Connect with us

Bantawala

ಘನತ್ಯಾಜ್ಯ ವಿಲೇವಾರಿಯಲ್ಲಿ ಗೋಲ್ಮಾಲ್..ಸ್ಮಶಾನದಂತಾದ ವಿಟ್ಲದ ಘನತ್ಯಾಜ್ಯ ಘಟಕ..ಬೆಂಕಿ ಇಟ್ಟು ಸುಡುವ ಮೂಲಕ ಜನರ ಆರೋಗ್ಯದಲ್ಲಿ ಚೆಲ್ಲಾಟ..ಸಾಮಾಜಿಕ ಹೋರಾಟಗಾರನಿಂದ ಪೊಲೀಸ್ ಠಾಣೆಗೆ ದೂರು..

Published

on

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಘನತ್ಯಾಜ್ಯ ವಿಲೇವಾರಿ ಮಾಡಬೇಕಾಗಿದ್ದ ಜವಾಬ್ದಾರಿಯುತ ಅಧಿಕಾರಿ, ಸಿಬ್ಬಂದಿಗಳು ತ್ಯಾಜ್ಯಗಳ ರಾಶಿಗೆ ಘಟಕದ ಆವರಣದಲ್ಲೇ ಬೆಂಕಿಹಾಕಿ ಸುಡುವ ಮೂಲಕ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.

ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ಕಳೆದ ಮೂರು ತಿಂಗಳಿಂದ ಘನತ್ಯಾಜ್ಯ ವಿಲೇವಾರಿಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸಾಮಾಜಿಕ ಹೋರಾಟಗಾರ ಧನಂಜಯ ಎಂಬವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಸೇರಿದಂತೆ ಇತರ ಘನತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗಿತ್ತು. ಅದಕ್ಕಾಗಿಯೇ ಅಂಗಡಿ ಮಾಲಿಕರಿಂದ, ಜನ ಸಾಮಾನ್ಯರಿಂದ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ. ಆದರೆ ಮೂಟೆ ಮೂಟೆ ಘನತ್ಯಾಜ್ಯಗಳನ್ನು ವ್ಯವಸ್ಥಿತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಘಟಕದ ಆವರಣದಲ್ಲೇ ಸ್ಮಶಾನದಲ್ಲಿ ಹೆಣಗಳನ್ನು ಸುಡುವ ರೀತಿಯಲ್ಲಿ ಸುಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಏಳುತ್ತಿರುವ ವಿಷಕಾರಿ ಹೊಗೆಯು ಪರಿಸರಕ್ಕೆ, ಪರಿಸರ ನಿವಾಸಿಗಳ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೇ, ಸುಮಾರು 30 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ವೈಜ್ಞಾನಿಕವಾಗಿ ಸಂಶೋಧನೆಯಲ್ಲಿ ಸಾಬೀತಾಗಿದೆ.

ಈ ಅಕ್ರಮ ಚಟುವಟಿಕೆಯು ಪರಿಸರ ಸಂರಕ್ಷಣಾ ಕಾಯ್ದೆ 1986 (Environment Protection Act 1986), ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 (Air Pollution Act 1981) ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016 ರ (Plastic Waste Management Rules 2016) ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಘನತ್ಯಾಜ್ಯ ವಿಲೇವಾರಿಗೆ ಬಳಸದೆ ದುರ್ಬಳಕೆ ಮಾಡಲಾಗುತ್ತಿದೆ ಪಟ್ಟಣ ಪಂಚಾಯತಿನಲ್ಲಿ ಪ್ಲಾಸ್ಟಿಕ್‌ ವಿಲೇವಾರಿಗೆ ಸಾಕಷ್ಟು ಅನುದಾನ ಮೀಸಲಿಟ್ಟಿದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ, ಆರೋಗ್ಯಾಧಿಕಾರಿ, ಸುಪರ್‌ವೈಸರ್‌ ಮತ್ತು ಕೌನ್ಸಿಲರ್‌ ಇವರೆಲ್ಲರೂ ಸೇರಿ ಸರಕಾರದಿಂದ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಂಡು ಪ್ಲಾಸ್ಟಿಕನ್ನು ಸುಟ್ಟು ಶಿಕ್ಷಾರ್ಹ ಅಪರಾಧವನ್ನೆಸಗುತ್ತಿದ್ದಾರೆ ಎಂದು ದೂರುದಾರರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಅಕ್ರಮ ಹಾಗೂ ಅವೈಜ್ಞಾನಿಕ ವಿಲೇವಾರಿಯು ಪರಿಸರ ಸಂರಕ್ಷಣಾ ಕಾಯ್ದೆ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳ ನೇರ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸದೆ ಗೋಲ್ಮಾಲ್ ನಡೆಸುವ ಮೂಲಕ ಸ್ಪಷ್ಟವಾಗಿ ದುರ್ಬಳಕೆ ಮಾಡಲಾಗುತ್ತಿದೆ ಮತ್ತು ಈ ಬಗ್ಗೆ ಪ್ರಶ್ನಿಸಿದರೆ ಸಂಬಂಧಿಸಿದ ಅಧಿಕಾರಿ ಚೇತನ್ ಎಂಬವರು ಬೇಜವಾಬ್ದಾರಿ ಹಾಗೂ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ದೂರುದಾರರು ವಿವರಿಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಸದ್ಯ ವಿಟ್ಲ ಪೊಲೀಸರು ಈ ದೂರಿನ ಕುರಿತು ಎನ್‌ಸಿಆರ್ (NCR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Continue Reading
Advertisement

Bantawala

ಗಾಂಜಾ ಮಾರಾಟ ಯತ್ನ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಮಂಗಳೂರು ನ್ಯಾಯಾಲಯ

Published

on

ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷ ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ಮಂಗಳೂರಿನ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.

ಕಳೆದ 10.11.2020 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲ್ಕಾರ್ ಬಸ್‌ ನಿಲ್ದಾಣದ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅಂದಿನ ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಚೆಲುವರಾಜ್ ಅವರು ತಂಡದೊಂದಿಗೆ ದಾಳಿ ನಡೆಸಿ, ಸುಮಾರು 49,000 ರೂ. ಮೌಲ್ಯದ 1.480 ಕಿ.ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 126/2020 ರಂತೆ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಅಂದಿನ ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್‌ ಅವರು ಕೈಗೊಂಡು, ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ಸುದೀರ್ಘ ವಿಚಾರಣೆ ಮಂಗಳೂರಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು. ಆರೋಪಿತನಾದ ಮಂಗಳೂರು ಬಂದರು ನಿವಾಸಿ ಟಿ.ಪಿ. ಫಾರೂಕ್ (50) ಎಂಬಾತನ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀ ಬಸವರಾಜ್ ಅವರು ದಿನಾಂಕ 04-04-2026 ರಂದು ತೀರ್ಪು ಪ್ರಕಟಿಸಿದರು. ಆರೋಪಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 70,000 ರೂ. ದಂಡ ವಿಧಿಸಿ ಆದೇಶಿಸಲಾಗಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಜೂಡಿತಾ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

Continue Reading

Bantawala

ಅಕ್ರಮ ಕಲ್ಲುಕ್ವಾರಿಗೆ ತಹಶೀಲ್ದಾರ್ ತಂಡದಿಂದ ಮಿಂಚಿನ ದಾಳಿ.! ಸರ್ಕಾರಿ ಜಮೀನಿನಲ್ಲಿ ರಾಜಾರೋಷವಾಗಿ ಮೈನಿಂಗ್ ಮಾಫಿಯಾ.!

Published

on

ಬಂಟ್ವಾಳ ತಾಲೂಕಿನ ವಿಟ್ಲ ಹೋಬಳಿ ವ್ಯಾಪ್ತಿಯ ಅಳಿಕೆ ಗ್ರಾಮದ ಕೋಟೆತ್ತಡ್ಕ ಎಂಬಲ್ಲಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲು ಕ್ವಾರಿಗೆ ಬಂಟ್ವಾಳ ತಹಶೀಲ್ದಾರ್ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ನಕಲಿ ದಾಖಲೆ ಸೃಷ್ಟಿಸಿ, ಗಣಿ ಇಲಾಖೆಯ ಅಧಿಕಾರಿಯೊಬ್ಬರ ಕುಮ್ಮಕ್ಕಿನಿಂದ ನಡೆಯುತ್ತಿದ್ದ ಈ ದಂಧೆಯನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಘಟನೆಯ ಹಿನ್ನೆಲೆ:
ಅಳಿಕೆ ಗ್ರಾಮದ ನೆಗಳಗುಳಿ ನಿವಾಸಿ ಕೃಷ್ಣ ಕುಡಿಯ ಅವರ ಪುತ್ರ ಚಂದ್ರ ಕುಡಿಯ ಎಂಬವರಿಗೆ 1994ರಲ್ಲಿ ಸರ್ವೆ ನಂ. 377/2ರಲ್ಲಿ 3.15 ಎಕರೆ ಹಾಗೂ 410/1ಬಿಯಲ್ಲಿ 0.80 ಎಕರೆ ಸರ್ಕಾರಿ ಜಮೀನು ಮಂಜೂರಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಚಂದ್ರ ಕುಡಿಯ ಅವರು ಕಾರ್ಕಳ ಪರಿಸರದಲ್ಲಿ ವಾಸವಿದ್ದರು. ಈ ನಡುವೆ, ಕಳೆದ ಎರಡು ವಾರಗಳಿಂದ ಕೋಟೆತ್ತಡ್ಕ ಮುಳಿಯ ಎಂಬಲ್ಲಿನ ಮಂಜೂರಾದ ಸರ್ಕಾರಿ ಜಮೀನಿನಲ್ಲಿ ಏಕಾಏಕಿ ಬೃಹತ್ ಮಟ್ಟದ ಕೆಂಪು ಕಲ್ಲಿನ ಗಣಿಗಾರಿಕೆ ಆರಂಭವಾಗಿತ್ತು.

ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ:
ಸ್ಥಳೀಯರು ನೀಡಿದ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಹಾಗೂ ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ರವಿ ಎಂ.ಎನ್. ಮತ್ತು ತಂಡ ಸ್ಥಳಕ್ಕೆ ದಾಳಿ ನಡೆಸಿತು. ದಾಳಿಯ ವೇಳೆ ಸ್ಥಳದಲ್ಲಿ ಕಲ್ಲು ಕಡಿಯುವ ಯಂತ್ರಗಳು ಹಾಗೂ ಜೆಸಿಬಿಗಳು ಪತ್ತೆಯಾಗಿವೆ. ಭೂಮಾಪನಾ ಇಲಾಖೆ ಮತ್ತು ಕಂದಾಯ ಇಲಾಖೆಯ ಜಂಟಿ ಮೋಜಣೆಯಲ್ಲಿ, ಗಣಿಗಾರಿಕೆ ನಡೆಯುತ್ತಿದ್ದ ಭೂಮಿ ಸಂಪೂರ್ಣವಾಗಿ ಸರ್ಕಾರಿ ಜಮೀನು ಎಂಬುದು ಸಾಬೀತಾಗಿದೆ.

ಈ ಅಕ್ರಮ ಕ್ವಾರಿಯ ಹಿಂದೆ ದೊಡ್ಡ ಮಟ್ಟದ ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, 1994ರಲ್ಲಿ ಜಮೀನು ಮಂಜೂರಾತಿ ಪಡೆದಿದ್ದ ಚಂದ್ರ ಕುಡಿಯ ಎಂಬವರು ‘ಚಂದ್ರೇ ಗೌಡ’ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಇದಕ್ಕೆ ಪೂರಕವಾಗಿ ಗಣಿ ಇಲಾಖೆಯ ಅಧಿಕಾರಿ ಮಹದೇಶ ಎಂಬುವವರು ಕಂದಾಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ, ಸ್ವಹಿತಾಸಕ್ತಿಯಿಂದ ಈ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿರುವುದು ಇಲಾಖೆಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ತಹಶೀಲ್ದಾರ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಲ್ಲು ಕಡಿಯುವ ನಾಲ್ಕು ಯಂತ್ರಗಳು ಸೇರಿದಂತೆ ಇತರೆ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಅಳಿಕೆ ಗ್ರಾಮದ ಕೋಟೆತ್ತಡ್ಕ ಮುಳಿಯ ಎಂಬಲ್ಲಿ ಸರ್ಕಾರಿ ಜಮೀನಿನಲ್ಲಿ ನಕಲಿ ದಾಖಲೆ ಬಳಸಿ ನಡೆಸುತ್ತಿದ್ದ ಈ ದಂಧೆಯನ್ನು ಕಂದಾಯ ಮತ್ತು ಭೂಮಾಪನಾ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಪತ್ತೆಹಚ್ಚಲಾಗಿದ್ದು, ಅಕ್ರಮಕ್ಕೆ ಸಾಥ್ ನೀಡಿದ ಗಣಿ ಅಧಿಕಾರಿ ಮಹದೇಶ ವಿರುದ್ಧವೂ ಕಾನೂನು ಉರುಳು ಬಿಗಿಯಾಗುವ ಸಾಧ್ಯತೆ ದಟ್ಟವಾಗಿದೆ.

Continue Reading

Bantawala

ಕುಡ್ತಮುಗೇರು ಆಸ್ಪತ್ರೆ ಕಟ್ಟಡಕ್ಕೆ MRPL ನಿಂದ ₹30 ಲಕ್ಷ ಅನುದಾನ: ಸುಭಾಶ್ಚಂದ್ರ ಶೆಟ್ಟಿ ಹಾಗೂ ಎಂಎಲ್ಸಿ ಮಂಜುನಾಥ ಭಂಡಾರಿ ಶ್ರಮಕ್ಕೆ ಸಂದ ಜಯ

Published

on


ಬಂಟ್ವಾಳ: ತಾಲೂಕಿನ ಕೊಳ್ನಾಡು ಗ್ರಾಮದ ಕುಡ್ತಮುಗೇರುವಿನಲ್ಲಿ ನೂತನ ಸರ್ಕಾರಿ ಆಸ್ಪತ್ರೆ (ಆರೋಗ್ಯ ವಿಸ್ತರಣಾ ಕೇಂದ್ರ) ಕಟ್ಟಡ ನಿರ್ಮಾಣಕ್ಕೆ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (CSR) ₹30 ಲಕ್ಷ ಅನುದಾನ ಮಂಜೂರು ಮಾಡಿದೆ.

ಹಿನ್ನೆಲೆ ಮತ್ತು ಬೇಡಿಕೆ:
ಕುಡ್ತಮುಗೇರು ಸುತ್ತಮುತ್ತಲಿನ ಸುಮಾರು 14,000 ಜನಸಂಖ್ಯೆಗೆ ಈ ಭಾಗದಲ್ಲಿ ಸೂಕ್ತ ಆಸ್ಪತ್ರೆಯ ವ್ಯವಸ್ಥೆ ಇರಲಿಲ್ಲ. 2018ರಲ್ಲಿಯೇ ಸರ್ಕಾರದಿಂದ ಆರೋಗ್ಯ ಕೇಂದ್ರ ಮಂಜೂರಾಗಿದ್ದರೂ, ಸ್ವಂತ ಕಟ್ಟಡವಿಲ್ಲದೆ ಸ್ಥಳೀಯ ಶಾಲೆಯ ಕೊಠಡಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಶಾಲಾ ಕೊಠಡಿಯ ಕೊರತೆಯಿಂದಾಗಿ ಆಸ್ಪತ್ರೆಗೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ತುರ್ತಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಅವರು, ಎಂಆರ್‌ಪಿಎಲ್ ಸಂಸ್ಥೆಯಿಂದ ಅನುದಾನ ಕೊಡಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರಿಗೆ 2025ರ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಿದ್ದರು.

ಎಂಎಲ್ಸಿ ಮಂಜುನಾಥ ಭಂಡಾರಿ ಅವರ ಶಿಫಾರಸು:
ಸುಭಾಶ್ಚಂದ್ರ ಶೆಟ್ಟಿ ಅವರ ಮನವಿಗೆ ತಕ್ಷಣ ಸ್ಪಂದಿಸಿದ ಎಂಎಲ್ಸಿ ಮಂಜುನಾಥ ಭಂಡಾರಿ ಅವರು, ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು, ಬಂಟ್ವಾಳದ ಅತೀ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಭಾಗದ ಜನರ ಆರೋಗ್ಯದ ದೃಷ್ಟಿಯಿಂದ ಈ ಯೋಜನೆಗೆ ಸಿ.ಎಸ್.ಆರ್ ನಿಧಿ ಒದಗಿಸುವಂತೆ ಬಲವಾಗಿ ಶಿಫಾರಸು ಮಾಡಿದ್ದರು.

ಎಂಆರ್‌ಪಿಎಲ್ ಅಧಿಕೃತ ಘೋಷಣೆ:
ಈ ನಿರಂತರ ಬೆನ್ನಟ್ಟುವಿಕೆಯ ಫಲವಾಗಿ, ಎಂಆರ್‌ಪಿಎಲ್ ಸಂಸ್ಥೆಯು 2026ರ ಮಾರ್ಚ್ 26ರಂದು ಅಧಿಕೃತವಾಗಿ ‘ಆಶಯ ಪತ್ರ’ (Letter of Intent) ಹೊರಡಿಸಿದೆ. ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿಯವರಿಗೆ ಬರೆದ ಪತ್ರದಲ್ಲಿ, ಕುಡ್ತಮುಗೇರು ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಜಿಎಸ್‌ಟಿ ಸೇರಿದಂತೆ ಒಟ್ಟು ₹30.00 ಲಕ್ಷ ಹಣವನ್ನು ಒದಗಿಸುವುದಾಗಿ ಸಂಸ್ಥೆ ತಿಳಿಸಿದೆ. ಈ ಯೋಜನೆಯ ಸಾಕಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಅವರು ವಿಶೇಷ ಆಸಕ್ತಿ ವಹಿಸಿ ಪ್ರಸ್ತಾವನೆ ಸಲ್ಲಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯರಾದ (ಎಂಎಲ್ಸಿ) ಮಂಜುನಾಥ ಭಂಡಾರಿ ಅವರು ಯೋಜನೆಯ ತುರ್ತು ಅಗತ್ಯವನ್ನು ಮನಗಂಡು ಸಂಸ್ಥೆಗೆ ಶಿಫಾರಸು ಮಾಡುವ ಮೂಲಕ ಅನುದಾನ ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Continue Reading

Trending

Copyright © 2025 Deevatige