Connect with us

Kasaragod

ಕೇರಳದಲ್ಲಿ ಭಾರಿ ಪ್ರಮಾಣದಲ್ಲಿ ಸ್ಪೋಟಕ ಸಾಗಾಣಿಕೆ ಪತ್ತೆ ; ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ ಸಾಗಾಟ; ಫಿಲ್ಮಿ ಸ್ಟೈಲಲ್ಲಿ ಬೆನ್ನಟ್ಟಿ ಖದೀಮನ ಹೆಡೆಮುರಿ ಕಟ್ಟಿದ ಪಾಲಕ್ಕಾಡ್ ಪೊಲೀಸರು..

Published

on

ಕೇರಳದ ಪಾಲಕ್ಕಾಡ್ ಪಟ್ಟಣದ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಿಕಪ್ ವಾಹನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು ಬೆನ್ನಟ್ಟಿ ಹಿಡಿದ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕ ಪತ್ತೆ ಹಚ್ಚಿದ್ದಾರೆ.

ಪಾಲಕ್ಕಾಡ್ ಟೌನ್ ಸೌತ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಭಾರಿ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದೆ.

ಪೊಲೀಸರು ತಪಾಸಣೆಗಾಗಿ ವಾಹನ ನಿಲ್ಲಿಸಲು ಸೂಚಿಸಿದಾಗ, ಚಾಲಕ ಗಾಡಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರ ತಂಡ ಪಿಕಪ್ ವಾಹನವನ್ನು ಫಿಲ್ಮಿ ಸ್ಟೈಲಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಕಪ್ ವಾಹನದಲ್ಲಿ ಮೇಲ್ನೋಟಕ್ಕೆ ಕಲ್ಲಂಗಡಿ ಹಣ್ಣಿನ ಚೀಲಗಳವನ್ನು ಸಾಗಿಸಲಾಗಿತ್ತು. ಅನುದಾನಗೊಂಡ ಪೊಲೀಸರು ಮತ್ತಷ್ಟು ಕೂಲಂಕಷವಾಗಿ ಪರಿಶೀಲಿಸಿದಾಗ ಇವುಗಳ ಕೆಳಗೆ ಅತೀ ವ್ಯವಸ್ಥಿತವಾಗಿ 100ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳ ಪೆಟ್ಟಿಗೆಗಳು ಮತ್ತು 20ಕ್ಕೂ ಹೆಚ್ಚು ಡಿಟೋನೇಟರ್ ಬಾಕ್ಸ್‌ಗಳನ್ನು ಬಚ್ಚಿಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಚಾಲಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ಈ ಸ್ಫೋಟಕಗಳನ್ನು ತಮಿಳುನಾಡಿನ ಕೊಯಮತ್ತೂರಿನಿಂದ ತ್ರಿಶೂರ್‌ನಲ್ಲಿರುವ ಕಲ್ಲಿನ ಕ್ವಾರಿಯೊಂದಕ್ಕೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Kasaragod

ವಿಟ್ಲದ ಯುವಕನನ್ನು ಅಪಹರಿಸಿ, ನಗ್ನ ವೀಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್: ಲಕ್ಷಕ್ಕೂ ಅಧಿಕ ಹಣ ಸುಲಿಗೆ!

Published

on

ಕಾಸರಗೋಡು / ವಿಟ್ಲ: ಯುವಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿ, ಕೊಠಡಿಯಲ್ಲಿ ಕೂಡಿಹಾಕಿ ಅಪ್ರಾಪ್ತ ಬಾಲಕನೊಂದಿಗೆ ಬೆತ್ತಲೆಯಾಗಿ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಿ, ಪೋಕ್ಸೋ ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿ 1.02 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಸೇರಾಜೆ ನಿವಾಸಿ ಎ.ಎಸ್. ಸುಜೀತ್ ನೀಡಿದ ದೂರಿನ ಆಧಾರದಲ್ಲಿ ಕಾಸರಗೋಡಿನ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಆಗಸ್ಟ್ 29ರ ಸಂಜೆ ನಡೆದ ಕೃತ್ಯ:

ದೂರಿನಲ್ಲಿ ಉಲ್ಲೇಖಿಸಲಾದ ವಿವರಗಳ ಪ್ರಕಾರ, ಆಗಸ್ಟ್ 29ರಂದು ಸಂಜೆ ಸುಮಾರು 6 ಗಂಟೆಗೆ ಪೇರ್ಲ ಸಮೀಪದ ಉಕ್ಕಿನಡ್ಕದಲ್ಲಿ ಈ ಘಟನೆ ನಡೆದಿದೆ. ಉಕ್ಕಿನಡ್ಕದಲ್ಲಿದ್ದ ಸುಜೀತ್ ಅವರನ್ನು ತಡೆದ ಆರೋಪಿಗಳ ತಂಡವು ಮರದ ದೊಣ್ಣೆ ಹಾಗೂ ಕತ್ತಿ ತೋರಿಸಿ ಬೆದರಿಕೆ ಹಾಕಿದೆ. ಬಳಿಕ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಚೇಕಳ ಸಮೀಪದ ಕ್ವಾರ್ಟರ್ಸ್‌ಗೆ ತಲುಪಿಸಲಾಗಿದೆ.

ಪೋಕ್ಸೋ ಕೇಸ್ ಹಾಗೂ ಕೊಲೆ ಬೆದರಿಕೆ:

ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಸುಜೀತ್ ಅವರನ್ನು ಕೂಡಿಹಾಕಿ ಬಟ್ಟೆ ಬಿಚ್ಚಿಸಿ ಬೆದರಿಕೆ ಒಡ್ಡಲಾಗಿದೆ. ನಂತರ ಕೊಠಡಿಯಲ್ಲಿದ್ದ ಅಪ್ರಾಪ್ತ ಬಾಲಕನೊಂದಿಗೆ ನಿಲ್ಲಿಸಿ ವೀಡಿಯೋ ಚಿತ್ರೀಕರಿಸಲಾಗಿದೆ. ಈ ವೀಡಿಯೋವನ್ನು ಇಟ್ಟುಕೊಂಡು, ಹಣ ನೀಡದಿದ್ದರೆ ಪೋಕ್ಸೋ (POCSO) ಪ್ರಕರಣದಲ್ಲಿ ಸಿಲುಕಿಸುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆದರಿದ ಯುವಕನಿಂದ ಒಟ್ಟು 1,02,000 ರೂಪಾಯಿ ಹಣವನ್ನು ಪಡೆದುಕೊಂಡ ಬಳಿಕ ಆರೋಪಿಗಳು ಅವರನ್ನು ಬಿಡುಗಡೆ ಮಾಡಿದ್ದಾರೆ.

ವಿವಿಧ ಆಯಾಮಗಳಲ್ಲಿ ಪೊಲೀಸ್ ತನಿಖೆ:

ಘಟನೆಗೆ ಸಂಬಂಧಿಸಿ ಈಗಾಗಲೇ ಗುರುತು ಪತ್ತೆಯಾಗಿರುವ ಆರೋಪಿಗಳ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ತನಿಖೆ ಚುರುಕುಗೊಳಿಸಲಾಗಿದ್ದು, ಘಟನೆ ನಡೆದ ಸ್ಥಳಗಳು ಹಾಗೂ ಆರೋಪಿಗಳು ಸಂಚರಿಸಿರಬಹುದಾದ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳು ಹಾಗೂ ಸಂತ್ರಸ್ತನ ನಡುವಿನ ಹಳೆಯ ಸಂಬಂಧ, ಹಣದ ವ್ಯವಹಾರ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಿರತರಾಗಿದ್ದಾರೆ.

Continue Reading

DEATH

ಆತ್ಮಹತ್ಯೆಗೆ ಮುನ್ನ ವೀಡಿಯೋ ಕಾಲ್ ಮಾಡಿದ್ದ ಅನುಶ್ರೀ-ಅಮಲ್: ಮದುವೆಯಾಗಬೇಕಿದ್ದ ಜೋಡಿಯ ದುರಂತ ಅಂತ್ಯ

Published

on

ವೀಡಿಯೋ ಕಾಲ್‌ನಲ್ಲಿದ್ದಾಗಲೇ ಯುವತಿ ಆತ್ಮಹತ್ಯೆ: ಸುದ್ದಿ ತಿಳಿದು ಭಾವಿ ಪತಿಯೂ ದುರಂತ ಅಂತ್ಯ!

ಬೆಂಗಳೂರು/ಕಾಸರಗೋಡು: ಕರ್ನಾಟಕದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಮಲೆಯಾಳಿ ಯುವತಿ ಹಾಗೂ ಆಕೆಯ ನಿಶ್ಚಿತಾರ್ಥವಾಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ಬೆಳಕಿಗೆ ಬಂದಿದೆ.

ವೀಡಿಯೋ ಕಾಲ್‌ನಲ್ಲಿರುವಾಗಲೇ ಬ್ಯಾಂಕ್ ಉದ್ಯೋಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕಹಿ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ ಭಾವಿ ಪತಿಯೂ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಕರ್ನಾಟಕ ಮತ್ತು ಕೇರಳದಲ್ಲಿ ದಿಗ್ಭ್ರಮೆ ಮೂಡಿಸಿದೆ.

ಕಾಸರಗೋಡಿನ ಪೂಚಕ್ಕಾಡ್ ಮೂಲದ ಚಂದ್ರನ್ ಅವರ ಪುತ್ರಿ ಪಿ. ಅನುಶ್ರೀ (25) ಮತ್ತು ಕಣ್ಣೂರಿನ ಅಂಬಲತ್ತಟ್ ಮೂಲದ ವಿ. ಅಮಲ್ (27) ದುರಂತಕ್ಕೀಡಾದ ಜೋಡಿ. ಇವರಿಬ್ಬರೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಉದ್ಯೋಗಿಗಳಾಗಿದ್ದರು. ಅನುಶ್ರೀ ಮೈಸೂರು ಜಿಲ್ಲೆಯ ಹುಣಸೂರು ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಅಮಲ್ ಎರ್ನಾಕುಲಂನ ಎಸ್‌ಬಿಐ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಎಸ್‌ ಬಿ ಐ ನಲ್ಲಿ ಉದ್ಯೋಗದಲ್ಲಿದ್ದ ಅನುಶ್ರೀ ತರಬೇತಿ ಸಮಯದಲ್ಲಿ ಪರಿಚಯವಾಗಿದ್ದ ಕೇರಳದ ಎರ್ನಾಕುಲಂ ಎಸ್‌ ಬಿ ಐ ಉದ್ಯೋಗಿ ಅಮಲ್‌ ಅವರನ್ನು ಪ್ರೀತಿ ಮಾಡುತ್ತಿದ್ದರು.ಇಬ್ಬರಿಗೂ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಡಿಸೆಂಬರ್ 26 ರಂದು ಮದುವೆ ನಿಗದಿಯಾಗಿತ್ತು. ಮದುವೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಈ ಜೋಡಿ ಇಹಲೋಕ ತ್ಯಜಿಸಿದೆ.

ಘಟನೆಯ ವಿವರ:

ವೀಡಿಯೋ ಕಾಲ್ ವೇಳೆ ದುರಂತ: ಮಂಗಳವಾರ ರಾತ್ರಿ ಹುಣಸೂರಿನ ತಮ್ಮ ಬಾಡಿಗೆ ಮನೆಯಲ್ಲಿದ್ದ ಅನುಶ್ರೀ, ವೀಡಿಯೋ ಕಾಲ್‌ನಲ್ಲಿದ್ದಾಗಲೇ ಪ್ರಾಣತ್ಯಾಗ ಮಾಡಿದ್ದಾರೆ ಎನ್ನಲಾಗಿದೆ.

ಆಘಾತದಿಂದ ಯುವಕನ ಆತ್ಮಹತ್ಯೆ: ಅನುಶ್ರೀ ಅವರ ಸಾವಿನ ಸುದ್ದಿ ತಿಳಿದು ತೀವ್ರ ಆಘಾತಕ್ಕೊಳಗಾದ ಅಮಲ್, ಕೇರಳದ ಎರ್ನಾಕುಲಂ ನಾರ್ತ್ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದುರಂತದ ಸುತ್ತ ಅನುಮಾನ:

ಇಬ್ಬರೂ ಪ್ರಾಣ ಕಳೆದುಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನು ಗೂಢವಾಗಿಯೇ ಉಳಿದಿದೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಹಾಗೂ ಕೇರಳ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಸತ್ಯಾಸತ್ಯತೆ ಹೊರತರಲು ಜಂಟಿ ತನಿಖೆ ಆರಂಭಿಸಿದ್ದಾರೆ.

Continue Reading

DEATH

ನೀಟ್ ತಂಗಿಯ ಅಗಲಿಕೆ ತಾಳಲಾರದೆ ದುಬೈನಿಂದ ಬಂದ ಸೋದರ ಮಂಗಳೂರಿನಲ್ಲಿ ಆತ್ಮಹತ್ಯೆ: ಕಾಸರಗೋಡಿನ ಕುಟುಂಬಕ್ಕೆ ಆಘಾತ!

Published

on

ಮಂಗಳೂರು / ಕಾಸರಗೋಡು (ಆಗಸ್ಟ್ 10): ನೀಟ್ (NEET) ಪರೀಕ್ಷೆಯ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು, ಮರು ಪರೀಕ್ಷೆಯ ತಯಾರಿಯಲ್ಲಿದ್ದಾಗಲೇ ಜೂನ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾಸರಗೋಡಿನ ಯುವತಿಯ ಸಹೋದರ, ತಂಗಿಯ ಅಗಲಿಕೆಯ ಬೇಸರದಲ್ಲಿ ಮಂಗಳೂರಿನ ಹೋಟೆಲ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದುಬೈನಲ್ಲಿ ಆಟೋಮೊಬೈಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕ, ತಂಗಿ ತೀರಿಕೊಂಡ ಕೇವಲ ಎರಡೇ ತಿಂಗಳಲ್ಲಿ ಈ ದುರಂತ ನಿರ್ಧಾರ ಕೈಗೊಂಡಿರುವುದು ಇಡೀ ಕುಟುಂಬವನ್ನು ಕಂಗಾಲುಗೊಳಿಸಿದೆ.

ಘಟನೆಯ ವಿವರ:

ಮೃತರನ್ನು ಕಾಸರಗೋಡು ಜಿಲ್ಲೆಯ ಬೇಕಲ ಸಮೀಪದ ಪಳ್ಳಿಕ್ಕರ ಮುಕ್ಕೂಡು ನಿವಾಸಿಗಳಾದ ಕೆ. ರಾಧಿಕಾ ಮತ್ತು ಮಹೇಶ್ ದಂಪತಿಯ ಪುತ್ರ ಅರ್ಜುನ್ ಮಹೇಶ್ (24) ಎಂದು ಗುರುತಿಸಲಾಗಿದೆ.

ಅರ್ಜುನ್ ದುಬೈನ ನಿಸ್ಸಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೂನ್ 2 ರಂದು ಇವರ ತಂಗಿ ಆಯ್ಜಾ ಆರ್. ಮಹೇಶ್ (19) ಆತ್ಮಹತ್ಯೆ ಮಾಡಿಕೊಂಡಾಗ ಊರಿಗೆ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಬಳಿಕ ದುಬೈಗೆ ಮರಳಿದ್ದರು. ಆದರೆ, ತಂಗಿಯ ಅಗಲಿಕೆಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅವರು ಭಾನುವಾರ (ಆಗಸ್ಟ್ 9) ಅಬುಧಾಬಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು.

ಕುಟುಂಬಕ್ಕೆ ತಿಳಿಸದೆ ಮಂಗಳೂರಿಗೆ ಬಂದಿದ್ದ ಅರ್ಜುನ್:

ಅರ್ಜುನ್ ತಾವು ಭಾರತಕ್ಕೆ ಮರಳುತ್ತಿರುವ ವಿಷಯವನ್ನು ಕುಟುಂಬದವರಿಗೆ ತಿಳಿಸಿರಲಿಲ್ಲ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾಯಿಗೆ ಕರೆ ಮಾಡಿ ಮಾತನಾಡಿದ್ದರಾದರೂ ತಾವು ಮಂಗಳೂರಿನಲ್ಲಿರುವುದಾಗಿ ಹೇಳಿರಲಿಲ್ಲ. ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿತ್ತು.

ಮಧ್ಯಾಹ್ನದ ವೇಳೆಗೆ ದುಬೈನಲ್ಲಿದ್ದ ಅರ್ಜುನ್ ಸ್ನೇಹಿತರು, ಆತ ಮನೆಗೆ ಮರಳುತ್ತಿರುವ ವಿಷಯವನ್ನು ಕುಟುಂಬಕ್ಕೆ ತಿಳಿಸಿದ್ದರು. ಫೋನ್ ಸಂಪರ್ಕಕ್ಕೆ ಸಿಗದಿದ್ದಾಗ ಆತಂಕಗೊಂಡ ಸಂಬಂಧಿಕರು ಹಾಗೂ ನೆರೆಹೊರೆಯವರು ಭಾನುವಾರವೇ ಮಂಗಳೂರಿಗೆ ಆಗಮಿಸಿ ಪೊಲೀಸರ ನೆರವು ಕೋರಿದ್ದರು.

ಹೋಟೆಲ್‌ನಲ್ಲಿ ಶವವಾಗಿ ಪತ್ತೆ:

ಬಜ್ಪೆ ಹಾಗೂ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಧ ನಡೆಸಿದಾಗ, ಮಂಗಳೂರು ವಿಮಾನ ನಿಲ್ದಾಣದ ಬಳಿಯ ಮರವೂರು ಪರಿಸರದ ‘Sky Grand Empire’ ಹೋಟೆಲ್‌ನಲ್ಲಿ ಅವರು ಕೊಠಡಿ ಬುಕ್ ಮಾಡಿದ್ದು ತಿಳಿದುಬಂದಿದೆ. ಕೊಠಡಿ ಬುಕ್ ಮಾಡುವಾಗ ಅರ್ಜುನ್ ತಮ್ಮ ಹೆಸರನ್ನು ‘ಅರ್ಜುನ್ ರಾಧಿಕಾ’ (ತಾಯಿಯ ಹೆಸರು ಸೇರಿಸಿ) ಎಂದು ನೀಡಿದ್ದರು.

ಸೋಮವಾರ (ಆಗಸ್ಟ್ 10) ಮಧ್ಯಾಹ್ನದ ವೇಳೆಗೆ ಪೊಲೀಸರು ಹೋಟೆಲ್‌ನ ಕೊಠಡಿಯ ಬಾಗಿಲು ತೆರೆದು ಪರಿಶೀಲಿಸಿದಾಗ ಅರ್ಜುನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಡೆತ್ ನೋಟ್: ಕೊಠಡಿಯಲ್ಲಿ ಪೊಲೀಸರಿಗೆ ಸಣ್ಣ ಪತ್ರವೊಂದು ಸಿಕ್ಕಿದ್ದು, ಅದರಲ್ಲಿ “ಅಮ್ಮಾ, ನನ್ನನ್ನು ಕ್ಷಮಿಸು (I Love ಅಮ್ಮಾ, Miss You)… ನನ್ನ ಸಾವಿನ ವಿಷಯವನ್ನು ನನ್ನ ಇಬ್ಬರು ಸ್ನೇಹಿತರಿಗೆ ತಿಳಿಸಿ” ಎಂದು ಬರೆಯಲಾಗಿದೆ.

ಸಹೋದರಿಯ ಸಾವಿನ ಹಿನ್ನೆಲೆ:

ಅರ್ಜುನ್ ಅವರ ಏಕೈಕ ತಂಗಿ ಆಯ್ಜಾ, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಭರವಸೆಯಲ್ಲಿದ್ದರು. ಆದರೆ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ NTA ಪರೀಕ್ಷೆ ರದ್ದುಗೊಳಿಸಿ ಮರು ಪರೀಕ್ಷೆ ಘೋಷಿಸಿದಾಗ ತೀವ್ರ ಮನನೊಂದಿದ್ದರು. ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ, ಜೂನ್ 2 ರಂದು ಕೊಟ್ಯಾಯಂ ಜಿಲ್ಲೆಯ ಪಾಲಾದಲ್ಲಿರುವ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡಿದ್ದರು. ಜೂನ್ 3 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಎರಡೇ ತಿಂಗಳ ಅಂತರದಲ್ಲಿ ಇಬ್ಬರೂ ಮಕ್ಕಳು ಸಾವನ್ನಪ್ಪಿರುವುದರಿಂದ ಹೆತ್ತವರು ಹಾಗೂ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಪೊಲೀಸ್ ತನಿಖೆ:

ಘಟನೆ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮನವಿ / ಸಹಾಯವಾಣಿ: ಮಾನಸಿಕ ಒತ್ತಡ ಅಥವಾ ನಿರಾಶೆಯಿಂದ ಬಳಲುತ್ತಿದ್ದರೆ ದಯವಿಟ್ಟು ಯೋಚಿಸಬೇಡಿ, ನಿಮ್ಮ ಆತ್ಮೀಯರೊಂದಿಗೆ ಅಥವಾ ಕುಟುಂಬದವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ.

  • ಕೇಂದ್ರ ಸರ್ಕಾರದ ‘ಕಿರಣ್’ (Kiran) ಮಾನಸಿಕ ಆರೋಗ್ಯ ಸಹಾಯವಾಣಿ: 1800-599-0019
Continue Reading

Trending

Copyright © 2025 Deevatige

error: Content is protected !!