Connect with us

Agriculture

50ವರ್ಷಗಳ ಹಿಂದಿನ ಓಬಿರಾಯನ ಕಾಲದ ಕಿಂಡಿ ಅಣೆಕಟ್ಟು.. ಜನನಾಯಕರಿಂದ ನಿರ್ಲಕ್ಷ್ಯಕ್ಕೊಳಗಾದ ಕೃಷಿಕರ ಜೀವನಾಡಿ

Published

on

ಪುತ್ತೂರು : ಒಳಮೊಗ್ರು ಗ್ರಾಮ ಪಂ.ವ್ಯಾಪ್ತಿಯ ಕೈಕಾರ-ಎರ್ಮೆಟ್ಟಿ ಸಂಪರ್ಕದ ಹೊಳೆಯಲ್ಲಿ 1975ರಲ್ಲಿ ಕೃಷಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟು ಜನನಾಯಕರ ನಿರ್ಲಕ್ಷ್ಯದಿಂದಾಗಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.

ಕೆಲ ವರ್ಷಗಳ ಕಾಲ ಒಳಮೊಗ್ರು ಗ್ರಾಮ ಪಂಚಾಯತ್ ನಿರ್ವಹಣಾ ಉಸ್ತುವಾರಿ ನೋಡಿಕೊಂಡಿತ್ತು.
1990ರಿಂದ ಪಂಚಾಯತ್ ಕೈ ಚೆಲ್ಲಿದ ಕಾರಣ ಸ್ಥಳೀಯ ಬಡ ಕೃಷಿಕರೇ ಅನಿವಾರ್ಯವಾಗಿ ಮರಳು ಗೋಣಿಗಳ ಬಳಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುತ್ತಿದ್ದರು.


ಆ ಬಳಿಕ 2006ರ ತನಕ ಕಿಂಡಿ ಅಣೆಕಟ್ಟಿಲ್ಲದೇ ಬಡ ಕೃಷಿಕರು ಬೇಸಿಗೆ ಕಾಲದಲ್ಲಿ ಹೈರಾಣರಾಗಿದ್ದರು.
ಕಳೆದ ಆರು ವರ್ಷಗಳಿಂದ ಮತ್ತೆ ಮರಳು ತುಂಬಿದ ಗೋಣಿಗಳ ಸಹಾಯದಿಂದ ಸ್ಥಳೀಯರೇ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾದರು. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಮರಳು ಗೋಣಿಗಳ ರೂಢಿ ಮಾಡುವುದೇ ದೊಡ್ಡ ಕೃಷಿಕರಿಗೆ ದೊಡ್ಡ ಸವಾಲಾಗಿತ್ತು.

ಸ್ಪಂದಿಸದ ಜನನಾಯಕರು.
ಅಣೆಕಟ್ಟು ನಿರ್ವಹಣೆ ಮಾಡಿಸುವಂತೆ ಇಪ್ಪತ್ತೈದಕ್ಕೂ ಹೆಚ್ಚು ಬಡ ಕೃಷಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಪುಢಾರಿಗಳ ಕಿವಿಗೆ ಬಡವರ ನೋವು ಕೇಳಿಸಿಲ್ಲವಾಗಿತ್ತು.

ಚುನಾವಣಾ ಸಂದರ್ಭದಲ್ಲಿ ಮತದಾರರ ಮನೆ ಬಾಗಿಲಿಗೆ ಬಂದು ಕಿಂಡಿ ಅಣೆಕಟ್ಟು ದುರಸ್ತಿ ಮಾಡಿಸುವ ಭರವಸೆ ನೀಡಿದ್ದ ಪುಡಾರಿಗಳು ಚುನಾವಣೆ ಕಳೆದ ಬಳಿಕ ದುರಸ್ತಿ ಮಾಡಿಸುವುದು ಬಿಡಿ ಅತ್ತ ಕಡೆ ಅಪ್ಪಿತಪ್ಪಿಯೂ ತಲೆ ಹಾಕಿ ಮಲಗಿಲ್ಲ ಎಂಬುದು ಬಡ ಕೃಷಿಕರ ನೋವಿನ ಮಾತಾಗಿದೆ.

ಸಡ್ಡು ಹೊಡೆದ ಸ್ವಾವಲಂಬಿ ಕೃಷಿಕರು..
ಜನಪ್ರತಿನಿಧಿಗಳ/ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಮನನೊಂದ ಇಪ್ಪತೈದಕ್ಕೂ ಹೆಚ್ಚು ಅಣೆಕಟ್ಟು ನೀರಿನ ಫಲಾನುಭವಿಗಳು ಸ್ಥಳೀಯ ನಿವಾಸಿ ನೀರ್ಪಾಡಿ ಸತೀಶ್ ರೈ ನೇತೃತ್ವದಲ್ಲಿ ಒಂದೆಡೆ ಸೇರಿ ಮಾತುಕತೆ ನಡೆಸಿದರು.


ಅಣೆಕಟ್ಟು ನೀರಿನ ಫಲಾನುಭವಿ ಕೃಷಿಕರ ಸಹಕಾರದಲ್ಲಿ ಸುಮಾರು 5ಲಕ್ಷ ವೆಚ್ಚದಲ್ಲಿ ಮರದ ಹಲಗೆ ಉಪಯೋಗಿಸಿ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವುದೆಂದು ತೀರ್ಮಾನಿಸಿದರು. ಅದರಂತೆ ಇದೀಗ ಕಾರ್ಯರೂಪಕ್ಕೆ ತಂದಿದ್ದು ಭರದಿಂದ ಕೆಲಸ-ಕಾರ್ಯಗಳು ನಡೆಯುತ್ತಿವೆ.


ನಿಷ್ಕ್ರಿಯ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಗೆ ಸಡ್ಡು ಹೊಡೆದ ಕೃಷಿಕರೇ ಇದೀಗ ಜೀವನಾಡಿಯಾದ ಕಿಂಡಿ ಅಣೆಕಟ್ಟು ನಿರ್ಮಿಸುತ್ತಿರುವುದು ಪೊಳ್ಳು ಭರವಸೆ ನೀಡುವ ಪುಢಾರಿಗಳಿಗೆ, ಬಾಲಂಗೋಚಿಯಾಗಿರುವ ಅಧಿಕಾರಿಗಳಿಗೆ ನಾಚಿಕೆಯಿಲ್ಲವೇ?


ಜನಪ್ರಿಯ ಶಾಸಕರು ಕೃಷಿಕರ ನೋವಿಗೆ ಸ್ಪಂದಿಸಬೇಕಾಗಿದೆ.
ರಾಜಕೀಯಕ್ಕೆ ಪ್ರಥಮ ಬಾರಿಗೆ ಧುಮುಕಿ ಅಲ್ಪ ಅವಧಿಯಲ್ಲೇ ತನ್ನ ಕ್ಷೇತ್ರದ ಜನರ ನೋವು ಅರ್ಥೈಸಿಕೊಂಡು ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಾ ಶಹಬ್ಬಾಸ್ ಗಿಟ್ಟಿಸಿಕೊಳ್ಳುತ್ತಿರುವ ಶಾಸಕ ಅಶೋಕ್ ರೈಯವರು ತಕ್ಷಣವೇ ಕೃಷಿಕರ ಜೀವನಾಡಿಯಾಗಿರುವ ಎರ್ಮೆಟ್ಟಿ ಹೊಳೆಯ ಕಿಂಡಿ ಅಣೆಕಟ್ಟು ಹಾಗೂ ತಡೆಗೋಡೆಗಳ ಬಗ್ಗೆ ಸ್ಪಂದಿಸಬೇಕಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Agriculture

ಕಸ್ತೂರಿ ರಂಗನ್ ವರದಿ 7ನೇ ಕರಡು ಅಧಿಸೂಚನೆ ವಿರೋಧಿಸಿ ಕುಟ್ರುಪ್ಪಾಡಿ, ಸುಬ್ರಹ್ಮಣ್ಯದಲ್ಲಿ ಬೃಹತ್ ಪ್ರತಿಭಟನೆ

Published

on

ಪುತ್ತೂರು: ಕಸ್ತೂರಿ ರಂಗನ್ ವರದಿಯ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಮಂಗಳವಾರ ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತ್ಯೇಕ ಪ್ರತಿಭಟನೆಗಳು ನಡೆದವು.

ಕುಟ್ರುಪ್ಪಾಡಿ ಗ್ರಾಮ ಪಂಚಾಯಿತಿ ಎದುರು ಆಕ್ರೋಶ

ನೂರಾರು ಸಂಖ್ಯೆಯಲ್ಲಿ ನೆರೆದ ಸಾರ್ವಜನಿಕರು ಹಾಗೂ ರೈತರು ಪ್ರತಿಭಟನೆ ನಡೆಸಿ, ಬಳಿಕ ಕುಟ್ರುಪ್ಪಾಡಿ ಗ್ರಾಮ ಅಭಿವೃದ್ಧಿ ಅಧಿಕಾರಿ (PDO) ಗೋಪಿನಾಥ್ ಅವರ ಮುಖಾಂತರ ಸರ್ಕಾರಕ್ಕೆ ಆಕ್ಷೇಪಣಾ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಮಾತನಾಡಿ, “ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಬಾಧಿತ ಪ್ರದೇಶದ ರೈತರು ಸರ್ವನಾಶವಾಗಲಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ಈ ರೈತ ವಿರೋಧಿ ನೀತಿಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು,” ಎಂದು ಆಗ್ರಹಿಸಿದರು.

ಈ ಹಿಂದೆ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರ ಬಾಧಿತ ಗ್ರಾಮಗಳಲ್ಲಿ ವಿಶೇಷ ಗ್ರಾಮಸಭೆ ಕರೆದು ಜನಾಭಿಪ್ರಾಯ ಸಂಗ್ರಹಿಸಿ, ವರದಿ ಅನುಷ್ಠಾನ ಮಾಡಬಾರದೆಂದು ನಿರ್ಣಯಿಸಿತ್ತು. ಆದರೂ ಈಗ 7ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರ ಉಪಸ್ಥಿತಿ: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಮಲೆನಾಡು ಜನ ಹಿತ ರಕ್ಷಣಾ ಸಮಿತಿಯ ಮುಖಂಡ ಯೋಗೇಂದ್ರ ಬನಾರಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪ್ರಮುಖರಾದ ಜನಾರ್ದನ ಗೌಡ ಪಣೆಮಜಲು, ಟಿ.ಎಂ. ಮ್ಯಾಥ್ಯು ಮತ್ತಿತರರು ಮಾತನಾಡಿದರು.

ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ, ನ್ಯಾಯವಾದಿಗಳಾದ ಶಿವಪ್ರಸಾದ್ ಪುತ್ತಿ, ರಾಮಚಂದ್ರ ದೇರಾಜೆ, ಪ್ರಮುಖರಾದ ರಮಾನಂದ ಎಣ್ಣೆಮಜಲು, ಸತೀಶ್ ಶೆಟ್ಟಿ ಬೀರುಕ್ಕು, ಶಶಾಂಕ್ ಗೋಖಲೆ, ಚಿದಾನಂದ ಕೊಡೆಂಕಿರಿ, ದೇವಯ್ಯ ಗೌಡ ಪನ್ಯಾಡಿ, ಲೀಲಾವತಿ ಪನ್ಯಾಡಿ, ಜಾನಕಿ ಪಟ್ಟೆ, ಅಚ್ಯುತ ಗೌಡ ದೇರಾಜೆ, ಮಹಮ್ಮದಾಲಿ, ಡಿ.ಬಿ. ಮೋಹನ ಗೌಡ ದೇರಾಜೆ ಹಾಗೂ ಧನಂಜಯ ಕೊಡಂಗೆ ಮತ್ತಿತರರು ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಧರಣಿ

ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಕಿಶೋರ್ ಶಿರಾಡಿ:

“ಕಸ್ತೂರಿ ರಂಗನ್ ವರದಿಯ ಹೆಸರಿನಲ್ಲಿ ಅಧಿಕಾರಿಗಳು ರೈತರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಖಂಡನೀಯ. ರೈತರ ಹಕ್ಕುಪತ್ರ ರದ್ದತಿ ಹಾಗೂ ಒತ್ತುವರಿ ಕುರಿತು ಅಧಿಕಾರಿಗಳು ಮಾಧ್ಯಮಗಳಿಗೆ ಬಹಿರಂಗವಾಗಿ ಮಾಹಿತಿ ನೀಡಬೇಕು,” ಎಂದು ಒತ್ತಾಯಿಸಿದರು.

“ನಾವು 2013ರಿಂದ ನಿರಂತರವಾಗಿ ಪಕ್ಷಾತೀತ ಹಾಗೂ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಅದರ ಪ್ರತಿಫಲವಾಗಿ ಬಾಧಿತ ಪ್ರದೇಶದ ರೈತರ ಜೀವನಾಡಿ ಉಳಿದಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗಬೇಕು. ಸುಮಾರು 100 ಗ್ರಾಮಗಳು ಇದರಿಂದ ಬಾಧಿತವಾಗುವ ಸಾಧ್ಯತೆಯಿದ್ದು, ಜನರಿಗೆ ಮಾರಕವಾಗುವ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು,” ಎಂದರು.

ನ್ಯಾಯಾಲಯದ ಆದೇಶಗಳ ಜೊತೆಗೆ ಅಂತಿಮವಾಗಿ ಸರ್ಕಾರದ ಸಂಪುಟದ ನಿರ್ಧಾರವೇ ಪ್ರಮುಖವಾಗಿದ್ದು, ಸರ್ಕಾರ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ಜನರ ಅಭಿಪ್ರಾಯ ಪಡೆಯದೆ ವರದಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸ್ಥಳೀಯ ರೈತರು, ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Continue Reading

Agriculture

ಐತೂರು ರಬ್ಬರ್ ತೋಟದಲ್ಲಿ 6 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಕಡಬದ ಜನವಸತಿ ಪ್ರದೇಶದಲ್ಲಿ ಆತಂಕ

Published

on

ಕಡಬ: ಬಳ್ಪ ಪರಿಸರದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಐತೂರು ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಕೊರಿಯರ್ ಸಮೀಪದ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿದೆ. ಇದರಿಂದಾಗಿ ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಭೀತಿ ವ್ಯಕ್ತವಾಗಿದೆ.

ಒಂದು ಮರಿ ಆನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಈ ಹಿಂಡಿನಲ್ಲಿರುವುದು ಕಂಡುಬಂದಿದೆ. ಆರಂಭದಲ್ಲಿ ಬಳ್ಪ ಗ್ರಾಮದ ಪಠೋಳಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಪಠೋಳಿಯಿಂದ ಕಲ್ಕಲ್ ಭಾಗದತ್ತ ತೆರಳಿದ ಆನೆಗಳು, ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಹಾನಿಯುಂಟು ಮಾಡಿದ್ದವು.

ಅಲ್ಲಿಂದ ಮುಂದೆ ಸಾಗಿದ ಆನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿ, ರಾತ್ರಿ ನದಿಯನ್ನು ದಾಟಿ ಐತೂರು ಗ್ರಾಮದ ಏನ್ ಕೂಪ್ ಕ್ವಾಟರ್ಸ್ ಹಾಗೂ ಓಟಕಜೆ ಪರಿಸರದಲ್ಲಿ ಸಮೀಪವಿರುವ ಅರಣ್ಯ ಇಲಾಖೆಯ ರಬ್ಬರ್ ತೋಟಕ್ಕೆ ಪ್ರವೇಶಿಸಿ ಠಿಕಾಣಿ ಹೂಡಿವೆ.

ಸ್ಥಳೀಯರಲ್ಲಿ ಆತಂಕ – ಕಾಡಿಗೆ ಹಿಮ್ಮೆಟ್ಟಿಸಲು ಕಾರ್ಯಾಚರಣೆ: ಜನವಸತಿ ಹಾಗೂ ಕೃಷಿ ತೋಟಗಳಿರುವ ಪ್ರದೇಶದಲ್ಲೇ ಕಾಡಾನೆಗಳು ಬೀಡುಬಿಟ್ಟಿರುವುದರಿಂದ ತೋಟದ ಕೆಲಸಗಳಿಗೆ ತೆರಳುವ ಕಾರ್ಮಿಕರು, ಕೃಷಿಕರು ಹಾಗೂ ಶಾಲಾ ಮಕ್ಕಳು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಂಟಿಯಾಗಿ ಸಂಚರಿಸದಂತೆ ಹಾಗೂ ಸೂಕ್ತ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಪರಸ್ಪರ ಸಂದೇಶ ರವಾನಿಸುತ್ತಿದ್ದಾರೆ.

ವಿಷಯ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈಟಿಎಫ್ (ETF) ಪಡೆ ಸ್ಥಳಕ್ಕೆ ಆಗಮಿಸಿದ್ದು, ಕಾಡಾನೆಗಳನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಹಿಮ್ಮೆಟ್ಟಿಸಲು ಅಗತ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ.

Continue Reading

Agriculture

ಉಚಿತ ಮರ ಹತ್ತುವ ಏಣಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ: ‘ನೀರಾ ಅಮೃತ’ ಯೋಜನೆಯಡಿ ಉಚಿತ ಏಣಿ, ದೋಟಿ ವಿತರಣೆಗೆ ಅರ್ಜಿ ಆಹ್ವಾನ – ನಾಳೆಯೇ ಕೊನೆಯ ದಿನ!

Published

on

ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (ಕೇಂದ್ರ ಕಚೇರಿ: ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣ, ಕಲ್ಲಕಟ್ಟ, ಪುತ್ತೂರು ರಸ್ತೆ, ವಿಟ್ಲ) ವತಿಯಿಂದ ಕರ್ನಾಟಕ ರಾಜ್ಯ ದಕ್ಷಿಣ ವಲಯದ ರೈತ ಸಾಮಾಜಿಕ ನಿಧಿಯಡಿ ಅನುಷ್ಠಾನಗೊಳಿಸುತ್ತಿರುವ 2026-2027ರ ‘ನೀರಾ ಅಮೃತ’ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ನಾಳೆ, ಆಗಸ್ಟ್ 25 (ಮಂಗಳವಾರ) ಕೊನೆಯ ದಿನವಾಗಿದೆ.

ಈ ಯೋಜನೆಯಡಿ ಪ್ರದೇಶದ ಅರ್ಹ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಅತ್ಯಾಧುನಿಕ ಮರ ಹತ್ತುವ ಏಣಿ ಹಾಗೂ ದೋಟಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಈಗಾಗಲೇ ಸಂಸ್ಥೆಯ ವತಿಯಿಂದ ರೈತ ಫಲಾನುಭವಿಗಳಿಗೆ ಏಣಿಗಳ ವಿತರಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ.

ಯೋಜನೆಯ ಮುಖ್ಯಾಂಶಗಳು:

ಸಂಸ್ಥೆ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ (ಕೇಂದ್ರ ಕಚೇರಿ, ವಿಟ್ಲ).

ವಿಶೇಷ ಯೋಜನೆ: 2026-27ನೇ ಸಾಲಿನ ‘ನೀರಾ ಅಮೃತ’ ಯೋಜನೆ (ರೈತ ಸಾಮಾಜಿಕ ನಿಧಿ).

ಉಚಿತ ಸೌಲಭ್ಯ: ಸುಧಾರಿತ ಮರ ಹತ್ತುವ ಏಣಿ ಹಾಗೂ ದೋಟಿಗಳ ವಿತರಣೆ.

ಫಲಾನುಭವಿಗಳು: ಕರ್ನಾಟಕ ದಕ್ಷಿಣ ವಲಯದ ರೈತರು ಹಾಗೂ ಕೃಷಿ ಕಾರ್ಮಿಕರು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 25, 2026 (ಮಂಗಳವಾರ).

ಅಡಿಕೆ, ತೆಂಗು ಸೇರಿದಂತೆ ವಿವಿಧ ಕೃಷಿ ಕೊಯ್ಲು ಮತ್ತು ನಿರ್ವಹಣೆ ಕೆಲಸಗಳಲ್ಲಿ ತೊಡಗಿರುವ ರೈತರು ಹಾಗೂ ಕಾರ್ಮಿಕರಿಗೆ ಶ್ರಮದಾಯಕ ಕೆಲಸವನ್ನು ಸುಲಭಗೊಳಿಸಲು ಮತ್ತು ಸುರಕ್ಷತೆ ಒದಗಿಸಲು ಈ ಯೋಜನೆಯನ್ನು ತರಲಾಗಿದೆ. ಸೌಲಭ್ಯ ಪಡೆಯಲು ಬಯಸುವ ಅರ್ಹ ರೈತರು ತಕ್ಷಣವೇ ವಿಟ್ಲದ ಕಲ್ಲಕಟ್ಟದಲ್ಲಿರುವ ಸಂಸ್ಥೆಯ ಶಾಖಾ ಕಚೇರಿಯನ್ನು ಸಂಪರ್ಕಿಸಿ ಅಥವಾ ನೀಡಲಾಗಿರುವ ಹೆಲ್ಪ್‌ಲೈನ್ ಸಂಖ್ಯೆ (7618770541) ಮೂಲಕ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

Continue Reading

Trending

Copyright © 2025 Deevatige

error: Content is protected !!