Connect with us

court

ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ: ಸುಳ್ಯದ ‘ಕೋಳಿಕರಣ್’ಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದ ನ್ಯಾಯಾಲಯ

Published

on

ಸುಳ್ಯ: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ರಾಘವನ್ ಅಲಿಯಾಸ್ ಕೋಳಿಕರಣ್ ಎಂಬಾತನಿಗೆ ಸುಳ್ಯದ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. 118/24 ರ ಪ್ರಕರಣದಲ್ಲಿ, ಆರೋಪಿ ರಾಘವನ್ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದ ಹಾಗೂ ಕಾನೂನುಬದ್ಧವಾಗಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ ತಡೆಯುಂಟು ಮಾಡಿದ್ದ ಬಗ್ಗೆ ಆರೋಪ ಹೊರಿಸಲಾಗಿತ್ತು. ಅಂದಿನ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ರವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸುಳ್ಯದ ಮಾನ್ಯ ಎಸ್.ಸಿ.ಜೆ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಮೋಹನ್ ಬಾಬು ರವರು ಸುದೀರ್ಘ ವಿಚಾರಣೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಂ 121(1) BNS: 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ 6 ತಿಂಗಳ ಶಿಕ್ಷೆ. ಕಲಂ 132 BNS (ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಲು ಹಲ್ಲೆ): 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಹೆಚ್ಚುವರಿ ಶಿಕ್ಷೆ. ಕಲಂ 262 BNS (ಬಂಧನಕ್ಕೆ ತಡೆಯೊಡ್ಡುವುದು): 1 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ. ದಂಡ. ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಹೆಚ್ಚುವರಿ ಶಿಕ್ಷೆಯನ್ನು ವಿಧಿಸಿದೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಕುಮಾರಿ ಪ್ರೀತಿ ಎಂ.ಸಿ. ರವರು ಸಮರ್ಥವಾಗಿ ವಾದ ಮಂಡಿಸಿದ್ದರು. ಪೊಲೀಸರ ಸಮಯೋಚಿತ ತನಿಖೆ ಮತ್ತು ಅಭಿಯೋಜಕರ ವಾದದಿಂದಾಗಿ ಆರೋಪಿಗೆ ಶಿಕ್ಷೆಯಾಗಿದೆ.


ಪ್ರಕರಣದ ಗಂಭೀರತೆಯನ್ನು ಅರಿತು, ನಿಖರವಾದ ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ ಸುಳ್ಯ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ ಮತ್ತು ತಂಡದ ದಕ್ಷ ತನಿಖಾ ವೈಖರಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಈ ತೀರ್ಪು ಒಂದು ಎಚ್ಚರಿಕೆಯ ಸಂದೇಶವಾಗಿದೆ.”

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Belthangady

ಮಹೇಶ್ ಶೆಟ್ಟಿ ತಿಮರೋಡಿ ಅರ್ಜಿ ವಜಾ: ಧರ್ಮಾಧಿಕಾರಿಗಳ ವಿರುದ್ಧ ಎಐ (AI) ಬಳಕೆ:ಜಾಲತಾಣಗಳಿಗೆ ಬಿಸಿ; ಹೈಕೋರ್ಟ್ ಮಹತ್ವದ ತೀರ್ಪು

Published

on

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಬುಧವಾರ ಎರಡು ಪ್ರತ್ಯೇಕ ಮತ್ತು ಮಹತ್ವದ ಪ್ರಕರಣಗಳಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿದೆ. ಗಡೀಪಾರು ಆದೇಶ ಪ್ರಶ್ನಿಸಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಇನ್ನೊಂದೆಡೆ ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಎಐ (AI) ತಂತ್ರಜ್ಞಾನ ದುರ್ಬಳಕೆ ತಡೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿ ಮಾಡಿದೆ.

ತಿಮರೋಡಿ ಅರ್ಜಿ ವಜಾ: ಮೇಲ್ಮನವಿಗೆ ಹೈಕೋರ್ಟ್ ಸೂಚನೆ

ತಮ್ಮ ವಿರುದ್ಧ ಹೊರಡಿಸಲಾಗಿದ್ದ ಗಡೀಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಕಾನೂನು ಪ್ರಕ್ರಿಯೆಯ ಪ್ರಕಾರ, ಗಡೀಪಾರು ಆದೇಶದ ವಿರುದ್ಧ ಸರ್ಕಾರದ ಗೃಹ ಕಾರ್ಯದರ್ಶಿಯವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅದನ್ನು ಬಿಟ್ಟು ನೇರವಾಗಿ ರಿಟ್ ಅರ್ಜಿ ಸಲ್ಲಿಸುವುದು ಊರ್ಜಿತವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದರೆ, ತಿಮರೋಡಿ ಅವರಿಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ನೀಡುವ ದೃಷ್ಟಿಯಿಂದ, ಮುಂದಿನ ಎರಡು ವಾರಗಳ ಕಾಲ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಧರ್ಮಾಧಿಕಾರಿಗಳ ವಿರುದ್ಧ ಎಐ ದುರುಪಯೋಗ: ಜಾಲತಾಣಗಳಿಗೆ ಬಿಸಿ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ಧ ಕೃತಕ ಬುದ್ಧಿಮತ್ತೆ (Artificial Intelligence) ಬಳಸಿ ಮಾನಹಾನಿಕರ ಕಂಟೆಂಟ್ ಸೃಷ್ಟಿಸುತ್ತಿರುವುದನ್ನು ತಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯೂ ಇದೇ ವೇಳೆ ನಡೆಯಿತು.

ಧರ್ಮಸ್ಥಳದ ಪರ ವಕೀಲ ಎಸ್. ರಾಜಶೇಖರ್ ಮಂಡಿಸಿದ ವಾದವನ್ನು ಆಲಿಸಿದ ಹೈಕೋರ್ಟ್, ಈ ಕುರಿತು ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಗೂಗಲ್, ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ) ಮತ್ತು ವಾಟ್ಸಾಪ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಎಐ ಬಳಸಿ ಫೋಟೋ ಹಾಗೂ ಸುಳ್ಳು ಮಾಹಿತಿ ಹಂಚುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಜಾಲತಾಣ ಸಂಸ್ಥೆಗಳ ಜವಾಬ್ದಾರಿಯನ್ನು ಈ ನೋಟಿಸ್ ಪ್ರಶ್ನಿಸಿದೆ.

Continue Reading

Belthangady

ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ, ಮರುತನಿಖೆಗೆ ಹಸಿರು ನಿಶಾನೆ?

Published

on

ನವದೆಹಲಿ: ಕಳೆದ 13 ವರ್ಷಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಇಂದು (ಏಪ್ರಿಲ್ 29, 2026) ಮಹತ್ವದ ತಿರುವು ಸಿಕ್ಕಿದೆ. ಬಹುಚರ್ಚಿತ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರದ ವಿಳಂಬ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುವುದರ ಜೊತೆಗೆ ಮರುತನಿಖೆಯ ಸಾಧ್ಯತೆಗಳ ಬಗ್ಗೆ ಸ್ಪಷ್ಟನೆ ಕೇಳಿದೆ.

ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ಕಟು ಪ್ರಶ್ನೆಗಳು

ವಿಚಾರಣೆ ವೇಳೆ ನ್ಯಾಯಪೀಠವು ರಾಜ್ಯ ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ್ದರೂ ಕೌಂಟರ್ ಅಫಿಡವಿಟ್ ಸಲ್ಲಿಸದಿದ್ದಕ್ಕೆ ಕಿಡಿ ಕಾರಿದ ನ್ಯಾಯಾಧೀಶರು, “ಇಂತಹ ಗಂಭೀರ ಪ್ರಕರಣವನ್ನು ನೀವು ಇಷ್ಟು ಹಗುರವಾಗಿ ಪರಿಗಣಿಸುತ್ತಿದ್ದೀರಾ?” ಎಂದು ಪ್ರಶ್ನಿಸಿದರು. ಸರ್ಕಾರದ ನಿರಾಸಕ್ತಿಯು ತನಿಖೆಯ ಹಾದಿಯ ಬಗ್ಗೆ ಅನುಮಾನ ಮೂಡಿಸುವಂತಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

ಕಲಾಪದ ಪ್ರಮುಖ ಮುಖ್ಯಾಂಶಗಳು:

ಸಾಕ್ಷಿಗಳ ಸಾವು ಮತ್ತು ಆತಂಕ: ಪ್ರಕರಣದಲ್ಲಿ ಪ್ರಮುಖವಾಗಿದ್ದ ಸುಮಾರು 5 ಮಂದಿ ಸಾಕ್ಷಿಗಳು ಹಾಗೂ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂಬ ಅಂಶವನ್ನು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಇದು ತನಿಖೆಯ ದಿಕ್ಕನ್ನು ಬದಲಿಸುವ ಪ್ರಮುಖ ಅಂಶವಾಗಿ ಚರ್ಚೆಯಾಯಿತು.

ಸಾಕ್ಷಿಗಳಿಗೆ ತಕ್ಷಣದ ರಕ್ಷಣೆ: ಪ್ರಸ್ತುತ ಲಭ್ಯವಿರುವ ಸಾಕ್ಷಿಗಳಿಗೆ ಯಾವುದೇ ಅಪಾಯ ಉಂಟಾಗದಂತೆ ತಕ್ಷಣವೇ ಸೂಕ್ತ ರಕ್ಷಣೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿತು.

ಮರುತನಿಖೆ ಮತ್ತು SIT ರಚನೆ: ಪ್ರಕರಣದಲ್ಲಿ ಹೊಸ ಸಾಕ್ಷ್ಯಗಳು ಅಥವಾ ಡಿಎನ್‌ಎ (DNA) ಪುರಾವೆಗಳ ಲಭ್ಯತೆಯ ಸಾಧ್ಯತೆ ಇರುವುದರಿಂದ, ವಿಶೇಷ ತನಿಖಾ ತಂಡ (SIT) ಮೂಲಕ ಮರುತನಿಖೆ ನಡೆಸುವ ಕುರಿತು ಸರ್ಕಾರದ ನಿಲುವು ತಿಳಿಸಲು ಸೂಚಿಸಲಾಗಿದೆ.

CBI ವೈಫಲ್ಯದ ಪ್ರಸ್ತಾಪ: ಈ ಹಿಂದೆ ಸಿಬಿಐ ನಡೆಸಿದ ತನಿಖೆಯಲ್ಲಿ ತನಿಖಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡದ ಗಂಭೀರ ಲೋಪದ ಬಗ್ಗೆಯೂ ನ್ಯಾಯಾಲಯ ಪ್ರಸ್ತಾಪಿಸಿತು.

“ಸತ್ಯಕ್ಕೆ ಸಾವಿಲ್ಲ”: ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಹರ್ಷ

ಸುಪ್ರೀಂ ಕೋರ್ಟ್‌ನ ಈ ಬೆಳವಣಿಗೆಯನ್ನು “ಸೌಜನ್ಯ ಹೋರಾಟಕ್ಕೆ ಸಂದ ಜಯ” ಎಂದು ಹೋರಾಟಗಾರ ಗಿರೀಶ್ ಮಟ್ಟೆಣ್ಣವರ ಬಣ್ಣಿಸಿದ್ದಾರೆ. ದೆಹಲಿಯಿಂದ ಹೇಳಿಕೆ ಬಿಡುಗಡೆ ಮಾಡಿದ ಅವರು: “13 ವರ್ಷಗಳ ಕಠಿಣ ಹಾದಿಯಲ್ಲಿ ಎದೆಗುಂದದೆ ನಿಂತ ಪ್ರತಿ ಧ್ವನಿಗೆ ಇಂದು ಮನ್ನಣೆ ಸಿಕ್ಕಿದೆ. ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ನ್ಯಾಯವಾದಿಗಳ ಸತತ ಪರಿಶ್ರಮ ಇಂದು ಆಶಾದಾಯಕ ಕಿರಣವನ್ನು ಮೂಡಿಸಿದೆ. ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಕೋರ್ಟ್ ಆದೇಶಿಸಿರುವುದು ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ಮಾಡಿದೆ,” ಎಂದು ತಿಳಿಸಿದರು.

ಮುಂದಿನ ಹಾದಿ ಏನು?

ಸುಪ್ರೀಂ ಕೋರ್ಟ್ ಮುಂದಿನ ಎರಡು ವಾರಗಳ ಒಳಗೆ ಮರುತನಿಖೆಯ ಬಗ್ಗೆ ತನ್ನ ನಿಲುವನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಸೂಚಿಸಿದೆ. ಜುಲೈ 14 ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಪ್ರಕರಣವು ಸಂಪೂರ್ಣವಾಗಿ ಮರುತನಿಖೆಗೆ ಒಳಪಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶೋಭಾ ಗುಪ್ತ, ಶೇಖರ್ ದೇವಸ, ನೂಲವಿ, ಅಶುತೋಷ್ ದುಬೆ ಹಾಗೂ ಸಂತೋಷ್ ರಾವ್ ಪರವಾಗಿ ಗುರುರಾಜ್ ಅವರು ವಾದ ಮಂಡಿಸಿದರು.

Continue Reading

Bantawala

ವಿಟ್ಲ ಪೊಲೀಸ್ ಸ್ಟೇಷನ್ ಸಿಸಿಟಿವಿ ಫೂಟೇಜ್ ಹಾಜರುಪಡಿಸಲು ಮಂಗಳೂರು ಪೋಕ್ಸೋ ನ್ಯಾಯಾಲಯದ ಆದೇಶ

Published

on

ಮಂಗಳೂರು: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೋಕ್ಸೋ ಪ್ರಕರಣವೊಂದರಲ್ಲಿ (ಕ್ರೈಮ್ ನಂಬರ್ 121/2025) ಮಹತ್ವದ ಬೆಳವಣಿಗೆಯಾಗಿದ್ದು, ಘಟನೆ ನಡೆದ ದಿನದಂದು ಪೊಲೀಸ್ ಠಾಣೆಯಲ್ಲಿ ಅಳವಡಿಸಲಾದ ಸಿಸಿಟಿವಿ ಫೂಟೇಜ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಮಂಗಳೂರಿನ ಒಂದನೇ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಾಲಯ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ:

ವಿಟ್ಲ ಠಾಣಾ ವ್ಯಾಪ್ತಿಯ ಅಪ್ರಾಪ್ತ ಮಗಳ ಮೇಲೆ ಅನುಚಿತ ವರ್ತನೆ ತೋರಲಾಗಿದೆ ಎಂದು ತಾಯಿಯೊಬ್ಬರು ಗುರುಪ್ರಸಾದ್ ಎಂಬುವವರ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು. ಆದರೆ, ಈ ದೂರು ಸುಳ್ಳು ಮತ್ತು ಪೂರ್ವಯೋಜಿತ ಪಿತೂರಿ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.

ಸಂಶಯಕ್ಕೆ ಕಾರಣವಾದ ಅಂಶಗಳು:

ದೂರು ನೀಡುವ ಸಂದರ್ಭದಲ್ಲಿ ದೂರುದಾರರು ಸೇಸಪ್ಪ ಬೆದ್ರಕಾಡು ಎಂಬ ವ್ಯಕ್ತಿಯ ಜೊತೆ ಪೊಲೀಸ್ ಠಾಣೆಗೆ ಬಂದಿದ್ದರು ಎನ್ನಲಾಗಿದೆ. ಈ ಸೇಸಪ್ಪ ಹಾಗೂ ಆರೋಪಿಯ ಚಿಕ್ಕಪ್ಪ ಆನಂದ ಸುರುಳಿಮೂಳೆ ನಡುವೆ ಈಗಾಗಲೇ ಹಳೆಯ ದ್ವೇಷ ಹಾಗೂ ಹಣದ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ನಡೆಯುತ್ತಿವೆ.

ವಿಚಾರಣೆ ವೇಳೆ ಬಾಧಿತ ಹುಡುಗಿ ಮತ್ತು ಆಕೆಯ ತಾಯಿ, ತಮಗೆ ಸೇಸಪ್ಪ ಬೆದ್ರಕಾಡು ಎಂಬುವವರ ಪರಿಚಯವೇ ಇಲ್ಲ ಮತ್ತು ಅಂದು ಅವರು ನಮ್ಮ ಜೊತೆ ಠಾಣೆಗೆ ಬಂದಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಇದು ಪ್ರಕರಣದ ಮೇಲೆ ಸಂಶಯ ಮೂಡಲು ಕಾರಣವಾಗಿದೆ.

ಆರೋಪಿ ಗುರುಪ್ರಸಾದ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದು ಆರೋಪಿ ಪರ ವಕೀಲರ ಪ್ರಬಲ ವಾದವಾಗಿದೆ.

ನ್ಯಾಯಾಲಯದ ಆದೇಶ:

ಆರೋಪಿ ಪರ ವಕೀಲರಾದ ಶಿವಾನಂದ ವಿಟ್ಲ ಅವರು BNSS ಕಲಂ 94ರ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಘಟನೆ ನಡೆದ ದಿನದ (13.09.2025) ವಿಟ್ಲ ಪೊಲೀಸ್ ಠಾಣೆಯ ಸಿಸಿಟಿವಿ ಫೂಟೇಜ್ ಅನ್ನು ಹಾಜರುಪಡಿಸುವಂತೆ ಕೋರಿದ್ದರು. ಸರಕಾರಿ ಅಭಿಯೋಜಕರ ಆಕ್ಷೇಪಣೆಯ ಹೊರತಾಗಿಯೂ, ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ಸಿಸಿಟಿವಿ ಫೂಟೇಜ್ ಸಲ್ಲಿಸಲು ಆದೇಶಿಸಿದೆ.

ಈ ಆದೇಶದಿಂದಾಗಿ ಪೋಕ್ಸೋ ಪ್ರಕರಣದಲ್ಲಿ ಹೊಸ ತಿರುವು ಲಭಿಸಿದ್ದು, ಪೊಲೀಸ್ ಠಾಣೆಯ ಸಿಸಿಟಿವಿ ದಾಖಲೆಗಳು ಪ್ರಕರಣದ ಅಸಲಿಯತ್ತನ್ನು ಹೊರಹಾಕಲಿವೆಯೇ ಎಂದು ಕಾದು ನೋಡಬೇಕಿದೆ.

Continue Reading

Trending

Copyright © 2025 Deevatige

error: Content is protected !!