Connect with us

Politics

77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಸರಕಾರ ಸಿದ್ದಪಡಿಸಿದ ಭಾಷಣವನ್ನು ಪೂರ್ಣವಾಗಿ ಓದಿದ ರಾಜ್ಯಪಾಲರು

Published

on

ಬೆಂಗಳೂರು: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.
ವರ್ಷದ ಆರಂಭದಲ್ಲಿ ನಡೆಯುವ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣವನ್ನು ಓದಲು ನಿರಾಕರಿಸಿ ಹೊರನಡೆದ ನಂತರ ಇದೀಗ ಗಣರಾಜ್ಯೋತ್ಸವದಲ್ಲಿ ಸರಕಾರ ಸಿದ್ದ ಪಡಿಸಿದ ಭಾಷಣವನ್ನು ಪೂರ್ತಿಯಾಗಿ ಓದುವ ಮೂಲಕ ಸರ್ಕಾರ ಹಾಗೂ ರಾಜ್ಯಪಾಲರ ನಡುವ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರಾಜ್ಯ ಸರ್ಕಾರ ಸಿದ್ದಪಡಿಸಿಕೊಟ್ಟ ಭಾಷಣವನ್ನು ಯಥಾವತ್ ಓದಿದ ರಾಜ್ಯಪಾಲರು

ಜನತೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, 77ನೇ ಗಣರಾಜ್ಯೋತ್ಸವದ ಈ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಜನವರಿ 26ನೇ ತಾರೀಖು ಭಾರತದ ಚರಿತ್ರೆಯಲ್ಲಿ ಒಂದು ಅತ್ಯಂತ ನಿರ್ಣಾಯಕ ದಿನ. ಇದು ಸಾವಿರಾರು ವರ್ಷಗಳಿಂದ ರೂಪುಗೊಂಡಿದ್ದ ರಾಜಪ್ರಭುತ್ವ ಹಾಗೂ 17ನೇ ಶತಮಾನದಿಂದ ಅಸ್ತಿತ್ವಕ್ಕೆ ಬಂದಿದ್ದ ವಸಾಹತುಶಾಹಿ ಆಡಳಿತವನ್ನು ಕೊನೆಗೊಳಿಸಿ ಜನಪ್ರಭುತ್ವವನ್ನು ಪ್ರತಿಷ್ಠಾಪಿಸಿಕೊಂಡ ದಿನ.

ತಾರತಮ್ಯವನ್ನು ಆಧರಿಸಿದ್ದ ವಸಾಹತುಶಾಹಿಯನ್ನು ಹಾಗೂ ಪುರಾತನ ಕಾನೂನುಗಳನ್ನು ಕಿತ್ತೆಸೆದು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ವಿಚಾರದಲ್ಲಿ ಎಲ್ಲರೂ ಸಮಾನರು ಎನ್ನುವ ನವ ಭಾರತದ ಪರಿಕಲ್ಪನೆಯ ಸಂವಿಧಾನವನ್ನು ಜಾರಿಗೊಳಿಸಿದ ದಿನ. ಗಣತಂತ್ರ ವ್ಯವಸ್ಥೆಯನ್ನು ರೂಪುಗೊಳಿಸಿಕೊಳ್ಳುವುದಕ್ಕಾಗಿ ಅಸಂಖ್ಯಾತ ಜನರು ತ್ಯಾಗ-ಬಲಿದಾನಗಳನ್ನು ಮಾಡಿದ್ದಾರೆ. ಅವರೆಲ್ಲರನ್ನೂ ಈ ಅಮೃತ ಗಳಿಗೆಯಲ್ಲಿ ಗೌರವಪೂರ್ವಕವಾಗಿ ಸ್ಮರಿಸೋಣ ಎಂದು ಹೇಳಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಶತಶತಮಾನಗಳ ಕಾಲ ಹೋರಾಟ ಮಾಡಿ ನ್ಯಾಯ ಹಾಗೂ ಸ್ವಾತಂತ್ರ್ಯವನ್ನು ದಕ್ಕಿಸಿಕೊಟ್ಟಿದ್ದಾರೆ. ನಾವೆಲ್ಲರೂ ನಮ್ಮ ಹಿರಿಯರ ಶ್ರಮ ವ್ಯರ್ಥವಾಗದಂತೆ ಕಾಪಾಡಿಕೊಳ್ಳುವ ಪ್ರತಿಜ್ಞೆ ಮಾಡೋಣ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು ಸ್ವಾತಂತ್ರ್ಯವನ್ನು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವೆಂದು ಮೂರು ಮಾದರಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. “ನಾವು ಯಾವುದೇ ಕಾರಣಕ್ಕೂ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತುಷ್ಟಗೊಳ್ಳಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬದುಕಿನ ಸಿದ್ಧಾಂತವಾಗಿ ಗುರುತಿಸಿಕೊಂಡ ಒಂದು ಜೀವನ ಕ್ರಮವಾಗಿದೆ.

ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ನಿಯಮಗಳನ್ನು ಪ್ರತ್ಯೇಕ ಅಂಶಗಳಾಗಿ ಪರಿಗಣಿಸಬಾರದು. ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸಿದರೆ ಅದು ಪ್ರಜಾಪ್ರಭುತ್ವದ ಸೋಲಿಗೆ ಕಾರಣವಾಗುತ್ತದೆ. ಸ್ವಾತಂತ್ರ್ಯವು ಸಮಾನತೆಯಿಂದ ಪ್ರತ್ಯೇಕವಾಗುವುದಿಲ್ಲ, ಸಮಾನತೆಯು ಸ್ವಾತಂತ್ರ್ಯದಿಂದ ಪ್ರತ್ಯೇಕವಾಗುವುದಿಲ್ಲ ಅಥವಾ ಸ್ವಾತಂತ್ರ್ಯ ಮತ್ತು ಸಮಾನತೆಯು ಭ್ರಾತೃತ್ವದಿಂದ ಪ್ರತ್ಯೇಕವಾಗುವುದಿಲ್ಲ. ಸಮಾನತೆಯಿಲ್ಲದ ಸ್ವಾತಂತ್ರ್ಯವು ಹಲವರ ಮೇಲೆ ಕೆಲವರ ಸರ್ವಾಧಿಕಾರವಾಗಿ ಮೆರೆಯುತ್ತದೆ. ಸ್ವಾತಂತ್ರ್ಯವಿಲ್ಲದ ಸಮಾನತೆಯು ವ್ಯಕ್ತಿಗತ ಕ್ರಿಯಾಶೀಲತೆಯನ್ನು ಅಂತ್ಯಗೊಳಿಸುತ್ತದೆ. ಭ್ರಾತೃತ್ವವಿಲ್ಲದಿದ್ದರೆ, ಸ್ವಾತಂತ್ರ್ಯ ಹಾಗೂ ಸಮಾನತೆಗಳು ಯಾವುದೇ ವಿಷಯದ ಸಹಜ ನಡೆಯಾಗುವುದಿಲ್ಲ ಎಂದಿದ್ದಾರೆ.

ಕರ್ನಾಟಕ ಸರ್ಕಾರವು ಸಂವಿಧಾನವು ಪ್ರಸ್ತಾಪಿಸಿರುವ ಈ ಮೂರೂ ವಿಷಯಗಳನ್ನು ಆದ್ಯತೆಯ ವಿಷಯಗಳನ್ನಾಗಿ ಪರಿಗಣಿಸಿದೆ. ರಾಜ್ಯದ ಪ್ರತಿ ಪ್ರದೇಶ ಹಾಗೂ ಪ್ರತಿ ಸಮುದಾಯಗಳ ಜನರ ಧ್ವನಿಗಳನ್ನು ಆಲಿಸಿ, ಅವುಗಳಿಗೆ ನ್ಯಾಯೋಚಿತ ಪರಿಹಾರ ನೀಡುವ ಕೆಲಸವನ್ನು ಮಾಡುತ್ತಿದೆ. ಸರ್ಕಾರದ ವಿವಿಧ ನೇಮಕಾತಿಗಳಲ್ಲಿ ಅಲಕ್ಷಿತರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ವಿವಿಧ ಜನಸಮುದಾಯಗಳ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಲು ಆಯೋಗಗಳನ್ನು ರಚಿಸಿ ಅವುಗಳ ಶಿಫಾರಸುಗಳನ್ನು ಜಾರಿ ಮಾಡಲಾಗುತ್ತಿದೆ. ಹಾಗೆಯೇ ಪ್ರಾದೇಶಿಕ ಅಸಮಾನತೆಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ. ಇದರ ಮೂಲಕ ಕರ್ನಾಟಕದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಚೈತನ್ಯ ಉದಯಿಸುತ್ತಿದೆ.

ಸಂವಿಧಾನದ ಮುಖ್ಯ ಆಶಯದಂತೆ ಅತ್ಯಂತ ಹಿಂದುಳಿದವರ ಬಲವರ್ಧನೆಗಾಗಿ ರಾಜ್ಯದ ಜನರಿಗೆ ಆರ್ಥಿಕ ಚೈತನ್ಯ ನೀಡುವುದಕ್ಕಾಗಿ ರಾಜ್ಯವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜನ ಕಲ್ಯಾಣಗಳಿಗಾಗಿ ರಾಜ್ಯವು ವರ್ಷಕ್ಕೆ 1.12 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ.

ಗ್ಯಾರಂಟಿ ಯೋಜನೆಗಳಿಗಾಗಿ ಈವರೆಗೆ 1.13 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನವನ್ನು ವಿನಿಯೋಗಿಸಲಾಗಿದೆ. ಇದರ ಪರಿಣಾಮವಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ, ಕುಟುಂಬಗಳು ಆರ್ಥಿಕವಾಗಿ ಸಬಲವಾಗುತ್ತಿವೆ ಎಂದು ಹಲವಾರು ಅಧ್ಯಯನಗಳು ಹೇಳಿವೆ. ಮಹಿಳಾ ಸಮುದಾಯದಲ್ಲಿ ಹೊಸ ಆರ್ಥಿಕ ಸಾಮಾಜಿಕ ಉತ್ಸಾಹ ಬಂದಿದೆ.

ದೇಶದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಗಳು ಆರೋಗ್ಯಕರವಾಗಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಇವೆಲ್ಲದರ ಜೊತೆಗೆ ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬೆಂಗಳೂರು ನಗರವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆಯೆಂದು ಸಮೀಕ್ಷೆಗಳು ಹೇಳುತ್ತಿವೆ. ಈ ಸಂಗತಿಯು ರಾಜ್ಯದ ಹೆಮ್ಮೆಯ ಸಂಗತಿಯಾಗಿದೆ.

ಕುಟುಂಬ ಸರ್ವೆ ದತ್ತಾಂಶದ ಪ್ರಕಾರ, 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ 1.37 ಕೋಟಿ ಕುಟುಂಬಗಳು ಸರ್ಕಾರದ ಒಂದಲ್ಲಾ ಒಂದು ಯೋಜನೆಯಿಂದ ನೇರ ಆರ್ಥಿಕ ಸೌಲಭ್ಯ ಪಡೆದಿವೆ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ನೇರವಾಗಿ ಕಟ್ಟಕಡೆಯ ಫಲಾನುಭವಿಯ ಬ್ಯಾಂಕ್‌ ಖಾತೆಗೆ ತಲುಪುವಂತೆ ನೋಡಿಕೊಳ್ಳುತ್ತಿದೆ.

ಸರ್ಕಾರವು ʼಯೂನಿವರ್ಸಲ್‌ ಬೇಸಿಕ್‌ ಇನ್‌ಕಂʼ ಎಂಬ ತತ್ವದ ಆಧಾರದ ಮೇಲೆ ತಂದಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆಯೆಂದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಉತ್ತಮ ಆಹಾರ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೇಕಾದ ಆರ್ಥಿಕ ಚಟುವಟಿಕೆಗಳಿಗೆ ಕರ್ನಾಟಕವು ಜಾರಿಗೆ ತಂದಿರುವ ಕಾರ್ಯಕ್ರಮಗಳು ಕಾರಣವಾಗಿವೆ.

ಇವುಗಳ ಜೊತೆಗೆ ʼಅಕ್ಕʼ ಕಾರ್ಯ ಪಡೆಗಳನ್ನು ರಚಿಸಿ ಅವುಗಳ ಮೂಲಕ 25ಕ್ಕೂ ಹೆಚ್ಚು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಇವುಗಳಷ್ಟೇ ಅಲ್ಲದೆ ಕರ್ನಾಟಕವು ಇಡೀ ದೇಶದಲ್ಲಿಯೇ ಮಹಿಳಾ ಕಾರ್ಮಿಕರ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕ್ರಾಂತಿಕಾರಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಹಿಳಾ ಕಾರ್ಮಿಕರಿಗೆ ವಾರ್ಷಿಕವಾಗಿ 12 ದಿನಗಳ ವೇತನ ಸಹಿತ ಋತುಚಕ್ರ ರಜೆಯನ್ನು ನೀಡಲಾಗುತ್ತಿದೆ.

ಕರ್ನಾಟಕವು ಇದೇ ಸಂದರ್ಭದಲ್ಲಿ ಉದ್ಯೋಗ ಸೃಜನೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಕಡೆಗೂ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. 2025-26ರ ಬಜೆಟ್‌ನಲ್ಲಿ ಬಂಡವಾಳ ವೆಚ್ಚಗಳಿಗಾಗಿ 83,200 ಕೋಟಿ ರೂಪಾಯಿಗಳನ್ನು ಒದಗಿಸಿ ವೆಚ್ಚ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಕೋಟಿ ರೂ.ಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಇವುಗಳಿಂದಾಗಿ ಅಭಿವೃದ್ಧಿಯು ವೇಗಗೊಳ್ಳುತ್ತದೆ. ಕರ್ನಾಟಕವು ಇಂದು ಸೆಮಿ ಕಂಡಕ್ಟರ್‌, ಏರೊ ಸ್ಪೇಸ್‌, ಕಮ್ಯುನಿಕೇಶನ್‌ ಎಕ್ಯುಪಮೆಂಟ್ಸ್ ಕ್ವಾಂಟಮ್‌ ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಜಗತ್ತಿನ ದೊಡ್ಡ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡುತ್ತಿವೆ.

ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು ಅಭಿವೃದ್ಧಿಯು ವೇಗಗೊಳ್ಳಬೇಕಾದರೆ ಜನರ ಆಸ್ತಿ ದಾಖಲೆಗಳು ಸಮರ್ಪಕವಾಗಿರಬೇಕು. ಅದಕ್ಕಾಗಿ ರಾಜ್ಯವು ನಿರಂತರವಾಗಿ ಶ್ರಮಿಸುತ್ತಿದೆ. ಕಂದಾಯ ನ್ಯಾಯಾಲಯಗಳಲ್ಲಿ ಬಹು ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಶೇ.80ಕ್ಕೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಈಗ ಕಂದಾಯ ನ್ಯಾಯಾಲಯಗಳನ್ನು ಆನ್‌ಲೈನ್‌ ಮುಖಾಂತರ ನಿರ್ವಹಿಸಲು ಅವಕಾಶ ಕಲ್ಪಿಸಿ ಪಾರದರ್ಶಕಗೊಳಿಸಲಾಗಿದೆ. 91,163 ಫೋಡಿಗಳನ್ನು ಪೂರ್ಣಗೊಳಿಸಿ ದಾಖಲೆಗಳನ್ನು ಕಾಲೋಚಿತಗೊಳಿಸಲಾಗಿದೆ.

ಇವುಗಳ ಜೊತೆಯಲ್ಲಿ ದಾಖಲೆರಹಿತ 4,050 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಿ 1,11,111 ಲಕ್ಷ ಸಂಖ್ಯೆಯ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಒದಗಿಸಲಾಗಿದೆ. ಇನ್ನುಳಿದ ಒಂದು ಲಕ್ಷ ಹಕ್ಕು ಪತ್ರಗಳು ವಿತರಣೆಗೆ ಸಿದ್ಧವಾಗಿವೆ. ರೈತಾಪಿ ಸಮುದಾಯಗಳ ಹಿತರಕ್ಷಣೆಯ ದೃಷ್ಟಿಯಿಂದ ಕಂದಾಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟೈಸ್‌ ಮಾಡಲಾಗುತ್ತಿದೆ.

ಜನರ ಅನುಕೂಲಕ್ಕಾಗಿ ʼಬಿʼ ಖಾತಾಗಳನ್ನು ʼಎʼ ಖಾತಾಗಳನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸುಮಾರು 20 ಲಕ್ಷಕ್ಕೂ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿದೆ. ಇ-ಸ್ವತ್ತು ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯಿಂದ ಅಸಂಖ್ಯಾತ ಜನರಿಗೆ ಅನುಕೂಲವಾಗುತ್ತಿದೆ. ಆಡಳಿತವನ್ನು ಸರಳ ಮತ್ತು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ರಾಜ್ಯವು ಕೆಲಸ ಮಾಡುತ್ತಿರುವುದರಿಂದ ಬದಲಾದ ಕಾಲಘಟ್ಟದ ಅಗತ್ಯಗಳಿಗೆ ಅನುಗುಣವಾಗಿ ಕಟ್ಟಡಗಳ ಸೆಟ್‌ ಬ್ಯಾಕನ್ನು ಕಡಿಮೆ ಮಾಡಲಾಗಿದೆ.

ಕರ್ನಾಟಕವು ಇಡೀ ದೇಶದಲ್ಲಿಯೆ ಶಿಕ್ಷಣ ಕ್ಷೇತ್ರದ ಅತಿ ದೊಡ್ಡ ಸಂಕೀರ್ಣವಾಗಿ ವಿಕಾಸ ಹೊಂದುತ್ತಿದೆ. ಅತಿ ಹೆಚ್ಚು ಸಂಖ್ಯೆಯ ಮೆಡಿಕಲ್‌, ನರ್ಸಿಂಗ್‌, ಇಂಜಿನಿಯರಿಂಗ್‌, ಕೃಷಿ, ತೋಟಗಾರಿಕೆ, ಮ್ಯಾನೇಜ್‌ಮೆಂಟ್ ಕಾಲೇಜುಗಳು, ವಿಶ್ವವಿದ್ಯಾಲಯಗಳು ಇಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿವೆ. ರಾಜ್ಯವು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳನ್ನು ಪ್ರಾರಂಭಿಸುತ್ತಿದೆ. ನಮ್ಮ ರಾಜ್ಯದಲ್ಲಿ ಸುಮಾರು 8.5 ಲಕ್ಷ ಮಕ್ಕಳು ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿದ್ದು, ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪ್ರೊ. ಸುಖ್‌ ದೇವ್ ಥೋರಟ್‌ ಅವರ ಅಧ್ಯಕ್ಷತೆಯಲ್ಲಿ‌ ರಚಿಸಲಾಗಿದ್ದ ಸಮಿತಿಯು ನೀಡಿದ್ದ ವರದಿಯನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ವ್ಯವಸ್ಥೆ ಸುಧಾರಿಸಲು ʼಅಕ್ಷರ ಆವಿಷ್ಕಾರʼ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆ ಭಾಗದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಡಾ.ಛಾಯಾ ದೇಗಾಂವಕರ್‌ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯು ಇತ್ತೀಚೆಗಷ್ಟೆ ವರದಿ ನೀಡಿದೆ. ಪ್ರಸ್ತುತ ಇಲ್ಲಿ ಕ್ರಾಂತಿಕಾರಕ ಮಾದರಿಯ 300 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕೌಶಲ್ಯಯುತ ಶಿಕ್ಷಣಕ್ಕೆ ಅತಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುತ್ತಿದೆ. ಆದ್ದರಿಂದಲೆ ಹೊಸದಾಗಿ ಜಿಟಿಟಿಸಿಗಳು, ಪಾಲಿಟೆಕ್ನಿಕ್‌ ಕಾಲೇಜುಗಳು, ಸ್ಕಿಲ್‌ ಪಾರ್ಕ್‌ಗಳು, ಎಂಎಸ್‌ಡಿಸಿಗಳನ್ನು ಪ್ರಾರಂಭಿಸಲಾಗುತ್ತಿದೆ. ಶಾಲೆ ಮತ್ತು ಕಾಲೇಜುಗಳಲ್ಲಿಯೂ ಕೌಶಲ್ಯ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ.

ಕರ್ನಾಟಕ ರಾಜ್ಯವು ಆರೋಗ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಜನಸಂಖ್ಯೆಗೆ ಅನುಗುಣವಾಗಿ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಮೆಡಿಕಲ್‌ ಕಾಲೇಜುಗಳನ್ನು ಹೊಂದಿದೆ. ಸರ್ಕಾರವು ಹೊಸ ಮೆಡಿಕಲ್‌ ಕಾಲೇಜುಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತಲೇ ಇದೆ. ಬೆಂಗಳೂರು, ಮೈಸೂರು, ಕಲ್ಬುರ್ಗಿ, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಮಂಗಳೂರು, ದಾವಣಗೆರೆ, ಉಡುಪಿ, ಶಿವಮೊಗ್ಗ, ತುಮಕೂರು ಮುಂತಾದ ನಗರಗಳು ಹೆಲ್ತ್‌ ಹಬ್‌ಗಳಾಗಿ ರೂಪುಗೊಳ್ಳುತ್ತಿವೆ.

ರಾಜ್ಯದಲ್ಲಿರುವ ಮೂಲ ಸೌಕರ್ಯಗಳನ್ನು ಬಳಸಿಕೊಂಡು ಜನರ ಮನೆಗಳಿಗೆ ತೆರಳಿ ಆರೋಗ್ಯ ತಪಾಸಣೆ ಮಾಡುವ ನೂತನ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯು ಜಾರಿಗೊಳಿಸಿದೆ. ಅಪೌಷ್ಟಿಕತೆಯ ಸಮಸ್ಯೆಯನ್ನು ಹೋಗಲಾಡಿಸಲು ಹಲವು ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಹಾರ ಕಲಬೆರಕೆಯ ವಿರುದ್ಧ ಸಮರ ಸಾರಲಾಗಿದೆ. ಕಲಬೆರಕೆಯಂಥ ಕ್ರಿಮಿನಲ್‌ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ

ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕಾರಣದಿಂದಾಗಿ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದರಲ್ಲಿ ಮುಂಚೂಣಿಯಲ್ಲಿದ್ದೇವೆ. 2025ರ ಇಂಡಿಯಾ ಜಸ್ಟೀಸ್‌ ವರದಿಯ ಪ್ರಕಾರ ನ್ಯಾಯ ನೀಡಿಕೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಕುವೆಂಪು ಅವರ ಆಶಯದಂತೆ ʼಸರ್ವ ಜನಾಂಗದ ಶಾಂತಿಯ ತೋಟʼವೆಂಬ ಹೆಗ್ಗಳಿಕೆಯನ್ನು ಕರ್ನಾಟಕವು ರಕ್ಷಿಸುತ್ತಾ ಬಂದಿದೆ. ಸೌಹಾರ್ದ ವಾತಾವರಣವನ್ನು ಇನ್ನಷ್ಟು ಬಲವಾಗಿಸಲು ವಿಶೇಷ ಕಾರ್ಯಪಡೆಗಳನ್ನು ಸ್ಥಾಪಿಸಲಾಗಿದೆ. ಇದರಿಂದಾಗಿ ನಿರಂತರವಾಗಿ ಕೋಮು ಸೂಕ್ಷ್ಮತೆ ಇರುವ ಪ್ರದೇಶಗಳಲ್ಲಿ ಶಾಂತಿ ನೆಲೆಸುವಂತಾಗಿದೆ. ಸಮಾಜಕ್ಕಾಗಿ ದುಡಿಯುವ ಪೊಲೀಸರ ಮಣಭಾರದ ಸ್ಲೋಚ್‌ ಹ್ಯಾಟುಗಳ ಭಾರವನ್ನು ಇಳಿಸಿ ಹೊಸ ಪೀಕ್‌ ಕ್ಯಾಪುಗಳನ್ನು ನೀಡಲಾಗಿದೆ. ಇದರಿಂದ ಅವರ ಕಾರ್ಯ ಕ್ಷಮತೆ ಹೆಚ್ಚುವುದು ಸಾಧ್ಯವಾಗಿದೆ.

ಹೊಸ ಕಾಲಘಟ್ಟದಲ್ಲಿ ಡ್ರಗ್ಸ್‌ ಎಂಬ ಮನುಷ್ಯ ವಿರೋಧಿ ದುರಂತಕಾರಿ ಪಿಡುಗು ನಮ್ಮ ಯುವ ಜನರನ್ನು ಬಲಿ ಪಡೆಯುತ್ತಿದೆ. ಇದನ್ನು ತಪ್ಪಿಸಲು ರಾಜ್ಯವು ಈ ಪಿಡುಗಿಗೆ ಕಾರಣರಾದವರನ್ನು ನರಹತ್ಯೆಗೆ ಸಮನಾದ ಅಪರಾಧ ಮಾಡಿದವರು ಎಂದು ತೀರ್ಮಾನಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲು ಅಗತ್ಯವಿರುವ ಕಾನೂನುಗಳನ್ನು ರೂಪಿಸುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಮೇಲಿನ ದೌರ್ಜನ್ಯಗಳನ್ನು ತಡೆಯಲು 33 ಹೊಸ ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ಪ್ರಾರಂಭಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಬಿಗಿ ಮಾಡುವ ನಿಟ್ಟಿನಲ್ಲಿ 12 ಹೊಸ ಠಾಣೆಗಳು ಪ್ರಾರಂಭವಾಗಿವೆ. ಎಲ್ಲಾ ಸಿಇಎನ್‌ ಪೊಲೀಸ್‌ ಠಾಣೆಗಳನ್ನು ಸೈಬರ್‌ ಪೊಲೀಸ್‌ ಠಾಣೆಗಳಾಗಿ ಬದಲಾಯಿಸಲಾಗಿದೆ. ಈ ಎಲ್ಲ ಉಪಕ್ರಮಗಳ ಉದ್ದೇಶ ನಮ್ಮ ರಾಜ್ಯವನ್ನು ಇನ್ನಷ್ಟು ಉತ್ತಮವಾದ ಕಾನೂನು ಸುವ್ಯವಸ್ಥೆ ಹೊಂದಿದ ರಾಜ್ಯವನ್ನಾಗಿಸುವುದೇ ಆಗಿದೆ.

ಜ್ಞಾನ-ವಿಜ್ಞಾನ ವಲಯಗಳು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೈಗಾರಿಕಾ ಪರವಾದ ವಾತಾವರಣಗಳಿಂದಾಗಿ ರಾಜ್ಯವು ಐಟಿ-ಬಿಟಿ ಕ್ಷೇತ್ರಗಳಲ್ಲಿಇಡೀ ದೇಶದಲ್ಲಿಯೇ ಮುಂಚೂಣಿ ಸ್ಥಾನದಲ್ಲಿದೆ. ಅಲ್ಲದೆ, ಭಾರತದ ನವೋದ್ಯಮಗಳ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ʼಕರ್ನಾಟಕ ನವೋದ್ಯಮ ನೀತಿʼಯನ್ನು ಜಾರಿಗೆ ತರಲಾಗಿದೆ. ಬೆಂಗಳೂರಿನ ಆಚೆಗೂ ತಂತ್ರಜ್ಞಾನವನ್ನು ಕೊಂಡೊಯ್ಯಲು ʼಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮʼ [ಲೀಪ್]‌ ವನ್ನು ರೂಪಿಸಿ 1,000 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದರಿಂದಾಗಿ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಉದ್ಯೋಗಗಳು ಸೃಜನೆಯಾಗಬಹುದೆಂಬ ನಿರೀಕ್ಷೆಯಿದೆ. 2035ರ ವೇಳೆಗೆ 20 ಡಾಲರ್‌ ಬಿಲಿಯನ್‌ ಕ್ವಾಂಟಮ್‌ ಆರ್ಥಿಕತೆಯನ್ನು ನಿರ್ಮಿಸಲು ʼಕರ್ನಾಟಕ ಕ್ವಾಂಟಮ್‌ ರೋಡ್‌ಮ್ಯಾಪʼನ್ನು ಬಿಡುಗಡೆ ಮಾಡಲಾಗಿದೆ.

2025 ರಲ್ಲಿ ಉತ್ತಮ ಮಳೆಯಾದ ಕಾರಣ ಈ ವರ್ಷ ಅತ್ಯುತ್ತಮ ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ಅತಿವೃಷ್ಟಿಯೂ ಸಹ ರೈತರ ಬೆಳೆಗಳಿಗೆ ಹಾನಿ ಮಾಡಿತು. ಮಳೆಯಿಂದ ಹಾನಿಯಾದ ಬೆಳೆಗಳಿಗಾಗಿ ರೈತರಿಗೆ ಪರಿಹಾರ ನೀಡಲು ಸರ್ಕಾರವು 2,250 ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಇದರ ಜೊತೆಗೆ 2,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಿಮೆಯನ್ನು ರೈತರಿಗೆ ಸಿಗುವಂತೆ ಮಾಡಲಾಗಿದೆ.

ಈ ವರ್ಷ ರೈತರು ಬೆಳೆದ ಮಾವು, ಮೆಕ್ಕೆಜೋಳ ಮುಂತಾದವುಗಳಿಗೆ ಬೆಲೆ ಕಡಿಮೆಯಾಯಿತೆಂದು ಹಾಗೂ ಕಬ್ಬಿಗೆ ಸಿಗುತ್ತಿರುವ ದರ ಸಾಲದ್ದೆಂದು ಪ್ರತಿಭಟನೆ ಮಾಡಿದರು. ಸರ್ಕಾರವು ಕೂಡಲೆ ರೈತರ ಪರವಾಗಿ ನಿಂತು ಸಮಸ್ಯೆಗಳನ್ನು ಪರಿಹರಿಸಿತು. ಕಬ್ಬು ಬೆಳೆದ ರೈತರಿಗೆ ಇಂತಿಷ್ಟೇ ಬೆಲೆ ನೀಡಬೇಕೆಂದು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸೂಚನೆಗಳನ್ನು ನೀಡಿ ಸರ್ಕಾರವು ಸಹ ಸುಮಾರು 300 ಕೋಟಿ ರೂ.ಗಳಿಗೂ ಹೆಚ್ಚಿನ ನೆರವನ್ನು ರೈತರಿಗೆ ನೀಡಲು ನಿರ್ಧರಿಸಿತು. ಇದೇ ಸಂದರ್ಭದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ಜನವರಿಯ ಬದಲಾಗಿ ಡಿಸೆಂಬರಿನಲ್ಲಿಯೇ ತೆರೆಯಬೇಕೆಂದು ಒತ್ತಡ ಬಂದ ಕಾರಣ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸಿ ಖರೀದಿ ಕೇಂದ್ರಗಳನ್ನು ತೆರೆದಿದೆ.

ಪ್ರಸ್ತುತ ಸರ್ಕಾರವು ರೈತರ ಪಂಪ್‌ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲೂ 7 ಗಂಟೆಗಳ ಕಾಲ ನಿರಂತರವಾಗಿ ತ್ರೀಫೇಸ್‌ ವಿದ್ಯುತ್‌ ಪೂರೈಸಲು ಪ್ರಯತ್ನಿಸುತ್ತಿದೆ. ಬದಲಾದ ಪರಿಸ್ಥಿತಿಯಲ್ಲಿ ರೈತರು ಬೆಳೆದ ಕಬ್ಬು ಕಟಾವು ಯಂತ್ರಗಳಿಗೆ ದೊಡ್ಡ ಪ್ರಮಾಣದ ಪ್ರೋತ್ಸಾಹ ಧನವನ್ನು ನೀಡಿ ಯಂತ್ರಗಳನ್ನು ಒದಗಿಸಲಾಗುತ್ತಿದೆ. ಈಗ ರಾಗಿ, ಭತ್ತ, ಮೆಕ್ಕೆಜೋಳ ಮುಂತಾದ ಬೆಳೆಗಳನ್ನು ಕಟಾವು ಮಾಡಲು ರೈತರು ಯಂತ್ರಗಳನ್ನೇ ಅವಲಂಬಿಸಿದ್ದಾರೆ. ಕೃಷಿ ಯಂತ್ರೋಪಕರಣ ಯೋಜನೆಯ ಮೂಲಕ ಸರ್ಕಾರ ಅವುಗಳಿಗೂ ನೆರವು ನೀಡುತ್ತಿದೆ. ನಮ್ಮ ಸರ್ಕಾರವು 2025-26 ಸೇರಿಸಿದಂತೆ ಸುಮಾರು 10,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಸಬ್ಸಿಡಿ ಹಾಗೂ ಇನ್ನಿತರೆ ರೂಪದಲ್ಲಿ ರೈತರಿಗೆ ನೀಡಲಾಗಿದೆ.

ಹಾಲು ಉತ್ಪಾದಕರಿಗೆ ಉತ್ತಮ ದರಗಳು ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲದೆ, ಹಿಂದೆ ಬಾಕಿ ಇದ್ದ ಪ್ರೋತ್ಸಾಹ ಧನವೂ ಸೇರಿದಂತೆ ರಾಜ್ಯದ 9.07 ಲಕ್ಷ ಹಾಲು ಉತ್ಪಾದಕರಿಗೆ 4,130 ಕೋಟಿ ರೂ.ಗಳನ್ನು ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಿದೆ.

ಆಕಸ್ಮಿಕವಾಗಿ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಕೊಡುವ ಪ್ರಕ್ರಿಯೆ ನಿಂತು ಹೋಗಿತ್ತು. ಪ್ರಸ್ತುತ ಸರ್ಕಾರ ಅನುಗ್ರಹ ಯೋಜನೆಯಲ್ಲಿ 95.41 ಕೋಟಿ ರೂ.ಗಳನ್ನು ಒದಗಿಸಿ ರೈತರ ಪರ ನಿಂತಿತು.

ನಮ್ಮ ಸರ್ಕಾರವು ತಾನೆಷ್ಟು ರೈತ ಪರ ಎಂಬುದನ್ನು ಸಾಬೀತು ಪಡಿಸುತ್ತಲೇ ಇದೆ. ಬಹಳ ಕಾಲದಿಂದ ಹೋರಾಟ ನಡೆಸುತ್ತಿದ್ದ ದೇವನಹಳ್ಳಿಯ ರೈತರ ಜಮೀನುಗಳನ್ನು ಭೂ ಸ್ವಾಧೀನದಿಂದ ಕೈ ಬಿಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಒಂದೇ ಹಂತದಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲು ತೀರ್ಮಾನಿಸಿ ಭೂಮಿ ಕಳೆದುಕೊಳ್ಳುವ ರೈತರಿಗೆ ಉತ್ತಮ ಪರಿಹಾರದ ದರಗಳನ್ನು ನಿಗದಿಪಡಿಸಿದೆ. ರೈತ ಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಂಡು ಸರ್ಕಾರ ಕೆಲಸ ಮಾಡುತ್ತಿದೆ.

ಕರ್ನಾಟಕವು ಪರಿಶಿಷ್ಟ ಸಮುದಾಯಗಳ ಬಲವರ್ಧನೆಯ ವಿಚಾರದಲ್ಲಿ ಬೇರೆ ರಾಜ್ಯಗಳಿಗಿಂತ ಬಹಳ ಮುಂದೆ ಇದೆ. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಧಿನಿಯಮಗಳನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕ. ಬಡ್ತಿ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸಹ ಇಲ್ಲಿಯೇ. ಎಸ್‌ಸಿ/ಎಸ್‌ಟಿ ಗುತ್ತಿಗೆದಾರರಿಗೆ ಮೀಸಲಾತಿ ಹಾಗೂ ಕೈಗಾರಿಕಾ ನಿವೇಶನಗಳಲ್ಲಿ ಮೀಸಲಾತಿ, ಸಾಲ ನೀಡಿಕೆ, ವಿದೇಶಿ ವಿದ್ಯಾಭ್ಯಾಸಕ್ಕಾಗಿ ಪ್ರಬುದ್ಧ ವಿದ್ಯಾರ್ಥಿ ವೇತನ ಯೋಜನೆ, ವಿದ್ಯಾರ್ಥಿ ನಿಲಯಗಳು, ವಸತಿ ಶಾಲೆಗಳನ್ನು ಸ್ಥಾಪನೆಯಂತಹ ಉಪಕ್ರಮಗಳನ್ನು ಕೈಕೊಳ್ಳಲಾಗಿದೆ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಒಳ ಮೀಸಲಾತಿ ವಿಷಯವೂ ಬಗೆಹರಿದು ಅನುಷ್ಠಾನದ ಹಂತಕ್ಕೆ ಬಂದಿದೆ. ಪಿಟಿಸಿಎಲ್‌ ಅಧಿನಿಯಮದ ಸಂಬಂಧದಲ್ಲಿ ಉದ್ಭವಿಸಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ.

ಹಿಂದುಳಿದ ವರ್ಗಗಳು, ಅಲ್ಪ ಸಂಖ್ಯಾತರು, ಮಹಿಳೆಯರು, ಮಕ್ಕಳು, ಕಾರ್ಮಿಕರು ಮತ್ತು ರೈತರ ಅಭ್ಯುದಯದಲ್ಲೂ ನಮ್ಮ ರಾಜ್ಯವು ಮುಂದೆ ಇದೆ. ಸಂವಿಧಾನದ ಅನುಚ್ಛೇದ 15 ಮತ್ತು 16 ರಲ್ಲಿ ಪ್ರಸ್ತಾಪಿಸಿರುವ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ರಾಜ್ಯ ಕರ್ನಾಟಕವಾಗಿದೆ.

ಗ್ರಾಮ ಮತ್ತು ನಗರಗಳ ನಡುವೆ ಸಮತೋಲನ ಸಾಧಿಸಲು ರಾಜ್ಯ ಸರ್ಕಾರವು ಶ್ರಮಿಸುತ್ತಿದೆ. ಗ್ರಾಮೀಣ ಭಾಗಗಳ ರಸ್ತೆ, ವಿದ್ಯುತ್‌, ಕುಡಿಯುವ ನೀರು ಮುಂತಾದ ಸವಲತ್ತುಗಳನ್ನು ಒದಗಿಸಲು ಪ್ರಯತ್ನಿಸುತ್ತಿರುವುದರ ನಡುವೆಯೇ ನಗರ ಭಾಗಗಳ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿಯೂ ಶ್ರಮಿಸುತ್ತಿದೆ. ಬೆಂಗಳೂರು ಮಹಾನಗರದ ಅಭಿವೃದ್ಧಿಗಾಗಿ ಸುಮಾರು 1.5 ಲಕ್ಷ ಕೋಟಿ ರೂ.ಗಳ ಬೃಹತ್‌ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಮೆಟ್ರೋ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತಿದೆ. 110 ಗ್ರಾಮಗಳಿಗೆ ಕಾವೇರಿ 5ನೇ ಹಂತದ ಯೋಜನೆಯಡಿ ನೀರು ಸರಬರಾಜು ಮಾಡಲು ಪ್ರಾರಂಭಿಸಲಾಗಿದೆ. ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ನ ಪ್ರಗತಿಯು ಪ್ರಾರಂಭವಾಗಿದ್ದು, ನಗರದ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರವು ಶ್ರಮಿಸುತ್ತಿದೆ.

ರಾಜ್ಯದ 227 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 9,574 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. 3,885 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ-4ನೇ ಹಂತದ ಯೋಜನೆ ಚಾಲ್ತಿಯಲ್ಲಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣದಿಂದ ಅಗತ್ಯ ಇರುವ ಕಡೆಗಳಲ್ಲಿ ಇಂದಿರಾ ಕ್ಯಾಂಟೀನುಗಳನ್ನು ಪ್ರಾರಂಭಿಸಲಾಗುತ್ತಿದೆ.

ವಿಕೇಂದ್ರೀಕರಣ ಸೂಚ್ಯಂಕದಲ್ಲಿ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗ್ರಾಮ ಪಂಚಾಯಿತಿಗಳ ಸ್ವಾವಲಂಬನೆಗಾಗಿ ನಮ್ಮ ಸರ್ಕಾರವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರ ಆಸ್ತಿ ದಾಖಲೆಗಳ ಸುಲಭ ಲಭ್ಯತೆಗಾಗಿ ಇ-ಸ್ವತ್ತು ತಂತ್ರಾಂಶವನ್ನು ಜಾರಿಗೆ ತರಲಾಗಿದೆ. ಪಾರದರ್ಶಕ ಆಡಳಿತವನ್ನು ಖಾತರಿಪಡಿಸುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ನೌಕರರ ವರ್ಗಾವಣೆಗೆ ಆನ್‌ಲೈನ್‌ ಕೌನ್ಸಿಲಿಂಗ್‌ ಅನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ವರ್ಗಾವಣೆಗಳಲ್ಲಿನ ಭ್ರಷ್ಟಾಚಾರವನ್ನು ನಿಗ್ರಹಿಸಲು ಸರ್ಕಾರವು ನಿರಂತರವಾಗಿ ಕೆಲಸ ಮಾಡುತ್ತಿದೆ. ಅನೇಕ ಇಲಾಖೆಗಳ ಪ್ರಮುಖ ಹುದ್ದೆಗಳನ್ನು ಕೌನ್ಸೆಲಿಂಗ್‌ ಮೂಲಕವೇ ನಡೆಸಲಾಗುತ್ತಿದೆ ಎಂಬುದು ಸಂತೋಷದ ವಿಷಯ.

ಕರ್ನಾಟಕವು ಕಲ್ಯಾಣ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿಯೇ ಮೂಲಭೂತ ಸೌಕರ್ಯಗಳ ಸಮಗ್ರಅಭಿವೃದ್ಧಿ ಚಟುವಟಿಕೆಗಳನ್ನೂ ಕೈಗೆತ್ತಿಕೊಂಡಿದೆ. ವಿಮಾನ ನಿಲ್ದಾಣಗಳು, ಸಬರ್ಬನ್‌ ರೈಲು ಯೋಜನೆಗಳು ಹಾಗೂ ಒಳನಾಡು ಜಲಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ 23,094 ಕೋಟಿ ರೂ.ಗಳ ರಾಜ್ಯ ಕಡಲ ಮತ್ತು ಒಳನಾಡು ಜಲಮಾರ್ಗಗಳ ಮಾಸ್ಟರ್‌ ಪ್ಲಾನನ್ನು ಸಿದ್ಧಪಡಿಸಲಾಗಿದೆ. ಕರ್ನಾಟಕ ಒಳನಾಡು ಜಲಸಾರಿಗೆ ನೀತಿ-2024 ನ್ನು ಜಾರಿಗೊಳಿಸಲಾಗಿದೆ.

ಕಾರ್ಮಿಕರು ದೇಶದ ಸಂಪತ್ತಿನ ಸೃಷ್ಟಿಕರ್ತರು. ಕಾರ್ಮಿಕರ ಕಲ್ಯಾಣವೆಂದರೆ ದೇಶದ ಕಲ್ಯಾಣವೂ ಆಗಿದೆ ಎಂಬ ತತ್ವದಲ್ಲಿ ರಾಜ್ಯ ಸರ್ಕಾರವು ನಂಬಿಕೆಯಿಟ್ಟಿದೆ. ಕಟ್ಟಡ ಮತ್ತು ಇನ್ನಿತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು 42 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಕಾರ್ಮಿಕರ ಅವಲಂಬಿತರಿಗಾಗಿ ಸುರಕ್ಷಿತ ವಸತಿ ವ್ಯವಸ್ಥೆ ನಿರ್ಮಿಸಲು ರಾಜ್ಯದ 5 ಜಿಲ್ಲೆಗಳಲ್ಲಿ 6 ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಈ ವರ್ಷ 14.34 ಲಕ್ಷ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಆರೋಗ್ಯ ತಪಾಸಣೆಯೂ ಸೇರಿದಂತೆ 1,115 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಜನಪರವಾದ ಆಡಳಿತ ನಡೆಸಬೇಕಾದರೆ ಜನಸ್ನೇಹಿಯಾದ ಕಾನೂನುಗಳನ್ನು ರೂಪಿಸಬೇಕಾಗುತ್ತದೆ. 2025 ನೇ ಸಾಲಿನಲ್ಲಿ 76 ಅಧಿನಿಯಮಗಳನ್ನು ರೂಪಿಸಲಾಗಿದೆ. ರಾಜ್ಯದ ಕಾನೂನುಗಳು ಸುಲಭವಾಗಿ ಲಭ್ಯವಾಗುವಂತೆ ಮಾಡಲು 1957 ರಿಂದ ಇತ್ತೀಚಿನವರೆಗೆ ಆಗಿರುವ ಎಲ್ಲಾ ತಿದ್ದುಪಡಿಗಳನ್ನು ಇಲಾಖೆಯ ಜಾಲತಾಣದಲ್ಲಿ [www.dpal.Karnataka.gov.in] ನೀಡಲಾಗಿದೆ. ಇದರ ಜೊತೆಗೆ, 2025 ನೇ ಸಾಲಿನಲ್ಲಿ 105 ನಿಯಮಗಳನ್ನು ಕ್ರೋಢೀಕರಿಸಿ ಪ್ರಕಟಿಸಲಾಗಿದೆ.

ಸರ್ಕಾರವು ರಾಜ್ಯದ ಎಲ್ಲಾ ದೇವಸ್ಥಾನಗಳ ಆಸ್ತಿಗಳನ್ನು ಅಳತೆ ಮಾಡಿ ಒತ್ತುವರಿಗಳನ್ನು ತೆರವು ಮಾಡಿ ದೇವಸ್ಥಾನಗಳಿಗೆ ಮರಳಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ 15 ಕೋಟಿ ರೂ.ಗಳ ಹಂಚಿಕೆಯೊಂದಿಗೆ ʼಭೂ ವರಾಹʼ ಯೋಜನೆಯನ್ನು ರೂಪಿಸಲಾಗಿದೆ. ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ 200 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಛತ್ರಗಳನ್ನು ನಿರ್ಮಿಸಲಾಗಿದೆ. ಅಂಜನಾದ್ರಿ ಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದೇವಾಲಯಗಳ ಅರ್ಚಕರ ಆರ್ಥಿಕ ಭದ್ರತೆಗಾಗಿ ತಸ್ತೀಕ್‌ ಮತ್ತು ವರ್ಷಾಶನ ಮೊತ್ತವನ್ನು ವಾರ್ಷಿಕವಾಗಿ 60,000 ರೂ. ಗಳಿಂದ 72,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅಲ್ಪ ಸಂಖ್ಯಾತರ ಕಲ್ಯಾಣಕ್ಕೂ ಸಹ ಸರ್ಕಾರ ಶ್ರಮಿಸುತ್ತಿದೆ.

ದೇಶದ ಪ್ರಗತಿಗೆ ವಿದ್ಯುಚ್ಛಕ್ತಿ ಲಭ್ಯತೆ ಅತ್ಯಾವಶ್ಯಕವಾದುದು. ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದು 200 ಯೂನಿಟ್‌ಗಳ ಉಚಿತ ವಿದ್ಯುತ್‌ ನೀಡುತ್ತಿದೆ. ಜೊತೆಗೆ ರಾಜ್ಯದಲ್ಲಿ ಹಲವಾರು ವಿದ್ಯುತ್‌ ಉತ್ಪಾದನಾ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದೆ. ಈ ಆರ್ಥಿಕ ವರ್ಷದ 10 ತಿಂಗಳುಗಳಲ್ಲಿ 28,000 ಮಿಲಿಯನ್‌ ಯೂನಿಟ್‌ ವಿದ್ಯುತ್ತನ್ನು ಉತ್ಪಾದಿಸಲಾಗಿದೆ.

ಈ ವರ್ಷ 41,208 ವಿತರಣಾ ಪರಿವರ್ತಕಗಳನ್ನು, 10,943 ಕಿಲೋಮೀಟರು ಉದ್ದದ ಹೈ ಟೆನ್ಷನ್‌ ಲೈನುಗಳನ್ನು ಮತ್ತು 6382 ಕಿಲೋಮೀಟರ್‌ ಉದ್ದದ ಎಲ್‌. ಟಿ. ಲೈನುಗಳನ್ನು ಅಳವಡಿಸಲಾಗಿದೆ. 11,727 ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಖಾಸಗಿ ಕಂಪೆನಿಗಳಿಂದ 3,704 ಮೆಗಾವ್ಯಾಟ್‌ ವಿದ್ಯುತ್ತನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಸರ್ಕಾರಿ ಸ್ವಾಮ್ಯದ ಕಂಪೆನಿಗಳೇ ಸುಮಾರು 4,794 ಮೆಗಾವ್ಯಾಟ್‌ ವಿದ್ಯುತ್ತನ್ನು ಹೊಸದಾಗಿ ಉತ್ಪಾದನೆ ಮಾಡಲು ಕ್ರಿಯಾಯೋಜನೆ ರೂಪಿಸಿವೆ.

ಸಂವಿಧಾನವು ತನ್ನ ಮೊದಲ ಅನುಚ್ಛೇದದಲ್ಲಿಯೇ ಭಾರತವನ್ನು ಒಂದು ರಾಜ್ಯಗಳ ಒಕ್ಕೂಟ ಎಂದು ಘೋಷಿಸುತ್ತದೆ. ನಮ್ಮ ಸಂವಿಧಾನವು ಸಾರ್ವಭೌಮ ಅಧಿಕಾರವನ್ನು ಒಕ್ಕೂಟ ಮತ್ತು ರಾಜ್ಯಗಳ ನಡುವೆ ಹಂಚಿದೆ. ದೇಶದ ಅಖಂಡತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಒಕ್ಕೂಟ ಸರಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವಾಗಲೂ ರಾಜ್ಯಗಳ ಅಧಿಕಾರ ವ್ಯಾಪ್ತಿಯನ್ನು ಗುರುತಿಸಿ ಗೌರವಿಸಿದೆ. ಆ ಮೂಲಕ ದೇಶದ ವಿವಿಧತೆಯನ್ನು ಎತ್ತಿ ಹಿಡಿದಿದೆ. ವೈವಿಧ್ಯಮಯವಾದ, ಅಧಿಕಾರ ಹಂಚಿಕೆಯ ಈ ತತ್ವವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನದ ನಿರ್ಮಾತೃಗಳು ಈ ಆಡಳಿತ ವ್ಯವಸ್ಥೆಯನ್ನು ನಮಗೆ ನೀಡಿದ್ದಾರೆ. ಸಶಕ್ತ ರಾಜ್ಯಗಳ ಮೂಲಕ ಸಶಕ್ತ ಭಾರತ ನಿರ್ಮಿಸುವುದು ಅವರ ಕನಸಾಗಿತ್ತು. ಆ ಕನಸಿಗೆ ಕುಂದುಂಟಾಗದಂತೆ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.

ಸಂವಿಧಾನದ ಕಾರಣಕ್ಕಾಗಿಯೇ ನಾವು ನೆಮ್ಮದಿಯಿಂದ ಇದ್ದೇವೆ. ದೇಶದ ಅಸಂಖ್ಯಾತ ಜನರು, ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನವು ನಮ್ಮನ್ನು ರಕ್ಷಿಸುತ್ತದೆ ಎಂದು ಆಳವಾಗಿ ನಂಬಿರುವುದರಿಂದ ಸಂವಿಧಾನವು ದಿನದಿಂದ ದಿನಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದೆ.

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು, `ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ, ಅದನ್ನು ಅನುಷ್ಠಾನಗೊಳಿಸುವ ಜನ ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದ್ದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದರ ಪರಿಣಾಮ ಒಳ್ಳೆಯದ್ದೇ ಆಗುತ್ತದೆ. ಸಂವಿಧಾನದ ಕಾರ್ಯನಿರ್ವಹಣೆಯು ಅದರ ಗುಣಲಕ್ಷಣದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವುದಿಲ್ಲ. ಸಂವಿಧಾನವು ರಾಷ್ಟ್ರದ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ವ್ಯವಸ್ಥೆ ಮುಂತಾದವುಗಳನ್ನು ಮಾತ್ರ ಒದಗಿಸಬಹುದು. ಈ ಅಂಗಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರುವ ಅಂಶಗಳೆಂದರೆ ಆ ದೇಶದ ಪ್ರಜೆಗಳು ಮತ್ತು ಅವರ ಆಶೋತ್ತರಗಳನ್ನು ಈಡೇರಿಸುವುದಕ್ಕೆ ತಮ್ಮ ಸಾಧನವಾಗಿ ಆಯ್ಕೆ ಮಾಡಿಕೊಂಡ ರಾಜಕೀಯ ಪಕ್ಷಗಳು” ಎಂದಿದ್ದಾರೆ. ಹಾಗಾಗಿ ಜನರು ಮಾಡಬೇಕಾದ ಅತಿ ಮುಖ್ಯ ಕೆಲಸವೆಂದರೆ ಸಂವಿಧಾನದ ಮೂಲ ಆಶಯವನ್ನು ಅರಿತು ಕೆಲಸ ಮಾಡುವ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುವುದು ಹಾಗೂ ನಿರಂತರವಾಗಿ ಪ್ರಶ್ನೆ, ಸಂವಾದ ಮಾಡುತ್ತಲೇ ಜನತಂತ್ರ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಾಗಿದೆ. ಇದನ್ನೆ ಮಹಾತ್ಮ ಗಾಂಧೀಜಿಯವರು ಸಹ ಹೇಳಿದ್ದಾರೆ.

ನಮ್ಮ ಗಣರಾಜ್ಯದ ನೈಜ ಶಕ್ತಿಯು ವಿವಿಧತೆಯಲ್ಲಿ ಏಕತೆ, ಪ್ರಜಾಪ್ರಭುತ್ವ ಸಂಸ್ಥೆಗಳ ಚಲನಶೀಲತೆ ಮತ್ತು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳ ಬದ್ಧತೆಯಲ್ಲಿದೆ. ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವದ ಕರಡು ಸಮಿತಿಯ ಪ್ರತಿಯೊಬ್ಬ ಸದಸ್ಯರೂ ಸಹ ಈ ದೇಶಕ್ಕೆ ತಮ್ಮ ಅಭೂತಪೂರ್ವ ಕೊಡುಗೆಯನ್ನು ನೀಡಿದ್ದಾರೆ. 77ನೇ ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುತ್ತಾ, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಮತ್ತು ದೇಶದ ಸೇವೆ ಮತ್ತು ಪ್ರಗತಿಗಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳೊಣ. ರಾಷ್ಟ್ರದ ಏಕತೆ, ಸಮಾನತೆ, ಸಮಗ್ರತೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಪ್ರಜಾಪ್ರಭುತ್ವದ ಆದರ್ಶಗಳು ನಮಗೆ ಮಾರ್ಗದರ್ಶನ ನೀಡುತ್ತಲೇ ಇರಲಿ, ದೇಶಭಕ್ತಿ ಮತ್ತು ಏಕತೆಯ ಮನೋಭಾವವು ರಾಷ್ಟ್ರದ ಒಳಿತಿಗೆ ಕೊಡುಗೆ ನೀಡಲಿ, ಸುಭದ್ರ, ಸೌಹಾರ್ದ ಹಾಗೂ ಸಮೃದ್ಧ ಕರ್ನಾಟಕ ಹಾಗೂ ಭಾರತವನ್ನು ನಿರ್ಮಿಸಲು ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಮುನ್ನಡೆಯೋಣ. ಮಾದರಿ ಗಣತಂತ್ರ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸೋಣ ಎಂದು ಕರೆ ನೀಡುವ ಮೂಲಕ ರಾಜ್ಯಪಾಲರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Politics

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ; ಡಾ. ಜಿ. ಪರಮೇಶ್ವರ್ ನೂತನ ಡಿಸಿಎಂ

Published

on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇಂದು ಹೊಸ ಯುಗ ಆರಂಭವಾಗಿದೆ. ಬೆಂಗಳೂರಿನ ಲೋಕಭವನದ ಭವ್ಯ ಗ್ಲಾಸ್ ಹೌಸ್‌ನಲ್ಲಿ ನಡೆದ ಹೈವೋಲ್ಟೇಜ್ ಸಮಾರಂಭದಲ್ಲಿ, ಕಾಂಗ್ರೆಸ್‌ನ ಶಕ್ತಿಶಾಲಿ ಹಾಗೂ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಪದವಿ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಡಿಕೆಶಿ

ಯಾವಾಗಲೂ ದೈವಭಕ್ತಿಗೆ ಹೆಸರಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ತಮ್ಮ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು. ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏಕಮತದಿಂದ ನಾಯಕರಾಗಿ ಆಯ್ಕೆಯಾಗಿದ್ದ ಡಿಕೆಶಿ, ಪಕ್ಷದ ಸಂಕಷ್ಟದ ಸಮಯದಲ್ಲೆಲ್ಲಾ ‘ಟ್ರಬಲ್ ಶೂಟರ್’ ಆಗಿ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್

ಮುಖ್ಯಮಂತ್ರಿಯವರ ಬೆನ್ನಲ್ಲೇ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲ ಹಂತದ ಸಚಿವ ಸಂಪುಟ: ಡಾ. ಪರಮೇಶ್ವರ್ ಸೇರಿ 13 ಮಂತ್ರಿಗಳ ಪದಗ್ರಹಣ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಮೊದಲ ಹಂತದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಒಟ್ಟು 13 ಹಿರಿಯ ನಾಯಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಪಟ್ಟಿ ಇಲ್ಲಿದೆ:

ಸಚಿವರ ಹೆಸರುಸಚಿವರ ಹೆಸರು
1ಡಾ. ಜಿ. ಪರಮೇಶ್ವರ್ (ಡಿಸಿಎಂ)2ಕೆ. ಎಚ್‌. ಮುನಿಯಪ್ಪ
3ಕೆ.ಜೆ. ಜಾರ್ಜ್‌4ಎಂ. ಬಿ. ಪಾಟೀಲ್
5ರಾಮಲಿಂಗ ರೆಡ್ಡಿ6ಸತೀಶ್‌ ಜಾರಕಿಹೊಳಿ
7ಕೃಷ್ಣ ಬೈರೇ ಗೌಡ8ಪ್ರಿಯಾಂಕ್ ಖರ್ಗೆ
9ಯು.ಟಿ. ಖಾದರ್10ಈಶ್ವರ್‌ ಖಂಡ್ರೆ
11ಡಾ. ಯತೀಂದ್ರ ಸಿದ್ದರಾಮಯ್ಯ12ಬೈರತಿ ಸುರೇಶ್‌
13ಶರಣ ಪ್ರಕಾಶ್‌ ಪಾಟೀಲ್

ಗಣ್ಯರ ಉಪಸ್ಥಿತಿ

ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು, ಶಾಸಕರು ಹಾಗೂ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದು ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

“ಪಕ್ಷದ ಸಂಕಷ್ಟ ನಿವಾರಕ ಎಂದೇ ಹೆಸರಾಗಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸರ್ಕಾರ ಇಂದಿನಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ರಾಜ್ಯದ ಜನರಲ್ಲಿ ಭಾರಿ ಕುತೂಹಲ ಮತ್ತು ನಿರೀಕ್ಷೆಗಳನ್ನು ಮೂಡಿಸಿದೆ.”



Continue Reading

Politics

ಬೆಳಗಾವಿ ಸಾಹುಕಾರ್‌ಗೆ ತಪ್ಪಿದ ಕೆಪಿಸಿಸಿ ಪಟ್ಟ: ಒಬಿಸಿ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಹೈಕಮಾಂಡ್ ಜೈ

Published

on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಗಾದಿಯ ರೇಸ್ ಕೊನೆಗೂ ಅಂತಿಮ ಘಟ್ಟಕ್ಕೆ ತಲುಪಿದ್ದು, ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಅವರಿಗೆ ಹೈಕಮಾಂಡ್ ಶಾಕ್ ನೀಡಿದೆ ಎನ್ನಲಾಗಿದೆ. ಕೊನೆಯ ಕ್ಷಣದ ರಾಜಕೀಯ ಬೆಳವಣಿಗೆಯಲ್ಲಿ ಒಬಿಸಿ ಸಮುದಾಯದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ಎರಡಕ್ಕೂ ಪಟ್ಟು ಹಿಡಿದಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಎಐಸಿಸಿ ನಾಯಕರು ನಿರಾಸೆ ಮೂಡಿಸಿದ್ದು, ಹಿಂದುಳಿದ ವರ್ಗದ (ಬಿಲ್ಲವ) ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಎಐಸಿಸಿಯಿಂದ ಅಧಿಕೃತ ಘೋಷಣೆ. ಹೊರ ಬಿದ್ದಿದೆ

ಸಾಹುಕಾರ್‌ಗೆ ಶಾಕ್; ಹರಿಪ್ರಸಾದ್‌ಗೆ ಒಲಿದ ಅದೃಷ್ಟ!

ದೀರ್ಘ ಕಾಲದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿ ಹೈಕಮಾಂಡ್ ಮಟ್ಟದಲ್ಲಿ ಭಾರಿ ಕಸರತ್ತು ನಡೆಸಿದ್ದರು. ಆದರೆ, ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ರಾಜಕೀಯ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ಹೈಕಮಾಂಡ್ ಒಬಿಸಿ ಕಾರ್ಡ್ ಪ್ಲೇ ಮಾಡಿದೆ. ಸಿದ್ದರಾಮಯ್ಯನವರ ಪದಚ್ಯುತಿ ಬೆನ್ನಲ್ಲೇ ‘ಅಹಿಂದ’ ಸಮುದಾಯವನ್ನು ಕೈಬಿಟ್ಟಿಲ್ಲ ಎಂಬ ಸಂದೇಶ ರವಾನಿಸಲು ಎಐಸಿಸಿ ನಿರ್ಧರಿಸಿದ್ದು, ಹರಿಪ್ರಸಾದ್ ಅವರ ಹೆಗಲಿಗೆ ಪಕ್ಷದ ಸಾರಥ್ಯ ನೀಡಿದೆ.

ಬಿ.ಕೆ.ಹರಿಪ್ರಸಾದ್ ನೇಮಕದ ಹಿಂದಿನ ಹೈಕಮಾಂಡ್ ಲೆಕ್ಕಾಚಾರಗಳೇನು?

ಅಹಿಂದ ಸಮುದಾಯಕ್ಕೆ ಮಣೆ: ಸಿದ್ದರಾಮಯ್ಯನವರ ಬೆಳವಣಿಗೆಗಳ ಬಳಿಕ ಅಹಿಂದ ವರ್ಗದಲ್ಲಿ ಮೂಡಬಹುದಾದ ಅಸಮಾಧಾನ ಶಮನಗೊಳಿಸಲು ಒಬಿಸಿ ಸಮುದಾಯದ ನಾಯಕನಿಗೆ ಮಣೆ ಹಾಕಲಾಗಿದೆ.

ರಾಷ್ಟ್ರ-ರಾಜ್ಯ ರಾಜಕಾರಣದ ಅನುಭವ: ದಶಕಗಳ ಕಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ವಿವಿಧ ರಾಜ್ಯಗಳ ಉಸ್ತುವಾರಿಯಾಗಿ ಕೆಲಸ ಮಾಡಿದ ಅಪಾರ ಸಾಂಘಿಕ ಅನುಭವ ಹರಿಪ್ರಸಾದ್ ಅವರಿಗಿದೆ.

ಸಂಘಟನಾ ಚಾತುರ್ಯ ಹಾಗೂ ವಾಕ್ಪಟುತ್ವ: ಪಕ್ಷದ ಸಿದ್ದಾಂತಗಳನ್ನು ಗಟ್ಟಿಯಾಗಿ ಮಂಡಿಸುವ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ಅದ್ಭುತ ವಾಕ್ ಚಾತುರ್ಯ ಇವರ ಪ್ಲಸ್ ಪಾಯಿಂಟ್.

ಆರ್‌ಎಸ್‌ಎಸ್‌ಗೆ ಕೌಂಟರ್ ಕೊಡುವ ಚಾಣಾಕ್ಷತನ: ಸೈದ್ಧಾಂತಿಕವಾಗಿ ಬಿಜೆಪಿಯ ಬೆನ್ನೆಲುಬಾದ ಆರ್‌ಎಸ್‌ಎಸ್ ಅನ್ನು ತೀಕ್ಷ್ಣವಾಗಿ ಎದುರಿಸುವ ಮತ್ತು ಚುನಾವಣಾ ತಂತ್ರಗಾರಿಕೆ ಹೆಣೆಯುವಲ್ಲಿ ಹರಿಪ್ರಸಾದ್ ಮುಂಚೂಣಿಯಲ್ಲಿದ್ದಾರೆ.

ಬಣ ರಾಜಕೀಯಕ್ಕೆ ಬ್ರೇಕ್: ಕಾಂಗ್ರೆಸ್‌ನೊಳಗಿನ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎರಡೂ ಬಣಗಳನ್ನು ಸಮಾನವಾಗಿ ತೂಗಿಸಿಕೊಂಡು, ಒಟ್ಟಾಗಿ ಕೊಂಡೊಯ್ಯಬಲ್ಲ ಸಮರ್ಥ ನಾಯಕತ್ವ ಇವರದ್ದಾಗಿದೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಈ ನೇಮಕಾತಿ ಪ್ರಕ್ರಿಯೆ ಅಧಿಕೃತವಾಗಿ ಹೊರಬೀಳುತ್ತಿದ್ದಂತೆ, ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಮಹತ್ವದ ಬದಲಾವಣೆಗಳು ಕಾಣಿಸಿಕೊಂಡಿದೆ.





Continue Reading

INCIDENT

2 ವಾರದಲ್ಲೇ 75 ಟನ್ ಚಿನ್ನ ಮಾರಿದ ಭಾರತ! ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ಬಿಗ್ ಸ್ಟೆಪ್

Published

on

ನವದೆಹಲಿ: ಮಧ್ಯಪ್ರಾಚ್ಯದಲ್ಲಿ (ವೆಸ್ಟ್ ಏಷ್ಯಾ) ಹೆಚ್ಚುತ್ತಿರುವ ಯುದ್ಧದ ಉದ್ವಿಗ್ನತೆ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿಯ ಮೌಲ್ಯದ ಭಾರಿ ಕುಸಿತವನ್ನು ನಿಯಂತ್ರಿಸಲು ಮತ್ತು ವಿದೇಶಿ ಕರೆನ್ಸಿ ಆಸ್ತಿಗಳನ್ನು ರಕ್ಷಿಸಲು ಆರ್‌ಬಿಐ ತನ್ನ ಸಂಗ್ರಹದಿಂದ ಕೇವಲ ಎರಡೇ ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿದೆ ಎಂದು ವರದಿಯಾಗಿದೆ.

ಬ್ಲೂಮ್‌ಬರ್ಗ್ ಎಕನಾಮಿಕ್ಸ್ ಬಿಡುಗಡೆ ಮಾಡಿರುವ ಇತ್ತೀಚಿನ ಆರ್ಥಿಕ ವಿಶ್ಲೇಷಣೆಯ ಪ್ರಕಾರ, ಮೇ 22ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ಸುಮಾರು 12 ಬಿಲಿಯನ್ ಡಾಲರ್ (ಅಂದಾಜು 1.14 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಹತ್ತಿರಹತ್ತಿರ 75 ಟನ್ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವ ಸಾಧ್ಯತೆಯಿದೆ.

ಚಿನ್ನ ಮಾರಾಟಕ್ಕೆ ಪ್ರಮುಖ ಕಾರಣಗಳೇನು?

ರೂಪಾಯಿ ಮೌಲ್ಯದ ಕುಸಿತಕ್ಕೆ ಬ್ರೇಕ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ (Strait of Hormuz) ಮುಚ್ಚಲ್ಪಟ್ಟಿರುವುದರಿಂದ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರಿಂದಾಗಿ ಭಾರತೀಯ ರೂಪಾಯಿಯ ಮೌಲ್ಯ ಡಾಲರ್ ಎದುರು ಭಾರಿ ಕುಸಿತ ಕಾಣುತ್ತಿದ್ದು, ಇದನ್ನು ನಿಯಂತ್ರಿಸಲು ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ.

ವಿದೇಶಿ ಕರೆನ್ಸಿ ನಗದೀಕರಣ (Forex Liquidity): ಚಿನ್ನ ಮಾರಾಟ ಮಾಡಿದ ಅದೇ ಎರಡು ವಾರಗಳ ಅವಧಿಯಲ್ಲಿ ಆರ್‌ಬಿಐ ಸುಮಾರು 7.5 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಕರೆನ್ಸಿ ಆಸ್ತಿಗಳನ್ನು (ಡಾಲರ್) ಖರೀದಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನದ ದಾಸ್ತಾನಿಗಿಂತ ತಕ್ಷಣವೇ ಬಳಸಬಹುದಾದ ಲಿಕ್ವಿಡ್ ನಗದು (ಡಾಲರ್) ಅತ್ಯಗತ್ಯವಾಗಿರುವುದರಿಂದ ಈ ಅದಲು-ಬದಲು ಪ್ರಕ್ರಿಯೆ ನಡೆದಿದೆ.

ತೈಲ ಆಮದು ವೆಚ್ಚದ ಹೊರೆ: ಭಾರತವು ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ತೈಲ ಆಮದುದಾರ ದೇಶವಾಗಿದೆ. ಯುದ್ಧದ ಬಿಕ್ಕಟ್ಟಿನಿಂದಾಗಿ ಹೆಚ್ಚುತ್ತಿರುವ ಕರೆಂಟ್ ಅಕೌಂಟ್ ಡೆಫಿಸಿಟ್ (ಚಾಲ್ತಿ ಖಾತೆ ಕೊರತೆ) ನಿಭಾಯಿಸಲು ವಿದೇಶಿ ವಿನಿಮಯ ನಿಧಿಯನ್ನು ಬಲಪಡಿಸುವುದು ಅನಿವಾರ್ಯವಾಗಿದೆ.

ಸುಂಕ ಹೆಚ್ಚಳದ ನಡುವೆಯೂ ಕುಸಿದ ಚಿನ್ನದ ದಾಸ್ತಾನು ಮೌಲ್ಯ!

ಆರ್ಥಿಕ ತಜ್ಞರ ಪ್ರಕಾರ, ಭಾರತ ಸರ್ಕಾರವು ಇತ್ತೀಚೆಗೆ ಮೌಲ್ಯಯುತ ಲೋಹಗಳ (ಚಿನ್ನ ಮತ್ತು ಬೆಳ್ಳಿ) ಮೇಲಿನ ಆಮದು ಸುಂಕವನ್ನು (Import Duty) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿತ್ತು. ಸಾಮಾನ್ಯ ನಿಯಮಗಳ ಪ್ರಕಾರ ಆಮದು ಸುಂಕ ಹೆಚ್ಚಾದಾಗ ರಿಸರ್ವ್ ಬ್ಯಾಂಕ್ ಬಳಿ ಇರುವ ಚಿನ್ನದ ಮೌಲ್ಯ ತಾನಾಗಿಯೇ ವೃದ್ಧಿಸಬೇಕಿತ್ತು. ಆದರೆ, ಆರ್‌ಬಿಐನ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯದಲ್ಲಿ ಇಳಿಕೆ ಕಂಡುಬಂದಿರುವುದು, ಬ್ಯಾಂಕ್ ಸಕ್ರಿಯವಾಗಿ ಚಿನ್ನವನ್ನು ಮಾರಾಟ ಮಾಡಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ ಎಂದು ಬ್ಲೂಮ್‌ಬರ್ಗ್‌ನ ಹಿರಿಯ ಭಾರತೀಯ ಆರ್ಥಿಕ ತಜ್ಞ ಅಭಿಷೇಕ್ ಗುಪ್ತಾ ವಿಶ್ಲೇಷಿಸಿದ್ದಾರೆ.

ಭಾರತದ ಬಳಿ ಸದ್ಯ ಎಷ್ಟಿದೆ ಚಿನ್ನ?

ಒಟ್ಟು ದಾಸ್ತಾನು: 2026ರ ಮಾರ್ಚ್ ಅಂತ್ಯದ ಅಧಿಕೃತ ವರದಿಯ ಪ್ರಕಾರ, ಆರ್‌ಬಿಐ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದ ದಾಸ್ತಾನನ್ನು ಹೊಂದಿತ್ತು.

ದೇಶದೊಳಗಿನ ಸುರಕ್ಷತೆ: ರಷ್ಯಾ-ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರಿಂದ ಎಚ್ಚೆತ್ತಿದ್ದ ಭಾರತ, ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿದ್ದ ತನ್ನ ಚಿನ್ನವನ್ನು ಭಾರತಕ್ಕೆ ತರಲಾರಂಭಿಸಿತ್ತು. ಪ್ರಸ್ತುತ ಭಾರತದ ಶೇ. 77 ರಷ್ಟು ಚಿನ್ನದ ದಾಸ್ತಾನು ದೇಶದೊಳಗಿನ ಸುರಕ್ಷಿತ ತಿಜೋರಿಗಳಲ್ಲೇ ಇದೆ.

ತಾತ್ಕಾಲಿಕ ಕ್ರಮ: ತಜ್ಞರ ಪ್ರಕಾರ, ಆರ್‌ಬಿಐನ ಈ ಚಿನ್ನದ ಮಾರಾಟವು ಕೇವಲ ಪ್ರಸ್ತುತ ಬಿಕ್ಕಟ್ಟನ್ನು ಎದುರಿಸಲು ಕೈಗೊಂಡ “ತಾತ್ಕಾಲಿಕ ನಗದು ನಿರ್ವಹಣಾ ಕ್ರಮ” (Temporary Liquidity Measure) ಆಗಿದೆಯೇ ಹೊರತು ಆರ್‌ಬಿಐ ತನ್ನ ಚಿನ್ನದ ನಿಧಿಯನ್ನು ಕಾಯಂ ಆಗಿ ಕಡಿಮೆ ಮಾಡುತ್ತಿಲ್ಲ. ಮಾರುಕಟ್ಟೆ ಯಥಾಸ್ಥಿತಿಗೆ ಮರಳಿದಾಗ ಆರ್‌ಬಿಐ ಮತ್ತೆ ಚಿನ್ನವನ್ನು ಖರೀದಿಸಲಿದೆ.

ರೂಪಾಯಿ ಮೌಲ್ಯವು ಇತ್ತೀಚೆಗೆ ಸಾರ್ವಕಾಲಿಕ ಕುಸಿತ ಕಂಡು ಪ್ರತಿ ಡಾಲರ್‌ಗೆ 96.92 ರ ಗಡಿ ತಲುಪಿತ್ತು. ಆದರೆ ಆರ್‌ಬಿಐನ ಈ ತಂತ್ರಗಾರಿಕೆಯ ಮಧ್ಯಪ್ರವೇಶದಿಂದಾಗಿ ರೂಪಾಯಿ ಸದ್ಯ ಇತರ ಏಷ್ಯನ್ ಕರೆನ್ಸಿಗಳಿಗಿಂತ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಜೂನ್ ಆರಂಭದ ವೇಳೆಗೆ 95.17 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.




Continue Reading

Trending

Copyright © 2025 Deevatige

error: Content is protected !!