Connect with us

Bantawala

ಕಟ್ಟತ್ತಿಲ: ಮಠ-ಮಸೀದಿ ಸಂಪರ್ಕಿಸುವ ‘ಸೌಹಾರ್ದ ಪಥ’ ಲೋಕಾರ್ಪಣೆ

Published

on

ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪದ ಕಟ್ಟತ್ತಿಲ ಎಂಬ ಪುಣ್ಯಭೂಮಿ ಇಂದು ಕೇವಲ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿ ಮಾತ್ರವಲ್ಲದೆ, ಕೋಮು ಸೌಹಾರ್ದತೆಯ ಭವ್ಯ ಪ್ರತೀಕವಾಗಿಯೂ ಇಡೀ ಜಿಲ್ಲೆಗೆ ಮಾದರಿಯಾಗಿ ನಿಂತಿದೆ. ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ದರ್ಗಾ ಮತ್ತು ಕಟ್ಟತ್ತಿಲ ಮಠವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಇಂದು ನವವಧುವಿನಂತೆ ಸಿಂಗಾರಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಭಾವನಾತ್ಮಕ ಬೆಸುಗೆಯಾಗಿರುವ ಕಟ್ಟತ್ತಿಲ ಮಠ ಮತ್ತು ದರ್ಗಾಕ್ಕೆ ಹೋಗುವ ಹಾದಿ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟು ಹೋಗಿತ್ತು. ರಸ್ತೆಯಿಲ್ಲದೆ ಭಕ್ತಾದಿಗಳು ಹಾಗೂ ಸ್ಥಳೀಯ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದರು. ಧಾರ್ಮಿಕ ಕೇಂದ್ರಗಳಿಗೆ ಸರಿಯಾದ ರಾಜಮಾರ್ಗವೇ ಇಲ್ಲದ ಸಮಯದಲ್ಲಿ, ಸ್ಥಳೀಯ ಖಾಸಗಿ ಜಮೀನಿನ ಮಾಲೀಕರನ್ನು ಮನವೊಲಿಸಿ, ಎರಡು ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಕಾಪಾಡಿಕೊಂಡು ಕಚ್ಚಾ ರಸ್ತೆ ನಿರ್ಮಾಣ ಮಾಡಲು ಈ ಹಿಂದೆ ಕುಳಾಲು ಸುಭಾಶ್ಚಂದ್ರ ಶೆಟ್ಟಿಯವರು ಮುಂಚೂಣಿಯಲ್ಲಿ ನಿಂತು ಪ್ರಮುಖ ಪಾತ್ರ ವಹಿಸಿದ್ದರು. ಆ ಕಾಲದಲ್ಲಿ ಹಲವಾರು ನೂತನ ಕಚ್ಚಾ ರಸ್ತೆ ನಿರ್ಮಾಣ ಮಾಡುವಲ್ಲಿ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಬದ್ಧತೆ ಇಂದಿಗೂ ಜನಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ. ಅದರಲ್ಲಿ ಕಟ್ಟತ್ತಿಲ ಮಸೀದಿ-ಮಠ ಸಂಪರ್ಕ ರಸ್ತೆಯೂ ಒಂದಾಗಿದೆ.

ಆನಂತರ ಜಿ.ಪಂ. ಸದಸ್ಯರಾಗಿದ್ದ ಎಂ.ಎಸ್. ಮಹಮ್ಮದ್ ಅವರು ಈ ರಸ್ತೆಯ ಅಭಿವೃದ್ಧಿಗೆ ಡಾಮರೀಕರಣ ಅನುದಾನ ಒದಗಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ಇದಕ್ಕೆ ಮುಂದುವರಿದಂತೆ, ಸುಭಾಶ್ಚಂದ್ರ ಶೆಟ್ಟಿಯವರ ಅವಧಿಯಲ್ಲಿ ಉಳಿದ ಭಾಗಕ್ಕೆ ಕಾಂಕ್ರೀಟಿಕರಣ ಕಾರ್ಯ ಕೈಗೊಳ್ಳಲಾಗಿದ್ದು, ನಂತರ ನಿಕಟಪೂರ್ವ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು ಅವರ ಅವಧಿಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿ ಇನ್ನಷ್ಟು ಬಲಗೊಂಡಿತು.

ಇದೀಗ, ರಸ್ತೆ ಉದ್ದವಾದ ಸಂಪರ್ಕ ಮಾರ್ಗವಾಗಿರುವ ಹಿನ್ನೆಲೆಯಲ್ಲಿ, ನಾಗರಿಕರ ಬೇಡಿಕೆಗೆ ಓಗೊಟ್ಟು ಸಾಲೆತ್ತೂರು ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷರಾದ ಹಸೈನಾರ್ ಡಿ.ಕೆ. ಹಾಗೂ ಕೊಳ್ನಾಡು ಅಧ್ಯಕ್ಷರಾಗಿದ್ದ ಅಶ್ರಪ್ ಸಾಲೆತ್ತೂರು ಅವರು ವಿಶೇಷ ಮನವಿ ಸಲ್ಲಿಸಿದ್ದರು. ಈ ಮನವಿಗೆ ತಕ್ಷಣ ಸ್ಪಂದಿಸಿದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು, ವಿಧಾನಪರಿಷತ್ ಶಾಸಕರಾದ ಡಾ. ಮಂಜುನಾಥ ಭಂಡಾರಿಯವರ ಗಮನಕ್ಕೆ ತಂದು ಅವರ ವಿಶೇಷ ಅನುದಾನದಲ್ಲಿ ರಸ್ತೆಯ ಸಂಪೂರ್ಣ ಡಾಮರೀಕರಣ ಕಾರ್ಯವನ್ನು ನೆರವೇರಿಸಿದ್ದಾರೆ.

ಕೇವಲ ರಸ್ತೆ ಮಾತ್ರವಲ್ಲದೆ, ಹೈಮಾಸ್ಕ್ ದೀಪಗಳ ಅಳವಡಿಕೆಯಿಂದಾಗಿ ಇಂದು ರಾತ್ರಿ ವೇಳೆಯೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಈ ಹಿಂದೆ ಮಸೀದಿ ಬಳಿ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಅವಧಿಯಲ್ಲಿ ಅಳವಡಿಸಲಾದ ಹೈಮಾಸ್ಕ್ ದೀಪವನ್ನು ಕೂಡ ಇದೇ ಸಂದರ್ಭದಲ್ಲಿ ದುರಸ್ತಿ ಮಾಡಲಾಗಿದ್ದು, ಸಾರ್ವಜನಿಕ ಬಳಕೆಗೆ ಮತ್ತಷ್ಟು ವೇಗ ನೀಡಿದೆ. ಈ ಅಭಿವೃದ್ಧಿ ಕಾರ್ಯಗಳು ವಿಶೇಷವಾಗಿ ಕಟ್ಟತ್ತಿಲ ಊರೂಸು ಸಮಾರಂಭದ ಸುಸಂದರ್ಭದಲ್ಲೇ ಪೂರ್ಣಗೊಂಡಿರುವುದು ನಾಗರಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಿನಲ್ಲಿ, ಕಟ್ಟತ್ತಿಲ ದರ್ಗಾ–ಮಠ ಸಂಪರ್ಕ ರಸ್ತೆ ಇಂದು ಸೌಹಾರ್ದದ ಹಾದಿಯಾಗಿ ಹೊರಹೊಮ್ಮಿದೆ. ರಾಜಕೀಯ ಮತ್ತು ಜಾತಿ ಭೇದ ಮರೆತು ಈ ರಸ್ತೆಯ ಅಭಿವೃದ್ಧಿಯ ಹಿಂದೆ ಕಾರ್ಯನಿರ್ವಹಿಸಿದ ಪ್ರತಿಯೊಬ್ಬರ ಸೇವೆಯನ್ನು ಸ್ಥಳೀಯರು ಹಾಗೂ ಮಸೀದಿ-ಮಂದಿರದ ಆಡಳಿತ ಮಂಡಳಿಯವರು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ. ಇದು ಜಿಲ್ಲೆಯ ಸೌಹಾರ್ದ ಪರಂಪರೆಗೆ ಮತ್ತೊಂದು ಗರಿ ಎಂದರೆ ತಪ್ಪಾಗಲಾರದು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

ದಕ್ಷಿಣಗಾಣಗಾಪುರ ಒಡಿಯೂರಿನಲ್ಲಿ ಶ್ರೀಗಳವರ ಜನ್ಮದಿನೋತ್ಸವ ಹಾಗೂ ‘ಗ್ರಾಮೋತ್ಸವ-2026’: ವೈಭವದ ಗುರುವಂದನೆ – ಸೇವಾ ಸಂಭ್ರಮ

Published

on

ಆಗಸ್ಟ್ 8ರಂದು ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸೇವಾಸಂಭ್ರಮ | ಬೆಳ್ಳಿರಥೋತ್ಸವ, ಪಾದಪೂಜೆ, ತುಲಾಭಾರ ಸೇವೆ

ವಿಟ್ಲ: ದಕ್ಷಿಣಗಾಣಗಾಪುರ ಎಂದೇ ಅಪಾರ ಭಕ್ತಾದಿಗಳಿಂದ ಶ್ರದ್ಧಾ-ಭಕ್ತಿಗಳಿಂದ ಪೂಜಿಸಲ್ಪಡುವ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದೊಂದಿಗೆ ‘ಗುರುವಂದನೆ-ಸೇವಾಸಂಭ್ರಮ’ವಾಗಿ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಆಗಸ್ಟ್ 08ರ ಶನಿವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಮತ್ತು ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಇವರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಮಹೋತ್ಸವವು ನೆರವೇರಲಿದೆ.

ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಬೆಳಿಗ್ಗೆ 8.00 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಶ್ರೀ ಗಣಪತಿ ಹವನ ಹಾಗೂ ಮಹಾಪೂಜೆ ನಡೆಯಲಿದೆ. ತದನಂತರ ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಭಕ್ತಿಪೂರ್ವಕ ನಾಮಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 9.30 ರಿಂದ ಪರಮಪೂಜ್ಯ ಶ್ರೀಗಳವರಿಗೆ ಭಕ್ತಾದಿಗಳಿಂದ ಪಾದಪೂಜೆ, ತುಲಾಭಾರ ಸೇವೆ ಮತ್ತು ಗುರುವಂದನೆ ನೆರವೇರಲಿದೆ. ಅಪರಾಹ್ನ 4.00 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7.00 ಗಂಟೆಗೆ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಸರಿಯಾಗಿ ನಡೆಯಲಿರುವ ಭವ್ಯ ಸಭಾ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದ ಧುರೀಣರು ಭಾಗವಹಿಸಲಿದ್ದಾರೆ.

ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟ, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಆಡಳಿತ ನಿರ್ದೇಶಕ ಕೆ.ಕೆ. ಶೆಟ್ಟಿ,‌ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮುಂಬೈ ಉದ್ಯಮಿ ರಘು ಎಲ್. ಶೆಟ್ಟಿ ದೇವಸ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಯು., ಶಶಿ ಕ್ಯಾಟರಿಂಗ್‌ ಸರ್ವೀಸಸ್‌ ಇದರ ಆಡಳಿತ ನಿರ್ದೇಶಕರಾದ ಶಶಿಧರ ಬಿ. ಶೆಟ್ಟಿ ಬರೋಡ, ಹಿರಿಯ ವಕೀಲರಾದ ಶ್ಯಾಮ ಭಟ್‌ , ಪ್ರಗತಿಪರ ಕೃಷಿಕರಾದ ಶ್ಯಾಮ್‌ ಪ್ರಸಾದ್‌ ಕೊಣಲೆ, ಬಾಂಬೆ ಬಂಟ್ಸ್‌ ಎಸೋಸಿಯೇಷನ್ಸ್ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ ಎನ್. ಶೆಟ್ಟಿ , ಎಟಿಎಸ್‌ ದೋಹ ಕತಾರ್‌ ಆಡಳಿತ ನಿರ್ದೇಶಕರಾದ ರವಿಶೆಟ್ಟಿ ಮೂಡಂಬೈಲು ಹಾಗೂ ನವಿಮುಂಬೈ ಉದ್ಯಮಿ ಭಾಸ್ಕರ ಆರ್. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಾದ ಗುಜರಾತ್‌ನ ಖ್ಯಾತ ಪರಿಸರವಾದಿ, ‘ಗ್ರೀನ್ ಹೀರೊ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಅವರಿಗೆ ವಿಶೇಷ ಗೌರವಾಭಿನಂದನೆ ನೆರವೇರಲಿದೆ.

ಗ್ರಾಮೋತ್ಸವದ ವಿಶೇಷತೆಗಳು

ಕ್ಷೇತ್ರದ ಸಾಮಾಜಿಕ ಕಾಳಜಿಯ ಸಂಕೇತವಾಗಿರುವ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನ, ರಕ್ತದಾನ ಶಿಬಿರಗಳು ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರೊಂದಿಗೆ ವನಮಹೋತ್ಸವ ಆಚರಣೆ, ಭಕ್ತಾದಿಗಳಿಗೆ ಉಚಿತ ಸಸಿ ವಿತರಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಹಾಗೂ ಅರ್ಹ ಬಡ ರೋಗಿಗಳಿಗೆ ವೈದ್ಯಕೀಯ ಶುಶ್ರೂಷೆಗೆ ಧನಸಹಾಯ ನೀಡುವ ಉದಾತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜವನ್ನು ಸುಸ್ಥಿತಿಯಲ್ಲಿಡಲು ವಿವಿಧ ಸಂಘ-ಸಂಸ್ಥೆಗಳಿಂದ ಗುರುವಂದನೆ, ವ್ಯಸನಮುಕ್ತ ಸಮಾಜ ಜಾಗೃತಿ ಅಭಿಯಾನಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯುತ್ತಿದೆ.

ಈ ಪವಿತ್ರ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ, ಶ್ರೀಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಶ್ರೀ ಸಂಸ್ಥಾನಮ್‌ ಪ್ರಕಟಣೆಯಲ್ಲಿ ತಿಳಿಸಿದೆ

Continue Reading

Bantawala

ದಕ್ಷಿಣ ಕನ್ನಡ ಕಾಂಗ್ರೆಸ್‌ಗೆ ಹೊಸ ಚೈತನ್ಯದ ಸಾರಥಿ: ಜಿಲ್ಲಾ ಅಧ್ಯಕ್ಷ ಗಾದಿಗೆ ‘ಚಂದ್ರಪ್ರಕಾಶ್ ಶೆಟ್ಟಿ ತುಂಬೆ’ ಪ್ರಬಲ ಸ್ಪರ್ಧಿ!

Published

on

ಕಾರ್ಯಕರ್ತರ ಪಡೆಗೆ ಹೊಸ ಶಕ್ತಿ, ತಳಮಟ್ಟದ ಸಂಘಟನೆಗೆ ಹೊಸ ಹುರುಪು – ಚಂದ್ರಪ್ರಕಾಶ್ ಶೆಟ್ಟಿ ಸಾರಥ್ಯಕ್ಕೆ ಹೈಕಮಾಂಡ್‌ಗೆ ಕಾರ್ಯಕರ್ತರ ಜೈಕಾರ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಅಖಾಡದಲ್ಲಿ ಈಗ ಕಾಂಗ್ರೆಸ್ ಅಧ್ಯಕ್ಷ ಗಾದಿಯ ಕೌತುಕ ಮುಗಿಲುಮುಟ್ಟಿದೆ. ಜುಲೈ 28ರಿಂದ ಆರಂಭಗೊಂಡಿರುವ ಹೊಸ ಅಧ್ಯಕ್ಷರ ಆಯ್ಕೆಯ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಜಿಲ್ಲಾದ್ಯಂತ ಕಾವೇರಿದ ವಾತಾವರಣ ಸೃಷ್ಟಿಸಿದೆ. ಪ್ರಮುಖ ನಾಯಕರು ಪಟ್ಟಕ್ಕೇರಲು ತೀವ್ರ ಪೈಪೋಟಿ ನಡೆಸುತ್ತಿರುವ ಈ ಹೊತ್ತಿನಲ್ಲಿ, ಪಕ್ಷದ ನಿಷ್ಠಾವಂತ ನಾಯಕ, ಸಂಘಟನಾ ಚತುರ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರ ಹೆಸರು ಕರಾವಳಿ ರಾಜಕೀಯದಲ್ಲಿ ಸಿಂಹಪಾಲು ಪಡೆದುಕೊಂಡಿದೆ!

ಕಷ್ಟಕಾಲದ ನಿಷ್ಠಾವಂತ ಕಾಂಗ್ರೆಸ್ಸಿಗ‌ : ಹೋರಾಟದ ಹಾದಿಯಲ್ಲಿ ಗೆದ್ದು ಬಂದ ಸರದಾರ!

ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಎಂದರೆ ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ಹೋರಾಟ, ತ್ಯಾಗ ಮತ್ತು ಸದಾ ಜನಸೇವೆಯಲ್ಲಿ ನಿರತರಾಗಿರುವ ನಿಷ್ಠಾವಂತ ಕಾಂಗ್ರೆಸ್ಸಿಗ. ಪಕ್ಷದ ಪರಿಸ್ಥಿತಿ ಸವಾಲಿನಿಂದ ಕೂಡಿದ್ದಾಗಲೂ ಕಾಂಗ್ರೆಸ್ ಧ್ವಜವನ್ನು ಎತ್ತಿಹಿಡಿದು, ತಳಮಟ್ಟದ ಕಾರ್ಯಕರ್ತನಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಭರವಸೆಯ ಕಿಚ್ಚು ಹೊತ್ತಿಸಿದ ಧೀರ ನಾಯಕ ಇವರು.

ಇತಿಹಾಸ ಸೃಷ್ಟಿಸಿದ ಐತಿಹಾಸಿಕ ವಿಜಯಗಳು:

ಇವರ ನಾಯಕತ್ವದ ಕಸುವಿಗೆ, ಸಂಘಟನಾ ಶಕ್ತಿಗೆ ಇತಿಹಾಸವೇ ಸಾಕ್ಷಿ ನೀಡುತ್ತದೆ:

ದಿಗ್ಗಜರನ್ನು ಪತನಗೊಳಿಸಿದ ಸಜಿಪ ಮುನ್ನೂರು ಜಯ: ಸಜಿಪ ಮುನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಮಾಜಿ ಶಾಸಕರಂತಹ ಪ್ರಭಾವಿ ಎದುರಾಳಿಯನ್ನೇ ನೆಲಕಚ್ಚಿಸಿ ಐತಿಹಾಸಿಕ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದ್ದು.

35 ವರ್ಷಗಳ ಕೋಟೆಯನ್ನು ಪುಡಿಗಟ್ಟಿದ ಗೋಲ್ತಮಜಲು ಕ್ರಾಂತಿ: ಬದ್ಧ ವೈರಿ ಬಿಜೆಪಿಯ ಉಕ್ಕಿನ ಕೋಟೆಯಂತಿದ್ದ ಗೋಲ್ತಮಜಲು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬರೋಬ್ಬರಿ 35 ವರ್ಷಗಳ ಬಳಿಕ ಕಮಲ ಕಲಿಗಳನ್ನು ಸೋಲಿಸಿ, ಕಾಂಗ್ರೆಸ್‌ನ ವಿಜಯ ಪತಾಕೆ ಹಾರಿಸಿದ ಅಪರೂಪದ ಸಾಧನೆ ಇವರದ್ದು!

ಕಾರ್ಯಕರ್ತರೇ ಆಸ್ತಿ, ಹಿರಿಯ-ಕಿರಿಯರ ಸಮನ್ವಯವೇ ಶಕ್ತಿ!

ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಕಟ್ಟಿಬೆಳೆಸಲು ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸುವ ಶಕ್ತಿ ಬೇಕಿದೆ. ಯುವಕರಲ್ಲಿ ಹೊಸ ಹುರುಪು ತುಂಬಿ, ಹಿರಿಯ ನಾಯಕರ ಸುದೀರ್ಘ ಅನುಭವವನ್ನು ಮಾರ್ಗದರ್ಶನವಾಗಿ ಪಡೆದುಕೊಂಡು ಪಕ್ಷವನ್ನು ಮುನ್ನಡೆಸಬಲ್ಲ ಏಕೈಕ ಸಮರ್ಥ ನಾಯಕ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಎಂಬ ಮಾತುಗಳು ಜಿಲ್ಲೆಯ ಮೂಲೆ ಮೂಲೆಯಿಂದ ಕೇಳಿಬರುತ್ತಿವೆ.

“ಸಂಘಟನೆಗೆ ಶಕ್ತಿ – ಕಾರ್ಯಕರ್ತರಿಗೆ ಗೌರವ – ಕಾಂಗ್ರೆಸ್‌ಗೆ ವಿಜಯ!”

ಈ ಧ್ಯೇಯಮಂತ್ರದೊಂದಿಗೆ ನಿರಂತರವಾಗಿ ಶ್ರಮಿಸುತ್ತಿರುವ ಚಂದ್ರಪ್ರಕಾಶ್ ಶೆಟ್ಟಿ ಅವರಿಗೆ ಜಿಲ್ಲಾ ಕಾಂಗ್ರೆಸ್ ಗಾದಿ ಒಲಿಯಲೇಬೇಕು ಎಂದು ಸಾವಿರಾರು ಅಭಿಮಾನಿಗಳು ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರು ಕಾಂಗ್ರೆಸ್ ಹೈಕಮಾಂಡ್‌ಗೆ ಬಿನ್ನವಿಸಿಕೊಂಡಿದ್ದಾರೆ.

ಅವರ ಕಟ್ಟುಮಸ್ತಾದ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಂಬರುವ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿ, ಕರಾವಳಿಯಲ್ಲಿ ಕಾಂಗ್ರೆಸ್ ಅಲೆ ಸೃಷ್ಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ಜಿಲ್ಲೆಯ ಕಾರ್ಯಕರ್ತರ ದೃಢ ವಿಶ್ವಾಸ!

Continue Reading

Bantawala

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಹನೀಫ್ ಬಗ್ಗುಮೂಲೆ ಅರ್ಜಿ

Published

on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಕಾಂಗ್ರೆಸ್‌ ಸಮಿತಿಯ ಸಾರಥ್ಯ ವಹಿಸಲು ಪಕ್ಷದ ಹಿರಿಯ, ನಿಷ್ಠಾವಂತ ಹಾಗೂ ನೇರ ನಡೆ-ನುಡಿಯ ಪ್ರಭಾವಿ ನಾಯಕ ಹನೀಫ್ ಬಗ್ಗುಮೂಲೆ ಅವರು ಅಧಿಕೃತವಾಗಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಪಕ್ಷ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಮೂರು ದಶಕಗಳ ಸುದೀರ್ಘ ರಾಜಕೀಯ ಪಯಣ

ಬಂಟ್ವಾಳ ತಾಲೂಕು ಕುಳ ಗ್ರಾಮದ ಬಗ್ಗುಮೂಲೆ ನಿವಾಸಿಯಾಗಿರುವ ಹನೀಫ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ನಿರಂತರವಾಗಿ ಶ್ರಮಿಸಿದವರು. ಬಾಲ್ಯದಿಂದಲೇ ಸಾಮಾಜಿಕ ಕಳಕಳಿ ಬೆಳೆಸಿಕೊಂಡಿದ್ದ ಇವರು, ಪಕ್ಷದ ಧ್ವಜದಡಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್‌ಗಳು, ರಕ್ತದಾನ ಶಿಬಿರಗಳು, ಕ್ರೀಡಾ ಕೂಟಗಳು ಹಾಗೂ ಧಾರ್ಮಿಕ ಸಮಾರಂಭಗಳನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಜನಮಾನಸದಲ್ಲಿ ಆಪತ್ಬಾಂಧವನಾಗಿ ನೆಲೆಸಿದ್ದಾರೆ.

ಸಂಸ್ಥಾಪನಾ ಹೆಜ್ಜೆಗಳು ಮತ್ತು ವಹಿಸಿದ ಜವಾಬ್ದಾರಿಗಳು

ಇವರ ನಿಸ್ಪಕ್ಷಪಾತ ಸೇವೆ ಮತ್ತು ಸಂಘಟನಾ ಚತುರತೆಯನ್ನು ಗುರುತಿಸಿದ ಕಾಂಗ್ರೆಸ್ ಪಕ್ಷ, ಇವರಿಗೆ ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನೀಡಿ ಗೌರವಿಸಿದೆ:

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ: ಅಧ್ಯಕ್ಷರಾಗಿ 3 ವರ್ಷಗಳ ಕಾಲ ಯಶಸ್ವಿ ಸೇವೆ.

ಜಿಲ್ಲಾ ಕಾಂಗ್ರೆಸ್ ಸೇವಾದಳ: ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷದ ತಳಮಟ್ಟದ ಸಂಘಟನೆ.

ಕೆಪಿಸಿಸಿ (KPCC): ರಾಜ್ಯ ಮಟ್ಟದ ಕಾರ್ಮಿಕ ವಿಭಾಗದ ಕಾರ್ಯದರ್ಶಿಯಾಗಿ ಶ್ರಮಿಕರ ಪರ ಧ್ವನಿ.

ರಾಷ್ಟ್ರೀಯ ರಾಜೀವ ಗಾಂಧಿ ಜ್ಯೋತಿಯಾತ್ರೆ ಸಮಿತಿ: ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ಹಾಗೂ ಪಕ್ಷದ ಸಿದ್ಧಾಂತಗಳ ಪ್ರಚಾರ.

ಪ್ರಶಸ್ತಿ ಹಾಗೂ ಪುರಸ್ಕಾರ

ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಜನಸೇವೆ ಸಲ್ಲಿಸಿರುವ ಹನೀಫ್ ಬಗ್ಗುಮೂಲೆ ಅವರ ನಿರಂತರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ “ಗಡಿನಾಡ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗಿದೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಮತ್ತು ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ತಮ್ಮ ಅನುಭವ ಮತ್ತು ಬದ್ಧತೆ ಸಹಕಾರಿಯಾಗಲಿದೆ ಎಂಬ ವಿಶ್ವಾಸದೊಂದಿಗೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ.

Continue Reading

Trending

Copyright © 2025 Deevatige

error: Content is protected !!