Connect with us

Belthangady

ಶಿಕ್ಷಕಿಯ ಮೇಲೆ ಅತ್ಯಾಚಾರ ಆರೋಪ: ಲೈಂಗಿಕವಾಗಿ ಬಳಸಿ, ಹಣ-ಆಸ್ತಿ ಲೂಟಿ ಮಾಡಿದ ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಪ್ರಕರಣ ದಾಖಲು‌

Published

on

ಬೆಳ್ತಂಗಡಿ: ಮೂಡಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್ ಪಿ.ಜಿ. ಅವರು ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯಿಂದಲೇ ನಿರಂತರ ಲೈಂಗಿಕ ದೌರ್ಜನ್ಯ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಗಂಭೀರ ಸ್ವರೂಪದ ಪ್ರಕರಣವೊಂದು ದಾಖಲಾಗಿದ್ದು, ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಮಹಿಳೆಯೊಬ್ಬರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ, ಕೋಟ್ಯಂತರ ರೂಪಾಯಿ ಮೌಲ್ಯದ ಹಣ ಮತ್ತು ಆಸ್ತಿಯನ್ನು ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆಯು 2020ರ ನವೆಂಬರ್‌ನಿಂದ 2023ರ ಜೂನ್ ಅವಧಿಯಲ್ಲಿ ನಡೆದಿದ್ದು, ಸಂತ್ರಸ್ತ ಮಹಿಳೆಯು ನೀಡಿದ ದೂರಿನನ್ವಯ ಮಾರ್ಚ್ 21, 2026 ರಂದು ಅಧಿಕೃತವಾಗಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಮುಖ್ಯ ಆರೋಪಿಯಾದ ಸಂದೇಶ್ ಪಿ.ಜಿ. ಅವರು ಈ ಹಿಂದೆ ದೂರುದಾರ ಮಹಿಳೆಯ ಕುಟುಂಬದಲ್ಲಿ ನಡೆದಿದ್ದ ಆಸ್ತಿ ಕಲಹದ ತನಿಖಾಧಿಕಾರಿಯಾಗಿದ್ದರು. ಈ ತನಿಖೆಯ ನೆಪದಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಆರೋಪಿಯು, ಸಂತ್ರಸ್ತೆಯು ಮನೆಯಲ್ಲಿ ಒಬ್ಬರೇ ಇರುವುದನ್ನು ಬಂಡವಾಳ ಮಾಡಿಕೊಂಡು ಅವರ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆಘಾತಕಾರಿ ಅಂಶ ದೂರಿನಲ್ಲಿ ಉಲ್ಲೇಖವಾಗಿದೆ.

ಲೈಂಗಿಕ ದೌರ್ಜನ್ಯವಷ್ಟೇ ಅಲ್ಲ, ಹಣ-ಆಸ್ತಿ ಲೂಟಿ ಮಾಡಿದ ಇನ್ಸ್‌ಪೆಕ್ಟರ್

ಕೇವಲ ಲೈಂಗಿಕ ದೌರ್ಜನ್ಯವಷ್ಟೇ ಅಲ್ಲದೆ, ಆರೋಪಿಯು ಮಹಿಳೆಯಿಂದ ಹಂತ ಹಂತವಾಗಿ ಸುಮಾರು 13 ಲಕ್ಷ ರೂಪಾಯಿ ನಗದು ಹಣವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ, ಮಹಿಳೆಯ ಬ್ಯಾಂಕ್ ಖಾತೆಯಿಂದ 3,62,000 ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುವುದು ವರದಿಯಾಗಿದೆ. ದೂರುದಾರ ಮಹಿಳೆಗೆ ಸೇರಿದ ತೋಟದಲ್ಲಿದ್ದ ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಬೆಲೆಬಾಳುವ ಸಾಗುವಾನಿ ಮರಗಳನ್ನು ಬೆದರಿಸಿ ಕಡಿದು ಸಾಗಿಸಿರುವ ಆರೋಪವೂ ಇವರ ಮೇಲಿದೆ. ಈ ದೌರ್ಜನ್ಯದ ಸರಣಿ ಇಲ್ಲಿಗೆ ನಿಂತಿಲ್ಲ; ಮಹಿಳೆಯ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಅಕ್ರಮವಾಗಿ ಅಕ್ಬರ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಫೆಡರಲ್ ಬ್ಯಾಂಕ್‌ನಲ್ಲಿ ಅಡವಿಟ್ಟು ಹಣ ಪಡೆದು ಸಂತ್ರಸ್ತೆಗೆ ವಂಚಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಪ್ರಾಣ ಬೆದರಿಕೆಯಿಂದ ದೂರು ವಿಳಂಬ

ಈ ಇಡೀ ಕೃತ್ಯದಲ್ಲಿ ಸಂದೇಶ್ ಪಿ.ಜಿ. ಅವರಿಗೆ ಅಕ್ಬರ್, ಸ್ಮಿತಾ ಮತ್ತು ಸುನೀತ ಲೋಬೋ ಎಂಬುವವರು ಸಾಥ್ ನೀಡಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆಯು ಈ ವಿಚಾರವನ್ನು ಎಲ್ಲಿಯಾದರೂ ಬಹಿರಂಗಪಡಿಸಿದರೆ ಅಥವಾ ಪೊಲೀಸ್ ದೂರು ನೀಡಿದರೆ ಅವರನ್ನು ಮತ್ತು ಅವರ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಆರೋಪಿಗಳು ನಿರಂತರವಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಇದೇ ಕಾರಣದಿಂದ ದೂರು ನೀಡಲು ವಿಳಂಬವಾಗಿದ್ದು, ಅಂತಿಮವಾಗಿ ಧೈರ್ಯ ಮಾಡಿದ ಮಹಿಳೆಯು ತನ್ನ ಕುಟುಂಬದವರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಪ್ರಸ್ತುತ ವೇಣೂರು ಪೊಲೀಸರು ಐಪಿಸಿ ಸೆಕ್ಷನ್ 376 (ಅತ್ಯಾಚಾರ), 376(2)(n) (ಒಂದೇ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), 384 (ಸುಲಿಗೆ), 506 (ಜೀವ ಬೆದರಿಕೆ) ಹಾಗೂ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಸಂದೇಶ್ ಪಿ.ಜಿ. ಅವರನ್ನು ತಕ್ಷಣ ಬಂಧಿಸಿ ತನಿಖೆ ನಡೆಸಬೇಕು

ಮಹಿಳೆಯರೊಂದಿಗೆ ಅನುಚಿತ ವರ್ತನೆ ಹಾಗೂ ಪ್ರಶ್ನಾರ್ಹ ನಡವಳಿಕೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್‌ ಸಂದೇಶನನ್ನು ಮಂಗಳೂರು ಪೊಲೀಸ್ ಕಮಿಷನರ್ ಸೇವೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಆತನ ಮೇಲೆ ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಪ್ರಚಾರವಾಗಿತ್ತು. ಮತ್ತು ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ತಕ್ಷಣ ಬಂಧಿಸಿ ತನಿಖೆ ನಡೆಸಬೇಕು ಎಂಬ ಸಂತ್ರಸ್ತರ ಕೂಗು ಹೆಚ್ಚಾಗುತ್ತಿದೆ.

ನ್ಯಾಯವಾದಿಗಳ ತಂಡಕ್ಕೇ ಹಣದ ಆಮಿಷ.?
ಸಂತ್ರಸ್ತೆಯ ದೂರು ಸ್ವೀಕರಿಸಲು ವೇಣೂರು ಪೊಲೀಸ್ ಠಾಣೆಯಲ್ಲಿ ನಿರಾಕರಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಂಗಳೂರಿನ ನ್ಯಾಯವಾದಿ ಶಿವಾನಂದ ವಿಟ್ಲ ಮತ್ತು ತಂಡ ವೇಣೂರು ಪೊಲೀಸ್ ಠಾಣೆಗೆ ತೆರಳಿದೆ. ಅಲ್ಲಿನ ಅಧಿಕಾರಿಗಳಲ್ಲಿ ಕಾನೂನುಗಳ ಬಗ್ಗೆ ವಕೀಲರು ಮನವರಿಕೆ ಮಾಡುತ್ತಿದ್ದಂತೆ ಆರೋಪಿ ಸಂದೇಶ್ ಪರ ತಂಡವೊಂದು ಸ್ವತಃ ವಕೀಲರಿಗೆ ಲಕ್ಷಾಂತರ ರೂಪಾಯಿಗಳ ಆಮಿಷ ನೀಡಿದ್ದರೂ ಶಿವಾನಂದ ವಿಟ್ಲ ತಂಡ ಸ್ಪಷ್ಟವಾಗಿ ನಿರಾಕರಿಸಿ ಸಂತ್ರಸ್ತೆ ಪರ ನಿಂತಿರುವುದು ವಕೀಲರ ಮೇಲಿನ ಗೌರವ, ಘನತೆಯನ್ನು ಎತ್ತಿಹಿಡಿದಿದೆ.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

arrest

ಬೆಳ್ತಂಗಡಿ: ಗುರುವಾಯನಕೆರೆ ಬಳಿ ಪತ್ತೆಯಾದ ಮೃತದೇಹದ ಗುರುತು ಪತ್ತೆ – ಯತೀಶ್ ಗೌಡ ಕೊಲೆ ಶಂಕೆ, ಮೂವರು ವಶಕ್ಕೆ

Published

on

ಬೆಳ್ತಂಗಡಿ, ದಕ್ಷಿಣ ಕನ್ನಡ: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪದ ಅಲಾದಿಕೊಟ್ಟಿಗೆ ಎಂಬಲ್ಲಿ ಜೂನ್ 1ರಂದು ಬೆಳಿಗ್ಗೆ ಪತ್ತೆಯಾಗಿದ್ದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದ್ದು, ಇದು ಕೊಲೆ ಎಂದು ಶಂಕಿಸಲಾಗಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ, ದಿ. ಕೂಸಪ್ಪ ಗೌಡ ಮತ್ತು ಪದ್ಮಾವತಿ ದಂಪತಿಯ ದ್ವಿತೀಯ ಪುತ್ರ ಯತೀಶ್ ಗೌಡ (33) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್, ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ನಾಪತ್ತೆಯಾಗಿದ್ದರು.

ಘಟನೆಯ ಹಿನ್ನೆಲೆ ಮತ್ತು ದೂರು:

ಜೂನ್ 1ರಂದು ಬೆಳಿಗ್ಗೆ ಗುರುವಾಯನಕೆರೆಯ ಶ್ರೀದೇವಿ ಹಾರ್ಡ್‌ವೇರ್ ಬಳಿ ಅಪರಿಚಿತ ಮೃತದೇಹ ಇರುವ ಬಗ್ಗೆ ಭಾವಚಿತ್ರ ಸಹಿತ ಮಾಹಿತಿ ವಾಟ್ಸಾಪ್‌ ಮೂಲಕ ಮೃತರ ಸಹೋದರ ನಿತಿನ್ (34) ಅವರಿಗೆ ತಲುಪಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ನಿತಿನ್, ಮೃತದೇಹವನ್ನು ತನ್ನ ಸಹೋದರ ಯತೀಶ್ ಗೌಡ ಎಂದು ಗುರುತಿಸಿದ್ದಾರೆ.

ಸಿಸಿಟಿವಿ ತನಿಖೆ ಮತ್ತು ಕೊಲೆ ಶಂಕೆ:

ಮೃತದೇಹದ ಮೇಲೆ ಹಲ್ಲೆಯ ಗುರುತುಗಳಿದ್ದ ಹಿನ್ನೆಲೆಯಲ್ಲಿ, ದೂರುದಾರರು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಜೂನ್ 1ರ ಬೆಳಿಗ್ಗಿನ ಸಮಯ ಮೂವರು ವ್ಯಕ್ತಿಗಳು ಯತೀಶ್ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ತೀವ್ರ ಹಲ್ಲೆಯಿಂದಾಗಿಯೇ ಯತೀಶ್ ಮೃತಪಟ್ಟಿರುವುದಾಗಿ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್ ಕಾರ್ಯಾಚರಣೆ, ಮೂವರ ವಶಕ್ಕೆ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಿತಿನ್ ನೀಡಿದ ದೂರಿನನ್ವಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ : 65/2026, ಕಲಂ: 115(2), 103 ಜೊತೆಗೆ 3(5) ಬಿ.ಎನ್.ಎಸ್ (BNS) ರಂತೆ ಕೊಲೆ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ:

ಯಶೋಧರ (35) – ನಿವಾಸಿ: ಮಿತ್ತಬಾಗಿಲು, ಬೆಳ್ತಂಗಡಿ

ಮೋಹನ್ (30) – ನಿವಾಸಿ: ಚಾರ್ವಾಕ, ಕಡಬ

ಇಬ್ರಾಹಿಂ (54) – ನಿವಾಸಿ: ಪದಂಗಡಿ, ಬೆಳ್ತಂಗಡಿ

ವಶಕ್ಕೆ ಪಡೆದಿರುವ ಮೂವರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಮತ್ತು ಹಲ್ಲೆಯ ಹಿಂದಿನ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ಬೆಳ್ತಂಗಡಿ ಪೊಲೀಸರು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Continue Reading

accident

ಬೆಳ್ತಂಗಡಿ – ಪುತ್ತೂರು ಭಾಗದಲ್ಲಿ ಎರಡು ಪ್ರತ್ಯೇಕ ರಸ್ತೆ ಅಪಘಾತಗಳು : ಇಬ್ಬರು ಬಲಿ

Published

on

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಪುತ್ತೂರು ಭಾಗಗಳಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ತಲಾ ಓರ್ವರು ಮೃತಪಟ್ಟ ದುರ್ಘಟನೆಗಳು ವರದಿಯಾಗಿವೆ.

ಮುಂಡಾಜೆ: ಬೈಕ್-ಕಾರು ಭೀಕರ ಅಪಘಾತ; ಚಿಕಿತ್ಸೆ ಫಲಿಸದೆ ಯುವಕ ಸಾವು


ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕ ಅಗರಿ ಕ್ರಾಸ್ ಬಳಿ ಭಾನುವಾರ ನಡೆದ ಬೈಕ್ ಹಾಗೂ ಕಾರಿನ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ, ಸೋಮವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಾರ್ಯತಡ್ಕ ನಿವಾಸಿ ಗಣೇಶ್ (36) ಮೃತಪಟ್ಟ ದುರ್ದೈವಿ.

ಘಟನೆಯ ವಿವರ:

ಭಾನುವಾರ ಉಜಿರೆ ಕಡೆಯಿಂದ ಕಕ್ಕಿಂಜೆ ಕಡೆಗೆ ಗಣೇಶ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರಿನ ಬಲಭಾಗದ ಸೈಡ್ ಮಿರರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ.

ಮೃತ ಗಣೇಶ್ ಅವರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸಂತಾಪ:

ಮೃತ ಗಣೇಶ್ ಅವರು ಕಾರ್ಯತಡ್ಕದಲ್ಲಿ ‘ಗಣೇಶ್ ಸ್ಟುಡಿಯೋ’ ನಡೆಸುತ್ತಿದ್ದು, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (SKPA) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಸಕ್ರಿಯ ಸದಸ್ಯರಾಗಿದ್ದರು. ಯುವ ಛಾಯಾಗ್ರಾಹಕನ ಅಕಾಲಿಕ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ತೀವ್ರ ಸಂತಾಪ ವ್ಯಕ್ತಪಡಿಸಿದೆ.‌

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯ ಕೆಂಜಳ ತಿರುವಿನಲ್ಲಿ ಭೀಕರ ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು, 7 ಮಂದಿಗೆ ಗಾಯ

ಕಡಬ: ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಮೇ 25ರಂದು ಸಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಟೆಂಪೋ ಟ್ರಾವೆಲರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬೆಂಗಳೂರಿನತ್ತ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಧರ್ಮಸ್ಥಳದ ಕಡೆಯಿಂದ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ನಡುವೆ ಈ ಅಪಘಾತ ನಡೆದಿದೆ. ಬೆಂಗಳೂರು ದೇವನಹಳ್ಳಿ ಕೋಟೆ ನಿವಾಸಿ ಸಂಜು ವಿ. ಅವರು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ 43 ಎ 6435) ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ಶೇಟ್ ಮಲ್ಲಿಕಾ ಮದ್ರಾಸ್ ಅವರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಕೆಂಜಳದ ಅಪಾಯಕಾರಿ ತಿರುವಿನಲ್ಲಿ ಎರಡೂ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.

ಮೃತರು ಮತ್ತು ಗಾಯಾಳುಗಳ ವಿವರ: ಅಪಘಾತದ ತೀವ್ರತೆಗೆ ಟೆಂಪೋ ಟ್ರಾವೆಲರ್‌ನಲ್ಲಿದ್ದ ಚಿಕ್ಕಬಳ್ಳಾಪುರ ತಾಲೂಕಿನ ಕೆರೆಸಂದ್ರಮನೆ ನಿವಾಸಿ ಅಂಜನಮ್ಮ (47) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ 5 ವರ್ಷದ ಬಾಲಕಿ ನಯಾನಿಕಾ ತೀವ್ರವಾಗಿ ಗಾಯಗೊಂಡಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ ನರಸಿಂಹಯ್ಯ, ವಿ. ಮಂಜುನಾಥ್, ವಿ. ಗಂಗಾಧರ್, ಪವಿತ್ರಾ, ಸಿರಿಪ್ರಿಯಾ ಹಾಗೂ ರತ್ನಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಟೆಂಪೋದಲ್ಲಿದ್ದ ಲೋಕೇಶ್ ದೇವನಹಳ್ಳಿ, ಪವನ್ ಸೋಮನಹಳ್ಳಿ ಕನಕಪುರ, ಕವಿತಾ ಸಿ.ಎಂ., ಜೀವನ್, ಆಶಾ, ಪ್ರೀತಮ್ ಹಾಗೂ ಶಿವ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Continue Reading

Belthangady

ಕಾರಿನೊಳಗೆ ಸಿಲುಕಿಕೊಂಡ ಮಗು; ಸಮಯಪ್ರಜ್ಞೆ ಮೆರೆದು ಗ್ಲಾಸ್ ಒಡೆದು ರಕ್ಷಿಸಿದ ಸಾರ್ವಜನಿಕರು

Published

on

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕ ಜಂಕ್ಷನ್ ಬಳಿ ಚಾಲಕನ ಅಜಾಗರೂಕತೆಯಿಂದಾಗಿ ಕಾರಿನ ಡೋರ್ ಆಟೋಮೆಟಿಕ್ ಲಾಕ್ ಆಗಿ, ಮಗುವೊಂದು ಕಾರಿನೊಳಗೆ ಸಿಲುಕಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೇ 25ರಂದು ಸೋಮವಾರ ನಡೆದಿದೆ.

ಘಟನೆಯ ವಿವರ: ಮದ್ದಡ್ಕದ ಕುವೆಟ್ಟು ನಿವಾಸಿಯೊಬ್ಬರು ತಮ್ಮ ಮಗುವಿನೊಂದಿಗೆ ಕಾರಿನಲ್ಲಿ ಬಂದಿದ್ದು, ರಸ್ತೆ ಬದಿಯ ಅಂಗಡಿಯೊಂದರ ಬಳಿ ಕಾರನ್ನು ನಿಲ್ಲಿಸಿದ್ದರು. ಚಾಲಕನು ಕಾರಿನ ಕೀ ಮತ್ತು ಮಗುವನ್ನು ಒಳಗಡೆಯೇ ಬಿಟ್ಟು, ಇಂಜಿನ್ ಆಫ್ ಮಾಡಿ ಹೊರಗೆ ಇಳಿದು ಅಂಗಡಿಗೆ ತೆರಳಿದ್ದಾರೆ. ಆದರೆ, ಅವರು ಇಳಿದ ತಕ್ಷಣ ಕಾರಿನ ಸೆಂಟ್ರಲ್ ಲಾಕಿಂಗ್ ಸಿಸ್ಟಮ್‌ನಿಂದಾಗಿ ಡೋರ್‌ಗಳು ಆಟೋಮೆಟಿಕ್ ಆಗಿ ಲಾಕ್ ಆಗಿವೆ.

ಕಾರಿನ ಕೀ ಒಳಗಡೆಯೇ ಇದ್ದಿದ್ದರಿಂದ ಹೊರಗಿನಿಂದ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಗಾಬರಿಗೊಂಡಿದ್ದಾರೆ. ಇದೇ ವೇಳೆ ಕಾರಿನ ಒಳಗಿದ್ದ ಮಗು ಗಾಬರಿಗೊಂಡು ಜೋರಾಗಿ ಅಳಲು ಪ್ರಾರಂಭಿಸಿದೆ. ಬಿಸಿಲಿನ ಬೇಗೆಯೂ ಹೆಚ್ಚಿದ್ದರಿಂದ ಕಾರಿನೊಳಗೆ ಉಸಿರಾಟದ ತೊಂದರೆಯಾಗುವ ಭೀತಿ ಎದುರಾಗಿತ್ತು.

ಸಾರ್ವಜನಿಕರ ಸಮಯಪ್ರಜ್ಞೆ: ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟುಗಳ ಮಾಲೀಕರು ಕಾರಿನ ಬಳಿ ಧಾವಿಸಿ ಬಂದಿದ್ದಾರೆ. ಕಂಪನಿಕೀ ಇಲ್ಲದೆ ಬಾಗಿಲು ತೆರೆಯಲು ಕಂಬಿ, ಸ್ಕ್ರೂಡ್ರೈವರ್ ಬಳಸಿ ವಿವಿಧ ರೀತಿಯಲ್ಲಿ ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗುವಿನ ಅಳು ಹೆಚ್ಚಾಗುತ್ತಿರುವುದನ್ನು ಮತ್ತು ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

ಮಗುವಿಗೆ ಯಾವುದೇ ಗಾಯವಾಗದಂತೆ ಎಚ್ಚರಿಕೆ ವಹಿಸಿ, ಕಾರಿನ ಹಿಂಬದಿಯ ಕಿಟಕಿಯ ಗ್ಲಾಸ್ (ಗಾಜು) ಅನ್ನು ಬಲವಾಗಿ ಒಡೆದಿದ್ದಾರೆ. ತದನಂತರ ಒಳಗಡೆಯಿದ್ದ ಬಾಗಿಲಿನ ಲಾಕ್ ಅನ್ನು ತೆಗೆದು ಮಗುವನ್ನು ಯಶಸ್ವಿಯಾಗಿ ಹೊರಗೆ ತಂದು ರಕ್ಷಿಸಿದ್ದಾರೆ. ಸಾರ್ವಜನಿಕರ ಈ ತ್ವರಿತ ನಿರ್ಧಾರ ಮತ್ತು ಸಮಯಪ್ರಜ್ಞೆಗೆ ಸ್ಥಳೀಯರು ಹಾಗೂ ಮಗುವಿನ ಪೋಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Continue Reading

Trending

Copyright © 2025 Deevatige

error: Content is protected !!