Connect with us

PRESS MEET

ಪುತ್ತೂರು ಜಾತ್ರೆ ಅಂಗಡಿ ಹರಾಜು: ಅವ್ಯವಹಾರದ ಆರೋಪ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ

Published

on

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯು ಇದೀಗ ಪರ-ವಿರೋಧದ ಚರ್ಚೆಗೆ ವೇದಿಕೆಯಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ಸಂತೆ ವ್ಯಾಪಾರಸ್ಥರೊಬ್ಬರು ಆರೋಪಿಸಿದ್ದರೆ, ದೇವಸ್ಥಾನದ ಆಡಳಿತ ಮಂಡಳಿಯು ಈ ಆರೋಪಗಳನ್ನು ತಳ್ಳಿಹಾಕಿದ್ದು, ವ್ಯಾಪಾರಿಗಳ ಹಿತದೃಷ್ಟಿಯಿಂದಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭ್ರಷ್ಟಾಚಾರ ನಡೆದಿದೆ: ಮಹೇಶ್ ದಾಸ್ ಆರೋಪ

ಸಂತೆ ವ್ಯಾಪಾರಸ್ಥ ಮಹೇಶ್ ದಾಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾತ್ರಾ ಗದ್ದೆಯಲ್ಲಿ ಸುಮಾರು 700ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದರೂ ಕೇವಲ 320 ಅಂಗಡಿಗಳನ್ನು ಮಾತ್ರ ಹರಾಜು ಮಾಡಲಾಗಿದೆ. ಉಳಿದ ಅಂಗಡಿಗಳನ್ನು ಹರಾಜು ಮಾಡದೆ ಅಕ್ರಮವಾಗಿ ಹಣ ಪಡೆಯಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಒಂದು ಸ್ಟಾಲ್‌ನಿಂದ ಕಸ ವಿಲೇವಾರಿ ಹೆಸರಿನಲ್ಲಿ 1,000 ರೂ.ನಂತೆ ಸುಮಾರು 3.20 ಲಕ್ಷ ರೂ. ವಸೂಲಿ ಮಾಡಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಅಲ್ಲದೆ, ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ಕಾನೂನು ಇಲ್ಲಿ ಪಾಲನೆಯಾಗಿಲ್ಲ ಎಂದೂ ಅವರು ದೂರಿದ್ದಾರೆ. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಸ್ಪಷ್ಟನೆ ನೀಡಿದ್ದಾರೆ.

ಈಶ್ವರ ಭಟ್ ಪಂಜಿಗುಡ್ಡೆ ತೀಕ್ಷ್ಣ ಪ್ರತಿಕ್ರಿಯೆ

ಐತಿಹಾಸಿಕ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗಡಿ ಮಳಿಗೆಗಳ ಹರಾಜಿಗೆ ಸಂಬಂಧಿಸಿದಂತೆ ಕೇಳಿಬಂದಿರುವ ಭ್ರಷ್ಟಾಚಾರದ ಆರೋಪಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ ಅವರು ತಳ್ಳಿಹಾಕಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಯ ಪ್ರತಿ ಪೈಸೆಗೂ ಪಾರದರ್ಶಕವಾದ ಲೆಕ್ಕವಿದೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿ ಮಾಡಿದವರು ಮಂಗಳಾದೇವಿಯಲ್ಲಿ, ವಿಟ್ಲದಲ್ಲಿ, ಕುದ್ರೋಳಿಯಲ್ಲಿ ಮತ್ತು ಪುತ್ತೂರಿನಲ್ಲೂ ಗಲಾಟೆ ಮಾಡಿದ್ದಾರೆ. ವ್ಯಾಪಾರಸ್ಥರ ಮದ್ಯೆ ಅವರಿಗೆ ಹೊಂದಾಣಿಕೆ ಇಲ್ಲದೆ ಅವರ ವೈಯುಕ್ತಿಕ ವಿಷಯವನ್ನು ದೇವಸ್ಥಾನಕ್ಕೆ ತರುವುದು ಸರಿಯಲ್ಲ.

ನಿಯಮ ಮೀರಿ ಅಂಗಡಿ ನೀಡಲಾಗಿಲ್ಲ: ಸ್ಪಷ್ಟನೆ

ಜಾತ್ರಾ ಗದ್ದೆಯ ಹರಾಜಿನಲ್ಲಿ ಒಬ್ಬರಿಗೆ ಕೇವಲ ಒಂದು ಅಂಗಡಿ ನೀಡಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು, “ದೊಡ್ಡ ವ್ಯಾಪಾರಸ್ಥರಿಗೆ ಕೇವಲ 10×10ಅಳತೆಯ ಒಂದು ಸಣ್ಣ ಅಂಗಡಿಯಲ್ಲಿ ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ವ್ಯಾಪಾರಿಗಳ ಹಿತದೃಷ್ಟಿಯಿಂದ ಒಂದಕ್ಕಿಂತ ಹೆಚ್ಚು ಅಂಗಡಿಯನ್ನು ನೀಡಲಾಗಿದೆಯೇ ಹೊರತು ಇದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ,” ಎಂದರು.

ಕಸ ವಿಲೇವಾರಿ ಮತ್ತು ಭಂಡಾರಕ್ಕೆ ಸೇರಿದ ಹಣ

ಅಂಗಡಿಗಳಿಂದ ಕಸ ವಿಲೇವಾರಿ ಹೆಸರಿನಲ್ಲಿ ತಲಾ 1,000 ರೂ. ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಮೊತ್ತವನ್ನು ಪ್ರತಿ ದಿನದ ಸ್ವಚ್ಛತೆ ಮತ್ತು ಕಸ ವಿಲೇವಾರಿ ವಾಹನಗಳ ನಿರ್ವಹಣೆಗಾಗಿ ಬಳಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 50,000 ರೂ. ಉಳಿತಾಯವಾಗಿದ್ದು, ಅದು ನೇರವಾಗಿ ದೇವಸ್ಥಾನದ ಭಂಡಾರಕ್ಕೆ ಸೇರಿದೆ. ಈ ಹಣ ಈಶ್ವರ ಭಟ್ ಅವರ ವೈಯಕ್ತಿಕ ಕಿಸೆಗೆ ಹೋಗುವುದಿಲ್ಲ, ಇದನ್ನು ಟೀಕಿಸುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದಾಖಲೆ ಪ್ರಮಾಣದ ಆದಾಯ ಸಂಗ್ರಹ

ದೇವಸ್ಥಾನದ ಆದಾಯದ ಕುರಿತು ಅಂಕಿಅಂಶಗಳನ್ನು ನೀಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಗಣನೀಯ ಪ್ರಗತಿಯಾಗಿದೆ ಎಂದರು:

ಅಮ್ಯೂಸ್‌ಮೆಂಟ್ ಪಾರ್ಕ್: ಈ ಹಿಂದೆ 50 ಲಕ್ಷ ರೂ.ಗೆ ಹರಾಜಾಗಿದ್ದರೂ ಬಿಡ್‌ದಾರರು ಪಾವತಿಸಿದ್ದು ಕೇವಲ 35 ಲಕ್ಷ ರೂ. ಮಾತ್ರ. ಉಳಿದ ಹಣಕ್ಕಾಗಿ ದೇವಸ್ಥಾನದಿಂದ ಕೇಸ್ ದಾಖಲಿಸಲಾಗಿದೆ.

ಪ್ರಸಕ್ತ ಸಾಲಿನ ಆದಾಯ: ಈ ಬಾರಿ ಕೇವಲ 35 ಲಕ್ಷ ರೂ.ನಿಂದ ಬಿಡ್ಡಿಂಗ್ ಆರಂಭಿಸಿ, ದಾಖಲೆಯ 66 ಲಕ್ಷ ರೂ. ಗೆ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ.

ಒಟ್ಟು ಜಮೆ: ಈ ಬಾರಿ ಜಾಯಿಂಟ್ ವೀಲ್‌ನಿಂದ 66 ಲಕ್ಷ ರೂ. ಹಾಗೂ ವಿವಿಧ ಸ್ಟಾಲ್‌ಗಳಿಂದ 69.28 ಲಕ್ಷ ರೂ. ಸೇರಿ ಒಟ್ಟು 1.36 ಕೋಟಿ ರೂ. ಹಣ ದೇವಸ್ಥಾನಕ್ಕೆ ಜಮೆಯಾಗಿದೆ.

ಪಾರದರ್ಶಕ ಹರಾಜು ಪ್ರಕ್ರಿಯೆ

ಲೈಟಿಂಗ್ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ ಅವರು, ಊರಿನವರಿಗೆ ನೀಡಬೇಕೆಂಬ ಒತ್ತಾಯವಿತ್ತಾದರೂ, ಸ್ಥಳೀಯರು 6 ಲಕ್ಷ ರೂ.ಗಳಿಗೆ ಕೇಳಿದ್ದರು. ಆದರೆ ನಾವು ಅದಕ್ಕಿಂತ ಕಡಿಮೆ ದರಕ್ಕೆ ನೀಡುವ ಮೂಲಕ ಪಾರದರ್ಶಕತೆ ಕಾಪಾಡಿಕೊಂಡಿದ್ದೇವೆ. ಹರಾಜಿನ ಹೊರತಾಗಿ ಬಂದವರಿಂದ ಪಡೆದ ಪ್ರತಿಯೊಂದು ಪೈಸೆಗೂ ದೇವಸ್ಥಾನದ ವತಿಯಿಂದಲೇ ರಶೀದಿ ನೀಡಲಾಗಿದೆ ಮತ್ತು ಪ್ರತಿಯೊಬ್ಬರ ಹೆಸರು ಸಮೇತ ಲೆಕ್ಕವಿದೆ ಎಂದು ಅವರು ವಿವರಿಸಿದರು.

“ಲಕ್ಷಾಂತರ ಭಕ್ತರು ಜಾತ್ರೆಯ ಯಶಸ್ಸನ್ನು ಶ್ಲಾಘಿಸುತ್ತಿರುವಾಗ, ಕೇವಲ ಐದಾರು ಮಂದಿ ಟೀಕೆ ಮಾಡುತ್ತಿರುವುದು ವಿಷಾದನೀಯ. ಇಂತಹ ಟೀಕೆಗಳಿಗೆ ನಾವು ಕಿವಿಗೊಡುವುದಿಲ್ಲ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ,” ಎಂದು ಈಶ್ವರ ಭಟ್ ಪಂಜಿಗುಡ್ಡೆಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Trending

Copyright © 2025 Deevatige

error: Content is protected !!