Connect with us

Belthangady

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ: ಆಣೆ-ಪ್ರಮಾಣಕ್ಕೆ ಸಿದ್ಧತೆ ?

Published

on

ವಿಧಾನಪರಿಷತ್‌ ಚುನಾವಣೆ (Legislative Council Elections) ರಾಜ್ಯ ರಾಜಕಾರಣದಲ್ಲಿ ಕ್ರಾಸ್​ ವೋಟಿಂಗ್​ ಬಿರುಗಾಳಿ ಎಬ್ಬಿಸಿದೆ.  ಅಡ್ಡ ಮತದಾನವನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ, ಇದೀಗ ಅಡ್ಡ ಮತದಾನದ (Cross Voting) ಮಾಡಿದವರನ್ನ ಕಂಡು ಹಿಡಿಯಲು ಧರ್ಮಸ್ಥಳ ಮಂಜುನಾಥನ ಮೊರೆ ಹೋಗ್ತಿದ್ದಾರೆ. ಧರ್ಮಸ್ಥಳದಲ್ಲೇ ಶಾಸಕಾಂಗ ಸಭೆ ಆಯೋಜಿಸಿದ್ದು, ತಮ್ಮ ಪಕ್ಷದ ಶಾಸಕರಿಂದ ಆಣೆ ಪ್ರಮಾಣ ಮಾಡಿಸಲು ಬಿಜೆಪಿ ನಾಯಕರು ಮುಂದಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ

ಬೆಂಗಳೂರು: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ‘ಅಡ್ಡ ಮತದಾನ’ (ಕ್ರಾಸ್ ವೋಟಿಂಗ್) ನಡೆದಿದೆ ಎನ್ನಲಾದ ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರಾವಳಿಯ ಶಾಸಕರೊಬ್ಬರ ಮೇಲೆಯೂ ಗುಮಾನಿಯಿದ್ದು, ಅವರೂ ಸೇರಿದಂತೆ ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಮತ್ತು ಪಕ್ಷದೊಳಗಿನ ಗೊಂದಲಗಳಿಗೆ ತೆರೆ ಎಳೆಯಲು ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಮಹತ್ವದ ತೀರ್ಮಾನ ಕೈಗೊಂಡಿದೆ.

ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ: ಮುಂದಿನ ರಾಜಕೀಯ ನಡೆ ಹಾಗೂ ಶಾಸಕರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ, ಅಂದರೆ ಇದೇ ಗುರುವಾರ ಅಥವಾ ಶುಕ್ರವಾರದಂದು ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ (BJP Legislative Party) ವಿಶೇಷ ಸಭೆಯನ್ನು ಕರೆಯಲು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀರ್ಮಾನಿಸಿದ್ದಾರೆ.

ಮಂಜುನಾಥನ ಸನ್ನಿಧಿಯಲ್ಲಿ ಆಣೆ-ಪ್ರಮಾಣದ ಬೆದರಿಕೆ: ಅಡ್ಡ ಮತದಾನದ ತೀವ್ರ ಪೇಚಿಗೆ ಸಿಲುಕಿರುವ ಕಮಲ ಪಾಳಯ, ಶಾಸಕರ ಮುಂದೆ ‘ದೇವರ ಆಣೆ’ಯ ಬೆದರಿಕೆಯ ಕತ್ತಿ ತೂಗುಹಾಕಿದೆ. ಧರ್ಮಸ್ಥಳದಲ್ಲಿ ಸಭೆ ಮುಗಿದ ನಂತರ ಪಕ್ಷದ ಎಲ್ಲಾ 63 ಶಾಸಕರಿಂದಲೂ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಆಣೆ-ಪ್ರಮಾಣ ಮಾಡಿಸಲು ತೆರೆಮರೆಯಲ್ಲಿ ತಂತ್ರ ರೂಪಿಸಲಾಗಿದೆ.

ಕಡ್ಡಾಯ ಹಾಜರಿಗೆ ಅಧಿಕೃತ ‘ವಿಪ್’ ಅಸ್ತ್ರ: ಸಭೆಗೆ ಯಾರೊಬ್ಬರೂ ಗೈರಾಗದಂತೆ ತಡೆಯಲು ಮತ್ತು ಪಕ್ಷದಲ್ಲಿ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಶಾಸಕರಿಗೂ ಅಧಿಕೃತ ‘ವಿಪ್’ ಜಾರಿ ಮಾಡಲು ತೀರ್ಮಾನಿಸಲಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಎಲ್ಲಾ ಶಾಸಕರಿಗೂ ವಿಪ್ ಕೊಡುವ ಮೂಲಕ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ. ವಿಪ್ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

ದೆಹಲಿಗೆ ಪಯಣ – ಹೈಕಮಾಂಡ್‌ಗೆ ವರದಿ: ಧರ್ಮಸ್ಥಳದ ಆಣೆ-ಪ್ರಮಾಣದ ಪ್ರಕ್ರಿಯೆಗೆ ಚಾಲನೆ ನೀಡುವ ಮುನ್ನ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಸೋಮವಾರ ಸಂಜೆ ಜಂಟಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿರುವ ಈ ಜೋಡಿ, ರಾಜ್ಯದಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಗಳು, ಅದಕ್ಕೆ ಕಾರಣರಾದ ಶಂಕಿತರು ಮತ್ತು ಅದರ ಹಿಂದಿರುವ ರಾಜಕೀಯ ಕೈವಾಡಗಳ ಬಗ್ಗೆ ಸಂಪೂರ್ಣ ಲಿಖಿತ ಹಾಗೂ ಮೌಖಿಕ ವರದಿಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ತದನಂತರ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಧರ್ಮಸ್ಥಳದಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ಪತ್ತೆ ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ.

ರಾಜಕೀಯ ಸತ್ಯಶೋಧನೆಗೆ ಧರ್ಮಸ್ಥಳವೇ ಏಕೆ? “ಮಾತು ಬಿಡ ಮಂಜುನಾಥ, ಕಾಸು ಬಿಡ ತಿಮ್ಮಪ್ಪ” ಎನ್ನುವ ಜನಪ್ರಿಯ ಗಾದೆ ಮಾತಿದೆ. ಸಾಮಾನ್ಯವಾಗಿ ಭಕ್ತರು ಅತ್ಯಂತ ಭಕ್ತಿ-ಗೌರವದಿಂದ ಕಾಣುವ ಮಂಜುನಾಥನ ಸನ್ನಿಧಿಯಲ್ಲಿ ಸುಳ್ಳು ಹೇಳಲು ಹೆದರುತ್ತಾರೆ. ಇದೇ ಕಾರಣಕ್ಕೆ ಕ್ರಾಸ್ ವೋಟಿಂಗ್ ಮಾಡಿದವರು ಯಾರು ಎಂಬುದನ್ನು ಶಾಸಕರ ಆತ್ಮಸಾಕ್ಷಿಗೆ ಬಿಟ್ಟು, ದೇವರ ಮುಂದೆ ಸತ್ಯ ಒಪ್ಪಿಸಲು ಈ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣದ ನಿಯಮಗಳೇನು? ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಿಂದೆ ಸ್ಪಷ್ಟಪಡಿಸಿರುವ ಪ್ರಕಾರ, ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಲು ಕಠಿಣ ನಿಯಮಗಳಿವೆ:

ಪ್ರಮಾಣ ಮಾಡಲು ಇಚ್ಛಿಸುವವರು ಮುಂಚಿತವಾಗಿಯೇ ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ನೀಡಬೇಕು.

ನಿಗದಿತ ದಿನದ ಹಿಂದಿನ ದಿನವೇ ಕ್ಷೇತ್ರಕ್ಕೆ ಆಗಮಿಸಬೇಕು.

ಮರುದಿನ ಪವಿತ್ರ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಖಾಲಿ ಹೊಟ್ಟೆಯಲ್ಲಿ ದೇವರ ಮುಂದೆ ಎರಡೂ ಕಡೆಯವರು ಪ್ರಮಾಣ ಮಾಡಬೇಕಾಗುತ್ತದೆ. ಈ ವೇಳೆ ಕ್ಷೇತ್ರದಲ್ಲಿ ಧರ್ಮಾಧಿಕಾರಿಗಳು ಅಥವಾ ಪಾತ್ರಿಗಳು ಹಾಜರಿರುತ್ತಾರೆ.

ಕರ್ನಾಟಕ ರಾಜಕಾರಣ ಮತ್ತು ಧರ್ಮಸ್ಥಳದ ಆಣೆ-ಪ್ರಮಾಣ ಇತಿಹಾಸ:

ಕರ್ನಾಟಕ ರಾಜಕೀಯದಲ್ಲಿ ರಾಜಕಾರಣಿಗಳು ಧರ್ಮಸ್ಥಳದ ಆಣೆ-ಪ್ರಮಾಣದ ಮೊರೆ ಹೋಗುತ್ತಿರುವುದು ಇದೇ ಮೊದಲೇನಲ್ಲ. ಇದರ ಹಿಂದಿನ ಕೆಲವು ಪ್ರಮುಖ ರೋಚಕ ಇತಿಹಾಸ ಹೀಗಿದೆ:

2011 (ಬಿಎಸ್ವೈ ವಿರುದ್ಧ ಎಚ್‌ಡಿಕೆ): ಬಿ.ಎಸ್. ಯಡಿಯೂರಪ್ಪ ಅವರು ಎರಡನೇ ಬಾರಿ ಸಿಎಂ ಆಗಿದ್ದಾಗ, ಭ್ರಷ್ಟಾಚಾರದ ವಿಚಾರವಾಗಿ ಯಡಿಯೂರಪ್ಪ ಅವರು ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಮಾತಿಗೆ ಮಾತು ಬೆಳೆದು ಇಬ್ಬರೂ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಲು ಸಜ್ಜಾಗಿದ್ದರು. ಇಡೀ ದೇಶವೇ ಇವರತ್ತ ಮುಖ ಮಾಡಿ ನಿಂತಿತ್ತು. ಇಬ್ಬರೂ ನಾಯಕರು ಧರ್ಮಸ್ಥಳಕ್ಕೆ ಬಂದರೂ, ಕೊನೆಗೆ ಆಣೆ-ಪ್ರಮಾಣ ಮಾಡದೆ ವಾಪಸ್ ತೆರಳಿದ್ದರು.

2012 (ವಸಂತ ಬಂಗೇರ ಸವಾಲು): ಮಂಗಳೂರು ಹೋಂಸ್ಟೇ ದಾಳಿ ಪ್ರಕರಣದ ವೇಳೆ ಜಿಲ್ಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಅಣತಿಯಂತೆ ಎಲ್ಲವೂ ನಡೆಯುತ್ತಿದೆ ಎಂದು ಬೆಳ್ತಂಗಡಿಯ ಅಂದಿನ ಕಾಂಗ್ರೆಸ್ ಶಾಸಕ ದಿ. ವಸಂತ ಬಂಗೇರ सदनದಲ್ಲಿ ಆರೋಪಿಸಿದ್ದರು. ಇದರಿಂದ ಸಿಟ್ಟಾಗಿದ್ದ ಯಡಿಯೂರಪ್ಪ ಹೆಡ್‌ಸೆಟ್ ನೆಲಕ್ಕೆ ಕುಕ್ಕಿದ್ದರು. ಆಗ ಬಂಗೇರ ಅವರು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದಿದ್ದರು.

2022 (ಶಿವಲಿಂಗೇಗೌಡರ ಪ್ರಮಾಣ): ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡರ ಮೇಲೆ ಬಿಜೆಪಿ ಮುಖಂಡರು ‘ರಾಗಿ ಕಳ್ಳ’ ಎಂದು ಆರೋಪಿಸಿದಾಗ ನೊಂದ ಗೌಡರು, ನೇತ್ರಾವತಿಯಲ್ಲಿ ಸ್ನಾನ ಮಾಡಿ ಮಂಜುನಾಥನ ಮುಂದೆ ತಾವು ನಿರಪರಾಧಿ ಎಂದು ಪ್ರಮಾಣ ಮಾಡಿ, ಬಳಿಕ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದಿದ್ದರು.

2023 (ವರ್ಗಾವಣೆ ದಂಧೆ ಸವಾಲು): ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ, ಶಾಸಕ ಎಚ್.ಸಿ. ಬಾಲಕೃಷ್ಣ, ಸಿಎಂ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅವರು ಧರ್ಮಸ್ಥಳದಲ್ಲಿ ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.

ಮುಡಾ ಹಗರಣದ ಸವಾಲು: ಮುಡಾ ಕಚೇರಿಯಿಂದ ಯಾವುದೇ ದಾಖಲೆ ಕದ್ದಿಲ್ಲ ಎಂದು ಸ್ಪಷ್ಟಪಡಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಕುಮಾರಸ್ವಾಮಿ ಮತ್ತು ಛಲವಾದಿ ನಾರಾಯಣಸ್ವಾಮಿ ಅವರಿಗೆ ಚಾಮುಂಡೇಶ್ವರಿ ಅಥವಾ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಇತ್ತೀಚೆಗೆ ಓಪನ್ ಚಾಲೆಂಜ್ ಹಾಕಿದ್ದರು.

ಈಗ ಬಿಜೆಪಿಗೆ ಕ್ರಾಸ್ ವೋಟಿಂಗ್ ತಲೆಬಿಸಿ: ಸದ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಕ್ರಾಸ್ ವೋಟಿಂಗ್ ತನಿಖೆಗೆ ಸಮಿತಿ ರಚಿಸಲಾಗಿದ್ದರೂ, ನಿಖರ ಮಾಹಿತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ಗೆ ಉತ್ತರಿಸಬೇಕಾದ ಅನಿವಾರ್ಯತೆಯಲ್ಲಿರುವ ರಾಜ್ಯ ಬಿಜೆಪಿ ನಾಯಕರು, ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥನ ಸಾಕ್ಷಿಯಾಗಿ ಶಾಸಕಾಂಗ ಸಭೆ ನಡೆಸಿ, ಆಣೆ-ಪ್ರಮಾಣದ ಮೂಲಕ ʼಗೆರೆ ದಾಟಿದವರು ಯಾರು’ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ರಾಜಕೀಯ ಇತಿಹಾಸದ ಈ ಹೊಸ ಆಣೆ-ಪ್ರಮಾಣದ ಹೈಡ್ರಾಮಾ ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದನ್ನು ಕಾದುನೋಡಬೇಕಿದೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಎಸ್‌ಐಟಿ ಅಧಿಕಾರಿಗಳ ಕಾರು ಪಲ್ಟಿ – ಕೂದಲೆಳೆ ಅಂತರದಲ್ಲಿ ಪಾರಾದ ಎಸ್ಪಿ ಸೈಮನ್ ಮತ್ತು ತಂಡ

Published

on

ಬೆಳ್ತಂಗಡಿ: ತೀವ್ರ ಕುತೂಹಲ ಕೆರಳಿಸಿರುವ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ತಂಡದ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನೋವಾ ಕಾರು ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜೂನ್ 16ರಂದು ಮಧ್ಯಾಹ್ನ ಸಂಭವಿಸಿದೆ.

ಘಟನೆಯ ವಿವರ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಬಗ್ಗೆ ಚರ್ಚಿಸಲು ಬೆಳ್ತಂಗಡಿ ಎಸ್‌ಐಟಿ ಕಚೇರಿಯಿಂದ ಅಧಿಕಾರಿಗಳ ತಂಡ ಚಿಕ್ಕಮಗಳೂರಿಗೆ ತೆರಳುತ್ತಿತ್ತು. ತಂಡದಲ್ಲಿ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟ‌ರ್ ಕುಸುಮಾಧರ್ ಹಾಗೂ ಸಿಬ್ಬಂದಿ ಮಂಜುನಾಥ್ ಪಿ.ಸಿ. ಇದ್ದರು. ಇವರು ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಹಾಗೂ ಎಸ್‌ಐಟಿ ತನಿಖಾಧಿಕಾರಿಯಾಗಿರುವ ಜಿತೇಂದ್ರ ಕುಮಾರ್ ದಯಾಮ ಅವರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ತಪ್ಪಿದ ಭಾರಿ ಅನಾಹುತ: ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಪೊಲೀಸ್ ಇಲಾಖೆಯ ಇನೋವಾ ಕಾರು (KA-01-G-6463) ಚಾರ್ಮಾಡಿ ಘಾಟ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕ ಸೇರಿ ಒಟ್ಟು ನಾಲ್ವರು ಪ್ರಯಾಣಿಸುತ್ತಿದ್ದರು. ಕಾರು ಸಂಪೂರ್ಣವಾಗಿ ಉಲ್ಟಾ ಆಗಿದ್ದರೂ, ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ.




Continue Reading

Belthangady

ಕೊಕ್ಕಡ: ಕಾಲೇಜಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ

Published

on

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ಮೂಲದ ರಮೇಶ್ ಅವರ ಪುತ್ರಿ ಶ್ವೇತಾ (18) ಎಂದು ಗುರುತಿಸಲಾಗಿದೆ. ಈಕೆ ಬೆಳ್ತಂಗಡಿಯ ಹಳೆಕೋಟೆ ಪರಿಸರದ ಪದವಿ ಪೂರ್ವ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

ಕೂಲಿ ಕೆಲಸ ಮಾಡಿ ಮಗಳಿಗೆ ಓದಿಸುತ್ತಿದ್ದ ಪೋಷಕರು

ಮೂಲತಃ ಧಾರವಾಡದವರಾದ ಶ್ವೇತಾ ಅವರ ತಂದೆ-ತಾಯಿ ಕಳೆದ ಐದು ವರ್ಷಗಳಿಂದ ಕೊಕ್ಕಡ ಸಮೀಪದ ಹಳ್ಳಿಂಗೇರಿಯಲ್ಲಿ ವಾಸವಾಗಿದ್ದರು. ತಂದೆ ಮತ್ತು ತಾಯಿ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಕಷ್ಟದ ಜೀವನದ ನಡುವೆಯೂ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದರು ಎನ್ನಲಾಗಿದೆ.

ಬೆಳ್ಳಂಬೆಳಗ್ಗೆ ನಡೆದ ದುರಂತ

ಎಂದಿನಂತೆ ಬೆಳಗ್ಗೆ ಎದ್ದಿದ್ದ ಶ್ವೇತಾ ಕಾಲೇಜಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಳು. ಈ ವೇಳೆ ತಂದೆ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ತೆರಳಿದ್ದರು, ತಾಯಿ ಮಾತ್ರ ಮನೆಯಲ್ಲಿದ್ದರು. ತಾಯಿ ಮನೆಯ ಬೇರೆ ಕೆಲಸದಲ್ಲಿ ನಿರತರಾಗಿದ್ದ ಸಂದರ್ಭವನ್ನು ಗಮನಿಸಿ ಕೊಠಡಿಯೊಳಗೆ ಹೋದ ಶ್ವೇತಾ ನೇಣು ಬಿಗಿದುಕೊಂಡಿದ್ದಾಳೆ. ತದನಂತರ ತಾಯಿ ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಆತ್ಮಹತ್ಯೆಗೆ ಕಾರಣ ನಿಗೂಢ

ಕಾಲೇಜಿಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿನಿ ದಿಢೀರನೆ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲು ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಸಹಾಯ ಪಡೆಯಲು ಸರ್ಕಾರಿ ಹೆಲ್ಪ್‌ಲೈನ್ ಸಂಖ್ಯೆ 104 ಅಥವಾ ಇತರೆ ಆಪ್ತಸಮಾಲೋಚನಾ ಕೇಂದ್ರಗಳನ್ನು ಸಂಪರ್ಕಿಸಬಹುದು.




Continue Reading

Belthangady

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ತಿರುವು: ಚಿನ್ನಯ್ಯ ವಿರುದ್ಧ ಎಸ್‌ಐಟಿಗೆ ಗಿರೀಶ್ ಮಟ್ಟಣ್ಣನವರ್ ದೂರು

Published

on

ಧರ್ಮಸ್ಥಳದ ಬುರುಡೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಪ್ರಕರಣದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಇತ್ತೀಚೆಗೆ ಮಾಸ್ಟರ್‌ಮ್ಯಾನ್ ಚಿನ್ನಯ್ಯ ತನ್ನದೇ ತಂಡದ ವಿರುದ್ಧ 200 ಕೋಟಿ ರೂ. ಫಂಡಿಂಗ್, ಪಿತೂರಿ ಹಾಗೂ ನಟ Prakash Raj ಹೆಸರನ್ನು ಉಲ್ಲೇಖಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ, ಇದೀಗ ಗಿರೀಶ್ ಮಟ್ಟಣ್ಣನವರ್ ಪ್ರತಿದಾಳಿ ನಡೆಸಿದ್ದಾರೆ.

ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ ಗಿರೀಶ್ ಮಟ್ಟಣ್ಣನವರ್, ಹೋರಾಟಗಾರ ಟಿ. ಜಯಂತ್ ಹಾಗೂ ಯೂಟ್ಯೂಬರ್ ಅಭಿಷೇಕ್ ಅವರೊಂದಿಗೆ ಚಿನ್ನಯ್ಯ ವಿರುದ್ಧ ದೂರು ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿನ್ನಯ್ಯನ ಬ್ರೈನ್‌ ಮ್ಯಾಪಿಂಗ್‌ ಸೇರಿದಂತೆ ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ಮಾಡಿರುವ ಎಲ್ಲ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

“ಚಿನ್ನಯ್ಯ ನಮ್ಮ ವಿರುದ್ಧ ಮಾಡಿರುವ ಆರೋಪಗಳ ಆಧಾರದ ಮೇಲೆ ನಮ್ಮೆಲ್ಲರನ್ನೂ ತನಿಖೆಗೆ ಒಳಪಡಿಸಬೇಕು. ನನ್ನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಬೇಕಿದ್ದರೆ ಲೈವ್ ಆಗಿಯೇ ನಡೆಸಲಿ. ಆತ ಹೇಳಿರುವ 200 ಕೋಟಿ ರೂ. ಹಣದ ಆರೋಪ ಸೇರಿದಂತೆ ರಿಟ್ ಅರ್ಜಿಯಲ್ಲಿರುವ ಪ್ರತಿಯೊಂದು ಅಂಶವನ್ನು ಎಸ್‌ಐಟಿ ತನಿಖೆ ಮಾಡಬೇಕು” ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿದರು.

ಅಲ್ಲದೆ, ಚಿನ್ನಯ್ಯನಿಗೆ ನೀಡಲಾಗಿರುವ ಜಾಮೀನನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಎಸ್‌ಐಟಿ ಅರ್ಜಿ ಸಲ್ಲಿಸಬೇಕು ಹಾಗೂ ಆತನಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂಬುದನ್ನೂ ತಮ್ಮ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿಸಿದರು.

ಚಂದ್ರಶೇಖರ್ ಸ್ವಾಮೀಜಿ ಅವರನ್ನು ಭೇಟಿಯಾಗಿದ್ದ ವಿಚಾರವನ್ನು ಒಪ್ಪಿಕೊಂಡ ಗಿರೀಶ್ ಮಟ್ಟಣ್ಣನವರ್, “ಪಾಯಿಂಟ್ ತೋರಿಸುವ ಸಂದರ್ಭದಲ್ಲಿ ಚಿನ್ನಯ್ಯನಿಗೆ ವಿಚಿತ್ರ ಅನುಭವವಾಗುತ್ತಿದೆ ಎಂದು ಹೇಳಿದ್ದ. ಆ ಕಾರಣದಿಂದಲೇ ಮಾಟ-ಮಂತ್ರ ಸಂಬಂಧ ಸಲಹೆ ಪಡೆಯಲು ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದೆವು. ಆದರೆ ಅವರು ಯಾವುದೇ ಪೊಲೀಸರಿಗೆ ಶಿಫಾರಸು ಮಾಡಿಲ್ಲ” ಎಂದು ಸ್ಪಷ್ಟಪಡಿಸಿದರು.

ಚಿನ್ನಯ್ಯ ತನ್ನ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಪ್ರಕಾಶ್ ರಾಜ್ ಕರೆ ಮಾಡಿದ್ದಾರೆಯೇ ಎಂಬ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಅದಕ್ಕೆ ಅವರೇ ಉತ್ತರ ನೀಡುತ್ತಾರೆ. ಈ ಹೋರಾಟಕ್ಕೆ ನೈತಿಕವಾಗಿ ಸಾಕಷ್ಟು ಜನ ಬೆಂಬಲ ನೀಡಿದ್ದಾರೆ” ಎಂದು ಹೇಳಿದರು.

ಇದೇ ವೇಳೆ, ಚಿನ್ನಯ್ಯನಿಗೆ ಹಿಂಸೆ ನೀಡಿ ಕೈ-ಕಾಲು ಒತ್ತಿಸಿಕೊಳ್ಳುತ್ತಿದ್ದೆವು ಎಂಬ ಆರೋಪವನ್ನೂ ಗಿರೀಶ್ ಮಟ್ಟಣ್ಣನವರ್ ತಳ್ಳಿಹಾಕಿದರು. “ಚಿನ್ನಯ್ಯ ನಮ್ಮೊಂದಿಗೆ ಆತ್ಮೀಯವಾಗಿದ್ದ. ನಾವು ಬೇಡ ಎಂದರೂ ಆತನೇ ಬಂದು ಕಾಲು ಒತ್ತುತ್ತಿದ್ದ. ನನಗೆ ಕಾಲಿನ ನೋವು ಇದ್ದ ಕಾರಣ ಆತ ಸ್ವಯಂಪ್ರೇರಿತವಾಗಿ ಸಹಾಯ ಮಾಡುತ್ತಿದ್ದ. ಇದರಲ್ಲಿ ಯಾವುದೇ ಬಲವಂತ ಅಥವಾ ಹಿಂಸೆ ಇರಲಿಲ್ಲ” ಎಂದು ಸಮರ್ಥಿಸಿಕೊಂಡರು.

ಪ್ರಕರಣ ಮತ್ತಷ್ಟು ಸಂಕೀರ್ಣ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ಮತ್ತು ಆತನ ವಿರುದ್ಧ ಆರೋಪ ಕೇಳಿಬರುತ್ತಿರುವವರ ನಡುವಿನ ಪರಸ್ಪರ ಆರೋಪಗಳು ಪ್ರಕರಣವನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಇದೀಗ ಚಿನ್ನಯ್ಯ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿನ ಆರೋಪಗಳು ಹಾಗೂ ಗಿರೀಶ್ ಮಟ್ಟಣ್ಣನವರ್ ನೀಡಿರುವ ದೂರಿನ ಆಧಾರದ ಮೇಲೆ ಎಸ್‌ಐಟಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ




Continue Reading

Trending

Copyright © 2025 Deevatige

error: Content is protected !!