Connect with us

government

ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲಿಯೂ ಅರ್ಜಿ ಸಲ್ಲಿಸಬಹುದು; ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ; ಪುತ್ತೂರು ಶಾಸಕ ಅಶೋಕ್ ರೈ ನಿವೇಶನ ಹಂಚಿಕೆ ಕಾರ್ಯಕ್ಕೆ ಸರಕಾರದಿಂದ ಪೂರ್ಣ ಬೆಂಬಲ

Published

on

ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನು ಮುಂದಕ್ಕೆ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ನಿವೇಶನಕ್ಕೆ ಆಯಾ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ್ದು ಅಲ್ಲಿ ನಿವೇಶನದ ಕೊರತೆಯಿದ್ದಲ್ಲಿ ಪಕ್ಕದ ಗ್ರಾಮ ಅಥವಾ ನಿವೇಶನ ಪಡೆದುಕೊಳ್ಳಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಬೇಕಾದರೂ ಅರ್ಜಿ ಸಲ್ಲಿಸಿ ಎಂದು ಕರ್ನಾಟಕ ಸರಕಾರ ರಾಜೀವ ಗಾಂಧಿ ವಸತಿ ನಿಗಮದಿಂದ ಸುತ್ತೋಲೆ ಹೊರಡಿಸಲಾಗಿದ್ದು ಇದರಿಂದ ಪುತ್ತೂರು ಶಾಸಕ ಅಶೋಕ್ ರೈ ಅವರ ಬಡವರಿ ನಿವೇಶನ ಹಂಚಿಕೆ ಕನಸಿಗೆ ಸರಕಾರದಿಂದ ಪೂರ್ಣ ಬೆಂಬಲ ಸಿಕ್ಕಂತಾಗಿದೆ.

ಅಶೋಕ್ ರೈ ಶಾಸಕರಾದ ಬಳಿಕ ನಿವೇಶನ ರಹಿತ ಅರ್ಹ ಬಡ ಫಲಾನುಭವಿಗಳಿಗೆ ಸೈಟ್ ಹಂಚಿಕೆ ಮಾಡಲು ಈಗಾಗಲೇ 18 ಗ್ರಾಮಗಳಲ್ಲಿ380 ಕ್ಕೂ ಮಿಕ್ಕಿ ಎಕ್ರೆ ಜಾಗವನ್ನು ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನಿವೇಶನಕ್ಕೆ ಸರಕಾರಿ ಜಾಗ ದೊರೆತಿಲ್ಲ. ನಿವೇಶನ ರಹಿತ ಗ್ರಾಮದ ಫಲಾನುಭವಿಗಳಿಗೆ ಬೇರೆ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ. ಆಯಾ ಗ್ರಾಮದವರು ಆಯಾ ಗ್ರಾಮದಲ್ಲಿ ಮಾತ್ರ ನಿವೇಶನಕ್ಕೆ ಅರ್ಜಿ ಸಲ್ಲಿಸಬಹುದು ಎಂಬ ತಕರಾರು ಇತ್ತು. ಈ ಬಗ್ಗೆ ಮಂಗಳವಾರದಂದು ಬೆಂಗಳೂರಿನ ರಾಜೀವ ಗಾಂಧಿ ವಸತಿ ನಿಗಮ ಅಧಿಕಾರಿಯನ್ನು ಭೇಟಿಯದ ಶಾಸಕರು ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರು. ಶಾಸಕರ ಕೋರಿಕೆ ಯನ್ನು ಮನ್ನಿಸಿದ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದ್ದು ಯಾವುದೇ ಫಲಾನುಭವಿಗಳು ನಿವೇಶನ ಹೊಂದಿರುವ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಜಿಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ಸುತ್ತೋಲೆಯನ್ನು ಹೊರಡಿಸಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸುವಂತೆ ಆದೇಶವನ್ನು ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ:

ಪುತ್ತೂರು ತಾಲ್ಲೂಕಿನ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆಗೆ ಕೆಲವು ಗ್ರಾಮ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಮೀನಿನ ಲಭ್ಯತೆ ಇಲ್ಲದ ಕಾರಣ ಜಮೀನು ಲಭ್ಯವಿರುವ ಬೇರೆ ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸುವ ಕುರಿತು ನಿರ್ದೇಶನ ನೀಡಲು ಕೋರಿ ಉಲ್ಲೇಖ(1&2)ರಲ್ಲಿ ಕೋರಲಾಗಿದೆ.

ಉಲ್ಲೇಖ(3)ರ ಪತ್ರದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ಇವರು ಸರ್ಕಾರದ ಸುತ್ತೋಲೆ ಪ್ರಕಾರ ಫಲಾನುಭವಿ ಸಂಬಂಧಪಟ್ಟ ಗ್ರಾಮದರಾಗಿರಬೇಕು ಎಂಬುದಾಗಿದ್ದು, ಕೆಲವು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಿಂದ ಬೇರೆ ಗ್ರಾಮದವರಿಗೆ ನಿವೇಶನ ನೀಡುವ ಕುರಿತು ಅಕ್ಷೇಪ ವ್ಯಕ್ತಪಡಿಸಿದ್ದು, ಬೇರೆ ಗ್ರಾಮದ ನಿವೇಶನ ರಹಿತ ಫಲಾನುಭವಿಗಳನ್ನು ಲಾಗಿನ್ ನಲ್ಲಿ ನಮೂದಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಲಾಗಿದೆ.

ಸರ್ಕಾರದ ಮನೆ ಮಾರ್ಗಸೂಚಿಗಳನ್ವಯ ನಿವೇಶನರಹಿತರು ಸಂಬಂಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಆದರೆ ಸದರಿ ಪ್ರಕರಣದಲ್ಲಿ ನಿವೇಶನರಹಿತರು ವಾಸವಿರುವ ಗ್ರಾಮ ಪಂಚಾಯತಿ/ಗ್ರಾಮ/ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯನ್ನು ಹೊರುತಪಡಿಸಿ, ಬೇರೆ ಸ್ಥಳಗಳಲ್ಲಿ ನಿವೇಶನ ಹಂಚಿಕೆಗೆ ಅವಕಾಶ ಕಲ್ಪಿಸುವಂತೆ ಕೋರಿದ್ದು, ಈ ಕೆಳಕಂಡಂತೆ ಕ್ರಮವಹಿಸಲು ಕೋರಿದೆ.

1. ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರಿಗೆ ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನ ಹಂಚಿಕೆಗೆ ಕ್ರಮವಹಿಸುವ ಮೊದಲು ನಿವೇಶನರಹಿತರು ವಾಸವಿದ್ದ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಂಚಿಕೆಗೆ ಜಮೀನು/ನಿವೇಶನ ಲಭ್ಯವಿಲ್ಲದಿರುವ ಖಚಿತಪಡಿಸಿಕೊಳ್ಳುವುದು.

2.ಮೂಲ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ನಿವೇಶನರಹಿತರು ಬೇರೆ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿವೇಶನ ಪಡೆಯಲು ಹಾಗೂ ಆ ಸ್ಥಳದಲ್ಲಿ ವಾಸಿಸಲು ಫಲಾನುಭವಿಗಳು ಒಪ್ಪಿಗೆ ನೀಡಿರುವ ಲಿಖಿತ ದಾಖಲೆಗಳೊಂದಿಗೆ

ಗ್ರಾಮಸಭೆ/ನಗರ ಆಶ್ರಯ ಸಮಿತಿಯಲ್ಲಿ ಚರ್ಚಿಸಿ, ಜಮೀನು/ನಿವೇಶನ ಲಭ್ಯವಿರುವ ಸ್ಥಳದಲ್ಲಿ ನಿವೇಶನ ಹಂಚಿಕೆಗೆ ತೀರ್ಮಾನಿಸಿ ಠರಾವು ಹೊರಡಿಸುವುದು.

3.ಜಮೀನು ಲಭ್ಯವಿರುವ ಯಾವುದೇ ಗ್ರಾಮ ಪಂಚಾಯತಿ/ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಅರ್ಹ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಿ ಹೆಚ್ಚುವರಿಯಾಗಿ ಉಳಿದಿರುವ ನಿವೇಶನಗಳಲ್ಲಿಮಾತ್ರ ಸದರಿ ನಿವೇಶನರಹಿತರನ್ನು ಪರಿಗಣಿಸಬಹುದಾಗಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Educational

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ

Published

on

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೋಸ್ಟನ್‌ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.

ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ

ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.




Continue Reading

government

ಸುಬ್ರಹ್ಮಣ್ಯದಲ್ಲಿ ‘ಅನಧಿಕೃತ ಪೂಜೆ’ಗಳ ಹಾವಳಿ: ಭಕ್ತರೇ, ಧಾರ್ಮಿಕ ಮಾಫಿಯಾ ಬಗ್ಗೆ ಎಚ್ಚರ!

Published

on

ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ನಂಬಿಕೆಯನ್ನು ಬಂಡವಾಳವಾಗಿಸಿಕೊಂಡು ಕೋಟಿಗಟ್ಟಲೆ ಲೂಟಿ ಮಾಡುವ ಧಾರ್ಮಿಕ ಮಾಫಿಯಾವೊಂದು ಸದ್ದಿಲ್ಲದೆ ತಲೆಎತ್ತಿದೆ. ದೇವರ ಹೆಸರಿನಲ್ಲಿ ನಡೆಯುತ್ತಿರುವ ಈ ಅನಧಿಕೃತ ಪೂಜೆಗಳ ಜಾಲವು ಭಕ್ತರ ಕಿಸೆಗೆ ಕತ್ತರಿ ಹಾಕುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಕ್ಷೇತ್ರಕ್ಕೆ ಬರುವ ಭಕ್ತರು ಇಲ್ಲಿ ಮುಖ್ಯವಾಗಿ ಎರಡು ರೀತಿಯ ಪೂಜಾ ಪದ್ಧತಿಗಳನ್ನು ಗಮನಿಸಬೇಕಾಗಿದೆ.

೧. ಅಧಿಕೃತ ಪೂಜೆ (ಕ್ಷೇತ್ರದ ಸನ್ನಿಧಿಯಲ್ಲಿ ನಡೆಯುವ ಸೇವೆಗಳು)

ದೇವಸ್ಥಾನದ ಕಚೇರಿಯಿಂದ ರಶೀದಿ (ಚೀಟಿ) ಪಡೆದು, ದೇವಸ್ಥಾನದ ಆವರಣದೊಳಗೇ ಅಧಿಕೃತ ವೈದಿಕರ ಮುಖಾಂತರ ಶಾಸ್ತ್ರೋಕ್ತವಾಗಿ ನಡೆಯುವ ಪೂಜೆಗಳಿವು.

ಪ್ರಯೋಜನ: ಈ ಪೂಜೆಗಳಿಗೆ ಭಕ್ತರು ನೀಡುವ ಹಣ ನೇರವಾಗಿ ದೇವಸ್ಥಾನದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ವಿಶ್ವಾಸಾರ್ಹತೆ: ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಮುಂತಾದ ಮಹತ್ವಾಕಾಂಕ್ಷೆಯ ಪೂಜೆಗಳು ಸುಬ್ರಹ್ಮಣ್ಯ ಸ್ವಾಮಿಗೆ ನೇರವಾಗಿ ತಲುಪಬೇಕಾದರೆ ಅಧಿಕೃತ ಪೂಜೆಗಳನ್ನೇ ಆಶ್ರಯಿಸಬೇಕು.

೨. ಅನಧಿಕೃತ ಪೂಜೆ (ಖಾಸಗಿ ಲೂಟಿ ಕೇಂದ್ರಗಳು)

ದೇವಸ್ಥಾನದ ಆಡಳಿತ ಮಂಡಳಿಗೂ ಇವರಿಗೂ ಯಾವುದೇ ಸಂಬಂಧವಿರುವುದಿಲ್ಲ. ನಿವೃತ್ತ ವೈದಿಕರು, ದೇವಸ್ಥಾನದಿಂದ ಹೊರಹಾಕಲ್ಪಟ್ಟವರು, ಸಾಲದ ಸುಳಿಗೆ ಸಿಲುಕಿ ಹಣದ ಅಗತ್ಯವಿರುವವರು ಹಾಗೂ ಶೀಘ್ರವಾಗಿ ಶ್ರೀಮಂತರಾಗಲು ಬಯಸುವ ಕೆಲವು ಖಾಸಗಿ ವ್ಯಕ್ತಿಗಳು ಈ ಅನಧಿಕೃತ ಪೂಜೆಗಳ ಸೂತ್ರಧಾರರಾಗಿದ್ದಾರೆ.

ಗ್ಯಾರೇಜ್, ಪಾರ್ಕಿಂಗ್ ಲಾಡ್ಜ್ ಗಳಲ್ಲಿಯೂ ಹೋಮ-ಹವನ!

ಇತ್ತೀಚಿನ ದಿನಗಳಲ್ಲಿ ಸುಬ್ರಹ್ಮಣ್ಯದಲ್ಲಿ ಇಂತಹ ಅಣಬೆ ಪೂಜಾ ಕೇಂದ್ರಗಳು ಮಿತಿಮೀರಿವೆ. ನಂಬಲಾಗದ ಸಂಗತಿಯೆಂದರೆ:

ಗ್ಯಾರೇಜ್‌ಗಳಲ್ಲಿ ಪೂಜೆ: ಸುಸ್ಥಿತಿಯಲ್ಲಿದ್ದ ವಾಹನ ಗ್ಯಾರೇಜ್‌ಗಳನ್ನು ಮುಚ್ಚಿ, ಅಲ್ಲಿ ಭಕ್ತರನ್ನು ವಂಚಿಸುವ ಪೂಜಾ ಕೇಂದ್ರಗಳನ್ನು ತೆರೆಯಲಾಗಿದೆ.

ಕಾರ್ ಪಾರ್ಕಿಂಗ್‌ನಲ್ಲಿ ಹೋಮ: ಕಾಶಿಕಟ್ಟೆ ಬಳಿಯ ಲಾಡ್ಜ್ ಒಂದರ ಕಾರ್ ಪಾರ್ಕಿಂಗ್ ಜಾಗದಲ್ಲೂ ಅಂಡಿಗುಂಡಿ ಪೂಜೆಗಳನ್ನು ನಡೆಸಿ ಭಕ್ತರನ್ನು ಯಾಮಾರಿಸಲಾಗುತ್ತಿದೆ.

ಖಾಸಗಿ ಮಂದಿರಗಳ ದುರ್ಬಳಕೆ: ಸುಜ್ಞಾನ ಮಂದಿರ, ಶಾರದಾ ಮಂದಿರ, ಶಿವ ಸದನ, ಹಾಗೂ ಕೆಲವು ಖಾಸಗಿ ಮನೆಗಳಲ್ಲೂ ಶಾಸ್ತ್ರೋಕ್ತವಲ್ಲದ, ಕೇವಲ “ಹೊಗೆ ಎಬ್ಬಿಸುವ” ನಾಮಕಾವಸ್ತೆ ಪೂಜೆಗಳನ್ನು ನಡೆಸಿ ಭಕ್ತರ ಕಿಸೆ ಖಾಲಿ ಮಾಡಲಾಗುತ್ತಿದೆ.

ಅಡುಗೆ ಭಟ್ಟರ ಮನೆಯಲ್ಲಿಯೂ ಸೇವೆ : ದೇವಸ್ಥಾನದ ಅಡುಗೆ ಭಟ್ಟರೊಬ್ಬರ ಮನೆಯಲ್ಲಿಯೂ ಹೋಮದ ಹೊಗೆ ಹೊರಬರುತ್ತಿದೆ.

ಸರ್ವರ್‌ ಈಶನ ವಿಶೇಷ ನಾಗಾರಾಧನೆ : ಇವರೂ ಖಾಸಗೀಯಾಗಿ ಅನಧಿಕೃತ ಸಂಸ್ಕಾರ ಮಾಡುತ್ತಿದ್ದಾರೆ

ಬಳ್ಪದ ಭಟ್ರವರಿಂದಲೂ ಅನಧಿಕೃತ ಪೂಜೆ : ಆದಿ ಸುಬ್ರಹ್ಮಣ್ಯ ದೇಗುಲದ ದಾರಿಯಲ್ಲಿ ಇವರ ಅನಧಿಕೃತ ಪೂಜೆ ನಡೆಯುತ್ತಿದೆ.

ವಿಶೇಷವೆಂದರೆ ಕೇರಳದ ಭಟ್ರವರಿಂದಲೂ ಪೂಜೆ ಆರಂಭ : ಸ್ಥಳೀಯರು ನಮ್ಮ ಜಿಲ್ಲೆಯವರು ಬಿಟ್ಟು ಈಗ ಕೇರಳದ ಭಟ್ರು ಕೂಡಾ ಪೂಜೆ ಮಾಡಲು ಶುರು ಮಾಡಿದ್ದು, ಇನ್ನೂ ಯಾವ ರಾಜ್ಯದವರು ಬರುತ್ತಾರೋ ಗೊತ್ತಿಲ್ಲ.

ಆನ್‌ಲೈನ್‌ನಲ್ಲೂ ಸುಬ್ರಹ್ಮಣ್ಯನ ಹೆಸರಿನಲ್ಲಿ ‘ಟ್ರೇಡಿಂಗ್’!

ಈ ದಲ್ಲಾಳಿಗಳು ಈಗ ಡಿಜಿಟಲ್ ರೂಪದಲ್ಲೂ ಭಕ್ತರಿಗೆ ಜಾಲ ಬೀಸುತ್ತಿದ್ದಾರೆ. “ದೇವಸ್ಥಾನಕ್ಕಿಂತ ಕಡಿಮೆ ವೆಚ್ಚ”, “ರಶ್ ಇರುವುದಿಲ್ಲ”, “ಉಚಿತ ಊಟ-ವಸತಿ” ಎಂಬ ಆಕರ್ಷಕ ಜಾಹೀರಾತುಗಳನ್ನು ನೀಡಿ ಆನ್‌ಲೈನ್ ಮೂಲಕ ಭಕ್ತರನ್ನು ಬುಕ್ ಮಾಡಲಾಗುತ್ತಿದೆ. ಕುಮಾರಧಾರ ನದಿಯ ದಾಟಿದ ತಕ್ಷಣ, “ಇಲ್ಲಿ ಎಲ್ಲಿ ಪೂಜೆ ಮಾಡಿದರೂ ದೇವರಿಗೆ ತಲುಪುತ್ತದೆ” ಎಂದು ಅಮಾಯಕ ಜನರನ್ನು ಮಂಗ ಮಾಡಲಾಗುತ್ತಿದೆ.

ಕಾನೂನಾತ್ಮಕ ತೊಡಕು: ಇವೆಲ್ಲವೂ ಖಾಸಗಿ ಜಾಗಗಳಲ್ಲಿ, ವೈಯಕ್ತಿಕ ನಂಬಿಕೆಯ ಹೆಸರಿನಲ್ಲಿ ನಡೆಯುತ್ತಿರುವುದರಿಂದ “ಧಾರ್ಮಿಕ ಸ್ವಾತಂತ್ರ್ಯ”ದ ಅಡಿಯಲ್ಲಿ ಪೊಲೀಸರಾಗಲಿ ಅಥವಾ ದೇವಸ್ಥಾನದ ಮಂಡಳಿಯಾಗಲಿ ತಕ್ಷಣ ಕ್ರಮ ಕೈಗೊಳ್ಳಲು ಕಾನೂನಾತ್ಮಕ ಅಡೆತಡೆಗಳಿವೆ.

ಒಟ್ಟಾಗಿ ಹೇಳುವುದಾದರೆ ಇದಕ್ಕೆ ಕಡಿವಾಣ ಬೀಳದೆ ಇದ್ದರೆ ಮುಂದೊಂದು ದಿನ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಭಕ್ತರ ಸಂಖ್ಯೆಯೆ ಇಲ್ಲದಿರಬಹುದು. ಮಾನ್ಯ ಧಾರ್ಮಿಕ ಖಾತೆಯ ಮಂತ್ರಿಗಳು ಇತ್ತ ಗಮನಹರಿಸಲೇ ಬೇಕು.

ಭಕ್ತರಿಗೆ ನಮ್ಮ ಮನವಿ ಮತ್ತು ಜಾಗೃತಿ:

ಭಕ್ತರೇ, ನಿಮ್ಮ ಕಷ್ಟ ನಿವಾರಣೆಗೆ ಹಾಗೂ ದೇವರಿಗೆ ಸಲ್ಲಿಸುವ ಸೇವೆ ಸಾರ್ಥಕವಾಗಬೇಕಾದರೆ ಎಚ್ಚರಿಕೆಯಿಂದ ಇರಿ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವಾಗ ಕೇವಲ ದೇವಸ್ಥಾನದ ಅಧಿಕೃತ ಕೌಂಟರ್‌ಗಳು ಅಥವಾ ಅಧಿಕೃತ ವೆಬ್‌ಸೈಟ್ ಮೂಲಕವೇ ಪೂಜೆಗಳನ್ನು ಕಾಯ್ದಿರಿಸಿ.

ಮಧ್ಯವರ್ತಿಗಳ, ದಲ್ಲಾಳಿಗಳ ಹಾಗೂ ಕಡಿಮೆ ವೆಚ್ಚದ ಆಮಿಷ ಒಡ್ಡುವ ಆನ್‌ಲೈನ್ ವಂಚಕರ ಮಾತುಗಳಿಗೆ ಮರುಳಾಗಬೇಡಿ.

ಗ್ಯಾರೇಜ್, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ನಡೆಯುವ ಪೂಜೆಗಳಿಂದ ದೇವರಿಗೂ ಪ್ರೀತಿಯಾಗುವುದಿಲ್ಲ, ನಿಮಗೂ ಫಲ ಸಿಗುವುದಿಲ್ಲ; ಕೇವಲ ವಂಚಕರ ಕಿಸೆ ತುಂಬುತ್ತದೆ ಅಷ್ಟೇ.

    “ಬೋಧಿಸುವ ಸ್ಥಳದಲ್ಲಿ ಬೋಳಿಸುವವರಿದ್ದಾರೆ, ನಿಮ್ಮ ಭಕ್ತಿ ನಿಮ್ಮ ಎಚ್ಚರಿಕೆಯಲ್ಲಿರಲಿ.”

    Continue Reading

    government

    ಸುಳ್ಯ ಕೇಂದ್ರಿತ ‘ಆನೆ ಕಾರ್ಯಪಡೆ’ಗೆ ಚಾಲನೆ: ಕಾಡಾನೆ ಹಾವಳಿಗೆ ಅಂಕುಶ; ದಕ್ಷಿಣ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ರೈತರಿಗೆ ಸಿಹಿ ಸುದ್ದಿ!

    Published

    on

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಜಿಲ್ಲೆಯ ಕೃಷಿಕರ (Farmers) ಬಹು ಕಾಲದ ಸಮಸ್ಯೆ ಮತ್ತು ತಲೆನೋವಾಗಿದ್ದ ಕಾಡಾನೆ ಹಾವಳಿ ತಡೆಗಟ್ಟಲು ಸುಳ್ಯ ಕೇಂದ್ರಸ್ಥಾನವಾಗಿಸಿ (Center) ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ 28 ಅಧಿಕಾರಿ/ಸಿಬ್ಬಂದಿಗಳನ್ನು ಒಳಗೊಂಡ ಆನೆ ಕಾರ್ಯಪಡೆ ರಚಿಸಿ ಸರಕಾರ ಆದೇಶ ಹೊರಡಿಸಿದೆ. ಈ ಕ್ರಮಕ್ಕೆ ಅರಣ್ಯ ಭಾಗದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಮಂಗಳೂರು/ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ದಾಳಿ ಹಾಗೂ ಸಾರ್ವಜನಿಕರ ಆಸ್ತಿ-ಪಾಸ್ತಿ ನಷ್ಟವನ್ನು ತಡೆಗಟ್ಟಲು ರಾಜ್ಯ ಸರ್ಕಾರ ಭರ್ಜರಿ ಕ್ರಮ ಕೈಗೊಂಡಿದೆ. ಸುಳ್ಯದಲ್ಲಿ ಕೇಂದ್ರ ಕಚೇರಿಯನ್ನು ಹೊಂದಲಿರುವ ನೂತನ ಆನೆ ಕಾರ್ಯಪಡೆಗೆ ಒಟ್ಟು 28 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

    ಈ ವಿಶೇಷ ತಂಡವು ಅತ್ಯಾಧುನಿಕ ಉಪಕರಣಗಳು ಮತ್ತು ವಾಹನಗಳೊಂದಿಗೆ ಸಜ್ಜಿತವಾಗಲಿದ್ದು, ಆನೆಗಳ ಚಲನವಲನದ ಮೇಲೆ ನಿರಂತರ ನಿಗಾ ಇರಿಸಲಿದೆ. ತಂಡದಲ್ಲಿ 4 ಉಪ ವಲಯ ಅರಣ್ಯಾಧಿಕಾರಿಗಳು (DRFO) 8 ಅರಣ್ಯ ರಕ್ಷಕರು (Forest Guards) 16 ಮಂದಿ ಹೊರಗುತ್ತಿಗೆ ಸಿಬ್ಬಂದಿ (DRM) (ಆನೆ ಓಡಿಸುವ ನೈಪುಣ್ಯತೆ ಹೊಂದಿರುವವರು) ಇರುತ್ತಾರೆ.

    ತಂಡದ ಕಾರ್ಯಚಟುವಟಿಕೆಗಳು:
    ಆನೆಗಳು ನಾಡಿಗೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ಅವುಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯವನ್ನು ತ್ವರಿತವಾಗಿ ಮಾಡುವುದು, ಕಾಡಂಚಿನ ಗ್ರಾಮಗಳಲ್ಲಿ 24×7 ಗಸ್ತು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವುದು.ಸ್ಥಳೀಯ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕೆಲಸ ಮಾಡುವುದು. ಆನೆಗಳಿಗೆ ಅಳವಡಿಸಲಾದ ರೇಡಿಯೋ ಕಾಲರ್ ಸಿಗ್ನಲ್‌ಗಳನ್ನು ಗಮನಿಸಿ ಮುನ್ನೆಚ್ಚರಿಕೆ ನೀಡುವುದು. ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವುದು ಮತ್ತು ಜನವಸತಿ ಪ್ರದೇಶ, ಕೃಷಿ ಪ್ರದೇಶ ಹಾಗೂ ಕಾಫಿ ಎಸ್ಟೇಟ್‌ ಗಳಲ್ಲಿ ಆನೆಗಳ ಚಲನವಲನಗಳನ್ನು ಗುರುತಿಸುವುದು ಹಾಗೂ ಹಿಮ್ಮೆಟ್ಟಿಸುವುದು, ಸಾರ್ವಜನಿಕರಿಗೆ ಆನೆಗಳ ಚಲನವಲನ ಕುರಿತು ಮಾಹಿತಿ ನೀಡುವುದು ಇತ್ಯಾದಿ ಕೆಲಸಗಳನ್ನು ಕಾರ್ಯಪಡೆ ಮಾಡಲಿದೆ.

    ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು, ಈ ಹಿಂದೆ ಅವುಗಳನ್ನು ಹಿಮ್ಮೆಟ್ಟಿಸಲು ಮಡಿಕೇರಿ ವಿಭಾಗದಿಂದ ಆನೆ ಕಾರ್ಯಪಡೆಯನ್ನು ಕರೆಸಬೇಕಾಗಿತ್ತು. ಇದರಿಂದ ತುಂಬಾ ವಿಳಂಬ ಆಗುತ್ತಿರುವ ಮಂಗಳೂರು ವಿಭಾಗಕ್ಕೆ ಹೊಸದಾಗಿ ಆನೆ ಕಾರ್ಯಪಡೆಯನ್ನು ರಚಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿ ಅರಣ್ಯ ಮತ್ತು ಪರಿಸರ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆನೆ ಕಾರ್ಯಪಡೆ ರಚಿಸಿ ಆದೇಶಿಸಿದ್ದಾರೆ. ಕೇಂದ್ರಸ್ಥಾನದಲ್ಲಿ ಕಂಟ್ರೋಲ್ ರೂಂ (ನಿಯಂತ್ರಣ ಕಾರ್ಯಕೊಠಡಿ) ಕಾರ್ಯನಿರ್ವಹಿಸಲಿದೆ. ಇಲಾಖೆಯ ಈ ಕ್ರಮಕ್ಕೆ ಜಿಲ್ಲೆಯ ಅರಣ್ಯ ಭಾಗದಲ್ಲಿರುವ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಪಡೆಯಿಂದಲಾದರೂ ತಮ್ಮ ಸಮಸ್ಯೆಗೆ ಮುಕ್ತಿ ದೊರಕಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

    ಕಳೆದ ಕೆಲವು ವರ್ಷಗಳಿಂದ ಸುಳ್ಯ ಮತ್ತು ಕಡಬ ಭಾಗದಲ್ಲಿ ಆನೆ ದಾಳಿಯಿಂದಾಗಿ ಪ್ರಾಣಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಕಾರ್ಯಪಡೆ ಬೇಕೆಂಬ ಸಾರ್ವಜನಿಕರ ಒತ್ತಾಯಕ್ಕೆ ಸರ್ಕಾರ ಈಗ ಸ್ಪಂದಿಸಿದೆ.

    Continue Reading

    Trending

    Copyright © 2025 Deevatige

    error: Content is protected !!