Connect with us

Belthangady

ಧರ್ಮಸ್ಥಳ ಬುರುಡೆ ಪ್ರಕರಣ: 7 ಬುರುಡೆಗಳ ರಹಸ್ಯ ಭೇದಿಸಲು SIT ಕಸರತ್ತು; ‘ಐಸೋಟೋಪ್‌ ಎನಾಲಿಸಿಸ್’ ತಂತ್ರಜ್ಞಾನಕ್ಕೆ ಮೊರೆ!

Published

on

ಧರ್ಮಸ್ಥಳ: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಧರ್ಮಸ್ಥಳದ ಬಂಗ್ಲೆಗುಡ್ಡೆ ಬುರುಡೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಪತ್ತೆಯಾಗಿರುವ 7 ಮಾನವ ಬುರುಡೆಗಳ ಮೂಲವನ್ನು ಪತ್ತೆಹಚ್ಚುವುದು ಇದೀಗ ವಿಶೇಷ ತನಿಖಾ ತಂಡಕ್ಕೆ (SIT) ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಕರಣದ ರಹಸ್ಯ ಭೇದಿಸಲು ಅಧಿಕಾರಿಗಳು ಇದೀಗ ಅತ್ಯಾಧುನಿಕ ‘ಐಸೋಟೋಪ್‌ ಎನಾಲಿಸಿಸ್’ (Isotope Analysis) ತಂತ್ರಜ್ಞಾನವನ್ನು ಬಳಸಲು ಮುಂದಾಗಿದ್ದಾರೆ.

ಕೆಲ ದಿನಗಳ ಹಿಂದೆ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರ ಹೆಸರು ಕೂಡ ಈ ಪ್ರಕರಣದಲ್ಲಿ ತಳುಕುಹಾಕಿಕೊಂಡಿದ್ದರಿಂದ ಈ ಕೇಸ್ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಪ್ರಕರಣದ ಅಂತಿಮ ವರದಿ (Final Report) ಸಲ್ಲಿಸಬೇಕಾಗಿರುವುದರಿಂದ, ಬುರುಡೆಗಳ ಮೂಲ ಪತ್ತೆ ಹಚ್ಚಲೇಬೇಕಾದ ಅನಿವಾರ್ಯತೆ SIT ಮುಂದಿದೆ.

2 ಭಾಗಗಳಲ್ಲಿ ತನಿಖೆ

SIT ಅಧಿಕಾರಿಗಳು ಈ ಇಡೀ ಪ್ರಕರಣವನ್ನು ಎರಡು ಪ್ರಮುಖ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ:

ಬುರುಡೆ ಷಡ್ಯಂತ್ರ ತನಿಖೆ: ಇದರ ಹಿಂದೆ ಯಾರ ಕೈವಾಡವಿದೆ ಮತ್ತು ಬುರೆಡೆ ತಂದು ಪ್ರಕರಣ ದಾಖಲಿಸುವ ಹಿಂದೆ ಇದರ ಉದ್ದೇಶವೇನು ಎನ್ನುವುದರ ತನಿಖೆ.

ಬುರುಡೆಗಳ ಮೂಲ ಪತ್ತೆ: ಪತ್ತೆಯಾದ ಬುರುಡೆಗಳು ಯಾರಿಗೆ ಸೇರಿದ್ದು ಮತ್ತು ಅವರು ಯಾವ ಭಾಗದವರು ಎಂಬುದನ್ನು ಪತ್ತೆಹಚ್ಚುವುದು.

    ಏನಿದು ‘ಐಸೋಟೋಪ್‌ ಎನಾಲಿಸಿಸ್’ ತಂತ್ರಜ್ಞಾನ?

    ಐಸಮಸ್ಥಾನಿ ವಿಶ್ಲೇಷಣೆ (Isotope Analysis) ಎಂದರೆ ಮಾನವನ ಮೂಳೆ ಅಥವಾ ವಸ್ತುವೊಂದರಲ್ಲಿರುವ ವಿಭಿನ್ನ ಐಸೊಟೋಪ್‌ಗಳ ಪ್ರಮಾಣವನ್ನು ಅಳೆಯುವ ಅತ್ಯಾಧುನಿಕ ವೈಜ್ಞಾನಿಕ ತಂತ್ರವಾಗಿದೆ. ‘ಮಾಸ್ ಸ್ಪೆಕ್ಟ್ರೋಮೆಟ್ರಿ’ ಮೂಲಕ ಈ ಪರೀಕ್ಷೆ ನಡೆಸಲಾಗುತ್ತದೆ.

    ಪ್ರಯೋಜನ: ಇದರಿಂದ ಮೃತರ ವಯಸ್ಸು, ಅವರು ಬದುಕಿದ್ದಾಗ ಸೇವಿಸುತ್ತಿದ್ದ ಆಹಾರ ಪದ್ಧತಿ ಮತ್ತು ಅವರ ಭೌಗೋಳಿಕ ಹಿನ್ನೆಲೆಯನ್ನು (ಅವರು ವಾಸಿಸುತ್ತಿದ್ದ ಪ್ರದೇಶ) ನಿಖರವಾಗಿ ಪತ್ತೆಹಚ್ಚಬಹುದು.

    SITಗೆ ಹೇಗೆ ಸಹಕಾರಿ?: ಈ ಪರೀಕ್ಷೆಯಿಂದ ಮೃತಪಟ್ಟವರು ಕರಾವಳಿ ತೀರದವರಾ ಅಥವಾ ರಾಜ್ಯದ ಬೇರೆ ಭಾಗದವರಾ ಎಂಬ ಸ್ಪಷ್ಟ ಅಂದಾಜು ಸಿಗಲಿದೆ. ಆ ಮೂಲಕ ನಾಪತ್ತೆಯಾದವರ ವಿವರಗಳೊಂದಿಗೆ ಇದನ್ನು ತಾಳೆ ನೋಡಲು ಅಧಿಕಾರಿಗಳಿಗೆ ಸುಲಭವಾಗುತ್ತದೆ.

    DNA ಪರೀಕ್ಷೆ ಮತ್ತು ರಕ್ತದ ಮಾದರಿ ಸಂಗ್ರಹ

    ಬಂಗ್ಲೆಗುಡ್ಡೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಾನವ ಅಸ್ಥಿಪಂಜರಗಳ ಮಾದರಿಯನ್ನು ಈಗಾಗಲೇ ಡಿಎನ್‌ಎ (DNA) ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಡಲಾಗಿದೆ.

    ಇದಲ್ಲದೆ, ರಾಜ್ಯದ ವಿವಿಧ ಭಾಗಗಳಿಂದ ನಾಪತ್ತೆಯಾಗಿರುವ ಜನರ ವಿವರಗಳನ್ನು ಕಲೆಹಾಕಿರುವ ತನಿಖಾ ತಂಡ, ಈಗಾಗಲೇ ಶಂಕೆ ಇರುವ 8 ಕುಟುಂಬಗಳ ಸದಸ್ಯರ ರಕ್ತದ ಮಾದರಿಯನ್ನು (Blood Samples) ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಿದೆ. ಕನಿಷ್ಠ ಪಕ್ಷ ಈ ಬುರುಡೆಗಳು ಯಾವ ಪ್ರದೇಶಕ್ಕೆ ಸೇರಿದವು ಎಂಬ ಮಾಹಿತಿಯನ್ನಾದರೂ ಅಂತಿಮ ವರದಿಯಲ್ಲಿ ಉಲ್ಲೇಖಿಸಲು SIT ಹರಸಾಹಸ ಪಡುತ್ತಿದೆ.

    ವಿಶ್ವಾದ್ಯಂತ ಸದ್ದು ಮಾಡಿರುವ ಈ ಧರ್ಮಸ್ಥಳ ಬುರುಡೆ ಪ್ರಕರಣದ ರಹಸ್ಯ ಮುಂಬರುವ ದಿನಗಳಲ್ಲಿ ಸೈನ್ಸ್ ಹಾಗೂ ತಂತ್ರಜ್ಞಾನದ ಸಹಾಯದಿಂದ ಹೇಗೆ ಮುನ್ನೆಲೆಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.





    ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
    Advertisement

    Belthangady

    ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ: ಆಣೆ-ಪ್ರಮಾಣಕ್ಕೆ ಸಿದ್ಧತೆ ?

    Published

    on

    ವಿಧಾನಪರಿಷತ್‌ ಚುನಾವಣೆ (Legislative Council Elections) ರಾಜ್ಯ ರಾಜಕಾರಣದಲ್ಲಿ ಕ್ರಾಸ್​ ವೋಟಿಂಗ್​ ಬಿರುಗಾಳಿ ಎಬ್ಬಿಸಿದೆ.  ಅಡ್ಡ ಮತದಾನವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಇದೀಗ ಅಡ್ಡ ಮತದಾನದ (Cross Voting) ಮಾಡಿದವರನ್ನ ಕಂಡು ಹಿಡಿಯಲು ಧರ್ಮಸ್ಥಳ ಮಂಜುನಾಥನ ಮೊರೆ ಹೋಗ್ತಿದ್ದಾರೆ. ಧರ್ಮಸ್ಥಳದಲ್ಲೇ ಶಾಸಕಾಂಗ ಸಭೆ ಆಯೋಜಿಸಿದ್ದು, ತಮ್ಮ ಪಕ್ಷದ ಶಾಸಕರಿಂದ ಆಣೆ ಪ್ರಮಾಣ ಮಾಡಿಸಲು ಬಿಜೆಪಿ ನಾಯಕರು ಮುಂದಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ

    ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ‘ಅಡ್ಡ ಮತದಾನ’ (ಕ್ರಾಸ್ ವೋಟಿಂಗ್) ನಡೆದಿದೆ ಎನ್ನಲಾದ ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರಾವಳಿಯ ಶಾಸಕರೊಬ್ಬರ ಮೇಲೆಯೂ ಗುಮಾನಿಯಿದ್ದು, ಅವರೂ ಸೇರಿದಂತೆ ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಮತ್ತು ಪಕ್ಷದೊಳಗಿನ ಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಮಹತ್ವದ ತೀರ್ಮಾನ ಕೈಗೊಂಡಿದೆ.

    ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ: ಮುಂದಿನ ರಾಜಕೀಯ ನಡೆ ಹಾಗೂ ಶಾಸಕರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ, ಅಂದರೆ ಇದೇ ಗುರುವಾರ ಅಥವಾ ಶುಕ್ರವಾರದಂದು ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ (BJP Legislative Party) ವಿಶೇಷ ಸಭೆಯನ್ನು ಕರೆಯಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀರ್ಮಾನಿಸಿದ್ದಾರೆ.

    ಮಂಜುನಾಥನ ಸನ್ನಿಧಿಯಲ್ಲಿ ಆಣೆ-ಪ್ರಮಾಣದ ಬೆದರಿಕೆ: ಅಡ್ಡ ಮತದಾನದ ತೀವ್ರ ಪೇಚಿಗೆ ಸಿಲುಕಿರುವ ಕಮಲ ಪಾಳಯ, ಶಾಸಕರ ಮುಂದೆ ‘ದೇವರ ಆಣೆ’ಯ ಬೆದರಿಕೆಯ ಕತ್ತಿ ತೂಗುಹಾಕಿದೆ. ಧರ್ಮಸ್ಥಳದಲ್ಲಿ ಸಭೆ ಮುಗಿದ ನಂತರ ಪಕ್ಷದ ಎಲ್ಲಾ 63 ಶಾಸಕರಿಂದಲೂ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಆಣೆ-ಪ್ರಮಾಣ ಮಾಡಿಸಲು ತೆರೆಮರೆಯಲ್ಲಿ ತಂತ್ರ ರೂಪಿಸಲಾಗಿದೆ.

    ಕಡ್ಡಾಯ ಹಾಜರಿಗೆ ಅಧಿಕೃತ ‘ವಿಪ್’ ಅಸ್ತ್ರ: ಸಭೆಗೆ ಯಾರೊಬ್ಬರೂ ಗೈರಾಗದಂತೆ ತಡೆಯಲು ಮತ್ತು ಪಕ್ಷದಲ್ಲಿ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಶಾಸಕರಿಗೂ ಅಧಿಕೃತ ‘ವಿಪ್’ ಜಾರಿ ಮಾಡಲು ತೀರ್ಮಾನಿಸಲಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಲ್ಲಾ ಶಾಸಕರಿಗೂ ವಿಪ್ ಕೊಡುವ ಮೂಲಕ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ. ವಿಪ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

    ದೆಹಲಿಗೆ ಪಯಣ – ಹೈಕಮಾಂಡ್‌ಗೆ ವರದಿ: ಧರ್ಮಸ್ಥಳದ ಆಣೆ-ಪ್ರಮಾಣದ ಪ್ರಕ್ರಿಯೆಗೆ ಚಾಲನೆ ನೀಡುವ ಮುನ್ನ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಸೋಮವಾರ ಸಂಜೆ ಜಂಟಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿರುವ ಈ ಜೋಡಿ, ರಾಜ್ಯದಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಗಳು, ಅದಕ್ಕೆ ಕಾರಣರಾದ ಶಂಕಿತರು ಮತ್ತು ಅದರ ಹಿಂದಿರುವ ರಾಜಕೀಯ ಕೈವಾಡಗಳ ಬಗ್ಗೆ ಸಂಪೂರ್ಣ ಲಿಖಿತ ಹಾಗೂ ಮೌಖಿಕ ವರದಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ತದನಂತರ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಧರ್ಮಸ್ಥಳದಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ಪತ್ತೆ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ.

    ರಾಜಕೀಯ ಸತ್ಯಶೋಧನೆಗೆ ಧರ್ಮಸ್ಥಳವೇ ಏಕೆ? “ಮಾತು ಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ” ಎನ್ನುವ ಜನಪ್ರಿಯ ಗಾದೆ ಮಾತಿದೆ. ಸಾಮಾನ್ಯವಾಗಿ ಭಕ್ತರು ಅತ್ಯಂತ ಭಕ್ತಿ-ಗೌರವದಿಂದ ಕಾಣುವ ಮಂಜುನಾಥನ ಸನ್ನಿಧಿಯಲ್ಲಿ ಸುಳ್ಳು ಹೇಳಲು ಹೆದರುತ್ತಾರೆ. ಇದೇ ಕಾರಣಕ್ಕೆ ಕ್ರಾಸ್ ವೋಟಿಂಗ್ ಮಾಡಿದವರು ಯಾರು ಎಂಬುದನ್ನು ಶಾಸಕರ ಆತ್ಮಸಾಕ್ಷಿಗೆ ಬಿಟ್ಟು, ದೇವರ ಮುಂದೆ ಸತ್ಯ ಒಪ್ಪಿಸಲು ಈ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

    ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಿಯಮಗಳೇನು? ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಿಂದೆ ಸ್ಪಷ್ಟಪಡಿಸಿರುವ ಪ್ರಕಾರ, ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಲು ಕಠಿಣ ನಿಯಮಗಳಿವೆ:

    ಪ್ರಮಾಣ ಮಾಡಲು ಇಚ್ಛಿಸುವವರು ಮುಂಚಿತವಾಗಿಯೇ ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ನೀಡಬೇಕು.

    ನಿಗದಿತ ದಿನದ ಹಿಂದಿನ ದಿನವೇ ಕ್ಷೇತ್ರಕ್ಕೆ ಆಗಮಿಸಬೇಕು.

    ಮರುದಿನ ಪವಿತ್ರ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಖಾಲಿ ಹೊಟ್ಟೆಯಲ್ಲಿ ದೇವರ ಮುಂದೆ ಎರಡೂ ಕಡೆಯವರು ಪ್ರಮಾಣ ಮಾಡಬೇಕಾಗುತ್ತದೆ. ಈ ವೇಳೆ ಕ್ಷೇತ್ರದಲ್ಲಿ ಧರ್ಮಾಧಿಕಾರಿಗಳು ಅಥವಾ ಪಾತ್ರಿಗಳು ಹಾಜರಿರುತ್ತಾರೆ.

    ಕರ್ನಾಟಕ ರಾಜಕಾರಣ ಮತ್ತು ಧರ್ಮಸ್ಥಳದ ಆಣೆ-ಪ್ರಮಾಣ ಇತಿಹಾಸ:

    ಕರ್ನಾಟಕ ರಾಜಕೀಯದಲ್ಲಿ ರಾಜಕಾರಣಿಗಳು ಧರ್ಮಸ್ಥಳದ ಆಣೆ-ಪ್ರಮಾಣದ ಮೊರೆ ಹೋಗುತ್ತಿರುವುದು ಇದೇ ಮೊದಲೇನಲ್ಲ. ಇದರ ಹಿಂದಿನ ಕೆಲವು ಪ್ರಮುಖ ರೋಚಕ ಇತಿಹಾಸ ಹೀಗಿದೆ:

    2011 (ಬಿಎಸ್ವೈ ವಿರುದ್ಧ ಎಚ್‌ಡಿಕೆ): ಬಿ.ಎಸ್. ಯಡಿಯೂರಪ್ಪ ಅವರು ಎರಡನೇ ಬಾರಿ ಸಿಎಂ ಆಗಿದ್ದಾಗ, ಭ್ರಷ್ಟಾಚಾರದ ವಿಚಾರವಾಗಿ ಯಡಿಯೂರಪ್ಪ ಅವರು ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಮಾತಿಗೆ ಮಾತು ಬೆಳೆದು ಇಬ್ಬರೂ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಸಜ್ಜಾಗಿದ್ದರು. ಇಡೀ ದೇಶವೇ ಇವರತ್ತ ಮುಖ ಮಾಡಿ ನಿಂತಿತ್ತು. ಇಬ್ಬರೂ ನಾಯಕರು ಧರ್ಮಸ್ಥಳಕ್ಕೆ ಬಂದರೂ, ಕೊನೆಗೆ ಆಣೆ-ಪ್ರಮಾಣ ಮಾಡದೆ ವಾಪಸ್ ತೆರಳಿದ್ದರು.

    2012 (ವಸಂತ ಬಂಗೇರ ಸವಾಲು): ಮಂಗಳೂರು ಹೋಂಸ್ಟೇ ದಾಳಿ ಪ್ರಕರಣದ ವೇಳೆ ಜಿಲ್ಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಣತಿಯಂತೆ ಎಲ್ಲವೂ ನಡೆಯುತ್ತಿದೆ ಎಂದು ಬೆಳ್ತಂಗಡಿಯ ಅಂದಿನ ಕಾಂಗ್ರೆಸ್ ಶಾಸಕ ದಿ. ವಸಂತ ಬಂಗೇರ सदनದಲ್ಲಿ ಆರೋಪಿಸಿದ್ದರು. ಇದರಿಂದ ಸಿಟ್ಟಾಗಿದ್ದ ಯಡಿಯೂರಪ್ಪ ಹೆಡ್‌ಸೆಟ್ ನೆಲಕ್ಕೆ ಕುಕ್ಕಿದ್ದರು. ಆಗ ಬಂಗೇರ ಅವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದಿದ್ದರು.

    2022 (ಶಿವಲಿಂಗೇಗೌಡರ ಪ್ರಮಾಣ): ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮೇಲೆ ಬಿಜೆಪಿ ಮುಖಂಡರು ‘ರಾಗಿ ಕಳ್ಳ’ ಎಂದು ಆರೋಪಿಸಿದಾಗ ನೊಂದ ಗೌಡರು, ನೇತ್ರಾವತಿಯಲ್ಲಿ ಸ್ನಾನ ಮಾಡಿ ಮಂಜುನಾಥನ ಮುಂದೆ ತಾವು ನಿರಪರಾಧಿ ಎಂದು ಪ್ರಮಾಣ ಮಾಡಿ, ಬಳಿಕ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದರು.

    2023 (ವರ್ಗಾವಣೆ ದಂಧೆ ಸವಾಲು): ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಶಾಸಕ ಎಚ್.ಸಿ. ಬಾಲಕೃಷ್ಣ, ಸಿಎಂ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಧರ್ಮಸ್ಥಳದಲ್ಲಿ ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.

    ಮುಡಾ ಹಗರಣದ ಸವಾಲು: ಮುಡಾ ಕಚೇರಿಯಿಂದ ಯಾವುದೇ ದಾಖಲೆ ಕದ್ದಿಲ್ಲ ಎಂದು ಸ್ಪಷ್ಟಪಡಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕುಮಾರಸ್ವಾಮಿ ಮತ್ತು ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಾಮುಂಡೇಶ್ವರಿ ಅಥವಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಇತ್ತೀಚೆಗೆ ಓಪನ್ ಚಾಲೆಂಜ್ ಹಾಕಿದ್ದರು.

    ಈಗ ಬಿಜೆಪಿಗೆ ಕ್ರಾಸ್ ವೋಟಿಂಗ್ ತಲೆಬಿಸಿ: ಸದ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಕ್ರಾಸ್ ವೋಟಿಂಗ್ ತನಿಖೆಗೆ ಸಮಿತಿ ರಚಿಸಲಾಗಿದ್ದರೂ, ನಿಖರ ಮಾಹಿತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ಉತ್ತರಿಸಬೇಕಾದ ಅನಿವಾರ್ಯತೆಯಲ್ಲಿರುವ ರಾಜ್ಯ ಬಿಜೆಪಿ ನಾಯಕರು, ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸಾಕ್ಷಿಯಾಗಿ ಶಾಸಕಾಂಗ ಸಭೆ ನಡೆಸಿ, ಆಣೆ-ಪ್ರಮಾಣದ ಮೂಲಕ ʼಗೆರೆ ದಾಟಿದವರು ಯಾರು’ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ರಾಜಕೀಯ ಇತಿಹಾಸದ ಈ ಹೊಸ ಆಣೆ-ಪ್ರಮಾಣದ ಹೈಡ್ರಾಮಾ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.




    Continue Reading

    accident

    ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಕಾರು ಪಲ್ಟಿ – ಕೂದಲೆಳೆ ಅಂತರದಲ್ಲಿ ಪಾರಾದ ಎಸ್ಪಿ ಸೈಮನ್ ಮತ್ತು ತಂಡ

    Published

    on

    ಬೆಳ್ತಂಗಡಿ: ತೀವ್ರ ಕುತೂಹಲ ಕೆರಳಿಸಿರುವ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನೋವಾ ಕಾರು ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂನ್ 16ರಂದು ಮಧ್ಯಾಹ್ನ ಸಂಭವಿಸಿದೆ.

    ಘಟನೆಯ ವಿವರ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಬಗ್ಗೆ ಚರ್ಚಿಸಲು ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಅಧಿಕಾರಿಗಳ ತಂಡ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ತಂಡದಲ್ಲಿ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟ‌ರ್ ಕುಸುಮಾಧರ್ ಹಾಗೂ ಸಿಬ್ಬಂದಿ ಮಂಜುನಾಥ್ ಪಿ.ಸಿ. ಇದ್ದರು. ಇವರು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

    ತಪ್ಪಿದ ಭಾರಿ ಅನಾಹುತ: ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಪೊಲೀಸ್ ಇಲಾಖೆಯ ಇನೋವಾ ಕಾರು (KA-01-G-6463) ಚಾರ್ಮಾಡಿ ಘಾಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಸೇರಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಕಾರು ಸಂಪೂರ್ಣವಾಗಿ ಉಲ್ಟಾ ಆಗಿದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ.




    Continue Reading

    Belthangady

    ಕೊಕ್ಕಡ: ಕಾಲೇಜಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

    Published

    on

    ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಸಂಭವಿಸಿದೆ.

    ಮೃತ ವಿದ್ಯಾರ್ಥಿನಿಯನ್ನು ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ಮೂಲದ ರಮೇಶ್ ಅವರ ಪುತ್ರಿ ಶ್ವೇತಾ (18) ಎಂದು ಗುರುತಿಸಲಾಗಿದೆ. ಈಕೆ ಬೆಳ್ತಂಗಡಿಯ ಹಳೆಕೋಟೆ ಪರಿಸರದ ಪದವಿ ಪೂರ್ವ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

    ಕೂಲಿ ಕೆಲಸ ಮಾಡಿ ಮಗಳಿಗೆ ಓದಿಸುತ್ತಿದ್ದ ಪೋಷಕರು

    ಮೂಲತಃ ಧಾರವಾಡದವರಾದ ಶ್ವೇತಾ ಅವರ ತಂದೆ-ತಾಯಿ ಕಳೆದ ಐದು ವರ್ಷಗಳಿಂದ ಕೊಕ್ಕಡ ಸಮೀಪದ ಹಳ್ಳಿಂಗೇರಿಯಲ್ಲಿ ವಾಸವಾಗಿದ್ದರು. ತಂದೆ ಮತ್ತು ತಾಯಿ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಜೀವನದ ನಡುವೆಯೂ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದರು ಎನ್ನಲಾಗಿದೆ.

    ಬೆಳ್ಳಂಬೆಳಗ್ಗೆ ನಡೆದ ದುರಂತ

    ಎಂದಿನಂತೆ ಬೆಳಗ್ಗೆ ಎದ್ದಿದ್ದ ಶ್ವೇತಾ ಕಾಲೇಜಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಳು. ಈ ವೇಳೆ ತಂದೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದರು, ತಾಯಿ ಮಾತ್ರ ಮನೆಯಲ್ಲಿದ್ದರು. ತಾಯಿ ಮನೆಯ ಬೇರೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭವನ್ನು ಗಮನಿಸಿ ಕೊಠಡಿಯೊಳಗೆ ಹೋದ ಶ್ವೇತಾ ನೇಣು ಬಿಗಿದುಕೊಂಡಿದ್ದಾಳೆ. ತದನಂತರ ತಾಯಿ ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಆತ್ಮಹತ್ಯೆಗೆ ಕಾರಣ ನಿಗೂಢ

    ಕಾಲೇಜಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ದಿಢೀರನೆ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಸಹಾಯ ಪಡೆಯಲು ಸರ್ಕಾರಿ ಹೆಲ್ಪ್‌ಲೈನ್ ಸಂಖ್ಯೆ 104 ಅಥವಾ ಇತರೆ ಆಪ್ತಸಮಾಲೋಚನಾ ಕೇಂದ್ರಗಳನ್ನು ಸಂಪರ್ಕಿಸಬಹುದು.




    Continue Reading

    Trending

    Copyright © 2025 Deevatige

    error: Content is protected !!