Bantawala
ಭಕ್ತರ ನೋವಿನ ಮದ್ಯೆಯೇ ಅಷ್ಟಕುಲ ನಾಗದೇವರ ಚರಪ್ರತಿಷ್ಠೆ;ಶತಮಾನಗಳ ಇತಿಹಾಸವಿರುವ ನಾಗಬನ ಧ್ವಂಸ ಪ್ರಕರಣ; ಮೂಲ ಸ್ಥಳದಲ್ಲಿಯೇ ನಾಗಪ್ರತಿಷ್ಠೆ ನಡೆಯುವ ಘಳಿಗೆಗಾಗಿ ಸಂಕಲ್ಪ ಮಾಡಿದ ಭಕ್ತರು.
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/03/10-1000x600.jpg&description=ಭಕ್ತರ ನೋವಿನ ಮದ್ಯೆಯೇ ಅಷ್ಟಕುಲ ನಾಗದೇವರ ಚರಪ್ರತಿಷ್ಠೆ;ಶತಮಾನಗಳ ಇತಿಹಾಸವಿರುವ ನಾಗಬನ ಧ್ವಂಸ ಪ್ರಕರಣ; ಮೂಲ ಸ್ಥಳದಲ್ಲಿಯೇ ನಾಗಪ್ರತಿಷ್ಠೆ ನಡೆಯುವ ಘಳಿಗೆಗಾಗಿ ಸಂಕಲ್ಪ ಮಾಡಿದ ಭಕ್ತರು.', 'pinterestShare', 'width=750,height=350'); return false;" title="Pin This Post">
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದ ಬೊಂಡಾಳ ಸೇನೆರೆಬೈಲು ಎಂಬಲ್ಲಿ ಅನಾದಿ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಪವಿತ್ರ ನಾಗಬನ ಹಾಗೂ ರಕ್ತೇಶ್ವರೀ ದೈವದ ಸಾನಿಧ್ಯವನ್ನು ಕಮರ್ಷಿಯಲ್ ಯೋಜನೆಗಳಿಗಾಗಿ ಧ್ವಂಸಗೊಳಿಸಿರುವ ಘಟನೆ ಭಕ್ತಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನ್ಯಾಯದ ವಿರುದ್ಧ ಸಿಡಿದೆದ್ದಿರುವ ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ಥರು ಹಾಗೂ ಸ್ಥಳೀಯ ಭಕ್ತರು, ದೈವಜ್ಞರ ಸೂಚನೆಯಂತೆ ಆ ಪ್ರದೇಶದಲ್ಲಿಯೇ ಪರ್ಯಾಯ ಜಾಗದಲ್ಲಿ ನಾಗದೇವರ ಚರಪ್ರತಿಷ್ಠೆಯನ್ನು ನೆರವೇರಿಸಿದ್ದಾರೆ. “ಸತ್ಯ ಶ್ರೀಮಂತಿಕೆಯ ಮುಂದೆ ಸೋಲಬಹುದು, ಆದರೆ ಸಾಯುವುದಿಲ್ಲ” ಎಂದು ನಂಬಿರುವ ಭಕ್ತ ಸಮೂಹ, ಮೂಲ ಸ್ಥಳದಲ್ಲಿಯೇ ನಾಗಪ್ರತಿಷ್ಠೆ ನಡೆಯುವವರೆಗೆ ನಾಗನಿಗೆ ಒದಗಿಬಂದಿರುವ ಸಂಕಷ್ಟವನ್ನು ಒಂದು ಮಹಾನ್ ತಪಸ್ಸಿನಂತೆ ಸ್ವೀಕರಿಸಿ ನಮ್ಮ ಸಂಕಲ್ಪ ಈಡೇರುವ ತನಕ ಗ್ರಾಮದ ಮತ್ತು ತರವಾಡಿನ ದೈವದೇವರು ಮತ್ತು ಅಷ್ಟಕುಲ ನಾಗದೇವರಿಗೆ ಪ್ರತಿನಿತ್ಯ ಪ್ರಾರ್ಥಿಸಿ ಆ ಶುಭಘಳಿಗೆಗಾಗಿ ಬೇಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆ:
ಬೊಂಡಾಳ ಸೇನೆರೆಬೈಲಿನಲ್ಲಿ ನೂರಾರು ಕುಟುಂಬಗಳ ಆರಾಧ್ಯ ಸಾನಿಧ್ಯವಾಗಿದ್ದ ನಾಗಬನ ಮತ್ತು ರಕ್ತೇಶ್ವರೀ ಕಟ್ಟೆಯನ್ನು ಭೂಮಿ ಖರೀದಿದಾರರಾದ ಸತೀಶ್ ಕುಮಾರ್ ಅವರು, ಪುರೋಹಿತ ಕೇಶವ ಅಶಾಂತಿ ಎಂಬವರ ಮಾರ್ಗದರ್ಶನದಲ್ಲಿ ಜೆಸಿಬಿ ಬಳಸಿ ಸಂಪೂರ್ಣವಾಗಿ ನೆಲಸಮ ಮಾಡಿದ್ದಾರೆ. ಶತಮಾನಗಳ ಇತಿಹಾಸವಿರುವ ನೈಸರ್ಗಿಕ ನಾಗಬನ ಹಾಗೂ ಪವಿತ್ರ ಕೆರೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ನಾಶಪಡಿಸಿರುವುದು ಸಾವಿರಾರು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ.

ಘಟನೆಯ ಹಿನ್ನೆಲೆ ಮತ್ತು ದೈವದ್ರೋಹದ ಆರೋಪ:
ಬೊಳ್ಳೆಮಾರ್ ಬಿಲ್ಲವ ಕಿರೋಡಿಯನ್ ಕುಟುಂಬಸ್ಥರು ಮತ್ತು ಭಕ್ತರು ಸೇರಿ ಸುಮಾರು 15 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿದ್ದ ಈ ಸಾನಿಧ್ಯವನ್ನು, ಯಾವುದೇ ಮುನ್ಸೂಚನೆ ನೀಡದೆ ರಾತ್ರೋರಾತ್ರಿ ಜೆಸಿಬಿ ಬಳಸಿ ನೆಲಸಮ ಮಾಡಲಾಗಿತ್ತು. ನಾಗಬನದಲ್ಲಿದ್ದ ಬೃಹದಾಕಾರದ ಮರಗಳನ್ನು ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿ ಕಡಿದು ಸಾಗಿಸಲಾಗಿದೆ. ಅನ್ಯಧರ್ಮೀಯರಿಂದ ಇಂತಹ ಘಟನೆ ನಡೆದಿದ್ದರೆ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿದ್ದವು. ಆದರೆ, ಸ್ವಧರ್ಮದವರೇ ಸಾನಿಧ್ಯಗಳನ್ನು ನಾಶಪಡಿಸುತ್ತಿದ್ದರೂ ಧರ್ಮರಕ್ಷಕರು ಹಾಗೂ ಧಾರ್ಮಿಕ ಮುಖಂಡರು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ನೊಂದ ಕುಟುಂಬಸ್ಥರು ನ್ಯಾಯಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿದರೂ, ಕಾನೂನು ಹೋರಾಟ ಮಾಡಿದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೈವಜ್ಞರ ಮೊರೆ ಹೋಗಿದ್ದರು.

ದೈವಜ್ಞರ ಎಚ್ಚರಿಕೆ ಮತ್ತು ಪ್ರಶ್ನಾ ಚಿಂತನೆ:
ಘಟನೆಗೆ ಸಂಬಂಧಿಸಿದಂತೆ ಫೆ.15ರಂದು ನಡೆದ ಪ್ರಶ್ನಾ ಚಿಂತನೆಯಲ್ಲಿ, “ನಾಗಬನವನ್ನು ಸ್ಥಳಾಂತರಿಸುವಂತಿಲ್ಲ, ಎಲ್ಲಿ ನಾಶವಾಗಿದೆಯೋ ಅದೇ ಸ್ಥಳದಲ್ಲಿ ಪುನರ್ ಪ್ರತಿಷ್ಠೆ ನಡೆಯಬೇಕು. ಇಲ್ಲವಾದಲ್ಲಿ ಸಂಕಷ್ಟಗಳು ಎದುರಾಗಲಿವೆ” ಎಂದು ದೈವಜ್ಞರು ಎಚ್ಚರಿಸಿದ್ದರು. ಈ ಬಗ್ಗೆ ನಾನು ಮುಂದುವರಿಯುವುದಿಲ್ಲ ಎಂದು ದೈವಜ್ಞರಲ್ಲಿ ಮಾತುಕೊಟ್ಟ ಅಶಾಂತಿಯು ಮಾತು ತಪ್ಪಿಸಿದಲ್ಲದೆ, ಆತನ ನೇತೃತ್ವದಲ್ಲಿ ನಾಗನ ಶಿಲೆಗಳನ್ನು ಖರೀದಿದಾರನ ಅಣತಿಯಂತೆ ಫೆ. 27ರಂದು ನಾಗನಿಗೆ ಸಂಬಂಧಿಸದ ಜಾಗದಲ್ಲಿ ಪ್ರತಿಷ್ಠೆ ಮಾಡಲು ಮುಂದಾದ ಘಟನೆಯೂ ನಡೆದಿದೆ. ನಾಗಬನವನ್ನು ಸ್ಥಳಾಂತರಿಸಬಹುದು ಎಂದು ತಪ್ಪು ಮಾರ್ಗದರ್ಶನ ನೀಡಿದ ಪುರೋಹಿತ ಕೇಶವ ಅಶಾಂತಿ ಅವರ ನಡೆಗೆ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಸ್ವಾರ್ಥಕ್ಕಾಗಿ ಧರ್ಮನಿಷ್ಠೆಯನ್ನು ಮಾರಿಕೊಂಡ ಇಂತಹ ಮಾರ್ಗದರ್ಶಕರಿಂದಲೇ ಇಂದು ದೈವಿಕ ಶಕ್ತಿಗಳಿಗೆ ಸಂಕಷ್ಟ ಎದುರಾಗಿದೆ” ಎಂದು ಭಕ್ತರು ದೂರಿದ್ದಾರೆ. ಫೆಬ್ರವರಿ 27 ರಂದು ಸಂಜೆ ನಾಗಶಿಲೆಗಳನ್ನು ಸ್ಥಳಾಂತರಕ್ಕೆ ಯತ್ನಿಸುವ ಪ್ರಕ್ರಿಯೆಗಳು ನಡೆಯುತ್ತಿರುವಂತೆಯೇ ಪೊಲೀಸರ ಸಮ್ಮುಖದಲ್ಲೇ ಭಕ್ತರು ಅಶಾಂತಿಯನ್ನು ತರಾಟೆಗೆ ತೆಗೆದುಕೊಂಡಾಗ ನಾನು ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ನಾಗ ಪ್ರತಿಷ್ಠೆಯನ್ನು ಮಾಡುವುದಿಲ್ಲ, ನಾಗಶಿಲೆಗಳನ್ನು ಇಲ್ಲಿಂದ ತೆರವುಗೊಳಿಸಬೇಕೆಂದು ಹೇಳಿದ್ದರು.
ಅನಾದಿಕಾಲದ ಆರಾಧಕ ವಂಶದ ಸಹೋದರರಿಂದ ನಾಗನಿಗೆ ನೆಲೆ
ತಾವು ಅನಾದಿಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ನಾಗನ ನೆಲೆ ನಾಶವಾದಾಗ ಬೀದಿಗೆ ಬಿದ್ದು ಹೋರಾಟ ಮಾಡಿದ ಭಕ್ತರಿಗೆ ಕೊನೆಗೂ ಜಯ ಲಭಿಸಿದೆ. ಭಕ್ತರ ಆಕ್ರೋಶಕ್ಕೆ ಮಣಿದು ಕೈತಪ್ಪಿ ಹೋದ ನಾಗನ ಶಿಲೆಗಳನ್ನು ನಾಗಾರಾಧಕರಿಗೆ ನೀಡಲು ಒಪ್ಪಿಗೆ ನೀಡಿ ಗಡುವು ವಿಧಿಸಿದ್ದಾರೆ. ತಕ್ಷಣ ಎಚ್ಚೆತ್ತ ದೈವಾರಾಧಕರು ನಾಗಶಿಲೆಗಳಿಗೆ ನೆಲೆ ನೀಡುವ ಬಗ್ಗೆ ದೈವಜ್ಞರ ಮೊರೆಹೋಗಿದ್ದಾರೆ. ದೈವಜ್ಞರು ಸ್ಥಳದಲ್ಲಿ ಯಾವ ರೀತಿಯಲ್ಲಿ ಚಿಂತನೆ ನಡೆಸಿ ಈ ಹಿಂದೆ ತಿಳಿಸಿದ್ದಾರೋ ಅದೇ ರೀತಿಯಲ್ಲಿ ಮತ್ತೆ ತಿಳಿಸಿ ಆ ಪ್ರದೇಶವನ್ನು ಬಿಟ್ಟು ಹೋಗುವುದಕ್ಕೆ ನಾಗ ದೇವರು ಸಿದ್ದನಿಲ್ಲ. ಅದೇ ಪರಿಸರದಲ್ಲಿ ಹೆಚ್ಚು ದೂರವಾಗದಂತೆ ( ಸಾನಿಧ್ಯವನ್ನು ನೋಡಿಕೊಂಡಿರುವಂತೆ) ಜಾಗವನ್ನು ಹುಡುಕಿ ಎಂದು ನಿರ್ದೇಶಿಸಿದ್ದಾರೆ. ಅದರಂತೆ ತಕ್ಷಣ ಸಭೆ ಸೇರಿದ ಭಕ್ತರು ವಿಷಯವನ್ನು ಪ್ರಸ್ತಾಪಿಸಿದಾಗ ಬೊಂಡಾಳ ಜಯಶಂಕರ್ ಅವರ ಮುಂದಾಳುತ್ವದಲ್ಲಿ ಅನಾದಿಕಾಲದಿಂದಲೂ ಆರಾಧನೆ ಮಾಡುತ್ತಿದ್ದ ವಂಶಸ್ಥರಾದ ದಿ. ರಾಮ ಪೂಜಾರಿಯವರ ಮಕ್ಕಳಾದ ಚಿದಾನಂದ ಪೂಜಾರಿ ಮತ್ತು ಶಿವಾನಂದ ಪೂಜಾರಿಯವರು ಮುಂದೆ ಬಂದು ನಾಗನಿಗೆ ಅವರ ದೈವಸ್ಥಾನದ ಪಕ್ಕದಲ್ಲಿಯೇ ಜಾಗ ನೀಡಲು ಒಪ್ಪಿದ್ದಾರೆ. ಈ ವಿಷಯವನ್ನು ದೈವಜ್ಞರಲ್ಲಿ ಪ್ರಶ್ನಿಸಲಾಗಿ ನಾಗದೇವರ ಅನುಗ್ರಹ ಒದಗಿ ಬಂದಿದ್ದು, ದೈವಸ್ಥಾನದ ಕನ್ಯಾಭಾಗದಲ್ಲಿ ತಾತ್ಕಾಲಿಕ ಕಟ್ಟೆ ನಿರ್ಮಿಸಿ ಚರ ಪ್ರತಿಷ್ಠೆ ಮಾಡುವಂತೆ ತಿಳಿಸಿದ್ದಾರೆ.
ಶ್ರದ್ಧಾಭಕ್ತಿಯಿಂದ ನಡೆದ ಚರಪ್ರತಿಷ್ಠೆ:
ನಾಗಬನ ನಾಶವಾದ ಪರಿಸರದಲ್ಲಿಯೇ ಆರಾಧನೆ ಮುಂದುವರಿಸಲು ಭಕ್ತರು ನಿರ್ಧರಿಸಿದ್ದಾರೆ. ದೈವಜ್ಞರ ಮಾರ್ಗದರ್ಶನದಲ್ಲಿ ಮತ್ತು ಕ್ಷೇತ್ರದ ತಂತ್ರಿಗಳಾದ ಶಂಕರ ಹೊಳ್ಳ ನಾಗತ್ತಿಮಾರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಮಾರ್ಚ್ 8ರಂದು ಸಮೀಪದ ( ನಾಗಬನ ನಾಶವಾದ ಸ್ಥಳದಿಂದ ಸುಮಾರು 100 ಮೀಟರ್ ದೂರದ ದೈವಸ್ಥಾನದ ಆವರಣದೊಳಗಡೆ ) ಪಂಜರ್ಲಿ ಕಲ್ಲುರ್ಟಿ ದೈವಸ್ಥಾನದ ಕನ್ಯಾಭಾಗದಲ್ಲಿ ಶಿಲ್ಪಿಗಳಿಂದ ವಾಸ್ತು ಆಧಾರಿತವಾದ ತಾತ್ಕಾಲಿಕ ಕಟ್ಟೆ ನಿರ್ಮಿಸಿ, ಅಷ್ಟಕುಲ ನಾಗದೇವರು ಹಾಗೂ ರಕ್ತೇಶ್ವರೀ ದೈವದ ಚರಪ್ರತಿಷ್ಠೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.

ನೂತನ ಕಟ್ಟೆಯಲ್ಲಿ ನಾಗಬ್ರಹ್ಮ, ನಾಗರಾಜ, ನಾಗಕನ್ನಿಕೆ ಸೇರಿದಂತೆ ಅಷ್ಟಕುಲ ನಾಗದೇವರು ಮತ್ತು ರಕ್ತೇಶ್ವರೀ ದೈವಗಳಿಗೆ ಪೂಜೆ ಸಲ್ಲಿಸಲಾಯಿತು. “ಮೂಲ ಸಾನಿಧ್ಯದಲ್ಲಿ ಪುನರ್ ಪ್ರತಿಷ್ಠೆಯ ಕಾಲ ಕೂಡಿಬರುವವರೆಗೆ ಇಲ್ಲೇ ವಾರ್ಷಿಕ ಆರಾಧನೆಗಳು ನಡೆಯಲಿವೆ” ಎಂದು ಕುಟುಂಬಸ್ಥರು ಈ ಸಂದರ್ಭದಲ್ಲಿ ಸಂಕಲ್ಪ ಮಾಡಿದರು.
Bantawala
ಪಣೋಳಿಬೈಲು ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ ಅಗೇಲು ಸೇವೆ ಸಮರ್ಪಣೆ!
ಬಂಟ್ವಾಳ: ತುಳುನಾಡಿನ ಇತಿಹಾಸ ಪ್ರಸಿದ್ಧ, ಪರಮ ಕಾರಣೀಕ ಕ್ಷೇತ್ರವಾದ ಬಂಟ್ವಾಳ ತಾಲೂಕಿನ ಪಣೋಳಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಗರಿಷ್ಠ ಪ್ರಮಾಣದ ಅಗೇಲು ಸೇವೆ ನಡೆದಿದೆ. ಅಂದು ಒಂದೇ ದಿನ ಭಕ್ತರಿಂದ ಬರೋಬ್ಬರಿ 4,180 ಅಗೇಲು ಸೇವೆಗಳು ಸಂದಾಯವಾಗುವ ಮೂಲಕ ಕ್ಷೇತ್ರದ ಕಾರಣೀಕ ಶಕ್ತಿಗೆ ಸಾಕ್ಷಿಯಾಯಿತು .
ಇಷ್ಟೊಂದು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಏಕದಿನದಲ್ಲಿ ಅಗೇಲು ಸೇವೆ ಸಲ್ಲಿಸುತ್ತಿರುವುದು ಕಲ್ಲುರ್ಟಿ ದೈವದ ಮೇಲಿನ ಅವರ ಅಚಲ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿದೆ. ಇದು ಈ ವರ್ಷದಲ್ಲಿ ಸಂದಾಯವಾದ ಅತ್ಯಂತ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ.
ಶೈಕ್ಷಣಿಕ ವರ್ಷದ ಆರಂಭ: ಪ್ರಾರ್ಥನೆ ಸಲ್ಲಿಸಿದ ಭಕ್ತರ ದಂಡು
ಪ್ರಸ್ತುತ ಶಾಲಾ-ಕಾಲೇಜುಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಲುರ್ಟಿ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಲು ಭಕ್ತರು ಮುಗಿಬಿದ್ದಿದ್ದರು. ಮಕ್ಕಳ ಉತ್ತಮ ವಿದ್ಯಾಭ್ಯಾಸ, ಉನ್ನತ ಶಿಕ್ಷಣ ಸಂಸ್ಥೆಗಳ ಆಯ್ಕೆ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಹಾಗೂ ವಿದೇಶಕ್ಕೆ ತೆರಳುವ ಭಕ್ತರ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ಕರಾವಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಸನ್ನಿಧಿಗೆ ಭೇಟಿ ನೀಡಿ ಅಗೇಲು ಸೇವೆ ಸಲ್ಲಿಸಿದರು. ಸಾಮಾನ್ಯವಾಗಿ ಶಾಲಾ-ಕಾಲೇಜು ರಜೆ ಅಥವಾ ವಿಶೇಷ ಹಬ್ಬಗಳ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸಿ ಹರಕೆ ತೀರಿಸುವುದು ಕ್ಷೇತ್ರದ ವಿಶೇಷತೆಯಾಗಿದೆ.
ನಿರಂತರವಾಗಿ ಸಾಗಿದ ಪ್ರಸಾದ ವಿತರಣೆ
ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1:30ರ ಬಳಿಕ ಅಗೇಲು ಸೇವೆಯ ಪ್ರಸಾದ ವಿತರಣೆ ಆರಂಭಗೊಳ್ಳುತ್ತದೆ. ಆದರೆ ಭಾನುವಾರ ಇತಿಹಾಸದಲ್ಲೇ ಗರಿಷ್ಠ ಸಂಖ್ಯೆಯ ಸೇವೆಗಳು ಇದ್ದ ಕಾರಣ ಪ್ರಕ್ರಿಯೆ ಸ್ವಲ್ಪ ತಡವಾಗಿ ಆರಂಭಗೊಂಡು, ಸಂಜೆಯ ನಂತರವೂ ನಿರಂತರವಾಗಿ ಸಾಗಿತು. ಕ್ಷೇತ್ರಕ್ಕೆ ಹರಿದುಬಂದಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದೈವದ ಪ್ರಸಾದ ಸ್ವೀಕರಿಸಿದರು.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹಾಗೂ ಸೇವೆಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ಕಳೆದ ವರ್ಷ ಜೂನ್ 22ರಂದು ಆ ವರ್ಷದ ಗರಿಷ್ಠ ಅಂದರೆ 3,871 ಅಗೇಲು ಸೇವೆಗಳು ಸಂದಾಯವಾಗಿದ್ದವು.
ಅದಕ್ಕೂ ಮುನ್ನ, 2024ರ ಜೂನ್ 2ರಂದು 3,908 ಅಗೇಲು ಸೇವೆಗಳು ಸಲ್ಲಿಕೆಯಾಗಿದ್ದವು. ಆದರೆ ಈ ಬಾರಿ ಭಾನುವಾರ 4,180 ಸೇವೆಗಳು ಸಲ್ಲಿಕೆಯಾಗಿದೆ.
ಪಣೋಳಿಬೈಲು ಕ್ಷೇತ್ರದ ಪ್ರಮುಖ ವಿಶೇಷತೆಗಳು:
- ಸಜೀಪ ಮೂಡದ ಪುಣ್ಯಕ್ಷೇತ್ರ: ಈ ಪ್ರಸಿದ್ಧ ಕಾರಣೀಕ ಕ್ಷೇತ್ರವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಂದರ ಪರಿಸರದಲ್ಲಿದೆ.
- ವಿಶೇಷ ಸೇವೆಗಳ ದಿನ: ಈ ದೈವಸ್ಥಾನದಲ್ಲಿ ವಾರದ ಮೂರು ದಿನಗಳು ಅಂದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾತ್ರ ವಿಶೇಷ ಅಗೇಲು ಸೇವೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಕ್ಷೇತ್ರದಲ್ಲಿ ಕೋಲ ಸೇವೆ ಜರುಗುತ್ತದೆ.
- ಭಾವೈಕ್ಯತೆಯ ಸನ್ನಿಧಿ: ಪಣೋಳಿಬೈಲು ಕ್ಷೇತ್ರವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಇಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲಾ ಧರ್ಮದವರೂ ಮುಕ್ತವಾಗಿ ಬಂದು ದೈವಕ್ಕೆ ಹರಕೆ ಸಲ್ಲಿಸಿ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳುವ ಅಪೂರ್ವ ಭಾವೈಕ್ಯತೆಯ ಕೇಂದ್ರವಾಗಿದೆ.
accident
ಪೆರುವಾಯಿ: ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದ ಕೋಳಿ ಸಾಗಾಟದ ಪಿಕಪ್; ಚಾಲಕ ಅದೃಷ್ಟವಶಾತ್ ಪಾರು!
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಪೆರುವಾಯಿ ಗ್ರಾಮದ ಮುಖ್ಯ ಸೇತುವೆ ಬಳಿ ಶುಕ್ರವಾರ ಮುಂಜಾನೆ ಭೀಕರ ಅಪಘಾತವೊಂದು ಸಂಭವಿಸಿದೆ. ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಪಲ್ಟಿ ಹೊಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಂಜಾನೆ ಸಂಭವಿಸಿದ ಅವಘಡ:
ಶುಕ್ರವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವು ಪೆರುವಾಯಿ ಸೇತುವೆ ತಲುಪುತ್ತಿದ್ದಂತೆ, ರಸ್ತೆ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ನಿಯಂತ್ರಣ ಕಳೆದುಕೊಂಡು ನೇರವಾಗಿ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆಗೆ ವಾಹನವು ಸಂಪೂರ್ಣವಾಗಿ ಪಲ್ಟಿಯಾಗಿದ್ದು, ಸ್ಥಳೀಯರು ತಕ್ಷಣ ಧಾವಿಸಿ ಚಾಲಕನನ್ನು ರಕ್ಷಿಸಿದ್ದಾರೆ.

ಕಿರಿದಾದ ಸೇತುವೆ, ಪಕ್ಕದಲ್ಲೇ ಟ್ರಾನ್ಸ್ಫಾರ್ಮರ್: ಹೆಚ್ಚಿದ ಅಪಘಾತಗಳ ಭೀತಿ
ಪೆರುವಾಯಿ ಸೇತುವೆಯು ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಜೋಡಿಸುವ ಅಂತರರಾಜ್ಯ ಗಡಿಭಾಗದ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಕೇರಳದ ಬೆರಿಪದವು, ಉಪ್ಪಳ ಮುಂತಾದ ಭಾಗಗಳಿಗೆ ನೂರಾರು ವಾಹನಗಳು ಸಂಚರಿಸುತ್ತವೆ.
ಆದರೆ, ಈ ಸೇತುವೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರಿಗೆ ತೀವ್ರ ಮುಜುಗರ ಉಂಟುಮಾಡುತ್ತಿದೆ. ಇದರ ಜೊತೆಗೆ ಸೇತುವೆಯ ತೀರಾ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಅಳವಡಿಸಲಾಗಿದ್ದು, ಇದು ಅಪಘಾತಗಳಿಗೆ ನೇರ ಆಹ್ವಾನ ನೀಡುವಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಇದೇ ತಿರುವಿನಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅಕ್ರಮ ಕೆಂಪುಕಲ್ಲು ಸಾಗಾಟದ ಹಾವಳಿ:
ಕೇರಳ ಕಡೆಯಿಂದ ಪ್ರತಿನಿತ್ಯ ಈ ಮಾರ್ಗವಾಗಿ ಕೆಂಪುಕಲ್ಲಿನ ಅಕ್ರಮ ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದಾಗಿ ಈ ಕಿರಿದಾದ ರಸ್ತೆಯಲ್ಲಿ ವಾಹನಗಳ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಇದು ಕೂಡ ಇಲ್ಲಿನ ಸರಣಿ ಅಪಘಾತಗಳಿಗೆ ಪ್ರಮುಖ ಕಾರಣಗಳಲ್ಲೊಂದು ಎಂದು ಸ್ಥಳೀಯರು ದೂರಿದ್ದಾರೆ.
ಗ್ರಾಮಸ್ಥರ ಆಕ್ರೋಶ – ಅಭಿವೃದ್ಧಿಗೆ ಬಿಗಿ ಪಟ್ಟು:
“ಇದು ಅಂತರರಾಜ್ಯ ಸಂಪರ್ಕದ ಪ್ರಮುಖ ರಸ್ತೆಯಾಗಿದ್ದರೂ, ಯಾವುದೇ ಸರ್ಕಾರಗಳು ಈ ಸೇತುವೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿಲ್ಲ. ಸೇತುವೆಯನ್ನು ಅಗಲಗೊಳಿಸದೆ, ಅಪಾಯಕಾರಿ ತಿರುವನ್ನು ಸರಿಪಡಿಸದೆ ಮತ್ತು ಇಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನ್ನು ಬೇರೆಡೆಗೆ ಸ್ಥಳಾಂತರಿಸದ ಹೊರತು ಈ ಭಾಗದಲ್ಲಿ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ” ಎಂದು ಪೆರುವಾಯಿ ಗ್ರಾಮಸ್ಥರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್ನಾದರೂ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ (PWD) ಎಚ್ಚೆತ್ತುಕೊಂಡು, ತಕ್ಷಣವೇ ಮಧ್ಯಪ್ರವೇಶಿಸಿ ಸೇತುವೆಯನ್ನು ವಿಸ್ತರಿಸಬೇಕು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸುರಕ್ಷತಾ ತಡೆಗೋಡೆಗಳನ್ನು (Crash Barriers) ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ.



Bantawala
ಪಂಚಾಯತ್ ರಾಜ್ ಬಲಪಡಿಸಿದ್ದು ಕಾಂಗ್ರೆಸ್; ದುರ್ಬಲಗೊಳಿಸಲು ಬಿಜೆಪಿ ಯತ್ನ: ಮಾಜಿ ಸಚಿವ ರಮಾನಾಥ ರೈ
ಬಂಟ್ವಾಳ: ಅಧಿಕಾರ ವಿಕೇಂದ್ರೀಕರಣದ ಉದ್ದೇಶದಿಂದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮಂಡಿಸಿದ್ದ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಗೆ ಬಿಜೆಪಿ ಅಡ್ಡಿಪಡಿಸಿತ್ತು. ಬಳಿಕ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಜನರಿಗೆ ಅಧಿಕಾರ ಹಂಚಿಕೆಯಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಗ್ರಾಮೀಣ ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಯೋಜನೆ, ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ದುರ್ಬಲ ವರ್ಗಗಳ ಸಬಲೀಕರಣಕ್ಕೆ ನೆರವಾಗಿದೆ ಎಂದು ಹೇಳಿದರು.
ಬಿಜೆಪಿ ನಾಯಕರು ಸುಳ್ಳು ಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು, ಬಂಟ್ವಾಳ ಕ್ಷೇತ್ರದಲ್ಲಿಯೇ ಸುಮಾರು 5,000 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಕರರಾಗಿ ಮಾತನಾಡಿದ ಸುಧೀರ್ ಕುಮಾರ್ ಮರೋಳಿ, ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೀಟ್ ಪರೀಕ್ಷೆಯ ನಿರ್ವಹಣೆ ಕುರಿತು ಉದ್ಭವಿಸಿರುವ ಪ್ರಶ್ನೆಗಳು ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಕೇಂದ್ರ ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ತಾಂತ್ರಿಕ ಲೋಪಗಳಿಂದ ಅರ್ಹ ಮತದಾರರ ಹೆಸರುಗಳು ಕೈಬಿಡುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿ ಶೃಂಗೇರಿಯ ವಿಧಾನಸಭೆ ಚುನಾವಣೆಯ ಮರು ಮತ ಎಣಿಕೆಯಲ್ಲಿ ಮತ ಡಕಾಯಿತಿ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಗೇರು ನಿಗಮದ ಅದ್ಯಕ್ಷರಾದ ಮಮತಾ ಎಸ್. ಗಟ್ಟಿ, ಪ್ರವಾಸೋದ್ಯಮ ನಿಗಮದ ಅದ್ಯಕ್ಷೆ ಶಾಲೆಟ್ ಪಿಂಟೋ,ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತಾಡಿದರು.
ಈ ಸಂಧರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಬಿ. ಪದ್ಮಶೇಖರ್ ಜೈನ್, ಪಿ.ಪಿ. ವರ್ಗೀಸ್, ಶಾಹುಲ್ ಹಮೀದ್, ಸರ್ವೋತ್ತಮ ಗೌಡ ನೆಲ್ಯಾಡಿ, ದಿನೇಶ್ ಮೂಳೂರು, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಅರುಣ್ ಕುಮಾರ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ರಾಧಾಕೃಷ್ಣ ಬೊಲ್ಲೂರು, ಅಭಿಲಾಷ್ ಪಿ.ಕೆ., ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ, ಕುಮಾರಿ ಅಪ್ಪಿ, ಉಷಾ ಅಂಚನ್, ಜಯಂತಿ ಪೂಜಾರಿ, ಸುಧೀರ್ ಕುಮಾರ್ ಶೆಟ್ಟಿ, ಐಡಾ ಸುರೇಶ್, ಶೈಲಜಾ ರಾಜೇಶ್ ಹಾಗೂ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಜಗದೀಶ್ ಕೊಯಿಲ ಸ್ವಾಗತಿಸಿದರು. ಕುಳಾಲು ಸುಭಾಷ್ಚಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೃಂದಾ ಪೂಜಾರಿ ವಂದಿಸಿದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.



-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada6 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
