Connect with us

Mangaluru

ಮಂಗಳೂರು: ‘ಧಕ್ಕೆ ನಾಸೀರ್’ ಸಾವು ಕೊಲೆ ಪ್ರಕರಣವಾಗಿ ದಾಖಲು; ಉರ್ವಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ

Published

on

ಮಂಗಳೂರು: ನಗರದ ಮೀನುಗಾರಿಕಾ ಧಕ್ಕೆಯ ಬಳಿ ನಾಸೀರ್ ಅಲಿಯಾಸ್ ‘ಧಕ್ಕೆ ನಾಸೀರ್’ ಮೃತದೇಹ ಪತ್ತೆಯಾದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಅವರು ಮಾಹಿತಿ ನೀಡಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.

ಘಟನೆಯ ವಿವರ: ಮೃತ ನಾಸೀರ್ ಮೇಲೆ ಈ ಹಿಂದೆ ಹಲವಾರು ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಧಕ್ಕೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಪಕ್ಕದ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (South) ಪೊಲೀಸ್ ಠಾಣೆಯಲ್ಲಿ ಕೊಲೆ (Section 103 BNS/302 IPC) ಪ್ರಕರಣ ದಾಖಲಾಗಿದೆ.

ಪ್ರಸ್ತುತ ಉರ್ವಾ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಈ ಪ್ರಕರಣದ ತನಿಖಾ ಉಸ್ತುವಾರಿಯನ್ನು (In-charge) ವಹಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಶಂಕಿತರ ವಿಡಿಯೋಗಳು ಲಭ್ಯವಾಗಿವೆ. ಅಲ್ಲದೆ, ಉತ್ತರ ಕರ್ನಾಟಕ ಮೂಲದ ಕೆಲವು ವ್ಯಕ್ತಿಗಳು ಮೊಬೈಲ್ ಕಾಣೆಯಾದ ಬಗ್ಗೆ ವಿಚಾರಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಆ ಆಯಾಮದಲ್ಲೂ ಪರಿಶೀಲನೆ ನಡೆಸುತ್ತಿದ್ದಾರೆ.

ಕಮಿಷನರ್ ಹೇಳಿಕೆ: ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಮಿಷನರ್ ಅವರು, ಶಂಕಿತರ ಬಗ್ಗೆ ಮಾಹಿತಿ ಲಭ್ಯವಿದ್ದರೂ ತನಿಖೆ ಪೂರ್ಣಗೊಂಡ ನಂತರವಷ್ಟೇ ನಿಖರವಾದ ಕಾರಣಗಳು ತಿಳಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ಮಂಗಳೂರಿನಲ್ಲಿ ನಡೆದ ಎರಡನೇ ಕೊಲೆ ಪ್ರಕರಣ ಇದಾಗಿದ್ದು, ಸಾರ್ವಜನಿಕರಲ್ಲಿ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ. ಉರ್ವಾ ಪೊಲೀಸರು ಶಂಕಿತರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Mangaluru

“ಕೋಮುಗಲಭೆ ತಡೆಯಿರಿ, ಯಾರೇ ಇದ್ದರೂ ಕ್ರಮ ಕೈಗೊಳ್ಳಿ”: ಸಿದ್ದರಾಮಯ್ಯ ಕುರಿತು ಮಾಜಿ ಜಿಲ್ಲಾಧಿಕಾರಿ, ಸಂಸದ ಸಶಿಕಾಂತ್ ಸೆಂಥಿಲ್ ಭಾವುಕ ಬರಹ

Published

on

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ, ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಹಾಗೂ ಪ್ರಸ್ತುತ ತಮಿಳುನಾಡು ಕಾಂಗ್ರೆಸ್ ಸಂಸದ ಎಸ್. ಸಶಿಕಾಂತ್ ಸೆಂಥಿಲ್ ಅವರು ಸಿದ್ದರಾಮಯ್ಯ ಅವರೊಂದಿಗಿನ ತಮ್ಮ ಆಡಳಿತಾತ್ಮಕ ಅನುಭವಗಳನ್ನು ನೆನೆದು ಫೇಸ್‌ಬುಕ್‌ನಲ್ಲಿ ಸುದೀರ್ಘ ಹಾಗೂ ಭಾವುಕ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ, ತಳಮಟ್ಟದ ಜನರ ಪರವಾದ ಕಾಳಜಿ ಮತ್ತು ಯುವ ಅಧಿಕಾರಿಗಳಿಗೆ ಅವರು ನೀಡುತ್ತಿದ್ದ ಧೈರ್ಯವನ್ನು ಸೆಂಥಿಲ್ ಶ್ಲಾಘಿಸಿದ್ದಾರೆ.

ಕೋಮುಗಲಭೆ ಸಂದರ್ಭದ ಆ ಫೋನ್ ಕರೆ!

ತಾವು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ದಿನಗಳ ಕಠಿಣ ಸಂದರ್ಭವನ್ನು ಸ್ಮರಿಸಿರುವ ಸೆಂಥಿಲ್, “ಆಗ ಜಿಲ್ಲೆಯಲ್ಲಿ ಎರಡು ಧರ್ಮಗಳ ಇಬ್ಬರು ವ್ಯಕ್ತಿಗಳು ಕೊಲ್ಲಲ್ಪಟ್ಟಿದ್ದರು. ಇಡೀ ನಗರವೇ ಕೋಮು ಸ್ಫೋಟದ ಅಂಚಿನಲ್ಲಿ ನಿಂತಿತ್ತು. ಆ ಆತಂಕದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನನಗೆ ಕರೆ ಮಾಡಿದರು. ಅವರ ಧ್ವನಿಯಲ್ಲಿ ಎಂದಿನಂತೆ ನೇರ ನಡೆ ಇತ್ತು. ‘ನೀವು ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಏನು ಮಾಡಬೇಕೋ ಅದನ್ನು ಮುಲಾಜಿಲ್ಲದೆ ಮಾಡಿ. ತಪ್ಪು ಮಾಡಿದವರು ನಮ್ಮದೇ ಪಕ್ಷದವರಾಗಿದ್ದರೂ ಬಂಧಿಸಲು ಹಿಂದೇಟು ಹಾಕಬೇಡಿ. ಆದರೆ ಪರಿಸ್ಥಿತಿ ಮಾತ್ರ ಒಂದು ದಿನದೊಳಗೆ ನಿಯಂತ್ರಣಕ್ಕೆ ಬರಬೇಕು’ ಎಂದು ಸ್ಪಷ್ಟ ಸೂಚನೆ ನೀಡಿದ್ದರು” ಎಂದು ಬರೆದುಕೊಂಡಿದ್ದಾರೆ.

“ಆ ಮಾತುಗಳು ಆತಂಕದಲ್ಲಿದ್ದ ಒಬ್ಬ ಯುವ ಜಿಲ್ಲಾಧಿಕಾರಿಗೆ ಅಪಾರ ವಿಶ್ವಾಸ ಮತ್ತು ಧೈರ್ಯವನ್ನು ನೀಡಿದವು. ಅದು ಕೇವಲ ಅಧಿಕಾರಯುತ ಆದೇಶವಾಗಿರಲಿಲ್ಲ; ಬದಲಿಗೆ ಒಬ್ಬ ಜವಾಬ್ದಾರಿಯುತ ನಾಯಕನ ಪ್ರಾಮಾಣಿಕ ರಾಜಕೀಯ ಇಚ್ಛಾಶಕ್ತಿ ಮತ್ತು ಅಧಿಕಾರಿಗೆ ನೀಡಿದ ಸಂಪೂರ್ಣ ಬೆಂಬಲವಾಗಿತ್ತು” ಎಂದು ಸೆಂಥಿಲ್ ಅಭಿಪ್ರಾಯಪಟ್ಟಿದ್ದಾರೆ.

ಇತರ ಆಡಳಿತಗಾರರಿಗಿಂತ ಭಿನ್ನವಾಗಿದ್ದ ‘ಸಿದ್ದು’

ತಮ್ಮ ಅಧಿಕಾರಾವಧಿಯ ಮತ್ತೊಂದು ವಿಭಿನ್ನ ಅನುಭವವನ್ನು ಹಂಚಿಕೊಂಡಿರುವ ಅವರು, “ಮತ್ತೊಂದು ಆಡಳಿತಾವಧಿಯಲ್ಲಿ (ಬೇರೆ ಸರ್ಕಾರದ ಅವಧಿಯಲ್ಲಿ) ಇದೇ ರೀತಿಯ ಕೋಮು ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾದಾಗ, ಆಡಳಿತ ಕಡೆಯಿಂದ ಕರೆ ಬಂದು ‘ಯಾವುದೇ ಕಠಿಣ ಕ್ರಮ ಕೈಗೊಳ್ಳಬೇಡಿ; ಪರಿಸ್ಥಿತಿ ಹೇಗಿದೆಯೋ ಹಾಗೆಯೇ ಇರಲಿ’ ಎಂಬ ಸೂಚನೆ ಬಂದಿತ್ತು. ಇಂತಹ ನಡೆಗಳು ಯಾರು ಯಾರ ಲಾಭಕ್ಕಾಗಿ ಆಳುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತವೆ. ಆದರೆ ಸಿದ್ದರಾಮಯ್ಯ ಎಂದಿಗೂ ಆ ರೀತಿಯ ರಾಜಕಾರಣಿಯಾಗಿರಲಿಲ್ಲ” ಎಂದು ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

ಘನತೆಯಿಂದ ಕೆಳಗಿಳಿದ ನಾಯಕ

“ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸಿನ ಲೆಕ್ಕವನ್ನು ಬೆರಳ ತುದಿಯಲ್ಲಿಟ್ಟುಕೊಂಡಿದ್ದ ನಾಯಕ. ಪ್ರತಿಯೊಂದು ಹೆಜ್ಜೆಯಲ್ಲೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ, ನಿಖರತೆಯಿಂದ ಆಳ್ವಿಕೆ ನಡೆಸಿದವರು. ಸಮಾಜದ ತಳಮಟ್ಟದಲ್ಲಿರುವ ಶೋಷಿತರ, ಬಡವರ ಪರವಾಗಿ ದೃಢವಾಗಿ ನಿಂತ ವ್ಯಕ್ತಿ. ನಾನೊಬ್ಬ ರಾಜಕೀಯ ನಾಯಕನಾಗಿ ನಿಜವಾಗಿಯೂ ಗೌರವಿಸುವ ವ್ಯಕ್ತಿ ಎಂದರೆ ಅದು ಸಿದ್ದರಾಮಯ್ಯ” ಎಂದಿದ್ದಾರೆ.

“ಅವರ ನಡೆಯ ಉದಾತ್ತ ಪರಂಪರೆ ಕೇವಲ ಅವರು ಘೋಷಿಸಿದ ಯೋಜನೆಗಳಲ್ಲಾಗಲಿ ಅಥವಾ ಅವರು ಮಂಡಿಸಿದ ಬಜೆಟ್‌ಗಳಲ್ಲಾಗಲಿ ಅಡಗಿಲ್ಲ. ಬದಲಿಗೆ ಅವರು ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಅಧಿಕಾರಿಗಳಿಗೆ ಧೈರ್ಯ ತುಂಬಲು ಮಾಡುತ್ತಿದ್ದ ಆತ್ಮೀಯ ಫೋನ್ ಕರೆಯಲ್ಲಿ ಹಾಗೂ ಆತಂಕಗೊಂಡ ಅಧಿಕಾರಿಗೆ ‘ಹೋಗಿ ಶಾಂತಿ ಕಾಪಾಡಿ’ ಎಂದು ಬೆಂಬಲವಾಗಿ ನಿಲ್ಲುತ್ತಿದ್ದ ರೀತಿಯಲ್ಲಿದೆ. ಈಗ ಅವರು ಅದೇ ಘನತೆಯೊಂದಿಗೆ ತಮ್ಮ ಹುದ್ದೆಯಿಂದ ಕೆಳಗಿಳಿಯುತ್ತಿರುವಾಗ ನನ್ನ ಹೃದಯ ಆಳವಾಗಿ ಕಲಕಿದೆ. ತಾವು ನಂಬಿದ ತತ್ವಗಳು ಯಾವುದೇ ದೊಡ್ಡ ಸ್ಥಾನಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ ಎಂಬುದನ್ನು ಅರ್ಥಮಾಡಿಕೊಂಡ ನಾಯಕನ ಉದಾತ್ತ ನಡೆ ಇದು” ಎಂದು ಬಣ್ಣಿಸಿದ್ದಾರೆ.

ಕೊನೆಯದಾಗಿ, “ಸಿದ್ದರಾಮಯ್ಯನವರೇ, ನೀವು ದೀರ್ಘಕಾಲ ಆರೋಗ್ಯದಿಂದಿರಿ. ನಿಮ್ಮ ಸುದೀರ್ಘ ರಾಜಕೀಯ ಅನುಭವದಿಂದ ದೇಶಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಹೆಚ್ಚಿನ ಮಾರ್ಗದರ್ಶನ ನೀಡುವಂತಾಗಲಿ” ಎಂದು ಸಶಿಕಾಂತ್ ಸೆಂಥಿಲ್ ಶುಭ ಹಾರೈಸಿದ್ದಾರೆ.





Continue Reading

accident

ಮಂಗಳೂರು: ಕುಂಟಿಕಾನ್-ಕೊಟ್ಟಾರ ಸರ್ವಿಸ್ ರಸ್ತೆಯ ಚರಂಡಿ ಸ್ಲ್ಯಾಬ್ ಕುಸಿತ; ವಾಹನ ಸವಾರರ ಜೀವಕ್ಕೆ ಸಂಚಕಾರ!

Published

on

ಮಂಗಳೂರು: ನಗರದ ಕುಂಟಿಕಾನ್ ಜಂಕ್ಷನ್‌ನಿಂದ ಕೊಟ್ಟಾರ ಕಡೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮಧ್ಯೆ ಸಾರ್ವಜನಿಕರ ಜೀವಕ್ಕೆ ಆಪತ್ತು ತಂದೊಡ್ಡುವ ಘಟನೆಯೊಂದು ನಡೆದಿದೆ. ಇಲ್ಲಿನ ನೀರು ಹರಿದು ಹೋಗುವ ಚರಂಡಿ ಮೇಲೆ ಹಾಕಲಾಗಿದ್ದ ಸಿಮೆಂಟ್ ಸ್ಲ್ಯಾಬ್‌ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.

ಮಧ್ಯಾಹ್ನದ ವೇಳೆಗೆ ಸಂಪೂರ್ಣ ಕುಸಿತ:
ಕುಂಟಿಕಾನ್ ಡಿ-ಮಾರ್ಟ್ ಹಾಗೂ ಬಿ.ಎಂ.ಎಸ್ ಹೋಟೆಲ್ ಮುಂಭಾಗದ ಸರ್ವಿಸ್ ರಸ್ತೆಯ ಅಂಡರ್‌ಪಾಸ್ ತಿರುವಿನಲ್ಲೇ ಈ ಅಪಾಯಕಾರಿ ಕಂದಕ ಸೃಷ್ಟಿಯಾಗಿದೆ. ಇಂದು (ಮೇ 29) ಮುಂಜಾನೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿದ್ದ ಈ ಸ್ಲ್ಯಾಬ್, ಮಧ್ಯಾಹ್ನದ ವೇಳೆಗೆ ವಾಹನಗಳ ಸಂಚಾರದ ಒತ್ತಡಕ್ಕೆ ಸಿಲುಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರಿಣಾಮ ರಸ್ತೆಯ ಮಧ್ಯದಲ್ಲೇ ದೊಡ್ಡದೊಂದು ಕಂದಕ ನಿರ್ಮಾಣವಾಗಿದೆ.

ಸ್ಥಳೀಯರಿಂದ ಹಳೆ ಟೈರ್ ಇಟ್ಟು ಎಚ್ಚರಿಕೆ:
ಯಾವುದೇ ಕ್ಷಣದಲ್ಲೂ ದ್ವಿಚಕ್ರ ವಾಹನಗಳು ಅಥವಾ ಇತರ ವಾಹನಗಳು ಈ ಕಂದಕಕ್ಕೆ ಬಿದ್ದು ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಸವಾರರ ಗಮನಕ್ಕೆ ಬರಲೆಂದು ಸ್ಥಳೀಯರೇ ಕಂದಕದ ಮೇಲೆ ಹಳೇ ಟೈರ್ ಒಂದನ್ನು ಇಟ್ಟು ತಾತ್ಕಾಲಿಕ ಎಚ್ಚರಿಕೆ ಫಲಕದಂತೆ ರೂಪಿಸಿದ್ದಾರೆ. ಆದರೂ ರಾತ್ರಿ ವೇಳೆಯಲ್ಲಿ ಅಥವಾ ಅತಿ ವೇಗವಾಗಿ ಬರುವ ವಾಹನಗಳಿಗೆ ಇದು ಕಾಣಿಸದೆ ದೊಡ್ಡ ಅನಾಹುತ ಸಂಭವಿಸುವ ಭೀತಿ ದಟ್ಟವಾಗಿದೆ.

ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ:
ಕುಂಟಿಕಾನ್ ಮತ್ತು ಕೊಟ್ಟಾರ ಭಾಗವು ಅತ್ಯಂತ ಬ್ಯುಸಿ ರಸ್ತೆಯಾಗಿದ್ದು, ನಿರಂತರವಾಗಿ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ರಸ್ತೆ ಇಷ್ಟೊಂದು ಅಪಾಯಕಾರಿಯಾಗಿದ್ದರೂ ಸಂಬಂಧಪಟ್ಟ ಇಲಾಖೆಯಾಗಲಿ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಇತ್ತ ತಲೆಹಾಕದಿರುವುದು ಸ್ಥಳೀಯರ ಹಾಗೂ ವಾಹನ ಸವಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

“ಯಾವುದೋ ದೊಡ್ಡ ಜೀವಹಾನಿ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸ್ಲ್ಯಾಬ್‌ಗಳನ್ನು ದುರಸ್ತಿಗೊಳಿಸಬೇಕು. ವಾಹನ ಸವಾರರ ಜೀವ ರಕ್ಷಿಸಬೇಕು” ಎಂದು ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು ಬಲವಾಗಿ ಆಗ್ರಹಿಸಿದ್ದಾರೆ.

ಮಾಹಿತಿ ನೀಡಿದವರು : ಸತೀಶ್‌ ಕಾಪಿಕಾಡು, ಹಿರಿಯ ವರದಿಗಾರರು




Continue Reading

accident

ಕುಡಿದು ಕಾರು ಚಲಾಯಿಸಿದ ಯಕ್ಷ ಭಾಗವತನಿಂದ ಪೊಲೀಸರಿಗೆ ಡಿಕ್ಕಿ – ಹೆಡ್ ಕಾನ್ಸ್ಟೇಬಲ್ ಗಂಭೀರ

Published

on

ಮಂಗಳೂರು: ಕುಡಿದ ಮತ್ತಿನಲ್ಲಿ ರಾಂಗ್ ಸೈಡ್‌ನಲ್ಲಿ ಕಾರು ಚಲಾಯಿಸಿದ ಯಕ್ಷ ತೆಲಿಕೆಯ ಭಾಗವತನೊಬ್ಬ ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದ ಘಟನೆ ಮಣ್ಣಗುಡ್ಡೆ ವೇರ್ ಹೌಸ್ ಬಳಿ ನಡೆದಿದೆ. ಅಪಘಾತದಲ್ಲಿ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಗಂಭೀರವಾಗಿ ಗಾಯಗೊಂಡು ಸೊಂಟದಿಂದ ಕೆಳಗೆ ಶಕ್ತಿ ಕಳೆದುಕೊಂಡಿದ್ದಾರೆ.

ಘಟನೆ ವಿವರ:
ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿಠ್ಠಲ್ ದಾಸ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ಕುಮಾರ ಅವರು ರಾತ್ರಿ ಕರ್ತವ್ಯದಲ್ಲಿದ್ದರು. ಬಲ್ಲಾಲ್ ಬಾಗ್ ಜಂಕ್ಷನ್ ಬಳಿ ನಡೆದ ವಾಹನ ಅಪಘಾತ ಪ್ರಕರಣ ಪರಿಶೀಲಿಸಿ ಠಾಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ, ರಸ್ತೆ ಬದಿಯಲ್ಲಿ ನಿಂತಿದ್ದ ಅವರಿಗೆ KA-19 MP-9623 ನಂಬರ್‌ನ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ.

ಕಾರು ಚಲಾಯಿಸುತ್ತಿದ್ದ ಆರೋಪಿ ಸಂಪಾಜೆ ನಿವಾಸಿ ಧೀರಜ್ ಆರ್ ರೈ, ಯಕ್ಷ ತೆಲಿಕೆಯ ಭಾಗವತನಾಗಿದ್ದು, ಕುಡಿದಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆತ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿಕೊಂಡು ಬಂದು ಅಪಘಾತ ಎಸಗಿದ್ದಾನೆ.

ಹೆಡ್ ಕಾನ್‌ಸ್ಟೇಬಲ್ ವಿಠ್ಠಲ್ ದಾಸ್: ಅಪಘಾತದ ರಭಸಕ್ಕೆ ನೆಲಕ್ಕೆ ಬಿದ್ದ ಇವರ ತಲೆ, ಕುತ್ತಿಗೆ ಹಾಗೂ ಬೆನ್ನುಮೂಳೆಗೆ (ಸ್ಪೈನ್) ಗಂಭೀರ ಗಾಯಗಳಾಗಿವೆ. ತಕ್ಷಣವೇ ಇವರನ್ನು ಆಟೋ ರಿಕ್ಷಾ ಮೂಲಕ ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಪ್ರಕಾರ, ಇವರ ಸ್ಪೈನಲ್ ಕಾರ್ಡ್‌ಗೆ ತೀವ್ರ ಹಾನಿಯಾಗಿದ್ದು, ಸೊಂಟದಿಂದ ಕೆಳಭಾಗಕ್ಕೆ ಶಕ್ತಿ ಕುಂದಿದೆ. ಈಗಾಗಲೇ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ (Surgery) ಮಾಡಲಾಗಿದೆ.

ಕಾನ್‌ಸ್ಟೇಬಲ್ ಕುಮಾರ್: ಡಿಕ್ಕಿಯ ಪರಿಣಾಮ ಇವರ ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದು (Leg Fracture), ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾನೂನು ಕ್ರಮ:

ಪ್ರಾಥಮಿಕ ತನಿಖೆಯಲ್ಲಿ ಚಾಲಕ ಮದ್ಯಪಾನ ಮಾಡಿ, ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 (ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷ್ಯದ ಚಾಲನೆ) ಹಾಗೂ 125(b) (ಇತರರ ಜೀವಕ್ಕೆ ಅಪಾಯ ತರುವಂತಹ ಗಂಭೀರ ಗಾಯ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ

Continue Reading

Trending

Copyright © 2025 Deevatige

error: Content is protected !!