದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪಾಸಾಗಲು ಪರದಾಡುವಂತಾಗಿದೆ. ಇನ್ನು 100ಕ್ಕೆ 100 ಅಂಕಗಳ ಗುರಿ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ನಿರಾಸೆಗೊಂಡಿದ್ದಾರೆ. ಬಹುವದೋಕ್ತಿ (1 ಅಂಕ), ನಿರ್ದೇಶಾಂಕ ರೇಖಾಗಣಿತ (2 ಅಂಕ), ವೃತ್ತಗಳು (2 ಅಂಕ), ತ್ರಿಭುಜಗಳು (3 ಅಂಕ), ವರ್ಗ ಸಮೀಕರಣಗಳು (1 ಅಂಕ), ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು (5 ಅಂಕ) ಸೇರಿದಂತೆ ಪಠ್ಯದಲ್ಲಿಲ್ಲದ ಒಟ್ಟು 16 ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಕೈಚೆಲ್ಲಿದ್ದಾರೆ.

ನಾಳೆ ನಿರ್ಣಾಯಕ ಸಭೆ:
ಈ ಸಮಸ್ಯೆಯ ಕುರಿತು ಈಗಾಗಲೇ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಶಿಕ್ಷಕರ ಸಂಘಗಳು ಶಿಕ್ಷಣ ಸಚಿವರಿಗೆ ಮನವಿ ನೀಡಿವೆ.


ಈ ಹಿನ್ನೆಲೆಯಲ್ಲಿ, ಮಾರ್ಚ್ 31ರ ಮಂಗಳವಾರದಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ಬಗ್ಗೆ ಅಥವಾ ಮೌಲ್ಯಮಾಪನದ ವೇಳೆ ರಿಯಾಯಿತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Educational

ದಾನಿಗಳ ನೆರವಿನಿಂದ ಭಾರತಿ ಅನುದಾನಿತ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ-ಪೆನ್ನು ವಿತರಣೆ – ಕನ್ನಡ ಶಾಲೆಗಳ ಉಳಿವಿಗೆ ಅರ್ಥಪೂರ್ಣ ಹೆಜ್ಜೆ

Published

on

ದಾನಿಗಳ ಸಹಕಾರವೇ ಆಧಾರವಾಗಿರುವ ಮುಡಿಪು ಕುರ್ನಾಡಿನ ಭಾರತಿ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಪೆನ್ನು ಹಾಗೂ ಬಳಪ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು.

ಕನ್ನಡ ಜಾಗೃತಿ ಸಮಿತಿ ಸದಸ್ಯರು ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಸಾಮಾಜಿಕ ಟ್ರಸ್ಟ್‌ನ ನೆರವು ಹಾಗೂ ಖ್ಯಾತ ವ್ಲಾಗರ್ ಸಲಾಂ ಸಮ್ಮಿ ಅವರ ಸಹಯೋಗದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿ ವಿತರಿಸಲಾಯಿತು. ದಾನಿಗಳ ಈ ಕೊಡುಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೆಚ್ಚುಗೆ ಪಾತ್ರವಾಯಿತು.

ಅಲೆಮಾರಿ ಮಕ್ಕಳಿಗೆ ವಿಶೇಷ ನೆರವು
ಪ್ರಸ್ತುತ ಶಾಲೆಯಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ ಟೆಂಟ್ ಮನೆಗಳಲ್ಲಿ ವಾಸಿಸುವ ಅಲೆಮಾರಿ ಜನಾಂಗದ 25ಕ್ಕೂ ಹೆಚ್ಚು ಮಕ್ಕಳು ಸೇರಿದ್ದಾರೆ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವಿಶೇಷ ಮಹತ್ವ ಪಡೆದಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಗೊಂಡಿರುವ ಈ ಸಂಸ್ಥೆ ಹಲವು ದಶಕಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾದಾನ ಮಾಡುತ್ತಾ ಬಂದಿದೆ. ಅನುದಾನಿತ ಶಾಲೆಯಾಗಿರುವುದರಿಂದ ಸರ್ಕಾರಿ ಶಾಲೆಗಳಂತೆ ಉಚಿತ ಪುಸ್ತಕ ವ್ಯವಸ್ಥೆ ಲಭ್ಯವಾಗದ ಕಾರಣ, ದಾನಿಗಳ ಸಹಕಾರದಿಂದ ಈ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

ಗಣ್ಯರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಶ್ರೀ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಖ್ಯಾತ ವ್ಲಾಗರ್, ಶಿಕ್ಷಣ ಪ್ರೇಮಿ, ಉದ್ಯಮಿ ಸಲಾಂ ಸಮ್ಮಿ, ಮಾಜಿ ನರೇಗಾ ಒಂಬುಡ್ಸ್‌ಮನ್ ದ.ಕ ಅಧ್ಯಕ್ಷ ಶ್ರೀ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸಂಯೋಜಕ ಚೇತನ್, ಬಾಳೆಪುಣಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಆಯಿಷಾ ಬಾನು, ಸದಸ್ಯೆ ಸೆಮಿಮಾ, ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್, ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಶ್ರೀಮತಿ ಶಕುಂತಲಾ ಶೆಟ್ಟಿ, ಮುಖ್ಯ ಶಿಕ್ಷಕಿ ಶ್ವೇತ ಬಳ್ಳಾಲ್, ಶ್ರೀ ಅಬೂಬಕ್ಕರ್ ಹೂಹಾಕುವ ಕಲ್ಲು, ಪತ್ರಕರ್ತ ವಿ.ಟಿ. ಪ್ರಸಾದ್ ಉಪಸ್ಥಿತರಿದ್ದರು. ಕನ್ನಡ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಅನಿತಾ ಟೀಚರ್ ಧನ್ಯವಾದ ತಿಳಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಶಿಕ್ಷಕ ಹರೀಶ್ ಕುಮಾರ್ ಮಾಡಿದರು.

ಶಿಕ್ಷಣದ ಮೂಲಕ ಸಮಾಜದಲ್ಲಿ ಬದಲಾವಣೆ ತರಬಹುದು ಎಂಬ ನಂಬಿಕೆಯಿಂದ ನಡೆದ ಈ ಕಾರ್ಯಕ್ರಮ ಕನ್ನಡ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಪ್ರೇರಣೆಯಾಗಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.




Continue Reading

Educational

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ

Published

on

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೋಸ್ಟನ್‌ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.

ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ

ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.




Continue Reading

Educational

ಹಿಜಾಬ್ ಮತ್ತು ಸಮವಸ್ತ್ರ ನೀತಿ ಹಿಂಪಡೆದ ರಾಜ್ಯ ಸರ್ಕಾರ

Published

on

ಬೆಂಗಳೂರು: 2022ರಲ್ಲಿ ರಾಜ್ಯದಲ್ಲಿ ಭಾರಿ ವಿವಾದ ಸೃಷ್ಟಿಸಿದ್ದ ಹಿಜಾಬ್ ಮತ್ತು ಸಮವಸ್ತ್ರ ನೀತಿಯನ್ನು ಕರ್ನಾಟಕ ಸರ್ಕಾರವು ಬುಧವಾರ (ಮೇ 13) ಅಧಿಕೃತವಾಗಿ ಹಿಂಪಡೆದಿದೆ. ಸರ್ಕಾರದ ಈ ಹೊಸ ಆದೇಶದ ಮುಖ್ಯಾಂಶಗಳು ಇಲ್ಲಿವೆ:

ಹೊಸ ಆದೇಶದ ಪ್ರಮುಖ ಅಂಶಗಳು:

ಧಾರ್ಮಿಕ ಸಂಕೇತಗಳಿಗೆ ಅನುಮತಿ: ವಿದ್ಯಾರ್ಥಿಗಳು ಸಮವಸ್ತ್ರದ ಜೊತೆಗೆ ಹಿಜಾಬ್, ಜನಿವಾರ ಸೇರಿದಂತೆ ತಮ್ಮ ಧಾರ್ಮಿಕ ಮತ್ತು ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಮುಕ್ತ ಅವಕಾಶ ನೀಡಲಾಗಿದೆ.

ಹಳೆಯ ಆದೇಶ ರದ್ದು: ಫೆಬ್ರವರಿ 5, 2022 ರಂದು ಅಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ವಿವಾದಿತ ಸಮವಸ್ತ್ರ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ನಿರ್ಬಂಧವಿಲ್ಲದ ಪ್ರವೇಶ: ಯಾವುದೇ ವಿದ್ಯಾರ್ಥಿ ಸಾಂಪ್ರದಾಯಿಕ ಸಂಕೇತ ಧರಿಸಿದ್ದಾರೆ ಎಂಬ ಕಾರಣಕ್ಕೆ ಶಾಲಾ ಪ್ರವೇಶ ಅಥವಾ ಪರೀಕ್ಷಾ ಕೊಠಡಿ ಪ್ರವೇಶವನ್ನು ನಿರಾಕರಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸೌಹಾರ್ದತೆಗೆ ಒತ್ತು: “ಇವ ನಮ್ಮವ” ಎಂಬ ಬಸವಣ್ಣನವರ ತತ್ವದಡಿ ಶಿಕ್ಷಣ ಸಂಸ್ಥೆಗಳು ಎಲ್ಲರನ್ನೂ ಒಳಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ಯಾವುದಕ್ಕೆ ಅವಕಾಶವಿದೆ?

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪ್ರಕಾರ, ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಕಡ್ಡಾಯವಾಗಿರುತ್ತದೆ. ಆದರೆ ಅದರೊಂದಿಗೆ: ಹಿಜಾಬ್ (ತಲೆವಸ್ತ್ರ) ಜನಿವಾರ ಶಿವಧಾರ, ರುದ್ರಾಕ್ಷಿ ಪೇಟ ಧರಿಸಲು ಅಭ್ಯಂತರವಿಲ್ಲ

    ಕೇಸರಿ ಶಾಲು ಧಾರ್ಮಿಕ ಅಥವಾ ಸಾಂಪ್ರದಾಯಿಕ ಆಚರಣೆಯ ಭಾಗವಲ್ಲ ಎಂದು ಪರಿಗಣಿಸಿರುವ ಸರ್ಕಾರ, ಅದಕ್ಕೆ ಅನುಮತಿ ನಿರಾಕರಿಸಿದೆ. ಶಾಲೆಯ ಶಿಸ್ತು ಅಥವಾ ಬೋಧನಾ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.




    Continue Reading

    Trending

    Copyright © 2025 Deevatige

    error: Content is protected !!