Kasaragod
ಕೇರಳದಲ್ಲಿ ಭಾರಿ ಪ್ರಮಾಣದಲ್ಲಿ ಸ್ಪೋಟಕ ಸಾಗಾಣಿಕೆ ಪತ್ತೆ ; ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಪಿಕಪ್ ವಾಹನದಲ್ಲಿ ಸಾಗಾಟ; ಫಿಲ್ಮಿ ಸ್ಟೈಲಲ್ಲಿ ಬೆನ್ನಟ್ಟಿ ಖದೀಮನ ಹೆಡೆಮುರಿ ಕಟ್ಟಿದ ಪಾಲಕ್ಕಾಡ್ ಪೊಲೀಸರು..
ಕೇರಳದ ಪಾಲಕ್ಕಾಡ್ ಪಟ್ಟಣದ ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಪಿಕಪ್ ವಾಹನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದು ಬೆನ್ನಟ್ಟಿ ಹಿಡಿದ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕ ಪತ್ತೆ ಹಚ್ಚಿದ್ದಾರೆ.
ಪಾಲಕ್ಕಾಡ್ ಟೌನ್ ಸೌತ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಭಾರಿ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದೆ.

ಪೊಲೀಸರು ತಪಾಸಣೆಗಾಗಿ ವಾಹನ ನಿಲ್ಲಿಸಲು ಸೂಚಿಸಿದಾಗ, ಚಾಲಕ ಗಾಡಿಯನ್ನು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರ ತಂಡ ಪಿಕಪ್ ವಾಹನವನ್ನು ಫಿಲ್ಮಿ ಸ್ಟೈಲಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಕಪ್ ವಾಹನದಲ್ಲಿ ಮೇಲ್ನೋಟಕ್ಕೆ ಕಲ್ಲಂಗಡಿ ಹಣ್ಣಿನ ಚೀಲಗಳವನ್ನು ಸಾಗಿಸಲಾಗಿತ್ತು. ಅನುದಾನಗೊಂಡ ಪೊಲೀಸರು ಮತ್ತಷ್ಟು ಕೂಲಂಕಷವಾಗಿ ಪರಿಶೀಲಿಸಿದಾಗ ಇವುಗಳ ಕೆಳಗೆ ಅತೀ ವ್ಯವಸ್ಥಿತವಾಗಿ 100ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳ ಪೆಟ್ಟಿಗೆಗಳು ಮತ್ತು 20ಕ್ಕೂ ಹೆಚ್ಚು ಡಿಟೋನೇಟರ್ ಬಾಕ್ಸ್ಗಳನ್ನು ಬಚ್ಚಿಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನ ಚಾಲಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ, ಈ ಸ್ಫೋಟಕಗಳನ್ನು ತಮಿಳುನಾಡಿನ ಕೊಯಮತ್ತೂರಿನಿಂದ ತ್ರಿಶೂರ್ನಲ್ಲಿರುವ ಕಲ್ಲಿನ ಕ್ವಾರಿಯೊಂದಕ್ಕೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
DEATH
ಮಾನವೀಯತೆ ಮೆರೆದ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ: ಕ್ಯಾನ್ಸರ್ನಿಂದ ಮೃತಪಟ್ಟ ಮಾಜಿ ಆರ್ಎಸ್ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ ನೆರವೇರಿಸಿ ಸೌಹಾರ್ದತೆ ಮುನ್ನುಡಿ!
ಕಾಸರಗೋಡು: ಧರ್ಮ, ರಾಜಕೀಯ ಮತ್ತು ಜಾತಿಗಳ ಆಚೆಗೂ ಮನುಷ್ಯತ್ವ ದೊಡ್ಡದು ಎಂಬುದನ್ನು ಕಾಸರಗೋಡಿನ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರು ಸಾಬೀತುಪಡಿಸಿದ್ದಾರೆ. ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಿಧನರಾದ ಮಾಜಿ ಆರ್ಎಸ್ಎಸ್ ಕಾರ್ಯಕರ್ತ, ಮೀಂಜ ಸಮೀಪದ ಚಿಗುರುಪಾದೆಯ ನಾರಾಯಣ (64) ಎಂಬವರ ಅಂತ್ಯಕ್ರಿಯೆಯನ್ನು ಖುದ್ದಾಗಿ ನೆರವೇರಿಸುವ ಮೂಲಕ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ ಅವರು ಸಮಾಜಕ್ಕೆ ಸೌಹಾರ್ದತೆಯ ವಿಶಿಷ್ಟ ಸಂದೇಶವನ್ನು ನೀಡಿದ್ದಾರೆ.

20 ವರ್ಷಗಳ ಹಿಂದೆ ಆರ್ಎಸ್ಎಸ್ನಲ್ಲಿದ್ದ ನಾರಾಯಣ:
ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಗುರುಪಾದೆಯ ನಿವಾಸಿಯಾಗಿದ್ದ ನಾರಾಯಣ ಅವರು ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲವು ಸಮಯದಿಂದ ತೀವ್ರವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಶನಿವಾರ (ಜೂ. 27) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಮೃತ ನಾರಾಯಣ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಅಂಗಡಿ ಜಗಲಿಯಲ್ಲಿ ಪತ್ತೆಯಾಗಿದ್ದ ನಾರಾಯಣ: ಆಸ್ಪತ್ರೆಗೆ ದಾಖಲಿಸಿದ್ದ ಇರ್ಫಾನಾ ತಂಡ
ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ನಾರಾಯಣ ಅವರು ತೀವ್ರವಾದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಒಂದು ತಿಂಗಳ ಹಿಂದೆ ಅವರು ಅನ್ನ, ಆಹಾರವಿಲ್ಲದೆ ಬಡತನ ಹಾಗೂ ಅಸ್ವಸ್ಥತೆಯಿಂದ ಅಂಗಡಿಯೊಂದರ ಜಗಲಿಯಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇದನ್ನು ಗಮನಿಸಿದ ವಾರ್ಡ್ ಸದಸ್ಯ ಶರೀಫ್ ಚೀನಾಲ ಅವರು ತಕ್ಷಣವೇ ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಇರ್ಫಾನಾ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಅವರ ನಿರ್ದೇಶನದಂತೆ ಉಪ್ಪಳ ಶೇಖ್ ಸೈಯದ್ ಫೌಂಡೇಶನ್ ಕಾರ್ಯಕರ್ತರ ನೆರವು ಪಡೆದರು. ಕಾರ್ಯಕರ್ತರು ನಾರಾಯಣ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಅಂತ್ಯಸಂಸ್ಕಾರಕ್ಕೆ ಯಾರೂ ಬಾರದಿದ್ದಾಗ ನೆರವಾದ ಮುಸ್ಲಿಂ ಮಹಿಳೆ!
ಅತ್ಯಂತ ಬಡತನದ ಕುಟುಂಬ ಹಿನ್ನೆಲೆಯುಳ್ಳ ಇವರ ಮನೆಯಲ್ಲಿ ವೃದ್ಧನ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಕುಟುಂಬದ ಇತರ ಸದಸ್ಯರಾಗಲಿ ಅಥವಾ ಪುರುಷರಾಗಲಿ ಯಾರೂ ಮುಂದೆ ಬರಲಿಲ್ಲ. ಕಾಯಿಲೆಯಿಂದ ತತ್ತರಿಸಿದ್ದ ಕುಟುಂಬವು ಮೃತದೇಹದ ಮುಂದೆ ಅಸಹಾಯಕವಾಗಿ ನಿಂತಿದ್ದ ಈ ಅತ್ಯಂತ ಕಠಿಣ ಸಂದರ್ಭದಲ್ಲಿ ನೆರವಿಗೆ ಧಾವಿಸಿದ್ದು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಇರ್ಫಾನಾ ಇಕ್ಬಾಲ್ (ಇರ್ಫಾನಾ ಅಬ್ದುಲ್ಲಾ).

ಮುಂಚೂಣಿಯಲ್ಲಿ ನಿಂತು ಹಿಂದೂ ಸಂಸ್ಕಾರದಂತೆ ಅಂತ್ಯಕ್ರಿಯೆ:
ಕುಟುಂಬದ ಅಸಹಾಯಕತೆಯನ್ನು ಕಂಡು ಕರಗಿದ ಇರ್ಫಾನಾ ಅವರು, ಕೇವಲ ಸಾಂತ್ವನ ಹೇಳಿ ದೂರ ನಿಲ್ಲದೆ, ತಾವೇ ಮುಂಚೂಣಿಯಲ್ಲಿ ನಿಂತು ಅಂತ್ಯಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡರು. ಮೃತರ ಹಿನ್ನೆಲೆ ಅಥವಾ ರಾಜಕೀಯ ಸಿದ್ಧಾಂತಗಳ್ಯಾವುದನ್ನೂ ಯೋಚಿಸದ ಇರ್ಫಾನಾ ಅವರು, ಹಿಂದೂ ಧರ್ಮದ ಸಾಂಪ್ರದಾಯಿಕ ವಿಧಿವಿಧಾನಗಳ ಪ್ರಕಾರವೇ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ನಾರಾಯಣ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಿ ಮಾನವೀಯತೆಯ ಹೊಸ ಹಾದಿ ತೋರಿಸಿದರು.
“ಧರ್ಮ, ರಾಜಕೀಯಗಳು ಬೇರೆಯಾಗಿರಬಹುದು, ಆದರೆ ಕಷ್ಟದ ಸಮಯದಲ್ಲಿ ಒಂದು ಕುಟುಂಬಕ್ಕೆ ಆಸರೆಯಾಗುವುದು ನಮ್ಮ ಕರ್ತವ್ಯ” ಎಂದು ಇರ್ಫಾನಾ ಅವರು ಈ ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ:
ಜಾತಿ, ಮತ ಹಾಗೂ ರಾಜಕೀಯ ಸಿದ್ಧಾಂತಗಳ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಇಂದಿನ ದಿನಗಳಲ್ಲಿ, ಮುಸ್ಲಿಂ ಸಮುದಾಯದ ಮಹಿಳಾ ಜನಪ್ರತಿನಿಧಿಯೊಬ್ಬರು ಮಾಜಿ ಆರ್ಎಸ್ಎಸ್ ಕಾರ್ಯಕರ್ತನ ಅಂತ್ಯಕ್ರಿಯೆ ನಡೆಸಿ ಮಾನವೀಯತೆ ಮೆರೆದ ಈ ಘಟನೆ ಇಡೀ ಕಾಸರಗೋಡು ಜಿಲ್ಲೆ ಮಾತ್ರವಲ್ಲದೆ ದೇಶಾದ್ಯಂತ ಜನರ ಹೃದಯ ಮುಟ್ಟಿದೆ. ಇರ್ಫಾನಾ ಇಕ್ಬಾಲ್ ಅವರ ಈ ಹೃದಯವಂತಿಕೆಗೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.



DEATH
ಕಾಸರಗೋಡು: ಅಡೂರಿನಲ್ಲಿ ಭೀಕರ ದುರಂತ; ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಸಹೋದರರು ಸಾವು, ಮತ್ತೊಬ್ಬ ಬಾಲಕನಿಗೆ ಗಂಭೀರ ಗಾಯ
ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಅಡೂರು ಸಮೀಪದ ಸಂಚಕ್ಕಡವ್ (ಪೊನೋರಂ) ಎಂಬಲ್ಲಿ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕಾಂಪೌಂಡ್ ಗೋಡೆಯೊಂದು ಕುಸಿದು ಬಿದ್ದು, ಇಬ್ಬರು ಸೋದರ ಸಂಬಂಧಿ ಬಾಲಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು (ಶನಿವಾರ) ಸಂಜೆ ಸಂಭವಿಸಿದೆ

ಅಬೂಬಕರ್ ಎಂಬುವವರ ಪುತ್ರರಾದ ಮುಸಮ್ಮಿಲ್ (14 ವರ್ಷ – 8ನೇ ತರಗತಿ) ಮತ್ತು ಮುನ್ಸಿರ್ (10 ವರ್ಷ – 5ನೇ ತರಗತಿ) ಮೃತಪಟ್ಟ ದುರ್ದೈವಿಗಳು. ಘಟನೆಯಲ್ಲಿ ಇವರ ನೆರೆಮನೆಯ 9 ವರ್ಷದ ಮತ್ತೊಬ್ಬ ಬಾಲಕನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಮೃತ ಬಾಲಕರು ಸ್ಥಳೀಯ ಅಡೂರು ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ .

ಘಟನೆಯ ವಿವರ: ಶಾಲಾ ರಜಾದಿನಗಳ ಹಿನ್ನೆಲೆಯಲ್ಲಿ ಈ ಮಕ್ಕಳು ತಮ್ಮ ಮನೆಯ ಸಮೀಪದ ರಸ್ತೆ ಬದಿಯಲ್ಲಿದ್ದ ಬಸ್ ಕಾಯುವ ನಿಲ್ದಾಣದ (Bus Waiting Shed) ಬಳಿ ಆಟವಾಡುತ್ತಾ ಪುಟ್ಟದೊಂದು ತಾತ್ಕಾಲಿಕ ಅಂಗಡಿಯನ್ನು ಇಟ್ಟುಕೊಂಡಿದ್ದರು . ಇಂದು ಸಂಜೆ ಕರಾವಳಿ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣ ಮೂವರೂ ಮಕ್ಕಳು ಅದೇ ಶೆಡ್ನ ಒಳಗೆ ಕುಳಿತಿದ್ದರು . ಈ ವೇಳೆ ಮಳೆಯ ತೀವ್ರತೆಗೆ ರಸ್ತೆಗಿಂತ ಎತ್ತರದಲ್ಲಿದ್ದ ಇವರ ಮನೆಯ ದೊಡ್ಡ ಕಾಂಪೌಂಡ್ ಗೋಡೆಯು ಏಕಾಏಕಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ .

ಗೋಡೆಯ ಭಾರಿ ಗಾತ್ರದ ಕಲ್ಲುಗಳು ಮತ್ತು ಮಣ್ಣು ನೇರವಾಗಿ ಬಸ್ ಶೆಡ್ ಹಾಗೂ ಅದರೊಳಗಿದ್ದ ಮಕ್ಕಳ ಮೇಲೆ ಬಿದ್ದಿದೆ . ಮಣ್ಣಿನ ರಾಶಿಯಡಿ ಸಿಲುಕಿದ ಮಕ್ಕಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಮುಳ್ಳೇರಿಯಾದ ಆಸ್ಪತ್ರೆಗೆ ಕೊಂಡೊಯ್ದರಾದರೂ, ಇಬ್ಬರು ಸಹೋದರರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು . ಸದ್ಯ ಗಾಯಗೊಂಡ ಮತ್ತೊಬ್ಬ ಬಾಲಕನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಿಂದ ಅಡೂರು ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ನಿರ್ಮಾಣವಾಗಿದೆ



DEATH
ಕಣಜದ ಹುಳು ಕಡಿದು ಶಿಕ್ಷಕ ದಾರುಣ ಸಾವು; ಕೃಷಿ ಭೂಮಿ ಸ್ವಚ್ಛಗೊಳಿಸುವಾಗ ನಡೆದ ದಾಳಿ
ಕಾಸರಗೋಡು: ಕೃಷಿ ಜಾಗದ ಪೊದೆ ಕಾಡು ಕಡಿದು ಶುಚೀಕರಿಸುವಾಗ ಕಣಜದ ಹುಳುಗಳ ದಾಳಿಗೆ ಒಳಗಾಗಿ ಶಿಕ್ಷಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಕಾಸರಗೋಡು ಜಿಲ್ಲೆಯ ಬಳಾಂತೋಡು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನ್ ನಿವಾಸಿ ವಿಜಯನ್ ಮಾಸ್ತರ್ (56) ಮೃತಪಟ್ಟವರು.
ಘಟನೆ ವಿವರ
ಇಂದು ಬೆಳಿಗ್ಗೆ ವಿಜಯನ್ ಮಾಸ್ತರ್ ತಮ್ಮ ಭೂಮಿಯನ್ನು ಕಾರ್ಮಿಕರೊಂದಿಗೆ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಏಕಾಏಕಿ ಗುಂಪಾಗಿ ದಾಳಿ ನಡೆಸಿವೆ.
ಕಣಜದ ಹುಳುಗಳ ತೀವ್ರ ದಾಳಿಗೆ ಒಳಗಾದ ವಿಜಯನ್ ಮಾಸ್ತರ್ರನ್ನು ಕೂಡಲೇ ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ನಾಲ್ವರು ಕಾರ್ಮಿಕರಿಗೆ ಗಾಯ
ಇವರ ಜೊತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳು ಕಡಿತಕ್ಕೆ ಒಳಗಾಗಿದ್ದಾರೆ. ಅದೃಷ್ಟವಶಾತ್ ಅವರು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.
ಈ ಅಧ್ಯಯನ ವರ್ಷವೇ ಸೇವಾ ನಿವೃತ್ತಿ ಪಡೆಯಲು ಸಿದ್ಧತೆಯಲ್ಲಿದ್ದ ವಿಜಯನ್ ಮಾಸ್ತರ್ ದಾರುಣವಾಗಿ ಮೃತಪಟ್ಟಿರುವುದು ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಊರವರನ್ನು ಕಣ್ಣೀರಲ್ಲಿ ಮುಳುಗಿಸಿದೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿತ್ತು ಎಂದು ಸ್ಥಳೀಯರು ಕಂಬನಿ ಮಿಡಿದಿದ್ದಾರೆ.



-
Bantawala3 weeks agoಬಂಟ್ವಾಳದಲ್ಲಿ ಭೀಕರ ಹತ್ಯಾಕಾಂಡ: ಬಸ್ನಲ್ಲಿ ಕುಳಿತಿದ್ದ ಯುವತಿಯನ್ನು ಸಾರ್ವಜನಿಕರೆದುರೇ ಕೊಚ್ಚಿ ಕೊಂದ ತಲೆಹರಟೆ ಪ್ರೇಮಿ!
-
crime6 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
crime4 months agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
Bantawala4 months agoವಿಟ್ಲದಲ್ಲಿ ನಡೆಯಿತೊಂದು ದೈವ ಕಾರಣಿಕ; ಪೊಲೀಸರ ಕಣ್ಣಿಗೆ ಮಣ್ಣೆರಚಿದರೂ ದೈವದ ದೃಷ್ಟಿಗೆ ತತ್ತರಿಸಿದ ದನಕಳ್ಳ..
-
accident2 weeks agoBreaking: ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಕಲ್ಲಡ್ಕ ಶ್ರೀರಾಮ ಶಾಲೆಯ ಓರ್ವ ವಿದ್ಯಾರ್ಥಿ ಸಾವು, ಕೆಲವರು ಗಂಭೀರ, ಹಲವರಿಗೆ ಗಾಯ!
-
Bantawala7 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
accident3 months agoವಿಟ್ಲ ಆಕಾಶದಲ್ಲಿ ಹಾರಾಡಿದ ವಿಮಾನ: ತಾಂತ್ರಿಕ ದೋಷವಲ್ಲ, ಹವಾಮಾನ ವೈಪರೀತ್ಯದ ಕಾರಣ ! ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ
-
Bantawala4 weeks agoಮಂಚಿ ಮೋಂತಿಮಾರು: ಬಸ್ಸಿಗಾಗಿ ಕಾಯುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಕತ್ತಿಯಿಂದ ಮಾರಣಾಂತಿಕ ದಾಳಿ; ಯುವತಿ ಗಂಭೀರ
