Connect with us

INCIDENT

ಬಿಜೆಪಿಗೆ ತಿರುಗುಬಾಣವಾದ ಪ್ರತಿಭಟನೆ, ಅಮಾಯಕರನ್ನು ದಾಳವಾಗಿಸಿಕೊಂಡ ರಾಜಕೀಯ ಸ್ವಾರ್ಥ: ಹಕ್ಕುಪತ್ರ ಪ್ರತಿಭಟನೆಯ ಅಸಲಿ ಬಣ್ಣ ಬಯಲು ಮಾಡಿದ ಪುಣಚದ ಫಲಾನುಭವಿಗಳು!

Published

on

ಪುತ್ತೂರು: ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಡವರ, ಅಮಾಯಕರ ಹೊಟ್ಟೆಪಾಡಿನ ಸಮಸ್ಯೆಗಳನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬುದಕ್ಕೆ ಬಂಟ್ವಾಳ ತಾಲೂಕು ಕಚೇರಿ ಎದುರು ನಡೆದ ಹಕ್ಕುಪತ್ರ ಪ್ರತಿಭಟನೆಯೇ ಜೀವಂತ ಸಾಕ್ಷಿಯಾಗಿದೆ. ಪುಣಚ ಗ್ರಾಮದ ಪರಿಶಿಷ್ಟ ಜಾತಿ (ಪ.ಜಾತಿ) ಕಾಲನಿಯ ನಿವಾಸಿಗಳ ಹಕ್ಕುಪತ್ರದ ಹೋರಾಟವನ್ನು ಮುಂದಿಟ್ಟುಕೊಂಡು ವಿಪಕ್ಷ ಬಿಜೆಪಿ ನಡೆಸಿದ ರಾಜಕೀಯ ತಂತ್ರಗಾರಿಕೆ ಇದೀಗ ಸ್ವತಃ ಆ ಪಕ್ಷಕ್ಕೇ ಭಾರಿ ತಿರುಗುಬಾಣವಾಗಿ ಪರಿಣಮಿಸಿದೆ. ತಮಗೆ ತಿಳಿಯದಂತೆ ರಾಜಕೀಯ ಬಲಿಪಶುಗಳಾಗಿದ್ದನ್ನು ಅರಿತ ಬಡಪಾಯಿ ಫಲಾನುಭವಿಗಳು ನೇರವಾಗಿ ಶಾಸಕ ಅಶೋಕ್ ಕುಮಾರ್ ರೈ ಅವರ ಕಚೇರಿಗೆ ಧಾವಿಸಿ, ಇಡೀ ಪ್ರಹಸನದ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದಾರೆ.

“ನಮ್ಮನ್ನು ಬಳಸಿಕೊಂಡರು, ನಾವು ಶಾಸಕರ ವಿರುದ್ಧ ಪ್ರತಿಭಟನೆ ಮಾಡಿಲ್ಲ”: ಶಾಸಕರ ಕಚೇರಿಯಲ್ಲಿ ಮಾಧ್ಯಮಗಳು ಹಾಗೂ ಶಾಸಕರ ಮುಂದೆ ತಮ್ಮ ಅಳಲನ್ನು ತೋಡಿಕೊಂಡ ಪುಣಚ ಕಾಲನಿಯ ನಿವಾಸಿಗಳು, “ನಾವು ಶಾಸಕ ಅಶೋಕ್ ರೈ ಅವರ ವಿರುದ್ಧ ಯಾವುದೇ ಪ್ರತಿಭಟನೆಯನ್ನು ಮಾಡಿಲ್ಲ. ನಮ್ಮನ್ನು ಬಿಜೆಪಿಯವರು ಅಲ್ಲಿಗೆ ಕರೆದುಕೊಂಡು ಹೋಗಿ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದರು. ನಾವು ಯಾರ ವಿರುದ್ಧವೂ ಮಾತನಾಡಿಲ್ಲ. ಆದರೆ ನಮ್ಮ ಹಸಿವು ಮತ್ತು ಹಕ್ಕುಪತ್ರದ ಸಮಸ್ಯೆಯನ್ನು ಕೆಲವರು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಕೀಳಾಗಿ ಬಳಸಿಕೊಂಡಿದ್ದಾರೆ” ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಪ್ರಯತ್ನ ನಮಗೆ ಗೊತ್ತು – ಫಲಾನುಭವಿಗಳ ನುಡಿ: ಬಡ ನಿವಾಸಿಗಳು ಮುಂದುವರಿದು ಮಾತನಾಡುತ್ತಾ, “ನಮ್ಮ ಜಾಗದ 94ಸಿ ಹಕ್ಕುಪತ್ರದ ಪ್ರಕ್ರಿಯೆ ಇಷ್ಟರಮಟ್ಟಿಗೆ ಮುಂದುವರಿದಿರುವುದೇ ಶಾಸಕ ಅಶೋಕ್ ರೈ ಅವರ ಪ್ರಾಮಾಣಿಕ ಪ್ರಯತ್ನದಿಂದ ಎಂಬುದು ನಮಗೆ ಮೊದಲಿನಿಂದಲೂ ಗೊತ್ತು. ಆದರೆ ಹಕ್ಕುಪತ್ರ ಇನ್ನೂ ಕೈಗೆ ಸಿಗದೇ ಇರುವುದರಿಂದ, ‘ಪ್ರತಿಭಟನೆ ಮಾಡಿದರೆ ಬೇಗ ಸಿಗುತ್ತದೆ’ ಕಾನೂನು ಪ್ರಕಾರ ನಿಮಗೆ ಕೊಡುವುದಕ್ಕೆ ಆಗುವುದಿಲ್ಲ,ಕಾನೂನು ಮೀರಿ‌ ನಿಮಗೆ ಹಕ್ಕು ಪತ್ರ ಅಶೋಕ್ ರೈ ಮಾಡಿಸಿದ್ದಾರೆ ಅದನ್ನು ಆದಷ್ಟು ಬೇಗ ಪಡೆಯಬೇಕು ಇಲ್ಲವಾದರೆ ಕಷ್ಟ ಎಂದು ಹೇಳಿ ನಮ್ಮನ್ನು ಬಂಟ್ವಾಳ ತಾಲೂಕು ಕಚೇರಿ ಎದರು ಕೂರಿಸಿದ್ದಾರೆ. ನಾವು ನಿಮ್ಮ ವಿರುದ್ದ ಏನೂ ಮಾತನಾಡಿಲ್ಲ,ಸರಕಾರದ ವಿರುದ್ದವೂ ಮಾತನಾಡಿಲ್ಲ ಎಲ್ಲವೂ ಮಾಡಿದ್ದು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಇನ್ನೊಬ್ಬರು ಎಂದು ಹೇಳುವುದರೊಂದಿಗೆ ರಾಜಕಾರಣಿಗಳ ತಂತ್ರಗಾರಿಕೆಯನ್ನು ಬಯಲು ಮಾಡಿದರು.

ನೀವು ರಾಜಕೀಯಕ್ಕೆ ಬಲಿಪಶುಗಳಾಗಿದ್ದೀರಿ – ಶಾಸಕ ಅಶೋಕ್ ರೈ ಕಳವಳ: ಫಲಾನುಭವಿಗಳ ಮಾತುಗಳನ್ನು ಆಲಿಸಿದ ಶಾಸಕ ಅಶೋಕ್ ರೈ ಅವರು ತೀವ್ರ ಕಳವಳ ವ್ಯಕ್ತಪಡಿಸಿ, ಬಡವರನ್ನು ದಿಕ್ಕು ತಪ್ಪಿಸಿದ ರಾಜಕೀಯ ಪ್ರಮುಖರ ವಿರುದ್ಧ ಕಿಡಿಕಾರಿದರು. “ನಿಮ್ಮ ಹಕ್ಕುಪತ್ರ ಕೊಟ್ಟರೆ ವೈಯಕ್ತಿಕವಾಗಿ ನಾನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ನಾನೇ ಜವಾಬ್ದಾರಿ ತೆಗೆದುಕೊಂಡು ನಿಮ್ಮ ಹಕ್ಕುಪತ್ರದ ಪ್ರಕ್ರಿಯೆಯನ್ನು ಮಾಡಿಸಿಕೊಟ್ಟಿದ್ದೇನೆ. ಎಲ್ಲವೂ ಸರಿಯಾಗಿ ಹಕ್ಕುಪತ್ರ ವಿತರಣೆಯಾಗುವ ಹಂತ ತಲುಪಿದ್ದಾಗ ಈ ರಾಜಕೀಯ ಪ್ರೇರಿತ ಪ್ರತಿಭಟನೆ ನಡೆದಿದೆ. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಕಾನೂನು ಹೋರಾಟ (ಕೋರ್ಟ್ ಮೆಟ್ಟಿಲೇರುವುದು) ಆರಂಭಿಸಿದ್ದಾರೆ. ಹಾಗಾಗಿ ಮುಂದಿನ ಬೆಳವಣಿಗೆಗಳು ಕಾನೂನು ಪ್ರಕಾರವೇ ನಡೆಯಬೇಕಾಗುತ್ತದೆ” ಎಂದರು.

ಇದೇ ವೇಳೆ ಪ್ರತಿಭಟನೆಗೆ ಕರೆತಂದವರ ನಡೆಯನ್ನು ಪ್ರಶ್ನಿಸಿದ ಶಾಸಕರು, “ನಿಮ್ಮನ್ನು ಉದ್ರೇಕಿಸಿ ಪ್ರತಿಭಟನೆಗೆ ಕರೆದುಕೊಂಡು ಹೋದವರು ಈಗ ನಿಮ್ಮ ಜೊತೆಯಲ್ಲಿದ್ದಾರೆಯೇ? ಈ ಇಡೀ ವಿಚಾರದಲ್ಲಿ ನೀವು ಬಲಿಪಶುಗಳಾಗಿದ್ದೀರಿ. ಮುಂದೆ ಏನಾಗುತ್ತದೆ ಎಂಬುದನ್ನು ನಾವೆಲ್ಲರೂ ಕಾದು ನೋಡಬೇಕಿದೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಬಡವರ ಹೆಸರಿನಲ್ಲಿ ಸ್ವಾರ್ಥ ಸಾಧನೆ: ಕೂಲಿ ನಾಲಿ ಮಾಡಿ ಬದುಕುವ ಅಮಾಯಕ ಬಡ ಜನರಿಗೆ ಹಕ್ಕುಪತ್ರದ ಆಸೆ ತೋರಿಸಿ, ಅವರನ್ನು ಆಡಳಿತ ಪಕ್ಷ ಮತ್ತು ಶಾಸಕರ ವಿರುದ್ಧ ಎತ್ತಿಕಟ್ಟುವ ವಿಪಕ್ಷಗಳ ರಾಜಕೀಯ ಗಿಮಿಕ್ ಪುತ್ತೂರಿನಲ್ಲಿ ಸಂಪೂರ್ಣ ಮುಖಭಂಗ ಅನುಭವಿಸಿದೆ. ಬಡವರು ತಮಗಾದ ಅನ್ಯಾಯವನ್ನು ಅರಿತು ಶಾಸಕರ ಕಚೇರಿಗೆ ಬಂದು ಸ್ಪಷ್ಟನೆ ನೀಡಿರುವುದು, ಕರಾವಳಿ ರಾಜಕಾರಣದಲ್ಲಿ ಬಡವರನ್ನು ದಾಳವಾಗಿಸಿಕೊಳ್ಳುವ ‘ಸ್ವಾರ್ಥ ರಾಜಕೀಯ’ದ ಕ್ರೂರ ಮುಖವನ್ನು ಜಗಜ್ಜಾಹೀರು ಮಾಡಿದೆ.




ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Dakshina Kannada

ಕಡಬದಲ್ಲಿ ಭಾರಿ ಗಾಳಿ-ಮಳೆಗೆ ದುರಂತ: ಕೃಷಿಕ ಸಾವು, ಮನೆಗೆ ಮರ ಬಿದ್ದು ಮಹಿಳೆಗೆ ಗಂಭೀರ ಗಾಯ! ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿಎಂ ಡಾ. ಜಿ. ಪರಮೇಶ್ವರ್ ಸೂಚನೆ

Published

on

ಅಪಾಯಕಾರಿ ಮರ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ | ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡಲು ಡಿಸಿ ಜೊತೆ ಚರ್ಚಿಸಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಗಾಳಿ ಮತ್ತು ಮಳೆಗೆ ಕಡಬ ತಾಲೂಕಿನಲ್ಲಿ ಸಾಲು ಸಾಲು ದುರಂತಗಳು ಸಂಭವಿಸಿವೆ. ಅಡಿಕೆ ಮರ ಮುರಿದು ಬಿದ್ದು ಕೃಷಿಕರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮನೆಗೆ ಮರ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೊಂದೆಡೆ ರಸ್ತೆಗೆ ಮರ ಬಿದ್ದು ಬೈಕ್ ಸವಾರನೊಬ್ಬ ಗಾಯಗೊಂಡಿರುವ ಘಟನೆಗಳು ವರದಿಯಾಗಿವೆ.

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಧರೆಗುರುಳಿದ ಅಡಿಕೆ ಮರ!

ಕಡಬ ತಾಲೂಕಿನ ಕುಂತೂರು ಗ್ರಾಮದ ‘ಗುತ್ತುಪಾಲು’ ಎಂಬಲ್ಲಿ ಶುಕ್ರವಾರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ದಿಢೀರ್ ಬೀಸಿದ ಭಾರಿ ಬಿರುಗಾಳಿಗೆ ಅಡಿಕೆ ಮರವೊಂದು ಮುರಿದುಬಿದ್ದಿದೆ. ತೋಟದಲ್ಲಿದ್ದ ಕೃಷಿ ಕಾರ್ಮಿಕ ಕುಂತೂರು ಗ್ರಾಮದ ಕೇವಳ ನಿವಾಸಿ ಯಾದವ ಗೌಡ (೬೬) ಅವರ ಮೈಮೇಲೆ ಮರ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರೊಂದಿಗೆ ಕೆಲಸ ಮಾಡುತ್ತಿದ್ದ ಇತರ ಮೂವರು ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಮನೆ ಮೇಲೆ ಬಿದ್ದ ಬೃಹತ್ ಮರ: ಸೀತಮ್ಮ ಗಂಭೀರ

ಇನ್ನೊಂದೆಡೆ ಬಳ್ಪ ಗ್ರಾಮದ ನೇರ್ಪು ಎಂಬಲ್ಲಿ ಪರಮೇಶ್ವರ ಗೌಡ ಎಂಬವರ ಮನೆ ಮೇಲೆ ಶುಕ್ರವಾರ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಮನೆಯಲ್ಲಿದ್ದ ಅವರ ಪತ್ನಿ ಸೀತಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೈಕ್ ಸವಾರನಿಗೆ ಗಾಯ: ಜೀವಭಯದಲ್ಲೇ ಸಾರ್ವಜನಿಕರ ಸಂಚಾರ!

ಶುಕ್ರವಾರ ಸಂಜೆ ವೇಳೆ ಪೆರಾಬೆ ಗ್ರಾಮದ ಸುರುಳಿ ಕಲ್ಲಡ್ಕ (ಮಾಪಲ) ಬಳಿ ರಸ್ತೆಗೆ ಬೃಹತ್ ಮರ ಬಿದ್ದು, ಆ ಹಾದಿಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಚ್ಚೂರು ನಿವಾಸಿ ಗೀತೇಶ್ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಾರ್ವಜನಿಕರ ಆಕ್ರೋಶ:

ಸುರುಳಿ ಮಾಪಲ ಮೂಲಕ ನೆಲ್ಯಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿವೆ. ಈ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಪ್ರಯಾಣಿಕರು ಜೀವ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ತೀವ್ರ ಆಗ್ರಹ ವ್ಯಕ್ತಪಡಿಸಿದ್ದಾರೆ.

‘ಎಕ್ಸ್’ನಲ್ಲಿ ಸಾಂತ್ವನ: ಶೀಘ್ರ ಪರಿಹಾರಕ್ಕೆ ಡಾ. ಜಿ. ಪರಮೇಶ್ವರ್ ಸೂಚನೆ

ಕಡಬ ತಾಲೂಕಿನಲ್ಲಿ ಸಂಭವಿಸಿದ ಈ ಸಾಲು ಸಾಲು ಅವಘಡಗಳ ಕುರಿತು ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ತೀವ್ರ ಆತಂಕ ಹಾಗೂ ದುಃಖ ವ್ಯಕ್ತಪಡಿಸಿದ್ದಾರೆ.

ಶೀಘ್ರ ಪರಿಹಾರಕ್ಕೆ ಆದೇಶ: ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿರುವುದಾಗಿ ತಿಳಿಸಿದ ಸಚಿವರು, ನೊಂದ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ತಕ್ಷಣವೇ ಸಿಗಬೇಕಾದ ಸೂಕ್ತ ಪರಿಹಾರ ಧನವನ್ನು ಆದಷ್ಟು ಬೇಗ ವಿತರಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಮರಗಳ ತೆರವುಗೊಳಿಸಿ – ಸಚಿವರ ಕರೆ: ಮಳೆ-ಬಿರುಗಾಳಿ ತೀವ್ರವಾಗಿರುವ ಈ ಸಮಯದಲ್ಲಿ ಮನೆಯ ಸುತ್ತಮುತ್ತ ಅಪಾಯಕಾರಿಯಾಗಿ ನಿಂತಿರುವ ಮರಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವಾಗ ಮರದ ಕೆಳಗೆ ನಿಲ್ಲದೆ ಸಾರ್ವಜನಿಕರು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅವರು ವಿನಂತಿಸಿದ್ದಾರೆ.

ಘಟನಾ ಸ್ಥಳಕ್ಕೆ ಕಡಬ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಧಿತ ಕುಟುಂಬಗಳಿಗೆ ಸಾಂತ್ವನ ಹೇಳಿ ಶೀಘ್ರ ಪರಿಹಾರ ದೊರಕಿಸುವ ಭರವಸೆ ನೀಡಿದ್ದಾರೆ.

Continue Reading

Bantawala

3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ತೋಟದ ಚರಂಡಿಯಲ್ಲಿ ಪತ್ತೆ: ಆಸ್ಪತ್ರೆಗೆ ದಾಖಲು

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ವೃದ್ಧ ಕಾಣೆಯಾಗಿದ್ದರಿಂದ ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್‌ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಆಪದ್ಬಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್‌ ಮೂಲಕ ಅವರನ್ನು ವಿಟ್ಲಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ಮೂಡಿದ ಹಲವು ಅನುಮಾನಗಳು: ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ತೋಟಕ್ಕೆ ಯಾಕೆ ಹೋದರು? ಅವರನ್ನು ಯಾರಾದರೂ ಅಲ್ಲಿಗೆ ಕರೆದುಕೊಂಡು ಹೋದರೇ? ಅಥವಾ ದಾರಿ ತಪ್ಪಿ ಬಿದ್ದರಾ? ಎಂಬ ಹಲವಾರು ಪ್ರಶ್ನೆಗಳು ಸ್ಥಳೀಯವಾಗಿ ಕಾಡುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರು ಚೇತರಿಸಿಕೊಂಡ ನಂತರವಷ್ಟೇ ಈ ಎಲ್ಲಾ ಅನುಮಾನಗಳಿಗೆ ಹಾಗೂ ಘಟನೆಯ ನೈಜತೆಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

Continue Reading

Bantawala

ಖಾಸಗಿ ಬಸ್ಸಿನಲ್ಲಿ ಮಹಿಳೆಯರಿಗೆ ಗುಪ್ತಾಂಗ ಪ್ರದರ್ಶನ: ಅರ್ಚಕನ ವಿಕೃತಿ ಕ್ಯಾಮೆರಾದಲ್ಲಿ ಸೆರೆ, ವೀಡಿಯೋ ವೈರಲ್!

Published

on

ಬಂಟ್ವಾಳ/ಮಂಗಳೂರು: ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿರಬೇಕಾದ ವ್ಯಕ್ತಿಯೊಬ್ಬ ಸಾರ್ವಜನಿಕ ಸಾರಿಗೆಯಲ್ಲಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರು ತಲೆತಗ್ಗಿಸುವಂತೆ ಮಾಡಿರುವ ಘಟನೆ ಮಂಗಳೂರು-ಉಪ್ಪಿನಂಗಡಿ ಮಾರ್ಗದ ಖಾಸಗಿ ಬಸ್ಸಿನಲ್ಲಿ ನಡೆದಿದೆ. ಚಲಿಸುವ ಬಸ್ಸಿನಲ್ಲಿ ಮಹಿಳೆಯರ ಎದುರಲ್ಲೇ ಗುಪ್ತಾಂಗ ಪ್ರದರ್ಶಿಸಿ ವಿಕೃತ ಕಾಮ ಮೆರೆದ ದೃಶ್ಯಗಳು ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿವೆ.

ಘಟನೆಯ ವಿವರ: ಅರ್ಚಕ ವೃತ್ತಿ ಮಾಡುತ್ತಿದ್ದ ವೃದ್ಧ ವ್ಯಕ್ತಿಯೊಬ್ಬ ಬಿಸಿರೋಡಿನಲ್ಲಿ ಮಂಗಳೂರು – ಉಪ್ಪಿನಂಗಡಿ ಮಾರ್ಗದ ಖಾಸಗಿ ಬಸ್ಸನ್ನೇರಿದ್ದಾನೆ. ಚಾಲಕನ ಎಡಬದಿಯಲ್ಲಿದ್ದ ಉದ್ದನೆಯ ಸೀಟಿನಲ್ಲಿ ಕುಳಿತಿದ್ದ ಈತ, ಲುಂಗಿಯನ್ನು ಮಡಚಿಕೊಂಡು ಎದುರಿನ ಸೀಟಿನಲ್ಲಿದ್ದ ಮಹಿಳಾ ಪ್ರಯಾಣಿಕರ ಕಡೆಗೆ ಅಸಹ್ಯಕರ ಹಾಗೂ ವಿಕೃತ ರೀತಿಯಲ್ಲಿ ಗುಪ್ತಾಂಗ ಪ್ರದರ್ಶಿಸಿದ್ದಾನೆ.

ಕ್ಯಾಮೆರಾದಲ್ಲಿ ಸೆರೆಯಾಯ್ತು ವಿಕೃತಿ: ಬಸ್ಸಿನಲ್ಲಿದ್ದ ಈತನ ನೀಚ ಕೃತ್ಯವನ್ನು ಕಂಡು ರೊಚ್ಚಿಗೆದ್ದ ಮಹಿಳೆಯೊಬ್ಬರು ಧೈರ್ಯದಿಂದ ತಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಿದ್ದಾರೆ. ಮಹಿಳೆ ವೀಡಿಯೋ ಮಾಡುತ್ತಿರುವುದನ್ನು ಗಮನಿಸಿದ ಆ ವೃದ್ಧ ಅರ್ಚಕ ತಕ್ಷಣ ಭಯಗೊಂಡು, ಮೆಲ್ಕಾರ್ ಜಂಕ್ಷನ್ ತಲುಪುತ್ತಿದ್ದಂತೆ ಬಸ್ಸಿನಿಂದ ಇಳಿದು ಪರಾರಿಯಾಗಿದ್ದಾನೆ.

ಆರೋಪಿಯ ಗುರುತು ಪತ್ತೆ: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ. ವಿಕೃತವಾಗಿ ವರ್ತಿಸಿದ ವ್ಯಕ್ತಿಯನ್ನು ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಸಾದಿಕುಕ್ಕು ಅಂಗನವಾಡಿ ಬಳಿಯ ನಿವಾಸಿ, ವೃತ್ತಿಯಲ್ಲಿ ಅರ್ಚಕ ಎಂದು ಗುರುತಿಸಲಾಗಿದೆ.

ಇತ್ತೀಚೆಗಷ್ಟೇ ಖಾಸಗಿ ಬಸ್ ಕಂಡಕ್ಟರ್‌ ಒಬ್ಬ ಬಸ್ಸಿನೊಳಗೆ ಇದೇ ರೀತಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕ ಆಕ್ರೋಶಕ್ಕೆ ಈಡಾಗಿದ್ದ. ಇದೀಗ ಪೂಜೆ-ಪುನಸ್ಕಾರಗಳನ್ನು ಮಾಡುವ ಧಾರ್ಮಿಕ ವೃತ್ತಿಯಲ್ಲಿದ್ದುಕೊಂಡು, ಸಮಾಜದಲ್ಲಿ ಗೌರವ ಪಡೆಯುತ್ತಿದ್ದ ವಯೋವೃದ್ಧ ಅರ್ಚಕನೇ ಇಂತಹ ವಿಕೃತ ಕೃತ್ಯಕ್ಕೆ ಕೈಹಾಕಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಧೈರ್ಯದಿಂದ ವೀಡಿಯೋ ಮಾಡಿ ಈತನ ನಿಜ ಬಣ್ಣ ಬಯಲು ಮಾಡಿದ ಮಹಿಳೆಯ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ವಿಕೃತಕಾಮಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

Continue Reading

Trending

Copyright © 2025 Deevatige

error: Content is protected !!