Connect with us

INCIDENT

ಮರುಜನ್ಮ ಪಡೆದ ರಾಜೇಶ್ವರಿ ಕುಟುಂಬ!ಬೀದಿಗೆ ಬಿದ್ದಿದ್ದ ಬಡ ಕುಟುಂಬಕ್ಕೆ ಬೆಳಕಾದ ದಾನಿಗಳು. ವಿದ್ಯುತ್ ಅವಾಂತರಕ್ಕೆ ಬೂದಿಯಾಗಿದ್ದ ಕುಟುಂಬ

Published

on

ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ಆಸರೆಯಾದ ಮಾನವೀಯತೆ: ಭಸ್ಮವಾಗಿದ್ದ ಮನೆಯ ಜಾಗದಲ್ಲಿ ಎದ್ದು ನಿಂತಿತು ಭರವಸೆಯ ಸೂರು! ದಾನಿಗಳ ಔದಾರ್ಯ, ಮರುಜನ್ಮ ಪಡೆದ ಬಡ ಸಂಸಾರ: ಸುಟ್ಟು ಕರಕಲಾಗಿದ್ದ ಬದುಕಿಗೆ ಸಿಕ್ಕಿತು ನೆರವಿನ ಹಸ್ತ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ತಂದ ಕತ್ತಲೆಗೆ ದಾನಿಗಳೇ ದೀಪ: ರಾಜೇಶ್ವರಿ ಕುಟುಂಬದ ಪಾಲಿಗೆ ದೇವದೂತರಾದ ಸಾರ್ವಜನಿಕರು. ದಾನಿಗಳ ನೆರವಿನಿಂದ ಮತ್ತೆ ಚಿಗುರಿತು ಬಡವರ ಬದುಕು !

ವೀರಕಂಬ ಗ್ರಾಮದ ಗಣೇಶ್ ಕೋಡಿ ನಿವಾಸಿ ರಾಜೇಶ್ವರಿಯವರ ಮನೆ ಕಳೆದ ಫೆಬ್ರವರಿ ತಿಂಗಳಲ್ಲಿ ಮಧ್ಯಾಹ್ನದ ಹೊತ್ತು ಯಾರೂ ಇಲ್ಲದ ಸಂದರ್ಭ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸಂಪೂರ್ಣ ಭಸ್ಮವಾಗಿತ್ತು.
ಮನೆ ಹೊತ್ತಿ ಉರಿಯುತ್ತಿದ್ದ ಸಂದರ್ಭ ಮಕ್ಕಳಿಬ್ಬರು ಶಾಲೆಯಲ್ಲಿದ್ದರೆ ಮನೆಯೊಡತಿ ರಾಜೇಶ್ವರಿ ಹೊಟ್ಟೆಪಾಡಿಗಾಗಿ ಅಡಿಕೆ ಗಾರ್ಬಲ್ ಕೆಲಸಕ್ಕೆ ಹೋಗಿದ್ದರು.


ಮನೆ ಏಕಾಏಕಿ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಪರಿಸರದ ಮುಸ್ಲಿಂ ಬಾಂಧವರು ಜಮಾಯಿಸಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮತ್ತಷ್ಟು ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಆದರೆ ಅಷ್ಟರಲ್ಲಾಗಲೇ ಕೆಲಸಕ್ಕೆ ಹೋಗಿದ್ದ ರಾಜೇಶ್ವರಿ ಮತ್ತು ಶಾಲೆಯಲ್ಲಿದ್ದ ಮಕ್ಕಳಿಬ್ಬರು ಧರಿಸಿದ್ದ ಬಟ್ಟೆಬರೆಗಳನ್ನು ಬಿಟ್ಟರೆ ಉಳಿದೆಲ್ಲವೂ ಸಂಪೂರ್ಣ ಸರ್ವನಾಶವಾಗಿತ್ತು. ವಿದ್ಯುತ್ ಉಪಕರಣಗಳು, ಬಟ್ಟೆ ಬರೆಗಳು, ಪುಸ್ತಕಗಳು, ದಿನಸಿ ಸಾಮಾಗ್ರಿಗಳು, ಪಾತ್ರೆಗಳು ಮತ್ತು ಮಲಗುವ ಮಂಚ ಸಹಿತ ಮನೆಯೊಳಗಿದ್ದ ಎಲ್ಲಾ ಸೊತ್ತುಗಳನ್ನೂ ಬೆಂಕಿಯ ಕೆನ್ನಾಲೆಗಳು ಭಸ್ಮಮಾಡಿದ್ಜವು.

ಬೀದಿಗೆ ಬಿದ್ದ ರಾಜೇಶ್ವರಿ ಕುಟುಂಬದ ಬಗ್ಗೆ ದೀವಟಿಗೆ ನ್ಯೂಸ್ ವಿಸ್ತೃತವಾದ ವರದಿ ಮಾಡುವ ಮೂಲಕ ಬಡಕುಟುಂಬದ ಕಣ್ಣೀರಿಗೆ ಸ್ಪಂದಿಸುವಂತೆ ಹೃದಯವಂತರಲ್ಲಿ ಪ್ರಾರ್ಥಿಸಿಕೊಂಡಿತ್ತು.

ವರದಿಗೆ ಮಿಡಿದ ಹೃದಯವಂತರು..
ದೀವಟಿಗೆ ನ್ಯೂಸ್ ನ ವಿಸ್ತೃತ ವರದಿಗೆ ಹಲವು ಹೃದಯವಂತರು ಸ್ಪಂದಿಸುವ ಮೂಲಕ ರಾಜೇಶ್ವರಿ ಕುಟುಂಬದ ಕಷ್ಟದಲ್ಲಿ ಭಾಗಿಯಾಗಿದ್ದಾರೆ. ವಿಟ್ಲ ಠಾಣೆಯ ಪೊಲೀಸ್ ನಿರೀಕ್ಷಕರು, ಪೊಲೀಸ್ ಸಿಬ್ಬಂದಿಗಳು, ಬಂಟ್ವಾಳ ಶಾಸಕರು, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಕೇಂದ್ರ ಕಚೇರಿ ವಿಟ್ಲ , ಬಿರುವೆರ್ ಕುಡ್ಲ ಸಂಘಟನೆ, ಬಂಟ್ವಾಳದ ವಕೀಲರುಗಳು, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಾಮಾಜಿಕ ಕಾರ್ಯಕರ್ತರುಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ತಂಡ ಸೇರಿದಂತೆ ಇನ್ನೂ ಹಲವಾರು ಹೃದಯವಂತರು ಸಹಾಯ ಹಸ್ತ ಚಾಚುವ ಮೂಲಕ ಬಡ ಕುಟುಂಬದ ಕಷ್ಟದಲ್ಲಿ ಭಾಗಿಯಾಗಿದ್ದಾರೆ.

ಸಹೃದಯಿಗಳಿಂದ ಹರಿದು ಬಂದ ನೆರವಿನಿಂದಾಗಿ ಸರ್ವನಾಶವಾಗಿದ್ದ ರಾಜೇಶ್ವರಿಯವರ ಮನೆ ಅದೇ ಸ್ಥಳದಲ್ಲಿ ಮತ್ತೆ ಎದ್ದು ನಿಲ್ಲುವಂತಾಗಿದೆ.

ವಿದ್ಯುತ್ ಅವಾಂತರಕ್ಕೆ ಬೂದಿಯಾಗಿದ್ದ ಬದುಕಿಗೆ ‘ದಾನಿಗಳ’ ಆಸರೆ ಬೇಕಾಗಿದೆ.
ವಿದ್ಯುತ್‌ ಅವಾಂತರಕ್ಕೆ ಬೀದಿಗೆ ಬಿದ್ದ ಬಡ ರಾಜೇಶ್ವರಿ ಕುಟುಂಬಕ್ಕೆ ಮನೆ ನಿರ್ಮಿಸಲು ವಿಟ್ಲ ಪೊಲೀಸರು ಸಹಿತವಾಗಿ ಅನೇಕ ದಾನಿಗಳು ನೀಡಿದ ನೆರವಿನಿಂದ ಇದೀಗ ಈ ಹಂತಕ್ಕೆ ತಲುಪಿದೆ. ಇನ್ನೂ ಕೆಲಸ ಪೂರ್ಣ ಗೊಳಿಸಲು ಸುಮಾರು 3 ಲಕ್ಷಗಳ ಅವಶ್ಯಕತೆ ಇದೆ. ಸಹೃದಯಿ ದಾನಿಗಳು ರಾಜೇಶ್ವರಿ ಅವರ ಈ ಖಾತೆಗೆ ತಮ್ಮಿಂದಾದ ನೆರವು ನೀಡಿ ಸಹಕರಿಸುವಂತೆ ವಿನಂತಿಸಿದ್ದಾರೆ.
ಬ್ಯಾಂಕ್‌ ಆಫ್‌ ಬರೋಡಾ, ಕಲ್ಲಡ್ಕ ಶಾಖೆ

AC/No : 71250100020814, IFSC CODE : BARBOVJKDKA,

Googe Pay No : 8105066841

ಇನ್ನೂ ಬೇಕಾಗಿದೆ ನೆರವಿನ ಹಸ್ತ..
ಈಗಾಗಲೇ ದಾನಿಗಳ ನೆರವಿನಿಂದಾಗಿ ಒಂದು ಲಕ್ಷ ಎಂಭತ್ತು ಸಾವಿರ ರೂಪಾಯಿ ಹಣ ಸಂಗ್ರಹವಾಗಿದೆ. ಈ ಹಣದಲ್ಲಿ ಕಲ್ಲಿನ ಗೋಡೆ ನಿರ್ಮಿಸಿ ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷರ ನೆರವಿನಿಂದಾಗಿ ಮರಮಟ್ಟುಗಳ ಮತ್ತು ಹಂಚಿನ ಮೇಲ್ಚಾವಣಿ ಕಾರ್ಯ ಮುಕ್ತಾಯಗೊಂಡಿದೆ. ಇದೀಗ ವಿದ್ಯುತ್ ಸಂಪರ್ಕದ ಕೆಲಸ ಕಾರ್ಯಗಳು ನಡೆಯುತ್ತಿದೆ. ಮನೆಯ ಸಂಪೂರ್ಣ ಕೆಲಸ-ಕಾರ್ಯಗಳು ಪೂರ್ಣಗೊಳ್ಳಲು ಇನ್ನೂ ಸುಮಾರು ಮೂರು ಲಕ್ಷ ರೂಪಾಯಿಗಳ ಅಗತ್ಯ ಕಂಡುಬರುತ್ತಿದೆ.
ಪತಿಯನ್ನು ಕಳೆದುಕೊಂಡಿರುವ ರಾಜೇಶ್ವರಿಯವರು ದುಡಿದು ತನ್ನ ಹಾಗೂ ಇಬ್ಬರು ಮಕ್ಕಳ ಜೀವನದ ಜೊತೆಗೆ ಅವರಿಬ್ಬರ ವಿದ್ಯಾಭ್ಯಾಸ ಪೂರೈಸಬೇಕಾಗಿದೆ.
ಮನೆಯ ಮುಂದಿನ ಕೆಲಸ-ಕಾರ್ಯಗಳಿಗೆ ಸಹೃದಯಿ ದಾನಿಗಳು ನೆರವು ನೀಡುವ ಮೂಲಕ ರಾಜೇಶ್ವರಿ ಕುಟುಂಬದ ಕಷ್ಟಕ್ಕೆ ಕೈಜೋಡಿಸಬೇಕಾಗಿದೆ.

Continue Reading
Advertisement

Bantawala

ವಿಟ್ಲ: ಸಿಡಿಪಿಒ ಕಚೇರಿಯಲ್ಲಿ ದಾಂಧಲೆ; ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೀಠೋಪಕರಣ ಧ್ವಂಸ

Published

on

ವಿಟ್ಲ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (ಸಿಡಿಪಿಒ) ಕಚೇರಿಯಲ್ಲಿ ದಂಪತಿಗಳ ನಡುವಿನ ಮನಸ್ತಾಪದ ಕುರಿತು ಆಪ್ತ ಸಮಾಲೋಚನೆ (COUNSELING) ನಡೆಯುತ್ತಿದ್ದ ವೇಳೆ, ಪತಿಯ ಕಡೆಯವರು ಏಕಾಏಕಿ ದಾಂಧಲೆ ನಡೆಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ಬುಧವಾರ ವಿಟ್ಲದ ಬಸವನಗುಡಿ ರಸ್ತೆಯಲ್ಲಿ ಸಂಭವಿಸಿದೆ.

ಘಟನೆಯ ವಿವರ: ವಿಟ್ಲದ ಬಸವನಗುಡಿ ರಸ್ತೆಯಲ್ಲಿರುವ ಕುಲಾಲ ಭವನದಲ್ಲಿ ಕಾರ್ಯಾಚರಿಸುತ್ತಿರುವ ಸಿಡಿಪಿಒ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಇರಾ ಮೂಲದ ಪತ್ನಿ ಹಾಗೂ ಉಳ್ಳಾಲ ಮೂಲದ ಪತಿಯ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತ್ನಿಯ ಕಡೆಯವರು ನೀಡಿದ ದೂರಿನ ಮೇರೆಗೆ ಇಲಾಖೆಯು ಎರಡೂ ತಂಡಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಬುಧವಾರ ಮಧ್ಯಾಹ್ನ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಸಮ್ಮುಖದಲ್ಲಿ ಆಪ್ತ ಸಮಾಲೋಚನೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇತ್ತಂಡಗಳ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈ ವೇಳೆ ರೊಚ್ಚಿಗೆದ್ದ ಪತಿಯ ಕಡೆಯವರು ಪತ್ನಿಯ ಕಡೆಯವರ ಮೇಲೆ ನೂಕಾಟ-ತಳ್ಳಾಟ ನಡೆಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಕಚೇರಿ ಆಸ್ತಿ ಪಾಸ್ತಿ ಧ್ವಂಸ: ಗಲಾಟೆ ನಿಯಂತ್ರಿಸಲು ಕಚೇರಿಯ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಯತ್ನಿಸಿದರಾದರೂ, ಉದ್ರಿಕ್ತ ಗುಂಪು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಬಡಿದು ಧ್ವಂಸಗೊಳಿಸಿದೆ. ಇಷ್ಟಕ್ಕೇ ಸುಮ್ಮನಾಗದ ಗುಂಪು, ಕೌನ್ಸಿಲಿಂಗ್ ಕೇಂದ್ರದಿಂದ ಹೊರಗೆ ಬಂದು ಕೇಕೆ ಹಾಕುತ್ತಾ ಆರ್ಭಟಿಸಿದೆ. ಅಲ್ಲದೆ, ಕಚೇರಿಯ ಶಟರ್ ಎಳೆದು ಬೆದರಿಕೆ ಹಾಕಿದ್ದರಿಂದ ಕಚೇರಿ ಸಿಬ್ಬಂದಿಗಳು ತೀವ್ರ ಭಯಭೀತರಾಗಿ ಬೊಬ್ಬೆ ಹೊಡೆದಿದ್ದಾರೆ.

“ಪತಿ-ಪತ್ನಿಯರ ನಡುವಿನ ಸಣ್ಣ ವಿಚಾರದ ಮನಸ್ತಾಪವನ್ನು ಆಪ್ತ ಸಮಾಲೋಚನೆಯ ಮೂಲಕ ಬಗೆಹರಿಸಬಹುದಾಗಿತ್ತು. ಆದರೆ, ಕೌನ್ಸಿಲಿಂಗ್‌ಗೆ ಎರಡೂ ಕಡೆಯಿಂದ ಸಂಬಂಧವಿಲ್ಲದ ಅನಗತ್ಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದೇ ಈ ಗಲಾಟೆಗೆ ಮುಖ್ಯ ಕಾರಣ” ಎಂದು ಇಲಾಖಾ ಮೂಲಗಳಿಂದ ತಿಳಿದು ಬಂದಿದೆ

ಸರ್ಕಾರಿ ಕಚೇರಿಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಈ ಘಟನೆ ವಿಟ್ಲ ಪರಿಸರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿಟ್ಲ ಠಾಣೆಗೆ ದೂರು ನೀಡಲಾಗಿದೆ.


Continue Reading

INCIDENT

ಗುರುಪುರ ಸೇತುವೆಯಿಂದ ನದಿಗೆ ಹಾರಿದ ಯುವಕ: ಕಜೆಪದವಿನ ಕೌಶಿಕ್ ನಾಪತ್ತೆ

Published

on

ಮಂಗಳೂರು: ಗುರುಪುರ ಸೇತುವೆಯಿಂದ ಯುವಕನೊಬ್ಬ ನದಿಗೆ ಹಾರಿದ ಆಘಾತಕಾರಿ ಘಟನೆ ಬುಧವಾರ ಸಂಜೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಕಜೆಪದವು ನಿವಾಸಿ ಕೌಶಿಕ್ ಎಂದು ಗುರುತಿಸಲಾಗಿದೆ.

ಬುಧವಾರ ಸಂಜೆ ಸುಮಾರು 6:30ರ ವೇಳೆಗೆ ಕೌಶಿಕ್ ತನ್ನ ಡಿಯೋ ಸ್ಕೂಟರ್‌ನಲ್ಲಿ ಗುರುಪುರ ಸೇತುವೆ ಬಳಿ ಬಂದಿದ್ದಾರೆ. ಸೇತುವೆಯ ಮೇಲೆ ವಾಹನ ನಿಲ್ಲಿಸಿದ ಅವರು, ಏಕಾಏಕಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಸ್ಥಳದಲ್ಲಿ ಸಿಕ್ಕ ಪುರಾವೆಗಳು:

ಸಾರ್ವಜನಿಕರು ಸೇತುವೆಯ ಮೇಲಿದ್ದ ಸ್ಕೂಟರ್ ಅನ್ನು ಪರಿಶೀಲಿಸಿದಾಗ, ಒಂದು ಮೊಬೈಲ್ ಫೋನ್, ಸ್ವಲ್ಪ ನಗದು ಮತ್ತು ವೈದ್ಯರು ನೀಡಿದ ಔಷಧಿ ಚೀಟಿ (Prescription) ಅದರ ಸೀಟಿನ ಅಡಿಯಲ್ಲಿ ಪತ್ತೆಯಾಗಿವೆ: ಔಷಧಿ ಚೀಟಿಯಲ್ಲಿ “ಕೌಶಿಕ್, ಕಜೆಪದವು” ಎಂಬ ಹೆಸರಿರುವುದು ಕಂಡುಬಂದಿದ್ದು, ಇದರ ಆಧಾರದ ಮೇಲೆ ಯುವಕನ ಗುರುತು ಪತ್ತೆಹಚ್ಚಲಾಗಿದೆ.

ಪೊಲೀಸ್ ತನಿಖೆ ಮತ್ತು ಶೋಧ ಕಾರ್ಯ:

ಮಾಹಿತಿ ತಿಳಿಯುತ್ತಿದ್ದಂತೆ ಬಜ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರು ಮತ್ತು ರಕ್ಷಣಾ ತಂಡದ ನೆರವಿನೊಂದಿಗೆ ನದಿಯಲ್ಲಿ ಯುವಕನಿಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ. ಕೌಶಿಕ್ ಅವರು ಈ ನಿರ್ಧಾರ ತೆಗೆದುಕೊಳ್ಳಲು ನಿಖರವಾದ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.

Continue Reading

INCIDENT

ಕೊಡಗಿನಲ್ಲಿ ಶರಣ್ಯ ನಾಪತ್ತೆ ಪ್ರಕರಣ: ಕೊಡಗಿನ ತಡಿಯಂಡಮೋಳ್ ಚಾರಣ ಹೈಡ್ರಾಮ: ಕೇರಳದ ಟೆಕ್ಕಿ ಶರಣ್ಯ ಕಥೆ ಅಸಲಿಯೇ? ನಕಲಿಯೇ? ತನಿಖೆಗೆ ಬಿಜೆಪಿ ಆಗ್ರಹ

Published

on

ಮಡಿಕೇರಿ: ಕೊಡಗಿನ ಪ್ರಸಿದ್ಧ ಚಾರಣ ತಾಣವಾದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆ ಜಿ.ಎಸ್. ಶರಣ್ಯ (36) ನಾಪತ್ತೆಯಾಗಿ, ನಂತರ ಪತ್ತೆಯಾದ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿರುವ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಮುಖರು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಡಗಿನ ಅತ್ಯುನ್ನತ ಶಿಖರ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಲ್ಕು ದಿನಗಳ ಕಾಲ ನಾಪತ್ತೆಯಾಗಿದ್ದ ಕೇರಳದ ಸಾಫ್ಟ್‌ವೇರ್ ಎಂಜಿನಿಯರ್ ಜಿ.ಎಸ್. ಶರಣ್ಯ (36) ಅವರ ‘ಬದುಕುಳಿಯುವಿಕೆಯ ಕಥೆ’ (Survival Story) ಈಗ ತೀವ್ರ ವಿವಾದಕ್ಕೆ ಗುರಿಯಾಗಿದೆ. ಈ ಇಡೀ ಪ್ರಕರಣವು ಪೂರ್ವನಿಯೋಜಿತ ನಾಟಕವಿರಬಹುದು ಎಂಬ ಸಂಶಯ ವ್ಯಕ್ತಪಡಿಸಿರುವ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದೆ.

ಏನಿದು ಪ್ರಕರಣ?

ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾಡಪುರಂ ಮೂಲದ ಶರಣ್ಯ ಅವರು ಏಪ್ರಿಲ್ 2 ರಂದು 12 ಜನರ ತಂಡದೊಂದಿಗೆ ಚಾರಣ ಆರಂಭಿಸಿದ್ದರು. ಬೆಟ್ಟ ಇಳಿಯುವಾಗ ದಾರಿ ತಪ್ಪಿ ತಂಡದಿಂದ ಬೇರ್ಪಟ್ಟಿದ್ದರು. ನಂತರ ಸತತ ನಾಲ್ಕು ದಿನಗಳ ಕಾಲ ದಟ್ಟ ಅರಣ್ಯದಲ್ಲಿ ಆಹಾರವಿಲ್ಲದೆ, ಕೇವಲ ಹಳ್ಳದ ನೀರು ಕುಡಿದು ಬದುಕಿರುವುದಾಗಿ ಅವರು ಹೇಳಿಕೊಂಡಿದ್ದರು. ಏಪ್ರಿಲ್ 5 ರಂದು ಅವರು ಸ್ಥಳೀಯರಿಗೆ ಪತ್ತೆಯಾಗಿದ್ದರು.

ಬಿಜೆಪಿ ನಾಯಕರ ಸಂಶಯಕ್ಕೆ ಕಾರಣಗಳೇನು?

ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ ಧನೋಜ್ (ದಿವ್ಯ) ಮತ್ತು ಇತರ ಮುಖಂಡರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:

ದೈಹಿಕ ಕ್ಷಮತೆ: ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಆಹಾರವಿಲ್ಲದೆ ಕಳೆದಿದ್ದರೂ, ಶರಣ್ಯ ಅವರು ಪತ್ತೆಯಾದಾಗ ಅತಿ ಉತ್ಸಾಹದಿಂದ ಮತ್ತು ಯಾವುದೇ ಆಯಾಸವಿಲ್ಲದಂತೆ ಕಂಡುಬಂದಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

ವನ್ಯಮೃಗಗಳ ಭಯ: ಆನೆ ಮತ್ತು ಇತರ ಕ್ರೂರ ಪ್ರಾಣಿಗಳು ಓಡಾಡುವ ದಟ್ಟ ಅರಣ್ಯದಲ್ಲಿ ಒಬ್ಬಂಟಿಯಾಗಿ ನಾಲ್ಕು ದಿನ ಕಳೆದರೂ ತನಗೆ “ಭಯವಾಗಲಿಲ್ಲ” ಎಂದು ಅವರು ನೀಡಿರುವ ಹೇಳಿಕೆ ಅಸಹಜವಾಗಿ ಕಾಣುತ್ತಿದೆ.

ಸಾರ್ವಜನಿಕ ಹಣದ ವ್ಯರ್ಥ: ಅವರನ್ನು ಹುಡುಕಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಮತ್ತು ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿದ್ದರು. ಇದು ಕೇವಲ ಪ್ರಚಾರಕ್ಕಾಗಿ (Fake Publicity) ಮಾಡಿರುವ ನಾಟಕವಾಗಿದ್ದರೆ, ಸರ್ಕಾರದ ಸಂಪನ್ಮೂಲ ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

    ‘ಕಾಣದ ಕೈಗಳ’ ಕೈವಾಡ?

    “ಈ ಪ್ರಕರಣದ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಜನರು ಇದನ್ನು ನಂಬಲು ಸಿದ್ಧರಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು,” ಎಂದು ಪೊಕ್ಕುಳಂಡ ಧನೋಜ್ ಒತ್ತಾಯಿಸಿದ್ದಾರೆ.

    ಪೊಲೀಸ್ ಮತ್ತು ಶರಣ್ಯ ಅವರ ಪ್ರತಿಕ್ರಿಯೆ:

    ಪೊಲೀಸರು ಸದ್ಯಕ್ಕೆ ಎಫ್‌ಐಆರ್ ದಾಖಲಿಸದಿದ್ದರೂ, ಸಲ್ಲಿಕೆಯಾಗಿರುವ ಅರ್ಜಿಯನ್ನು ಆಧರಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇತ್ತ ಶರಣ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು, 500 ಮಿಲಿ ನೀರಿನ ಬಾಟಲಿಯನ್ನೇ ಹಳ್ಳದ ನೀರಿನಿಂದ ತುಂಬಿಸಿಕೊಂಡು ಕುಡಿದು ಬದುಕಿದ್ದೆ,” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

    ಈ ನಿಯೋಗದಲ್ಲಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಲಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷ ಪಾಡಿಯಂಡ ಕಟ್ಟಿ ಕುಶಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೋಳಿಯಾಡಿರ ಸಂತು ಸುಬ್ರಮಣಿ ಮತ್ತಿತರರು ಉಪಸ್ಥಿತರಿದ್ದು, ತನಿಖೆಗೆ ಒತ್ತಾಯಿಸಿದರು.

    Continue Reading

    Trending

    Copyright © 2025 Deevatige