Connect with us

Politics

ಎಂನರೇಗಾದಿಂದ ಮಹಾತ್ಮಗಾಂಧಿ ಹೆಸರು ಕೈಬಿಟ್ಟ ಬೆನ್ನಲ್ಲೇ ‘ಕರ್ಮಶ್ರೀ’ ಯೋಜನೆಗೆ ಗಾಂಧಿ ಹೆಸರು

Published

on

ಪಶ್ಚಿಮ ಬಂಗಾಳ ; ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವ ಬೆನ್ನಲ್ಲೆ ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ ‘ಕರ್ಮಶ್ರೀ’ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

ಅವರು ಕೋಲ್ಕತ್ತಾದ ಧೋನೋ ಧನ್ಯೋ ಸಭಾಂಗಣದಲ್ಲಿ ನಡೆದ ವ್ಯಾಪಾರ ಮತ್ತು ಕೈಗಾರಿಕಾ ಸಮಾವೇಶದಲ್ಲಿ ಮಾತುಗಳನ್ನಾಡುತ್ತಾ, ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೇಂದ್ರ ಕೈಬಿಟ್ಟಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ, ರಾಷ್ಟ್ರಪಿತನಿಗೆ ಅವರು ಗೌರವ ಸಲ್ಲಿಸದಿದ್ದರೆ ನಾನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)’ಯ ಹೆಸರು ಮತ್ತು ನಿಬಂಧನೆಗಳನ್ನು ಬದಲಿಸುವ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಝ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) 2025 (ವಿಬಿ-ಜಿ ರಾಮ್-ಜಿ) ಎಂಬ ಹೊಸ ಮಸೂದೆಗೆ ಗುರುವಾರ (ಡಿಸೆಂಬರ್ 18) ಲೋಕಸಭೆಯ ಅನುಮೋದನೆ ಪಡೆದಿದೆ.

ಈ ಮಸೂದೆ 2005ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದ ನರೇಗಾ ಕಾಯ್ದೆ ಮತ್ತು ಯೋಜನೆಯ ಹೆಸರು, ನಿಬಂಧನೆಗಳನ್ನು ಬದಲಿಸಲಿದೆ. ಮುಖ್ಯವಾಗಿ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕಲಿದೆ.

ನರೇಗಾ ಕಾಯ್ದೆಯ ಹೆಸರು ಬದಲಿಸಿರುವ ಕೇಂದ್ರ ಕೆಲಸದ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಳ ಮಾಡುವುದಾಗಿ ಹೇಳಿದೆ. ಇದಕ್ಕೆ ಟಕ್ಕರ್ ಕೊಟ್ಟಿರುವ ಮಮತಾ ಬ್ಯಾನರ್ಜಿ ‘ಕರ್ಮಶ್ರೀ’ ಯೋಜನೆಯಡಿ ಪ್ರಸ್ತುತ ಇರುವ ಕೆಲಸದ ದಿನಗಳು 75 ಅನ್ನು 100ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ.

“ನಾವು ಈಗಾಗಲೇ ‘ಕರ್ಮಶ್ರೀ’ ಅಡಿಯಲ್ಲಿ ಸಾಕಷ್ಟು ಕೆಲಸದ ದಿನಗಳನ್ನು ಸೃಷ್ಟಿಸಿದ್ದೇವೆ. ಅದನ್ನು ನಾವು ನಮ್ಮ ಸ್ವಂತ ಸಂಪನ್ಮೂಲಗಳಿOದ ನಡೆಸುತ್ತಿದ್ದೇವೆ. ಕೇಂದ್ರ ನಿಧಿಯನ್ನು ನಿಲ್ಲಿಸಿದರೂ, ಜನರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುತ್ತೇವೆ. ನಾವು ಭಿಕ್ಷುಕರಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸದ ಕಾರಣ ನೀಡಿ 2005ರ ನರೇಗಾ ಕಾಯ್ದೆಯ ಸೆಕ್ಷನ್ 27 ಅನ್ನು ಅನ್ವಯಿಸಿ ಕೇಂದ್ರ ಸರ್ಕಾರ ಮಾರ್ಚ್ 9,2022ರಿಂದ ಪಶ್ಚಿಮ ಬಂಗಾಳಕ್ಕೆ ಯೋಜನೆಯ ಹಣ ಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಿದೆ.

ಕೇಂದ್ರ ಸರ್ಕಾರ ಹಣ ನೀಡುವುದನ್ನು ನಿಲ್ಲಿಸಿರುವುದರ ವಿರುದ್ದ ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಗಸ್ಟ್ 1,2025ರಿಂದ ಪಶ್ಚಿಮ ಬಂಗಾಳದಲ್ಲಿ ಯೋಜನೆಯನ್ನು ಪುನರ್ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಕ್ಟೋಬರ್ 27,2024ರಂದು ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ಯೋಜನೆ ಪುನರಾರಂಭಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಅಂದಿನಿOದ, ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಯಾವುದೇ ಕೆಲಸ ನಡೆದಿಲ್ಲ. ಯೋಜನೆಯನ್ನು ಸ್ಥಗಿತಗೊಳಿಸುವ ಮೊದಲು, 2014-15 ಮತ್ತು 2021-22 ರ ನಡುವೆ ಪಶ್ಚಿಮ ಬಂಗಾಳದ 51 ಲಕ್ಷದಿಂದ 80 ಲಕ್ಷ ಕುಟುಂಬಗಳು ವಾರ್ಷಿಕವಾಗಿ ಅದರ ಲಾಭ ಪಡೆಯುತ್ತಿದ್ದವು.

Continue Reading
Advertisement

Bantawala

ಮಾಣಿಲ ಶಿರಿಯಾ ನದಿಗೆ ಸೇತುವೆ ನಿರ್ಮಾಣ: ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಸ್ಥಳ ಪರಿಶೀಲನೆ

Published

on

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಣಿಲ ಗ್ರಾಮದ ಶಿರಿಯಾ ನದಿಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸೇತುವೆ ನಿರ್ಮಿಸಬೇಕೆಂಬ ದಶಕಗಳ ಕಾಲದ ಬೇಡಿಕೆಗೆ ಕೊನೆಗೂ ಜೀವಕಳೆ ಬಂದಿದೆ. ಈ ಸಂಬಂಧ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದಶಕಗಳ ಬೇಡಿಕೆಗೆ ಸ್ಪಂದನೆ
ಮಾಣಿಲ ಭಾಗದ ಜನರು ಕೇರಳದ ಪ್ರದೇಶಗಳಿಗೆ ತೆರಳಲು ಮತ್ತು ಗಡಿ ಭಾಗದ ಸಂಪರ್ಕ ಸುಗಮಗೊಳಿಸಲು ಈ ಸೇತುವೆಯ ನಿರ್ಮಾಣ ಅತ್ಯಂತ ಅವಶ್ಯಕವಾಗಿದೆ.

ಪ್ರಸ್ತುತ ಮಳೆಗಾಲದಲ್ಲಿ ಹಾಗೂ ತುರ್ತು ವೈದ್ಯಕೀಯ ಸಂದರ್ಭಗಳಲ್ಲಿ ಜನರು ನದಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ ಸ್ಥಳೀಯರು, ಕೂಡಲೇ ಸುಸಜ್ಜಿತ ಸೇತುವೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ತಾಂತ್ರಿಕ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ
ಸ್ಥಳ ಪರಿಶೀಲನೆಯ ನಂತರ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು:”ಈ ಭಾಗದ ಜನರ ದಶಕಗಳ ಬೇಡಿಕೆಯ ಬಗ್ಗೆ ಗಂಭೀರವಾಗಿ ಗಮನ ಹರಿಸಲಾಗುವುದು. ಸೇತುವೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿ ಹಾಗೂ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರಿಂದ ಮನವರಿಕೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಈ ಯೋಜನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಗಡಿ ಭಾಗದ ಅಭಿವೃದ್ಧಿ ಹಾಗೂ ಜನರ ಸಂಕಷ್ಟ ನಿವಾರಣೆಗೆ ಈ ಸೇತುವೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಣಿಲ ಗ್ರಾಮ ಪಂಚಾಯತ್‌ ಅಧ್ಯಕ್ಷ ಹಾಗೂ ಹಿರಿಯ ಮುಖಂಡ ಶ್ರೀಧರ್ ಬಾಳೆಕಲ್ಲು , ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು

Continue Reading

Bantawala

ಬೊಬ್ಬೆಕೇರಿ ರಸ್ತೆ ಕಾಂಕ್ರೀಟೀಕರಣಕ್ಕೆ 60 ಲಕ್ಷ ಮಂಜೂರು: ಶಾಸಕ ಅಶೋಕ್ ರೈ ಕೊಟ್ಟ ಮಾತು ಈಡೇರಿಕೆ

Published

on

ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಯ ಕಾಂಞoಗಾಡು-ಕಡೂರು ರಾಜ್ಯ ಹೆದ್ದಾರಿಯ ಬೊಬ್ಬೆಕೇರಿ ಎಂಬಲ್ಲಿನ ರಸ್ತೆ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಹಲವು ವರ್ಷಗಳ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿರುವ ಪುತ್ತೂರು ಶಾಸಕ ಅಶೋಕ್ ರೈ, ರಸ್ತೆ ಕಾಂಕ್ರೀಟೀಕರಣ ಮತ್ತು ಅಭಿವೃದ್ಧಿಗಾಗಿ 60 ಲಕ್ಷ ರೂಪಾಯಿ ಅನುದಾನ ಮಂಜೂರುಗೊಳಿಸಿದ್ದಾರೆ.

ಸಮಸ್ಯೆಯ ಹಿನ್ನೆಲೆ:
ಅಂತರರಾಜ್ಯ ಸಂಪರ್ಕಿಸುವ ಈ ಪ್ರಮುಖ ಹೆದ್ದಾರಿಯ ಬೊಬ್ಬೆಕೇರಿ ಭಾಗದಲ್ಲಿ ರಸ್ತೆ ಅತ್ಯಂತ ಕಿರಿದಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದರು. ರಸ್ತೆ ಕಿರಿದಾಗಿದ್ದರಿಂದ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಜಮೀನುಗಳಿದ್ದ ಕಾರಣ ರಸ್ತೆ ಅಗಲೀಕರಣ ಸಾಧ್ಯವಾಗಿರಲಿಲ್ಲ, ಇದರಿಂದಾಗಿ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಡೆದಾಡಲು ರಸ್ತೆ ಬದಿಯಲ್ಲಿ ಕನಿಷ್ಠ ಜಾಗವೂ ಇಲ್ಲದಂತಾಗಿತ್ತು.

ಶಾಸಕರ ಇಚ್ಛಾಶಕ್ತಿ:
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಅಶೋಕ್ ರೈ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳೊAದಿಗೆ ಪರಿಶೀಲನೆ ನಡೆಸಿದ್ದರು. ಅಲ್ಲದೆ, ಖಾಸಗಿ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸಾರ್ವಜನಿಕ ಹಿತದೃಷ್ಟಿಯಿಂದ ರಸ್ತೆ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಅನುದಾನ ಬಿಡುಗಡೆ ಮಾಡುವ ಮೂಲಕ ಶಾಸಕರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

“ಬೊಬ್ಬೆಕೇರಿಯಲ್ಲಿ ರಸ್ತೆ ಕಿರಿದಾಗಿದ್ದರಿಂದ ಶಾಲಾ ಮಕ್ಕಳಿಗೆ ಹಾಗೂ ವಾಹನ ಸವಾರರಿಗೆ ಜೀವಭಯವಿತ್ತು. ಈ ಸಮಸ್ಯೆಯನ್ನು ಮನಗಂಡು ಖಾಸಗಿ ಜಮೀನು ಮಾಲೀಕರೊಂದಿಗೆ ಚರ್ಚಿಸಿದ್ದೇನೆ. ಸಾರ್ವಜನಿಕರ ಅನುಕೂಲಕ್ಕಾಗಿ ಯಾರೇ ಅಡ್ಡಿಪಡಿಸಿದರೂ ಇಲ್ಲಿ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವುದು ಖಚಿತ.”
ಅಶೋಕ್ ರೈ, ಶಾಸಕರು, ಪುತ್ತೂರು

Continue Reading

Politics

ಬಿಜೆಪಿಯಲ್ಲಿ ಯಡಿಯೂರಪ್ಪ‌ ಏನು ? ಹೊಸ ಪಕ್ಷ ಸ್ಥಾಪನೆಯ ಮುನ್ಸೂಚನೆಯೇ ? ಇದು ಯಡಿಯೂರಪ್ಪ ಸ್ಟೈಲ್ !!

Published

on

ಇಂದು ಕರ್ನಾಟಕದಲ್ಲಿ ಬಿಜೆಪಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿರುವುದರ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ತ್ಯಾಗ ಮತ್ತು ಪರಿಶ್ರಮದ ದೊಡ್ಡ ಪಾಲಿದೆ. ಅವರು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರಾಗಿ ಇಂದಿಗೂ ಪಕ್ಷದ ಉನ್ನತ ಮಟ್ಟದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೂ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ವಿಚಲಿತರಾಗದೆ ಧೈರ್ಯವಾಗಿ ಎದುರಿಸಿ ಜಯಶಾಲಿಯಾದವರು. ಅವರ ಯಾವುದೇ ಮಾತುಗಳಲ್ಲಿ, ಕೃತಿಗಳಲ್ಲಿ ಮುಂದಿನ ಭವಿಷ್ಯದ ನಿರ್ಧಾರಗಳಿವೆ. ಬಿಜೆಪಿಯಲ್ಲಿ ಯಡಿಯೂರಪ್ಪ‌ ಏನು ? ಎಂಬುವುದನ್ನುಪರೋಕ್ಷವಾಗಿ ತೋರಿಸುವಾಗ ಇದು ಹೊಸ ಪಕ್ಷ ಸ್ಥಾಪನೆಯ ಮುನ್ಸೂಚನೆಯಾಗಿರಬಹುದೇ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದುವೇ ಯಡಿಯೂರಪ್ಪ ಸ್ಟೈಲ್ !!

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೀಡಿದ ಇತ್ತೀಚಿನ ಹೇಳಿಕೆಯು ಬಿಜೆಪಿ ನಾಯಕರ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಹೈಕಮಾಂಡ್ ಅನುಮತಿಗೂ ಮುನ್ನವೇ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಯಡಿಯೂರಪ್ಪ ಅವರ ನಡೆಗೆ ಪಕ್ಷದ ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ (BSY) ಅವರು ಇತ್ತೀಚೆಗೆ (ಮಾರ್ಚ್ 2026) ದಾವಣಗೆರೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಕುರಿತು ನೀಡಿದ ಹೇಳಿಕೆಯು ಪಕ್ಷದೊಳಗೆ ಸಂಚಲನ ಮೂಡಿಸಿದೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶವಿರುವಾಗಲೇ ಅವರು ಕೆಲವು ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವುದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ.


ಈ ಬೆಳವಣಿಗೆಯಿಂದಾಗಿ ಪಕ್ಷದ ಆಂತರಿಕ ಕಲಹ ಬೀದಿಗೆ ಬಂದಂತಾಗಿದ್ದು, ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ಕೆಲವು ಪ್ರಭಾವಿ ಬಿಜೆಪಿ ನಾಯಕರು ಈ ನಡೆಯನ್ನು ಖಂಡಿಸಿ, ಯಡಿಯೂರಪ್ಪ ಅವರು ಪಕ್ಷದ ಶಿಸ್ತನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಪಕ್ಷದ ಕೇಂದ್ರ ಸಮಿತಿಗೆ ಸೇರಿದ್ದು, ಏಕಪಕ್ಷೀಯ ನಿರ್ಧಾರಗಳು ಸರಿಯಲ್ಲ’ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟೇ ಅಲ್ಲದೇ, ಈ ನಡೆಯ ಹಿಂದೆ ಗಂಭೀರವಾದ ರಾಜಕೀಯ ತಂತ್ರ ಅಡಗಿದೆ ಎಂದು ಹಲವರು ಶಂಕಿಸಿದ್ದಾರೆ.ಯಡಿಯೂರಪ್ಪ ಅವರಿಗೆ ಪಕ್ಷ ಬಿಡುವ ಮತ್ತು ಸ್ವಂತ ಪ್ರಾದೇಶಿಕ ಪಕ್ಷವನ್ನು ಕಟ್ಟುವ ಉದ್ದೇಶವಿದ್ದಂತಿದೆ’ ಎಂದು ಕೆಲವು ಮೂಲಗಳು ಗಂಭೀರ ಆರೋಪ ಮಾಡಿವೆ.
ಈ ಅನಿರೀಕ್ಷಿತ ಘೋಷಣೆಯು ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ಹಾನಿಯುಂಟು ಮಾಡಬಹುದು ಎಂದು ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ಸೂಚನೆಗೂ ಮೊದಲೇ ಅಭ್ಯರ್ಥಿಗಳನ್ನು ಹೆಸರಿಸುವುದು ಪಕ್ಷದ ಒಗ್ಗಟ್ಟನ್ನು ಹದಗೆಡಿಸುತ್ತದೆ ಎನ್ನುವುದು ವಿರೋಧಿಬಣದ ವಾದ. ಇತ್ತ ಯಡಿಯೂರಪ್ಪ ಬೆಂಬಲಿಗರು ಇದನ್ನು ಸಾಮಾನ್ಯ ಸಲಹೆ ಎಂದು ಸಮರ್ಥಿಸಿಕೊಳ್ಳುತ್ತಿದ್ದರೂ, ಪಕ್ಷದ ವರಿಷ್ಠರು ಈ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ.
ಸದ್ಯ ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ದೊಡ್ಡಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿಯ ಮುಂದಿನ ನಡೆ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರು ತಮ್ಮ ನಿಲುವಿಗೆ ಬದ್ಧರಾಗಿರುತ್ತಾರೋ ಅಥವಾ ವರಿಷ್ಠರ ಮನವೊಲಿಕೆಗೆ ಬಾಗುತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.


ಸಾಮಾನ್ಯವಾಗಿ ಅಭ್ಯರ್ಥಿಗಳ ಆಯ್ಕೆಯನ್ನು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (CEC) ಮತ್ತು ಹೈಕಮಾಂಡ್ ಅಂತಿಮಗೊಳಿಸುತ್ತದೆ. ಆದರೆ ಯಡಿಯೂರಪ್ಪ ಅವರು ಸಂಸದೀಯ ಮಂಡಳಿಯ ಸದಸ್ಯರಾಗಿದ್ದರೂ, ಏಕಪಕ್ಷೀಯವಾಗಿ ಹೆಸರು ಘೋಷಿಸಿರುವುದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂಬ ಆರೋಪ ಕೇಳಿಬಂದಿದೆ. ಪ್ರತಿ ಕ್ಷೇತ್ರದಲ್ಲಿ ಹತ್ತಾರು ಜನ ಆಕಾಂಕ್ಷಿಗಳು ಕೆಲಸ ಮಾಡುತ್ತಿರುವಾಗ, ಇಷ್ಟು ಮುಂಚಿತವಾಗಿಯೇ ಹೆಸರು ಘೋಷಿಸುವುದರಿಂದ ಇತರ ಕಾರ್ಯಕರ್ತರಲ್ಲಿ ನಿರಾಸಕ್ತಿ ಮೂಡುತ್ತದೆ ಎಂಬುದು ಸ್ಥಳೀಯ ನಾಯಕರ ವಾದ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಈ ಹಿಂದೆಯೇ ಸ್ಪಷ್ಟಪಡಿಸಲಾಗಿತ್ತು. ಹೀಗಿದ್ದರೂ ಬಿಎಸ್ವೈ ಅವರ ಹೇಳಿಕೆ ಹೈಕಮಾಂಡ್‌ಗೆ ಸವಾಲು ಹಾಕಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ವಿಚಾರ ತಿಳಿದುಕೊಂಡೇ ಯಡಿಯೂರಪ್ಪನವರು ಸವಾಲು ಹಾಕಿದ್ದಾರೆ ಎಂದರೆ ಹೈಕಮಾಂಡ್‌ ಇವರ ಮಾತಿಗೆ , ತೀರ್ಮಾನಕ್ಕೆ ಮನ್ನಣೆ ನೀಡಿಲ್ಲವೆಂದರೆ ಮುಂದಿನ ನಿರ್ಧಾರ ಏನು ಎಂಬುವುದರ ಮೇಲೆ ಬಿಜೆಪಿಯ ಭವಿಷ್ಯತ್ತು ನಿಂತಿದೆ.

ಯಡಿಯೂರಪ್ಪನವರು ಕೇವಲ ಒಬ್ಬ ನಾಯಕನಾಗಿ ಮಾತ್ರವಲ್ಲದೆ, ಪಕ್ಷದ ಕಾರ್ಯಕರ್ತರನ್ನು ಹೆಸರು ಹಿಡಿದು ಕರೆಯುವಷ್ಟು ಆತ್ಮೀಯತೆಯನ್ನು ಹೊಂದಿದ್ದರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ಪಕ್ಷವನ್ನು ಮುನ್ನಡೆಸುವ ಅವರ ಗುಣವೇ ಅವರನ್ನು ‘ಹೋರಾಟದ ಹರಿಕಾರ’ ಎಂದು ಕರೆಯುವಂತೆ ಮಾಡಿತು. ಒಟ್ಟಾರೆಯಾಗಿ ಹೇಳುವುದಾದರೆ, ಇಂದು ಕರ್ನಾಟಕದಲ್ಲಿ ಬಿಜೆಪಿ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿರುವುದರ ಹಿಂದೆ ಯಡಿಯೂರಪ್ಪ ಅವರ ತ್ಯಾಗ ಮತ್ತು ಪರಿಶ್ರಮದ ದೊಡ್ಡ ಪಾಲಿದೆ. ಅವರು ಪಕ್ಷದ ಸಂಸದೀಯ ಮಂಡಳಿಯ ಸದಸ್ಯರಾಗಿ ಇಂದಿಗೂ ಪಕ್ಷದ ಉನ್ನತ ಮಟ್ಟದ ನಿರ್ಧಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೂ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ವಿಚಲಿತರಾಗದೆ ಧೈರ್ಯವಾಗಿ ಎದುರಿಸಿ ಜಯಶಾಲಿಯಾದವರು.ಅವರ ಮಾತಿಗೆ ಮನ್ನಣೆ ಸಿಗಲೇ ಬೇಕು ಇಲ್ಲವಾದರೆ ಅದರ ಪರಿಣಾಮವನ್ನು ಪಕ್ಷ ಅನುಭವಿಸಲೇ ಬೇಕು ಎಂಬುವುದರ ಮೇಲೆ ಮುಂದೆ ಹೊಸ ಪಕ್ಷದ ಸ್ಥಾಪನೆಯೊಂದು ಅವರ ಅವರ ಭತ್ತಳಿಕೆಯಿಂದ ಬಂದರೂ ಬರಬಹುದು !

Continue Reading

Trending

Copyright © 2025 Deevatige