Article
ಪುತ್ತೂರಿನಲ್ಲಿ ಮೊಳಗಿದ ಅಂಕದ ಕೋಳಿಯ ಬಿಂಕದ ಕೂಗು
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/02/koli-1-1000x600.jpg&description=ಪುತ್ತೂರಿನಲ್ಲಿ ಮೊಳಗಿದ ಅಂಕದ ಕೋಳಿಯ ಬಿಂಕದ ಕೂಗು', 'pinterestShare', 'width=750,height=350'); return false;" title="Pin This Post">
ಜ್ಯೋತಿಪ್ರಕಾಶ್ ಪುಣಚ
ದೈವದೇವರ ನೇಮೋತ್ಸವದ ಪ್ರಯುಕ್ತ ನಡೆಸಲಾಗುವ ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ಪೊಲೀಸ್ ಇಲಾಖೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಪುತ್ತೂರಿನ ತುಳುವರು ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತಡೆದಿದ್ದಾರೆ ಇದೀಗ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ. ಆರಂಭವಾಗಿದ್ದು, ಸಾಂಪ್ರದಾಯಿಕ ಆಚರಣೆಯನ್ನು ಹತ್ತಿಕ್ಕುವ ಪೊಲೀಸ್ ಕ್ರಮಗಳ ವಿರುದ್ಧ ಇದುವರೆಗೂ ಯಾವುದೇ ತುಳು ಸಂಘಟನೆಗಳು, ತಲೆಯದಿರತಕ್ಕಂತಹ. ಒತ್ತಾಯಿಸಿರದಂತಹ ನಿರ್ಧಾರಕ್ಕೆ ವೇದಿಕೆ ಸಿದ್ಧವಾಗಿದೆ.
ಕೋಳಿ ಅಂಕಕ್ಕೆ ಜೂಜು ಎನ್ನುವ ಹಣೆ ಪಟ್ಟಿ ಕಟ್ಟಿದ್ದರಿಂದ ಪೊಲೀಸ್ ಇಲಾಖೆ ಇದಕ್ಕೆ ನಿರ್ಬಂಧ ಹೇರುತ್ತಿದೆ ಎಂಬುವುದು ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ಸಮಿತಿಯ ಪ್ರಮುಖ ಆರೋಪವಾಗಿದೆ.
ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ಕರಾವಳಿಗರು ಒಂದೆಡೆ ಸೇರಿದ್ದಾರೆ. ಧಾರ್ಮಿಕ ಹಿನ್ನೆಲೆಯಲ್ಲಿ ಕೋಳಿಅಂಕದ ಮೂಲಕ ಗಣಗಳಿಗೆ ರಕ್ತತರ್ಪಣ ನೀಡುವ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೈವಾರಾಧನೆ, ಯಕ್ಷಗಾನ, ನಾಗಮಂಡಲ, ನವರಾತ್ರಿ ಆಚರಣೆ, ತೆಂಗಿನಕಾಯಿ ಕುಟ್ಟುವುದು ಸೇರಿದಂತೆ ದ ಕ ಜಿಲ್ಲೆಯ ಸಾಂಪ್ರದಾಯಿಕ ಆಚರಣೆಯಾದ ಕೋಳಿ ಅಂಕವನ್ನೂ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಧಾರ್ಮಿಕ ಪರಂಪರೆಯ ಕೋಳಿ ಅಂಕಕ್ಕೆ ನಿಷೇಧ ಹೇರುವ ಮೂಲಕ ಜನರ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ನಡೆಸಲಾಗಿದೆ ಎಂಬುದು ಸಮಿತಿಯ ಆರೋಪವಾಗಿದೆ. ಕ್ರಿಕೆಟ್, ಕುದುರೆ ರೇಸ್ ಕಂಬಳದಂತೆ ಸಾಂಪ್ರದಾಯಿಕ ಮನೋರಂಜನೆ ಮತ್ತು ಕ್ರೀಡೆಯಾದ ಕೋಳಿ ಅಂಕಕ್ಕೆ ಸರಕಾರ ಮಾನ್ಯತೆ ನೀಡಬೇಕೆಂಬುದೇ ಆ ಸಭೆಯ ನಿರ್ಧಾರವಾಗಿತ್ತು.

ನೂತನವಾಗಿ ಅಸ್ಥಿತ್ವಕ್ಕೆ ಬಂದ ವೇದಿಕೆಯ ಪ್ರಶ್ನೆಗಳೇನು ?
ಕೋಳಿ ಅಂಕ ನಡೆಯುವ ಸಂದರ್ಭ ಪೊಲೀಸ್ ದಾಳಿಯ ವೇಳೆಯಲ್ಲಿ ಅಮಾಯಕರು ಓಡಿಹೋಗಿ ತಪ್ಪಿಸಿಕೊಳ್ಳಲು ಯತ್ನಿಸುವಾಗ ಸಾವು ನೋವುಗಳು ನಡೆದಿರುವುದು ಕೂಡಾ ಇದೆ. ಈ ಕದ್ದುಮುಚ್ಚಿ ಕೋಳಿಅಂಕ ಮಾಡುವ ಅನಿವಾರ್ಯವಾದರೂ ನಮಗೆ ಯಾಕಾಗಿ ಬಂದಿದೆ ? ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿರುವಾಗ ಕೋಳಿಅಂಕಕ್ಕೆ ಅನುಮತಿ ಸಿಗಲಾರದೇ ? ಯಾವುದೇ ಒಂದು ಕ್ರೀಡೆ ಮೂಲ ಆಶಯದಲ್ಲಿ ಜೂಜು ಆಗಲು ಸಾಧ್ಯವೇ ಇಲ್ಲ ಅದು ಕೇವಲ ಮನರಂಜನೆಯ ಸ್ಪರ್ಧೆಗೆ ಮಾತ್ರ ಸೀಮಿತವಾಗಿರುತ್ತದೆ. ಅದರ ಮೂಲ ಆಶಯ ಮಾತ್ರ ಮನರಂಜನೆ ಮತ್ತು ಸ್ಪೂರ್ತಿ ಹಾಗೂ ಸ್ಪರ್ಧೆ. ಹೀಗಿರುವಾಗ ತುಳುನಾಡಿನ ಪ್ರಾಚೀನ ಕ್ರೀಡೆಯಾದ ಜನಪದದೊಂದಿಗೆ ಹಾಸು ಹೊಕ್ಕಾಗಿರುವ ಅಬಾಲ ವೃದ್ಧರ ಗ್ರಾಮ್ಯ ಮನರಂಜನೆಯ ಮೂಲವಾಗಿರುವ ಕೋಳಿ ಅಂಕಕ್ಕೆ ಜೂಜಿನ ಹಣೆಪಟ್ಟಿ ಕಟ್ಟಿ ನಿಷೇಧಿಸುವುದು ಸರಿಯೇ ಎಂಬುವುದು ವೇದಿಕೆಯ ಪ್ರಶ್ನೆ

ಜೂಜು ಎಲ್ಲಾ ಕ್ರೀಡೆಗಳಲ್ಲಿ ನಡೆಯುತ್ತದೆ; ಕೋಳಿಅಂಕದಲ್ಲಿ ಕಣ್ಣಿಗೆ ರಾಚುತ್ತದೆ ಅಷ್ಟೇ !
ಜೂಜೆಂಬುವುದು ಕ್ರೀಡೆಗಳಿಗೆ ಅಂಟಿಕೊಂಡು ಅದೆಷ್ಠೋ ಸಮಯಗಳೇ ಕಳೆದಿದೆ. ಮಹಾಭಾರತದ ಜ್ಯೂತದಲ್ಲಿ ಸೋತ ಪಾಂಡವರು ಒತ್ತೆಯಿಟ್ಟದ್ದು ದ್ರೌಪದಿಯನ್ನು ಎಂಬುವುದರಿಂದ ಹಿಡಿದು ವಿವಿಧ ಕ್ರೀಡೆಗಳ ಅದರಲ್ಲೂ ಕ್ರಿಕೆಟಿನ ಪ್ರತಿ ಬಾಲು, ಎಸೆತ, ಪ್ರತಿ ಹೊಡೆತಗಳವರೆಗೆ ಜೂಜು ಎಷ್ಟು ಹಾಸು ಹೊಕ್ಕಾಗಿದೆ ಎಂದು ಪ್ರತ್ಯೇಕವಾಗಿ ವಿವರಿಸಿ ಹೇಳಬೇಕಾಗಿಲ್ಲ. ಆದರೆ ಜ್ಯೂತ ಅಥವಾ ಕ್ರಿಕೆಟ್ ಎಂಬುದು ಜೂಜು ಅಥವಾ ಜುಗಾರಿಗಿಂತ ಮುಂಚೇನೆ ಹುಟ್ಟಿರುವುದು ಕೂಡಾ ಅಷ್ಟೇ ಸತ್ಯ ! ಯಾವುದೇ ಪಂದ್ಯ, ಆಟ, ಕ್ರೀಡೆಗಳು ರಂಗೇರಲು ಸ್ಪರ್ಧಾಭಾವ ಜೊತೆಗೆ ಗರಿಗೆದರಲು ಪಂಥಾಹ್ವಾನ ಅನಿವಾರ್ಯವೆಂಬುವುದನ್ನು ಹೌದೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕುದುರೆ ರೇಸು, ಕ್ರಿಕೆಟ್ ಕಂಬಳದಲ್ಲಿ ನಡೆಯುವಷ್ಟು ಜೂಜು ಕೋಳಿಅಂಕದಲ್ಲಿ ಯಾವತ್ತೂ ನಡೆಯುವುದಿಲ್ಲ. ಆದರೆ ಕುದುರೆ ರೇಸು, ಕ್ರಿಕೆಟ್ ಕಂಬಳದಲ್ಲಿ ಇರುವ ವಿಶಾಲವಾದ ವೇದಿಕೆಯಲ್ಲಿ ನಡೆಯುವ ಜೂಜುಗಳು ಅಗೋಚರವಾದರೆ, ಕೋಳಿಅಂಕದಲ್ಲಿ ಇತಿಮಿತಿಯೊಳಗಿನ ಕಳದಲ್ಲಿ ನಡೆಯುವ ಜೂಜು ಕಣ್ಣಿಗೆ ರಾಚುತ್ತದೆ ಅಷ್ಟೆ !

ಎಲ್ಲಾ ತುಳುನಾಡಿನ ಸಂಘಟನೆಗಳು ಜೊತೆಗೂಡಬೇಕು
ಅದೇನೆ ಇರಲಿ ತುಳುನಾಡಿನ ಕೋಳಿ ಅಂಕ ಮತ್ತು ಕಂಬಳವನ್ನು ತುಳುವರಾದ ನಾವು ಕ್ರಿಕೆಟ್ ಕುದುರೆ ರೇಸುಗಳಿಂದಲೂ ಪ್ರತ್ಯೇಕವಾಗಿ ಗುರುತಿಸುವಂತಾಗಬೇಕು. ಅದನ್ನು ಕ್ರೀಡೆ ಎಂಬುದರ ಜೊತೆಗೆ ಮನರಂಜನೆ, ಜನಪದ ಆಚರಣೆ ಎಂಬಿತ್ಯಾದಿ ರೀತಿಯಲ್ಲಿ ಸ್ವೀಕರಿಸುವಂತಾಗಬೇಕು. ಇದಕ್ಕಾಗಿ ಅನೇಕ ಜನಪ್ರತಿನಿಧಿಗಳ ಸಹಿತ ತುಳುವರ ಸಂಘಟನೆಗಳು, ತುಳು ಒಕ್ಕೂಟಗಳು, ಹೊರನಾಡ ತುಳು ಸಂಘಸಂಸ್ಥೆಗಳು, ತುಳು ಜನಪದರು ಪುತ್ತೂರಿನ ಕೋಳಿ ಅಂಕ ಅಭಿಮಾನಿಗಳು ಪ್ರಾರಂಭಿಸಿದ ಹೊಸ ನಿರ್ಧಾರಗಳಿಗೆ ಜೊತೆಗೂಡಬೇಕಾಗಿದೆ ಎಂಬುವುದು ವೇದಿಕೆಯ ಆಶಯವಾಗಿದೆ.

ಕರಾವಳಿಯ ಜನರಿಗೆ ಕೋಳಿಅಂಕ ಸ್ಪರ್ಧೆಯಲ್ಲ; ಒಂದು ಧಾರ್ಮಿಕ ಆಚರಣೆ
ತುಳುನಾಡಿನ ಸಂಸ್ಕೃತಿಯಲ್ಲಿ ದೈವ-ದೇವರು ಮತ್ತು ಕೋಳಿ ಅಂಕಕ್ಕೆ ಅವಿನಾಭಾವ ಸಂಬಂಧವಿದೆ. ಹೊರಗಿನವರಿಗೆ ಇದು ಕೇವಲ ಒಂದು ಸ್ಪರ್ಧೆಯಾಗಿ ಕಂಡರೂ, ಕರಾವಳಿಯ ಜನರಿಗೆ ಇದು ಒಂದು ಧಾರ್ಮಿಕ ಆಚರಣೆ ಮತ್ತು ಭಕ್ತಿಯ ಸೇವೆಯಾಗಿದೆ. ಅನೇಕ ದೈವಸ್ಥಾನಗಳಲ್ಲಿ (ಉದಾಹರಣೆಗೆ: ಜುಮಾದಿ, ಪಂಜುರ್ಲಿ, ಜಾರಂದಾಯ) ವಾರ್ಷಿಕ ನೇಮ ಅಥವಾ ಉತ್ಸವದ ಸಂದರ್ಭದಲ್ಲಿ ಕೋಳಿ ಅಂಕವನ್ನು ನಡೆಸಲೇಬೇಕು ಎಂಬ ನಿಯಮವಿದೆ. ಇದನ್ನು ‘ದೈವದ ಕಳ’ ಅಥವಾ ‘ನೇಮದ ಕೋಳಿ ಅಂಕ’ ಎನ್ನಲಾಗುತ್ತದೆ. ಇದು ದೈವಕ್ಕೆ ಸಲ್ಲಿಸುವ ಒಂದು ಬಗೆಯ “ರಕ್ತ ತರ್ಪಣ” ಅಥವಾ ಹರಕೆ ಎಂದು ನಂಬಲಾಗುತ್ತದೆ. ಕೆಲವು ಕಡೆ ದೈವದ ನೇಮ ನಡೆಯುವ ಮುನ್ನ ಅಥವಾ ನಡೆದ ನಂತರ ಕೋಳಿ ಅಂಕ ನಡೆಯುತ್ತದೆ. ದೈವದ ಪಾತ್ರಿ (ದರ್ಶನ ಪಾತ್ರಿ) ಅಥವಾ ದೈವದ ಚಾಕರಿ ಮಾಡುವವರು ಮೊದಲು ಕೋಳಿಯನ್ನು ಅಂಕಕ್ಕೆ ಬಿಡುವ ಮೂಲಕ ಆಚರಣೆಗೆ ಚಾಲನೆ ನೀಡುತ್ತಾರೆ. ಈ ಸಂದರ್ಭದಲ್ಲಿ ನಡೆಯುವ ಅಂಕದಲ್ಲಿ ಯಾವುದೇ ಹಣದ ಪಣ (ಬೆಟ್ಟಿಂಗ್) ಇರುವುದಿಲ್ಲ, ಇದು ಸಂಪೂರ್ಣವಾಗಿ ಧಾರ್ಮಿಕವಾಗಿರುತ್ತದೆ. ಭಕ್ತರು ತಮ್ಮ ಕಷ್ಟಗಳು ದೂರಾದಾಗ ಅಥವಾ ಕೆಲಸಗಳು ಕೈಗೂಡಿದಾಗ ದೈವಕ್ಕೆ “ಕೋಳಿ ಅಂಕದ ಹರಕೆ” ಹೊರುತ್ತಾರೆ. ಹರಕೆ ತೀರಿಸಲು ನಿರ್ದಿಷ್ಟ ದೈವದ ಸನ್ನಿಧಿಯಲ್ಲಿ ತಮ್ಮ ಹುಂಜವನ್ನು ಅಂಕಕ್ಕೆ ಬಿಡುತ್ತಾರೆ.

ಹಠಕ್ಕೆ ಬಿದ್ದು ಹೋರಾಟ ಮಾಡಿದರೆ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ
ಈ ನಿಟ್ಟಿನಲ್ಲಿ ಪುತ್ತೂರಿನ ತುಳುವರು ಕರಾವಳಿಗರನ್ನು ಜೊತೆ ಸೇರಿಸಿಕೊಂಡು ತಮ್ಮ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ನಮ್ಮ ತುಳುನಾಡ ಸಂಸ್ಕೃತಿ ಕ್ರೀಡೆ ಆಚರಣೆಗಳ ಉಳಿವಿಗಾಗಿ ಎಂಬ ಧ್ಯೇಯ ವಾಕ್ಯದೊಂದಿಗೆ ʼಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ದ.ಕ.ʼ ಎಂಬ ಸಮಿತಿಯನ್ನು ಹುಟ್ಟುಹಾಕಿ ಫೆ.1ರಂದು ಪುತ್ತೂರು ಕೊಟೆಚಾ ಸಭಾ ಭವನದಲ್ಲಿ ಸಮಾಲೋಚನಾ ಸಭೆ ನಡೆಸಿದ್ದಾರೆ. ನೂರಾರು ಮಂದಿ ಸೇರಿದ ಈ ಬಿಂಕದ ತುಳುವರ ಸಭೆಯಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸದನದಲ್ಲಿ ಧ್ವನಿಯೆತ್ತುತ್ತಲೇ ಬಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರು ಭಾಗವಹಿಸಿದ್ದಾರೆ. ಕೋಳಿ ಅಂಕಕ್ಕೆ ಮಹಿಳೆಯರ ವಿರೋಧವಿದೆ ಎಂಬುವುದು ಗೊತ್ತು, ಅದಾಗ್ಯೂ ಜೂಜು ರಹಿತ ಕೋಳಿ ಅಂಕದ ಬಗ್ಗೆ ಮಾತ್ರ ನಾನು ಮಾತಾನಾಡುತ್ತಿದ್ದೇನೆ ಎಂದು ವೇದಿಕೆಯಲ್ಲಿ ಮಾತು ಪ್ರಾರಂಭಿಸಿದ ರೈಯವರು ಕೋಳಿ ಅಂಕಕ್ಕೆ ಹೋಗುವವರು ರೈತರು… ಎದೆತಟ್ಟಿ ನಾವು ರೈತರೆಂದು ಹೇಳುತ್ತಾ, ಕೋಳಿ ಅಂಕದ ಹೋರಾಟಕ್ಕೆ ಬನ್ನಿ ಎಂದು ಉಭಯ ಜಿಲ್ಲೆಗಳ 12 ಶಾಸಕರ ಮನೆಯ ಕದವನ್ನು ಬಡಿದು ಹೋರಾಟಕ್ಕೆ ಕರೆಯಿರಿ, ಕರಾವಳಿಯ 12 ಶಾಸಕರು ಸದನದಲ್ಲಿ ಪ್ರಶ್ನಿಸಿದರೆ ಖಂಡಿತಾ ನಮ್ಮ ಜೂಜುರಹಿತ ಸಾಂಪ್ರದಾಯಿಕ ಕೋಳಿ ಅಂಕವನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ನಮ್ಮನ್ನು ( ಶಾಸಕರನ್ನು) ಉಪಯೋಗಿಸಿಕೊಂಡು ಹಠ ಬಿದ್ದು ಹೋರಾಟ ಮಾಡಿ ಎಂದು ಹೋರಾಟಗಾರರನ್ನು ಹುರಿದುಂಬಿಸಿದರು. ಶಾಸಕರ ಮಾತುಗಳನ್ನು ಕೇಳಿದ ಕೋಳಿಅಂಕದ ಅಭಿಮಾನಿಗಳ ಮುಖದಲ್ಲಿ ಸಂತಸದೊಂದಿಗೆ ಸಭೆ ಮುಕ್ತಾಯವಾಗಿದೆ.
ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧ
ಕೋಮು ದಳ್ಳುರಿಯಿಂದ ದಗದಗನೆ ಉರಿಯುತ್ತಿದ್ದ ಕರಾವಳಿಯನ್ನು ಕೇವಲ 6 ತಿಂಗಳಿನಲ್ಲಿಯೇ ಒಂದು ಮಾದರಿ ಶ್ರದ್ದಾಕೆಂದ್ರವಾಗಿ ಮಾಡುವ ಸಾಹಸಕ್ಕೆ ಕೈಹಾಕಿ ಯಶಸ್ವಿಯಾದ ಐಪಿಎಸ್ ಅಧಿಕಾರಿಗಳಾದ ಸುಧೀರ್ ಕುಮಾರ್ ರೆಡ್ಡಿ ಮತ್ತು ಡಾ. ಅರುಣ್ ಅವರು ಜಿಲ್ಲೆಯ ಹಲವಾರು ಅನಿಷ್ಟ ಪದ್ದತಿಗಳಿಗೆ ಕಾನೂನು ಕೈಕೋಲವನ್ನು ತೊಡಿಸಿ ನೆನೆಗುದಿಗೆ ಬಿದ್ದಿದ್ದ ಸಂವಿಧಾನದ ಆಡಳಿತಾತ್ಮಕ ಸೂತ್ರಗಳನ್ನು ಜಾರಿ ಗೊಳಿಸುವಾಗ ಕಾನೂನು ಚೌಕಟ್ಟಿನೊಳಗಡೆ ನಿಷೇಧವಾಗಿದ್ದ ಕೋಳಿ ಅಂಕಕ್ಕೂ ಕಟ್ಟುನಿಟ್ಟಿನ ನಿರ್ಬಂಧವಾಗಿದೆ. ಎಂಬುವುದು ಎಲ್ಲರಿಗೂ ಗೊತ್ತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಕೋಳಿ ಕಾದಾಟ ಅಪರಾಧವಾಗಿದೆ
ಕೋಳಿ ಅಂಕ (Cockfighting) ಎನ್ನುವುದು ಭಾರತದ ಸಂಪ್ರದಾಯ ಮತ್ತು ಕಾನೂನಿನ ನಡುವೆ ಇರುವ ಒಂದು ಸೂಕ್ಷ್ಮ ವಿಷಯವಾಗಿದ್ದು, ಕಾನೂನಾತ್ಮಕವಾಗಿ ಕೋಳಿ ಅಂಕವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960: ಈ ಕಾಯ್ದೆಯ ಪ್ರಕಾರ ಪ್ರಾಣಿ ಅಥವಾ ಪಕ್ಷಿಗಳನ್ನು ಪರಸ್ಪರ ಕಾದಾಟಕ್ಕೆ ಬಿಡುವುದು, ಅದರಲ್ಲಿ ಬೆಟ್ಟಿಂಗ್ ಕಟ್ಟುವುದು ಅಥವಾ ಅಂತಹ ಪಂದ್ಯಗಳನ್ನು ಆಯೋಜಿಸುವುದು ಅಪರಾಧ. ಸುಪ್ರೀಂ ಕೋರ್ಟ್ ತೀರ್ಪುನ ಪ್ರಕಾರ ಪ್ರಾಣಿಗಳ ಹಕ್ಕುಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಯಾವುದೇ ರೀತಿಯ ಪ್ರಾಣಿ ಕಾದಾಟದ ಕ್ರೀಡೆಗಳು ಕಾನೂನುಬಾಹಿರ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕರ್ನಾಟಕದ ಕರಾವಳಿ ಭಾಗಗಳಲ್ಲಿ (ದಕ್ಷಿಣ ಕನ್ನಡ, ಉಡುಪಿ) ಮತ್ತು ಗಡಿ ಭಾಗಗಳಲ್ಲಿ ಕೋಳಿ ಅಂಕವು ಸಾಂಪ್ರದಾಯಿಕವಾಗಿ ನಡೆಯುತ್ತಲೇ ಇತ್ತು. ಆದರೆ ಕೋಳಿ ಅಂಕ ನಡೆಸಲು ಸಿದ್ಧತೆ ನಡೆಸಿದರೆ ಪೊಲೀಸರು ಅಂತಹ ಸ್ಥಳಗಳ ಮೇಲೆ ದಾಳಿ ಮಾಡುತ್ತಲೇ ಇದ್ದರು. ಕಾರಣ ಕೋಳಿ ಅಂಕ ಕೇವಲ ಕ್ರೀಡೆಯಾಗಿ ಉಳಿಯದೆ, ಅಲ್ಲಿ ಲಕ್ಷಾಂತರ ರೂಪಾಯಿಗಳ ಜೂಜು ನಡೆಯುವುದರಿಂದ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಕೂಡ ಇದನ್ನು ನಿಷೇಧಿಸಲಾಗಿದೆ.ಕಾನೂನು ಕೋಳಿ ಅಂಕವನ್ನು ಏಕೆ ನಿಷೇಧಿಸಿದೆ ಎಂದರೆ ಒಂದನೆಯದಾಗಿ ಕೋಳಿಗಳ ಕಾಲಿಗೆ ಚೂಪಾದ ಕತ್ತಿ (ಬಾಳ್) ಅಥವಾ ಮುಳ್ಳುಗಳನ್ನು ಕಟ್ಟುವುದು. ಮತ್ತು ಎರಡನೇಯದಾಗಿ ಪಂದ್ಯದಲ್ಲಿ ಒಂದು ಕೋಳಿ ಸಾಯುವವರೆಗೆ ಅಥವಾ ತೀವ್ರವಾಗಿ ಗಾಯಗೊಳ್ಳುವವರೆಗೆ ಹೋರಾಡಿಸುವುದು. ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಪ್ರಕಾರ ಅಪರಾಧವಾಗುತ್ತದೆ.

ಕಂಬಳ ಜಲ್ಲಿಕಟ್ಟುಗಳಿಗೆ ಇಲ್ಲದ ನಿಷೇಧ ಕೋಳಿ ಅಂಕಕ್ಕೆ ಯಾಕೆ ?
ಕೋಳಿ ಅಂಕಕ್ಕೆ ನಿಷೇಧವಿದ್ದರೂ, ಕಂಬಳ ಮತ್ತು ಜಲ್ಲಿಕಟ್ಟುಗಳಿಗೆ ಕೆಲವು ವಿಶೇಷ ತಿದ್ದುಪಡಿಗಳ ಮೂಲಕ ಭಾರತದಲ್ಲಿ ಅನುಮತಿ ನೀಡಲಾಗಿದೆ ಯಾಕೆಂದರೆ ಕಂಬಳ ಮತ್ತು ಜಲ್ಲಿಕಟ್ಟು ಮೂಲತಃ ಕ್ರೀಡೆಗಳಾಗಿವೆ, ಇಲ್ಲಿ ಕೋಳಿ ಅಂಕದಂತೆ ದೊಡ್ಡ ಮಟ್ಟದ ವ್ಯವಸ್ಥಿತ ಜೂಜಾಟ ಕಾನೂನಿನ ಕಣ್ಣಿನಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ. ಪ್ರಾಣಿಯ ಸಾವು ಸಂಭವಿಸುವುದಿಲ್ಲ: ಈ ಕ್ರೀಡೆಗಳಲ್ಲಿ ಪ್ರಾಣಿಗಳು ಸಾಯುವ ಉದ್ದೇಶವಿರುವುದಿಲ್ಲ (ಅವುಗಳನ್ನು ಕೇವಲ ಓಡಿಸಲಾಗುತ್ತದೆ ಅಥವಾ ಹಿಡಿಯಲಾಗುತ್ತದೆ). ಈ ಕ್ರೀಡೆಗಳು ಆಯಾ ಪ್ರದೇಶದ ರೈತರ ಸಂಸ್ಕೃತಿ ಮತ್ತು ಪಶುಸಂಗೋಪನೆಯೊಂದಿಗೆ ಬೆಸೆದುಕೊಂಡಿವೆ ಎಂದು ಸರ್ಕಾರಗಳು ವಾದ ಮಂಡಿಸಿವೆ. ಹಾಗೆಂದು ಯಾವುದೇ ಕ್ರೀಡೆಯಲ್ಲಿ ಪ್ರಾಣಿಗಳಿಗೆ ರಕ್ತ ಬರುವಂತಹ ಗಾಯವಾದರೆ ಅಥವಾ ಉದ್ದೇಶಪೂರ್ವಕವಾಗಿ ಹಿಂಸೆ ನೀಡಿದ್ದು ಕಂಡುಬಂದರೆ, ಅಂತಹ ಆಯೋಜಕರ ವಿರುದ್ಧ ಎಫ್ಐಆರ್ (FIR) ದಾಖಲಿಸಲು ಮತ್ತು ಕ್ರೀಡೆಯನ್ನು ತಕ್ಷಣವೇ ನಿಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ.

ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ
2014ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿನ ‘ಜಲ್ಲಿಕಟ್ಟು’ ಕ್ರೀಡೆಯನ್ನು ನಿಷೇಧಿಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಕಂಬಳದ ಮೇಲೂ ನಿರ್ಬಂಧಗಳು ಬಂದವು. ಆ ನಂತರ ಕಂಬಳವು ಕರಾವಳಿ ಜನರ ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಯ ಅವಿಭಾಜ್ಯ ಅಂಗವಾಗಿದ್ದರಿಂದ ನಿಷೇಧದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು. ರಾಜ್ಯ ಸರ್ಕಾರವು ‘ಪ್ರಾಣಿ ಹಿಂಸೆ ತಡೆ ಕಾಯ್ದೆ’ಗೆ ತಿದ್ದುಪಡಿ ತಂದು, ಕಂಬಳವನ್ನು “ಸಾಂಪ್ರದಾಯಿಕ ಕ್ರೀಡೆ” ಎಂದು ಪರಿಗಣಿಸಿ 2017ರಲ್ಲಿ ವಿಶೇಷ ಸುಗ್ರೀವಾಜ್ಞೆ ಹೊರಡಿಸಿತು. ಸುದೀರ್ಘ ವಿಚಾರಣೆಯ ನಂತರ, ಮೇ 18, 2023 ರಂದು ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಕಂಬಳಕ್ಕೆ ನೀಡಿದ ರಾಜ್ಯ ಸರ್ಕಾರದ ಅನುಮತಿಯನ್ನು ಎತ್ತಿ ಹಿಡಿಯಿತು ಎಂಬುವುದು ನಮಗೆಲ್ಲಾ ತಿಳಿದಿರುವ ವಿಚಾರ. ಇದರ ಹಿಂದೆ ಮಂಜೋಟಿ ಏರಿದ ಕಂಬಳವನ್ನು ಗಂತಿಗೆ ತಂದು ನಿಲ್ಲಿಸಿದವರು ಇದೇ ಆಶೋಕಣ್ಣ ಎಂಬುವುದು ಈಗ ಜನಜನಿತ.

ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ !
ಸಮಾಲೋಚನಾ ಸಭೆಯಲ್ಲಿ ಶಾಸಕರು ಒಂದು ಮಾತಿನ ಭರವಸೆ ನೀಡಿದ್ದಾರೆ. ಹೋರಾಟಗಾರರು ಉಭಯ ಜಿಲ್ಲೆಗಳ 13 ಶಾಸಕರ ಮನೆಯ ಕದವನ್ನು ತಟ್ಟಿ ಸಾಂಪ್ರಾದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಧ್ವನಿ ಎತ್ತುವಂತೆ ಮಾಡಿ, ಸದನದಲ್ಲಿ ಪ್ರಶ್ನಿಸೋಣ ಸದನದಲ್ಲಿ ಎಲ್ಲಾ ಶಾಸಕರು ಮಾತನಾಡಿದರೆ ಸಾಂಪ್ರದಾಯಿಕ ಆಚರಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ ಅಂದರೆ ಸಾಧ್ಯವಿದೆ ಎಂಬುವುದನ್ನು ರೈಯವರು ವೇದಿಕೆಯವರಿಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಜೊತೆಗೆ ಬೇಕಾಗಿರುವುದು ಹಠ ಸಾಧನೆ ಎಂಬುವುದನ್ನೂ ಹೇಳುವುದಕ್ಕೆ ಮರೆಯಲಿಲ್ಲ. ಶಾಸಕರ ಮಾರ್ಗದರ್ಶನದಲ್ಲಿ ಮುಂದುವರಿಯುವುದು ಮಾತ್ರ ಹೋರಾಟಗಾರರಿಗೆ ಉಳಿದಿರುವ ಒಂದೇ ಒಂದು ದಾರಿ ! ಇಲ್ಲವಾದರೆ ಕಾನೂನು ಕಟ್ಟಳೆಗಳು ಬಂಟನಾಗಿ ಹೋರಾಟಗಾರರು ಒಟ್ಟೆಯಾಗುತ್ತಾರೆ. ಕೊನೆಯದಾಗಿ ಸಾಂಪ್ರದಾಯಿಕ ಜೂಜುರಹಿತ ಕೋಳಿಅಂಕಕ್ಕೆ ಕಾನೂನಿನಲ್ಲಿ ಅವಕಾಶ ಸಿಗಲಿ ಎಂದು ದೈವ ದೇವರಲ್ಲಿ ಪ್ರಾರ್ಥಿಸುತ್ತಾ ಮತ್ತೆ ಸಿಗೋಣ ಕಳದಲ್ಲಿ.. ಕೋಳಿಅಂಕದ ಕಳದಲ್ಲಿ ?
Article
ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಗೆ ಮರುಜೀವ: ಭರದಿಂದ ಸಾಗುತ್ತಿದೆ ಹೂಳೆತ್ತುವ ಕಾರ್ಯ, ದಾನಿಗಳ ಸಹಕಾರಕ್ಕೆ ಕರೆ
ವಿಟ್ಲ: .ಇತಿಹಾಸ ಪ್ರಸಿದ್ಧ ವಿಟ್ಲದ ‘ಕೋಟಿಕೆರೆ’ಯ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯವು ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅತ್ಯಂತ ಭರದಿಂದ ಸಾಗುತ್ತಿದೆ. ದಿನೇ ದಿನೇ ಸುಂದರ ರೂಪ ಪಡೆಯುತ್ತಿರುವ ಕೆರೆಯ ಅಭಿವೃದ್ಧಿ ಕಾರ್ಯವನ್ನು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುತೂಹಲದಿಂದ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ರೂಪುಗೊಳ್ಳುತ್ತಿದೆ ತಡೆಗೋಡೆ; ಮರ-ಪೊದೆಗಳ ತೆರವು
ಕೋಟಿಕೆರೆಯ ಸಂರಕ್ಷಣೆಯ ಮೊದಲ ಹಂತವಾಗಿ, ಈ ಹಿಂದೆ ಕುಸಿದು ಬಿದ್ದಿದ್ದ ಕಲ್ಲಿನ ತಡೆಗೋಡೆಯ ಪುನರ್ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ದಟ್ಟವಾಗಿ ಹಬ್ಬಿಕೊಂಡಿದ್ದ ಪೊದೆಗಳು ಮತ್ತು ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕೊನೆಯ ಹಂತದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ಕೆರೆಯ ನೀರಿಗೆ ಬಾಗಿಕೊಂಡು ಅಪಾಯಕಾರಿಯಾಗಿದ್ದ ಭಾರಿ ಗಾತ್ರದ ನಿರುಪಯುಕ್ತ ಮರಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಹೂಳೆತ್ತುವಿಕೆಗೆ ಕ್ರೇನ್ ಕಾರ್ಯಾಚರಣೆ: ಯುವಕರ ಶ್ರಮಕ್ಕೆ ಹೈಕೋರ್ಟ್ ವಕೀಲರ ಮೆಚ್ಚುಗೆ
ಕೋಟಿಕೆರೆಯ ಉದ್ದಗಲಕ್ಕೂ ತಳಭಾಗದಲ್ಲಿ ಸುಮಾರು ಐದು ಅಡಿಗಳಷ್ಟು ಆಳದಲ್ಲಿ ತುಂಬಿಕೊಂಡಿರುವ ದಶಕಗಳ ಹಳೆಯ ದುರ್ನಾತಭರಿತ ಹೂಳನ್ನು (ಕೆಸರು) ಹೊರತೆಗೆಯುವುದು ಸದ್ಯ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಕಳೆದ ಮೂರು ದಿನಗಳಿಂದ ಹಿಟಾಚಿ ಯಂತ್ರವನ್ನು ಬಳಸಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿತ್ತಾದರೂ, ಹೂಳಿನ ಪ್ರಮಾಣ ಅಗಾಧವಾಗಿರುವುದರಿಂದ ಇದೀಗ ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ತರಲಾಗಿದೆ. ಕೆರೆಯ ತಳಭಾಗದಲ್ಲಿ ಹಿಟಾಚಿ ಯಂತ್ರವು ಹೂಳನ್ನು ಒಟ್ಟುಗೂಡಿಸುತ್ತಿದ್ದರೆ, ಮೇಲ್ಭಾಗದಲ್ಲಿ ನಿಂತಿರುವ ಕ್ರೇನ್ನ ರೋಪ್ ಮೂಲಕ ಕೆರೆಗೆ ಇಳಿಸಲಾದ ದೊಡ್ಡ ಬಕೆಟ್ಗಳಿಗೆ ಹೂಳನ್ನು ತುಂಬಿಸಿ ಮೇಲಕ್ಕೆತ್ತುವ ಜಂಟಿ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.
ಈ ಮಹತ್ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ವರದಿಯನ್ನು ವೀಕ್ಷಿಸಿದ ವಿಟ್ಲ ಮೂಲದವರೇ ಆದ ಪ್ರಖ್ಯಾತ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಯುವಕರ ಭಗೀರಥ ಪ್ರಯತ್ನ ಹಾಗೂ ಸಾಮಾಜಿಕ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಯುವಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ, ಕೆರೆಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣವೇ 11,111 ರೂಪಾಯಿ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಹೃದಯವಂತರ ಸಹಕಾರದ ಅಗತ್ಯವಿದೆ
ಕೋಟಿಕೆರೆಯ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ ಈಗಾಗಲೇ ಊರಿನ ಹಾಗೂ ಪರವೂರ ಹಲವಾರು ದಾನಿಗಳು ಮನಪೂರ್ವಕವಾಗಿ ಧನಸಹಾಯದ ಹಸ್ತ ಚಾಚಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈವರೆಗೆ ಸುಮಾರು 1,70,000 ರೂಪಾಯಿ ವೆಚ್ಚವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 2,00,000 ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಹೆಮ್ಮೆಯ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಈ ಪವಿತ್ರ ಕಾರ್ಯದಲ್ಲಿ ಇನ್ನಷ್ಟು ಜನ ಹೃದಯವಂತ ದಾನಿಗಳು ಆರ್ಥಿಕ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಕೈಜೋಡಿಸಬೇಕಾಗಿ ಕೆರೆ ಅಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದು, ಈ ಬಳಗದ ಗ್ರೂಪ್ ಅಡ್ಮಿನ್ ಗಳಾದ 1) ಬಾಬು ಕೊಪ್ಪಳ, 2) ಕ್ಲಿಫರ್ಡ್ ವೇಗಸ್, 3) ಚಂದ್ರಹಾಸ ಕೊಪ್ಪಳ 4) ಅಣುಪ್ ಲಾಸ್ರಾದೊ 5) ಚಂದ್ರ ಟೈಯರ್ ಅಂಗಡಿ ಇವರುಗಳಲ್ಲಿ ಹಣ ನೀಡಬಹುದು ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀಡಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಈಗಾಗಲೇ ನಿರ್ಧರಿಸಿದ ಕೆಲಸಗಳು ಮುಕ್ತಾಯವಾದ ಬಳಿಕವೂ ಹಣ ಉಳಿದಲ್ಲಿ ಮತ್ತೆ ತಡೆಗೋಡೆ ಕಾಮಗಾರಿ ಮುಂದುವರಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.




Article
ತುಳುನಾಡಿನ ಇತಿಹಾಸದ ಹೆಮ್ಮೆಯ ಸಂಕೇತ ವಿಟ್ಲದ ‘ಕೋಟಿ ಕೆರೆ’ಗೆ ಜೀರ್ಣೋದ್ಧಾರದ ಕಾಯಕಲ್ಪ: ಸಾರ್ವಜನಿಕರ ಸಹಕಾರಕ್ಕೆ “ಕೋಟಿಕೆರೆ ಅಭಿವೃದ್ಧಿ ಬಳಗ”ಮನವಿ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪಟ್ಟಣವಾದ ವಿಟ್ಲದ ಹೆಮ್ಮೆಯ ಸಂಕೇತ, ತುಳುನಾಡಿನ ವೀರ ಹಾಗೂ ರಾಜವಂಶದ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಇತಿಹಾಸ ಪ್ರಸಿದ್ಧ ‘ಕೋಟಿ ಕೆರೆ’ ಇಂದು ಅಳಿವಿನ ಅಂಚಿಗೆ ಬಂದು ತಲುಪಿದ್ದು, ಯಾವ ಕ್ಷಣದಲ್ಲಾದರೂ ಜರಿದು ಮುಚ್ಚಿಹೋಗುವ ಭೀತಿಯಲ್ಲಿರುವ ಈ ಕೆರೆಯನ್ನು ಉಳಿಸಿಕೊಳ್ಳಲು ವಿಟ್ಲದ ಸಾರ್ವಜನಿಕರು ಹಾಗೂ ಕೊಡುಗೈ ದಾನಿಗಳು ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಕೆರೆಯ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಕಳೆದ ವಾರದಿಂದ ಇಲ್ಲಿ ನಿರಂತರವಾಗಿ ಕಾರ್ಮಿಕರಿಂದ ಜರಿದು ಬಿದ್ದ ತಡೆಗೋಡೆಗಳನ್ನು ಸರಿಪಡಿಸುವ ಕೆಲಸಗಳು ಮತ್ತು ಜೊತೆಯಾಗಿ ಶ್ರಮದಾನದ ಮೂಲಕವೂ ಕೆಲಸಗಳು ನಡೆಯುತ್ತಲಿವೆ.

ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ವಿಟ್ಲದ ಆಪತ್ಬಾಂಧವ ಮುರಳಿ, ಅನೂಪ್ ಲಸ್ರಾದೊ, ಜಯರಾಮ ಕಡಂಬು, ಮಾಜಿ ಯೋಧರಾದ ದಯಾನಂದ ನೇತ್ರಕೆರೆ, ವೆಂಕಟರಮಣ ಭಟ್, ಫಿನಿಕ್ಸ್ ಕಂಪ್ಯೂಟರಿನ ಜೋಯ್ ಪುಡ್ತಾದೊ, ಪತ್ರಕರ್ತ ವಿಟಿ ಪ್ರಸಾದ್ ಹಾಗೂ ಚಂದ್ರ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋಟಿ ಕೆರೆಯ ಹತ್ತಿರದ ಮನೆಯವರು ಕತ್ತಿ , ಹಾರೆ ಇನ್ನಿತರ ಪರಿಕರಗಳನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಕೆರೆಯ ಸುತ್ತು ಚಾಚಿಕೊಂಡಿರುವ ಮರಗಳ ತೆರವು, ನೀರು ಕೆಸರನ್ನು ಮೇಲಕ್ಕೆತ್ತುವ , ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಉಸಿರು ಬಿಗಿದು ನಿಂತ ಕೆರೆ: ಸುಮಾರು ಹತ್ತು ವರ್ಷಗಳ ಹಿಂದೆ ಈ ಕೆರೆ ಅಳಿವಿನ ಅಂಚಿನಲ್ಲಿದ್ದಾಗ ವಿಟ್ಲದ ಉದ್ಯಮಿ ಬಾಬು ಕೊಪ್ಪಳ ಅವರು ವೈಯಕ್ತಿಕ ಮುತುವರ್ಜಿ ವಹಿಸಿ ಜರಿದು ಹೋಗಿದ್ದ 20 ಮೀಟರ್ ಭಾಗವನ್ನು ದುರಸ್ತಿ ಮಾಡಿಸಿದ್ದರು. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಈಗ ಕೆರೆಯ ನಾಲ್ಕೂ ಬದಿಯ ಕಲ್ಲುಗಳು ಜರಿದು ನೀರು ಪಾಲಾಗಿದ್ದು, ಕಟ್ಟಿದ ಕಲ್ಲು ಮತ್ತು ಮಣ್ಣು ಜರಿದು ಬಿದ್ದು ಕೆರೆಯೊಳಗೆ ತುಂಬಿ ಹೋಗಿದೆ. ಕೆರೆ ಸದ್ಯ ಉಸಿರು ಬಿಗಿದು ಹಿಡಿದು ನಿಂತಂತಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳು, ಈಜುಗಾರರು ಕಳೆದ ಏಳೆಂಟು ದಶಕಗಳ ಹಿಂದಿನಿಂದಲೇ ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದಕ್ಕೆ ಈ ಕೋಟಿ ಕೆರೆಯೇ ಸಾಕ್ಷಿಯಾಗಿದೆ. ಆ ಕಾರಣವಾಗಿಯೇ ಈ ಕೆರೆ ಮಾತ್ರ ವಿಟ್ಲದ ನಮ್ಮೆಲ್ಲರ ಹೆಮ್ಮೆಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಇಂದಿಗೂ ಉಳಿದುಕೊಂಡಿದೆ. ಅದರ ಅಭಿವೃದ್ಧಿ ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಗ್ರಾಮೀಣ ಈಜುಪಟುಗಳ ನರ್ಸರಿ! ಆಧುನಿಕ ಇತಿಹಾಸದಲ್ಲಿ ಈ ಕೆರೆಯು ಕೇವಲ ನೀರಿನ ಮೂಲವಾಗಿ ಉಳಿಯದೆ, ಗ್ರಾಮೀಣ ಭಾಗದ ಅದ್ಭುತ ಕ್ರೀಡಾ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಅನೇಕ ಮಂದಿ ಈಜು ತರಬೇತುದಾರರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆರೆಯಲ್ಲಿ ಸಾವಿರಾರು ಗ್ರಾಮೀಣ ಯುವಕರಿಗೆ ಉಚಿತವಾಗಿ ಈಜು ಕಲಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜುಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಸಹಕಾರಕ್ಕೆ ಸಮಿತಿ ವಿನಂತಿ: ಇತಿಹಾಸ ಪ್ರಸಿದ್ಧ ಈ ಕೆರೆಗೆ ಬಂದೊದಗಿರುವ ದುಸ್ಥಿತಿಯನ್ನು ಕಂಡು ಮರುಗಿದ ವಿಟ್ಲದ ಕೆಲವು ಕೊಡುಗೈ ದಾನಿಗಳು, ದೈನಂದಿನ ಈಜುಗಾರರು, ಪೋಷಕರು, ವಿಟ್ಲದ ಕಲಾರಾಧಕರು ಹಾಗೂ ಕೋಟಿಕೆರೆಯ ಅಭಿಮಾನಿಗಳು ಸೇರಿಕೊಂಡು ಇದನ್ನು ಸ್ವಾವಲಂಬನೆಯಿಂದ ಉಳಿಸಿಕೊಳ್ಳುವ ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ. ತನು, ಮನ, ಧನದ ಮೂಲಕ ಇದರ ಅಭಿವೃದ್ಧಿಯ ಸಂಕಲ್ಪಕ್ಕಾಗಿ ಪಣ ತೊಟ್ಟಿದ್ದಾರೆ.

ಮುಂದಿನ ಪೀಳಿಗೆಗೆ ಇತಿಹಾಸ ಹಾಗೂ ಪರಿಸರವನ್ನು ಉಳಿಸುವ ಈ ಪವಿತ್ರ ಕಾರ್ಯಕ್ಕೆ ವಿಟ್ಲ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬ ಸಾರ್ವಜನಿಕರು, ಅಭಿಮಾನಿಗಳು ಬಂದು ತಮ್ಮ ಸಹಕಾರವನ್ನು ನೀಡಬೇಕಾಗಿದೆ. ಇದು ಕೇವಲ ತನು-ಮನದಿಂದ ಆಗುವ ಕೆಲಸವಲ್ಲ, ಇದರ ಜೊತೆಗೆ ಧನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ನಮ್ಮ ಊರಿನ ಈ ಸುಂದರ ಕೋಟಿ ಕೆರೆಗೆ ಹೊಸ ಜೀವ ಕಳೆ ನೀಡಲು ಉದಾರ ಮನಸ್ಸಿನಿಂದ ಎಲ್ಲರೂ ಧನಸಹಾಯ ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕಾಗಿ “ಕೋಟಿಕೆರೆ ಅಭಿವೃದ್ಧಿ ಬಳಗ” ವಿನಂತಿಸಿದ್ದು, ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಹೇಳಿದೆ. ಈ ಅಭಿವೃದ್ಧಿ ಬಳಗ ಒಂದು ವಾಟ್ಸಾಪ್ ಗ್ರೂಫನ್ನು ರಚಿಸಿಕೊಂಡಿದ್ದು, ಇನ್ನಷ್ಟು ಮಾಹಿತಿಗಳು, ದಿನಂಪ್ರತಿಯ ಕೆಲಸಕಾರ್ಯಗಳ ವಿವರಗಳು ಅದರಲ್ಲಿ ಹಾಕಲಾಗುತ್ತಿದ್ದು, ಗ್ರೂಪನ್ನು ಸೇರಲು ಕೆಳಗೆ ಲಿಂಕನ್ನು ನೀಡಲಾಗಿದೆ.
ಕೋಟಿಕೆರೆ ಅಭಿವೃದ್ಧಿ ಬಳಗ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/FfKDbO1gjcF4g11qZIgTzT





Article
ದಯಾನಂದ ಕುಂತೂರು ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕರಾವಳಿಯ ಕಲಾಭಿಮಾನಿಗಳ ಹೃದಯ ಗೆದ್ದ ಸ್ತ್ರೀ ವೇಷಧಾರಿಗೆ ಸಂದ ಗೌರವ
ರಂಗಭೂಮಿಯ ‘ಕಲಾರತ್ನ ಮಣಿ’ ದಯಾನಂದ ಕುಂತೂರು: ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಅನಭಿಷಿಕ್ತ ಕಲಾ ಸಾಮ್ರಾಟನಿಗೆ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’
ತುಳು-ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ಕಲಾ ಸೇವೆಯನ್ನೇ ಕಾಯಕವಾಗಿಸಿಕೊಂಡು ಯಶಸ್ಸಿನ ಶಿಖರವೇರಿದ ಧೀಮಂತ ಕಲಾವಿದ ಶ್ರೀ ದಯಾನಂದ ಕುಂತೂರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯ ವಿವಿಧ ಮಜಲುಗಳಲ್ಲಿ ಪಯಣಿಸಿ, ಸುಮಾರು 2500ಕ್ಕೂ ಅಧಿಕ ನಾಟಕಗಳಲ್ಲಿ ಅದ್ಭುತವಾಗಿ ಸ್ತ್ರೀ ವೇಷಧಾರಿಯಾಗಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಅವರ ಸಾಂಸ್ಕೃತಿಕ ಸಾಧನೆಯ ಮುಕುಟಕ್ಕೆ ಅತ್ಯುನ್ನತ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯ ಜಗದಗಲದ ಗರಿ ಸೇರ್ಪಡೆಯಾಗಿದೆ. ಇದು ಇಡೀ ಕರಾವಳಿ ಹಾಗೂ ಕನ್ನಡಿಗರು ಹೆಮ್ಮೆಪಡುವಂತಹ ಕ್ಷಣವಾಗಿದೆ.

ಬಾಲ್ಯ ಮತ್ತು ಕಲಾ ಪ್ರವೇಶದ ಹೆಜ್ಜೆಗಳು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂತೂರಿನ ಶ್ರೀಯುತ ಶೀನಪ್ಪ ಪೂಜಾರಿ ಅಲೆಕ್ಕಾಡಿ ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಏಳನೇ ಮಗನಾಗಿ 07-06-1969 ರಲ್ಲಿ ದಯಾನಂದ ಕುಂತೂರು ಜನಿಸಿದರು. ಕುಂತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಉಪ್ಪಿನಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದರು.
ಶಾಲಾ ದಿನಗಳಲ್ಲೇ ಬಣ್ಣದ ಪ್ರಪಂಚದ ಕಡೆಗೆ ಆಕರ್ಷಿತರಾಗಿದ್ದ ದಯಾನಂದರು, ತಮ್ಮ ಎಂಟನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ಅವರು ವೃತ್ತಿಪರವಾಗಿ ಬಣ್ಣ ಹಚ್ಚಿದ ಮೊದಲ ತುಳು ನಾಟಕ ‘ನೇತ್ತರ್ದ ಕಾಣಿಕೆ’. ಅಲ್ಲಿಂದ ಆರಂಭವಾದ ಇವರ ಕಲಾ ಯಾನ ಇಂದಿಗೂ ದಣಿವರಿಯದ ಜಲಪಾತದಂತೆ ಮುನ್ನಡೆಯುತ್ತಿದೆ.

ಸ್ತ್ರೀ ಪಾತ್ರಗಳ ಮೂಲಕ ಅಪಾರ ಜನಮನ್ನಣೆ:
ತುಳು ಹಾಗೂ ಕನ್ನಡ ನಾಟಕ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಅಷ್ಟೇ ಸಹಜವಾಗಿ, ಆಕರ್ಷಕವಾಗಿ ಮತ್ತು ತನ್ಮಯತೆಯಿಂದ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಆದರೆ ದಯಾನಂದ ಕುಂತೂರು ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಸ್ತ್ರೀ ಸಹಜ ಭಾವನೆಗಳಾದ ನವರಸಗಳನ್ನು ರಂಗದ ಮೇಲೆ ಅತ್ಯಂತ ಮನೋಜ್ಞವಾಗಿ ಉಣಬಡಿಸಿದ್ದಾರೆ.
ಇವರು ನಟಿಸಿದ ಪ್ರಮುಖ ನಾಟಕಗಳಾದ ಬೈಯ ಮಲ್ಲಿಗೆ, ಗಂಗಾರಾಮು, ಗಂಗೆ ಗೌರಿ, ಸರಸ್ವತಿ, ತುಂಗಭದ್ರಾ, ಮೇಘ ಮುರಾರಿ, ಅಜ್ಜಿಗೆ ಎರ್ಲಾ ಇಜ್ಜಿ, ಗುತ್ತುದ ಇಲ್ಲ್, ಭೈರನ ಕುರಲ್, ಎನ್ನ ಕಥೆ ಬರೆಪರ, ಎರ್ಲಾ ಉಲ್ಲೇರ ಈ ಇಲ್ಲಾ, ತೆಲಿಪೆರಲಾ ಅತ್ತ್ ಬುಲಿಪೆರಲಾ ಅತ್ತ್, ದೇವತೆ, ಬದುಕು ಒಂಜಿ ನಾಟಕ, ಉಡಲ್ ಮೊಕೆದ ಕಡಲು, ಸಂಸಾರ ದೊಂಜಿ ಅಪಸ್ವರ, ಮಲ್ದೇದಿ, ಪೊನ್ನು ಒಂಜಿ ಪುದೆ, ಗಗ್ಗರೆ, ನಾಗ ನೆರೆಲ್, ನಾಗಬನ, ನಾಗನಿಧಿ, ಈರ್ ಎರ್ ಇಂಬೇರೆ, ದಾರೇದ ಸಿರಿ, ಕುಂಕುಮ, ಶನೇಶ್ವರ ಮಹಾತ್ಮೆ ಮುಂತಾದ ನೂರಾರು ಯಶಸ್ವಿ ನಾಟಕಗಳಲ್ಲಿ ಪ್ರಮುಖ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಅಲ್ಲದೆ, ಖ್ಯಾತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಕಲಾ ಸಂಗಮ ತಂಡದ ಸೂಪರ್ ಹಿಟ್ ನಾಟಕಗಳಾದ ‘ಒರಿಯರ್ದೊರಿ ಅಸಲ್ ಭಾಗ-2’ ಮತ್ತು ‘ಕೊಲ್ಯೂರು ಮೂಕಾಂಬಿಕೆ’ ನಾಟಕಗಳಲ್ಲಿನ ಇವರ ಅಭಿನಯ ರಂಗಭೂಮಿಯ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ. ಹತ್ತು ನಿಮಿಷದಲ್ಲಿ ಬರೋಬ್ಬರಿ 12 ಸೀರೆಗಳನ್ನು ಒಂದು ನೃತ್ಯದಲ್ಲಿ ಬದಲಾಯಿಸಿ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ಜನರನ್ನು ಚಕಿತಗೊಳಿಸಿದ ಕೀರ್ತಿ ಇವರದ್ದಾಗಿದೆ. ಕಿರುತೆರೆಯಲ್ಲೂ ಹೆಜ್ಜೆ ಇಟ್ಟಿರುವ ಇವರು ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಧಾರಾವಾಹಿ ‘ಫಿಫ್ಟಿ ಫಿಫ್ಟಿ ಕನ್ನಡ’ ಮತ್ತು ಕನ್ನಡ ಚಲನಚಿತ್ರ ‘ಲಕ್ಷ್ಮಣ’ ದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕರಾವಳಿಯ ಹೆಮ್ಮೆಯ ಕಲಾ ರಾಯಭಾರಿ:
ದಯಾನಂದ ಕುಂತೂರು ಅವರ ಕಲಾ ಪ್ರೌಢಿಮೆ ಕೇವಲ ಕರಾವಳಿ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇವರು ಕರ್ನಾಟಕ ಸಾಂಸ್ಕೃತಿಕ ಇಲಾಖೆಯ ವತಿಯಿಂದ ರಾಜ್ಯದ ಅಧಿಕೃತ ಪ್ರತಿನಿಧಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ನಾಡಿನ ಕೀರ್ತಿಯನ್ನು ದೇಶದ ಗಡಿಯಲ್ಲಿ ಹೆಚ್ಚಿಸಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಾದ ದುಬೈ, ಅಬುಧಾಬಿ, ಮತ್ತು ಓಮನ್ ದೇಶಗಳಲ್ಲೂ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯ ರಾಯಭಾರಿಯಾಗಿದ್ದಾರೆ. ಇಂದಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಗಳ ಟ್ಯಾಬ್ಲೋಗಳಲ್ಲಿ (ಸ್ತಬ್ಧಚಿತ್ರ) ಇವರ ಸ್ತ್ರೀ ವೇಷಧಾರಿಯ ರೂಪಕ್ಕೆ ಅತ್ಯಂತ ಅಪಾರ ಬೇಡಿಕೆಯಿದೆ. ಯಕ್ಷಗಾನ ರಂಗದಲ್ಲೂ ಇವರು ತಮ್ಮ ಚತುರತೆಯನ್ನು ತೋರಿದ್ದಾರೆ.
ಹುಡುಕಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು:
ದಯಾನಂದ ಕುಂತೂರು ಅವರ ಸುದೀರ್ಘ 4 ದಶಕಗಳ ಕಲಾ ಸೇವೆಯನ್ನು ಗುರುತಿಸಿ ನೂರಾರು ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ:

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2022): ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುನ್ನತ ನಾಗರಿಕ ಗೌರವ.
ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಜಾಗತಿಕ ಮಟ್ಟದ ಸಾಧನೆಗಾಗಿ ಸಂದ ಪ್ರತಿಷ್ಠಿತ ಪುರಸ್ಕಾರ.
ರಂಗಭೂಮಿ ಕಲಾ ಸೇವಾರತ್ನ ಪ್ರಶಸ್ತಿ: ಕನ್ನಡ ಫಿಲಂ ಚೇಂಬರ್ (ರಿ) ಬೆಂಗಳೂರು ಇವರಿಂದ ರಾಜ್ಯ ಮಟ್ಟದ ಗೌರವ.
ರಾಜ್ಯಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ: ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಇವರಿಂದ ಸನ್ಮಾನ.
ಸಾಯಿ ಕಲಾವಿದೆರ್ ಸಂಸ್ಥೆ (ರಿ) ಕುಡ್ಲ ಇವರಿಂದ ಸಾಯಿ ಕಲಾಶ್ರೀ ಪ್ರಶಸ್ತಿ
ಬಿರುದು ಸನ್ಮಾನಗಳು:
ಬಾಲ್ಯ ಮೂಕಾಂಬಿಕೆ ಕ್ಷೇತ್ರ ಪಾಲ್ತಿಮಾರ್ ಇವರಿಂದ “ತುಳುನಾಡ ಅಭಿನೇತ್ರಿ” ಬಿರುದು.
ಜಾತ್ಯತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರಿಂದ “ನಾಟ್ಯಮಯೂರಿ” ಬಿರುದು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ನಾಟಕ ರಂಗದ ಮಿನುಗುತಾರೆ” ಗೌರವ.
ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರಿಂದ “ಕಲಾರತ್ನ ಮಣಿ” ಬಿರುದು.
ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ಇವರಿಂದ “ಅಗ್ನಿದುರ್ಗೆ ಪುರಸ್ಕಾರ”.
ದ.ಕ.ಜ.ಪಂ. ಉ.ಹಿ.ಪ್ರಾ. ಶಾಲೆ ಕುಂತೂರು ಇವರಿಂದ “ಕಲಾರತ್ನ ಮಗ” ಗೌರವ.
ಮಂಗಳೂರಿನ ಪ್ರಸಿದ್ಧ ನಾಟಕ ತಂಡಗಳಾದ ಧರಿತ್ರಿ ಕಲಾವಿದೆರ್, ತುಳುವೇರ್ ತುಡರ್, ಕಲಾ ಸಂಗಮ, ತುಳುವೇರ್ ಉಡಲ್ ಜೋಡುಕಲ್ಲು, ಸಾಯಿ ಕಲಾವಿದರ್ ಕುಡ್ಲ, ತ್ರಿನೇತ್ರ ಕಲಾವಿದರ್ ಕುಡ್ಲ ಸೇರಿದಂತೆ ಹಲವಾರು ಪ್ರತಿಷ್ಠಿತ ಕಲಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಅಪ್ಪಟ ರಂಗ ಕಾಯಕ ಯೋಗಿಯಾಗಿ, ಅಹರ್ನಿಷಿ ಕಲೆಯನ್ನೇ ಉಸಿರಾಡುತ್ತಿರುವ ಶ್ರೀ ದಯಾನಂದ ಕುಂತೂರು ಅವರಿಗೆ ಲಭಿಸಿರುವ ಈ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯು ಅವರ ಕಠಿಣ ಪರಿಶ್ರಮ ಮತ್ತು ಕಲಾ ಭಕ್ತಿಗೆ ಸಂದ ನೈಜ ಗೌರವವಾಗಿದೆ. ಕಲಾಮಾತೆಯ ಕೃಪೆ ಇವರ ಮೇಲೆ ಸದಾ ಇರಲಿ, ದೇವರು ಇವರಿಗೆ ಆಯುಷ್ಯ, ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ, ಇವರಿಂದ ರಂಗಭೂಮಿಗೆ ಮತ್ತಷ್ಟು ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದು ನಾಡಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.




-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
