Belthangady
ಧರ್ಮಸ್ಥಳದ ಅಸಹಜ ಸಾವುಗಳು – ಮುಂದೇನು ಆಗಲಿದೆ ? ಮತ್ತೆ ಬಂಗ್ಲೆ ಗುಡ್ಡೆಯಿಂದ ಶವ ಹೊರ ತೆಗೆಯುವ ಕಾರ್ಯಾಚರಣೆ ಆರಂಭ ?
74 ಅಸಹಜ ಸಾವಿನ ಸಂಬಂಧ ವರದಿ ಕೊಡಿ ಎಂದು ಹೈಕೋರ್ಟ್ ಸರಕಾರಕ್ಕೆ ಆದೇಶ
ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವಿನ ಸಂಬಂಧ ವರದಿ ಕೊಡಿ ಎಂದು ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ. ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಕುರಿತು ಇದುವರೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖು ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸರ್ಕಾರದ ಪರ ಅಡ್ವಕೆಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಅರ್ಜಿಯು 74 ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ. ಇದುವರೆಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದು ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರ ನೀಡಲಾಗುತ್ತದೆ'' ಎಂದರು. ಅರ್ಜಿದಾರರ ಪರ ಹಿರಿಯ ವಕೀಲ ಎಸ್ ಬಾಲನ್,ಎಲ್ಲ 74 ಪ್ರಕರಣಗಳು ಗಂಭೀರ ಸ್ವರೂಪದ ಪ್ರಕರಣಗಳಾಗಿದೆ. ತನಿಖೆ ನಡೆಯಬೇಕಿದೆ” ಎಂದರು. ಪ್ರತಿಕ್ರಿಯಿಸಿದ ಪೀಠ, ಅದಕ್ಕೂ ಮೊದಲು ಸರ್ಕಾರದಿಂದ ಮಾಹಿತಿ ಬರಲಿ ಎಂದಿತು. ನಂತರ ಅರ್ಜಿಯಲ್ಲಿ ಪ್ರಸ್ತಾಪಿಸಲಾದ ಪ್ರಕರಣಗಳ ಈಗಿನ ವಸ್ತುಸ್ಥಿತಿ, ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು ಎರಡು ವಾರಗಳಲ್ಲಿ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು
ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನ
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ರಹಸ್ಯವಾಗಿ ಹೂಳಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ಫೆ.5 ನಿರ್ಣಾಯಕ ದಿನವಾಗಿದ್ದು, ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಕೋರ್ಟ್ (ಜೆಎಂಎಫ್ಸಿ) ಇಂದು ವಿಶೇಷ ತನಿಖಾ ತಂಡದ (SIT) ಸಲ್ಲಿಸಿದ್ದ ವರದಿಯ ಮೇಲೆ ಆದೇಶ ಹೊರಡಿಸಲಿದೆ. SIT ನವೆಂಬರ್ 20ರಂದು ಸುಮಾರು 3,923 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಕೋರ್ಟ್ಗೆ ಸಲ್ಲಿಸಿದೆ. SIT ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಟಿ. ಜಯಂತ್, ವಿಠಲ ಗೌಡ, ಸುಜಾತ ಭಟ್ ಮತ್ತು ಮಾಸ್ಕ್ಮ್ಯಾನ್ ಚಿನ್ನಯ್ಯ ಸೇರಿ ಆರು ಮಂದಿ ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಈ ವರದಿ ಸುಳ್ಳು ಆರೋಪಗಳು ಮತ್ತು ಷಡ್ಯಂತ್ರದ ಮೇಲೆ ಆಧಾರಿತವಾಗಿದ್ದು, ಧರ್ಮಸ್ಥಳದ ಮಾನಹಾನಿಗೆ ಕಾರಣವಾದ ಸುಳ್ಳು ಸಾಕ್ಷ್ಯ ನೀಡಿದ್ದಾರೆ ಎಂಬ ಆರೋಪವಿದೆ.

ಕೋರ್ಟ್ ಇಂದು ವರದಿಯನ್ನು ಸ್ವೀಕರಿಸಿ ಕೇಸ್ ದಾಖಲಿಸುವುದೇ ಅಥವಾ ಹೆಚ್ಚುವರಿ ತನಿಖೆಗೆ ನಿರ್ದೇಶನ ನೀಡುವುದೇ ಎಂಬುದು ನಿರ್ಧಾರವಾಗಲಿದೆ. ಈ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಧರ್ಮಸ್ಥಳದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಧರ್ಮಸ್ಥಳ ಆಡಳಿತ ಈಗ ಸಂತೋಷ ವ್ಯಕ್ತಪಡಿಸಿದ್ದು, ಸತ್ಯ ಬಯಲಾಗಿದೆ ಎಂದಿದೆ. ಆರೋಪಿಗಳ ಪರ ವಕೀಲರು ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಈ ಘಟನೆ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ, ಸುಳ್ಳು ಆರೋಪಗಳ ಪರಿಣಾಮ ಮತ್ತು ಧಾರ್ಮಿಕ ಕ್ಷೇತ್ರಗಳ ಮಾನಹಾನಿ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಕೋರ್ಟ್ ಆದೇಶದ ಬಳಿಕ ಪ್ರಕರಣ ಮತ್ತೊಂದು ದಿಕ್ಕಿಗೆ ತಿರುಗಬಹುದು ಎಂಬ ನಿರೀಕ್ಷೆ ಇದೆ.

ಮತ್ತೆ ಬಂಗ್ಲೆ ಗುಡ್ಡೆಯಿಂದ ಶವ ಹೊರತೆಗೆಯುವ ಕಾರ್ಯಾಚರಣೆ ಆರಂಭ ?
ಈ ಮದ್ಯೆ ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳದ ಅಸಹಜ ಸಾವುಗಳು ಮತ್ತು ಸಮೂಹ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಬಂಗ್ಲೆ ಗುಡ್ಡೆ ಪ್ರದೇಶದಲ್ಲಿ ಮತ್ತೊಂದು ಸುತ್ತಿನ ಶವ ಹೊರತೆಗೆಯುವ ಕಾರ್ಯಾಚರಣೆ ನಡೆಸಲು ಗಂಭೀರ ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ನಡೆದ ಶೋಧ ಕಾರ್ಯಗಳ ವೇಳೆ ಇಲ್ಲಿ ಕೆಲವು ಅಸ್ಥಿಪಂಜರಗಳು ಮತ್ತು ತಲೆಬುರುಡೆಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ, ಈ ಅರಣ್ಯ ಪ್ರದೇಶದ ಆಳದಲ್ಲಿ ಮತ್ತಷ್ಟು ಸಾಕ್ಷ್ಯಗಳು ಅಡಗಿರಬಹುದು ಎಂಬ ಸಂಶಯದ ಮೇಲೆ ಎಸ್ಐಟಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸೌಜನ್ಯಾ ಪ್ರಕರಣದ ಸಾಕ್ಷಿ ವಿಠಲ ಗೌಡ ಅವರು ನೀಡಿದ್ದ ಮಾಹಿತಿಯಂತೆ ಬಂಗ್ಲೆ ಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದಾಗ ಒಂಬತ್ತು ವಿವಿಧ ಸ್ಥಳಗಳಲ್ಲಿ ಮಾನವ ಶೇಷಗಳು ಪತ್ತೆಯಾಗಿದ್ದವು. ಆಗ ಸುಮಾರು ಆರು ತಲೆಬುರುಡೆಗಳು ಮತ್ತು ಎಲುಬಿನ ತುಣುಕುಗಳನ್ನು ಎಸ್ಐಟಿ ವಶಪಡಿಸಿಕೊಂಡಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ದೂರುದಾರರ ಹೇಳಿಕೆಗಳು ಪರಸ್ಪರ ವ್ಯತಿರಿಕ್ತವಾಗಿದ್ದರಿಂದ ಮತ್ತು ಕೆಲವು ಸಾಕ್ಷ್ಯಗಳು ಉದ್ದೇಶಪೂರ್ವಕವಾಗಿ ಪ್ಲಾಂಟ್’ ಮಾಡಲಾದವು ಎಂಬ ಆರೋಪ ಕೇಳಿಬಂದಿದ್ದರಿಂದ ತನಿಖೆ ಜಟಿಲಗೊಂಡಿತ್ತು. ಇದೀಗ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ನೇತೃತ್ವದ ತಂಡವು ವೈಜ್ಞಾನಿಕವಾಗಿ ಈ ಪ್ರದೇಶವನ್ನು ಮರು ಪರಿಶೀಲಿಸಲು ಮುಂದಾಗಿದೆ.

ಬಂಗ್ಲೆ ಗುಡ್ಡೆಯಲ್ಲಿ ಪತ್ತೆಯಾದ ಎಲುಬುಗಳ ಡಿಎನ್ಎ ಪರೀಕ್ಷೆ ಮತ್ತು ವಿಧಿವಿಜ್ಞಾನ ವರದಿಗಳು ಇನ್ನು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಬೇಕಿದೆ. ಈ ಪ್ರದೇಶದಲ್ಲಿ ಈ ಹಿಂದೆ ಮಾಟ-ಮಂತ್ರ ಅಥವಾ ಅನಾಮಧೇಯ ಶವಗಳ ದಫನ ನಡೆದಿರುವ ಸಾಧ್ಯತೆಗಳ ಬಗ್ಗೆಯೂ ಎಸ್ಐಟಿ ಗಮನಹರಿಸಿದೆ. ನಾವು ಯಾವುದೇ ಪೂರ್ವಾಗ್ರಹವಿಲ್ಲದೆ ತನಿಖೆ ನಡೆಸುತ್ತಿದ್ದೇವೆ. ಬಂಗ್ಲೆ ಗುಡ್ಡೆಯಲ್ಲಿ ಲಭ್ಯವಿರುವ ಪ್ರತಿಯೊಂದು ಸುಳಿವನ್ನೂ ಪರಿಶೀಲಿಸುವುದು ನಮ್ಮ ಗುರಿ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ
ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಈ ಹೊಸ ಕಾರ್ಯಾಚರಣೆಯು ಈ ದಶಕಗಳ ಹಳೆಯ ರಹಸ್ಯದ ಮೇಲೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ
Belthangady
ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣ: ಬೆಳ್ತಂಗಡಿಯಲ್ಲಿ ಸಿಐಡಿ ತನಿಖೆ ಆರಂಭ
ಬೆಳ್ತಂಗಡಿ: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಅತ್ಯಾಚಾರ ಹಾಗೂ ಸುಲಿಗೆ ಆರೋಪದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ಚುರುಕುಗೊಳಿಸಿದೆ. ಇಂದು ಸಿಐಡಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸಿ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸುವ ಮೂಲಕ ಅಧಿಕೃತವಾಗಿ ತನಿಖೆ ಆರಂಭಿಸಿದೆ.
ಪ್ರಕರಣದ ಹಿನ್ನೆಲೆ:
ಬೆಳ್ತಂಗಡಿ ತಾಲೂಕಿನ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020 ರಿಂದ 2023ರ ಅವಧಿಯಲ್ಲಿ ಜಮೀನು ವಿವಾದವೊಂದರ ವಿಚಾರಣೆಯ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಕೇಸ್ ಮರುಚಾಲನೆ ಮಾಡುವ ಬೆದರಿಕೆ ಹಾಕಿ ಸುಮಾರು 16 ಲಕ್ಷ ರೂ. ನಗದು, 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮನೆ ನಿರ್ಮಾಣಕ್ಕಾಗಿ ತೇಗದ ಮರದ ದಿಮ್ಮಿಗಳನ್ನು ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.
ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಸೂಚನೆಯಂತೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಸಂದೇಶ್ ಪಿ.ಜಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 25ರಂದು ವೇಣೂರು ಪೊಲೀಸ್ ಠಾಣೆಯಿಂದ ಬೆಂಗಳೂರು ಸಿಐಡಿ ಕಚೇರಿಗೆ ಪ್ರಕರಣದ ದಾಖಲೆಗಳನ್ನು ಹಸ್ತಾಂತರಿಸಿದ್ದು, ಸಿಐಡಿ ಡಿವೈಎಸ್ಪಿ ನೇತೃತ್ವದ ತಂಡವು ಮಾರ್ಚ್ 31ರಂದು ಸಂಜೆ ನಾರಾವಿ ಐಬಿಗೆ ಆಗಮಿಸಿದೆ. ಇಂದು ವೇಣೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಸಿಐಡಿ ತಂಡವು ಸಂತ್ರಸ್ತೆಯ ಹೇಳಿಕೆ ಪಡೆಯುವುದು, ಸ್ಥಳಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹಣೆಯ ಮೇಲೆ ತನಿಖೆ ಕೈಗೆತ್ತಿಕೊಳ್ಳಲಿದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ಸಂತ್ರಸ್ತರು ಇದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸಲಿದೆ.
accident
ರಸ್ತೆ ತಿರುವಿನಲ್ಲಿ ದಿಢೀರನೆ ತೆರೆದುಕೊಂಡ ಬಾಗಿಲು..ಸರ್ಕಾರಿ ಬಸ್ಸಿಂದ ಹೊರಕ್ಕೆಸೆಯಲ್ಪಟ್ಟು ಸಹೋದರಿಯರಿಗೆ ಗಂಭೀರ ಗಾಯ.
ಬೆಳ್ತಂಗಡಿ : ಸರ್ಕಾರಿ ಬಸ್ಸಿನಲ್ಲಿ ಶಾಲೆಗೆ ತೆರಳುತ್ತಿದ್ದ ಸಹೋದರಿಯರಿಬ್ಬರು
ರಸ್ತೆ ತಿರುವಿನಲ್ಲಿ ಏಕಾಏಕಿ ಬಸ್ಸಿನ ಬಾಗಿಲು ತೆರೆದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ಕಳಿಯ ಗ್ರಾಮದ ರೇಷ್ಮೆರೋಡ್ ಎಂ ಆರ್ ಪಿ ಎಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಬೆಳಿಗ್ಗೆ ಎಂದಿನಂತೆ ಗೇರುಕಟ್ಟೆಯಿಂದ ಬೆಳ್ತಂಗಡಿ ಶಾಲೆಗೆ ತೆರಳಲು ಕೆಎಸ್ ಆರ್ ಟಿ ಸಿ ಬಸ್ ಗೆ ಹತ್ತಿದ್ದ ಸಹೋದರಿಯರು ರೇಷ್ಮೆ ರೋಡ್ ಎಂಬಲ್ಲಿನ ರಸ್ತೆ ತಿರುವಿನಲ್ಲಿ ದಿಢೀರನೆ ಬಸ್ಸಿನ ಬಾಗಿಲು ತೆರೆಯಲ್ಪಟ್ಟು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ.

ಸಂಚರಿಸುತ್ತಿದ್ದ ಬಸ್ಸಿನಿಂದ ಕೆಳಗೆ ಎಸೆಯಲ್ಪಟ್ಟ ಸಹೋದರಿಯರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯರು ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಸಹೋದರಿಯರ ಪೈಕಿ ಒಬ್ಬಾಕೆ ಎಸ್ ಎಸ್ ಎಲ್.ಸಿ ಪರೀಕ್ಷೆಗೆ ತೆರಳುತ್ತಿದ್ದು ಮತ್ತೊಬ್ಬಳು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಪುತ್ರಿಯರು ಗಾಯಾಳುಗಳೆಂದು ತಿಳಿದುಬಂದಿದೆ. ಗಾಯಾಳು ಸಹೋದರಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
Belthangady
ಯಕ್ಷರಂಗದಲ್ಲಿ ‘ಕೃಷ್ಣ’ನ ಕ್ರೋಧ: ಪ್ರೇಕ್ಷಕರ ಶಿಳ್ಳೆಗೆ ಕೆರಳಿದ ಉಜಿರೆ ಅಶೋಕ ಭಟ್; ವೇದಿಕೆಯಲ್ಲೇ ದರ್ಪದ ಮಾತುಗಳ ಸುರಿಮಳೆ!
ಯಕ್ಷಗಾನ ಎನ್ನುವುದು ಕೇವಲ ಮನರಂಜನೆಯಲ್ಲ, ಅದೊಂದು ಶಿಸ್ತಿನ ಕಲೆ. ಆದರೆ ಇತ್ತೀಚೆಗೆ ವೇದಿಕೆಯ ಮೇಲೆ ಕಲಾವಿದರು ಮತ್ತು ಪ್ರೇಕ್ಷಕರ ನಡುವೆ ನಡೆಯುತ್ತಿರುವ ಸಂಘರ್ಷಗಳು ಕಲಾಭಿಮಾನಿಗಳಲ್ಲಿ ಬೇಸರ ಮೂಡಿಸಿವೆ. ಭಾಗವತರ ಆಲಾಪನೆಗೆ ಶಿಳ್ಳೆ ಹೊಡೆದರೆಂದು ಕಲಾವಿದ ಉಜಿರೆ ಅಶೋಕ ಭಟ್ ಅವರು ಕೃಷ್ಣನ ವೇಷದಲ್ಲಿಯೇ ಪ್ರೇಕ್ಷಕರು ಶಿಳ್ಳೆ ಹೊಡೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ವೇದಿಕೆಯಲ್ಲೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.
ನಡೆದದ್ದೇನು?
ಭಾಗವತರ ಪದ್ಯಕ್ಕೆ ಕೃಷ್ಣನ ವೇಷಧಾರಿ ಉಜಿರೆ ಅಶೋಕ ಭಟ್ ಅವರು ಅರ್ಥ ಹೇಳಲು ಸಿದ್ಧರಾಗುತ್ತಿದ್ದಂತೆ, ಭಾಗವತರ ಆಲಾಪನೆಗೆ ಪ್ರೇಕ್ಷಕರ ಸಾಲಿನಿಂದ ಕೇಳಿಬಂದ ಜೋರಾದ ಶಿಳ್ಳೆ ಮತ್ತು ಶಬ್ದಗಳಿಂದ ವಿಚಲಿತರಾಗಿದ್ದಾರೆ.. ಇದರಿಂದ ತೀವ್ರ ಅಸಮಾಧಾನಗೊಂಡ ಕಲಾವಿದರು, ಕಥೆಯ ಪ್ರಸಂಗವನ್ನು ಬದಿಗಿಟ್ಟು ನೇರವಾಗಿ ಪ್ರೇಕ್ಷಕರತ್ತ ತಿರುಗಿದರು. “ಇದು ಶಿಳ್ಳೆ ಹೊಡೆಯುವ ಜಾಗವಲ್ಲ, ಯಕ್ಷಗಾನದ ಗಂಭೀರತೆ ಅರ್ಥ ಮಾಡಿಕೊಳ್ಳಿ” ಎಂಬ ಖಡಕ್ ಮಾತುಗಳೊಂದಿಗೆ ಶಿಸ್ತಿನ ಪಾಠ ಆರಂಭಿಸಿದ್ದಾರೆ- “ನೀವು ಶಿಳ್ಳೆ ನಿಲ್ಲಿಸದಿದ್ದರೆ ನಾನು ಹೋಗುತ್ತೇನೆ. ಇದು ದೋಂಬರಾಟವೇ? ಇದು ಯಕ್ಷಗಾನವೇ? ಕೋಳಿ ಕಟ್ಟವೇ? ಕಂಬಳವೇ? ಎಂದು ವೇದಿಕೆಯಲ್ಲೇ ಪ್ರಶ್ನೆ ಮಾಡಿದ್ದಾರೆ. ಶಿಳ್ಳೆ ಹಾಕಿದವರು ಯಾರು? ಹುಚ್ಚರನ್ನು ಬೆಳೆಸಬೇಡಿ, ಕಲಾವಿದರನ್ನು ಬೆಳೆಸಿ, ಆಗದೆ ಇದ್ದರೆ ಬನ್ಸ್ ತಿಂದು ಹೋಗಿ, ಭಾಗವತರ ಕಂಠ ಹಾಳು ಮಾಡುತ್ತೀರಾ ? ನಾವು ಯಕ್ಷಗಾನ ಮಾಡಬೇಕೋ? ಎಂದು ಆಕ್ರೋಶಿತರಾಗಿ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದ ವತಿಯಿಂದ ಯಕ್ಷಗಾನ ಮಂಡಳಿಯವರು ಕುಂದಾಪುರದ ಹನ್ನಾಬೈಲಿನಲ್ಲಿ ಮಾ.26 ರಂದು ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ, ಭಾಗವತರು ಪದ ಹಾಡುತ್ತಿರುವ ಸಂದರ್ಭದಲ್ಲಿ ಆಲಾಪನೆ ಮಾಡುತ್ತಿದ್ದಾಗ ಪ್ರೇಕ್ಷಕರು ಶಿಳ್ಳೆ ಹಾಕಿದ್ದಾರೆ. ಪದ್ಯ ಮುಗಿದ ನಂತರ ಕೃಷ್ಣ ವೇಷಧಾರಿ ಅಶೋಕ್ ಭಟ್ ಗರಂ ಆಗಿ ಶಿಳ್ಳೆ ಹೊಡೆದ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತುಗಳು ವೈರಲ್ ಆಗಿದೆ.
ಕಲಾವಿದನ ಆಕ್ರೋಶಕ್ಕೆ ಕಾರಣವೇನು?
ಉಜಿರೆ ಅಶೋಕ ಭಟ್ ಅವರ ವಾದದ ಪ್ರಕಾರ, ಯಕ್ಷಗಾನದ ಅರ್ಥಗಾರಿಕೆ ಎನ್ನುವುದು ಏಕಾಗ್ರತೆಯಿಂದ ನಡೆಯಬೇಕಾದ ಪ್ರಕ್ರಿಯೆ. ಪ್ರೇಕ್ಷಕರು ಅನಗತ್ಯವಾಗಿ ಶಿಳ್ಳೆ ಹಾಕುವುದು ಅಥವಾ ಗದ್ದಲ ಮಾಡುವುದು ಕಲೆಯ ಗೌರವಕ್ಕೆ ಧಕ್ಕೆ ತರುತ್ತದೆ. “ನಾವು ಕಷ್ಟಪಟ್ಟು ಕಲೆ ಪ್ರದರ್ಶಿಸುವಾಗ ಶಿಸ್ತು ಇರಬೇಕು” ಎನ್ನುವುದು ಅವರ ಆಕ್ರೋಶದ ಹಿಂದಿನ ಆಶಯವಾಗಿತ್ತು.
ಪ್ರೇಕ್ಷಕ ಪ್ರಭುಗಳನ್ನು ಮರೆತರೇ ಕಲಾವಿದರು?
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧದ ಚರ್ಚೆಗಳು ಜೋರಾಗಿವೆ:
ಯಕ್ಷಗಾನದ ಪಾವಿತ್ರ್ಯತೆ ಉಳಿಯಬೇಕು, ಕಲಾವಿದನಿಗೆ ಗೌರವ ಸಿಗಬೇಕು. ಶಿಳ್ಳೆ ಹಾಕುವುದು ಕಲೆಗೆ ಮಾಡುವ ಅವಮಾನ ಎಂದು ಒಂದು ವರ್ಗ ವಾದಿಸಿದರೆ , ವೇದಿಕೆಯ ಮೇಲೆ ಕೃಷ್ಣನಂತಹ ದೈವಸ್ವರೂಪಿ ಪಾತ್ರಧಾರಿ ಕಲಾವಿದನಿಗೆ ಸಂಯಮ ಇರಬೇಕು. ಪ್ರೇಕ್ಷಕರನ್ನು ಹೀನಾಯವಾಗಿ ಕಾಣುವುದು ಒಬ್ಬ ವೃತ್ತಿಪರ ಕಲಾವಿದನ ಲಕ್ಷಣವಲ್ಲ. ಕಲಾವಿದನ ಮಾತುಗಳಲ್ಲಿ ಸ್ಪಷ್ಟವಾಗಿ ದರ್ಪ, ಅಹಂಕಾರ ಮತ್ತು ತನ್ನ ಸಾಧನೆಯ ಮೇಲಿನ ಅತಿಯಾದ ಹೆಮ್ಮೆಯ ಭಾವನೆಗಳು ಕಾಣುತ್ತಿರುವುದರಿಂದ ಆತನು ತನ್ನನ್ನು ಇತರರಿಗಿಂತ ಮೇಲಿರುವವನಾಗಿ ಚಿತ್ರಿಸಿಕೊಂಡು, ತನ್ನ ಸಾಧನೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ವೇಳೆ ಇತರರ ಕೊಡುಗೆಗಳನ್ನು ಕಡಿಮೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಪ್ರೇಕ್ಷಕರ ಪ್ರೋತ್ಸಾಹವೇ ಕಾರಣ. ಅಭಿಮಾನದಿಂದ ಪ್ರೇಕ್ಷಕರು ಹಾಕುವ ಶಿಳ್ಳೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಪ್ರೇಕ್ಷಕರಿಲ್ಲದೆ ಕಲೆ ಇಲ್ಲ, ಕಲಾವಿದರಿಲ್ಲದೆ ಸಂಸ್ಕೃತಿ ಇಲ್ಲ. ಇಬ್ಬರ ನಡುವೆ ಸಮನ್ವಯ ಇರಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಒಬ್ಬ ಕಲಾವಿದ ಇವತ್ತು ಈ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಪ್ರೇಕ್ಷಕರ ಪ್ರೋತ್ಸಾಹ ಮತ್ತು ಅಭಿಮಾನವೇ ಕಾರಣ. ಶಿಳ್ಳೆ ಎನ್ನುವುದು ಅಭಿಮಾನದ ಸಂಕೇತವೂ ಆಗಿರಬಹುದು. ಸಣ್ಣ ತಪ್ಪುಗಳಿಗಾಗಿ ಪ್ರೇಕ್ಷಕ ಪ್ರಭುಗಳನ್ನು ವೇದಿಕೆಯ ಮೇಲಿಂದಲೇ ಹಿಯಾಳಿಸುವುದು ಕಲಾವಿದನಿಗೆ ಶೋಭೆ ತರುವುದಿಲ್ಲ. “ಕಲಾವಿದ ಬೆಳೆಯಲು ಬೇಕಾದ ಪ್ರೇಕ್ಷಕ ಸ್ನೇಹಿ ಮನೋಭಾವವನ್ನು ಅಶೋಕ ಭಟ್ ಅವರು ಮರೆತರೇ?” ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ವೇದಿಕೆಯ ಮೇಲಿಂದ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಳ್ಳುವುದು ಕಲಾವಿದನ ಅಹಂಕಾರವನ್ನು ತೋರಿಸುತ್ತದೆ. ಎಂಬುವುದು ಕಲಾಭಿಮಾನಿಗಳ ಕಡೆಯಿಂದ ಕೇಳಿಬರುತ್ತಿರುವ ವಾದಗಳು ಕಲಾವಿದನ ಈ ದರ್ಪದ ನಡೆ ಯಕ್ಷಗಾನದ ಆಂತರಿಕ ಶಿಸ್ತನ್ನು ಎತ್ತಿ ಹಿಡಿಯುವುದೋ ಅಥವಾ ಪ್ರೇಕ್ಷಕರನ್ನು ಕಲೆಯ ಸಂಭ್ರಮದಿಂದ ದೂರ ತಳ್ಳುವುದೋ ಎಂಬ ಬಗ್ಗೆ ಈಗ ಗಂಭೀರ ಚರ್ಚೆ ನಡೆಯುತ್ತಿದೆ.
ವೇದಿಕೆಯಲ್ಲಿ ಅರ್ಥ ಹೇಳಲು ಬಂದ ಪಾತ್ರಧಾರಿ ಭಾಗವತರಲ್ಲಿ ಅನುಮತಿ ಕೇಳಿದ ಬಳಿಕ ತನ್ನ ಬುದ್ಧಿವಾದದ ಮಾತು ಆರಂಭಿಸಬೇಕಾಗಿತ್ತು. ಅಥವಾ ವ್ಯವಸ್ಥಾಪಕರಲ್ಲಿ ತಿಳಿಸಬೇಕಿತ್ತು ಅದ್ಯಾವುದೂ ಇಲ್ಲದೇ ಏಕಾಏಕಿ ಶಿಳ್ಳೆ ಹೊಡೆದ ಪ್ರೇಕ್ಷಕರಿಗೆ ಬುದ್ಧಿ ಮಾತಿನ ಮೂಲಕ ವೇದಿಕೆಯಲ್ಲೇ ತನ್ನ ಅಹಂಕಾರ ಪ್ರವೃತ್ತಿಯನ್ನು ಅಶೋಕ್ ಭಟ್ ಸಾಬೀತು ಪಡಿಸಿರುವುದು ಯಕ್ಷಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
-
crime3 days agoಧಾರ್ಮಿಕ ನಂಬಿಕೆಗೆ ಅವಮಾನ: ಕೊಡಗಿನ ಎಮ್ಮೆಮಾಡಿನಲ್ಲಿ ದೈವದ ವೇಷದಂತೆ ಧರಿಸಿ ಮದುಮಗನ ಅತಿರೇಕದ ವರ್ತನೆ!
-
crime2 months agoಅತ್ಯಾಚಾರ ಯತ್ನಕ್ಕೆ ತಡೆದ ಸೊಸೆಯ ಮುಖಕ್ಕೆ ಕಚ್ಚಿ ಕೊಲೆಗೆ ಯತ್ನಿಸಿದ ಮಾವ..ತಂದೆಯ ರಾಕ್ಷಸೀ ಕೃತ್ಯಕ್ಕೆ ಬೆಂಬಲಿಸಿದ ಗಂಡ..ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಅದೃಷ್ಟವಶಾತ್ ಬಚಾವಾದ ಸೊಸೆ..
-
Bantawala3 months agoನಾಗಬನ, ರಕ್ತೇಶ್ವರಿ ತಾಣ, ದೈವದೇವರ ಸಾನಿಧ್ಯ ದ್ವಂಸ ಗೊಳಿಸಿದ ಧರ್ಮದ್ರೋಹಿ ಕೃತ್ಯದ ವಿರುದ್ಧ ಭಕ್ತರ ಆಕ್ರೋಶ ; ನಾಶವಾದ ಸಾನಿಧ್ಯದಲ್ಲಿಯೇ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕುಟುಂಬಸ್ತರು, ಸಾರ್ವಜನಿಕರ ಸಾಮೂಹಿಕ ಪ್ರಾರ್ಥನೆ
-
Dakshina Kannada3 months agoಶಾಸಕರ ಉಪಸ್ಥಿತಿಯಲ್ಲಿ ಪೊಲೀಸರ ನಿರಾಕರಣೆ ಮಧ್ಯೆಯೇ ಕೇಪುವಿನಲ್ಲಿ ನಡೆದ ಕೋಳಿಅಂಕ
-
Bantawala2 months agoಕುದ್ರಿಯ ತರವಾಡು ಮನೆಯಲ್ಲಿ ಸಂಕ್ರಮಣದಂದು ರಣಾಂಗಣ; ಅಧ್ಯಕ್ಷ, ಟ್ರಸ್ಟಿ ಮೇಲೆ ಮಾರಣಾಂತಿಕ ಹಲ್ಲೆ
-
Bantawala3 months agoವಿಟ್ಲದಲ್ಲಿ ಶಾರ್ಟ್ ಸರ್ಕ್ಯೂಟ್..ಶ್ರೀ ಎಲೆಕ್ಟ್ರಾನಿಕ್ಸ್ ,ಅಮಿತ್ ಹೋಟೆಲ್..ಸೇರಿ ಐದಾರು ಕಟ್ಟಡಗಳು ಸಂಪೂರ್ಣ ಬೆಂಕಿಗಾಹುತಿ..
-
Bantawala1 month agoವಿಟ್ಲ ಮೈತ್ರೇಯಿ ಗುರುಕುಲದ ವಿದ್ಯಾರ್ಥಿನಿ ವೈಗ ಲಕ್ಷ್ಮಿ(15) ಆತ್ಮಹತ್ಯೆ ? ; ಫೆ. 22ರಂದು ಗುರುಕುಲದಿಂದ ನಾಪತ್ತೆಯಾದ 10ನೇ ತರಗತಿ ವಿದ್ಯಾರ್ಥಿನಿ
-
crime2 months agoಸಂತ ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋಗೆ ಐದು ವರ್ಷ ಜೈಲು ಶಿಕ್ಷೆ: ಪುತ್ತೂರು ಪೋಕ್ಸೋ ನ್ಯಾಯಾಲಯ ಆದೇಶ
