Connect with us

Bantawala

ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ಮಾಲ್ ಬೆಳಕಿಗೆ… ಇದು ಪಂಚಲಿಂಗೇಶ್ವರನ ಮಹಿಮೆ

Published

on

ವಿಟ್ಲ : ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆಯಲ್ಲಿ ಸಂತೆ ವ್ಯಾಪಾರದ ಗುತ್ತಿಗೆ ಪಡೆದ ವ್ಯಕ್ತಿಯೋರ್ವ ಸಂತೆ ವ್ಯಾಪಾರಸ್ಥರಿಂದ ಬೇಕಾಬಿಟ್ಟಿ ಬಾಡಿಗೆ ಕಿತ್ತುಕೊಂಡು ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡಿ ಕೈತೊಳೆದುಕೊಂಡ ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ನ್ಯಾಯಕ್ಕಾಗಿ ಬಡ ವ್ಯಾಪಾರಸ್ಥರು ಪಂಚಾಯತಿನ ಮೆಟ್ಟಿಲೇರಿದ್ದಾರೆ.
ಸಂತೆ ವ್ಯಾಪಾರದಲ್ಲಿ ಮಿತಿಮೀರಿದ ಬ್ರೋಕರ್‌ಗಳ ಹಾವಳಿಯಿಂದ ಬಡ ವ್ಯಾಪಾರಸ್ಥರಿಗೆ ನಿರಂತರವಾಗಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿ ಧ್ವನಿ ಎತ್ತುತ್ತಿದ್ದ ಮಹೇಶ್‌ದಾಸ್ ಎಂಬಾತನೇ ಇದೀಗ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗುತ್ತಿಗೆಯನ್ನು ವಹಿಸಿಕೊಂಡು ಬಡ ವ್ಯಾಪಾರಸ್ಥರಲ್ಲಿ ಒಂದಕ್ಕೆ ಎರಡುಪಟ್ಟು ಬಾಡಿಗೆ ವಸೂಲಾತಿ ಮಾಡಿಕೊಂಡು ಮೋಸ ಎಸಗಿದ ಸಂತೆ ವ್ಯಾಪಾರಿಗಳ ಅಧ್ಯಕ್ಷ ಎಂದು ತಿಳಿದುಬಂದಿದೆ.


ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಕುತ್ಯಾಡಿ ನಿವಾಸಿ ಲಕ್ಷ್ಮೀಶ ಎಂಬ ಸಂತೆ ವ್ಯಾಪಾರಸ್ಥರು ಪಂಚಾಯತ್‌ಗೆ ದೂರು ನೀಡಿದವರಾಗಿದ್ದು, ‌ ತನ್ನ ವ್ಯಾಪಾರದ ಬಾಬ್ತು ಪಂಚಾಯತ್‌ ನಿಯಮಗಳನ್ನು ಮೀರಿ ಗುತ್ತಿಗೆದಾರ ಅಧಿಕ ಬಾಡಿಗೆಯನ್ನು ತನ್ನಿಂದ ವಸೂಲಾತಿ ಮಾಡಿರುವನೆಂದು ಆರೋಪಿಸಿದ್ದಾರೆ. ನಾನು, ನನ್ನ ಅಣ್ಣ, ನನ್ನ ಚಿಕ್ಕಮ್ಮ, ಹೇಮಂತ್‌, ಸುಬಾಶ್‌, ಪ್ರಸಾದ್‌ ಮತ್ತು ಅವರ ಪತ್ನಿ ಹಾಗೆ ಸುಮಾರು 10 ಜನ ವ್ಯಾಪಾರಸ್ಥರು ಜ,28ರಂದು ದೂರು ಸಲ್ಲಿಸಿದ್ದೇವೆ ಎಂದು ಲಕ್ಷ್ಮೀಶ ಮಾದ್ಯಮಕ್ಕೆ ತಿಳಿಸಿದ್ದಾರೆ.

ವಿಟ್ಲದ ಜಾತ್ರೆಯ ನೊಂದ ಸಂತೆ ವ್ಯಾಪಾರಸ್ಥ ಲಕ್ಷ್ಮೀಶ ಅವರು ಮಾದ್ಯಮದೊಂದಿಗೆ ಮಾತನಾಡಿದ ಆಡಿಯೋ ಕೇಳಿಸಿಕೊಳ್ಳಿ


ಮಹೇಶ್‌ ವಿರುದ್ಧ ಸಂತೆ ಮಳಿಗೆಗಳ ವಸೂಲಾತಿಯಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ಮತ್ತು ಮೋಸ ಮಾಡಿರುವುದಾಗಿ ವಿಟ್ಲ ಪಟ್ಟಣ ಪಂಚಾಯತ್‌ಗೆ ಲಿಖಿತ ದೂರು ನೀಡಿದ್ದು, ಒಟ್ಟು 65 ಅಂಗಡಿಮಳಿಗೆಗಳ ಲೆಕ್ಕ ಸಿಕ್ಕಿದ್ದು. ಈ ಪೈಕಿ ಇನ್ನು ಹೆಚ್ಚುವರಿ 25 ಅಂಗಡಿಗಳ ಹಣ ಬರಬೇಕಾಗಿದೆ ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದಿರುವ ಪಂಚಾಯತ್‌ ಖಂಡಿತಾ ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ.
ಪಂಚಾಯತ್‌ ಟೆಂಡರ್‌ ಪ್ರಕಾರ ಜಾತ್ರಾ ಸಂತೆಗಾಗಿ 10ಅಡಿ ಜಾಗಕ್ಕೆ 10ಸಾವಿರ ಬಾಡಿಗೆ, 1800 ರೂ. ಜಿಎಸ್‌ಟಿ ಹಾಗೂ ಆತನೇ ಟೆಂಡರ್‌ ಪ್ರಕ್ರಿಯೆಯಲ್ಲಿ ನಿಗದಿ ಪಡಿಸಿದ 1900 ರೂ. ಸೇರಿ ಒಟ್ಟು 13700 ರೂ. ಆಗಿರುತ್ತದೆ. ಆದರೆ ಈತ ಬಡ ವ್ಯಾಪಾರಸ್ಥರಿಂದ 20 ಅಡಿ ಜಾಗಕ್ಕೆ 27400 ರೂ. ಪಡೆದುಕೊಳ್ಳಬೇಕಾದ ಬದಲು 35000.00 ಪಡೆದುಕೊಂಡಿರುತ್ತಾನೆ. ಹಾಗೆಯೇ 10 ಫೀಟ್‌ ಅಂಗಡಿಗೆ 15 ಸಾವಿರ ಮತ್ತು 15 ಫೀಟ್‌ ನ ಅಂಗಡಿಗೆ 10 ಫೀಟ್‌ ಸ್ಥಳದ ರಶೀದಿ ನೀಡಿ 18000/20000 ಹಣವನ್ನು ಕೊಡುವಂತೆ ದಮ್ಕಿ ಹಾಕಿ ಪಡೆದಿರುವುದಾಗಿದೆ ಎಂದು ಆರೋಪಿಸಿದ್ದಾರೆ.
ದೂರುದಾರ ಲಕ್ಷ್ಮೀಶ್‌ ಮತ್ತು ಆತನ ಸಹೋದರ ನವನೀತ್‌ ಸಂತೆ ವ್ಯಾಪಾರಸ್ಥರಾಗಿದ್ದು, ಅವರು ಪಡೆದುಕೊಂಡ 20 ಫೀಟ್‌ ಅಂಗಡಿಯ ಸ್ಥಳಾವಕಾಶಕ್ಕೆ 27400 ಆಗಿದ್ದು, 35000 ರೂ. ಪಡೆದುಕೊಂಡು ಮೋಸ ಮಾಡಿರುವುದಾಗಿದೆ. ಈ ಮೊದಲು ಮದ್ಯವತಿಗಳ ವಿರುದ್ಧ ಹೋರಾಡುತಿದ್ದ ಮಹೇಶ್‌ ಈಗ ಸ್ವತಃ ತಾನೇ ಬ್ರೋಕರ್ ಆಗಿ ಧಮ್ಕಿ ಹಾಕಿದ ಘಟನೆ ನಡೆದಿದ್ದು ಬಡ ವ್ಯಾಪಾರಸ್ಥರಾದ ನಮಗೆ ಮೋಸ ಆಗಿದೆ ಎಂದು ತಿಳಿಸಿದ್ದಾರೆ.
40 ಅಂಗಡಿಗಳ ಲೆಕ್ಕಾಚಾರದಲ್ಲಿ ಪಂಚಾಯತ್‌ಗೆ ಹಣ ಪಾವತಿಸಿದ್ದು, ಪಂಚಾಯತ್‌ ಸಾರ್ವಜನಿಕ ಭಕ್ತಾದಿಗಳ ಮತ್ತು ಮಾದ್ಯಮದವರ ಒತ್ತಡಕ್ಕೆ ಈಗಾಗಲೇ ಸಂತೆ ಅಂಗಡಿಗಳನ್ನು ಎಣಿಸಿ 65 ಎಂದು ಲೆಕ್ಕ ಮಾಡಿದ್ದು, ಹೆಚ್ಚುವರಿ ಬಾಡಿಗೆ ಅಂಗಡಿಗಳ ಹಣವನ್ನು ಗುತ್ತಿಗೆದಾರನಿಂದ ವಸೂಲಾತಿ ಮಾಡಿ ಕೊಳ್ಳುತ್ತೇವೆ ಎಂದು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿಗಳವರು ಮಾದ್ಯಮಕ್ಕೆ ತಿಳಿಸಿದ್ದಾರೆ.
ಸಂತೆ ವ್ಯಾಪಾರಸ್ಥರ ಅಧ್ಯಕ್ಷ ,ಹಿಂದೂ ಜಾತ್ರೆ ವ್ಯಾಪಾರಸ್ಥರ ಅಧ್ಯಕ್ಷ ,ಜಿಲ್ಲಾ ಅಧ್ಯಕ್ಷ ಎಂದೆಲ್ಲಾ ಹೇಳಿಕೊಳ್ಳುತ್ತಿರುವ ಮಹೇಶ್‌ ವಿಟ್ಲ ಜಾತ್ರೆಯ ಸುಸಂದರ್ಭದಲ್ಲಿಯೇ ಜನಪ್ರತಿನಿಧಿಗಳ ಮನವೊಲಿಸಲು ಸಂತೆ ವ್ಯಾಪಾರದ ಹೆಸರಿನಲ್ಲಿ ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ ಮಾಡುವಾಗಲೇ ಸಂತೆ ಗೋಲ್‌ ಮಾಲ್‌ ಬಯಲಾಗಿದೆ.

ಬಡ ವ್ಯಾಪಾರಸ್ಥರಿಗೆ ಬತ್ತಿಯಿಟ್ಟು, ಪಂಚಾಯತನ್ನು ಏಮಾರಿಸಿ ಅಧಿಕಾರಿಗಳನ್ನು ತನ್ನ ಕಪಿಮುಷ್ಠಿಯೊಳಗೆ ಇರಿಸಿಕೊಳ್ಳುವ ಗುತ್ತಿಗೆದಾರರೇ ಅಥವಾ ಜಾತ್ರೆ ಹೆಸರಲ್ಲಿ ಗುಳುಂ ಮಾಡುವ ಭಕ್ತ ವೇಷದಾರಿಗಳೇ ಕಾಲಾವಧಿಗೆ ನಡೆದುಕೊಂಡು ಬಂದಿರುವ ಜಾತ್ರೋತ್ಸವ ಶ್ರದ್ಧಾ ಕೇಂದ್ರಗಳು ದೇವರ ಹೆಸರಿನಲ್ಲಿ ಜೇಬು ತುಂಬಿಸಿಕೊಳ್ಳಲು ಇರುವ ಧಾರ್ಮಿಕ ಜೂಜು ಕೇಂದ್ರವಲ್ಲ. ಹಿಂದೂ ಧಾರ್ಮಿಕ ಆಚರಣೆಯಲ್ಲಿ ಭಕ್ತಾದಿಗಳಿಗೆ ಸಂತೆ ಸಾಮಾನುಗಳ ಅಧಿಕ ಹೊರೆ ಬೀಳಬಾರದೆಂದು ಪಂಚಾಯತ್‌ ಅತೀ ಕಡಿಮೆ ಬಾಡಿಗೆಗೆ ಅಂಗಡಿ ಮಳಿಗೆಗಳನ್ನು ನೀಡಿರುವಾಗ ಬಡ ವ್ಯಾಪಾರಸ್ಥರ ಮೇಲೆ ಅಪ್ರಯೋಜಿತವಾಗಿ ಹೇರುವ ಬಾಡಿಗೆ ದರಗಳು ನೇರವಾಗಿ ಭಕ್ತರ ಜೇಬಿಗೆ ಬೀಳುತ್ತದೆ ಎಂಬುವುದು ಸುಳ್ಳಲ್ಲ.
ನಾಳೆಯೂ ಪಂಚಾಯತ್‌ಗೆ ಇನ್ನೂ 3-4 ಜನ ವ್ಯಾಪಾರಸ್ಥರು ಬಂದು ದೂರು ನೀಡಲಿದ್ದೇವೆ ಎಂದು ಲಕ್ಷ್ಮೀಶ ತಿಳಿಸಿದ್ದಾರೆ. ಕೊನೆಗೂ ವಿಟ್ಲ ಜಾತ್ರೆಯ ಸಂತೆ ಮಳಿಗೆಗಳ ಗೋಲ್‌ ಮಾಲ್‌ ಬಯಲಿಗೆ ಬಂದೇ ಬಿಟ್ಟಿದೆ. ಎಲ್ಲವೂ ಪಂಚಲಿಂಗೇಶ್ವರನ ಮಹಿಮೆ.

Continue Reading
Advertisement

Bantawala

ವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..

Published

on

ಹೌದು..ತುಳುನಾಡಿನ ಪರಂಪರೆಯೇ ಹೀಗೆ..ಎಲ್ಲೂ ನ್ಯಾಯ ಸಿಗದಿದ್ದಾಗ ಕೊನೆಯದಾಗಿ ನೊಂದವರು ಹೋಗುವುದು ದೈವದ ಸನ್ನಿಧಿಗೆ..ಇದು ತುಳುನಾಡಿನಲ್ಲಿ ಹಿಂದಿನಿಂದಲೂ ನಡೆದು ಬಂದ ರೂಢಿಯಾಗಿದೆ. ನಮ್ಮ ಸಮಾಜದಲ್ಲಿ ದೈವಭಕ್ತಿ ಮತ್ತು ನಂಬಿಕೆ ಅನಾದಿಕಾಲದಿಂದಲೂ ಮಹತ್ವ ಪಡೆದಿದೆ. ಇತ್ತೀಚೆಗೆ ಕರಾವಳಿ ಪ್ರದೇಶದ ವಿಟ್ಲದಲ್ಲಿ ನಡೆದ ಒಂದು ಘಟನೆ ಈ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವಂತಾಗಿದೆ.

ಮನೆಯಲ್ಲಿದ್ದ ಎರಡು ಗೋವುಗಳನ್ನು ಕಳ್ಳ ಕದ್ದು ಖಸಾಯಿಖಾನೆಗೆ ಮಾರಾಟ ಮಾಡಿದಾಗ, ಗೋವುಗಳನ್ನು ಕಳೆದುಕೊಂಡ ಮಾಲಿಕರು ಪೊಲೀಸರಿಗೆ ದೂರು ನೀಡಿದರೂ, ಕಳ್ಳನ ಪತ್ತೆ ಸಾಧ್ಯವಾಗಲಿಲ್ಲ. ನಿರಾಶರಾದ ಮಾಲಿಕರು ತಮ್ಮ ಮನೆಯ ಆರಾಧ್ಯ ದೈವವಾದ ಕಲ್ಲುರ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುಂದೆ ಏನಾಯಿತು ಎಂಬುವುದೇ ದೈವದ ಕಾರಣೀಕ ಶಕ್ತಿ….ಕಲ್ಲುರ್ಟಿ ದೈವದ ಮುಂದೆ ಬಂದು ದನ ಕಳ್ಳತನ ಮಾಡಿದ್ದನ್ನು ತಪ್ಪೊಪ್ಪಿಕೊಂಡ ಕುಖ್ಯಾತ ಗೋಕಳ್ಳ..

ದೈವದ ನ್ಯಾಯ – ಭಕ್ತಿಗೆ ಎಚ್ಚರಿಕೆ ನೀಡಿದ ನಿಜ ಘಟನೆ

ಕಳೆದ ವರ್ಷ ಗಣೇಶ ಚತುರ್ಥಿ ದಿನದಂದು ವಿಟ್ಲ ಹೊರವಲಯದ ಮಂಗಲಪದವು ಭಜನಾ ಮಂದಿರದ ಪರಿಸರದಲ್ಲಿ ರಾತ್ರಿ ಹೊತ್ತು ಮಲಗಿದ್ದ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಎರಡು ಗಿರ್ ಜಾತಿಯ ಎತ್ತುಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಎತ್ತುಗಳ ಮಾಲಿಕ ಶಿವಾನಂದ ವಿಟ್ಲ ಪೊಲೀಸರಿಗೆ ದೂರು ಕೂಡಾ ನೀಡಿದ್ದರು. ಪೊಲೀಸರ ತನಿಖೆಯಲ್ಲಿ ಬ್ರೆಝಾ ಕಾರಿನಲ್ಲಿ ಬಂದ ಕುಖ್ಯಾತ ಅಂತರ್ ರಾಜ್ಯ ಗೋಕಳ್ಳರು ಎರಡು ಎತ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಖಚಿತ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಎಷ್ಟೇ ಹುಡುಕಾಡಿದ್ದರೂ ಚಾಲಾಕಿ ಗೋಕಳ್ಳರು ಮಾತ್ರ ಈವರೆಗೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೈವದ ಮೊರೆ ಹೋದ ಮಾಲಿಕ ಶಿವಾನಂದ..
ತಮ್ಮ ಮನೆಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಯಿಂದ ಗೋವುಗಳನ್ನು ಸಲಹುತ್ತಿರುವ ನ್ಯಾಯವಾದಿ ಶಿವಾನಂದ ವಿಟ್ಲ ಎತ್ತುಗಳು ನಾಪತ್ತೆಯಾದ ಬಳಿಕ ತೀವ್ರವಾಗಿ ನೊಂದುಕೊಂಡಿದ್ದರು. ಇದಾದ ಕೆಲದಿನಗಳ ಬಳಿಕ ನಾಪತ್ತೆಯಾಗಿದ್ದ ರಾಮ-ಲಕ್ಷ್ಮಣ ಜೋಡಿ ಎತ್ತುಗಳು ಮರಳಿ ಬರುವ ಆಸೆಗಳೇ ಕಮರಿಹೋಗಿತ್ತು. ಅಂತಿಮವಾಗಿ ತಾವು ನಂಬುವ ಕೆಲಿಂಜ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನವಾಗಿರುವ ಮಡಿವಾಳ ಕೋಡಿ ಕೆಳಗಿನಕೆಲಿಂಜದ ಕಲ್ಲುರ್ಟಿ ದೈವದ ಮುಂದೆ ಕಣ್ಣೀರು ಸುರಿಸಿ ಗೋಕಳ್ಳರಿಗೆ ನೀನೇ ಸರಿಯಾದ ಶಿಕ್ಷೆ ನೀಡಬೇಕೆಂದು ಪ್ರಾರ್ಥಿಸಿದರು.

ಗೋಕಳ್ಳರಿಗೆ ಮುನಿದ ದೈವ..
ಗೋಕಳ್ಳರು ಯಾರು, ಎಲ್ಲಿಯವರೆಂಬ ಬಗ್ಗೆ ಸಾರ್ವಜನಿಕವಾಗಿ ಸುದ್ದಿ ಹರಿದಾಡುತ್ತಿದ್ದರೂ ಪೊಲೀಸರ ಕೈಗೆ ಮಾತ್ರ ಖದೀಮರು ಸಿಗದೇ ಕಣ್ಣುಮುಚ್ಚಾಲೆ ಆಡುತ್ತಿದ್ದರು. ಮಾಲಿಕ ಶಿವಾನಂದರು ದೈವದ ಮೊರೆ ಹೋದ ಕೆಲ ದಿನಗಳಲ್ಲೇ ಕುಖ್ಯಾತ ಗೋಕಳ್ಳರ ಕಾರು ಗೋವುಗಳನ್ನು ಕದ್ದು ತರುತ್ತಿದ್ದಾಗ ಸಕಲೇಶಪುರ ಠಾಣಾ ವ್ಯಾಪ್ತಿಯಲ್ಲಿ ಪಲ್ಟಿ ಹೊಡೆದು ಅಲ್ಲಿನ ಪೊಲೀಸರ ವಶವಾಗಿತ್ತು. ಇದಾದ ಕೆಲದಿನಗಳ ಬಳಿಕ ಅದೇ ಗೋಕಳ್ಳರು ಕೇರಳದಲ್ಲಿ ಪೊಲೀಸರ ಬಲೆಗೆ ಸಿಲುಕಿ ಹೈರಾಣರಾದರು.

ಕೈಕೊಟ್ಟ ಅನಾರೋಗ್ಯ..
ಗೋಕಳ್ಳರಿಗೆ ಒಂದರ ಮೆಲೊಂದು ಬರಸಿಡಿಲಿನಂತೆ ಕಷ್ಟಗಳು ಬೆನ್ನುಬಿದ್ದವು. ಐವರ ತಂಡದ ಗೋಕಳ್ಳರ ಮುಖಂಡನಿಗೆ ಅನಾರೋಗ್ಯ ಕಾಡತೊಡಗಿತು. ರಕ್ತ ವಾಂತಿಯಿಂದ ಆರಂಭವಾದ ಅನಾರೋಗ್ಯ ಈತನ ಬದುಕನ್ನೇ ಹಿಂಡಿ ಹಿಪ್ಪೆಯಾಗಿಸಿತು. ರಾತ್ರಿ ಹೊತ್ತು ಮಲಗಿದ್ದಲ್ಲಿಯೇ ಕಿರುಚಾಟ, ಚೀರಾಟ ಆರಂಭವಾಗಿ ಅಕ್ಷರಶಃ ಮಾನಸಿಕ ರೋಗಿಯಂತಾಗಿದ್ದಾನೆ.
ಹಲವಾರು ಕಡೆಗಳಲ್ಲಿನ ತಜ್ಞ ವೈದ್ಯರ ಬಳಿ ಕರೆದೊಯ್ದು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿದರೂ ಯಾವುದೇ ಫಲಿತಾಂಶವಿಲ್ಲ. ಕೊನೆಗೆ ತಮ್ಮದೇ ಧರ್ಮಗುರುವೊಬ್ಬರ ಬಳಿಗೆ ಅನಾರೋಗ್ಯ ಪೀಡಿತನ ಕರೆದೊಯ್ದು ವಿಚಾರ ತಿಳಿಸಿದ್ದಾರೆ. ಆ ಸಮಯ ಈತನ ಹಿನ್ನೆಲೆ ಕೆದಕಿದ ಪ್ರಸಿದ್ಧ ಧರ್ಮಗುರು ಕಲ್ಲುರ್ಟಿ ದೈವದ ಶಾಪ ವಿಮೋಚನೆ ಮಾಡಬೇಕೆಂದೂ ಇಲ್ಲವಾದರೆ ಕೆಲ ದಿನಗಳಲ್ಲೇ ರಕ್ತವಾಂತಿ ಮಾಡಿ ಸಾಯುವ ಬಗ್ಗೆ ಮುನ್ಸೂಚನೆ ನೀಡಿದ್ದರೆನ್ನದಾಗಿದೆ.

ದೈವದ ಮುಂದೆ ತಪ್ಪೊಪ್ಪಿಕೊಂಡ ಗೋಕಳ್ಳ..
ಧರ್ಮ ಗುರುವಿನ ಅಣತಿಯಂತೆ ಗೋಕಳ್ಳತನ ನಡೆಸಿದ ವಿಟ್ಲ ಠಾಣಾ ವ್ಯಾಪ್ತಿಯ ಪರಿಚಯಸ್ಥರೊಬ್ಬರ ಮೂಲಕ ಮಂಗಲಪದವು ಎತ್ತುಗಳ ಮಾಲಿಕರ ಸಂಪರ್ಕಿಸಿ ವಿಚಾರ ನಡೆಸಿದರು. ಆ ಸಮಯ ಪ್ರೀತಿಯ ಎತ್ತುಗಳು ನಾಪತ್ತೆಯಾದ ಬಗ್ಗೆ ಮನನೊಂದು ಕಲ್ಲುರ್ಟಿ ದೈವದ ಮೊರೆ ಹೋಗಿದ್ದೇನೆ ಎಂದು ನ್ಯಾಯವಾದಿ ಶಿವಾನಂದ ವಿಟ್ಲ ಮನಸು ಬಿಚ್ಚಿ ಹೇಳಿದ್ದಾರೆ. ಈ ಬಗ್ಗೆ ಪರಿಹಾರಕ್ಕಾಗಿ ನಾವು ದೈವದ ಮುಂದೆ ಬರುತ್ತೇವೆಂದು ಅನಾರೋಗ್ಯ ಪೀಡಿತ ಗೋಕಳ್ಳ ವಿನಂತಿಸಿದ್ದಾನೆ. ಅದರಂತೆ ಮಂಗಳವಾರ ರಾತ್ರಿ ಕೆಳಗಿನಕೆಲಿಂಜದಲ್ಲಿ ಕಲ್ಲುರ್ಟಿ ದೈವದ ದರ್ಶನ ಸೇವೆ ನಡೆಯುತ್ತಿರುವ ಸಂದರ್ಭ ದೈವದ ಮುಂದೆ ಹಾಜರಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದು ದೈವಗಳ ತವರೂರು ತುಳುನಾಡಿನ ಧಾರ್ಮಿಕ ನಂಬಿಕೆ ಮತ್ತು ಶಕ್ತಿಗೆ ಪುಷ್ಟಿ ನೀಡಿದೆ.

ಮುಂದೆ ನಿಂತಿರುವ ಆರೋಪಿ ವ್ಯಕ್ತಿ ತನ್ನೆಲ್ಲಾ ತಪ್ಪುಗಳ ದೈವದೆದುರು ಎಳೆಎಳೆಯಾಗಿ ಬಿಚ್ಚಿಟ್ಟ ಬಳಿಕ ದರ್ಶನದ ದೈವ ಪಾತ್ರಿ ನೀನು ಮಾಡಿದ ತಪ್ಪು ಕೆಲಸಕ್ಕಾಗಿ ನನ್ನ ಮಂಚದಲ್ಲಿ ಶಾಶ್ವತವಾಗಿ ಬೆಳ್ಳಿಯ ಗೋವು ನೆಲೆಯಾಗಬೇಕು. ಅದು ನಿನಗೆ ಸಾಧ್ಯವೇ ಎಂದು ಪ್ರಶ್ನಿಸಿದೆ. ನೂರಾರು ಭಕ್ತರ ಸಮ್ಮುಖದಲ್ಲೇ ದೈವದ ಮಾತಿಗೆ ಅನಾರೋಗ್ಯ ಪೀಡಿತ ಆರೋಪಿ ಸ್ಥಾನದಲ್ಲಿರುವ ಯುವಕ ಒಪ್ಪಿಗೆ ಸೂಚಿಸಿದ್ದು ಬರುವ ತಿಂಗಳು ವಾರ್ಷಿಕ ಕೋಲದ ಮೊದಲು ಹರಕೆ ರೂಪವಾಗಿ ಬೆಳ್ಳಿಯ ಗೋವು ತಂದೊಪ್ಪಿಸುತ್ತೇನೆ. ಇನ್ಮುಂದೆ ಯಾವುದೂ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಕೈಮುಗಿದು ಪ್ರಾರ್ಥಿಸಿದ ಬಳಿಕ ದೈವವು ಪ್ರಸಾದ ನೀಡಿದೆ.
ಅಂತೂ ತುಳುನಾಡಿನ ದೈವ ಕಲ್ಲುರ್ಟಿ ಗೋಕಳ್ಳನಿಗೆ ತನ್ನ ಶಕ್ತಿ ಏನೆಂಬುದನ್ನು ತೋರಿಸಿರುವುದು ಭಕ್ತರ ಪಾಲಿಗೆ ದೈವದ ಮೇಲಿನ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

Continue Reading

accident

ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ – ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Published

on

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿ ನಡೆದಿದೆ.

ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ನಿವಾಸಿ ಭಾರತಿ (48) ಅಪಘಾತಕ್ಕೀಡಾದ ಮಹಿಳೆ. ಇವರು ತನ್ನ ಮಗಳು ದೀಪ್ತಿ ಅವರೊಂದಿಗೆ ಸಜಿಪಮುನ್ನೂರಿನ ಗುಳಿಗಜ್ಜನ ಕಟ್ಟೆಗೆ ಕಾಣಿಕೆ ಹಾಕಲು ಬಂದಿದ್ದರು. ಕಾಣಿಕೆ ಮುಗಿಸಿ ವಾಪಸ್ಸಾಗುವಾಗ ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಬಿಳಿ ಬಣ್ಣದ ಕಾರು ಮಹಿಳೆಗೆ ಬಲವಾಗಿ ಡಿಕ್ಕಿ ಹೊಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ: ಡಿಕ್ಕಿಯ ರಭಸಕ್ಕೆ ಭಾರತಿ ಅವರು ಗಾಳಿಯಲ್ಲಿ ಹಾರಿ ರಸ್ತೆಯ ಬದಿಗೆ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಸವಾರರು ತಕ್ಷಣ ಸಹಾಯಕ್ಕೆ ಧಾವಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಭಾರತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading

award

ಮಂಗಳೂರು ವಿಶ್ವವಿದ್ಯಾಲಯ: ಸುಶ್ಮಿತ ಸಿ.ಎಚ್. ಅವರಿಗೆ ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪ್ರದಾನ

Published

on

ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸುಶ್ಮಿತ ಸಿ.ಎಚ್. ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಅವರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೃಷ್ಣಕುಮಾರ್ ಜಿ. ಅವರ ಮಾರ್ಗದರ್ಶನದಲ್ಲಿ “Antidiabetic activities of Syzygium hemisphericum (Wight) Alston and Syzygium kanarense (Talbot) Raizada” (ಸಿಜಿಜಿಯಂ ಹೆಮಿಸ್ಫೆರಿಕಂ ಮತ್ತು ಸಿಜಿಜಿಯಂ ಕೆನರೆನ್ಸ್ ಸಸ್ಯಗಳ ಮಧುಮೇಹ ವಿರೋಧಿ ಚಟುವಟಿಕೆಗಳು) ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿದ್ದರು.

2025ರ ಅಕ್ಟೋಬರ್‌ನಲ್ಲಿ ತಮ್ಮ ಸಂಶೋಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇವರಿಗೆ, 2026ರ ಮಾರ್ಚ್ 28ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯದ 44ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಲಾಯಿತು.

ಡಾ. ಸುಶ್ಮಿತ ಅವರು ಪ್ರಸಿದ್ಧ ಯಕ್ಷಗಾನ ಭಾಗವತರಾದ ಶ್ರೀ ಕಣಿಯೂರು ಸೂರ್ಯನಾರಾಯಣ ಭಟ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲದ ಉದ್ಯೋಗಿ ಶ್ರೀಮತಿ ಆಶಾಪಾರ್ವತಿ ದಂಪತಿಯ ಪುತ್ರಿ. ಇವರು ಯುವ ಉದ್ಯಮಿ ಶ್ರೀ ಕೃಷ್ಣ ವಿಕಾಸ್ ಅವರ ಪತ್ನಿಯಾಗಿದ್ದಾರೆ.

ತಮ್ಮ ಈ ಶೈಕ್ಷಣಿಕ ಸಾಧನೆಗೆ ಬೆನ್ನೆಲುಬಾಗಿ ನಿಂತ ತಂದೆ-ತಾಯಿ, ಸಹೋದರಿ ಹಾಗೂ ಪತಿಯವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಡಾ. ಸುಶ್ಮಿತ ಅವರು ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದಲ್ಲೇ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Continue Reading

Trending

Copyright © 2025 Deevatige