Connect with us

health

ಬೆಳ್ಳಾರೆಯುವ ರಕ್ತ ನಿಧಿ ಉದ್ಘಾಟನೆ – ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ

Published

on

ಸುಳ್ಯ | ಬೆಳ್ಳಾರೆ:
“ರಕ್ತದಾನ ಕೇವಲ ವೈದ್ಯಕೀಯ ಸೇವೆಯಲ್ಲ, ಅದು ಮಾನವೀಯ ಸಂಬಂಧಗಳನ್ನು ಬೆಸೆಯುವ ಮಹಾ ಸೇತುವೆ” ಎಂಬ ಸಂದೇಶದೊಂದಿಗೆ ಯುವ ರಕ್ತ ನಿಧಿ – ಬೆಳ್ಳಾರೆ ವತಿಯಿಂದ ಆಯೋಜಿಸಲಾದ ಉದ್ಘಾಟನಾ ಕಾರ್ಯಕ್ರಮ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ದಿನಾಂಕ 11-01-2026, ಆದಿತ್ಯವಾರ ಬೆಳ್ಳಾರೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.


ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ನಡೆದ ಶಿಬಿರಕ್ಕೆ ಸುಮಾರು 120ಕ್ಕೂ ಅಧಿಕ ಯುವಕರು ರಕ್ತದಾನ ಮಾಡುವ ಮೂಲಕ ಅಪಾರ ಸ್ಪಂದನೆ ವ್ಯಕ್ತಪಡಿಸಿದರು. ಯುವಕರು, ವಿದ್ಯಾರ್ಥಿಗಳು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಗೆ ಜೀವ ತುಂಬಿದರು.
ಪ್ರಾಸ್ತಾವಿಕ ಭಾಷಣದಲ್ಲಿ ಯುವ ರಕ್ತ ನಿಧಿಯ ಮುಖ್ಯಸ್ಥರಾದ ಆರ್.ಕೆ. ಭಟ್ (ಕುರುಂಬುಡೆಯಲು) ಅವರು ಯುವ ರಕ್ತ ನಿಧಿಯ ಉದ್ದೇಶ ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮವನ್ನು ಶ್ರೀ ಭಾಸ್ಕರ್ ರಾವ್ IPS, ಉಪಾಧ್ಯಕ್ಷರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು ಉದ್ಘಾಟಿಸಿ ಮಾತನಾಡಿ, “ಗ್ರಾಮ ಮಟ್ಟದಲ್ಲಿ ಬಲಿಷ್ಠ ರಕ್ತದಾನಿಗಳ ಜಾಲ ನಿರ್ಮಾಣವಾಗಬೇಕಾದ ಅಗತ್ಯವಿದೆ. ಇಂತಹ ಯುವ ರಕ್ತ ನಿಧಿಗಳು ಸಮಾಜದ ಆರೋಗ್ಯದ ರಕ್ಷಕರಾಗಿವೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಅತಿಥಿಯಾಗಿ ಭಾಗವಹಿಸಿದ್ದ ಡಾ. ಮುರಳಿ ಮೋಹನ್ ಚೂಂತಾರು, ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಕರ್ನಾಟಕ ಅವರು, “ರಕ್ತದಾನವು ಧರ್ಮ, ಜಾತಿ, ವರ್ಗಗಳ ಗಡಿಯನ್ನು ಮೀರಿ ಮನುಷ್ಯನನ್ನು ಮನುಷ್ಯನೊಂದಿಗೆ ಕಟ್ಟಿ ಹಾಕುವ ಮಹತ್ವದ ಸೇವೆ” ಎಂದರು.
ಡಾ. ಶರತ್ ಕುಮಾರ್ ರಾವ್ ಜೆ., ಹಿರಿಯ ರೋಗಶಾಸ್ತ್ರಜ್ಞರು, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು ಅವರು ರಕ್ತದಾನದ ಆರೋಗ್ಯ ಮಹತ್ವ, ಭದ್ರತೆ ಹಾಗೂ ಸಮಾಜಕ್ಕೆ ಅದರ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಧಾಕರ ರೈ ಪಿ.ಬಿ., ಸಭಾಪತಿಗಳು, ಭಾರತೀಯ ರೆಡ್ ಕ್ರಾಸ್ ಸೊಸೈಟಿ – ಸುಳ್ಯ ತಾಲೂಕು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ನಮಿತಾ ರೈ, ಅಧ್ಯಕ್ಷರು, ಗ್ರಾಮ ಪಂಚಾಯತ್ – ಬೆಳ್ಳಾರೆ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅತಿಹೆಚ್ಚು ಬಾರಿ ರಕ್ತದಾನ ಮಾಡಿದ ಮೂವರು ವಿಶೇಷ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.


ಸನ್ಮಾನಿತರಾದವರು:
ಡಾ. ಮುರಳಿ ಮೋಹನ್ ಚೂಂತಾರು, ಪಿ.ಬಿ. ಸುಧಾಕರ ರೈ ಹಾಗೂ ಪ್ರತೀಕ್ ಬೆಳ್ಳಾರೆ.
ಶಿಬಿರದ ವಿಶೇಷತೆಯೆಂದರೆ, ಪ್ರಥಮ ಬಾರಿಗೆ ರಕ್ತದಾನ ಮಾಡಿದ ಯುವಕರನ್ನು ವಿಶೇಷವಾಗಿ ಗುರುತಿಸಿ ಪ್ರೋತ್ಸಾಹಿಸಿದುದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವರನ್ನು ರಕ್ತದಾನಕ್ಕೆ ಪ್ರೇರೇಪಿಸುವಂತಾಯಿತು.
ಗ್ರಾಮ ಪಂಚಾಯತ್, ವಿವಿಧ ಸಂಘ–ಸಂಸ್ಥೆಗಳು, ಸಾಮಾಜಿಕ, ಧಾರ್ಮಿಕ ಹಾಗೂ ವೃತ್ತಿಪರ ಸಂಘಟನೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿ,
“ನಮ್ಮ ಗ್ರಾಮದ ರಕ್ತದ ಅವಶ್ಯಕತೆ ನಮ್ಮಿಂದಲೇ ಪೂರೈಕೆಯಾಗಲಿ” ಎಂಬ ಆಶಯವನ್ನು ಸಾಕಾರಗೊಳಿಸಿದವು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಸುರೇಶ್ ಕುಮಾರ್ ಶೆಟ್ಟಿ (ಪನ್ನೆ), ಶ್ರೀರಾಮ ಪಾಟಜೆ, ಪ್ರಸಾದ್ ಸೇಮಿತ ಬೆಳ್ಳಾರೆ, ದಿಲೀಪ್ ಗಟ್ಟಿಗಾರು, ಶೈಲೇಶ್ ನೆಟ್ಟಾರು, ವಿನಯ್ ಭಾರದ್ವಾಜ್, ಸುಬ್ರಹ್ಮಣ್ಯ ಜೋಶಿ, ಆರಿಫ್ ಬೆಳ್ಳಾರೆ, ಗಿರಿಧರ ರೈ ಪನ್ನೆ, ಭಾಸ್ಕರ ನೆಟ್ಟಾರು, ನವೀನ್ ರೈ ತಂಬಿನಮಕ್ಕಿ, ಚಂದ್ರಶೇಖರ ರೈ ಬಜನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಬೆಳ್ಳಾರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರಾದ ಪದ್ಮನಾಭ ಶೆಟ್ಟಿ ಪರುವಾಜೆ, ವನಿತಾ ಸಾರಕೆರೆ, ನಾರಾಯಣ ಕೊಂಡೆಪಾಡಿ, ವೇದಿತ್ ರೈ, ವಸಂತ ಪಡಪು, ಲೋಕೇಶ್ ಬೆಳ್ಳಾರೆ ಮೊದಲಾದವರು ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಪ್ರದೀಪ್ ಕುಮಾರ್ ರೈ ಪನ್ನೆ ಅವರು ನಡೆಸಿದ್ದು, ವಂದನಾರ್ಪಣೆಯನ್ನು ನಿಸ್ಮಿತಾ ಬೆಳ್ಳಾರೆ ಸಲ್ಲಿಸಿದರು.


ಒಟ್ಟಾರೆ, ಈ ಕಾರ್ಯಕ್ರಮವು ರಕ್ತದಾನದ ಮೂಲಕ ಮಾನವೀಯತೆಯನ್ನು ಬಲಪಡಿಸಿ, ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ದಾರಿ ತೋರಿದ ಬೆಳ್ಳಾರೆಯ ಇತಿಹಾಸದ ನೆನಪಿನ ಘಟನೆಯಾಗಿ ಉಳಿಯಿತು.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Bantawala

3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧ ತೋಟದ ಚರಂಡಿಯಲ್ಲಿ ಪತ್ತೆ: ಆಸ್ಪತ್ರೆಗೆ ದಾಖಲು

Published

on

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಗಿರಿಯಪ್ಪ ಸಪಲ್ಯ (75) ಎಂಬವರು ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಅಡಿಕೆ ತೋಟದ ಚರಂಡಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಳೆದ ಮೂರು ದಿನಗಳಿಂದ ವೃದ್ಧ ಕಾಣೆಯಾಗಿದ್ದರಿಂದ ಅವರ ಸಂಬಂಧಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇಂದು ಬೆಳಿಗ್ಗೆ ಕುಕ್ಕಿಲದ ಪುರಂದರ ಭಟ್‌ ಎಂಬವರ ಅಡಿಕೆ ತೋಟದ ನೀರು ಹರಿಯುವ ಚರಂಡಿಯಲ್ಲಿ ವೃದ್ಧ ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಅವರಿಗೆ ಪ್ರಾಥಮಿಕ ಶುಶ್ರೂಷೆ ನೀಡಿ, ವಿಟ್ಲದ ಆಪದ್ಬಾಂಧವ ಮುರಳಿ ವಿಟ್ಲ ಅವರಿಗೆ ಮಾಹಿತಿ ತಲುಪಿಸಿದ್ದಾರೆ. ಬಳಿಕ ಅಂಬ್ಯುಲೆನ್ಸ್‌ ಮೂಲಕ ಅವರನ್ನು ವಿಟ್ಲಕ್ಕೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ವಿಟ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ವೃದ್ಧರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ಮೂಡಿದ ಹಲವು ಅನುಮಾನಗಳು: ಆರ್ಥಿಕವಾಗಿ ಸದೃಢವಾಗಿದ್ದ ಗಿರಿಯಪ್ಪ ಸಪಲ್ಯ ಅವರು ಈ ಭಾರಿ ಮಳೆಯ ನಡುವೆ ಬೇರೆಯವರ ತೋಟಕ್ಕೆ ಯಾಕೆ ಹೋದರು? ಅವರನ್ನು ಯಾರಾದರೂ ಅಲ್ಲಿಗೆ ಕರೆದುಕೊಂಡು ಹೋದರೇ? ಅಥವಾ ದಾರಿ ತಪ್ಪಿ ಬಿದ್ದರಾ? ಎಂಬ ಹಲವಾರು ಪ್ರಶ್ನೆಗಳು ಸ್ಥಳೀಯವಾಗಿ ಕಾಡುತ್ತಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರು ಚೇತರಿಸಿಕೊಂಡ ನಂತರವಷ್ಟೇ ಈ ಎಲ್ಲಾ ಅನುಮಾನಗಳಿಗೆ ಹಾಗೂ ಘಟನೆಯ ನೈಜತೆಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

Continue Reading

Dakshina Kannada

ಮಾನವೀಯತೆಯ ಸಾಕಾರ: ಕುಂಬ್ರದ ಖ್ಯಾತ ವೈದ್ಯ ಡಾ. ವಿಘ್ನೇಶ್ವರ ಭಟ್‌ ಚಿಕಿತ್ಸೆಗೆ ಹರಿದುಬಂದ ನೆರವು; ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ

Published

on

ಪುತ್ತೂರು: ಪುತ್ತೂರು ತಾಲೂಕಿನ ಕುಂಬ್ರದ ‘ಅಮೃತ ಕ್ಲಿನಿಕ್’ನಲ್ಲಿ ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಗೆ ನಿರಂತರವಾಗಿ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಾ, ಅಪಾರ ಜನಮನ್ನಣೆ ಗಳಿಸಿರುವ ಪಾರಂಪರಿಕ ಶೈಲಿಯ ಜನಪ್ರಿಯ ಕುಟುಂಬ ವೈದ್ಯ ಡಾ. ವಿಘ್ನೇಶ್ವರ ಭಟ್ ಅವರು ಸದ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 2-3 ತಿಂಗಳುಗಳಿಂದ ದೈಹಿಕ ಅನಾರೋಗ್ಯ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆಗಳ ನಂತರ ತೀವ್ರತರದ ರಕ್ತದ ಕ್ಯಾನ್ಸರ್ (T-Cell Lymphoma) ಇರುವುದು ಪತ್ತೆಯಾಗಿದೆ. ಸದ್ಯ ಮಂಗಳೂರಿನ ಎಂ.ಐ.ಓ (Mangalore Institute of Oncology) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರಿಗೆ ಈಗಾಗಲೇ ಸುಮಾರು 20 ಲಕ್ಷ ರೂ. ವೆಚ್ಚವಾಗಿದೆ. ಮುಂದಿನ ಹಂತದ ಅಸ್ಥಿಮಜ್ಜೆ ಕಸಿ (Bone Marrow Transplant) ಹಾಗೂ ಇತರ ತುರ್ತು ಚಿಕಿತ್ಸೆಗಳಿಗಾಗಿ ಇನ್ನೂ ಅಂದಾಜು 20 ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ವೈದ್ಯಕೀಯ ವೃತ್ತಿಯನ್ನೇ ನಂಬಿಕೊಂಡಿದ್ದ ಅವರಿಗೆ ಈ ಬೃಹತ್ ಮೊತ್ತವನ್ನು ಹೊಂದಿಸುವುದು ಕಷ್ಟಸಾಧ್ಯವಾಗಿರುವುದರಿಂದ ಸಹೃದಯಿ ಜನರಲ್ಲಿ ಧನಸಹಾಯಕ್ಕಾಗಿ ವಿನಂತಿಸಿಕೊಂಡಿದ್ದರು.

ಕೋಮು ಸೌಹಾರ್ದತೆ ಮೆರೆದ ಶೇಕಮಲೆ ಮಸೀದಿ ಸಮಿತಿ: ಡಾ. ವಿಘ್ನೇಶ್ವರ ಭಟ್ ಅವರ ಕಷ್ಟಕ್ಕೆ ಸ್ಪಂದಿಸಿ ಇತ್ತೀಚೆಗೆ ಶೇಕಮಲೆ ಮಸೀದಿ ಕಮಿಟಿಯವರು “ಮಾನವೀಯತೆಯ ಬಕ್ರೀದ್” ಎಂಬ ಆಶಯದೊಂದಿಗೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವ ಮೂಲಕ ಕೋಮು ಸೌಹಾರ್ದತೆ ಮತ್ತು ಜಾತಿಗೆ ತೀತವಾದ ಮಾನವೀಯ ಗುಣವನ್ನು ಸಾರಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ವಿದೇಶಿ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ನೆರವು: ಇದೀಗ ಡಾಕ್ಟರ್ ಅವರ ಚಿಕಿತ್ಸೆಗೆ ಮತ್ತೊಂದು ಆಸರೆಯಾಗಿ ಹೊರದೇಶದ ಖ್ಯಾತ ಉದ್ಯಮಿ ಎಡಕ್ಕಾನ ಮಹಾಬಲೇಶ್ವರ ಶ್ಯಾಂ ಭಟ್ ಅವರು 50,000 ರೂ. ಆರ್ಥಿಕ ಸಹಾಯ ಹಸ್ತ ಚಾಚುವ ಮೂಲಕ ತಮ್ಮ ಉದಾರಿ ಗುಣವನ್ನು ಮೆರೆದಿದ್ದಾರೆ. ಇವರೊಂದಿಗೆ ಹಲವಾರು ಸಹೃದಯಿ ಸಾರ್ವಜನಿಕರು ಕೂಡ ಈಗಾಗಲೇ ತಮ್ಮ ಕೈಲಾದ ಧನಸಹಾಯವನ್ನು ಒದಗಿಸಿದ್ದಾರೆ.

ಇನ್ನೂ ಬೇಕಿದೆ ಸಹೃದಯಿಗಳ ಸಹಕಾರ: ಬಡವರ, ಸಾರ್ವಜನಿಕರ ಕಣ್ಣೊರೆಸುತ್ತಿದ್ದ ವೈದ್ಯರೊಬ್ಬರು ಇಂದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇವರ ಮುಂದಿನ ಚಿಕಿತ್ಸೆ ಸುಗಮವಾಗಿ ಸಾಗಲು ಇನ್ನು ಕೂಡ ಭಾರಿ ಮೊತ್ತದ ನೆರವಿನ ಅಗತ್ಯವಿದೆ. ಹೀಗಾಗಿ ದೇಶ-ವಿದೇಶಗಳಲ್ಲಿರುವ ದಾನಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಉದಾರವಾಗಿ ಧನಸಹಾಯ ಮಾಡುವ ಮೂಲಕ ಡಾ. ವಿಘ್ನೇಶ್ವರ ಭಟ್ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳುವಂತೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಧನಸಹಾಯ ಮಾಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು:

  • ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್ (Karnatāka Bank)
  • ಶಾಖೆ: ದರ್ಬೆ, ಪುತ್ತೂರು
  • ಖಾತೆ ಸಂಖ್ಯೆ (A/c No): 1023202500000601
  • ಐಎಫ್‌ಎಸ್‌ಸಿ ಕೋಡ್ (IFSC): KARB0001023
  • ಗೂಗಲ್ ಪೇ ಸಂಖ್ಯೆ (G-Pay): 961163784



Continue Reading

accident

ವೈದ್ಯ ಲೋಕದ ವಿಸ್ಮಯ: ಸಾವು ಗೆದ್ದು ಬಂದ ಯುವಕ – ಹಾಸನದ ಜನಪ್ರಿಯ ಆಸ್ಪತ್ರೆ ವೈದ್ಯರಿಂದ ದಾಖಲೆಯ ಶಸ್ತ್ರಚಿಕಿತ್ಸೆ!

Published

on

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯುವಕನಿಗೆ ಪುನರ್ಜನ್ಮ ನೀಡುವ ಮೂಲಕ ಹಾಸನದ ಹೆಸರಾಂತ ‘ಜನಪ್ರಿಯ ಆಸ್ಪತ್ರೆ’ಯು ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ತಲೆಬುರುಡೆ ಪುಡಿಯಾಗಿ, ಮೆದುಳು ಹೊರಬಂದಿದ್ದ ಸ್ಥಿತಿಯಲ್ಲಿದ್ದ ಯುವಕನನ್ನು ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಮೂಲಕ ಉಳಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ.

ಘಟನೆಯ ಹಿನ್ನೆಲೆ:

ಇತ್ತೀಚೆಗೆ ಕೊಣನೂರು ಸಮೀಪ ಮದುವೆ ಸಮಾರಂಭ ಮುಗಿಸಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ಭೀಕರ ಅಪಘಾತ ಸಂಭವಿಸಿತ್ತು. ತೀವ್ರ ರಕ್ತಸ್ರಾವದಿಂದಾಗಿ ಯುವಕ ಸಾಯುವ ಹಂತ ತಲುಪಿದ್ದ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬದುಕುವ ಸಾಧ್ಯತೆ ಇಲ್ಲ ಎಂದು ಅಲ್ಲಿನ ವೈದ್ಯರು ಕೈಚೆಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದು ಎಂಬ ಆತಂಕದ ನಡುವೆಯೂ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿದರು.

ಜೀವ ಉಳಿಸಿದ ‘ಜನಪ್ರಿಯ’ ವೈದ್ಯರ ಚಾಕಚಕ್ಯತೆ:

ಆಸ್ಪತ್ರೆಗೆ ದಾಖಲಾದಾಗ ಗಾಯಾಳುವಿನ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ತಲೆಬುರುಡೆ ಪುಡಿಪುಡಿಯಾಗಿ ಮೆದುಳು ಹೊರಬಂದಿತ್ತು ಅಷ್ಟೇ ಅಲ್ಲದೆ, ಮೆದುಳಿನ ಪದರಗಳ ಒಳಗೆ ಕಲ್ಲು ಮತ್ತು ಮಣ್ಣು ಸೇರಿಕೊಂಡಿತ್ತು. ಕೈ ಮತ್ತು ಕಾಲುಗಳ ಮೂಳೆಗಳು ಕೂಡ ಮುರಿದಿದ್ದವು.

ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಮೂಳೆ ಮತ್ತು ಕೀಲು ತಜ್ಞರಾದ ಡಾ. ವಿ.ಕೆ. ಅಬ್ದುಲ್ ಬಶೀರ್ ಈ ಕುರಿತು ಮಾಹಿತಿ ನೀಡುತ್ತಾ, “ಗಾಯಾಳು ಆಸ್ಪತ್ರೆಗೆ ಬಂದಾಗ ಹೃದಯ ಬಡಿತ ಮತ್ತು ನಾಡಿ ಮಿಡಿತ ಸಂಪೂರ್ಣ ನಿಂತಿತ್ತು. ತಕ್ಷಣವೇ ಡಿ-ಫಿಬ್ರಿಲೇಟರ್ ಯಂತ್ರದ ಮೂಲಕ ಹೃದಯಕ್ಕೆ ವಿದ್ಯುತ್ ಚಾಲನೆ ನೀಡಿ ಬಡಿತ ಬರುವಂತೆ ಮಾಡಲಾಯಿತು. ಸುಮಾರು 8 ರಿಂದ 10 ಬಾಟಲ್ ರಕ್ತವನ್ನು ನೇರವಾಗಿ ಪೈಪ್ ಮೂಲಕ ಹೃದಯಕ್ಕೆ ನೀಡಿ ರಕ್ತದ ಒತ್ತಡವನ್ನು ಸರಿಪಡಿಸಲಾಯಿತು. ಕೇವಲ ಶೇ. 1 ರಷ್ಟು ಮಾತ್ರ ಬದುಕುವ ಭರವಸೆ ಇದ್ದರೂ, ಪೋಷಕರ ಒಪ್ಪಿಗೆ ಪಡೆದು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಆರಂಭಿಸಿದೆವು” ಎಂದರು.

ಸತತ ಪರಿಶ್ರಮ ಮತ್ತು ಯಶಸ್ಸು:

ಸುಮಾರು ಐದರಿಂದ ಆರು ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಯುವಕನಿಗೆ ಮಾಡಲಾಯಿತು. ಮೂರು ವಾರಗಳ ಕಾಲ ಕೃತಕ ಉಸಿರಾಟದ ಯಂತ್ರದಲ್ಲಿ (Ventilator) ಇಟ್ಟು ಚಿಕಿತ್ಸೆ ನೀಡಲಾಯಿತು. ವೈದ್ಯರ ತಂಡ ಮತ್ತು ನರ್ಸಿಂಗ್ ಸಿಬ್ಬಂದಿಯ ಹಗಲಿರುಳಿನ ಶ್ರಮದ ಫಲವಾಗಿ, ಒಂದೂವರೆ ತಿಂಗಳ ನಂತರ ಯುವಕ ಈಗ ಯಾರ ಸಹಾಯವಿಲ್ಲದೆ ನಡೆಯುವಂತಾಗಿದ್ದಾನೆ ಮತ್ತು ಮಾತನಾಡುತ್ತಿದ್ದಾನೆ.

ಪೋಷಕರ ಕೃತಜ್ಞತೆ:

ಯುವಕನ ತಂದೆ ಮಂಜುನಾಥ್ ಮಾತನಾಡಿ, “ನಾವು ನನ್ನ ಮಗನಿಗೆ ಮೊದಲ ಜನ್ಮ ನೀಡಿದ್ದರೆ, ಜನಪ್ರಿಯ ಆಸ್ಪತ್ರೆಯ ವೈದ್ಯರು ಆತನಿಗೆ ಎರಡನೇ ಜನ್ಮ ನೀಡಿದ್ದಾರೆ. ಮಗ ಉಳಿಯುವುದಿಲ್ಲ ಎಂದಿದ್ದ ಪರಿಸ್ಥಿತಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿ ಇಂದು ನಮ್ಮ ಮಗ ನಮ್ಮ ಜೊತೆ ಮಾತನಾಡುವಂತೆ ಮಾಡಿದ್ದಾರೆ. ಇಡೀ ವೈದ್ಯಕೀಯ ತಂಡಕ್ಕೆ ನಾವು ಸದಾ ಋಣಿಯಾಗಿದ್ದೇವೆ,” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದರು.

ವೈದ್ಯಕೀಯ ಲೋಕದ ವಿಸ್ಮಯ ಎಂಬಂತಿರುವ ಈ ಸಾಧನೆಯು ಹಾಸನದ ವೈದ್ಯಕೀಯ ಕ್ಷೇತ್ರದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ.





Continue Reading

Trending

Copyright © 2025 Deevatige

error: Content is protected !!