Connect with us

national

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ: ಹೊಸ ಪಕ್ಷ ಕಟ್ಟಲು ಸಜ್ಜಾದರಾ ಕೆ. ಅಣ್ಣಾಮಲೈ?

Published

on

ಚೆನ್ನೈ/ಬೆಂಗಳೂರು: ದಕ್ಷಿಣ ಭಾರತದ ರಾಜಕೀಯದಲ್ಲಿ ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಭಾರಿ ರಾಜಕೀಯ ಬದಲಾವಣೆಯೊಂದರ ಮುನ್ಸೂಚನೆ ಸಿಗುತ್ತಿದೆ. ತಮಿಳುನಾಡು ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರಬಂದು ಹೊಸ ರಾಜಕೀಯ ಪಕ್ಷ ಅಥವಾ ಸ್ವತಂತ್ರ ಚಳವಳಿಯೊಂದನ್ನು ಆರಂಭಿಸಲು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಶ್ವಾಸಾರ್ಹ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಹೊಸದೊಂದು ರಾಜಕೀಯ ಆಂದೋಲನ (Movement) ಅಥವಾ ಪ್ರತ್ಯೇಕ ಪಕ್ಷವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸುದ್ದಿಯ ಹಿನ್ನೆಲೆ ಮತ್ತು ಪ್ರಮುಖ ಅಂಶಗಳು:

ಸ್ವತಂತ್ರ ಹಾದಿ ಹಿಡಿಯುವ ಮುನ್ಸೂಚನೆ: ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಬಳಿಕ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಚೈತನ್ಯ ತಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ನಾಯಕತ್ವದ ಕೆಲವು ನಿರ್ಧಾರಗಳು ಹಾಗೂ ಪ್ರಾದೇಶಿಕ ರಾಜಕೀಯ ಸಮೀಕರಣಗಳ ಕಾರಣದಿಂದಾಗಿ ಅವರು ಸ್ವತಂತ್ರ ಹಾದಿ ಹಿಡಿಯಲು ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಹೊಸ ಚಳವಳಿಯ ರೂಪರೇಷೆ: ಕೇವಲ ಸಾಂಪ್ರದಾಯಿಕ ರಾಜಕೀಯ ಪಕ್ಷವಾಗಿ ಮಾತ್ರವಲ್ಲದೆ, ತಮಿಳುನಾಡಿನ ಯುವಕರನ್ನು ಸೆಳೆಯುವಂತಹ ಮತ್ತು ದ್ರಾವಿಡ ರಾಜಕೀಯಕ್ಕೆ ಪರ್ಯಾಯವಾಗಬಲ್ಲ ಹೊಸ ಸಮಾಜಮುಖಿ ಆಂದೋಲನವನ್ನು ರೂಪಿಸಲು ಅವರು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರದ ವಿರುದ್ಧ ಅಸಮಾಧಾನಕ್ಕೆ ಕಾರಣಗಳೇನು?

ಮೂಲಗಳ ಪ್ರಕಾರ, ದೆಹಲಿ ನಾಯಕರ ನಿರಂತರ ಹಸ್ತಕ್ಷೇಪ ಮತ್ತು ತಮಿಳುನಾಡಿನ ಸ್ಥಳೀಯ ರಾಜಕೀಯ ಸೂಕ್ಷ್ಮತೆಗಳನ್ನು ನಿರ್ಲಕ್ಷಿಸುತ್ತಿರುವುದು ಅಣ್ಣಾಮಲೈ ಅವರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ತ್ರಿಭಾಷಾ ನೀತಿಯ ವಿರೋಧ: ಇತ್ತೀಚೆಗೆ ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಕಟಿಸಿದ ಸಿಬಿಎಸ್‌ಇ (CBSE) 9ನೇ ತರಗತಿಯ ತ್ರಿಭಾಷಾ ನೀತಿಯ ಕಡ್ಡಾಯ ಜಾರಿ ಆದೇಶದ ವಿರುದ್ಧ ಅಣ್ಣಾಮಲೈ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನಗತ್ಯ ಮಾನಸಿಕ ಒತ್ತಡ ತರುತ್ತದೆ ಎಂದು ಅವರು ನೇರವಾಗಿಯೇ ಕೇಂದ್ರಕ್ಕೆ ಪತ್ರ ಬರೆದು ಆದೇಶ ಹಿಂಪಡೆಯಲು ಆಗ್ರಹಿಸಿದ್ದರು. ತಮಿಳುನಾಡಿನ ಭಾಷಾ ರಾಜಕಾರಣದ ಹಿನ್ನೆಲೆಯಲ್ಲಿ ಕೇಂದ್ರದ ಈ ನಡೆ ಅವರಿಗೆ ಮುಜುಗರ ತಂದಿತ್ತು.

AIADMK ಜೊತೆಗಿನ ಮೈತ್ರಿ ಒತ್ತಡ: ತಮಿಳುನಾಡಿನಲ್ಲಿ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ದೆಹಲಿ ಹೈಕಮಾಂಡ್ ಒತ್ತಡ ಹೇರಿತ್ತು. ಆದರೆ ಈ ಮೈತ್ರಿಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬುದು ಅಣ್ಣಾಮಲೈ ವಾದವಾಗಿತ್ತು. ಕೊನೆಗೆ ಅವರ ಮಾತನ್ನು ಮೀರಿ ಮೈತ್ರಿ ರಾಜಕಾರಣಕ್ಕೆ ಹೈಕಮಾಂಡ್ ಮುಂದಾಗಿದ್ದು ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಮುಂದಿನ ಪಕ್ಷ ಅಥವಾ ಆಂದೋಲನದ ಹೆಸರೇನು?

ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಅತಿ ದೊಡ್ಡ ಪ್ರಶ್ನೆಯೆಂದರೆ ಅಣ್ಣಾಮಲೈ ಅವರ ಮುಂದಿನ ಸಂಘಟನೆಯ ಹೆಸರೇನು ಎಂಬುದು.

ಸದ್ಯದ ಮಾಹಿತಿ ಪ್ರಕಾರ, ಅಣ್ಣಾಮಲೈ ಅವರು ತಕ್ಷಣವೇ ಪೂರ್ಣಪ್ರಮಾಣದ ರಾಜಕೀಯ ಪಕ್ಷ ಘೋಷಿಸುವ ಬದಲು, ಮೊದಲ ಆರು ತಿಂಗಳು ಒಂದು ಪ್ರಬಲ ಸಾಮಾಜಿಕ-ರಾಜಕೀಯ ಆಂದೋಲನವನ್ನು (Movement) ಮುನ್ನಡೆಸಲಿದ್ದಾರೆ.

ಸದ್ಯ ಅವರು “ವಿ ದ ಲೀಡರ್ಸ್” (We the Leaders) ಹೆಸರಿನ ಸ್ವಯಂಸೇವಾ ಸಂಸ್ಥೆಯನ್ನು (Non-profit) ನಡೆಸುತ್ತಿದ್ದು, ಇದೇ ಹೆಸರನ್ನು ಅಥವಾ ತಮಿಳುನಾಡಿನ ಮಣ್ಣಿನ ಸೊಗಡಿನ “ಎನ್ ಮನ್, ಎನ್ ಮಕ್ಕಳ್” (ನನ್ನ ಮಣ್ಣು, ನನ್ನ ಜನ) ಎಂಬ ಘೋಷಣೆಯನ್ನೇ ಆಧರಿಸಿ ಹೊಸ ಸಂಘಟನೆ ಅಥವಾ ಪಕ್ಷಕ್ಕೆ ನಾಮಕರಣ ಮಾಡುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ದ್ರಾವಿಡ ರಾಜಕೀಯಕ್ಕೆ ಪರ್ಯಾಯ: ತಮಿಳುನಾಡಿನಲ್ಲಿ ಸದ್ಯ ಆಡಳಿತದಲ್ಲಿರುವ ಡಿಎಂಕೆ ಮತ್ತು ವಿಪಕ್ಷ ಎಐಎಡಿಎಂಕೆ ನಡುವಿನ ರಾಜಕೀಯ ಜಿದ್ದಾಜಿದ್ದಿನ ಮಧ್ಯೆ, ಮೂರನೇ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಲು ಅಣ್ಣಾಮಲೈ ಈ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಹೊಸ ಪಕ್ಷ ಅಥವಾ ಚಳವಳಿಯ ಕುರಿತು ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದರೂ, ಈ ಬಗ್ಗೆ ಸ್ವತಃ ಕೆ. ಅಣ್ಣಾಮಲೈ ಅವರಾಗಲಿ ಅಥವಾ ಬಿಜೆಪಿ ಹೈಕಮಾಂಡ್ ಆಗಲಿ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಸ್ಪಷ್ಟನೆಯನ್ನು ನೀಡಿಲ್ಲ.

ಈ ರಾಜಕೀಯ ಬೆಳವಣಿಗೆಯು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ದಕ್ಷಿಣದ ರಾಜಕೀಯದ ಚಿತ್ರಣವನ್ನೇ ಬದಲಿಸುವ ಸಾಧ್ಯತೆಯಿದೆ.




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Educational

NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದ: ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜೂನ್ 6 ರಂದು ದೆಹಲಿಯಲ್ಲಿ ಅಭಿಜಿತ್ ದೀಪ್ಕೆ ಶಾಂತಿಯುತ ಪ್ರತಿಭಟನೆ

Published

on

ನವದೆಹಲಿ: NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ನವದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ‘ಕಾಕ್ರೋಚ್ ಜನತಾ ಪಕ್ಷ’ (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಜೂನ್ 6 ರಂದು ಭಾರತಕ್ಕೆ ಮರಳುತ್ತಿರುವುದಾಗಿ ಸೋಮವಾರ ಘೋಷಿಸಿದ್ದಾರೆ.

ಹಿನ್ನೆಲೆ: ‘ಜಿರಳೆ’ ಪದದ ವಿಡಂಬನಾತ್ಮಕ ಚಳವಳಿ

ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ವಿಚಾರಣೆಗಳ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಬಿ.ಆರ್. ಗವಾಯಿ ಅವರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಉಲ್ಲೇಖಿಸಿ “ಜಿರಳೆಗಳು” ಎಂಬ ಪದವನ್ನು ಬಳಸಿದ್ದರು. ತಾವು ಬಳಸಿದ ಪದವು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿರಲಿಲ್ಲ ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಸಿಜೆಐ ಸ್ಪಷ್ಟಪಡಿಸಿದರಾದರೂ, ಇದು ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ಬೋಸ್ಟನ್‌ನಲ್ಲಿರುವ ತಂತ್ರಜ್ಞ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭವನ್ನು ಬಳಸಿಕೊಂಡು, ‘ಜಿರಳೆ’ ಪದವನ್ನು ಯುವ ಕ್ರಿಯಾಶೀಲತೆಯ ಸಂಕೇತವಾಗಿ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ತರುವ ಅಭಿಯಾನವಾಗಿ ಪರಿವರ್ತಿಸಿದರು. ಸಿಜೆಪಿ (Cockroach Janata Party) ಎಂಬ ವಿಡಂಬನಾತ್ಮಕ ರಾಜಕೀಯ ಚಳವಳಿಯನ್ನು ಪ್ರಾರಂಭಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದರು.

ಧರ್ಮೇಂದ್ರ ಪ್ರಧಾನ್ ವಿರುದ್ಧ ತೀವ್ರಗೊಂಡ ಅಭಿಯಾನ

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ದೀಪ್ಕೆ, ನೀಟ್ ಪತ್ರಿಕೆ ಸೋರಿಕೆ ಮತ್ತು ತದನಂತರದ ಅಡಚಣೆಗಳು ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

“ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಅಭಿಯಾನವನ್ನು ತೀವ್ರಗೊಳಿಸಲು ನಾನು ಭಾರತಕ್ಕೆ ಮರಳಲು ನಿರ್ಧರಿಸಿದ್ದೇನೆ. ಭಾರತದ ಸಂವಿಧಾನದ ಮಾರ್ಗವನ್ನು ಅನುಸರಿಸಿ ನಾವೆಲ್ಲರೂ ಒಟ್ಟಾಗಿ ಸೇರಿ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಲು ಶಾಂತಿಯುತವಾಗಿ ಧ್ವನಿ ಎತ್ತುವ ಸಮಯ ಬಂದಿದೆ.” – ಅಭಿಜಿತ್ ದೀಪ್ಕೆ

ಪ್ರತಿಭಟನೆಯ ನಿಖರವಾದ ಕಾರಣಗಳು, ವಿದ್ಯಾರ್ಥಿಗಳ ಹಿತರಕ್ಷಣೆ ಮತ್ತು ಶಿಕ್ಷಣ ಇಲಾಖೆಯ ಇತ್ತೀಚಿನ ವಿದ್ಯಮಾನಗಳ ಸುತ್ತ ಇರಲಿದ್ದು, ದೇಶದ ವಿವಿಧ ಭಾಗಗಳಿಂದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.




Continue Reading

Entertainment

ದೇಶದಲ್ಲಿ ಹೊಸ ಸಂಚಲನ: ಬಕ್ರೀದ್‌ಗೆ ‘ಗೋಹತ್ಯೆ’ ಮಾಡಲ್ಲ ಎಂದು ಒಕ್ಕೊರಲಿನಿಂದ ಘೋಷಿಸಿದ ಮುಸ್ಲಿಂ ಧರ್ಮಗುರುಗಳು!

Published

on

ನವದೆಹಲಿ: ದಶಕಗಳಿಂದ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ತೀವ್ರ ಸಂಘರ್ಷ ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಗೋಹತ್ಯೆ ವಿಚಾರದಲ್ಲಿ ಇದೀಗ ದೇಶದ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅತಿ ದೊಡ್ಡ ಮತ್ತು ಅಭೂತಪೂರ್ವ ತಿರುವು ಸಿಕ್ಕಿದೆ. “ನಾವು ಇನ್ಮುಂದೆ ಗೋಹತ್ಯೆ ಮಾಡುವುದಿಲ್ಲ; ಕೇಂದ್ರ ಸರ್ಕಾರ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಲಿ” ಎಂದು ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳು ಹಾಗೂ ಪ್ರಭಾವಿ ಇಸ್ಲಾಮಿಕ್ ಸಂಘಟನೆಗಳು ಒಕ್ಕೊರಲಿನಿಂದ ಆಗ್ರಹಿಸಿವೆ.

ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ನಾಯಕರೇ ಸ್ವತಃ ಬೀದಿಗಿಳಿದು, ತಮ್ಮ ಸಮುದಾಯದ ಯುವಕರಿಗೆ ಹಸುಗಳನ್ನು ಬಲಿ ಕೊಡದಂತೆ ಕರೆ ನೀಡುತ್ತಿರುವುದು ದೇಶಾದ್ಯಂತ ಭಾರಿ ಸಂಚಲನ ಹಾಗೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಮುಸ್ಲಿಂ ಸಂಘಟನೆಗಳ ಪ್ರಮುಖ ನಾಯಕರ ಹೇಳಿಕೆಗಳು ಮತ್ತು ಆಗ್ರಹಗಳು:

ಮೌಲಾನ ಅರ್ಷದ್ ಮದನಿ (ಅಧ್ಯಕ್ಷರು, ಜಮಿಯತ್ ಉಲೇಮಾ ಎ ಹಿಂದ್): ಭಾರತದ ಅತ್ಯಂತ ಪ್ರಭಾವಿ ಮುಸ್ಲಿಂ ಸಂಘಟನೆಯಾದ ಜಮಿಯತ್ ಉಲೇಮಾ ಎ ಹಿಂದ್ ಮುಖ್ಯಸ್ಥರಾದ ಮೌಲಾನ ಅರ್ಷದ್ ಮದನಿ ಅವರು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲಿನ ಬೇಡಿಕೆಯಿಟ್ಟಿದ್ದಾರೆ. “ಪ್ರಧಾನಿಯವರೇ, ನೀವು ನವಿಲನ್ನು ಹೇಗೆ ರಾಷ್ಟ್ರೀಯ ಪಕ್ಷಿ ಎಂದು ಘೋಷಿಸಿದ್ದೀರೋ, ಅದೇ ರೀತಿ ಹಸುವನ್ನು ಕೂಡ ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ. ನಾವೆಲ್ಲರೂ ಅದನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. ಈ ಮೂಲಕ ಗೋಹತ್ಯೆಯ ಹೆಸರಿನಲ್ಲಿ ನಡೆಯುವ ಗುಂಪು ದಾಳಿಗಳಿಗೆ (ಮಾಬ್ ಲಿಂಚಿಂಗ್) ಶಾಶ್ವತ ಅಂತ್ಯ ಹಾಡಿ” ಎಂದು ಆಗ್ರಹಿಸಿದ್ದಾರೆ.

ಮೌಲಾನ ಶಹಾಬುದ್ದೀನ್ ರಿಜ್ವಿ (ಆಲ್ ಇಂಡಿಯಾ ಮುಸ್ಲಿಂ ಜಮಾತ್): ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ಸಿಗಬೇಕು ಎಂಬ ಮದನಿಯವರ ನಿಲುವನ್ನು ಬೆಂಬಲಿಸಿರುವ ಇವರು, ಮುಸ್ಲಿಂ ಸಮುದಾಯದ ಪರವಾಗಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಅಧಿಕೃತ ಮನವಿ ಪತ್ರ (ಮೆಮೋರಾಂಡಂ) ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಉಬೈದುಲ್ಲ ಕಾಸ್ಮಿ (ನಾಯಕರು, ಆಲ್ ಇಂಡಿಯಾ ಪಸ್ಮಾಂಡ ಉಲೇಮಾ ಬೋರ್ಡ್): ಮುಸ್ಲಿಂ ಯುವಕರಿಗೆ ಕಡಕ್ ಸಂದೇಶ ನೀಡಿರುವ ಇವರು, “ಕುರ್ಬಾನಿ ಎಂದರೆ ದೇವರ ಆರಾಧನೆ. ಇಸ್ಲಾಂ ಧರ್ಮದಲ್ಲಿ ಬಲಿ ಕೊಡಲು ಆಡು, ಕುರಿ ಅಥವಾ ಒಂಟೆಗಳ ಆಯ್ಕೆ ಇರುವಾಗ ಹಸುವನ್ನೇ ಏಕೆ ಕೊಲ್ಲಬೇಕು? ಎಲ್ಲಿ ಗೋಹತ್ಯೆ ನಿಷೇಧ ಕಾನೂನು ಬಿಗಿಯಾಗಿದೆಯೋ, ಅಲ್ಲಿ ಹಸುಗಳನ್ನು ಕೊಂದು ಮುಸ್ಲಿಂ ಯುವಕರು ಅನಾವಶ್ಯಕವಾಗಿ ಜೈಲಿಗೆ ಹೋಗಬೇಡಿ” ಎಂದು ಕಿವಿಮಾತು ಹೇಳಿದ್ದಾರೆ.

ಮೌಲಾನ ಯಾಸುಬ್ ಅಬ್ಬಾಸ್ (ಶಿಯಾ ಪರ್ಸನಲ್ ಲಾ ಬೋರ್ಡ್): “ನಮ್ಮ ಹಿಂದೂ ಸಹೋದರರು ಹಸುವನ್ನು ದೇವರಂತೆ ಪೂಜಿಸುತ್ತಾರೆ ಮತ್ತು ತಾಯಿಯ ಸ್ಥಾನ ನೀಡಿದ್ದಾರೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ಹಸುವನ್ನು ಕೊಂದರೆ ಅವರ ಭಾವನೆಗಳಿಗೆ ಧಕ್ಕೆಯಾಗುತ್ತದೆ, ಆದ್ದರಿಂದ ದೇಶದಲ್ಲಿ ಗೋಹತ್ಯೆ ಸಂಪೂರ್ಣವಾಗಿ ಬಂದ್ ಆಗಬೇಕು” ಎಂದು ಪ್ರತಿಪಾದಿಸಿದ್ದಾರೆ.

ಸಿರಾಜ್ ಕುರೇಶಿ (ಅಧ್ಯಕ್ಷರು, ಕುರೇಶಿ ಜಮಾತ್ – ಮಾಂಸ ವ್ಯಾಪಾರಿಗಳ ಸಂಘಟನೆ): ಆಶ್ಚರ್ಯಕರವಾಗಿ, ಮಾಂಸದ ವ್ಯಾಪಾರದಲ್ಲಿ ತೊಡಗಿರುವ ಅತಿ ದೊಡ್ಡ ಸಂಘಟನೆಯ ಮುಖ್ಯಸ್ಥರಾದ ಸಿರಾಜ್ ಕುರೇಶಿ ಅವರು ಕೂಡ ಗೋಹತ್ಯೆ ನಿಲ್ಲಿಸುವ ಧರ್ಮಗುರುಗಳ ಈ ಐತಿಹಾಸಿಕ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಬದಲಾವಣೆಯ ಗಾಳಿ:

ಅಸ್ಸಾಂನಲ್ಲಿ ಮುಸ್ಲಿಂ ಸಮಿತಿಗಳ ಬಿಗಿ ನಿಯಮ: ಹಿಮಂತ ಬಿಸ್ವ ಶರ್ಮ ನೇತೃತ್ವದ ಅಸ್ಸಾಂನ ಬೊಂಗೈಗಾವ್, ದುಬ್ರಿ ಮತ್ತು ಕಚಾರ್ ಜಿಲ್ಲೆಗಳ ಇದ್ಕಾ ಕಮಿಟಿಗಳು (ಹಬ್ಬದ ಮೇಲ್ವಿಚಾರಣಾ ಸಮಿತಿಗಳು) ಕಟ್ಟುನಿಟ್ಟಿನ ಆದೇಶ ಹೊರಡಿಸಿವೆ. ಬಕ್ರೀದ್‌ಗೆ ಯಾರೂ ಗೋಹತ್ಯೆ ಮಾಡುವಂತಿಲ್ಲ. ಹಸುವಿನ ಮಾಂಸದ ಫೋಟೋ ಅಥವಾ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ, ಅಂತಹವರನ್ನು ಸ್ವತಃ ಮುಸ್ಲಿಂ ಸಮಿತಿಯವರೇ ಪೊಲೀಸರಿಗೆ ಹಿಡಿದುಕೊಡುವುದಾಗಿ ಎಚ್ಚರಿಸಿದ್ದಾರೆ. ಈ ಮಹತ್ತರ ಬದಲಾವಣೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾದರಿ ಘಟನೆ: ಇಷ್ಟು ದಿನ ಗೋಹತ್ಯೆಯ ಪರ ಧ್ವನಿ ಎತ್ತುತ್ತಿದ್ದ ಎಜೆಯುಪಿ ನಾಯಕ ಹುಮಾಯುನ್ ಕಬೀರ್ ಅವರು ಯು-ಟರ್ನ್ ಹೊಡೆದಿದ್ದು, ಹಸುವನ್ನು ‘ಗೋಮಾತೆ’ ಎಂದು ಕರೆದಿದ್ದಾರೆ. ಇತ್ತೀಚೆಗೆ ಬಂಗಾಳದ ಮಗ್ರಹತ್ತ ಸಂತೆಯಲ್ಲಿ ಹಿಂದೂ ವ್ಯಾಪಾರಿಗಳು ಹಸುಗಳನ್ನು ಮಾರಲು ತಂದಾಗ, ಅಲ್ಲಿನ ಮುಸ್ಲಿಂ ಯುವಕರು “ನೀವು ಪೂಜಿಸುವ ಗೋಮಾತೆಯನ್ನು ನಮಗೆ ಕಡಿಯಲು ಏಕೆ ತಂದಿದ್ದೀರಿ? ನಾವು ಇನ್ನು ಮುಂದೆ ಹಸುಗಳನ್ನು ಖರೀದಿಸುವುದಿಲ್ಲ, ವಾಪಸ್ ಕೊಂಡೊಯ್ದು ಸಾಕಿ” ಎಂದು ಕಳುಹಿಸಿಕೊಡುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ.

ಇಸ್ಲಾಂ ಧರ್ಮಗ್ರಂಥ ಹಾಗೂ ಇತಿಹಾಸ ಏನು ಹೇಳುತ್ತದೆ?

ಇಸ್ಲಾಮಿಕ್ ಪಂಡಿತರ ಪ್ರಕಾರ, ಇಸ್ಲಾಂ ಧರ್ಮದಲ್ಲಿ ಹಸುವನ್ನೇ ಬಲಿ ಕೊಡಬೇಕೆಂದು ಎಲ್ಲಿಯೂ ಕಡ್ಡಾಯವಾಗಿ ಹೇಳಿಲ್ಲ. ಕುರಾನ್‌ನ ಅತಿ ದೊಡ್ಡ ಅಧ್ಯಾಯವಾದ ‘ಸೂರ್ ಅಲ್ ಬಕ್ರಾ’ ಎಂದರೆ ‘ಹಸು’ ಎಂದೇ ಅರ್ಥ. ಹದೀಸ್ ಪ್ರಕಾರ, ಹಸುವಿನ ಹಾಲು ಮತ್ತು ತುಪ್ಪ ಔಷಧಿಯ ಗುಣ ಹೊಂದಿದ್ದು, ಅದರ ಮಾಂಸ ರೋಗಕ್ಕೆ ಕಾರಣವಾಗಬಹುದು ಎನ್ನಲಾಗಿದೆ.

ಇತಿಹಾಸದಲ್ಲಿ ಮೊಘಲ್ ದೊರೆಗಳಾದ ಬಾಬರ್, ಅಕ್ಬರ್ ಮತ್ತು ಜಹಾಂಗೀರ್ ಕೂಡ ಹಿಂದೂಗಳ ಭಾವನೆಗೆ ಗೌರವ ಕೊಟ್ಟು ತಮ್ಮ ಆಡಳಿತದಲ್ಲಿ ಗೋಹತ್ಯೆಯನ್ನು ನಿಷೇಧಿಸಿದ್ದರು. ಜೊತೆಗೆ 1958ರ ‘ಮೊಹಮ್ಮದ್ ಹನೀಫ್ ಕುರೇಶಿ’ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಕೂಡ “ಗೋಹತ್ಯೆ ಇಸ್ಲಾಂನ ಕಡ್ಡಾಯ ಆಚರಣೆಯಲ್ಲ” ಎಂದು ಸ್ಪಷ್ಟಪಡಿಸಿತ್ತು.

ಇದರ ಹಿಂದೆ ರಾಜಕೀಯ ತಂತ್ರ ಅಡಗಿದೆಯೇ?: ವಿಶ್ಲೇಷಕರ ಅಭಿಮತ

ಮುಸ್ಲಿಂ ನಾಯಕರ ಈ ದಿಢೀರ್ ಹೆಜ್ಜೆಯ ಹಿಂದೆ ಒಂದು ಮಾಸ್ಟರ್ ರಾಜಕೀಯ ರಣತಂತ್ರವೂ ಅಡಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ:

ಬಿಜೆಪಿಯ ಅಸ್ತ್ರಕ್ಕೆ ಬ್ರೇಕ್: ಇಷ್ಟು ದಿನ ಗೋಹತ್ಯೆ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ಪಡೆಯುತ್ತಿದ್ದ ರಾಜಕೀಯ ಲಾಭ ಹಾಗೂ ಧ್ರುವೀಕರಣವನ್ನು ತಡೆಯಲು ಮುಸ್ಲಿಂ ನಾಯಕರು ಈ ತಂತ್ರ ಹೂಡಿದ್ದಾರೆ. ಮುಸ್ಲಿಮರೇ ಗೋಹತ್ಯೆ ಬೇಡ ಎಂದ ಮೇಲೆ ಬಿಜೆಪಿಗೆ ಈ ವಿಷಯದಲ್ಲಿ ಮಾತನಾಡಲು ರಾಜಕೀಯ ಜಾಗವಿರುವುದಿಲ್ಲ.

ಕೇಂದ್ರ ಸರ್ಕಾರಕ್ಕೆ ಧರ್ಮಸಂಕಟ: ಹಸುವನ್ನು ರಾಷ್ಟ್ರೀಯ ಪ್ರಾಣಿ ಮಾಡಿ ಎಂದು ಮುಸ್ಲಿಮರು ಬೇಡಿಕೆ ಇಟ್ಟಿರುವುದು ಬಿಜೆಪಿಗೆ ದೊಡ್ಡ ತಲೆನೋವಾಗಲಿದೆ. ಏಕೆಂದರೆ ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಲ್ಲಿ ಕ್ರೈಸ್ತರು ಹೆಚ್ಚಾಗಿದ್ದಾರೆ ಮತ್ತು ಗೋಮಾಂಸ ಸೇವನೆ ಸಾಮಾನ್ಯವಾಗಿದೆ. ಒಂದು ವೇಳೆ ಕೇಂದ್ರ ಸರ್ಕಾರ ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ, ಆ ರಾಜ್ಯಗಳಲ್ಲಿನ ಜನರು ಬಿಜೆಪಿ ವಿರುದ್ಧ ತಿರುಗಿಬೀಳುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, ಮುಸ್ಲಿಂ ಧರ್ಮಗುರುಗಳು ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರವು ದೇಶದ ಧಾರ್ಮಿಕ ಹಾಗೂ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಹೊಸ ‘ಗೋಕ್ರಾಂತಿ’ ಭಾರತದಲ್ಲಿ ಕೋಮು ಸೌಹಾರ್ಧತೆಯ ಹೊಸ ಯುಗಕ್ಕೆ ನಾಂದಿ ಹಾಡಲಿದೆಯೇ ಅಥವಾ ಕೇವಲ ರಾಜಕೀಯ ತಂತ್ರವಾಗಿ ಉಳಿಯಲಿದೆಯೇ ಎಂಬುದನ್ನು ಮುಂಬರುವ ದಿನಗಳೇ ನಿರ್ಧರಿಸಬೇಕಿದೆ.




Continue Reading

Condolences

ಶ್ರೀಪೆರಂಬದೂರಿನಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಭವ್ಯ ಸಮಾರೋಪ: 35ನೇ ವರ್ಷದ ಐತಿಹಾಸಿಕ ಯಾತ್ರೆ ಸಂಪನ್ನ

Published

on

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ (INTUC) ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಐತಿಹಾಸಿಕ ‘ರಾಜೀವ್ ಗಾಂಧಿ ಜ್ಯೋತಿ ಯಾತ್ರೆ’ಯು ಮೇ 21ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡಿದೆ.

ಭಾರತದ ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ರಾಜೀವ್ ಗಾಂಧೀಜಿ ಅವರ 35ನೇ ವರ್ಷದ ಸ್ಮರಣಾ ದಿನ ಹಾಗೂ ಮರಣ ವಾರ್ಷಿಕೋತ್ಸವದ ಅಂಗವಾಗಿ, ಅವರ ಹುತಾತ್ಮ ಸ್ಥಳದ ಮುಂದೆ ಈ ಜ್ಯೋತಿಯನ್ನು ಇರಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಅದ್ಧೂರಿ ಚಾಲನೆ ಮತ್ತು ಸಾಗಿದ ಮಾರ್ಗ:

ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ , ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ , ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಮೇ 15, 2026 ರಂದು ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಈ ಜ್ಯೋತಿ ಯಾತ್ರೆಗೆ ಸಲೀಂ ಅಹಮದ್ ಮತ್ತು ಮಾಜಿ ಸಚಿವ ಎಚ್‌ ಎಂ. ರೇವಣ್ಣ ರವರ ಉಸ್ತುವಾರಿಯಲ್ಲಿ ಅದ್ಧೂರಿ ಚಾಲನೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಶಾಸಕರು ಮತ್ತು ಅನೇಕ ಇತರ ನಾಯಕರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ಉದ್ಘಾಟನೆಗೊಂಡಿತ್ತು.

ಬೆಂಗಳೂರಿನಿಂದ ಹೊರಟ ಜ್ಯೋತಿ ಯಾತ್ರೆಯು ನೆಲಮಂಗಲ, ಕುಣಿಗಲ್, ಯಡಿಯೂರು, ಚನ್ನರಾಯಪಟ್ಟಣ, ಹಾಸನ, ಹೊಳೇನರಸೀಪುರ, ಕೆ.ಆರ್. ನಗರ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಮೂಲಕ ಸಾಗಿತು. ನಂತರ ತಮಿಳುನಾಡಿನ ಸತ್ಯಮಂಗಲಂ, ಕೋಯಂಬತ್ತೂರು, ಅವಿನಾಶಿ, ಪೆರುಮನಲ್ಲೂರು, ಈರೋಡ್, ಭವಾನಿ, ಸೇಲಂ, ಅತ್ತೂರು, ಧರ್ಮಪುರಿ, ಕೃಷ್ಣಗಿರಿ, ತಿರುಪತ್ತೂರು, ಉತ್ತಂಗರಾಯ್, ಸಿಂಗಾರಪೇಟೆ, ಚೆಂಗಂ, ತಿರುವಣ್ಣಾಮಲೈ, ಜಿಂಜಿ, ತಿಂಡಿವನಂ ಮೂಲಕ ಪಾಂಡಿಚೇರಿಗೆ ಪ್ರವೇಶಿಸಿತು. ಅಲ್ಲಿಂದ ಮೇ 21ರಂದು ಬೆಳಿಗ್ಗೆ 8:30ಕ್ಕೆ ತಮಿಳುನಾಡಿನ ಶ್ರೀಪೆರಂಬದೂರನ್ನು ತಲುಪಿ ಮುಕ್ತಾಯಗೊಂಡಿತು.

ಜ್ಯೋತಿ ಸ್ವೀಕಾರ ಮತ್ತು ಯಾತ್ರೆಯ ಉದ್ದೇಶ:

ಮೇ 21ರಂದು ಬೆಳಿಗ್ಗೆ 8:30ಕ್ಕೆ ಶ್ರೀಪೆರಂಬದೂರಿನಲ್ಲಿ ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ (TNCC) ಮಾನ್ಯ ಅಧ್ಯಕ್ಷರಾದ ಶ್ರೀ ಕೆ. ಸೆಲ್ವಪೆರುಂತಗೈ ಜಿ ಅವರು ಜ್ಯೋತಿಯನ್ನು ಅಧಿಕೃತವಾಗಿ ಸ್ವೀಕರಿಸಿದರು.

ಈ ಯಾತ್ರೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷರು ಹಾಗೂ ಅಖಲ ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಅಧ್ಯಕ್ಷರಾದ ಶ್ರೀ ಆರ್. ದೊರೈವೇಲು ಮತ್ತು ಭಾರತ ರಾಜೀವ ಗಾಂಧೀ ಜ್ಯೋತಿ ಯಾತ್ರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಯಾತ್ರೆಯುದ್ದಕ್ಕೂ ಮಾರ್ಗಮಧ್ಯದಲ್ಲಿ ಅನೇಕ ರಸ್ತೆಬದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಾಜೀವ್ ಗಾಂಧೀಜಿಯವರ ಸಂದೇಶ, ಜೀವನ ಮತ್ತು ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪ್ರಚಾರ ಮಾಡಲಾಯಿತು.

ರಾಷ್ಟ್ರೀಯ ಐಕ್ಯತೆ, ಏಕತೆಯನ್ನು ಬಲಪಡಿಸುವುದು, ಸಹೋದರತ್ವದ ಸಂದೇಶವನ್ನು ಸಾರುವುದು ಹಾಗೂ ದೇಶದ ಶತ್ರುಗಳ ವಿರುದ್ಧ ಹೋರಾಡಲು ಜನರಲ್ಲಿ ಜಾಗೃತಿ ಮೂಡಿಸಿ, ಧೈರ್ಯ ಮತ್ತು ಬದ್ಧತೆಯನ್ನು ಬೆಳೆಸುವುದು ಈ ಯಾತ್ರೆಯ ಮುಖ್ಯ ಧ್ಯೇಯವಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಐತಿಹಾಸಿಕ ಜ್ಯೋತಿ ಯಾತ್ರೆಯನ್ನು ಅಖಿಲ ಭಾರತ ಆರ್.ಜಿ.ಜೆ.ವೈ. ಸಮಿತಿಯ (All India R.G.J.Y. Committee) ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಆರ್. ದೊರೈವೇಲು ಅವರ ಸಮರ್ಥ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ಇವರೊಂದಿಗೆ ಕಾರ್ಮಿಕ ವಿಭಾಗದ (Labour Cell) ರಾಜ್ಯ ಅಧ್ಯಕ್ಷರಾದ ಶ್ರೀ ಪುಟ್ಟಸ್ವಾಮಿ ಗೌಡ ಹಾಗೂ ಐಎನ್‌ಟಿಯುಸಿ (INTUC) ರಾಜ್ಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ವೆಂಕಟೇಶ್ ಅವರು ಪ್ರಮುಖವಾಗಿ ಭಾಗವಹಿಸಿ ಯಾತ್ರೆಯ ಯಶಸ್ಸಿಗೆ ಶ್ರಮಿಸಿದರು. ಸಮಾರೋಪ ಕಾರ್ಯಕ್ರಮದ ಕೊನೆಯಲ್ಲಿ, ಯಾತ್ರೆಯುದ್ದಕ್ಕೂ ಸಾಥ್ ನೀಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹನೀಫ್ ಬಗ್ಗು ಮೂಲೆ, ರಾಜ್ಯ ಉಪಾಧ್ಯಕ್ಷರಾದ ಸಿದ್ದಿಕ್ ಸೂರ್ಯ ಹಾಗೂ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು. ಅಂತಿಮವಾಗಿ, “ನಾವು ವಿಶ್ವ ಶಾಂತಿಗಾಗಿ ಪ್ರಾರ್ಥಿಸುತ್ತೇವೆ” ಎಂಬ ಉದಾತ್ತ ಸಂದೇಶದೊಂದಿಗೆ ಈ ಬಾರಿಯ 35ನೇ ವರ್ಷದ ಜ್ಯೋತಿ ಯಾತ್ರೆಯು ಅತ್ಯಂತ ಭವ್ಯವಾಗಿ ಮುಕ್ತಾಯಗೊಂಡಿದೆ.

Continue Reading

Trending

Copyright © 2025 Deevatige

error: Content is protected !!