Article
ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿ: ಜನ್ಮತಾಳಿತು ವಿಡಂಬನಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ (CJP)’!
- Share
- Tweet /home/u338848369/domains/deevatigenews.com/public_html/wp-content/plugins/mvp-social-buttons/mvp-social-buttons.php on line 72
https://deevatigenews.com/wp-content/uploads/2026/05/111-1-1000x600.jpg&description=ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿ: ಜನ್ಮತಾಳಿತು ವಿಡಂಬನಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ (CJP)’!', 'pinterestShare', 'width=750,height=350'); return false;" title="Pin This Post">
ನವದೆಹಲಿ: ಭಾರತೀಯ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ವಿಲಕ್ಷಣ ಹಾಗೂ ಅಷ್ಟೇ ರೋಚಕ ವಿದ್ಯಮಾನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೇಶದ ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ (ಕಾಕ್ರೋಚ್) ಹೋಲಿಸಿದ ಹೇಳಿಕೆಯೊಂದಕ್ಕೆ ಪ್ರತಿಯಾಗಿ ಯುವಸಮೂಹವೇ ಸೇರಿ ‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party – CJP) ಎಂಬ ಡಿಜಿಟಲ್ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದೆ. ಕೇವಲ ನಾಲ್ಕೈದು ದಿನಗಳಲ್ಲೇ ಈ ಪಕ್ಷವು ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ವೇದಿಕೆಗಳಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆ ಹಾಗೂ ಲಕ್ಷಾಂತರ ಫಾಲೋವರ್ಸ್ಗಳನ್ನು ಗಳಿಸುವ ಮೂಲಕ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಪಕ್ಷದ ಉಗಮಕ್ಕೆ ಕಾರಣವೇನು?
ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿಚಾರಣೆಯೊಂದರ ಸಂದರ್ಭದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರು ನಿರುದ್ಯೋಗಿ ಯುವಕರು ನಕಲಿ ಪದವಿಗಳನ್ನು ಪಡೆದು ಆರ್ಟಿಐ ಕಾರ್ಯಕರ್ತರೋ, ಸೋಶಿಯಲ್ ಮೀಡಿಯಾ ಬಳಕೆದಾರರೋ ಆಗಿ ಎಲ್ಲರ ಮೇಲೂ ದಾಳಿ ಮಾಡುತ್ತಿದ್ದಾರೆ ಎಂಬ ಅರ್ಥದಲ್ಲಿ ಮಾತನಾಡುತ್ತಾ, ಅವರನ್ನು ‘ಜಿರಳೆಗಳು’ ಮತ್ತು ‘ಸಮಾಜದ ಪರಾವಲಂಬಿಗಳು’ ಎಂದು ಹೋಲಿಸಿದ್ದರು ಎನ್ನಲಾದ ವರದಿಗಳು ಹರಿದಾಡಿದ್ದವು. (ನಂತರ ಸಿಜೆಐ ಅವರು ಈ ಬಗ್ಗೆ ಸ್ಪಷ್ಟನೆ ನೀಡಿ, ತಪ್ಪು ತಿಳುವಳಿಕೆಯಿಂದ ನನ್ನ ಹೇಳಿಕೆಯನ್ನು ಬಿಂಬಿಸಲಾಗಿದೆ ಎಂದು ಹೇಳಿದ್ದರು).
ಆದರೆ, ಈ ಕಠಿಣ ಪದ ಬಳಕೆಯಿಂದ ಬೇಸತ್ತ ಯುವಕರು, ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಲು ವಿಡಂಬನೆಯ ಹಾದಿ ಹಿಡಿದರು. “ನಮ್ಮನ್ನು ಜಿರಳೆ ಎನ್ನುವುದಾದರೆ, ದೇಶದ ಎಲ್ಲಾ ಜಿರಳೆಗಳು ಒಂದಾಗೋಣ” ಎಂಬ ಪರಿಕಲ್ಪನೆಯೊಂದಿಗೆ ಮೇ 16, 2026 ರಂದು ಈ ವಿಶಿಷ್ಟ ಕಾಕ್ರೋಚ್ ಜನತಾ ಪಾರ್ಟಿ (CJP) ಜನ್ಮತಾಳಿತು.
ಸ್ಥಾಪಕರು ಯಾರು? ಪ್ರಧಾನ ಕಚೇರಿ ಎಲ್ಲಿದೆ?
ಆಮ್ ಆದ್ಮಿ ಪಾರ್ಟಿಯ (AAP) ಮಾಜಿ ಸೋಶಿಯಲ್ ಮೀಡಿಯಾ ತಂತ್ರಜ್ಞ ಹಾಗೂ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂವಹನ ಓದುತ್ತಿರುವ 30 ವರ್ಷದ ಅಭಿಜೀತ್ ದೀಪ್ಕೆ ಎಂಬುವವರು ಈ ಪಕ್ಷದ ಸ್ಥಾಪಕರು. ಈ ಪಕ್ಷಕ್ಕೆ ಯಾವುದೇ ಭೌತಿಕ ಕಚೇರಿ ಇಲ್ಲ! “ಎಲ್ಲಿ ವೈಫೈ (Wi-Fi) ಸಿಗುತ್ತದೆಯೋ, ಅದೇ ನಮ್ಮ ಪಕ್ಷದ ಪ್ರಧಾನ ಕಚೇರಿ” ಎಂದು ಪಕ್ಷ ಘೋಷಿಸಿಕೊಂಡಿದೆ.
‘ಕಾಕ್ರೋಚ್ ಜನತಾ ಪಾರ್ಟಿ’ (Cockroach Janta Party – CJP) ತಾವು ನಿರುದ್ಯೋಗಿಗಳಾಗಿದ್ದಲ್ಲಿ ಈ ಪಾರ್ಟಿಗೆ ಸೇರಲು ಕೆಳಗಿನ ಲಿಂಕನ್ನು ಒತ್ತಿ
ಸದಸ್ಯರಾಗಲು ಇರಬೇಕಾದ ಅರ್ಹತೆಗಳೇನು?
ಸಿಜೆಪಿ ಪಕ್ಷದ ಸದಸ್ಯತ್ವ ಪಡೆಯಲು ಇಟ್ಟಿರುವ ಅರ್ಹತೆಗಳು ಸಂಪೂರ್ಣವಾಗಿ ಡಿಜಿಟಲ್ ತಲೆಮಾರಿನ (Gen Z) ಯುವಕರನ್ನು ಸೆಳೆಯುತ್ತಿವೆ:
ನಿರುದ್ಯೋಗಿಯಾಗಿರಬೇಕು (ಬಲವಂತವಾಗಿ, ಸ್ವಯಂಪ್ರೇರಿತರಾಗಿ ಅಥವಾ ತತ್ವದ ಆಧಾರದ ಮೇಲೆ).
ಸೋಮಾರಿ ಹಾಗೂ ಸದಾ ಆನ್ಲೈನ್ನಲ್ಲಿ ಕಾಲ ಕಳೆಯುವವರಾಗಿರಬೇಕು (Chronically Online).
ಜಾಲತಾಣಗಳಲ್ಲಿ ವೃತ್ತಿಪರರಂತೆ ಆಕ್ರೋಶ ಹೊರಹಾಕುವ (Rant) ಸಾಮರ್ಥ್ಯ ಹೊಂದಿರಬೇಕು.
ಪಕ್ಷದ ಅಧಿಕೃತ ವೆಬ್ಸೈಟ್ ಲಾಂಚ್ ಆದ ಕೆಲವೇ ದಿನಗಳಲ್ಲಿ ಸುಮಾರು 3.5 ലക്ഷಕ್ಕೂ ಅಧಿಕ ಯುವಕರು ಆನ್ಲೈನ್ ಫಾರ್ಮ್ ಮೂಲಕ ಸದಸ್ಯತ್ವ ಪಡೆದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಎಂಸಿ ಸಂಸದರ ಎಂಟ್ರಿ!
ಕೇವಲ ಸಾಮಾನ್ಯ ಯುವಕರಷ್ಟೇ ಅಲ್ಲದೆ, ಪ್ರಮುಖ ರಾಜಕಾರಣಿಗಳೂ ಈ ಮೀಮ್ಸ್ ಆಧಾರಿತ ರಾಜಕೀಯ ಪ್ರಯೋಗಕ್ಕೆ ಸಾಥ್ ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಮುಖ ಸಂಸದರಾದ ಮಹುವಾ ಮೊಯಿತ್ರಾ ಮತ್ತು ಕೀರ್ತಿ ಆಜಾದ್ ಇಬ್ಬರೂ ಈ ಪಕ್ಷಕ್ಕೆ ಸೇರ್ಪಡೆಯಾಗ ಬಯಸಿ ಟ್ವೀಟ್ ಮಾಡಿದ್ದರು. ಕೀರ್ತಿ ಆಜಾದ್ ಅವರಿಗೆ ಸಿಜೆಪಿ, “1983 ರ ವಿಶ್ವಕಪ್ ಗೆದ್ದಿರುವುದೇ ನಿಮ್ಮ ದೊಡ್ಡ ಅರ್ಹತೆ, ನಿಮಗೆ ಸ್ವಾಗತ” ಎಂದು ವಿಡಂಬನಾತ್ಮಕವಾಗಿಯೇ ಪ್ರತಿಕ್ರಿಯಿಸಿದೆ.
ಕಾಕ್ರೋಚ್ ಜನತಾ ಪಾರ್ಟಿಯ 5 ಮುಖ್ಯ ಪ್ರಣಾಳಿಕೆಗಳು:
ಹೆಸರು ವಿಡಂಬನೆಯಾಗಿದ್ದರೂ, ಪಕ್ಷವು ದೇಶದ ಗಂಭೀರ ಸಮಸ್ಯೆಗಳನ್ನು ಬಿಂಬಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ:
- ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಿಗೆ ಯಾವುದೇ ಕಾರಣಕ್ಕೂ ರಾಜ್ಯಸಭಾ ಸೀಟುಗಳನ್ನು ನೀಡಬಾರದು.
- ಪಕ್ಷಾಂತರ ಮಾಡುವ ಎಂಎಲ್ಎ ಹಾಗೂ ಎಂಪಿಗಳು ಮುಂದಿನ 20 ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಅಲಂಕರಿಸದಂತೆ ನಿಷೇಧ ಹೇರಬೇಕು.
- ಸಂಸತ್ತಿನಲ್ಲಿ ಮಹಿಳೆಯರಿಗೆ 50% ಮೀಸಲಾತಿ ನೀಡಬೇಕು.
- ಕಾರ್ಪೊರೇಟ್ ಮಾಲೀಕತ್ವದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
- ಆರ್ಟಿಐ (RTI) ವ್ಯಾಪ್ತಿಗೆ ಈ ಪಕ್ಷ ಒಳಪಡಲಿದ್ದು, ಯಾವುದೇ ರಹಸ್ಯ ದೇಣಿಗೆ ಅಥವಾ ಚುನಾವಣಾ ಬಾಂಡ್ಗಳನ್ನು ಸ್ವೀಕರಿಸುವುದಿಲ್ಲ. ಅಲ್ಲದೆ ಯಾವುದೇ ರಹಸ್ಯ ‘ಕಾಕ್ರೋಚ್ ಕೇರ್ಸ್ ಫಂಡ್’ ಸ್ಥಾಪಿಸುವುದಿಲ್ಲ.
ಡಿಜಿಟಲ್ ಲೋಕದಲ್ಲಿ ಭರ್ಜರಿ ಟ್ರೆಂಡ್:
ನೇಪಾಳದಲ್ಲಿ ಇತ್ತೀಚೆಗೆ ನಡೆದ ಜೆನ್-ಜೀ (Gen Z) ಯುವ ಕ್ರಾಂತಿಯ ಮಾದರಿಯಲ್ಲೇ ಭಾರತದಲ್ಲೂ ಈ ಅಭಿಯಾನ ಹರಡುತ್ತಿದೆ. ಜಿಎಸ್ಟಿ, ನಿರುದ್ಯೋಗ, ಪರೀಕ್ಷಾ ಅಕ್ರಮಗಳು (NEET ಮುಂತಾದವು) ಹಾಗೂ ಸಾಲದ ಸುಳಿಗೆ ಸಿಲುಕಿದರೂ ‘ಸಾಯದೆ ಬದುಕುವ ಜಿರಳೆಗಳಂತೆ’ ತಾವು ಸಮಾಜದಲ್ಲಿ ಹೋರಾಡುತ್ತಿದ್ದೇವೆ ಎಂದು ಯುವಕರು ಈ ಹೆಸರನ್ನು ಹೆಮ್ಮೆಯಿಂದ ಬಳಸುತ್ತಿದ್ದಾರೆ. ಸಿಜೆಪಿಗೆ ಪರ್ಯಾಯವಾಗಿ ಇಂಟರ್ನೆಟ್ನಲ್ಲಿ ‘ನ್ಯಾಷನಲ್ ಪ್ಯಾರಾಸಿಟಿಕ್ ಫ್ರಂಟ್’ (NPF) ಎಂಬ ಮತ್ತೊಂದು ವಿಡಂಬನಾತ್ಮಕ ಗುಂಪೂ ಸೃಷ್ಟಿಯಾಗಿದೆ.
ಚುನಾವಣಾ ಆಯೋಗದಲ್ಲಿ ಈ ಪಕ್ಷ ಅಧಿಕೃತವಾಗಿ ನೋಂದಣಿಯಾಗುತ್ತದೆಯೇ ಅಥವಾ ಕೇವಲ ಇಂಟರ್ನೆಟ್ನ ಮೀಮ್ಸ್ ಪ್ರಯೋಗವಾಗಿ ಉಳಿಯುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಆದರೆ, ಪ್ರಸ್ತುತ ದೇಶದ ನಿರುದ್ಯೋಗಿ ಯುವಸಮೂಹದ ಆಕ್ರೋಶ ಹಾಗೂ ಹತಾಶೆಯನ್ನು ವ್ಯಕ್ತಪಡಿಸಲು ಈ ‘ಕಾಕ್ರೋಚ್ ಜನತಾ ಪಾರ್ಟಿ’ ಒಂದು ದೊಡ್ಡ ವೇದಿಕೆಯಾಗಿ ಮಾರ್ಪಟ್ಟಿರುವುದಂತೂ ಸತ್ಯ.
ಈ ‘ಜಿರಳೆ ಪಕ್ಷ’ದ ಬೆಳವಣಿಗೆಯ ವೇಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ:
- ಇನ್ಸ್ಟಾಗ್ರಾಮ್ನಲ್ಲಿ ಇತಿಹಾಸ: ಕೇವಲ 5 ದಿನಗಳಲ್ಲಿ ಇದರ ಇನ್ಸ್ಟಾಗ್ರಾಮ್ ಖಾತೆ 1 ಕೋಟಿಗೂ ಅಧಿಕ (12 Million+) ಫಾಲೋವರ್ಸ್ ದಾಟಿದೆ. ಇದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾದ ಬಿಜೆಪಿಯ ಅಧಿಕೃತ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಗಿಂತಲೂ (ಸುಮಾರು 8.8 ಮಿಲಿಯನ್) ಹೆಚ್ಚಾಗಿದೆ!
- ವೆಬ್ಸೈಟ್ ನೋಂದಣಿ: ಇದರ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ 3.5 ಲಕ್ಷಕ್ಕೂ ಹೆಚ್ಚು ಯುವಕರು ಸದಸ್ಯರಾಗಿ ನೋಂದಾಯಿಸಿಕೊಂಡಿದ್ದಾರೆ.
2. ಇದೊಂದು ನಿಜವಾದ ರಾಜಕೀಯ ಪಕ್ಷವಾಗಬಹುದೇ?
- ಚುನಾವಣಾ ಕಣಕ್ಕೆ ಎಂಟ್ರಿ: ಇದು ಕೇವಲ ಆನ್ಲೈನ್ ತಮಾಷೆಯಾಗಿ ಉಳಿದಿಲ್ಲ. ಬಿಹಾರದ ಮುಂಬರುವ ‘ಬಂಕಿಪುರ ವಿಧಾನಸಭಾ ಉಪಚುನಾವಣೆ’ಯಲ್ಲಿ ಈ ಮೂವ್ಮೆಂಟ್ನ ಬೆಂಬಲಿಗರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗಂಭೀರವಾಗಿ ಆಲೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.
- ಸಂಸ್ಥಾಪಕರ ನಿಲುವು: ಇದರ ಸಂಸ್ಥಾಪಕ, 30 ವರ್ಷದ ಪ್ರಚಾರ ತಂತ್ರಜ್ಞ ಅಭಿಜೀತ್ ದಿಪ್ಕೆ. “ನಾವು ಸಾಂಪ್ರದಾಯಿಕ ರಾಜಕೀಯ ಪಕ್ಷವಾಗಲು ಬಂದಿಲ್ಲ, ಬದಲಿಗೆ ಯುವಕರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸುವ ಸ್ವತಂತ್ರ ವೇದಿಕೆಯಾಗಲಿದ್ದೇವೆ” ಎಂದು ಅವರು ಹೇಳಿದ್ದಾರೆ. ಆದರೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಂಬಲ ನೋಡಿದರೆ ಭವಿಷ್ಯದಲ್ಲಿ ಇದು ಅಧಿಕೃತ ಪಕ್ಷವಾಗಿ ನೋಂದಣಿಯಾದರೂ ಅಚ್ಚರಿಯಿಲ್ಲ.
3. ಜನ ಇದನ್ನು ಯಾಕೆ ಬೆಂಬಲಿಸುತ್ತಿದ್ದಾರೆ?
ಇದರ ಹಿಂದೆ ದೇಶದ ಯುವಜನತೆಯ ತೀವ್ರ ಆಕ್ರೋಶ ಮತ್ತು ನಿರುದ್ಯೋಗದ ಸಮಸ್ಯೆ ಇದೆ:
- ಹಿನ್ನೆಲೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಇತ್ತೀಚಿನ ವಿಚಾರಣೆಯೊಂದರಲ್ಲಿ “ದೇಶದ ನಿರುದ್ಯೋಗಿ ಯುವಕರು ಜಿರಳೆಗಳಂತೆ (Cockroaches) ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರನ್ನೂ ಅಟ್ಯಾಕ್ ಮಾಡುತ್ತಿದ್ದಾರೆ” ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು (ನಂತರ ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ). ಇದರಿಂದ ನೊಂದ ಯುವಕರು, “ಹೌದು, ನಾವು ಸಿಸ್ಟಮ್ ಮರೆತುಹೋದ ಜಿರಳೆಗಳು” ಎಂದು ಹೆಮ್ಮೆಯಿಂದ ಆ ಲೇಬಲ್ ಅನ್ನು ಸ್ವೀಕರಿಸಿ ಆಂದೋಲನ ಆರಂಭಿಸಿದರು.
- ಯುವಕರ ಸಮಸ್ಯೆಗಳು: ಪದವೀಧರ ನಿರುದ್ಯೋಗ, ಪರೀಕ್ಷೆಗಳ ಅಕ್ರಮ (NEET ವಿವಾದ), ಮತ್ತು ಸರ್ಕಾರದ ಜವಾಬ್ದಾರಿಯ ಕೊರತೆಯನ್ನು ಪ್ರಶ್ನಿಸಲು Gen-Z ಯುವಕರು ಈ ವಿಡಂಬನಾತ್ಮಕ ಹಾದಿ ಹಿಡಿದಿದ್ದಾರೆ.
CJP ಬೆಂಬಲಿಸುತ್ತಿರುವ ವಿಐಪಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಯಾರು?
ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಕ್ರೇಜ್ ನೋಡಿ ಹಲವು ಪ್ರಮುಖರು ಇದಕ್ಕೆ ಬಹಿರಂಗವಾಗಿ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ:
- ರಾಜಕಾರಣಿಗಳು: ಟಿಎಂಸಿ (TMC) ಸಂಸದರಾದ ಮಹುವಾ ಮೊಯಿತ್ರಾ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ತಾವು ಈ ಪಕ್ಷಕ್ಕೆ ಸೇರ ಬಯಸುವುದಾಗಿ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
- ಬಾಲಿವುಡ್ ಸೆಲೆಬ್ರಿಟಿಗಳು: ಖ್ಯಾತ ಚಲನಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್, ನಟಿಯರಾದ ಕೊಂಕಣ ಸೇನ್ ಶರ್ಮಾ, ಫಾತಿಮಾ ಸನಾ ಶೇಖ್, ದಿಯಾ ಮಿರ್ಜಾ ಮತ್ತು ಸೋಶಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಈ ಪಕ್ಷದ ಪೋಸ್ಟ್ಗಳನ್ನು ಶೇರ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
- ಸ್ಯಾಂಡಲ್ವುಡ್ ಲಿಂಕ್: ಕನ್ನಡದ ಸ್ಟಾರ್ ನಟಿ, ಮಾಜಿ ಸಂಸದೆ ರಮ್ಯಾ (ದಿವ್ಯ ಸ್ಪಂದನ) ಕೂಡ ಈ ಕಾಕ್ರೋಚ್ ಜನತಾ ಪಾರ್ಟಿಯ ಆಂದೋಲನಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿ ಕನ್ನಡಿಗರ ಗಮನ ಸೆಳೆದಿದ್ದಾರೆ.
- ಕಾರ್ಪೊರೇಟ್ ವಲಯ: ಹಾಟ್ಮೇಲ್ (Hotmail) ಸಹ-ಸಂಸ್ಥಾಪಕ ಸಬೀರ್ ಭಾಟಿಯಾ ಅವರು ಕೂಡ ಈ ಯುವ ಚಳವಳಿಗೆ “100% ಬೆಂಬಲ” ಎಂದು ಘೋಷಿಸಿದ್ದಾರೆ.
ವರದಿಯ ಮುಖ್ಯಾಂಶ: “ದೇಶದ ಯುವಕರನ್ನು ಕೀಟಗಳಂತೆ ನೋಡಿದರೆ, ಅದೇ ಕೀಟಗಳು ಒಟ್ಟಾಗಿ ಸೇರಿ ದೊಡ್ಡ ಸೈನ್ಯವಾಗಬಲ್ಲವು” ಎಂಬುದಕ್ಕೆ ಈ ‘ಕಾಕ್ರೋಚ್ ಜನತಾ ಪಾರ್ಟಿ’ ಇಂದಿನ ಡಿಜಿಟಲ್ ಯುಗದ ಅತ್ಯುತ್ತಮ ಉದಾಹರಣೆಯಾಗಿದೆ.
Article
ಇತಿಹಾಸ ಪ್ರಸಿದ್ಧ ವಿಟ್ಲ ಕೋಟಿಕೆರೆಗೆ ಮರುಜೀವ: ಭರದಿಂದ ಸಾಗುತ್ತಿದೆ ಹೂಳೆತ್ತುವ ಕಾರ್ಯ, ದಾನಿಗಳ ಸಹಕಾರಕ್ಕೆ ಕರೆ
ವಿಟ್ಲ: .ಇತಿಹಾಸ ಪ್ರಸಿದ್ಧ ವಿಟ್ಲದ ‘ಕೋಟಿಕೆರೆ’ಯ ಅಭಿವೃದ್ಧಿ ಹಾಗೂ ಪುನಶ್ಚೇತನ ಕಾರ್ಯವು ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಅತ್ಯಂತ ಭರದಿಂದ ಸಾಗುತ್ತಿದೆ. ದಿನೇ ದಿನೇ ಸುಂದರ ರೂಪ ಪಡೆಯುತ್ತಿರುವ ಕೆರೆಯ ಅಭಿವೃದ್ಧಿ ಕಾರ್ಯವನ್ನು ಪ್ರತಿನಿತ್ಯ ನೂರಾರು ಸಾರ್ವಜನಿಕರು ಕುತೂಹಲದಿಂದ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ರೂಪುಗೊಳ್ಳುತ್ತಿದೆ ತಡೆಗೋಡೆ; ಮರ-ಪೊದೆಗಳ ತೆರವು
ಕೋಟಿಕೆರೆಯ ಸಂರಕ್ಷಣೆಯ ಮೊದಲ ಹಂತವಾಗಿ, ಈ ಹಿಂದೆ ಕುಸಿದು ಬಿದ್ದಿದ್ದ ಕಲ್ಲಿನ ತಡೆಗೋಡೆಯ ಪುನರ್ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕೆರೆಯ ಸುತ್ತಲೂ ದಟ್ಟವಾಗಿ ಹಬ್ಬಿಕೊಂಡಿದ್ದ ಪೊದೆಗಳು ಮತ್ತು ಗಿಡ-ಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಕೊನೆಯ ಹಂತದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಅಲ್ಲದೆ, ಕೆರೆಯ ನೀರಿಗೆ ಬಾಗಿಕೊಂಡು ಅಪಾಯಕಾರಿಯಾಗಿದ್ದ ಭಾರಿ ಗಾತ್ರದ ನಿರುಪಯುಕ್ತ ಮರಗಳನ್ನು ಅತ್ಯಾಧುನಿಕ ಯಂತ್ರಗಳ ಮೂಲಕ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಹೂಳೆತ್ತುವಿಕೆಗೆ ಕ್ರೇನ್ ಕಾರ್ಯಾಚರಣೆ: ಯುವಕರ ಶ್ರಮಕ್ಕೆ ಹೈಕೋರ್ಟ್ ವಕೀಲರ ಮೆಚ್ಚುಗೆ
ಕೋಟಿಕೆರೆಯ ಉದ್ದಗಲಕ್ಕೂ ತಳಭಾಗದಲ್ಲಿ ಸುಮಾರು ಐದು ಅಡಿಗಳಷ್ಟು ಆಳದಲ್ಲಿ ತುಂಬಿಕೊಂಡಿರುವ ದಶಕಗಳ ಹಳೆಯ ದುರ್ನಾತಭರಿತ ಹೂಳನ್ನು (ಕೆಸರು) ಹೊರತೆಗೆಯುವುದು ಸದ್ಯ ಎದುರಾಗಿರುವ ಅತಿ ದೊಡ್ಡ ಸವಾಲಾಗಿದೆ. ಕಳೆದ ಮೂರು ದಿನಗಳಿಂದ ಹಿಟಾಚಿ ಯಂತ್ರವನ್ನು ಬಳಸಿ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿತ್ತಾದರೂ, ಹೂಳಿನ ಪ್ರಮಾಣ ಅಗಾಧವಾಗಿರುವುದರಿಂದ ಇದೀಗ ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ತರಲಾಗಿದೆ. ಕೆರೆಯ ತಳಭಾಗದಲ್ಲಿ ಹಿಟಾಚಿ ಯಂತ್ರವು ಹೂಳನ್ನು ಒಟ್ಟುಗೂಡಿಸುತ್ತಿದ್ದರೆ, ಮೇಲ್ಭಾಗದಲ್ಲಿ ನಿಂತಿರುವ ಕ್ರೇನ್ನ ರೋಪ್ ಮೂಲಕ ಕೆರೆಗೆ ಇಳಿಸಲಾದ ದೊಡ್ಡ ಬಕೆಟ್ಗಳಿಗೆ ಹೂಳನ್ನು ತುಂಬಿಸಿ ಮೇಲಕ್ಕೆತ್ತುವ ಜಂಟಿ ಕಾರ್ಯಾಚರಣೆ ಚುರುಕಾಗಿ ಸಾಗುತ್ತಿದೆ.
ಈ ಮಹತ್ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ, ಮಾಧ್ಯಮಗಳಲ್ಲಿ ವರದಿಯನ್ನು ವೀಕ್ಷಿಸಿದ ವಿಟ್ಲ ಮೂಲದವರೇ ಆದ ಪ್ರಖ್ಯಾತ ಹೈಕೋರ್ಟ್ ವಕೀಲರಾದ ಅರುಣ್ ಶ್ಯಾಮ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲಿ ಹಗಲಿರುಳು ಶ್ರಮಿಸುತ್ತಿರುವ ಸ್ಥಳೀಯ ಯುವಕರ ಭಗೀರಥ ಪ್ರಯತ್ನ ಹಾಗೂ ಸಾಮಾಜಿಕ ಕಾಳಜಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು, ಯುವಕರ ತಂಡಕ್ಕೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದ್ದಲ್ಲದೆ, ಕೆರೆಯ ಅಭಿವೃದ್ಧಿ ಕಾರ್ಯಕ್ಕಾಗಿ ತಕ್ಷಣವೇ 11,111 ರೂಪಾಯಿ ಆರ್ಥಿಕ ದೇಣಿಗೆಯನ್ನು ಹಸ್ತಾಂತರಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನಷ್ಟು ಹೃದಯವಂತರ ಸಹಕಾರದ ಅಗತ್ಯವಿದೆ
ಕೋಟಿಕೆರೆಯ ಅಭಿವೃದ್ಧಿ ಹಾಗೂ ಪುನಶ್ಚೇತನಕ್ಕಾಗಿ ಈಗಾಗಲೇ ಊರಿನ ಹಾಗೂ ಪರವೂರ ಹಲವಾರು ದಾನಿಗಳು ಮನಪೂರ್ವಕವಾಗಿ ಧನಸಹಾಯದ ಹಸ್ತ ಚಾಚಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಈವರೆಗೆ ಸುಮಾರು 1,70,000 ರೂಪಾಯಿ ವೆಚ್ಚವಾಗಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಕ್ತಾಯಗೊಳ್ಳಲು ಇನ್ನೂ ಸುಮಾರು 2,00,000 ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಹೆಮ್ಮೆಯ ಇತಿಹಾಸ ಪ್ರಸಿದ್ಧ ಕೋಟಿಕೆರೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಈ ಪವಿತ್ರ ಕಾರ್ಯದಲ್ಲಿ ಇನ್ನಷ್ಟು ಜನ ಹೃದಯವಂತ ದಾನಿಗಳು ಆರ್ಥಿಕ ಹಾಗೂ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಮೂಲಕ ಕೈಜೋಡಿಸಬೇಕಾಗಿ ಕೆರೆ ಅಭಿವೃದ್ಧಿ ಸಮಿತಿಯವರು ವಿನಂತಿಸಿಕೊಂಡಿದ್ದು, ಈ ಬಳಗದ ಗ್ರೂಪ್ ಅಡ್ಮಿನ್ ಗಳಾದ 1) ಬಾಬು ಕೊಪ್ಪಳ, 2) ಕ್ಲಿಫರ್ಡ್ ವೇಗಸ್, 3) ಚಂದ್ರಹಾಸ ಕೊಪ್ಪಳ 4) ಅಣುಪ್ ಲಾಸ್ರಾದೊ 5) ಚಂದ್ರ ಟೈಯರ್ ಅಂಗಡಿ ಇವರುಗಳಲ್ಲಿ ಹಣ ನೀಡಬಹುದು ಅಥವಾ ಕ್ಯೂ ಆರ್ ಕೋಡ್ ಮೂಲಕವೂ ನೀಡಬಹುದಾಗಿದೆ ಎಂದು ವಿನಂತಿಸಿದ್ದಾರೆ.
ಈಗಾಗಲೇ ನಿರ್ಧರಿಸಿದ ಕೆಲಸಗಳು ಮುಕ್ತಾಯವಾದ ಬಳಿಕವೂ ಹಣ ಉಳಿದಲ್ಲಿ ಮತ್ತೆ ತಡೆಗೋಡೆ ಕಾಮಗಾರಿ ಮುಂದುವರಿಸುವ ಬಗ್ಗೆಯೂ ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.




Article
ತುಳುನಾಡಿನ ಇತಿಹಾಸದ ಹೆಮ್ಮೆಯ ಸಂಕೇತ ವಿಟ್ಲದ ‘ಕೋಟಿ ಕೆರೆ’ಗೆ ಜೀರ್ಣೋದ್ಧಾರದ ಕಾಯಕಲ್ಪ: ಸಾರ್ವಜನಿಕರ ಸಹಕಾರಕ್ಕೆ “ಕೋಟಿಕೆರೆ ಅಭಿವೃದ್ಧಿ ಬಳಗ”ಮನವಿ
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಐತಿಹಾಸಿಕ ಪಟ್ಟಣವಾದ ವಿಟ್ಲದ ಹೆಮ್ಮೆಯ ಸಂಕೇತ, ತುಳುನಾಡಿನ ವೀರ ಹಾಗೂ ರಾಜವಂಶದ ಇತಿಹಾಸದೊಂದಿಗೆ ನಿಕಟ ಸಂಬಂಧ ಹೊಂದಿರುವ ಇತಿಹಾಸ ಪ್ರಸಿದ್ಧ ‘ಕೋಟಿ ಕೆರೆ’ ಇಂದು ಅಳಿವಿನ ಅಂಚಿಗೆ ಬಂದು ತಲುಪಿದ್ದು, ಯಾವ ಕ್ಷಣದಲ್ಲಾದರೂ ಜರಿದು ಮುಚ್ಚಿಹೋಗುವ ಭೀತಿಯಲ್ಲಿರುವ ಈ ಕೆರೆಯನ್ನು ಉಳಿಸಿಕೊಳ್ಳಲು ವಿಟ್ಲದ ಸಾರ್ವಜನಿಕರು ಹಾಗೂ ಕೊಡುಗೈ ದಾನಿಗಳು ಇದೀಗ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.

ಕೆರೆಯ ಜೀರ್ಣೋದ್ಧಾರದ ಸಂಕಲ್ಪಕ್ಕಾಗಿ ವಿಟ್ಲ ಅರಮನೆಯವರ ಮುಂದಾಳುತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಕಳೆದ ವಾರದಿಂದ ಇಲ್ಲಿ ನಿರಂತರವಾಗಿ ಕಾರ್ಮಿಕರಿಂದ ಜರಿದು ಬಿದ್ದ ತಡೆಗೋಡೆಗಳನ್ನು ಸರಿಪಡಿಸುವ ಕೆಲಸಗಳು ಮತ್ತು ಜೊತೆಯಾಗಿ ಶ್ರಮದಾನದ ಮೂಲಕವೂ ಕೆಲಸಗಳು ನಡೆಯುತ್ತಲಿವೆ.

ಕೋಟಿ ಕೆರೆಗೆ ಶಾಶ್ವತವಾದ ಕಾಯಕಲ್ಪವನ್ನು ನೀಡಲು ಸಂಕಲ್ಪತೊಟ್ಟ ವರ್ತಕರ ಸಂಘದ ಕ್ಲಿಫರ್ಡ್ ವೇಗಸ್ ಮತ್ತು ಕೊಡುಗೈ ದಾನಿ ಪ್ರಿಯಾ ಬಾಬಣ್ಣ ಅವರ ನೇತೃತ್ವದಲ್ಲಿ ವಿಟ್ಲದ ಆಪತ್ಬಾಂಧವ ಮುರಳಿ, ಅನೂಪ್ ಲಸ್ರಾದೊ, ಜಯರಾಮ ಕಡಂಬು, ಮಾಜಿ ಯೋಧರಾದ ದಯಾನಂದ ನೇತ್ರಕೆರೆ, ವೆಂಕಟರಮಣ ಭಟ್, ಫಿನಿಕ್ಸ್ ಕಂಪ್ಯೂಟರಿನ ಜೋಯ್ ಪುಡ್ತಾದೊ, ಪತ್ರಕರ್ತ ವಿಟಿ ಪ್ರಸಾದ್ ಹಾಗೂ ಚಂದ್ರ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋಟಿ ಕೆರೆಯ ಹತ್ತಿರದ ಮನೆಯವರು ಕತ್ತಿ , ಹಾರೆ ಇನ್ನಿತರ ಪರಿಕರಗಳನ್ನು ಕೊಟ್ಟು ಸಹಕರಿಸುತ್ತಿದ್ದಾರೆ. ಕೆರೆಯ ಸುತ್ತು ಚಾಚಿಕೊಂಡಿರುವ ಮರಗಳ ತೆರವು, ನೀರು ಕೆಸರನ್ನು ಮೇಲಕ್ಕೆತ್ತುವ , ತಡೆಗೋಡೆ ನಿರ್ಮಿಸುವ ಹಾಗೂ ಕೆರೆಯನ್ನು ಶುಚಿಗೊಳಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಪ್ರತಿಯೊಬ್ಬರೂ ಬಂದು ಭಾಗವಹಿಸಲೇ ಬೇಕಾದ, ನೋಡಲೇ ಬೇಕಾದ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಈ ಕೆಲಸ ಕಾರ್ಯಗಳ ಜವಾಬ್ದಾರಿ ಹೊತ್ತವರಿಗೆ ಪ್ರತಿಯೊಬ್ಬರ ಸಹಕಾರದ ಅಗತ್ಯವಿದೆ.

ಉಸಿರು ಬಿಗಿದು ನಿಂತ ಕೆರೆ: ಸುಮಾರು ಹತ್ತು ವರ್ಷಗಳ ಹಿಂದೆ ಈ ಕೆರೆ ಅಳಿವಿನ ಅಂಚಿನಲ್ಲಿದ್ದಾಗ ವಿಟ್ಲದ ಉದ್ಯಮಿ ಬಾಬು ಕೊಪ್ಪಳ ಅವರು ವೈಯಕ್ತಿಕ ಮುತುವರ್ಜಿ ವಹಿಸಿ ಜರಿದು ಹೋಗಿದ್ದ 20 ಮೀಟರ್ ಭಾಗವನ್ನು ದುರಸ್ತಿ ಮಾಡಿಸಿದ್ದರು. ಆದರೆ ಸೂಕ್ತ ನಿರ್ವಹಣೆಯಿಲ್ಲದೆ ಈಗ ಕೆರೆಯ ನಾಲ್ಕೂ ಬದಿಯ ಕಲ್ಲುಗಳು ಜರಿದು ನೀರು ಪಾಲಾಗಿದ್ದು, ಕಟ್ಟಿದ ಕಲ್ಲು ಮತ್ತು ಮಣ್ಣು ಜರಿದು ಬಿದ್ದು ಕೆರೆಯೊಳಗೆ ತುಂಬಿ ಹೋಗಿದೆ. ಕೆರೆ ಸದ್ಯ ಉಸಿರು ಬಿಗಿದು ಹಿಡಿದು ನಿಂತಂತಿದೆ. ಇಲ್ಲಿನ ಸ್ಥಳೀಯ ವಿದ್ಯಾರ್ಥಿಗಳು, ಈಜುಗಾರರು ಕಳೆದ ಏಳೆಂಟು ದಶಕಗಳ ಹಿಂದಿನಿಂದಲೇ ಈಜು ಸ್ಪರ್ಧೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವುದಕ್ಕೆ ಈ ಕೋಟಿ ಕೆರೆಯೇ ಸಾಕ್ಷಿಯಾಗಿದೆ. ಆ ಕಾರಣವಾಗಿಯೇ ಈ ಕೆರೆ ಮಾತ್ರ ವಿಟ್ಲದ ನಮ್ಮೆಲ್ಲರ ಹೆಮ್ಮೆಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಇಂದಿಗೂ ಉಳಿದುಕೊಂಡಿದೆ. ಅದರ ಅಭಿವೃದ್ಧಿ ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಗ್ರಾಮೀಣ ಈಜುಪಟುಗಳ ನರ್ಸರಿ! ಆಧುನಿಕ ಇತಿಹಾಸದಲ್ಲಿ ಈ ಕೆರೆಯು ಕೇವಲ ನೀರಿನ ಮೂಲವಾಗಿ ಉಳಿಯದೆ, ಗ್ರಾಮೀಣ ಭಾಗದ ಅದ್ಭುತ ಕ್ರೀಡಾ ತರಬೇತಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಅನೇಕ ಮಂದಿ ಈಜು ತರಬೇತುದಾರರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಈ ಕೆರೆಯಲ್ಲಿ ಸಾವಿರಾರು ಗ್ರಾಮೀಣ ಯುವಕರಿಗೆ ಉಚಿತವಾಗಿ ಈಜು ಕಲಿಸಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಈಜುಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಸಹಕಾರಕ್ಕೆ ಸಮಿತಿ ವಿನಂತಿ: ಇತಿಹಾಸ ಪ್ರಸಿದ್ಧ ಈ ಕೆರೆಗೆ ಬಂದೊದಗಿರುವ ದುಸ್ಥಿತಿಯನ್ನು ಕಂಡು ಮರುಗಿದ ವಿಟ್ಲದ ಕೆಲವು ಕೊಡುಗೈ ದಾನಿಗಳು, ದೈನಂದಿನ ಈಜುಗಾರರು, ಪೋಷಕರು, ವಿಟ್ಲದ ಕಲಾರಾಧಕರು ಹಾಗೂ ಕೋಟಿಕೆರೆಯ ಅಭಿಮಾನಿಗಳು ಸೇರಿಕೊಂಡು ಇದನ್ನು ಸ್ವಾವಲಂಬನೆಯಿಂದ ಉಳಿಸಿಕೊಳ್ಳುವ ಯೋಚನೆ ಮತ್ತು ಯೋಜನೆ ಹಾಕಿಕೊಂಡಿದ್ದಾರೆ. ತನು, ಮನ, ಧನದ ಮೂಲಕ ಇದರ ಅಭಿವೃದ್ಧಿಯ ಸಂಕಲ್ಪಕ್ಕಾಗಿ ಪಣ ತೊಟ್ಟಿದ್ದಾರೆ.

ಮುಂದಿನ ಪೀಳಿಗೆಗೆ ಇತಿಹಾಸ ಹಾಗೂ ಪರಿಸರವನ್ನು ಉಳಿಸುವ ಈ ಪವಿತ್ರ ಕಾರ್ಯಕ್ಕೆ ವಿಟ್ಲ ಮತ್ತು ಸುತ್ತಮುತ್ತಲಿನ ಪ್ರತಿಯೊಬ್ಬ ಸಾರ್ವಜನಿಕರು, ಅಭಿಮಾನಿಗಳು ಬಂದು ತಮ್ಮ ಸಹಕಾರವನ್ನು ನೀಡಬೇಕಾಗಿದೆ. ಇದು ಕೇವಲ ತನು-ಮನದಿಂದ ಆಗುವ ಕೆಲಸವಲ್ಲ, ಇದರ ಜೊತೆಗೆ ಧನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ನಮ್ಮ ಊರಿನ ಈ ಸುಂದರ ಕೋಟಿ ಕೆರೆಗೆ ಹೊಸ ಜೀವ ಕಳೆ ನೀಡಲು ಉದಾರ ಮನಸ್ಸಿನಿಂದ ಎಲ್ಲರೂ ಧನಸಹಾಯ ಹಾಗೂ ಶ್ರಮದಾನದ ಮೂಲಕ ಸಹಕರಿಸಬೇಕಾಗಿ “ಕೋಟಿಕೆರೆ ಅಭಿವೃದ್ಧಿ ಬಳಗ” ವಿನಂತಿಸಿದ್ದು, ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಹೇಳಿದೆ. ಈ ಅಭಿವೃದ್ಧಿ ಬಳಗ ಒಂದು ವಾಟ್ಸಾಪ್ ಗ್ರೂಫನ್ನು ರಚಿಸಿಕೊಂಡಿದ್ದು, ಇನ್ನಷ್ಟು ಮಾಹಿತಿಗಳು, ದಿನಂಪ್ರತಿಯ ಕೆಲಸಕಾರ್ಯಗಳ ವಿವರಗಳು ಅದರಲ್ಲಿ ಹಾಕಲಾಗುತ್ತಿದ್ದು, ಗ್ರೂಪನ್ನು ಸೇರಲು ಕೆಳಗೆ ಲಿಂಕನ್ನು ನೀಡಲಾಗಿದೆ.
ಕೋಟಿಕೆರೆ ಅಭಿವೃದ್ಧಿ ಬಳಗ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/FfKDbO1gjcF4g11qZIgTzT





Article
ದಯಾನಂದ ಕುಂತೂರು ಅವರಿಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಕರಾವಳಿಯ ಕಲಾಭಿಮಾನಿಗಳ ಹೃದಯ ಗೆದ್ದ ಸ್ತ್ರೀ ವೇಷಧಾರಿಗೆ ಸಂದ ಗೌರವ
ರಂಗಭೂಮಿಯ ‘ಕಲಾರತ್ನ ಮಣಿ’ ದಯಾನಂದ ಕುಂತೂರು: ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಅನಭಿಷಿಕ್ತ ಕಲಾ ಸಾಮ್ರಾಟನಿಗೆ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’
ತುಳು-ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ಕಲಾ ಸೇವೆಯನ್ನೇ ಕಾಯಕವಾಗಿಸಿಕೊಂಡು ಯಶಸ್ಸಿನ ಶಿಖರವೇರಿದ ಧೀಮಂತ ಕಲಾವಿದ ಶ್ರೀ ದಯಾನಂದ ಕುಂತೂರು. ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯ ವಿವಿಧ ಮಜಲುಗಳಲ್ಲಿ ಪಯಣಿಸಿ, ಸುಮಾರು 2500ಕ್ಕೂ ಅಧಿಕ ನಾಟಕಗಳಲ್ಲಿ ಅದ್ಭುತವಾಗಿ ಸ್ತ್ರೀ ವೇಷಧಾರಿಯಾಗಿ ನಟಿಸಿ ಸೈ ಎನಿಸಿಕೊಂಡವರು. ಇದೀಗ ಅವರ ಸಾಂಸ್ಕೃತಿಕ ಸಾಧನೆಯ ಮುಕುಟಕ್ಕೆ ಅತ್ಯುನ್ನತ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯ ಜಗದಗಲದ ಗರಿ ಸೇರ್ಪಡೆಯಾಗಿದೆ. ಇದು ಇಡೀ ಕರಾವಳಿ ಹಾಗೂ ಕನ್ನಡಿಗರು ಹೆಮ್ಮೆಪಡುವಂತಹ ಕ್ಷಣವಾಗಿದೆ.

ಬಾಲ್ಯ ಮತ್ತು ಕಲಾ ಪ್ರವೇಶದ ಹೆಜ್ಜೆಗಳು:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂತೂರಿನ ಶ್ರೀಯುತ ಶೀನಪ್ಪ ಪೂಜಾರಿ ಅಲೆಕ್ಕಾಡಿ ಮತ್ತು ಶ್ರೀಮತಿ ಹೇಮಾವತಿ ದಂಪತಿಯ ಏಳನೇ ಮಗನಾಗಿ 07-06-1969 ರಲ್ಲಿ ದಯಾನಂದ ಕುಂತೂರು ಜನಿಸಿದರು. ಕುಂತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಇವರು, ಉಪ್ಪಿನಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದರು.
ಶಾಲಾ ದಿನಗಳಲ್ಲೇ ಬಣ್ಣದ ಪ್ರಪಂಚದ ಕಡೆಗೆ ಆಕರ್ಷಿತರಾಗಿದ್ದ ದಯಾನಂದರು, ತಮ್ಮ ಎಂಟನೇ ವಯಸ್ಸಿನಲ್ಲೇ ರಂಗಪ್ರವೇಶ ಮಾಡಿದರು. ಅವರು ವೃತ್ತಿಪರವಾಗಿ ಬಣ್ಣ ಹಚ್ಚಿದ ಮೊದಲ ತುಳು ನಾಟಕ ‘ನೇತ್ತರ್ದ ಕಾಣಿಕೆ’. ಅಲ್ಲಿಂದ ಆರಂಭವಾದ ಇವರ ಕಲಾ ಯಾನ ಇಂದಿಗೂ ದಣಿವರಿಯದ ಜಲಪಾತದಂತೆ ಮುನ್ನಡೆಯುತ್ತಿದೆ.

ಸ್ತ್ರೀ ಪಾತ್ರಗಳ ಮೂಲಕ ಅಪಾರ ಜನಮನ್ನಣೆ:
ತುಳು ಹಾಗೂ ಕನ್ನಡ ನಾಟಕ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಅಷ್ಟೇ ಸಹಜವಾಗಿ, ಆಕರ್ಷಕವಾಗಿ ಮತ್ತು ತನ್ಮಯತೆಯಿಂದ ನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ. ಆದರೆ ದಯಾನಂದ ಕುಂತೂರು ಅವರು ತಮ್ಮ ನಟನಾ ಕೌಶಲ್ಯದ ಮೂಲಕ ಸ್ತ್ರೀ ಸಹಜ ಭಾವನೆಗಳಾದ ನವರಸಗಳನ್ನು ರಂಗದ ಮೇಲೆ ಅತ್ಯಂತ ಮನೋಜ್ಞವಾಗಿ ಉಣಬಡಿಸಿದ್ದಾರೆ.
ಇವರು ನಟಿಸಿದ ಪ್ರಮುಖ ನಾಟಕಗಳಾದ ಬೈಯ ಮಲ್ಲಿಗೆ, ಗಂಗಾರಾಮು, ಗಂಗೆ ಗೌರಿ, ಸರಸ್ವತಿ, ತುಂಗಭದ್ರಾ, ಮೇಘ ಮುರಾರಿ, ಅಜ್ಜಿಗೆ ಎರ್ಲಾ ಇಜ್ಜಿ, ಗುತ್ತುದ ಇಲ್ಲ್, ಭೈರನ ಕುರಲ್, ಎನ್ನ ಕಥೆ ಬರೆಪರ, ಎರ್ಲಾ ಉಲ್ಲೇರ ಈ ಇಲ್ಲಾ, ತೆಲಿಪೆರಲಾ ಅತ್ತ್ ಬುಲಿಪೆರಲಾ ಅತ್ತ್, ದೇವತೆ, ಬದುಕು ಒಂಜಿ ನಾಟಕ, ಉಡಲ್ ಮೊಕೆದ ಕಡಲು, ಸಂಸಾರ ದೊಂಜಿ ಅಪಸ್ವರ, ಮಲ್ದೇದಿ, ಪೊನ್ನು ಒಂಜಿ ಪುದೆ, ಗಗ್ಗರೆ, ನಾಗ ನೆರೆಲ್, ನಾಗಬನ, ನಾಗನಿಧಿ, ಈರ್ ಎರ್ ಇಂಬೇರೆ, ದಾರೇದ ಸಿರಿ, ಕುಂಕುಮ, ಶನೇಶ್ವರ ಮಹಾತ್ಮೆ ಮುಂತಾದ ನೂರಾರು ಯಶಸ್ವಿ ನಾಟಕಗಳಲ್ಲಿ ಪ್ರಮುಖ ಸ್ತ್ರೀ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಅಲ್ಲದೆ, ಖ್ಯಾತ ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ಬೈಲ್ ಅವರ ಕಲಾ ಸಂಗಮ ತಂಡದ ಸೂಪರ್ ಹಿಟ್ ನಾಟಕಗಳಾದ ‘ಒರಿಯರ್ದೊರಿ ಅಸಲ್ ಭಾಗ-2’ ಮತ್ತು ‘ಕೊಲ್ಯೂರು ಮೂಕಾಂಬಿಕೆ’ ನಾಟಕಗಳಲ್ಲಿನ ಇವರ ಅಭಿನಯ ರಂಗಭೂಮಿಯ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ. ಹತ್ತು ನಿಮಿಷದಲ್ಲಿ ಬರೋಬ್ಬರಿ 12 ಸೀರೆಗಳನ್ನು ಒಂದು ನೃತ್ಯದಲ್ಲಿ ಬದಲಾಯಿಸಿ ವಿಶೇಷ ನೃತ್ಯ ಪ್ರದರ್ಶನ ನೀಡುವ ಮೂಲಕ ಜನರನ್ನು ಚಕಿತಗೊಳಿಸಿದ ಕೀರ್ತಿ ಇವರದ್ದಾಗಿದೆ. ಕಿರುತೆರೆಯಲ್ಲೂ ಹೆಜ್ಜೆ ಇಟ್ಟಿರುವ ಇವರು ಜೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಧಾರಾವಾಹಿ ‘ಫಿಫ್ಟಿ ಫಿಫ್ಟಿ ಕನ್ನಡ’ ಮತ್ತು ಕನ್ನಡ ಚಲನಚಿತ್ರ ‘ಲಕ್ಷ್ಮಣ’ ದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕರಾವಳಿಯ ಹೆಮ್ಮೆಯ ಕಲಾ ರಾಯಭಾರಿ:
ದಯಾನಂದ ಕುಂತೂರು ಅವರ ಕಲಾ ಪ್ರೌಢಿಮೆ ಕೇವಲ ಕರಾವಳಿ ಅಥವಾ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇವರು ಕರ್ನಾಟಕ ಸಾಂಸ್ಕೃತಿಕ ಇಲಾಖೆಯ ವತಿಯಿಂದ ರಾಜ್ಯದ ಅಧಿಕೃತ ಪ್ರತಿನಿಧಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಭಾಗವಹಿಸಿ ನಾಡಿನ ಕೀರ್ತಿಯನ್ನು ದೇಶದ ಗಡಿಯಲ್ಲಿ ಹೆಚ್ಚಿಸಿದ್ದಾರೆ. ಇದರೊಂದಿಗೆ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶಗಳಾದ ದುಬೈ, ಅಬುಧಾಬಿ, ಮತ್ತು ಓಮನ್ ದೇಶಗಳಲ್ಲೂ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಳುನಾಡಿನ ಕಲೆ ಮತ್ತು ಸಂಸ್ಕೃತಿಯ ರಾಯಭಾರಿಯಾಗಿದ್ದಾರೆ. ಇಂದಿಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆಗಳ ಟ್ಯಾಬ್ಲೋಗಳಲ್ಲಿ (ಸ್ತಬ್ಧಚಿತ್ರ) ಇವರ ಸ್ತ್ರೀ ವೇಷಧಾರಿಯ ರೂಪಕ್ಕೆ ಅತ್ಯಂತ ಅಪಾರ ಬೇಡಿಕೆಯಿದೆ. ಯಕ್ಷಗಾನ ರಂಗದಲ್ಲೂ ಇವರು ತಮ್ಮ ಚತುರತೆಯನ್ನು ತೋರಿದ್ದಾರೆ.
ಹುಡುಕಿಕೊಂಡು ಬಂದ ಪ್ರಶಸ್ತಿ-ಪುರಸ್ಕಾರಗಳು:
ದಯಾನಂದ ಕುಂತೂರು ಅವರ ಸುದೀರ್ಘ 4 ದಶಕಗಳ ಕಲಾ ಸೇವೆಯನ್ನು ಗುರುತಿಸಿ ನೂರಾರು ಸಂಘ-ಸಂಸ್ಥೆಗಳು, ಯುವಕ ಮಂಡಲಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ:

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2022): ಕರ್ನಾಟಕ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುನ್ನತ ನಾಗರಿಕ ಗೌರವ.
ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ: ಜಾಗತಿಕ ಮಟ್ಟದ ಸಾಧನೆಗಾಗಿ ಸಂದ ಪ್ರತಿಷ್ಠಿತ ಪುರಸ್ಕಾರ.
ರಂಗಭೂಮಿ ಕಲಾ ಸೇವಾರತ್ನ ಪ್ರಶಸ್ತಿ: ಕನ್ನಡ ಫಿಲಂ ಚೇಂಬರ್ (ರಿ) ಬೆಂಗಳೂರು ಇವರಿಂದ ರಾಜ್ಯ ಮಟ್ಟದ ಗೌರವ.
ರಾಜ್ಯಮಟ್ಟದ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ: ಗಾನಸಿರಿ ಕಲಾಕೇಂದ್ರ (ರಿ) ಪುತ್ತೂರು ಇವರಿಂದ ಸನ್ಮಾನ.
ಸಾಯಿ ಕಲಾವಿದೆರ್ ಸಂಸ್ಥೆ (ರಿ) ಕುಡ್ಲ ಇವರಿಂದ ಸಾಯಿ ಕಲಾಶ್ರೀ ಪ್ರಶಸ್ತಿ
ಬಿರುದು ಸನ್ಮಾನಗಳು:
ಬಾಲ್ಯ ಮೂಕಾಂಬಿಕೆ ಕ್ಷೇತ್ರ ಪಾಲ್ತಿಮಾರ್ ಇವರಿಂದ “ತುಳುನಾಡ ಅಭಿನೇತ್ರಿ” ಬಿರುದು.
ಜಾತ್ಯತೀತ ಜನತಾದಳ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಇವರಿಂದ “ನಾಟ್ಯಮಯೂರಿ” ಬಿರುದು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಇವರಿಂದ “ನಾಟಕ ರಂಗದ ಮಿನುಗುತಾರೆ” ಗೌರವ.
ಆರ್.ಪಿ ಕಲಾ ಸೇವಾ ಟ್ರಸ್ಟ್ ಪಾಂಬಾರು ಇವರಿಂದ “ಕಲಾರತ್ನ ಮಣಿ” ಬಿರುದು.
ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಾಂಬಿಲ ಇವರಿಂದ “ಅಗ್ನಿದುರ್ಗೆ ಪುರಸ್ಕಾರ”.
ದ.ಕ.ಜ.ಪಂ. ಉ.ಹಿ.ಪ್ರಾ. ಶಾಲೆ ಕುಂತೂರು ಇವರಿಂದ “ಕಲಾರತ್ನ ಮಗ” ಗೌರವ.
ಮಂಗಳೂರಿನ ಪ್ರಸಿದ್ಧ ನಾಟಕ ತಂಡಗಳಾದ ಧರಿತ್ರಿ ಕಲಾವಿದೆರ್, ತುಳುವೇರ್ ತುಡರ್, ಕಲಾ ಸಂಗಮ, ತುಳುವೇರ್ ಉಡಲ್ ಜೋಡುಕಲ್ಲು, ಸಾಯಿ ಕಲಾವಿದರ್ ಕುಡ್ಲ, ತ್ರಿನೇತ್ರ ಕಲಾವಿದರ್ ಕುಡ್ಲ ಸೇರಿದಂತೆ ಹಲವಾರು ಪ್ರತಿಷ್ಠಿತ ಕಲಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ರಂಗಭೂಮಿಯ ಏಳಿಗೆಗೆ ಶ್ರಮಿಸುತ್ತಿದ್ದಾರೆ.
ಅಪ್ಪಟ ರಂಗ ಕಾಯಕ ಯೋಗಿಯಾಗಿ, ಅಹರ್ನಿಷಿ ಕಲೆಯನ್ನೇ ಉಸಿರಾಡುತ್ತಿರುವ ಶ್ರೀ ದಯಾನಂದ ಕುಂತೂರು ಅವರಿಗೆ ಲಭಿಸಿರುವ ಈ ‘ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ’ಯು ಅವರ ಕಠಿಣ ಪರಿಶ್ರಮ ಮತ್ತು ಕಲಾ ಭಕ್ತಿಗೆ ಸಂದ ನೈಜ ಗೌರವವಾಗಿದೆ. ಕಲಾಮಾತೆಯ ಕೃಪೆ ಇವರ ಮೇಲೆ ಸದಾ ಇರಲಿ, ದೇವರು ಇವರಿಗೆ ಆಯುಷ್ಯ, ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ, ಇವರಿಂದ ರಂಗಭೂಮಿಗೆ ಮತ್ತಷ್ಟು ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದು ನಾಡಿನ ಸಮಸ್ತ ಕಲಾಭಿಮಾನಿಗಳ ಪರವಾಗಿ ಪ್ರೀತಿಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.




-
crime2 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime4 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala2 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
Bantawala5 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 weeks agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Dakshina Kannada5 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala4 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala5 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
