Connect with us

Educational

ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ: ಕಠಿಣ ಪ್ರಶ್ನೆಗಳಿಂದ ಕಂಗಾಲಾದ ವಿದ್ಯಾರ್ಥಿಗಳು; ಕೃಪಾಂಕ ನೀಡಲು ಹೆಚ್ಚಿದ ಒತ್ತಾಯ!

Published

on

ರಾಜ್ಯಾದ್ಯಂತ ಶನಿವಾರ ನಡೆದ ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಪಠ್ಯಕ್ರಮದ ಹೊರತಾದ ಮತ್ತು ಅತ್ಯಂತ ಕಠಿಣ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ (Grace Marks) ನೀಡಬೇಕೆಂದು ಗಣಿತ ಶಿಕ್ಷಕರ ಸಂಘ ಹಾಗೂ ಪೋಷಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಿಕೆಯಲ್ಲಿ ಒಟ್ಟು 16 ಅಂಕಗಳ ಪ್ರಶ್ನೆಗಳು ಪಠ್ಯಕ್ರಮದಲ್ಲಿ (Syllabus) ಇರಲಿಲ್ಲ ಮತ್ತು 21 ಅಂಕಗಳ ಪ್ರಶ್ನೆಗಳು ಅತ್ಯಂತ ಕಠಿಣವಾಗಿದ್ದವು ಎಂದು ಶಿಕ್ಷಕರು ಆರೋಪಿಸಿದ್ದಾರೆ. ನಿಯಮದ ಪ್ರಕಾರ ಪ್ರಶ್ನೆಪತ್ರಿಕೆಯಲ್ಲಿ ಶೇ. 20ರಷ್ಟು ಕಠಿಣ, ಶೇ. 20ರಷ್ಟು ಸುಲಭ ಹಾಗೂ ಶೇ. 40ರಷ್ಟು ಮಧ್ಯಮ ಮಟ್ಟದ ಪ್ರಶ್ನೆಗಳಿರಬೇಕು. ಆದರೆ, ಈ ಬಾರಿ 35ಕ್ಕೂ ಹೆಚ್ಚು ಅಂಕಗಳಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ಮಂಡಳಿಯು ನಿಯಮ ಉಲ್ಲಂಘಿಸಿದೆ ಎನ್ನಲಾಗಿದೆ. ಅನ್ವಯಿಕ ಪ್ರಶ್ನೆಗಳು ಹೆಚ್ಚಾಗಿದ್ದರಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಪಾಸಾಗಲು ಪರದಾಡುವಂತಾಗಿದೆ. ಇನ್ನು 100ಕ್ಕೆ 100 ಅಂಕಗಳ ಗುರಿ ಹೊಂದಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು ಕೂಡ ನಿರಾಸೆಗೊಂಡಿದ್ದಾರೆ. ಬಹುವದೋಕ್ತಿ (1 ಅಂಕ), ನಿರ್ದೇಶಾಂಕ ರೇಖಾಗಣಿತ (2 ಅಂಕ), ವೃತ್ತಗಳು (2 ಅಂಕ), ತ್ರಿಭುಜಗಳು (3 ಅಂಕ), ವರ್ಗ ಸಮೀಕರಣಗಳು (1 ಅಂಕ), ಮೇಲ್ಮೈ ವಿಸ್ತೀರ್ಣಗಳು ಮತ್ತು ಘನಫಲಗಳು (5 ಅಂಕ) ಸೇರಿದಂತೆ ಪಠ್ಯದಲ್ಲಿಲ್ಲದ ಒಟ್ಟು 16 ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳು ಕೈಚೆಲ್ಲಿದ್ದಾರೆ.

ನಾಳೆ ನಿರ್ಣಾಯಕ ಸಭೆ:
ಈ ಸಮಸ್ಯೆಯ ಕುರಿತು ಈಗಾಗಲೇ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ. ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಶಿಕ್ಷಕರ ಸಂಘಗಳು ಶಿಕ್ಷಣ ಸಚಿವರಿಗೆ ಮನವಿ ನೀಡಿವೆ.


ಈ ಹಿನ್ನೆಲೆಯಲ್ಲಿ, ಮಾರ್ಚ್ 31ರ ಮಂಗಳವಾರದಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವ ಬಗ್ಗೆ ಅಥವಾ ಮೌಲ್ಯಮಾಪನದ ವೇಳೆ ರಿಯಾಯಿತಿ ನೀಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ವಿಟ್ಲ ಪಿಎಂಶ್ರೀ ಸರಕಾರಿ ಪ್ರೌಢಶಾಲೆ ಸಹಶಿಕ್ಷಕಿ ಅಮಾನತು: ಆದೇಶದ ಪ್ರತಿ ಲಭ್ಯ, KAT ಮೊರೆ ಹೋದ ಶಿಕ್ಷಕಿ ಅನ್ನಪೂರ್ಣ

Published

on

ವಿಟ್ಲ / ಮಂಗಳೂರು (ಜುಲೈ 31): ಬಂಟ್ವಾಳ ತಾಲೂಕಿನ ಐತಿಹಾಸಿಕ ಹಾಗೂ ಪ್ರತಿಷ್ಠಿತ ವಿಟ್ಲ ಪಿಎಂಶ್ರೀ ಸರ್ಕಾರಿ ಪ್ರೌಢ ಶಾಲೆಯ (ಆರ್‌ಎಂಎಸ್‌ಎ) ಸಹಶಿಕ್ಷಕಿ ಶ್ರೀಮತಿ ಅನ್ನಪೂರ್ಣ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPI) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತು ಆದೇಶದ ಪ್ರತಿ ಇದೀಗ ಲಭ್ಯವಾಗಿದ್ದು, ಈ ಘಟನೆ ಸ್ಥಳೀಯವಾಗಿ ಹಾಗೂ ಶಾಲಾ ಪೋಷಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಮಾನತು ಆದೇಶದ ಪ್ರಮುಖ ಮುಖ್ಯಾಂಶಗಳು

ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್ ಅವರು ದಿನಾಂಕ 28-07-2026 ರಂದು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.

ದೂರಿನ ಹಿನ್ನೆಲೆ: ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. (06-11-2025) ಹಾಗೂ ಪ್ರೌಢಶಾಲಾ ವಿಭಾಗದ ಉಪಾಧ್ಯಕ್ಷ ಸದಾಶಿವ ಭಟ್ (15-11-2025) ಅವರು ಶಿಕ್ಷಕಿ ವಿರುದ್ಧ ಕರ್ತವ್ಯ ಲೋಪದ ದೂರು ನೀಡಿದ್ದರು.

ವಿಚಾರಣಾ ವರದಿ: ದೂರಿನ ಅನ್ವಯ ನಡೆದ ಪ್ರಾಥಮಿಕ ವಿಚಾರಣೆಯಲ್ಲಿ (ದಿನಾಂಕ: 05-01-2026 ಮತ್ತು 24-02-2026) ಶಿಕ್ಷಕಿ ವಿರುದ್ಧ ಸಲ್ಲಿಕೆಯಾಗಿದ್ದ 11 ಅಂಶಗಳ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ವಿಚಾರಣಾಧಿಕಾರಿಗಳು ವರದಿ ನೀಡಿದ್ದಾರೆ.

ನಿಯಮಾವಳಿ ಉಲ್ಲಂಘನೆ: ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021ರ ಉಪನಿಯಮ 3(i)(ii) ರಂತೆ ಶಿಕ್ಷಕಿ ಅನ್ನಪೂರ್ಣ ಅವರು ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.

ಅಮಾನತು ಕ್ರಮ: ಕರ್ನಾಟಕ ನಾಗರಿಕ ಸೇವಾ ನಿಯಮ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) 2021ರ ಉಪನಿಯಮ 10(1)ಡಿ ರಂತೆ ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಷರತ್ತುಗಳು: ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ನಿಯಮಾನುಸಾರ ಜೀವನಾಂಶ ಭತ್ಯೆಗೆ ಅವರು ಅರ್ಹರಿರುತ್ತಾರೆ.

ನ್ಯಾಯಮಂಡಳಿ (KAT) ಮೊರೆ ಹೋದ ಶಿಕ್ಷಕಿ

ತಮ್ಮ ಮೇಲಿನ ಅಮಾನತು ಆದೇಶವನ್ನು ಪ್ರಶ್ನಿಸಿ ಪುತ್ತೂರು ನಿವಾಸಿಯಾಗಿರುವ ಶಿಕ್ಷಕಿ ಅನ್ನಪೂರ್ಣ ಅವರು ಬೆಂಗಳೂರಿನ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೆಟ್ಟಿಲೇರಿದ್ದಾರೆ. ತಮ್ಮ ಮೇಲಿನ 11 ಆರೋಪಗಳು ಸಂಪೂರ್ಣ ಆಧಾರರಹಿತ ಹಾಗೂ ಅಪವಾದದಿಂದ ಕೂಡಿವೆ ಎಂದು ಅವರು ಮೇಲ್ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಅಮಾನತಾದ ಶಿಕ್ಷಕಿಯು ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಹಾಗೂ ನೇಮಕಾತಿ/ಶಿಸ್ತು ಪ್ರಾಧಿಕಾರಿ ಜಿ.ಎಸ್. ಶಶಿಧರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ (SDMC) ಪ್ರಾಥಮಿಕ ವಿಭಾಗದ ಅಧ್ಯಕ್ಷ ರವಿಶಂಕರ್ ಸಿ. ಮತ್ತು ಇತರರ ವಿರುದ್ಧ ಕಾನೂನು ಸಮರ ಸಾರಿದ್ದಾರೆ.

ಒಳ ರಾಜಕೀಯದ ಆರೋಪ: ಪೋಷಕರಲ್ಲಿ ಅಸಮಾಧಾನ

ಒಂದು ಕಾಲದಲ್ಲಿ ‘ಸರ್ಕಾರಿ ಮಾದರಿ ಶಾಲೆ’ ಎನಿಸಿಕೊಂಡು ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಯಲ್ಲಿ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಏಕಾಏಕಿ ಶಿಕ್ಷಕಿಯ ಅಮಾನತಿನಿಂದ ಪೋಷಕರು ಮತ್ತು ಸಾರ್ವಜನಿಕರ ಕಡೆಯಿಂದ ಪರವಿರೋಧ ಚರ್ಚೆಗಳು ಆರಂಭವಾಗಿದೆ.

ಶಾಲಾ ಅಭಿವೃದ್ಧಿ ಸಮಿತಿಯ ಒಳಗಿನ ಒಳ ರಾಜಕೀಯ ಹಾಗೂ ಸ್ವಯಂಘೋಷಿತ ನಾಯಕರ ಒಣ ಪ್ರತಿಷ್ಠೆಗೆ ನೇರ ನಡೆ-ನುಡಿಯ ಶಿಕ್ಷಕಿ ಬಲಿಯಾಗಿದ್ದಾರೆ ಎಂಬ ಚರ್ಚೆಯೂ ಸ್ಥಳೀಯವಾಗಿ ಕೇಳಿಬರುತ್ತಿದೆ. ಶಿಕ್ಷಕರ ನಡುವಿನ ವೈಮನಸ್ಸಿನಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಹೀಗಾಗಿ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೋಷಕರು ಕೂಡಾ ಆಗ್ರಹಿಸಿದ್ದಾರೆ.

ನ್ಯಾಯಮಂಡಳಿಯಲ್ಲಿ (KAT) ಅರ್ಜಿ ವಿಚಾರಣೆಗೆ ಬರಲಿದ್ದು, ಮುಂದಿನ ತೀರ್ಪಿನ ಮೇಲೆ ಇಲಾಖೆಯ ಮುಂದಿನ ನಡೆ ನಿರ್ಧಾರವಾಗಲಿದೆ.

Continue Reading

Bantawala

ಶಾಲಾ ವಾಹನಗಳ ದಾಖಲೆ ನವೀಕರಣಕ್ಕೆ ಆಡಳಿತ ಮಂಡಳಿಗಳ ನಿರ್ಲಕ್ಷ್ಯ: ಇಲಾಖೆಗಳ ದಿಢೀರ್ ದಾಳಿ, 4 ಬಸ್‌ಗಳು ವಶ!

Published

on

ಬಂಟ್ವಾಳ: ಇತ್ತೀಚೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಮಂದಿರದ ಶಾಲಾ ಬಸ್ ಮೇಲೆ ಮರ ಬಿದ್ದು ಕಂದಮ್ಮನೊಬ್ಬಳು ಜೀವ ಕಳೆದುಕೊಂಡ ದುರಂತದ ಬಳಿಕವೂ ಶಾಲಾ ಆಡಳಿತ ಮಂಡಳಿಗಳು ಎಚ್ಚೆತ್ತುಕೊಂಡಂತಿಲ್ಲ. ಅಂದು ಮರ ಬಿದ್ದು ಜಖಂಗೊಂಡ ಶಾಲಾ ಬಸ್ಸಿನ ಪ್ರಮುಖ ದಾಖಲೆಗಳೆಲ್ಲವೂ ನವೀಕರಣಗೊಳ್ಳದೆ ಕಾಲಾವಧಿ ಮುಗಿದಿತ್ತು. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಾಗಿ, ಮಾಧ್ಯಮಗಳಲ್ಲೂ ವರದಿ ಪ್ರಕಟವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದಾಗ್ಯೂ, ಜಿಲ್ಲೆಯ ಹಲವು ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವ ತಮ್ಮ ಬೇಜವಾಬ್ದಾರಿತನವನ್ನು ಮುಂದುವರಿಸಿರುವುದು ಬೆಳಗಿನ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬಿ.ಸಿ. ರೋಡ್‌ನಲ್ಲಿ ದಿಢೀರ್ ತಪಾಸಣೆ: 4 ಶಾಲಾ ಬಸ್‌ಗಳು ಜಪ್ತಿ

ಸೋಮವಾರ ಬೆಳ್ಳಂಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಬಿ. ಸಿ. ರೋಡ್ ವೃತ್ತದ ಬಳಿ ಬಂಟ್ವಾಳ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು. ತಪಾಸಣೆ ವೇಳೆ ಅಗತ್ಯ ದಾಖಲೆಗಳಿಲ್ಲದೆ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಮಂಗಳೂರಿನ ಬರಾಕಾ ವಿದ್ಯಾಸಂಸ್ಥೆಗೆ ಸೇರಿದ 3 ಶಾಲಾ ಬಸ್‌ಗಳು ಹಾಗೂ ಬಂಟ್ವಾಳ ಬಡಕಬೈಲು ಮಜ್ಲಿಸ್ ವಿದ್ಯಾಸಂಸ್ಥೆಯ 1 ಬಸ್ ಸೇರಿದಂತೆ ಒಟ್ಟು 4 ಶಾಲಾ ವಾಹನಗಳನ್ನು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ವಿಟ್ಲದಲ್ಲಿ ಬಂಟ್ವಾಳ ಸಾರಿಗೆ ಇಲಾಖೆ ಅಧಿಕಾರಿ ಚರಣ್ ನೇತೃತ್ವದ ತಂಡ ಇದೇ ರೀತಿ ಕಾರ್ಯಾಚರಣೆ ನಡೆಸಿ, ದಾಖಲೆಗಳಿಲ್ಲದ 4 ಮಿನಿ ಬಸ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿತ್ತು. ಆದರೂ ಆಡಳಿತ ಮಂಡಳಿಗಳು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ.

ಆಡಳಿತ ಮಂಡಳಿಗಳ ಸುಲಿಗೆ ಕೋರತನ: ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ?

ವಿದ್ಯಾರ್ಜನೆಯ ಸೋಗಿನಲ್ಲಿ ಎಲ್ಲೆಂದರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಶಾಲಾ ಬಸ್ ಸೌಲಭ್ಯ ನೀಡುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಆಡಳಿತ ಮಂಡಳಿಗಳ ನೈಜ ಬಣ್ಣ ಈಗ ಬಯಲಾಗಿದೆ. ವಿದ್ಯಾರ್ಥಿಗಳಿಂದ ಪ್ರತೀ ತಿಂಗಳು ಸಾರಿಗೆ ವೆಚ್ಚದ ಹೆಸರಿನಲ್ಲಿ ನಿರ್ದಿಷ್ಟ ಮೊತ್ತವನ್ನು ವಸೂಲಿ ಮಾಡುವ ಆಡಳಿತ ಮಂಡಳಿಗಳಿಗೆ, ವಾಹನಗಳ ರಸ್ತೆ ತೆರಿಗೆ, ಪರವಾನಗಿ (Permit), ವಿಮಾ ಪತ್ರ (Insurance), ಎಫ್‌ಸಿ (Fitness Certificate) ಹಾಗೂ ಚಾಲಕರ ಚಾಲನಾ ಪರವಾನಗಿಯನ್ನು ಸರಿಯಾಗಿಡುವುದು ಜವಾಬ್ದಾರಿಯಲ್ಲವೇ? ಹಣ ಸುಲಿಗೆ ಮಾಡುವುದರಲ್ಲಷ್ಟೇ ಗಮನ ಹರಿಸುವ ಸಂಸ್ಥೆಗಳು ಮಕ್ಕಳ ಭವಿಷ್ಯ ಹಾಗೂ ಜೀವದ ಜೊತೆ ಆಟವಾಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶೇಷ ಮನವಿ: ಜಿಲ್ಲೆಯಾದ್ಯಂತ ಪ್ರತಿಯೊಂದು ಶಾಲಾ ವಾಹನ ತಪಾಸಣೆಗೆ ಆದೇಶಿಸಿ

ಸಾರಿಗೆ ಸಚಿವರು, ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಮೇಲಾಧಿಕಾರಿಗಳಲ್ಲಿ ಮನವಿ: ಕೇವಲ ದುರಂತಗಳು ಸಂಭವಿಸಿದಾಗ ಅಥವಾ ಬಿಡಿಬಿಡಿ ಕಾರ್ಯಾಚರಣೆ ನಡೆಸಿದರೆ ಸಾಲದು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಾರ್ಯಾಚರಿಸುವ ಪ್ರತಿಯೊಂದು ಶಾಲಾ-ಕಾಲೇಜು ವಾಹನಗಳ ದಾಖಲೆಗಳು, ತಾಂತ್ರಿಕ ಸ್ಥಿತಿಗತಿ ಹಾಗೂ ಚಾಲಕರ ಅರ್ಹತೆಯನ್ನು ಸಮಗ್ರವಾಗಿ ತಪಾಸಣೆ ಮಾಡಲು ಸಂಬಂಧಪಟ್ಟ ಸಾರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ತಕ್ಷಣವೇ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ.

ನಿಯಮ ಉಲ್ಲಂಘಿಸುವ ಮತ್ತು ಸೂಕ್ತ ದಾಖಲೆಗಳಿಲ್ಲದೆ ಮಕ್ಕಳನ್ನು ಕರೆದೊಯ್ಯುವ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಕ್ಕ ಶಾಸ್ತಿ ಮಾಡುವ ಮೂಲಕ ಬಿಸಿ ಮುಟ್ಟಿಸಬೇಕಿದೆ. ಇನ್ನು ಮುಂದೆ ಯಾವುದೇ ಮಗುವಿನ ಜೀವ ಈ ರೀತಿಯ ನಿರ್ಲಕ್ಷ್ಯಕ್ಕೆ ಬಲಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಇಲಾಖೆ ಹಾಗೂ ಸರ್ಕಾರದ ಆದ್ಯ ಕರ್ತವ್ಯವಾಗಿದೆ

Continue Reading

Educational

ನೀಟ್ ಅಕ್ರಮ ವಿರುದ್ಧ ಯುವಶಕ್ತಿಗೆ ಅಭೂತಪೂರ್ವ ಜಯ: ಶಿಕ್ಷಣ ಸಚಿವ ರಾಜೀನಾಮೆ, 39 ದಿನಗಳ CJP ಪ್ರತಿಭಟನೆ ಅಂತ್ಯ!

Published

on

ಹೊಸದಿಲ್ಲಿ: ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶೈಕ್ಷಣಿಕ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಯುವಜನತೆ ನಡೆಸುತ್ತಿದ್ದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ದಿಢೀರ್ ರಾಜೀನಾಮೆ ಹಾಗೂ ಸರ್ಕಾರದೊಂದಿಗೆ ನಡೆದ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 39 ದಿನಗಳಿಂದ ನಡೆಯುತ್ತಿದ್ದ ಧರಣಿ ಸತ್ಯಾಗ್ರಹವನ್ನು ಶನಿವಾರ ಅಧಿಕೃತವಾಗಿ ಹಿಂಪಡೆಯಲಾಗಿದೆ.

ಹೋರಾಟ ಹಿಂಪಡೆಯಲು ಗುಪ್ತಚರ ವರದಿ ಹಿನ್ನೆಲೆ

CJP ನಡೆಸುತ್ತಿದ್ದ ಸುದೀರ್ಘ ಹೋರಾಟವನ್ನು ಸಮಾಜಘಾತುಕ ಶಕ್ತಿಗಳು ಹೈಜಾಕ್ ಮಾಡಿ, ದೇಶಾದ್ಯಂತ ಹಿಂಸಾಚಾರಕ್ಕೆ ಸಂಚು ರೂಪಿಸಿವೆ ಎಂಬ ಗುಪ್ತಚರ ವರದಿಯ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಸಚಿವರು ರಾಜೀನಾಮೆ ನೀಡದಿದ್ದರೆ ಸಂಸತ್ ಚಲೋ ತೀವ್ರಗೊಂಡು, ಪಟ್ಟಭದ್ರಾ ಹಿತಾಸಕ್ತಿಗಳು ಹಿಂಸೆಗೆ ಪ್ರಚೋದನೆ ನೀಡುವ ಅಪಾಯವಿತ್ತು. ಹೀಗಾಗಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ, ಪ್ರತಿಭಟನಾಕಾರರ ಬೇಡಿಕೆಗಳನ್ನು ಒಪ್ಪಿಕೊಂಡು ಹೋರಾಟವನ್ನು ಸುಖಾಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ.

ಸರ್ಕಾರದ ಜತೆ ಯಶಸ್ವಿ ಮಾತುಕತೆ: ಬೇಡಿಕೆಗಳಿಗೆ ಸಮ್ಮತಿ

ಶನಿವಾರ ಮಧ್ಯಾಹ್ನ ಶಿಕ್ಷಣ ಸಚಿವರ ರಾಜೀನಾಮೆ ಪ್ರಕಟವಾದ ಬೆನ್ನಲ್ಲೇ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು CJP ನಿಯೋಗದೊಂದಿಗೆ ಮೂರನೇ ಸುತ್ತಿನ ಸುದೀರ್ಘ ಮಾತುಕತೆ ನಡೆಸಿದರು. ಈ ವೇಳೆ ಸರ್ಕಾರ ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಿಗೆ ಅಸ್ತು ಎಂದಿದೆ:

ಆತ್ಮಹತ್ಯೆ ಶರಣಾದ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ: ನೀಟ್ ಗೊಂದಲಗಳಿಂದ ಮನನೊಂದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಸಮ್ಮತಿಸಿದೆ.

ಪ್ರಕರಣಗಳ ವಾಪಸ್: ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹಾಗೂ ಹೋರಾಟಗಾರರ ವಿರುದ್ಧ ಪೊಲೀಸರು ದಾಖಲಿಸಿದ್ದ ಎಲ್ಲಾ ಪ್ರಕರಣಗಳನ್ನು ಕೈಬಿಡಲು ನಿರ್ಧರಿಸಲಾಗಿದೆ.

ಶೈಕ್ಷಣಿಕ ಸುಧಾರಣೆ: CJP ಮಂಡಿಸಿದ 5 ಅಂಶಗಳ ಶೈಕ್ಷಣಿಕ ಸುಧಾರಣಾ ಪ್ರಸ್ತಾವನೆಗಳನ್ನು ಪರಿಗಣಿಸುವುದಾಗಿ ಕೇಂದ್ರ ಭರವಸೆ ನೀಡಿದೆ. ಮುಂದಿನ ಒಂದು ತಿಂಗಳಲ್ಲಿ ಶೈಕ್ಷಣಿಕ ಬದಲಾವಣೆಗಳ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.

“ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಪಿಕ್ಚರ್ ಬಾಕಿ ಇದೆ”: CJP ನಾಯಕರ ಎಚ್ಚರಿಕೆ

ಪ್ರತಿಭಟನೆ ಅಂತ್ಯಗೊಳಿಸಿದ ಬಳಿಕ ಮಾತನಾಡಿದ CJP ವಕ್ತಾರ ಸೌರವ್ ದಾಸ್:

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆಯನ್ನು ತರುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಅಷ್ಟೇ. ಇದು ಕೇವಲ ಟ್ರೈಲರ್, ಅಸಲಿ ಪಿಕ್ಚರ್ ಇನ್ನು ಬಾಕಿ ಇದೆ. ದೇಶದ ಯುವಜನರು ಜಾಗೃತರಾಗಿದ್ದಾರೆ. ನಾವು ದೇಶಾದ್ಯಂತ ಪ್ರವಾಸ ಮಾಡಿ, ಯುವಕರ ಧ್ವನಾಲೇಖನ ಗ್ರಹಿಸಿ, ಅವರಿಗಾಗಿ ಉತ್ತಮ ನೀತಿಗಳನ್ನು ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ವ್ಯವಸ್ಥೆಯಲ್ಲಿ ಸುಧಾರಣೆ ಕಾಣದಿದ್ದರೆ ಯುವಜನರು ಮತ್ತೆ ಬೀದಿಗಿಳಿಯಲಿದ್ದಾರೆ.”

ಇದೇ ವೇಳೆ, ದೇಶದಲ್ಲಿ ಧಾರ್ಮಿಕ ಧ್ರುವೀಕರಣದ ಆಡಳಿತವನ್ನು ತಡೆಯುವಂತೆ ಆಗ್ರಹಿಸಿದ ಅವರು, “ಮುಸ್ಲಿಂ ಮತ್ತು ಕ್ರೈಸ್ತ ವಿರೋಧಿ ರಾಜಕೀಯವನ್ನು ನಿಲ್ಲಿಸಿ. ಪ್ರತಿಯೊಂದು ಸಮುದಾಯದ ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದಾಗ ಮಾತ್ರ ನಿಮಗೆ ಜನರ ವಿಶ್ವಾಸ ಸಿಗುತ್ತದೆ” ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

CJP ಮತ್ತೊಬ್ಬ ವಕ್ತಾರ ಅಶುತೋಷ್ ರಂಕಾ ಮಾತನಾಡಿ, “ಯುವಕರು ತಮ್ಮ ಹಕ್ಕುಗಳಿಗಾಗಿ ಸುದೀರ್ಘ ಹೋರಾಟ ನಡೆಸಿದ್ದಾರೆ. ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಹೋರಾಟದ ಹಾದಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳ ನೋವು ನಮ್ಮೊಂದಿಗಿದೆ. CJP ದೇಶಾದ್ಯಂತ ಯುವಜನರ ಧ್ವನಿಯಾಗಿ ಕೆಲಸ ಮುಂದುವರಿಸಲಿದೆ” ಎಂದರು.

ರಾಜಕೀಯ ರಣತಂತ್ರ ಬದಲಾವಣೆ & ‘ಪೇಪರ್ ಲೀಕ್ ತಡೆ ವಿಧೇಯಕ’ಕ್ಕೆ ಹಾದಿ ಸುಗಮ

CJP ಹೋರಾಟದ ಯಶಸ್ಸು ಸಂಸತ್ತಿನ ಬಿಕ್ಕಟ್ಟು ಶಮನಕ್ಕೂ ದಾರಿ ಮಾಡಿಕೊಟ್ಟಿದೆ. ಸೋಮವಾರ ಪುನಾರಂಭಗೊಳ್ಳಲಿರುವ ಸಂಸತ್ ಅಧಿವೇಶನದಲ್ಲಿ ಕಠಿಣ ನಿಬಂಧನೆಗಳನ್ನೊಳಗೊಂಡ ‘ಪ್ರಶ್ನೆಪತ್ರಿಕೆ ಸೋರಿಕೆ ತಡೆ ವಿಧೇಯಕ’ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಈ ವಿಧೇಯಕದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಹಾಗೂ 10 ಕೋಟಿ ರೂಪಾಯಿ ದಂಡ ವಿಧಿಸುವ ಪ್ರಸ್ತಾವನೆಯಿದ್ದು, ಈವರೆಗೆ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದ ವಿಪಕ್ಷಗಳಿಗೂ (INDIA ಮೈತ್ರಿಕೂಟ) ಈಗ ವಿಧೇಯಕವನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ.

“ಸತ್ಯಕ್ಕೆ ಸಿಕ್ಕ ಜಯ, ಮೋದಿಯ ಹಠಮಾರಿತನಕ್ಕೆ ಸೋಲು”

“ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ದೇಶಾದ್ಯಂತ ಬೀದಿಗಿಳಿದು ಧ್ವನಿ ಎತ್ತಿದ ಲಕ್ಷಾಂತರ ಯುವಕರ ಜಯವಿದು. ಸತ್ಯಕ್ಕೆ ಕೊನೆಗೂ ಗೆಲುವಾಗಿದೆ, ಸರ್ಕಾರದ ಹಠಮಾರಿತನಕ್ಕೆ ಹಿನ್ನಡೆಯಾಗಿದೆ.”ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಸಾಂಪ್ರದಾಯಿಕ ವಿದ್ಯಾರ್ಥಿ ಸಂಘಟನೆಗಳಿಗೆ ಎಚ್ಚರಿಕೆಯ ಕರೆ

ಯಾವುದೇ ಪ್ರಭಾವಿ ರಾಜಕೀಯ ಪಕ್ಷದ ಬೆಂಬಲವಿಲ್ಲದೆ ‘Gen-Z’ (ಹೊಸ ತಲೆಮಾರಿನ) ಯುವಸಮುದಾಯವೇ ಸಂಘಟಿತವಾಗಿ ಹೋರಾಡಿ ಸರ್ಕಾರವನ್ನು ಮಣಿಸಿದ್ದು, ಸಾಂಪ್ರದಾಯಿಕ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳಿಗೆ ಹೊಸ ಸವಾಲು ಮತ್ತು ಆತಂಕವನ್ನು ಸೃಷ್ಟಿಸಿದೆ. ಯುವಶಕ್ತಿ ಒಂದಾದರೆ ಎಂತಹ ವ್ಯವಸ್ಥೆಯನ್ನಾದರೂ ಸರಿದಾರಿಗೆ ತರಬಹುದು ಎಂಬುದಕ್ಕೆ CJP ನಡೆಸಿದ ಈ ಹೋರಾಟ ಪ್ರತ್ಯಕ್ಷ ಸಾಕ್ಷಿಯಾಗಿದೆ

Continue Reading

Trending

Copyright © 2025 Deevatige

error: Content is protected !!