Connect with us

Bantawala

ಕಾಲುಸಂಕದ ತಡೆಗೋಡೆ ಕುಸಿದು ವರ್ಷ ಕಳೆದರೂ ಆಗದ ದುರಸ್ತಿ; ಸಂಪರ್ಕ ಕಡಿತಗೊಂಡು ಕೇಪುವಿನ 80ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಬಡ ಕುಟುಂಬಗಳ ಬದುಕು ದುಸ್ತರ!

Published

on

ದೀವಟಿಗೆ ಡಿಜಿಟಲ್ ಮೀಡಿಯಾ ವಿಶೇಷ ವರದಿ

ಬಂಟ್ವಾಳ: ತಾಲೂಕಿನ ಕೇಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟೆ-ಮಣಿಯಾರಪಾದೆ ರಸ್ತೆಯ ಕಟ್ಟೆ ಎಂಬಲ್ಲಿ ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಕಾಲುಸಂಕದ ತಡೆಗೋಡೆ ಮತ್ತು ರಸ್ತೆ ಸಂಪೂರ್ಣವಾಗಿ ಕುಸಿದು ಬಿದ್ದು ವರ್ಷವೊಂದು ಕಳೆದರೂ, ಈವರೆಗೆ ಯಾವುದೇ ದುರಸ್ತಿ ಕಾಮಗಾರಿ ನಡೆಯದೆ ಇರುವುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪರಿಣಾಮವಾಗಿ, ಈ ಭಾಗದ ಪರಿಶಿಷ್ಟ ಪಂಗಡದ (ST) ಕಾಲೋನಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಸಂಪೂರ್ಣ ಕಡಿತಗೊಂಡಿದ್ದು, ಸ್ಥಳೀಯ ಬಡ ಕುಟುಂಬಗಳ ದೈನಂದಿನ ಬದುಕೇ ಸ್ಥಗಿತಗೊಂಡಿದೆ.

ನಡೆಯಲೂ ಸಾಧ್ಯವಿಲ್ಲದ ಬರ್ಬರ ಸ್ಥಿತಿ: ವೃದ್ಧರು, ಗರ್ಭಿಣಿಯರ ಪರದಾಟ:

ಕಟ್ಟೆ ಭಾಗದಿಂದ ಕಾಲೋನಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ. ವಾಹನ ಸಂಚಾರ ಹಾಗಿರಲಿ, ಮಳೆಗಾಲದಲ್ಲಿ ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರು ನಡೆದುಕೊಂಡು ಹೋಗುವುದೂ ಈಗ ಸಾವು-ಬದುಕಿನ ಹೋರಾಟದಂತಾಗಿದೆ. ಸುಮಾರು 80ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಬಡ ಕುಟುಂಬಗಳು ತಮ್ಮ ದೈನಂದಿನ ಜೀವನೋಪಾಯಕ್ಕಾಗಿ, ರೇಷನ್, ಆಸ್ಪತ್ರೆ ಹಾಗೂ ಉದ್ಯೋಗಕ್ಕಾಗಿ ಇದೇ ಏಕೈಕ ರಸ್ತೆಯನ್ನು ಅವಲಂಬಿಸಿದ್ದು, ಸಂಕದ ತಡೆಗೋಡೆ ಕುಸಿದ ಬಳಿಕ ಇವರಿಗೆ ಆತಂಕ ಎದುರಾಗಿದೆ.

ಅಧಿಕಾರಿಗಳ ಭೇಟಿ ಬರೀ ಪ್ರದರ್ಶನವೇ? ವರ್ಷ ಕಳೆದರೂ ಮೌನ!

ಕಳೆದ ಮಳೆಗಾಲದಲ್ಲಿ ಭೀಕರ ಮಳೆಹಾನಿ ಸಂಭವಿಸಿದ ಸಂದರ್ಭದಲ್ಲಿ ಕಂದಾಯ, ಮಳೆಹಾನಿ ವಿಭಾಗ ಹಾಗೂ ಇತರೆ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗೃತ ಪರಿಶೀಲನೆ ನಡೆಸಿದ್ದರು. ತದನಂತರ ಇಂಜಿನಿಯರ್ ಸ್ಥಳ ಪರಿಶೀಲಿಸಿ, ವೈಜ್ಞಾನಿಕವಾಗಿ ತಡೆಗೋಡೆ ಹಾಗೂ ರಸ್ತೆ ಪುನರ್ ನಿರ್ಮಾಣಕ್ಕಾಗಿ ಸುಮಾರು 15 ಲಕ್ಷ ರೂಪಾಯಿಗಳ ಬೃಹತ್ ಅಂದಾಜು ಪಟ್ಟಿಯನ್ನು (Estimation) ಸಿದ್ಧಪಡಿಸಿದ್ದರು. ಆದರೆ, ಇಷ್ಟೊಂದು ದೊಡ್ಡದಾದ ಮೊತ್ತದ ಕಾಮಗಾರಿಯನ್ನು ಗ್ರಾಮ ಪಂಚಾಯತ್‌ನ ಸೀಮಿತ ಅನುದಾನದಲ್ಲಿ ಮಾಡಲು ಸಾಧ್ಯವಾಗದ ಕಾರಣ, ಪಂಚಾಯತ್ ಮುಖಾಂತರ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಅಧಿಕೃತ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಮನವಿ ಸಲ್ಲಿಕೆಯಾಗಿ ವರ್ಷ ಕಳೆದರೂ ದುರಸ್ತಿ ಕಾರ್ಯ ಮಾತ್ರ ಮರೀಚಿಕೆಯಾಗಿದೆ.

ಕೇಪು ಪಂಚಾಯತ್‌ನಿಂದ ಶಾಸಕರಿಗೆ ಸಲ್ಲಿಕೆಯಾಗಿತ್ತು ಅಧಿಕೃತ ಮನವಿ

ಕೇಪು ಗ್ರಾಮ ಪಂಚಾಯತ್ ವತಿಯಿಂದ 29-08-2025 ರಂದೇ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಿಗೆ ಅಧಿಕೃತವಾಗಿ ಪತ್ರ ಬರೆಯಲಾಗಿದ್ದು, ಅದರಲ್ಲಿ “ಕಟ್ಟೆ-ಮಣಿಯಾರಪಾದೆ ರಸ್ತೆಯ ಕಟ್ಟೆ ಎಂಬಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಪರ್ಕ ರಸ್ತೆಯ ಸೇತುವು ಬಳಿ ರಸ್ತೆಯು ಪೂರ್ಣ ಜರಿದು ಹೋಗಿರುತ್ತದೆ. ಈ ಪ್ರದೇಶದಲ್ಲಿ ಸುಮಾರು 50ಕ್ಕೂ ಹೆಚ್ಚು (ಪ್ರಸ್ತುತ 80ಕ್ಕೂ ಅಧಿಕ) ಜನರು ಸಂಚರಿಸುವ ರಸ್ತೆಯಾಗಿದ್ದು, ಬಡ ಜನರು ತುಂಬಾ ಕಷ್ಟದಲ್ಲಿ ಜೀವಿಸುತ್ತಿದ್ದಾರೆ. ಆದುದರಿಂದ ಪ್ರಾಕೃತಿಕ ವಿಕೋಪ ಅಡಿಯಲ್ಲಿ ಸರ್ಕಾರದ ಅನುದಾನ ಮಂಜೂರು ಮಾಡಬೇಕು” ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯದರ್ಶಿಗಳು ಜಂಟಿ ಸಹಿಯೊಂದಿಗೆ ಅಂದಾಜು ಪಟ್ಟಿಯನ್ನು ಲಗತ್ತಿಸಿ ವಿನಂತಿಸಿದ್ದರು. ಆದಾಗ್ಯೂ ಇಲಾಖೆಯ ಮಟ್ಟದಲ್ಲಿ ಫೈಲ್‌ಗಳು ಧೂಳು ಹಿಡಿಯುತ್ತಿರುವುದು ದುರದೃಷ್ಟಕರ.

ಸ್ಥಳೀಯರ ತೀವ್ರ ಆಕ್ರೋಶ: “ಮಳೆ ಬಂದರೆ ಕಾಲೋನಿ ಸಂಪೂರ್ಣ ಪ್ರತ್ಯೇಕ!”

“ಚುನಾವಣೆ ಸಂದರ್ಭದಲ್ಲಿ ವೋಟ್ ಕೇಳಲು ಬರುವ ಜನಪ್ರತಿನಿಧಿಗಳು ಮತ್ತು ಭರವಸೆ ನೀಡುವ ಅಧಿಕಾರಿಗಳು ನಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ವರ್ಷವೊಂದು ಕಳೆದರೂ ನಮಗೆ ಸಿಕ್ಕಿರುವುದು ಬರೀ ಆಶ್ವಾಸನೆ ಮಾತ್ರ, ದುರಸ್ತಿ ಮಾತ್ರ ಆಗಿಲ್ಲ. ಈಗ ಮತ್ತೆ ಮಳೆಗಾಲ ಆರಂಭವಾಗಿದ್ದು, ಮಳೆ ಜೋರಾದರೆ ನಮ್ಮ ಕಾಲೋನಿಯವರ ಗತಿ ಅಧೋಗತಿ! ನಮಗೇನಾದರೂ ತುರ್ತು ಆರೋಗ್ಯ ಸಮಸ್ಯೆಯಾದರೆ ಹೊತ್ತುಕೊಂಡು ಹೋಗಲೂ ದಾರಿಯಿಲ್ಲ” ಎಂದು ಕಾಲೋನಿಯ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹ

ಈಗಲಾದರೂ ಮಾನ್ಯ ಶಾಸಕರು, ಮಳೆಹಾನಿ ನಿರ್ವಹಣಾ ವಿಭಾಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಈ ಗಂಭೀರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕಿದೆ. ತಕ್ಷಣವೇ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಸಂಪರ್ಕ ಕಡಿತಗೊಂಡಿರುವ ಈ ಕಾಲುಸಂಕ ಮತ್ತು ರಸ್ತೆಯ ತಡೆಗೋಡೆಯನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಬೇಕೆಂದು ಕೇಪು ಗ್ರಾಮಸ್ಥರು ಹಾಗೂ ಕಾಲೋನಿಯ ಬಡ ಕುಟುಂಬಗಳು ಅತ್ಯಂತ ಕಟುವಾಗಿ ಒತ್ತಾಯಿಸುತ್ತಿದ್ದಾರೆ. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

accident

ಪೆರುವಾಯಿ ಪೇರಡ್ಕ ಸೇತುವೆಯಿಂದ ತೋಡಿಗೆ ಬಿದ್ದ ಆಲ್ಟೋ ಕಾರು: ಐವರು ಪ್ರಯಾಣಿಕರು ಪವಾಡಸದೃಶ ಪಾರು!

Published

on

ವಿಟ್ಲ: ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯಿಂದ ಕೆಳಗಿನ ತೋಡಿಗೆ ಬಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಪೆರುವಾಯಿ ಗ್ರಾಮದ ಪೇರಡ್ಕ ಎಂಬಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಘಟನೆಯ ವಿವರ: ಪೆರುವಾಯಿ ಕಡೆಯಿಂದ ಬೆರಿಪದವು ಕಡೆಗೆ ಐವರು ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಆಲ್ಟೋ ಕಾರು ಪೇರಡ್ಕ ಸೇತುವೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನೇರ ತೋಡಿಗೆ ಉರುಳಿ ಬಿದ್ದಿದೆ. ಅಪಘಾತದ ತೀವ್ರತೆಗೆ ಆಲ್ಟೋ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ರಕ್ಷಿಸಿದ ಮಳೆ ಅಭಾವ! ಸಾಮಾನ್ಯವಾಗಿ ಮುಂಗಾರು ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ತುಂಬಿ ಭೋರ್ಗರೆದು ಹರಿಯುತ್ತಿರುತ್ತದೆ. ಆದರೆ ಈ ಬಾರಿ ಸಕಾಲದಲ್ಲಿ ಸರಿಯಾದ ಮಳೆ ಬಾರದ ಕಾರಣ ಹೊಳೆಯಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆಯಿತ್ತು. ಇದೇ ಕಾರಣಕ್ಕೆ ಕಾರು ತಲೆಕೆಳಗಾಗಿ ಬಿದ್ದರೂ ನೀರಿನಲ್ಲಿ ಮುಳುಗದೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಡೆಗೋಡೆ ಇಲ್ಲದ ಸೇತುವೆ: ನಿರಂತರ ಅಪಘಾತಗಳ ತಾಣ!

ಈ ಸೇತುವೆಗೆ ಯಾವುದೇ ಸುರಕ್ಷಿತ ತಡೆಗೋಡೆ (ಬ್ಯಾರಿಕೇಡ್) ಇಲ್ಲದಿರುವುದೇ ಸರಣಿ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ಕೇವಲ ಕೆಲವು ದಿನಗಳ ಹಿಂದಷ್ಟೇ (ಮೇ 31 ರಂದು) ಇದೇ ಸೇತುವೆಯಿಂದ ಕೋಳಿ ಸಾಗಾಟ ಮಾಡುತ್ತಿದ್ದ ಪಿಕ್‌ಅಪ್‌ ವಾಹನವೊಂದು ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದು ಭೀಕರ ಅಪಘಾತ ನಡೆದಿತ್ತು. ಆದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

ಸಾರ್ವಜನಿಕರ ಆಕ್ರೋಶ: “ಕಳೆದ ಹಲವಾರು ವರ್ಷಗಳಿಂದ ಈ ಅಪಾಯಕಾರಿ ಸೇತುವೆಗೆ ಬಲವಾದ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಹಾಗೂ ಸ್ಥಳೀಯರು ನಿರಂತರವಾಗಿ ಒತ್ತಾಯಿಸುತ್ತಾ ಬರುತ್ತಿದ್ದಾರೆ. ಆದರೆ ಲೋಕೋಪಯೋಗಿ ಇಲಾಖೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಕ್ರಮ ಜರಗಿಸುತ್ತಿಲ್ಲ. ಅಧಿಕಾರಿಗಳ ಈ ಉದಾಸೀನತೆಯೇ ಸರಣಿ ಅಪಘಾತಗಳಿಗೆ ಪ್ರೇರಣೆ ನೀಡುವಂತಿದೆ” ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಮಟ್ಟದ ಜೀವಹಾನಿಯನ್ನು ತಪ್ಪಿಸಲು ತಕ್ಷಣವೇ ಪೇರಡ್ಕ ಸೇತುವೆಗೆ ತಡೆಗೋಡೆ ನಿರ್ಮಿಸಬೇಕೆಂದು ಸಾರ್ವಜನಿಕರು ಗಂಭೀರವಾಗಿ ಆಗ್ರಹಿಸಿದ್ದಾರೆ

Continue Reading

arrest

ವಿಟ್ಲ ಪೊಲೀಸರ ಬಲೆಗೆ ಬಿದ್ದ ಫರ್ಟಿಲೈಸರ್ ಮಾಫಿಯಾ; ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ತಂಡದಿಂದ ದಾಳಿ;ವಿಟ್ಲ ಪೊಲೀಸರ ಭರ್ಜರಿ ಕಾರ್ಯಾಚರಣೆ; ಅಕ್ರಮ ದಂಧೆ ಜಾಲ ಬೇಧಿಸಿದ ಖಾಕಿ ಪಡೆ!

Published

on

Breaking News

ವಿಟ್ಲ: ರೈತರಿಗೆ ಕೇಂದ್ರ ಸರ್ಕಾರವು ರಿಯಾಯಿತಿ (ಸಬ್ಸಿಡಿ) ದರದಲ್ಲಿ ನೀಡುವ ಯೂರಿಯಾ ರಸಗೊಬ್ಬರವನ್ನು ಅಕ್ರಮವಾಗಿ ಶೇಖರಿಸಿ, ಚೀಲಗಳನ್ನು ಬದಲಾಯಿಸಿ ಬೇರೆಡೆಗೆ ಹೆಚ್ಚಿನ ಬೆಲೆಗೆ ಸಾಗಾಟ ಮಾಡುತ್ತಿದ್ದ ರಾಜ್ಯಮಟ್ಟದ ವ್ಯವಸ್ಥಿತ ಜಾಲವೊಂದನ್ನು ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ತಂಡ ಯಶಸ್ವಿಯಾಗಿ ಬೇಧಿಸಿದೆ. ಕಾರ್ಯಾಚರಣೆಯ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ರಸಗೊಬ್ಬರ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯ ಬಂಧನ: ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಖಂಡಿಗ ಸರ್ಕಾರಿ ಶಾಲೆಯ ಬಳಿಯ ನಿವಾಸಿ ಕೆ. ಮಹಮ್ಮದ್ ಎಂಬವರ ಪುತ್ರ ಮೊಹಮ್ಮದ್ ಅಶ್ರಫ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ಮನೆಯಲ್ಲೇ ಕಾನೂನುಬಾಹಿರವಾಗಿ ಯೂರಿಯಾ ರಸಗೊಬ್ಬರವನ್ನು ಸಂಗ್ರಹಿಸಿ ಈ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಖದೀಮರ ದಂಧೆಯ ಸ್ವರೂಪ: ಕೇಂದ್ರ ಸರ್ಕಾರವು ರೈತರಿಗೆ ನೀಡುವ ಸಬ್ಸಿಡಿ ಯೂರಿಯಾವನ್ನು ವಿವಿಧ ಕೃಷಿ ಪತ್ತಿನ ಸಹಕಾರಿ ಸಂಘಗಳು ಅಥವಾ ಸೊಸೈಟಿಗಳ ಮೂಲಕ ಬೇನಾಮಿ ರೈತರ ಹೆಸರಿನಲ್ಲಿ ಈ ಜಾಲವು ಖರೀದಿಸುತ್ತಿತ್ತು. ಬಳಿಕ, ಸರ್ಕಾರದ ಅಧಿಕೃತ ಮೊಹರು ಹೊಂದಿರುವ ಹಳದಿ ಚೀಲಗಳಿಂದ ಯೂರಿಯಾವನ್ನು ಹೊರತೆಗೆದು, ‘ಟೆಕ್ನಿಕಲ್ ಗ್ರೇಡ್’ ಎಂದು ನಮೂದಿಸಲಾದ 50 ಕೆಜಿಯ ಬಿಳಿ ಚೀಲಗಳಿಗೆ ತುಂಬಿಸಲಾಗುತ್ತಿತ್ತು. ಈ ರೀತಿ ಪ್ಯಾಕ್ ಮಾಡಲಾದ ರಸಗೊಬ್ಬರವನ್ನು ಕೇರಳದ ಫ್ಲೈವುಡ್ ಕಾರ್ಖಾನೆಗಳಿಗೆ ಅತ್ಯಧಿಕ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬೃಹತ್ ಪ್ರಮಾಣದ ರಸಗೊಬ್ಬರ, ಲಾರಿ ಜಪ್ತಿ: ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಅಕ್ರಮವಾಗಿ ಶೇಖರಿಸಿಡಲಾಗಿದ್ದ ತಲಾ 50 ಕಿಲೋ ತೂಕದ 342 ಚೀಲ ಯೂರಿಯಾ ರಸಗೊಬ್ಬರ ಪತ್ತೆಯಾಗಿದೆ. ಇದರೊಂದಿಗೆ ತುಮಕೂರು ಮತ್ತು ಹಾಸನ ಭಾಗಗಳಿಂದ ತಲಾ 300 ರೂಪಾಯಿಯಂತೆ ಖರೀದಿಸಿ ಸಾಗಿಸುತ್ತಿದ್ದ ಲಾರಿಯಲ್ಲಿದ್ದ ಮತ್ತೊಂದು 300 ಚೀಲ (ಒಟ್ಟು 642 ಚೀಲ) ರಸಗೊಬ್ಬರ ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ KA 11 A 6017 ಸಂಖ್ಯೆಯ ಟಾಟಾ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈತರ ಹಿತಾಸಕ್ತಿಗೆ ಕನ್ನ: ಪ್ರಸ್ತುತ ಮಾರುಕಟ್ಟೆಯಲ್ಲಿ ತಲಾ 50 ಕಿಲೋ ತೂಕದ ಯೂರಿಯಾ ಚೀಲದ ನೈಜ ಬೆಲೆ 1,457.29 ರೂ. ಆಗಿದ್ದು, ಇದಕ್ಕೆ ಕೇಂದ್ರ ಸರ್ಕಾರವು 1,190.79 ರೂ. ಸಬ್ಸಿಡಿ ನೀಡುತ್ತದೆ. ಹೀಗಾಗಿ ರೈತರಿಗೆ ಇದು ಕೇವಲ 266.50 ರೂ.ಗೆ ಲಭ್ಯವಾಗುತ್ತದೆ. ಆದರೆ, ಇಂತಹ ರಿಯಾಯಿತಿ ದರದ ರಸಗೊಬ್ಬರವನ್ನು ರಸಗೊಬ್ಬರ ಮಾರಾಟ ಕೇಂದ್ರಗಳ ಸಿಬ್ಬಂದಿಗಳ ಜೊತೆ ಶಾಮೀಲಾಗಿ ಕಳ್ಳಮಾರ್ಗದಿಂದ ಲೂಟಿ ಮಾಡುತ್ತಿರುವುದು ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ದಾಳಿ ನಡೆದ ಸ್ಥಳಕ್ಕೆ ಬಂಟ್ವಾಳ ಕೃಷಿ ಅಧಿಕಾರಿ ನಂದನ್ ಶೆಣೈ, ಸಹಾಯಕ ನಿರ್ದೇಶಕಿ ವೀಣಾ, ಜಿಲ್ಲಾ ಜಾಗೃತ ದಳದ (ವಿಜಿಲೆನ್ಸ್) ಅಧಿಕಾರಿ ನಾಗವೇಣಿ, ಕೊಳ್ನಾಡು ಗ್ರಾಮ ಆಡಳಿತಾಧಿಕಾರಿ ಕರಿಬಸಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳಾದ ವಿನಯ್ ಕುಮಾರ್, ಗದಿಗೆಪ್ಪ, ಮಾಯಪ್ಪ, ಸಾಬು ಮಿರ್ಜಿ ಸೇರಿದಂತೆ ಪ್ರಮುಖರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮುಂದಿನ ಕಾನೂನುಕ್ರಮಕ್ಕಾಗಿ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರು ಕಛೇರಿಯ ಕೃಷಿ ಅಧಿಕಾರಿಗಳಾದ ನಂದನ ಶೆಣೈ ಪಿ, (ತಾಂತ್ರಿಕ)ರವರಿಗೆ ಮಾಹಿತಿ ನೀಡಲಾಗಿ ಸದ್ರಿಯವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರ : 127/2026 ಕಲಂ: 3(2)(a), 3(2)(d), 3(2)(c), 3(2)(f) ESSENTIAL COMMODITIES ACT, 1955 ಯಂತೆ ಪ್ರಕರಣ ದಾಖಲಾಗಿರುತ್ತದೆ.




Continue Reading

Bantawala

ಕುಳ ಕಂದಾಯ ಕಛೇರಿಯಲ್ಲಿ ಧರಣ್ ದರ್ಭಾರ್..ನಾಗರಿಕರು ಹೈರಾಣ..ಜಿಲ್ಲಾಧಿಕಾರಿಗೆ ದೂರು..

Published

on

ಬಂಟ್ವಾಳ: ತಾಲೂಕಿನ ಕುಳ ಗ್ರಾಮದ ಆಡಳಿತ ಅಧಿಕಾರಿಯ (VA) ಕಚೇರಿಯು ಸಾರ್ವಜನಿಕರ ಸೇವೆಗೆ ಇರಬೇಕಾದ ಸರ್ಕಾರಿ ಕಚೇರಿಯೋ ಅಥವಾ ಖಾಸಗಿ ವ್ಯಕ್ತಿಗಳ ಹಣ ವಸೂಲಿ ಕೇಂದ್ರವೋ ಎನ್ನುವ ಅನುಮಾನ ಈಗ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕಾಡಲಾರಂಭಿಸಿದೆ. ಕಚೇರಿಯೊಳಗೆ ಧರಣ್ ಮಾಣಿ ಎಂಬ ಖಾಸಗಿ ಬ್ರೋಕರ್‌ನನ್ನು ಕಾನೂನುಬಾಹಿರವಾಗಿ ಕೂರಿಸಿಕೊಂಡು, ಅಮಾಯಕ ಗ್ರಾಮೀಣ ಜನರಿಂದ ಹಣ ಸುಲಿಗೆ ಮಾಡುತ್ತಿರುವ ಜಿಗಣೆ ದಂಧೆ ಬೆಳಕಿಗೆ ಬಂದಿದೆ.

ಕಚೇರಿ ಕೆಲಸಕ್ಕೆ ಬಂದರೆ ಜೇಬಿಗೆ ಕತ್ತರಿ!

ಕುಳ ಮತ್ತು ಇಡ್ಕಿದು ಜೋಡು ಗ್ರಾಮಗಳಾಗಿದ್ದು, ಇಲ್ಲಿನ ಕಂದಾಯ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗಾಗಿ ಬರುವ ಬಡ, ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಈ ದಲ್ಲಾಳಿ ಜಾಲ ಕಾರ್ಯಾಚರಣೆ ನಡೆಸುತ್ತಿದೆ. ಕಚೇರಿ ಕೆಲಸಗಳಿಗಾಗಿ ಬರುವ ಸಾರ್ವಜನಿಕರಿಂದ ರಾಜಾರೋಷವಾಗಿ ಹಣ ವಸೂಲಿ ಮಾಡಲಾಗುತ್ತಿದೆ. ಒಂದು ವೇಳೆ ಬೇಡಿಕೆಯಿಟ್ಟಷ್ಟು ಹಣ ನೀಡದಿದ್ದರೆ, ಅಂತವರ ಫೈಲ್‌ಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಸಿ, ಜನ ಸಾಮಾನ್ಯರಿಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕುಳ ಗ್ರಾಮಸ್ಥರು ನೇರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಲ್ಲಾಳಿಗೆ ಗ್ರಾಮ ಸಹಾಯಕ ರಾಘವನ ‘ಶ್ರೀರಕ್ಷೆ’!

ಈ ಇಡೀ ಅಕ್ರಮ ದಂಧೆಯ ಹಿಂದೆ ಕುಳ ಗ್ರಾಮದ ಸಹಾಯಕನಾಗಿರುವ ಇಡೀದು ಗ್ರಾಮದ ರಾಘವ ಗೌಡ ಎಂಬಾತನ ಪೂರ್ಣ ಶ್ರೀರಕ್ಷೆ ಹಾಗೂ ಶಾಮೀಲಾತಿ ಇರುವುದು ಸಾಕ್ಷ್ಯಸಮೇತ ಬಹಿರಂಗವಾಗಿದೆ. ದಿನಾಂಕ 08/06/2026 ರಂದು ಬೆಳಿಗ್ಗೆ 9:18 ರ ಸುಮಾರಿಗೆ ಸ್ಥಳೀಯ ನಾಗರಿಕರಾದ ಸಚಿನ್ ಉರಿಮಜಲು ಅವರು ಕಚೇರಿಗೆ ಭೇಟಿ ನೀಡಿದಾಗ, ಗ್ರಾಮ ಸಹಾಯಕನ ಅಧಿಕೃತ ಪೀಠದಲ್ಲೇ ಈ ಬ್ರೋಕರ್ ಧರಣ್ ಆಸೀನನಾಗಿ ದರ್ಬಾರ್ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ. ಇದನ್ನು ಸಚಿನ್ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಯತ್ನಿಸಿದಾಗ, ಗ್ರಾಮ ಸಹಾಯಕ ರಾಘವ ತಕರಾರು ಎಬ್ಬಿಸಿದ್ದಲ್ಲದೆ, ಕಚೇರಿಯ ಫೈಲ್/ಪುಸ್ತಕವನ್ನು ಮುಖಕ್ಕೆ ಅಡ್ಡ ಹಿಡಿದು ಅಕ್ರಮವನ್ನು ಮುಚ್ಚಿಹಾಕಲು ಹರಸಾಹಸ ಪಟ್ಟಿದ್ದಾನೆ!

ತನ್ನನ್ನು ವಿಎ (ಗ್ರಾಮ ಆಡಳಿತ ಅಧಿಕಾರಿ) ಮತ್ತು ರಾಘವ ಅವರೇ ಇಲ್ಲಿಗೆ ನೇಮಿಸಿದ್ದಾರೆ ಎಂದು ಸ್ವತಃ ದಲ್ಲಾಳಿ ಧರಣ್ ಒಪ್ಪಿಕೊಂಡಿರುವುದು ಕಂದಾಯ ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲವನ್ನು ಬಿಚ್ಚಿಟ್ಟಿದೆ.

ಜಾರಿಕೊಂಡ ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕುಮಾರ್!

ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೊಬ್ಬ ಕುರ್ಚಿ ಹಾಕಿ ದರ್ಬಾರ್ ನಡೆಸುತ್ತಿರುವ ಬಗ್ಗೆ ಪತ್ರಿಕೆಯು ಗ್ರಾಮ ಆಡಳಿತ ಅಧಿಕಾರಿ (VA) ಅನಿಲ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, ಅವರು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ. “ನಾನು ಕುಳ ಗ್ರಾಮದಲ್ಲಿ ವಾರಕ್ಕೆ ಎರಡು ದಿನ ಮಾತ್ರ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಉಳಿದ ದಿನಗಳಲ್ಲಿ ಗ್ರಾಮ ಸಹಾಯಕ ರಾಘವ ಇರುತ್ತಾರೆ. ಕಚೇರಿಯೊಳಗೆ ದಲ್ಲಾಳಿ ಇರುವ ಬಗ್ಗೆ ನನಗೆ ತಿಳಿದಿಲ್ಲ, ನಾನು ಯಾರನ್ನೂ ನೇಮಿಸಿಲ್ಲ” ಎಂದು ದಿನಾಂಕ 10/06/2026 ರಂದು ಹೇಳಿಕೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದಲೇ ಇಂತಹ ದಲ್ಲಾಳಿಗಳು ಸರ್ಕಾರಿ ಕಚೇರಿಗಳನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.

ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು: ಹೋರಾಟದ ಎಚ್ಚರಿಕೆ

ಅಮಾಯಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಬ್ರೋಕರ್ ಧರಣ್‌ನನ್ನು ತಕ್ಷಣವೇ ಕಚೇರಿಯಿಂದ ತೆರವುಗೊಳಿಸಬೇಕು ಮತ್ತು ಆತನಿಗೆ ಕಚೇರಿಯೊಳಗೆ ಅಕ್ರಮವಾಗಿ ನೆಲೆಸಲು ಆಶ್ರಯ ನೀಡಿದ ಗ್ರಾಮ ಸಹಾಯಕ ರಾಘವ ವಿರುದ್ಧ ತಕ್ಷಣವೇ ಶಿಸ್ತು ಹಾಗೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೂರುದಾರರಾದ ಸಚಿನ್ ಉರಿಮಜಲು ಅವರು ಬಂಟ್ವಾಳ ತಹಶೀಲ್ದಾರರಿಗೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಹಾಗೂ ಮಂಗಳೂರು ಸಹಾಯಕ ಕಮಿಷನರ್‌ ಅವರಿಗೆ ಜಿಪಿಎಸ್ ಫೋಟೋ ಸಾಕ್ಷ್ಯಗಳ ಸಮೇತ ಲಿಖಿತ ದೂರು ಸಲ್ಲಿಸಿದ್ದಾರೆ.

“ಸರ್ಕಾರಿ ಕಚೇರಿಯನ್ನು ಇವರು ತಮ್ಮ ಹಿರಿಯರ ಖಾಸಗಿ ಆಸ್ತಿ ಎಂದುಕೊಂಡಿದ್ದಾರೆಯೇ? ಕೂಡಲೇ ಈ ಭ್ರಷ್ಟ ಜಾಲದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮಾಧ್ಯಮ ಮಿತ್ರರನ್ನು ಕರೆಸಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ದೂರುದಾರರು ಎಚ್ಚರಿಸಿದ್ದಾರೆ.




Continue Reading

Trending

Copyright © 2025 Deevatige

error: Content is protected !!