Connect with us

Uncategorized

ವಿಟ್ಲ ಬೊಬ್ಬೆಕೇರಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ: ಜೂನ್ 5 ರಿಂದ 3 ತಿಂಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ

Published

on

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಡೂರು-ಕಾಂಞಂಗಾಡ್ ರಾಜ್ಯ ಹೆದ್ದಾರಿಯ ವಿಟ್ಲ ಸಮೀಪದ ಬೊಬ್ಬೆಕೇರಿ ಎಂಬಲ್ಲಿ ರಸ್ತೆ ಪುನರ್ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಜೂನ್ 5 ರಿಂದ ಮುಂದಿನ 3 ತಿಂಗಳ ಅವಧಿಗೆ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ದರ್ಶನ್ ಎಚ್.ವಿ. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಬಂಟ್ವಾಳ ಉಪವಿಭಾಗದ ಮನವಿ ಹಾಗೂ ಮಂಗಳೂರು ಉಪವಿಭಾಗಾಧಿಕಾರಿಗಳ ವರದಿ ಆಧಾರಿಸಿ ಈ ಕೆಳಗಿನಂತೆ ಬದಲಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ.

ಬದಲಿ ಸಂಚಾರ ಮಾರ್ಗಗಳ ವಿವರ:

ಲಘು ವಾಹನಗಳಿಗೆ (ದ್ವಿಚಕ್ರ, ನಾಲ್ಕು ಚಕ್ರದ ವಾಹನ ಹಾಗೂ ಬಸ್‌ಗಳು): ಸಾರಡ್ಕ ಮತ್ತು ವಿಟ್ಲ ಕಡೆಯಿಂದ ಮಂಗಳಪದವು, ಕಲ್ಲಡ್ಕ ಕಡೆಗೆ ಸಂಚರಿಸುವ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳು ಹಾಗೂ ಬಸ್‌ಗಳು ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ಬಳಿ ಇರುವ ಬದ್ರಿಯಾ ಟೆಕ್ಸ್‌ಟೈಲ್ಸ್ ರಸ್ತೆಯಾಗಿ ಅನಂತೇಶ್ವರ, ಪಂಚಲಿಂಗೇಶ್ವರ, ಅಯ್ಯಪ್ಪ ದೇವಸ್ಥಾನ ಹಾಗೂ ಸುರಕ್ಷಾ ಆಸ್ಪತ್ರೆ ಮಾರ್ಗವಾಗಿ ಬೊಬ್ಬೆಕೇರಿ ತಲುಪಿ ಮುಂದೆ ಸಾಗಬೇಕು.

ಕಲ್ಲಡ್ಕ ಕಡೆಯಿಂದ ಬರುವ ವಾಹನಗಳು: ಕಲ್ಲಡ್ಕ ಕಡೆಯಿಂದ ವಿಟ್ಲಕ್ಕೆ ಆಗಮಿಸುವ ಎಲ್ಲಾ ವಾಹನಗಳಿಗೆ ಪ್ರಸ್ತುತ ಇರುವ ಹಳೆಯ ರಸ್ತೆಯಲ್ಲೇ ಏಕಮುಖ ಸಂಚಾರಕ್ಕೆ (One-way) ಅವಕಾಶ ಕಲ್ಪಿಸಲಾಗಿದೆ.

ಭಾರಿ ಘನ ವಾಹನಗಳಿಗೆ ನಿಷೇಧ: ನಾಲ್ಕು ಮಾರ್ಗ ಜಂಕ್ಷನ್‌ನಿಂದ ದೇವಸ್ಥಾನ ರಸ್ತೆಯಾಗಿ ಬೊಬ್ಬೆಕೇರಿಗೆ ಹೋಗುವ ಮಾರ್ಗದಲ್ಲಿ ಭಾರಿ ಘನ ವಾಹನಗಳ (10 ಚಕ್ರ ಹಾಗೂ ಅದಕ್ಕಿಂತ ಮೇಲ್ಪಟ್ಟ) ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಭಾರಿ ವಾಹನಗಳು ಕಬಕ ರಸ್ತೆಯ ಮೂಲಕ ಪರ್ಯಾಯವಾಗಿ ಸಂಚರಿಸಲು ಸೂಚಿಸಲಾಗಿದೆ.

ಸದರಿ ಬದಲಿ ರಸ್ತೆ ಮಾರ್ಗಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಲು ಹಾಗೂ ಸಂಚಾರ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗೆ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ads (2)
ads (3)
ads (4)
ads (5)
ads (6)
ads (1)
ads (8)
ads (7)
ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Uncategorized

ಕಾಲೇಜು ಆವರಣದಲ್ಲಿ 290 ಗ್ರಾಂ ಗಾಂಜಾ ಪತ್ತೆ: ಮೂವರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಆಡಳಿತ ಮಂಡಳಿ

Published

on

ಮಂಗಳೂರು: ಕಾಲೇಜು ಕ್ಯಾಂಪಸ್‌ಗಳನ್ನು ಮಾದಕ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಗಳೂರಿನ ಕಾಲೇಜೊಂದರ ಆವರಣದಲ್ಲಿ ಗಾಂಜಾ ಹೊಂದಿದ್ದ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.

ವಿದ್ಯಾರ್ಥಿಗಳಿಂದ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿದ್ದ ಸುಮಾರು 290 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ತಪಾಸಣೆ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿಗಳು

ಇತ್ತೀಚೆಗೆ ನಡೆದ ಮಾದಕ ವಸ್ತು ವಿರೋಧಿ ಜಾಗೃತಿ ಅಭಿಯಾನಗಳ ನಂತರ, ಕಾಲೇಜು ಆಡಳಿತ ಮಂಡಳಿಯು ತನ್ನ ನಿಗಾ ವ್ಯವಸ್ಥೆಯನ್ನು ಬಲಪಡಿಸಿ ಸಕ್ರಿಯವಾಗಿ ತಪಾಸಣೆ ಆರಂಭಿಸಿತ್ತು. ಈ ವೇಳೆ ಮೂವರು ವಿದ್ಯಾರ್ಥಿಗಳು ಗಾಂಜಾ ಹೊಂದಿರುವುದು ಕಂಡುಬಂದಿದೆ. ಕಾಲೇಜು ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಮೂವರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್

ಘಟನೆಗೆ ಸಂಬಂಧಿಸಿದಂತೆ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ:

ಸೆಕ್ಷನ್ 27(b): ಮಾದಕ ವಸ್ತು ಸೇವನೆ

ಸೆಕ್ಷನ್ 8(c): ಮಾದಕ ದ್ರವ್ಯ ಉತ್ಪಾದನೆ, ಸಾಗಣೆ ಅಥವಾ ಹೊಂದಿರುವುದು

ಗಾಂಜಾವನ್ನು ಕಾಲೇಜು ಆವರಣಕ್ಕೆ ತಂದ ಆರೋಪ ಹೊತ್ತಿರುವ ಮುಖ್ಯ ವಿದ್ಯಾರ್ಥಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಹಾಗೂ ಆತನ ಬಳಿ ಸಿಕ್ಕಿದ ಗಾಂಜಾದ ಪ್ರಮಾಣವನ್ನು ಪರಿಗಣಿಸಿ ನ್ಯಾಯಾಲಯವು ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದೆ.

ಇನ್ನು ಈ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸರಬರಾಜು ಮಾಡಿದ ಮುಖ್ಯ ಪೆಡ್ಲರ್ (ಸರಬರಾಜುದಾರ) ಪತ್ತೆಗೆ ಪೊಲೀಸರು ಜಾಲ ಬೀಸಿದ್ದು, ತನಿಖೆ ಮುಂದುವರಿದಿದೆ.

ಕಾಲೇಜುಗಳ ಸಕ್ರಿಯ ಪಾತ್ರಕ್ಕೆ ಶ್ಲಾಘನೆ

“ಇದು ಅತ್ಯಂತ ಉತ್ತೇಜನಕಾರಿ ಬೆಳವಣಿಗೆಯಾಗಿದೆ. ನಗರದ ಅನೇಕ ಕಾಲೇಜುಗಳು ಈಗ ಸ್ವಯಂಪ್ರೇರಿತವಾಗಿ ತಪಾಸಣೆ ನಡೆಸುತ್ತಿದ್ದು, ಆಯಾ ಕಾಲೇಜುಗಳ ಮಾದಕ ವಸ್ತು ವಿರೋಧಿ ಸಮಿತಿಗಳು (Anti-Drug Committees – ADCs) ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಇದೇ ರೀತಿಯ ಬದ್ಧತೆ ಪ್ರದರ್ಶಿಸಿದರೆ, ಶೀಘ್ರದಲ್ಲೇ ಮಾದಕ ಮುಕ್ತ ಮತ್ತು ಆರೋಗ್ಯಕರ ಕ್ಯಾಂಪಸ್‌ಗಳನ್ನು ನಿರ್ಮಿಸಲು ಸಾಧ್ಯ.”

ಮಂಗಳೂರು ಪೊಲೀಸ್ ಕಮಿಷನರೇಟ್

Continue Reading

Mangaluru

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ‘ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ’ ಹೆಸರಿಡಲು ಮನವಿ

Published

on

ಮಂಗಳೂರು: ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ನಿರ್ಮಾಣಕ್ಕೆ ಸ್ವಂತ ಜಾಗವನ್ನು ದಾನವಾಗಿ ನೀಡಿದ ಮಹಾನ್ ದೇಶಪ್ರೇಮಿ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ ಅವರ ಹೆಸರನ್ನು ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಮರುನಾಮಕರಣ ಮಾಡಬೇಕು ಹಾಗೂ ನಿಲ್ದಾಣದ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಕರ್ನಾಟಕ ಸರಕಾರದ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಮೇಯರ್ ಅನಂತ್‌ ಮೈಸೂರು ಆಗ್ರಹಿಸಿದ್ದಾರೆ.

ಆಗಸ್ಟ್ 2ರಂದು ಸಂಜೆ ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಭೇಟಿ ನೀಡಿದ ಅವರು, ಗಾಣಿಗ ಸಮಾಜದ ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ರೈಲ್ವೇ ಕ್ಷೇತ್ರಾಧಿಕಾರಿ ರಾಕೇಶ್‌ ಕುಮಾರ್‌ ಪಾರಕ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಅನಂತ್‌ ಮೈಸೂರು, “ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪನವರು ಗಾಣಿಗ (ಸಫಲಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು. ನಿಲ್ದಾಣ ನಿರ್ಮಾಣಕ್ಕೆ ತಮ್ಮದೇ ಜಾಗವನ್ನು ಕೊಡುಗೆಯಾಗಿ ನೀಡಿದ ಅವರ ಸ್ಮರಣಾರ್ಥ ನಿಲ್ದಾಣಕ್ಕೆ ಅವರ ಹೆಸರನ್ನಿಟ್ಟು, ಪ್ರತಿಮೆ ನಿರ್ಮಿಸುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ,” ಎಂದರು.

ಪಠ್ಯಪುಸ್ತಕದಲ್ಲೂ ವಿಷಯ ಸೇರ್ಪಡೆಯಾಗಲಿ: ಮೋಹಿತ್‌

ಅಜೇಯ ಭಾರತ ಸಂಸ್ಥಾಪಕ ಮೋಹಿತ್‌ ಬೆಂಗಳೂರು ಮಾತನಾಡಿ, “ಅತ್ತಾವರ ಎಲ್ಲಪ್ಪನವರು ಒಂದು ಸಮಾಜಕ್ಕೆ ಸೀಮಿತವಾದವರಲ್ಲ, ಇಡೀ ದೇಶ ಹೆಮ್ಮೆ ಪಡುವ ವ್ಯಕ್ತಿತ್ವ. ನಿಲ್ದಾಣಕ್ಕೆ ಹೆಸರಿಡುವ ಜತೆಗೆ ಶಾಲಾ ಪಠ್ಯಪುಸ್ತಕಗಳಲ್ಲೂ ಅವರ ಹೋರಾಟದ ಹಾದಿಯ ವಿಷಯಗಳನ್ನು ಸೇರ್ಪಡೆಗೊಳಿಸಬೇಕು. ಈ ಬಗ್ಗೆ ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರೊಂದಿಗೆ ಚರ್ಚಿಸಲಾಗಿದ್ದು, ಶೀಘ್ರವೇ ಕೇಂದ್ರ ರೈಲ್ವೇ ಸಚಿವ ವಿ. ಸೋಮಣ್ಣ ಅವರ ಗಮನಕ್ಕೂ ತರಲಾಗುವುದು,” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಯಾರಿಸ್ಟರ್‌ ಎಲ್ಲಪ್ಪ ಅವರ ಸೋದರಳಿಯ ಪ್ರಭಾಕರ್‌ ದಾಸ್‌, ದ.ಕ. ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷ ವಿಶ್ವಾಸ್‌ ಕುಮಾರ್‌ ದಾಸ್‌, ಪುತ್ತೂರು ಗಾಣಿಗ ಯಾನೆ ಸಫಲಿಗರ ಸೇವಾ ಸಂಘದ ಲಕ್ಷ್ಮೀ ಪ್ರಸಾದ್‌ ಬೆಟ್ಟ, ಪ್ರೊ| ಸುರೇಶ್‌ ಕಟೀಲು,‌ ಕಮಲಾಕ್ಷ ಉಳ್ಳಾಲ್‌, ರವೀಂದ್ರ ಟಿ. ಮಂಗಳೂರು, ಭರತ್‌ ಕುಮಾರ್‌ ಅತ್ತಾವರ, ಹರೀಶ್‌ ಮಂಜೇಶ್ವರ, ತಾರನಾಥ ಸುವರ್ಣ, ಪದ್ಮನಾಭ, ಕಾರ್ತಿಕ್‌ ಕಬಕ, ಪ್ರವನ್‌ ಮೆಲ್ಕಾರ್‌ ಉಪಸ್ಥಿತರಿದ್ದರು.

Continue Reading

CONGRESS

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಕಾಂಗ್ರೆಸ್ ಹೈಕಮಾಂಡ್‌ನಿಂದ ಅಂತಿಮ ಪಟ್ಟಿ ಬಿಡುಗಡೆ!

Published

on

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅಂತಿಮ ಅನುಮೋದಿತ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿರುವ ಈ ಪಟ್ಟಿಯಲ್ಲಿ 20 ನೂತನ ಸಚಿವರ ಹೆಸರುಗಳು ಹಾಗೂ ಶಾಸಕಾಂಗದ ಪ್ರಮುಖ ಹುದ್ದೆಗಳ ಹೆಸರುಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಸಂಪುಟ ಸೇರಲಿರುವ 20 ನೂತನ ಸಚಿವರ ಅಧಿಕೃತ ಪಟ್ಟಿ:

  1. ಪಿ. ಎಂ. ನರೇಂದ್ರಸ್ವಾಮಿ
  2. ಶಿವರಾಜ್ ತಂಗಡಗಿ
  3. ರುದ್ರಪ್ಪ ಲಮಾಣಿ
  4. ಕೆ. ಎಸ್. ಬಸವಂತಪ್ಪ
  5. ಬಿ. ನಾಗೇಂದ್ರ
  6. ಟಿ. ರಘುಮೂರ್ತಿ
  7. ಬಿ. ಝಡ್. ಝಮೀರ್ ಅಹ್ಮದ್ ಖಾನ್
  8. ರಿಜ್ವಾನ್ ಅರ್ಷದ್
  9. ಸಂತೋಷ್ ಲಾಡ್
  10. ಮಧು ಬಂಗಾರಪ್ಪ
  11. ಪುಟ್ಟರಂಗಶೆಟ್ಟಿ
  12. ಎಸ್‌ ಎಸ್‌ ಮಲ್ಲಿಕಾರ್ಜುನ
  13. ಡಾ. ಅಜಯ್ ಸಿಂಗ್
  14. ಎನ್. ಚೆಲುವರಾಯಸ್ವಾಮಿ
  15. ಕೆ. ಎಂ. ಶಿವಲಿಂಗೇಗೌಡ
  16. ಹೆಚ್. ಸಿ. ಬಾಲಕೃಷ್ಣ
  17. ಗಾಯತ್ರಿ ಶಾಂತೇಗೌಡ
  18. ಬಸವರಾಜ ರಾಯರೆಡ್ಡಿ
  19. ವಿಜಯಾನಂದ ಕಾಶಪ್ಪನವರ್
  20. ಲಕ್ಷ್ಮಣ ಸವದಿ

ಶಾಸಕಾಂಗ ಹಾಗೂ ಮೇಲ್ಮನೆಯ ಪ್ರಮುಖ ಹುದ್ದೆಗಳ ನೇಮಕಾತಿ:

ಸಚಿವರ ಪಟ್ಟಿಯ ಜೊತೆಗೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಪ್ರಮುಖ ಹುದ್ದೆಗಳಿಗೂ ಅಭ್ಯರ್ಥಿಗಳನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ:

  • ವಿಧಾನಸಭಾ ಸ್ಪೀಕರ್ (ಸಭಾಧ್ಯಕ್ಷರು): ಜಿ. ಎಸ್. ಪಾಟೀಲ್
  • ವಿಧಾನಸಭಾ ಡೆಪ್ಯೂಟಿ ಸ್ಪೀಕರ್ (ಉಪಸಭಾಧ್ಯಕ್ಷರು): ಎ. ಎಸ್. ಪೊನ್ನಣ್ಣ
  • ವಿಧಾನಪರಿಷತ್ ಸಭಾಪತಿ: ಸಲೀಂ ಅಹ್ಮದ್
  • ವಿಧಾನಪರಿಷತ್ ಉಪಸಭಾಪತಿ: ಉಮಾಶ್ರೀ

ಈ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತಿದ್ದು, ಶೀಘ್ರದಲ್ಲೇ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ

Continue Reading

Trending

Copyright © 2025 Deevatige

error: Content is protected !!