Connect with us

Article

ನಿಯಮದ ಹೆಸರಿನಲ್ಲಿ ಅಮಾನವೀಯತೆ; KSRTC ನಿರ್ವಾಹಕನ ಹಠಕ್ಕೆ ಕಬಕದಲ್ಲಿ ಕಣ್ಣೀರಿಟ್ಟ ವಿಟ್ಲದ ಶಾಲಾ ಬಾಲಕ!

Published

on

ವಿಟ್ಲ: “ಸಾರ್ವಜನಿಕ ಸೇವೆ” ಎಂಬ ಬೋರ್ಡ್ ಹಾಕಿಕೊಂಡು ರಸ್ತೆಗಿಳಿಯುವ ಸರ್ಕಾರಿ ಬಸ್‌ಗಳು ಸಾರ್ವಜನಿಕರ ಪ್ರಾಣ ಹಿಂಡುವ ಕೆಲಸಕ್ಕೆ ಕೈಹಾಕಿವೆಯೇ? ನಿಯಮಗಳ ಹೆಸರಿನಲ್ಲಿ ಕನಿಷ್ಠ ಮಾನವೀಯತೆಯನ್ನೂ ಮರೆತು ವರ್ತಿಸುವ ಸಾರಿಗೆ ಸಿಬ್ಬಂದಿಯ ಉಡಾಫೆಗೆ ಕೊನೆಯೇ ಇಲ್ಲವೇ? ಹೌದು, ಇಂದು ಶನಿವಾರ ಮಧ್ಯಾಹ್ನ ವಿಟ್ಲದಲ್ಲಿ ನಡೆದ ಘಟನೆಯೊಂದು ಇಡೀ ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಬಸ್ಸಿನ ನಿರ್ವಾಹಕ (ಕಂಡೆಕ್ಟರ್) ಹಾಗೂ ಸಂಚಾರ ನಿಯಂತ್ರಕರ (ಟ್ರಾಫಿಕ್ ಕಂಟ್ರೋಲರ್) ಬೇಜವಾಬ್ದಾರಿತನಕ್ಕೆ ವಿಟ್ಲದ ಜೇಸಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿಯ ಅಮಾಯಕ ಬಾಲಕನೊಬ್ಬ ಕಬಕ ನಿಲ್ದಾಣದಲ್ಲಿ ಕಣ್ಣೀರು ಹಾಕುತ್ತಾ ನಿಲ್ಲುವಂತಾದ ಘೋರ ಘಟನೆ ನಡೆದಿದೆ.

ಪುತ್ತೂರು ಪುತ್ತೂರು ಎಂದು ಕೂಗಿ ಜನ ತುಂಬಿಸಿದ್ರು, ಕಂಬಳಬೆಟ್ಟು ಅಂದರೂ ಕಬಕಕ್ಕೆ ಟಿಕೆಟ್ ಕೊಟ್ಟರು!

ವಿಟ್ಲ ಕಸಬಾ ಗ್ರಾಮದ ಮಾಮೇಶ್ವರ ಪರಿಸರದ ನಿವಾಸಿಯಾಗಿರುವ ಈ ಬಾಲಕ ಎಂದಿನಂತೆ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಮನೆಗೆ ಮರಳಲು ವಿಟ್ಲ ಸಂತೆ ಮಾರುಕಟ್ಟೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದ. ಈ ವೇಳೆ ಕಾಸರಗೋಡು-ಧರ್ಮಸ್ಥಳ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ಸು (KA19 F 3299) ಅಲ್ಲಿಗೆ ಬಂದಿದೆ. ನಿರ್ವಾಹಕ ಜೋರಾಗಿ “ಪುತ್ತೂರು.. ಪುತ್ತೂರು..” ಎಂದು ಕೂಗುತ್ತಾ ಜನರನ್ನು ತುಂಬಿಸುತ್ತಿದ್ದರಿಂದ, ಪುತ್ತೂರು ರಸ್ತೆಯ ಕಂಬಳಬೆಟ್ಟುವಿಗೆ ಹೋಗಬೇಕಾಗಿದ್ದ ಬಾಲಕ ಸಹಜವಾಗಿಯೇ ಆ ಬಸ್ಸನ್ನು ಹತ್ತಿದ್ದಾನೆ.

ಬಸ್ ಹತ್ತಿದ ಬಾಲಕ ತನಗೆ ‘ಕಂಬಳಬೆಟ್ಟು’ ಎಂದು ಹೇಳಿ ಹಣ ನೀಡಿದ್ದಾನೆ. ಆದರೆ ನಿರ್ವಾಹಕ ಆತನಿಗೆ ಕಬಕಕ್ಕೆ ಟಿಕೆಟ್ ನೀಡಿ ಸೈಲೆಂಟಾಗಿದ್ದಾನೆ. ಚಿಕ್ಕ ಮಗುವಾಗಿದ್ದರಿಂದ ಬಾಲಕನಿಗೆ ಟಿಕೆಟ್‌ನಲ್ಲಿ ಏನಿದೆ ಎಂದು ಗಮನಿಸಲು ಸಾಧ್ಯವಾಗಿಲ್ಲ.

“ಇಲ್ಲಿ ಸ್ಟಾಪ್ ಇಲ್ಲ, ಇಳಿಸಲ್ಲ!” – ಗೋಗರೆದರೂ ಕರಗದ ಕಂಡೆಕ್ಟರ್ ಹೃದಯ

ಬಸ್ಸು ಕಂಬಳಬೆಟ್ಟು ದರ್ಗಾ ಬಳಿ ತನ್ನ ನಿಲ್ದಾಣಕ್ಕೆ ಬರುತ್ತಿದ್ದಂತೆ ಬಾಲಕ ಇಳಿಯುವುದಕ್ಕಾಗಿ ನಿರ್ವಾಹಕನಲ್ಲಿ ವಿನಂತಿಸಿದ್ದಾನೆ. ಆದರೆ ಆ ವೇಳೆ ಕಂಡೆಕ್ಟರ್ ನೀಡಿದ ಉತ್ತರ ಬಾಲಕನಿಗೆ ಆತಂಕದ ಸುನಾಮಿಯನ್ನೇ ಎಬ್ಬಿಸಿದೆ!

“ಇಲ್ಲಿ ಸ್ಟಾಪ್ ಇಲ್ಲ, ಮುಂದಿನ ಸ್ಟಾಪ್ ಇರೋದೇ ಕಬಕದಲ್ಲಿ. ಅಲ್ಲಿಯ ತನಕ ಗಾಡಿ ನಿಲ್ಲಿಸಲ್ಲ, ನೀನು ಅಲ್ಲೇ ಇಳಿಬೇಕು” ಎಂದು ನಿರ್ವಾಹಕ ಗಡುಸಾಗಿ ಹೇಳಿದ್ದಾನೆ.

ತನ್ನ ನಿಲ್ದಾಣದಿಂದ ಬರೋಬ್ಬರಿ 4 ಕಿಲೋಮೀಟರ್ ದೂರವಿರುವ ಕಬಕದಲ್ಲಿ ಇಳಿಯಬೇಕು ಎಂದು ಕೇಳಿ ಬಾಲಕ ತೀವ್ರ ಗಾಬರಿಗೊಂಡಿದ್ದಾನೆ. ತಾನು ಒಬ್ಬನೇ ಇರುವುದು, ಕಂಬಳಬೆಟ್ಟು ಬಿಟ್ಟು ಬೇರೆಲ್ಲೂ ಹೋದವನಲ್ಲ ಎಂಬ ಭಯದಿಂದ ತನಗೆ ಇಳಿಯಲು ಅವಕಾಶ ಮಾಡಿಕೊಡುವಂತೆ ನಿರ್ವಾಹಕನ ಬಳಿ ಪದೇ ಪದೇ ಗೋಗರೆದಿದ್ದಾನೆ. ಆದರೂ ಆ ಕಂಡೆಕ್ಟರ್ ಹೃದಯ ಕರಗಲಿಲ್ಲ. ಬಸ್ಸೇನೂ ಆಕಾಶದಲ್ಲಿ ಹಾರುವ ವಿಮಾನವಲ್ಲ, ಹಳಿಗಳ ಮೇಲೆ ಓಡುವ ರೈಲೂ ಅಲ್ಲ; ಬಾಲಕ ತಪ್ಪು ಗ್ರಹಿಕೆಯಿಂದ ಬಸ್ ಹತ್ತಿದ್ದಾನೆ ಎಂದು ತಿಳಿದಿದ್ದರೂ, ಕನಿಷ್ಠ ಮಾನವೀಯತೆಯ ನೆಲೆಗಟ್ಟಿನಲ್ಲಿ ಬಸ್ ನಿಲ್ಲಿಸಿ ಆ ಮಗುವನ್ನು ಇಳಿಸುವ ಸೌಜನ್ಯವನ್ನು ಆತ ತೋರಿಸಲಿಲ್ಲ. ಕೊನೆಗೂ ಹಠ ಹಿಡಿದು ಆ ಪುಟ್ಟ ಮಗುವನ್ನು 4 ಕಿ.ಮೀ ದೂರದ ಕಬಕದಲ್ಲೇ ಇಳಿಸಿ ಬಸ್ ಮುನ್ನಡೆಸಿದ್ದಾನೆ!

ಕಬಕದಲ್ಲಿ ಕಣ್ಣೀರಿಡುತ್ತಾ ನಿಂತ ಬಾಲಕ!

ಯಾವತ್ತೂ ಹೆತ್ತವರನ್ನು ಬಿಟ್ಟು ಏಕಾಂಗಿಯಾಗಿ ವಿಟ್ಲ ಮತ್ತು ಕಂಬಳಬೆಟ್ಟು ಪರಿಸರ ದಾಟದ ಆ 6ನೇ ತರಗತಿಯ ಮಗು, ಅಪರಿಚಿತ ಕಬಕ ನಿಲ್ದಾಣದಲ್ಲಿ ದಿಕ್ಕುತೋಚದೆ, ಭಯ ಮತ್ತು ನೋವಿನಿಂದ ಕಣ್ಣೀರು ಹಾಕುತ್ತಾ ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲುವಂತಾಯಿತು. ತಪ್ಪು ಸಾರಿಗೆ ಸಿಬ್ಬಂದಿಯದ್ದೇ ಆಗಿತ್ತು. ಏಕೆಂದರೆ ಅದು ನಿಗದಿತ ನಿಲುಗಡೆಯ (ಲಿಮಿಟೆಡ್ ಸ್ಟಾಪ್) ಬಸ್ಸಾಗಿದ್ದರೆ, ವಿಟ್ಲದಲ್ಲಿ ಜನರನ್ನು ಹತ್ತಿಸುವಾಗಲೇ ಕಂಬಳಬೆಟ್ಟುವಿಗೆ ಸ್ಟಾಪ್ ಇಲ್ಲ ಎಂಬ ಮಾಹಿತಿಯನ್ನು ನಿರ್ವಾಹಕ ನೀಡಬೇಕಿತ್ತು. ಅದನ್ನು ಬಿಟ್ಟು ಕೇವಲ ಹಣದ ಆಸೆಗೆ “ಪುತ್ತೂರು ಪುತ್ತೂರು” ಎಂದು ಕೂಗಿ ಜನ ತುಂಬಿಸಿ, ಕೊನೆಗೆ ಮಗುವಿನ ರೋದನೆಗೂ ಕರಗದೆ ನಡೆದುಕೊಂಡ ಈ ಅಮಾನವೀಯ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪಂಚಾಯತ್ ಅಧ್ಯಕ್ಷರ ಕರೆಗೂ ಉಡಾಫೆ ಉತ್ತರ ನೀಡಿದ ನಿಯಂತ್ರಕ!

ಈ ಅನ್ಯಾಯದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಪಂದಿಸಿದ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೊಟ್ಟು ಅವರು ವಿಟ್ಲ ಸಂಚಾರ ನಿಯಂತ್ರಕರಿಗೆ (Traffic Controller) ಕರೆ ಮಾಡಿ ಸಾರಿಗೆ ಸಿಬ್ಬಂದಿಯ ಈ ಬೇಜವಾಬ್ದಾರಿತನ ಮತ್ತು ದುರ್ವರ್ತನೆಯ ಬಗ್ಗೆ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆಯುವ ಆ ಕಡೆಯ ಅಧಿಕಾರಿ, ತಪ್ಪು ಮಾಡಿದ ಸಿಬ್ಬಂದಿಗೆ ಬುದ್ಧಿ ಕಲಿಸುವ ಬದಲು, ಅತ್ಯಂತ ಉಡಾಫೆಯ ಉತ್ತರ ನೀಡುವ ಮೂಲಕ ತನ್ನ ಕೈಕೆಳಗಿನ ನೌಕರನ ಅಮಾನವೀಯ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಸಾರಿಗೆ ಸಂಸ್ಥೆಯ ಅಹಂಕಾರಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾರ್ವಜನಿಕರ ಪ್ರಶ್ನೆ: ನಿಯಮಗಳು ಮನುಷ್ಯರಿಗಾಗಿಯೇ? ಅಥವಾ ಮನುಷ್ಯರನ್ನು ಹಿಂಸಿಸಲಿಕ್ಕಾಗಿಯೇ?

ಮಹಿಳೆಯರು, ಮಕ್ಕಳು, ವೃದ್ಧರು ಮತ್ತು ದುರ್ಬಲರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ಸಾರಿಗೆ ಸಂಸ್ಥೆಯ ಕನಿಷ್ಠ ನಿಯಮ. ಆದರೆ ಇಲ್ಲಿ ನಿಯಮಗಳ ಪೊಳ್ಳು ವಾದ ಮಂಡಿಸಿ, ಮಗುವೊಂದನ್ನು ತಾಯಿಯಿಂದ ದೂರವಾಗಿಸಿ ಬೀದಿಯಲ್ಲಿ ನಿಲ್ಲಿಸಿದ ಈ ಸರ್ಕಾರಿ ವ್ಯವಸ್ಥೆ ನಿಜಕ್ಕೂ ಸಾರ್ವಜನಿಕ ವಿರೋಧಿಯಾಗಿದೆ. ಹವಾಮಾನ ವೈಪರೀತ್ಯವಿರಲಿ, ಯಾವುದೇ ತಾಂತ್ರಿಕ ತೊಂದರೆಯಿರಲಿ, ಬಸ್ಸನ್ನು ಒಂದು ನಿಮಿಷ ನಿಲ್ಲಿಸಿ ಮಗುವನ್ನು ಇಳಿಸಿದ್ದರೆ ಆಕಾಶವೇನೂ ತಲೆಮೇಲೆ ಬೀಳುತ್ತಿರಲಿಲ್ಲ.

ಈ ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಗುವಿನ ಭಯ-ಆತಂಕಕ್ಕೆ ಕಾರಣನಾದ ಆ ಹಠಮಾರಿ ಕಂಡೆಕ್ಟರ್ ಮತ್ತು ಆತನನ್ನು ಸಮರ್ಥಿಸಿಕೊಂಡ ವಿಟ್ಲ ಸಂಚಾರ ನಿಯಂತ್ರಕನ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಸಾರ್ವಜನಿಕರೇ ಇಂತಹ ಬಸ್ಸುಗಳನ್ನು ತಡೆದು ನಿಲ್ಲಿಸಿ ಪಾಠ ಕಲಿಸುವ ದಿನ ದೂರವಿಲ್ಲ!




ಮುಂದಕ್ಕೆ ಓದಲು ಇಲ್ಲಿ ಕ್ಲಿಕ್‌ ಮಾಡಿ
Advertisement

Article

ಪಠ್ಯಪುಸ್ತಕ ಹಂಚಿಕೆ ಹಗರಣ; ಇಲಾಖೆಯ ಬೇಜವಾಬ್ದಾರಿಗೆ ಮಾಧ್ಯಮದ ಜಾಗೃತಿ

Published

on

ಪೋಷಕರು ಓದಲೇ ಬೇಕಾದ ವರದಿ : ಶಾಲಾ ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳಾಗುತ್ತಾ ಬಂದರೂ ರಾಜ್ಯದಾದ್ಯಂತ ಹಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮರ್ಪಕವಾಗಿ ಪಠ್ಯಪುಸ್ತಕಗಳು ತಲುಪದೆ ಇರುವುದು ಶಿಕ್ಷಣ ಇಲಾಖೆಯ ತೀವ್ರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಪೋಷಕರು ಅನುಭವಿಸುತ್ತಿದ್ದ ಆತಂಕ ಹಾಗೂ ಮಕ್ಕಳ ಭವಿಷ್ಯದ ಕುರಿತಾದ ಕಾಳಜಿಯನ್ನು ಮನಗಂಡು ‘ದೀವಟಿಗೆ ಡಿಜಿಟಲ್ ಮೀಡಿಯಾ’ ಈ ಕುರಿತು ನಡೆಸಿದ ಸವಿಸ್ತಾರವಾದ ತನಿಖಾ ವರದಿ ಇಡೀ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಬಂಟ್ವಾಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕಗಳ ತೀವ್ರ ಕೊರತೆ ಇರುವುದನ್ನು ಮಾಧ್ಯಮವು ಸಾಕ್ಷ್ಯಸಮೇತ ಜಗತ್ತಿನ ಮುಂದೆ ಇಟ್ಟಿತ್ತು.

ಮಾಧ್ಯಮದ ವರದಿಗೆ ಬೆದರಿದ ಅಧಿಕಾರಿಗಳು ಮತ್ತು ಸತ್ಯ ಮುಚ್ಚಿಡುವ ಪ್ರಯತ್ನ!

‘ದೀವಟಿಗೆ ಡಿಜಿಟಲ್ ಮೀಡಿಯಾ’ದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸಂಬಂಧಪಟ್ಟ ಅಧಿಕಾರಿಗಳು, ತಮ್ಮ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳಲು ಮಾಧ್ಯಮ ಸಂಸ್ಥೆಗೆ ಫೋನ್ ಕರೆಗಳ ಮೂಲಕ ಸಮರ್ಥನೆ ನೀಡಲು ಮುಂದಾದರು. ಇಷ್ಟಕ್ಕೇ ನಿಲ್ಲದೆ, ತಮ್ಮ ಹುದ್ದೆಗಳಿಗೆ ಸಂಚಕಾರ ಬರಬಹುದೆಂಬ ಭೀತಿಯಿಂದ ಕ್ಲಸ್ಟರ್ ಅಧಿಕಾರಿಗಳು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ ವಾಟ್ಸಾಪ್‌ ಹಾಗೂ ಇತರ ಮಾಧ್ಯಮಗಳ ಮೂಲಕ ತುರ್ತು ಸಂದೇಶ ರವಾನಿಸಿ, “ಶಾಲೆಯಲ್ಲಿ ಪಠ್ಯಪುಸ್ತಕ ವಿತರಣೆಯಲ್ಲಿ ಯಾವುದೇ ಲೋಪದೋಷಗಳಾಗಿಲ್ಲ” ಎಂದು ಬಲವಂತದ ದೃಢೀಕರಣ ನೀಡುವಂತೆ ತೀವ್ರ ಒತ್ತಡ ಹೇರಿದ್ದರು ಎಂಬ ಆಘಾತಕಾರಿ ಸತ್ಯವೂ ಬೆಳಕಿಗೆ ಬಂದಿದೆ

ಆದರೆ, ಮಕ್ಕಳ ಶೈಕ್ಷಣಿಕ ಭವಿಷ್ಯ ಹಾಳಾಗಬಾರದು ಎಂಬ ಸದುದ್ದೇಶದಿಂದ ಮಾಧ್ಯಮವು ಈ ದೂರನ್ನು ತಾಲೂಕು ಅಧಿಕಾರಿಗಳಿಂದ ಹಿಡಿದು, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿಗಳವರೆಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಮಾಧ್ಯಮದ ಈ ನಿರಂತರ ಹೋರಾಟದ ಫಲವಾಗಿ ಇಂದು ಇಲಾಖೆಯು ತನ್ನ ತಪ್ಪನ್ನು ಒಪ್ಪಿಕೊಂಡು ತುರ್ತು ಕ್ರಮಕ್ಕೆ ಮುಂದಾಗಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘದ ತುರ್ತು ಸುತ್ತೋಲೆ (ದಿನಾಂಕ: 19.06.2026): ಪ್ರಮುಖ ಅಂಶಗಳು

ಮಾಧ್ಯಮದ ವರದಿ ಹಾಗೂ ಸಾರ್ವಜನಿಕರ ದೂರಿನ ತೀವ್ರತೆಗೆ ಮಣಿದ ಕರ್ನಾಟಕ ಪಠ್ಯಪುಸ್ತಕ ಸಂಘವು ದಿನಾಂಕ 19.06.2026 ರಂದು ಅತ್ಯಂತ ತುರ್ತು ಸುತ್ತೋಲೆಯನ್ನು (ಸಂಖ್ಯೆ: E-81501A3/KTBS/ADM/TBTR/11/2025-26) ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಮುಂದಿನ ಪರಿಹಾರ ಕ್ರಮಗಳ ಕುರಿತು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ:

ಕೊರತೆಯ ಒಪ್ಪಿಗೆ: ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿಗಳೊಂದಿಗೆ ನಡೆಸಿದ ಆನ್‌ಲೈನ್ ಸಭೆಗಳಲ್ಲಿ ಕೆಲವು ತರಗತಿಗಳ ಶೀರ್ಷಿಕೆಗಳ ಕೊರತೆ ಇರುವುದು ಹಾಗೂ ವಿದ್ಯಾರ್ಥಿಗಳ ಹೆಚ್ಚುವರಿ ದಾಖಲಾತಿಯಿಂದ ಪಠ್ಯಪುಸ್ತಕಗಳ ಕೊರತೆಯಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಒಪ್ಪಿಕೊಳ್ಳಲಾಗಿದೆ.

ಕ್ಲಸ್ಟರ್ ಹಂತದಲ್ಲಿ ಮರುಹೊಂದಾಣಿಕೆ: ಆಯಾ ತಾಲೂಕಿನ ಸಿ.ಆರ್.ಪಿ (CRP) ಗಳ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ಎಲ್ಲಾ ಪುಸ್ತಕಗಳು ವಿತರಣೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಹೆಚ್ಚುವರಿ ಇರುವ ಶಾಲೆಗಳಿಂದ ಕೊರತೆಯಿರುವ ಶಾಲೆಗಳಿಗೆ ತಕ್ಷಣವೇ ಮರುಹೊಂದಾಣಿಕೆ ಮಾಡಲು ಸೂಚಿಸಲಾಗಿದೆ.

ಜಿಲ್ಲಾ ಹಂತದ ಕ್ರಮ: ತಾಲೂಕು ಹಂತದಲ್ಲೂ ಪುಸ್ತಕಗಳು ಲಭ್ಯವಿಲ್ಲದಿದ್ದರೆ, ಜಿಲ್ಲಾ ಪಠ್ಯಪುಸ್ತಕ ನೋಡಲ್ ಅಧಿಕಾರಿಗಳು ಇತರೆ ತಾಲೂಕುಗಳಿಂದ ಮರುಹೊಂದಾಣಿಕೆ ಮಾಡಿಕೊಡಲು ಕ್ರಮವಹಿಸಬೇಕು.

ಕಟ್ಟುನಿಟ್ಟಿನ ಗಡುವು: ಈ ಸಂಪೂರ್ಣ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ದಿನಾಂಕ 24.06.2026 ರೊಳಗೆ ಮುಗಿಸಿ ರಾಜ್ಯ ಹಂತಕ್ಕೆ ಕಡ್ಡಾಯವಾಗಿ ದೃಢೀಕರಣ ಸಲ್ಲಿಸಬೇಕು ಎಂದು ಕಠಿಣ ಗಡುವು ವಿಧಿಸಲಾಗಿದೆ.

ಮಾಧ್ಯಮಗಳ ವರದಿಗೆ ಬ್ರೇಕ್ ಹಾಕುವ ತಂತ್ರ: “ಯಾವುದೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಕೊರತೆ ಉಂಟಾಗದಂತೆ ಹಾಗೂ ಈ ರೀತಿಯ ವ್ಯತ್ಯಯಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗದಂತೆ ಕ್ರಮವಹಿಸಬೇಕು” ಎಂದು ಸುತ್ತೋಲೆಯಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಇದು ಇಲಾಖೆಯು ಮಾಧ್ಯಮಗಳ ಚಾಟಿ ಏಟಿಗೆ ಎಷ್ಟು ಹೆದರಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಉನ್ನತ ಅಧಿಕಾರಿಗಳ ನಿರಂತರ ನಿಗಾ: ಈ ಪ್ರಕ್ರಿಯೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಮಾನ್ಯ ಆಯುಕ್ತರು ಪ್ರತಿದಿನ ಅವಲೋಕಿಸುತ್ತಿದ್ದು, ಇದರಲ್ಲಿ ಯಾವುದೇ ವ್ಯತ್ಯಯ ಉಂಟಾದಲ್ಲಿ ಸಂಬಂಧಿಸಿದವರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಲಾಗಿದೆ.

    ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ ಎಲ್ಲಿದೆ?

    ಮುಂಚಿತ ಯೋಜನೆಯ ಕೊರತೆ: ಶೈಕ್ಷಣಿಕ ವರ್ಷ ಆರಂಭವಾಗುವ ಕನಿಷ್ಠ 2 ತಿಂಗಳ ಮೊದಲೇ ದಾಖಲಾತಿಗಳ ಅಂದಾಜು ಇಲಾಖೆಯ ಬಳಿ ಇರುತ್ತದೆ. ಆದಾಗ್ಯೂ ಶಾಲೆ ಆರಂಭವಾಗಿ ತಿಂಗಳಾದರೂ ಪುಸ್ತಕ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ಇಲಾಖೆಯ ಆಡಳಿತಾತ್ಮಕ ವೈಫಲ್ಯ.

    ಡಿಜಿಟಲ್ ತಂತ್ರಜ್ಞಾನದ ದುರ್ಬಳಕೆ (SATS ಒತ್ತಡ): ಅಧಿಕಾರಿಗಳು ತಳಮಟ್ಟದ ವಾಸ್ತವವನ್ನು ಅರಿಯದೆ, ಕೇವಲ SATS ತಂತ್ರಾಂಶದಲ್ಲಿ 100% ಪ್ರಗತಿ ತೋರಿಸಲು ಶಾಲೆಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ‘ರಿಸೀವ್’ ಮಾಡಿಕೊಳ್ಳುವಂತೆ ಶಾಲೆಗಳಿಗೆ ಆದೇಶಿಸುವುದು ವಿದ್ಯಾರ್ಥಿಗಳಿಗೆ ಮಾಡುವ ದ್ರೋಹವಾಗಿದೆ.

    ಸತ್ಯವನ್ನು ಮುಚ್ಚಿಡುವ ಪ್ರವೃತ್ತಿ: ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು, ಮಾಧ್ಯಮಗಳ ವಿರುದ್ಧ ಮುಗಿಬೀಳುವುದು ಹಾಗೂ ಕೆಳಹಂತದ ಸಿಬ್ಬಂದಿಗಳಿಂದ ಸುಳ್ಳು ವರದಿಗಳನ್ನು ತರಿಸಿಕೊಳ್ಳಲು ಯತ್ನಿಸುವುದು ಇಲಾಖೆಯ ಅಪಕ್ವತೆಯನ್ನು ತೋರಿಸುತ್ತದೆ.

    ಮುಂದಕ್ಕೆ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳು

    ಮುಂಚಿತ ಉಗ್ರಾಣ ವ್ಯವಸ್ಥೆ (Advanced Stocking): ಪ್ರತಿ ವರ್ಷ ಏಪ್ರಿಲ್ ತಿಂಗಳ ಅಂತ್ಯದೊಳಗಾಗಿ ತಾಲೂಕು ಕೇಂದ್ರಗಳಿಗೆ 100% ಪಠ್ಯಪುಸ್ತಕಗಳ ಪೂರೈಕೆ ಪೂರ್ಣಗೊಳ್ಳಬೇಕು.

    ನೈಜ ಸಮಯದ ಬೇಡಿಕೆ ಸಲ್ಲಿಕೆ (Real-time Indent): ಕೇವಲ ಹಳೆಯ ದಾಖಲಾತಿಗಳ ಆಧಾರದ ಮೇಲಲ್ಲದೆ, ಮೇ ತಿಂಗಳಲ್ಲೇ ತಾತ್ಕಾಲಿಕ ದಾಖಲಾತಿ ಪ್ರಕ್ರಿಯೆ ಮುಗಿಸಿ ಹೆಚ್ಚುವರಿ ಪುಸ್ತಕಗಳ ಬೇಡಿಕೆಯನ್ನು ಮೊದಲ ವಾರದಲ್ಲೇ ಸಲ್ಲಿಕೆ ಮಾಡಿಕೊಳ್ಳಬೇಕು.

    ಹೊಣೆಗಾರಿಕೆ ನಿಗದಿ (Accountability): ಪುಸ್ತಕ ಪೂರೈಕೆಯಲ್ಲಿ ವಿಳಂಬ ಮಾಡುವ ಮುದ್ರಕರು ಹಾಗೂ ಅದನ್ನು ವಿತರಿಸಲು ವಿಫಲರಾಗುವ ನೋಡಲ್ ಅಧಿಕಾರಿಗಳ ಮೇಲೆ ಕಠಿಣ ಶಿಸ್ತುಕ್ರಮ ಮತ್ತು ದಂಡ ವಿಧಿಸಬೇಕು.

    ಪಾರದರ್ಶಕ ಆಡಿಟ್: ಮಾಧ್ಯಮಗಳು ಅಥವಾ ಸಾರ್ವಜನಿಕರು ದೂರು ನೀಡುವ ಮುನ್ನವೇ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಜಾಗೃತ ದಳವು ಪ್ರತಿ ತಾಲೂಕಿಗೆ ಭೇಟಿ ನೀಡಿ ಪುಸ್ತಕ ವಿತರಣೆಯ ಆಡಿಟ್ ನಡೆಸಬೇಕು.

      ಸರ್ಕಾರದ ಈ ಇತ್ತೀಚಿನ ತುರ್ತು ಸುತ್ತೋಲೆಯಿಂದಾಗಿ ಸದ್ಯಕ್ಕೆ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳು ಸಿಗುವಂತಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದರೆ ಈ ಬದಲಾವಣೆಯ ಹಿಂದೆ ‘ದೀವಟಿಗೆ ಡಿಜಿಟಲ್ ಮೀಡಿಯಾ’ದ ಪ್ರಾಮಾಣಿಕ ಮತ್ತು ತನಿಖಾತ್ಮಕ ಪತ್ರಿಕೋದ್ಯಮದ ಶ್ರಮವಿದೆ. ಮುಂದಿನ ದಿನಗಳಲ್ಲಾದರೂ ಶಿಕ್ಷಣ ಇಲಾಖೆಯು ಇಂತಹ ಬೇಜವಾಬ್ದಾರಿತನದಿಂದ ಹೊರಬಂದು, ಶೈಕ್ಷಣಿಕ ವರ್ಷದ ಮೊದಲ ದಿನವೇ ಪ್ರತಿ ಮಗುವಿನ ಕೈಗೆ ಪಠ್ಯಪುಸ್ತಕ ಸಿಗುವಂತೆ ನೋಡಿಕೊಳ್ಳಲಿ ಎಂಬುದೇ ಸಾರ್ವಜನಿಕರ ಆಶಯ.

      ಈ ವರದಿಯನ್ನು ಸಿದ್ದಪಡಿಸುವ ವೇಳೆಗೆ ಇನ್ನೊಂದು ಬೆಚ್ಚಿ ಬೀಳಿಸುವ ವಿಷಯವೊಂದು ಬಹಿರಂಗವಾಗುತ್ತಿದೆ. ಪಠ್ಯ ಪುಸ್ತಕ ವಿತರಣೆಯಲ್ಲಿನ ಅವ್ಯವಸ್ಥೆ, ಗೊಂದಲಗಳ ಸರಿಪರಿಪಡಿಸಿ ಪುಸ್ತಕ ದೊರೆಯದ ಶಾಲೆಗಳಿಗೆ ವಿತರಣೆ ಮಾಡಬೇಕಾಗಿದ್ದ ಅಧಿಕಾರಿಗಳು ತಮ್ಮ ಲೊಪದೋಷಗಳ ಮರೆಮಾಚಲು ಮಾದ್ಯಮದವರಿಗೆ ಇಲಾಖೆಯ ಒಳಗಿನ ಮಾಹಿತಿ ನೀಡಿದವರು ಯಾರೆಂಬುದರ ಬಗ್ಗೆ ಶಿಕ್ಷಕರ ವಿಚಾರಣೆಯಲ್ಲಿ ತೊಡಗಿದ್ದಾರೆ. ಹೂ! ವ್ಯವಸ್ಥೆಯೊಳಗಿನ ಅವ್ಯವಸ್ಥೆ ಎಂದರೆ ಇದುವೇ ಇರಬೇಕು.. ಇವರನ್ನು ಸರಿ ಮಾಡಲು ದೇವರೇ ಬರಬೇಕು !!!

      2 ದಿನಗಳ ಹಿಂದೆ ಪಠ್ಯಪುಸ್ತಕ ವಿತರಣೆಯಲ್ಲಾದ ಲೋಪದ ಬಗ್ಗೆ ಮಾಡಿದ ನ್ಯೂಸ್‌ ನೋಡಿ



      Continue Reading

      Article

      ಗೋದಾಮಿನಲ್ಲೇ ಕೊಳೆಯುತ್ತಿವೆ ಪುಸ್ತಕಗಳು, ಜೇಬಿನಿಂದಲೇ ಮೊಟ್ಟೆ ಹಣ ಹಾಕ್ತಿದ್ದಾರೆ ಶಿಕ್ಷಕರು; ಬಂಟ್ವಾಳ ಶಿಕ್ಷಣ ಇಲಾಖೆಯ ಮಹಾ ಯಡವಟ್ಟು!

      Published

      on

      ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವರೇ ಇಲ್ನೋಡಿ.. ಸಿ.ಆರ್.ಪಿ ಗಳ ಸೋಮಾರಿತನ! ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ನರಳಾಟ!

      ಬಂಟ್ವಾಳ: ಶಾಲೆಗಳು ಆರಂಭವಾಗಿ 20 ದಿನಗಳು ಕಳೆದರೂ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ತಲುಪಿಲ್ಲ! ಒಂದೆಡೆ ಪಠ್ಯಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರದ ನಿಯಮದಿಂದಾಗಿ ಬಡ ಮಕ್ಕಳಿಗೆ ನೀಡುವ ಕೋಳಿಮೊಟ್ಟೆಯ ಹಣವನ್ನು ಶಿಕ್ಷಕರೇ ತಮ್ಮ ಜೇಬಿನಿಂದ ಭರ್ತಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪಕ್ಕೆ ಇದುವೇ ಸಾಕ್ಷಿ.

      ಗೋದಾಮಿನಲ್ಲೇ ಕೊಳೆಯುತ್ತಿವೆ ಪುಸ್ತಕಗಳು: ಸಿ.ಆರ್.ಪಿ ಗಳ ಸೋಮಾರಿತನ!

      ಬಂಟ್ವಾಳ ತಾಲೂಕಿನಲ್ಲಿ ಒಟ್ಟು 221 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಸುಮಾರು 50,000 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಪಠ್ಯಪುಸ್ತಕಗಳಿಗಾಗಿ ಆಯಾ ಶಾಲಾ ಮುಖ್ಯ ಶಿಕ್ಷಕರು ಏಪ್ರಿಲ್ ತಿಂಗಳಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಛೇರಿಗೆ ಆನ್‌ಲೈನ್ ಮೂಲಕ ನಿಖರವಾದ ಬೇಡಿಕೆಯನ್ನು ಸಲ್ಲಿಸಿದ್ದರು.

      ಸರ್ಕಾರದಿಂದ ಶೇಕಡಾ 95ರಷ್ಟು ಪಠ್ಯಪುಸ್ತಕಗಳು ಈಗಾಗಲೇ ಬಂಟ್ವಾಳಕ್ಕೆ ಪೂರೈಕೆಯಾಗಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ. ಬಂದಿರುವ ಪುಸ್ತಕಗಳನ್ನು ನಂದಾವರದ ಸರ್ಕಾರಿ ಶಾಲೆಯಲ್ಲಿ ತಂದಿರಿಸಲಾಗಿದೆ. ಆದರೆ, ತಾಲೂಕಿನ 25 ಕ್ಲಸ್ಟರ್‌ಗಳಿಗೆ ಲಭ್ಯವಿರುವ 16 ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿಗಳು (CRP) ಮತ್ತು ನೋಡಲ್ ಅಧಿಕಾರಿಗಳು ತೀರಾ ಸೋಮಾರಿತನ ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ. ಗೋದಾಮಿನಲ್ಲಿರುವ ಪುಸ್ತಕಗಳನ್ನು ಶಾಲೆಗಳಿಗೆ ಸರಿಯಾಗಿ ವಿತರಣೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿಯೇಟು ನೀಡುತ್ತಿದ್ದಾರೆ.

      ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದದ ಶಂಕೆ?

      ಶಾಲೆ ಪ್ರಾರಂಭವಾಗಿ ಇಷ್ಟು ದಿನಗಳಾದರೂ ಮಕ್ಕಳಿಗೆ ಪುಸ್ತಕ ತಲುಪಿಸದ ಅಧಿಕಾರಿಗಳ ನಡವಳಿಕೆಯನ್ನು ನೋಡಿದರೆ ಸಾರ್ವಜನಿಕರಲ್ಲಿ ತೀವ್ರ ಸಂಶಯ ಮೂಡುತ್ತಿದೆ. ಸರ್ಕಾರಿ ಶಾಲೆಗಳನ್ನು ದಿವಾಳಿ ಮಾಡಿ, ಬಡ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಹಾದಿ ಹಿಡಿಯುವಂತೆ ಮಾಡಲು ಇವರು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಏನಾದರೂ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ? ಎಂಬ ಪ್ರಶ್ನೆಯನ್ನು ಸ್ವತಃ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಬೇಸರದಿಂದ ವ್ಯಕ್ತಪಡಿಸಿದ್ದಾರೆ. ಇಂತಹ ಸಿಬ್ಬಂದಿಗಳನ್ನು ಕೇಳುವವರೇ ಇಲ್ಲವೇ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

      ಕೋಳಿಮೊಟ್ಟೆಯಲ್ಲೂ ಶಿಕ್ಷಕರಿಗೆ ‘ಲುಕ್ಸಾನ್’: ಜೇಬಿನಿಂದ ಹಣ ಹಾಕುವ ಸ್ಥಿತಿ!

      ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡುವ ಉದ್ದೇಶದಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪ್ರತಿನಿತ್ಯ ಕೋಳಿಮೊಟ್ಟೆಯನ್ನು ನೀಡಲಾಗುತ್ತಿದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೋಳಿಮೊಟ್ಟೆಯ ಬೆಲೆ 7.50/- ರೂಪಾಯಿ ಆಗಿದೆ. ಆದರೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವುದು ಕೇವಲ 5.00 ರೂಪಾಯಿ ಮಾತ್ರ!

      ಉಳಿದ 2.50/- ರೂಪಾಯಿಯನ್ನು ಯಾರು ಭರಿಸಬೇಕು? ಬೇರೆ ದಾರಿಯಿಲ್ಲದೆ ಆಯಾ ಶಾಲೆಯ ಶಿಕ್ಷಕರೇ ಪ್ರತಿದಿನ ತಮ್ಮ ಜೇಬಿನಿಂದ ಈ ಹಣವನ್ನು ಭರ್ತಿ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರತಿ ಶಾಲೆಯ ಶಿಕ್ಷಕರು ಪ್ರತಿನಿತ್ಯ 180 ರಿಂದ 200 ರೂಪಾಯಿಗಳವರೆಗೆ ಸ್ವಂತ ಹಣವನ್ನು ಖರ್ಚು ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ನೋಡಿಕೊಳ್ಳಬೇಕಾದ ಶಿಕ್ಷಕರು, ಇಂತಹ ಆರ್ಥಿಕ ಹೊರೆಯಿಂದಾಗಿ ಕಂಗಾಲಾಗಿದ್ದಾರೆ.

      ಮಾಧ್ಯಮದ ಒತ್ತಾಯ: ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರೇ ಮತ್ತು ಶಿಕ್ಷಣ ಸಚಿವರೇ, ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಬಂಟ್ವಾಳ ತಾಲೂಕಿನ ನೋಡಲ್ ಅಧಿಕಾರಿಗಳು ಹಾಗೂ ಸಿ.ಆರ್.ಪಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕಾಗಿದೆ. ಹಾಗೂ ಮೊಟ್ಟೆಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಿ ಶಿಕ್ಷಕರ ಮೇಲಿನ ಹೊರೆಯನ್ನು ತಪ್ಪಿಸಬೇಕಾಗಿದೆ. ಈ ಮೂಲಕ ಉನ್ನತ ಅಧಿಕಾರಿಗಳು ಮತ್ತು ಸಚಿವರು ತಕ್ಷಣ ಕಣ್ಣು ತೆರೆದು ಈ ಸಮಸ್ಯೆಯನ್ನು ಬಗೆಹರಿಸುವರೇ ಎಂದು ಕಾದು ನೋಡಬೇಕಿದೆ




      Continue Reading

      Article

      ವಿಶೇಷ ವರದಿ: ‘ನೀನು ಸಾಯೋದು ಯಾವಾಗ?’ ಎಂದಾಗ ಅರ್ಧ ಜೀವ ಹಾರಿಹೋಗುತ್ತದೆ!ವೃದ್ಧಾಶ್ರಮಗಳೂ ಈಗ ‘ದಂಧೆ’! ಬದಲಾದ ಜೀವನಶೈಲಿ ನಡುವೆ ಹೆತ್ತವರ ಒಳಜೀವದ ಆತಂಕ; ಶಾಶ್ವತ ಪರಿಹಾರವೇನು?

      Published

      on

      ‘ಮಾತೃ ದೇವೋಭವ, ಪಿತೃ ದೇವೋಭವ’ ಎಂದು ಹೆತ್ತವರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಶ್ರೇಷ್ಠ ಸಂಸ್ಕೃತಿ ನಮ್ಮದು. ಹರಕೆ ಹೊತ್ತು ಮಕ್ಕಳನ್ನು ಪಡೆದು, ಅವರನ್ನೇ ಸರ್ವಸ್ವವೆಂದು ಬಗೆದು, ಪ್ರೀತಿ-ಕಾಳಜಿಯಿಂದ ಬೆಳೆಸಿ, ಉತ್ತಮ ಶಿಕ್ಷಣ ಹಾಗೂ ಬದುಕು ನೀಡಿದ ಪಾಲಕರಿಗೆ, ತಮ್ಮ ವೃದ್ಧಾಪ್ಯದಲ್ಲಿ ಮಕ್ಕಳು ತಮಗೆ ಆಸರೆಯಾಗುತ್ತಾರೆ ಎಂಬ ನಿರೀಕ್ಷೆ ಇರುವುದು ಸಹಜ. ಆದರೆ, ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತಹ ಕಳವಳಕಾರಿ ಬೆಳವಣಿಗೆಯಾಗಿದೆ. ಪ್ರೀತಿ, ಗೌರವ ಸಿಗಬೇಕಾದ ವಯಸ್ಸಿನಲ್ಲಿ ಹಿರಿಯ ಜೀವಗಳು ತಮ್ಮದೇ ಮನೆಯಿಂದ ದೂರವಾಗಿ ವೃದ್ಧಾಶ್ರಮಗಳಲ್ಲಿ ಅನಾಥರಂತೆ ಆಶ್ರಯ ಪಡೆಯುತ್ತಿದ್ದಾರೆ.

      “ನಾಳೆ ನಮ್ಮ ವೃದ್ಧಾಪ್ಯ ಹೇಗಿರುತ್ತದೋ, ನನ್ನ ಮಕ್ಕಳು ನನ್ನನ್ನು ನೋಡಿಕೊಳ್ಳುತ್ತಾರೋ ಇಲ್ಲವೋ?” ಎಂಬ ತೀವ್ರ ಆತಂಕ ಇವತ್ತು ಪ್ರತಿಯೊಬ್ಬ ಪೋಷಕರನ್ನೂ ಕಾಡುತ್ತಿದೆ. ಐಷರಾಮಿ ಬದುಕು ಪಡೆದ ಮಕ್ಕಳೇ ಇವತ್ತು, ‘ನೀನು ಸಾಯೋದು ಯಾವಾಗ?’ ಎಂದು ಮುಖಕ್ಕೆ ಹೊಡೆದಂತೆ ಕೇಳುವಾಗ, ಹಿರಿಯರಿಗೆ ಬದುಕಿರುವಾಗಲೇ ಅರ್ಧ ಜೀವ ಹಾರಿಹೋಗುತ್ತದೆ.

      ಹಿರಿಯರನ್ನು ದೂರ ತಳ್ಳಲು ಪ್ರಮುಖ ಕಾರಣಗಳೇನು?

      ಇಂದಿನ ಆಧುನಿಕ ಸಮಾಜದಲ್ಲಿ ಹೆತ್ತವರನ್ನು ಮಕ್ಕಳು ತಮ್ಮಿಂದ ದೂರ ಮಾಡಲು ಮತ್ತು ವೃದ್ಧರು ಆತಂಕಕ್ಕೊಳಗಾಗಲು ಬದಲಾದ ಜೀವನಶೈಲಿ ಹಾಗೂ ಮಾನಸಿಕತೆಯೇ ಪ್ರಮುಖ ಕಾರಣಗಳಾಗಿವೆ:

      ಅವಿಭಕ್ತ ಕುಟುಂಬಗಳ ವಿಭಜನೆ: ಹಿಂದೆ ಭಾರತದಲ್ಲಿ ಅವಿಭಕ್ತ ಕುಟುಂಬಗಳು ಸಾಮಾನ್ಯವಾಗಿದ್ದವು. ಮನೆಯಲ್ಲಿ ಹಿರಿಯರನ್ನು ಎಲ್ಲರೂ ಒಟ್ಟಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಇಂದು ವಿಭಕ್ತ (ನ್ಯೂಕ್ಲಿಯರ್) ಕುಟುಂಬ ಪದ್ಧತಿ ಹೆಚ್ಚಾಗಿದ್ದು, ಮಕ್ಕಳು ತಮ್ಮ ಪೋಷಕರನ್ನು ನೋಡಿಕೊಳ್ಳುವುದು ಕಡಿಮೆಯಾಗಿದೆ.

      ನೈತಿಕ ಅಧಃಪತನ ಮತ್ತು ಮೌಲ್ಯಗಳ ಕುಸಿತ: ಆಧುನಿಕ ಜೀವನಶೈಲಿ ಮತ್ತು ಭೌತಿಕ ಆಸೆಗಳು ಹೆಚ್ಚಾದಂತೆ, ಮಕ್ಕಳಲ್ಲಿ ನೈತಿಕ ಮೌಲ್ಯಗಳು ಸಂಪೂರ್ಣವಾಗಿ ಕುಸಿಯುತ್ತಿವೆ. ಹಣ, ಅಂತಸ್ತು ಮತ್ತು ಅಧಿಕಾರದ ಹಿಂದೆ ಬಿದ್ದಿರುವ ಇಂದಿನ ಪೀಳಿಗೆಗೆ ಹೆತ್ತವರ ಜವಾಬ್ದಾರಿ ಮರೆತುಹೋಗಿದೆ. ಪೋಷಕರನ್ನು ಕಡೆಗಣಿಸುವ ಪ್ರವೃತ್ತಿ ಬೆಳೆಯುತ್ತಿದೆ.

      ಆರ್ಥಿಕ ಸ್ವಾತಂತ್ರ್ಯ ಮತ್ತು ಜಾಗತೀಕರಣ: ಜಾಗತೀಕರಣದ ಈ ಯುಗದಲ್ಲಿ ಮಕ್ಕಳು ಉದ್ಯೋಗ ಅರಸಿ ವಿದೇಶಗಳಿಗೆ ಅಥವಾ ದೂರದ ಮಹಾನಗರಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ಪೋಷಕರು ಒಂಟಿಯಾಗುತ್ತಿದ್ದಾರೆ. ಇನ್ನು ಕೆಲವು ಕಡೆ ಮಕ್ಕಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ, ತಮ್ಮ ಐಷರಾಮಿ ಜೀವನಶೈಲಿಗೆ ಪೋಷಕರು ಅಡ್ಡಿಯಾಗುತ್ತಾರೆಂಬ ಕಾರಣಕ್ಕೆ ಅವರನ್ನು ಜೊತೆಯಲ್ಲಿಟ್ಟುಕೊಳ್ಳಲು ನಿರಾಕರಿಸುತ್ತಿದ್ದಾರೆ.

      ಪೋಷಕರ ಅತಿಯಾದ ನಿರೀಕ್ಷೆಗಳು: ಕೆಲವೊಮ್ಮೆ ಪೋಷಕರೇ ತಮ್ಮ ಮಕ್ಕಳನ್ನು ಸಣ್ಣ ವಯಸ್ಸಿನಿಂದಲೇ ವಿದೇಶಗಳಿಗೆ ಕಳಿಸಿ, ಅವರು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬ ಅತಿಯಾದ ಆಸೆಗಳನ್ನು ಹೊಂದಿರುತ್ತಾರೆ. ಆದರೆ ಅದೇ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಹೆತ್ತವರಿಂದಲೇ ದೂರವಾಗಲು ಈ ಅತಿಯಾದ ನಿರೀಕ್ಷೆಗಳೇ ಕಾರಣವಾಗುತ್ತಿರುವುದು ಒಂದು ವಿಪರ್ಯಾಸ.

      ಪರಿಸರ ಸೌಹಾರ್ದತೆಯ ಕೊರತೆ ಮತ್ತು ವೈಯಕ್ತಿಕ ಸ್ವಾರ್ಥ: ನಗರಗಳು ಇಂದು ಕಾಂಕ್ರೀಟ್ ಕಾಡುಗಳಾಗುತ್ತಿವೆ. ಪ್ರಕೃತಿಯೊಂದಿಗಿನ ಸಂಬಂಧದ ಜೊತೆಗೆ ಮಾನವೀಯ ಸಂಬಂಧಗಳೂ ಕಡಿಯುತ್ತಿವೆ. ಕೇವಲ ‘ನಾನು, ನನ್ನ ಹೆಂಡತಿ, ನನ್ನ ಮಕ್ಕಳು’ ಎಂಬ ವೈಯಕ್ತಿಕ ಸ್ವಾರ್ಥ ಹೆಚ್ಚಾಗುತ್ತಿರುವುದು ಕೌಟುಂಬಿಕ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

      ವಯೋವೃದ್ಧರ ಆರೋಗ್ಯ ಸಮಸ್ಯೆಗಳು: ವೃದ್ಧಾಪ್ಯದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಬರುವುದು ಸಹಜ. ಇಂತಹ ಸಂದರ್ಭದಲ್ಲಿ ಅವರಿಗೆ ನಿರಂತರ ಆರೈಕೆ ಮತ್ತು ಸಮಯದ ಅಗತ್ಯವಿರುತ್ತದೆ. ಆದರೆ ಇಂದಿನ ಓಟದ ಬದುಕಿನಲ್ಲಿ ಮನೆಯಲ್ಲಿ ಯಾರಿಗೂ ಅವರನ್ನು ನೋಡಿಕೊಳ್ಳಲು ಸಮಯವಾಗಲಿ ಅಥವಾ ಸಂಪನ್ಮೂಲಗಳಾಗಲಿ ಇರುವುದಿಲ್ಲ. ಈ ಕಾರಣ ನೀಡಿ ವೃದ್ಧರನ್ನು ವೃದ್ಧಾಶ್ರಮಗಳಿಗೆ ತಳ್ಳಲಾಗುತ್ತಿದೆ.

      ವೃದ್ಧಾಶ್ರಮಗಳೂ ಈಗ ‘ದಂಧೆ’: ಆಸ್ತಿ ಲೂಟಿಯ ವ್ಯವಸ್ಥಿತ ಜಾಲ!

      ಖಾಸಗಿ ವೃದ್ಧಾಶ್ರಮಗಳು ಕೇವಲ ಸೇವಾ ಮನೋಭಾವದಿಂದ ನಡೆಯುತ್ತಿಲ್ಲ. ಅನುಕೂಲಸ್ಥ ವೃದ್ಧರನ್ನು ಗುರಿಯಾಗಿಸಿಕೊಂಡು, ಅವರಿಗೆ ಐಷರಾಮಿ ಸೌಲಭ್ಯಗಳನ್ನು ನೀಡುವ ಸೋಗಿನಲ್ಲಿ ಅವರ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್‌ಗಳನ್ನು ಲೂಟಿ ಮಾಡುವ ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿದೆ.

      ಆಸ್ತಿ, ಹಣ ಇರುವವರೆಗೆ ವೃದ್ಧರಿಗೆ ರಾಜಾತಿಥ್ಯ ಸಿಗುತ್ತದೆ. ಒಮ್ಮೆ ಆಸ್ತಿ ಇವರ ಹೆಸರಿಗೆ ವರ್ಗಾವಣೆಯಾಯಿತೋ ಅಥವಾ ಹಣ ಖಾಲಿಯಾಯಿತೋ, ಅಲ್ಲಿಂದ ವೃದ್ಧರ ದುರಂತ ಅಂತ್ಯ ಶುರುವಾಗುತ್ತದೆ. ಇಂತಹ ಸೂಕ್ಷ್ಮ ನೋವುಗಳನ್ನು, ಒಳಸಂಚುಗಳನ್ನು ಇವತ್ತಿನ ಯಾವ ಮಾಧ್ಯಮಗಳೂ ವರದಿ ಮಾಡುತ್ತಿಲ್ಲ, ಇವುಗಳ ಮಾಹಿತಿ ಸಾರ್ವಜನಿಕರಿಗೆ ಸಿಗುತ್ತಲೇ ಇಲ್ಲ. ಆಸ್ತಿಯಿದ್ದರೂ ನೆಮ್ಮದಿಯಿಲ್ಲ, ಆಸ್ತಿ ಇಲ್ಲದಿದ್ದರೆ ಬದುಕೇ ದುರ್ಭರ ಎನ್ನುವಂತಾಗಿದೆ. ಇದು ನಮ್ಮ ‘ಸಾಂಸ್ಕೃತಿಕ ಕುಸಿತ’ಕ್ಕೆ ಹಿಡಿದ ಕೈಗನ್ನಡಿಯಾಗಿದೆ.

      ಮಕ್ಕಳ ದೌರ್ಜನ್ಯದ ವಿರುದ್ಧ ಹಿರಿಯರಿಗಿರುವ ಕಾನೂನು ಅಸ್ತ್ರಗಳು:

      ಇಂತಹ ದುಸ್ಥಿತಿಯಲ್ಲಿರುವ ವೃದ್ಧರ ರಕ್ಷಣೆಗೆ ಭಾರತೀಯ ಕಾನೂನಿನಲ್ಲಿ ಅತ್ಯಂತ ಬಲಿಷ್ಠವಾದ ಕಾಯಿದೆಗಳಿವೆ. ಪ್ರತಿಯೊಬ್ಬ ವೃದ್ಧರಿಗೂ ಇದರ ಪ್ರಾಥಮಿಕ ಜ್ಞಾನ ಇರುವುದು ಇಂದಿನ ತುರ್ತು ಅಗತ್ಯವಾಗಿದೆ.

      1. ದಾನಪತ್ರ ರದ್ದತಿ: ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

      ಹಲವು ಬಾರಿ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ಬಕ್ಷೀಸ್ (ದಾನ) ಪತ್ರದ ಮೂಲಕ ವರ್ಗಾಯಿಸುತ್ತಾರೆ. ಆಸ್ತಿ ಕೈ ಸೇರಿದ ಮೇಲೆ ಮಗ-ಮಗಳು ಹೆತ್ತವರನ್ನು ಬೀದಿಗೆ ದೂಡುತ್ತಾರೆ. ಇಂತಹ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟು ‘ವೆಂಕಟಯ್ಯ ವರ್ಸಸ್ ಕರ್ನಾಟಕ ಸರಕಾರ’ ಎಂಬ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದೆ: “ದಾನಪತ್ರದಲ್ಲಿ ‘ವೃದ್ಧಾಪ್ಯದಲ್ಲಿ ಹೆತ್ತವರನ್ನು ನೋಡಿಕೊಳ್ಳಬೇಕು’ ಎಂಬ ಶರತ್ತನ್ನು ಬರೆಯದಿದ್ದರೂ, ವೃದ್ಧಾಪ್ಯದಲ್ಲಿ ಅವರು ನನ್ನನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆಯಿಂದಲೇ ದಾನ ನೀಡಲಾಗಿದೆ ಎಂದು ಊಹಿಸಬೇಕಾಗುತ್ತದೆ. ಆಸ್ತಿ ಪಡೆದ ನಂತರ ತಂದೆಯನ್ನು ನಿರ್ಲಕ್ಷಿಸಿದರೆ 2007ರ ಕಾಯಿದೆಯ 23ನೇ ಕಲಮಿನನ್ವಯ ಆ ಆಸ್ತಿ ವರ್ಗಾವಣೆಯನ್ನು ಮೋಸ ಅಥವಾ ಒತ್ತಾಯದಿಂದ ಬರೆಸಿಕೊಳ್ಳಲಾಗಿದೆ ಎಂದು ಪರಿಗಣಿಸಿ ರದ್ದುಪಡಿಸಬಹುದು.”

      2. ತಾಯಿ-ತಂದೆಯರ ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಯೋಗಕ್ಷೇಮ ಕಾಯಿದೆ, 2007

      ಪಾಲನೆಯ ಜವಾಬ್ದಾರಿ (ಕಲಮು 4): ಆರ್ಥಿಕ ಮೂಲವಿಲ್ಲದ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯರನ್ನು ಪೋಷಿಸುವುದು ಮಕ್ಕಳ ಅಥವಾ ಮೊಮ್ಮಕ್ಕಳ ಜವಾಬ್ದಾರಿ. ಪಾಲನೆ ಎಂದರೆ ಕೇವಲ ದುಡ್ಡಲ್ಲ; ಆಹಾರ, ಬಟ್ಟೆ, ವಸತಿ ಮತ್ತು ವೈದ್ಯಕೀಯ ವೆಚ್ಚಗಳೂ ಸೇರಿವೆ.

      ತ್ವರಿತ ಅರ್ಜಿ ಸಲ್ಲಿಕೆ (ಕಲಮು 5): ಹಿರಿಯ ನಾಗರಿಕರು ಜೀವನಾಂಶಕ್ಕಾಗಿ ಉಪ-ವಿಭಾಗೀಯ ಅಧಿಕಾರಿಗಳು (AC) ಅಧ್ಯಕ್ಷರಾಗಿರುವ ಟ್ರಿಬ್ಯೂನಲ್‌ಗೆ ವಕೀಲರ ಹಂಗಿಲ್ಲದೆ ಸರಳ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಬಂದ 90 ದಿನಗಳ ಒಳಗಾಗಿ ಟ್ರಿಬ್ಯೂನಲ್ ತೀರ್ಪು ನೀಡಬೇಕು. ಕೋರ್ಟ್ ಸ್ವಯಂ ಪ್ರೇರಿತವಾಗಿಯೂ (Suo-moto) ಈ ಪ್ರಕರಣ ದಾಖಲಿಸಿಕೊಳ್ಳಬಹುದು.

      ಶಿಕ್ಷೆಯ ಪ್ರಮಾಣ (ಕಲಮು 24): ತಂದೆ-ತಾಯಿಯರನ್ನು ಪರಿತ್ಯಜಿಸುವ ಮಕ್ಕಳಿಗೆ ಭಾರಿ ದಂಡ ಮತ್ತು 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಟ್ರಿಬ್ಯೂನಲ್ ನೀಡುವ ಆದೇಶಗಳಿಗೆ ತಡೆ (Injunction) ನೀಡುವ ಅಧಿಕಾರ ಸಿವಿಲ್ ಕೋರ್ಟ್‌ಗಳಿಗೆ ಇರುವುದಿಲ್ಲ.

      3. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS-2023) / ಸಿಆರ್‌ಪಿಸಿ 125

      ಹೊಸ ಕಾನೂನಾದ ಬಿಎನ್‌ಎಸ್ಎಸ್-2023ರ 144ನೇ ಕಲಮಿನನ್ವಯ ಹೆತ್ತವರನ್ನು ನೋಡಿಕೊಳ್ಳದಿದ್ದರೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮಕ್ಕಳಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಆದೇಶಿಸುತ್ತದೆ. ತಪ್ಪಿದರೆ ಜೈಲು ಶಿಕ್ಷೆ ಗ್ಯಾರಂಟಿ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ (ವಿಜಯ ಮನೋಹರ ಅರ್ಬತ್ ವರ್ಸಸ್ ಕಾಶಿ ರಾವ್ ರಾಜಾರಾಮ್ ಸಹಾಯ್), ಸ್ವತಂತ್ರ ಆದಾಯವಿರುವ ವಿವಾಹಿತ ಹೆಣ್ಣು ಮಕ್ಕಳಿಗೂ ಈ ಜವಾಬ್ದಾರಿ ಅನ್ವಯಿಸುತ್ತದೆ. ಇದು ಎಲ್ಲಾ ಧರ್ಮದವರಿಗೂ ಸಮಾನವಾಗಿದೆ.

      4. ಹಿಂದೂ ದತ್ತಕ ಮತ್ತು ಪಾಲನಾ ಕಾಯಿದೆ 1956 (HAMA)

      ಈ ಕಾಯಿದೆಯ ಕಲಮು 20, 21 ಮತ್ತು 23ರ ಅಡಿಯಲ್ಲಿ ಅಶಕ್ತ ತಾಯಿ-ತಂದೆಯರನ್ನು ಒಟ್ಟಿಗೆ ಇಟ್ಟುಕೊಳ್ಳದಿದ್ದಾಗ, ಅವರ ಸ್ಥಾನಮಾನ ಮತ್ತು ಮಕ್ಕಳ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಕೋರ್ಟ್ ಜೀವನಾಂಶದ ಆದೇಶ ನೀಡುತ್ತದೆ. ಆದರೆ, 2007ರ ಹಿರಿಯ ನಾಗರಿಕರ ಕಾಯಿದೆಯೇ ಅತ್ಯಂತ ತ್ವರಿತ ಮತ್ತು ಉಚಿತ ಪರಿಹಾರ ನೀಡುತ್ತದೆ.

      ಶಾಶ್ವತ ಪರಿಹಾರವೇನು? ಸರಕಾರದ ಯೋಜಿತ ವೃದ್ಧಾಶ್ರಮಗಳ ತುರ್ತು ಅಗತ್ಯ

      ಖಾಸಗಿ ವೃದ್ಧಾಶ್ರಮಗಳ ದಂಧೆಗೆ ಮತ್ತು ಹೆತ್ತವರ ಈ ಎಲ್ಲಾ ಆತಂಕಗಳಿಗೆ ಮುಕ್ತಿ ಹಾಡಬೇಕಾದರೆ ಸರಕಾರವೇ ಒಂದು ಮಾದರಿ ಯೋಜಿತ ವೃದ್ಧಾಶ್ರಮ ವ್ಯವಸ್ಥೆಯನ್ನು (Government Managed Senior Citizen Housing Project) ಜಾರಿಗೆ ತರಬೇಕಾಗಿದೆ.

      1. ಸರಕಾರಿ ಉಸ್ತುವಾರಿ (ಕಲಮು 19): ಪ್ರತಿಯೊಂದು ಜಿಲ್ಲೆಯಲ್ಲೂ ಸರಕಾರವೇ ನೇರವಾಗಿ ಅತ್ಯಾಧುನಿಕ, ಸುಸಜ್ಜಿತ ವೃದ್ಧಾಶ್ರಮಗಳನ್ನು ನಿರ್ಮಿಸಿ ನಿರ್ವಹಿಸಬೇಕು. ಅಲ್ಲಿ ಖಾಸಗಿಯವರ ಆಸ್ತಿ ಲೂಟಿಯ ದಂಧೆಗೆ ಬ್ರೇಕ್ ಬೀಳುತ್ತದೆ.

      2. ಆಸ್ತಿ ಮತ್ತು ಸುರಕ್ಷತೆಯ ಗ್ಯಾರಂಟಿ: ವೃದ್ಧರ ಆಸ್ತಿಯನ್ನು ಸರಕಾರದ ವಶದಲ್ಲಿಟ್ಟುಕೊಂಡು, ಅದರ ಆದಾಯದಲ್ಲೇ ಅವರ ಜೀವಿತಾವಧಿಯವರೆಗೆ ರಾಜಮರ್ಯಾದೆಯ ಊಟ, ವಸತಿ, ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು (ಕಲಮು 20ರ ಅನ್ವಯ ಸರಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಬೆಡ್ ಹಾಗೂ ಪ್ರತ್ಯೇಕ ಪಾಳಿ ವ್ಯವಸ್ಥೆ) ಸರಕಾರವೇ ನೀಡಬೇಕು.

      3. ಸಮಾನ ಗೌರವ: ಆಸ್ತಿ ಇದ್ದವರಿಗೂ, ಇಲ್ಲದ ಬಡ ವೃದ್ಧರಿಗೂ ಸಮಾನವಾಗಿ ಪ್ರೀತಿ ಮತ್ತು ಗೌರವ ಸಿಗುವಂತಹ ವಾತಾವರಣವನ್ನು ಸರಕಾರಿ ಕೇಂದ್ರಗಳು ನಿರ್ಮಿಸಿದರೆ ಬಹುತೇಕ ಸಮಸ್ಯೆಗಳು ತಾನಾಗಿಯೇ ಬಗೆಹರಿಯುತ್ತವೆ.

      4. ಉಚಿತ ಸಹಾಯವಾಣಿ: ಕೇಂದ್ರ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಹಿರಿಯ ನಾಗರಿಕರ ಸಹಾಯಕ್ಕಾಗಿ 14567 ಎಂಬ ಉಚಿತ ಸಹಾಯವಾಣಿಯನ್ನು (Helpline) ತೆರೆದಿದ್ದು, ಇದರ ಮೂಲಕ ವೃದ್ಧರು ತಮಗಾಗುವ ಅನ್ಯಾಯದ ವಿರುದ್ಧ ನೆರವು ಪಡೆಯಬಹುದು.

      ಹಿಂದಿನ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳಿಲ್ಲದ ಸಂಬಂಧಿಕರನ್ನೂ ಪ್ರೀತಿಯಿಂದ ಸಾಕಿ ಕೊನೆಯ ಕಾಲದ ಕರ್ತವ್ಯ ಮುಗಿಸುತ್ತಿದ್ದ ಉದಾತ್ತ ಸಂಸ್ಕೃತಿ ನಮ್ಮದಾಗಿತ್ತು. ಜೀವನಾಂಶ ಕೇಳಲು, ಆಸ್ತಿ ವಾಪಸ್ ಪಡೆಯಲು ಇಂದು ಕಾನೂನು, ಕೋರ್ಟುಗಳಿವೆ. ಆದರೆ ಪ್ರೀತಿ, ಕಾಳಜಿ, ಗೌರವಗಳ ಕೊರತೆಗೆ ಕಾನೂನಿನ ಬಳಿ ಉತ್ತರವಿಲ್ಲ. ಹೆತ್ತವರನ್ನು ಕಣ್ಣೀರಲ್ಲಿ ಕೈ ತೊಳೆಯಿಸುವ ಇಂತಹ ಮಕ್ಕಳನ್ನು ಸಮಾಜ ಮುಕ್ತವಾಗಿ ಬಹಿಷ್ಕರಿಸಬೇಕು. ಅವರಿಗೆ ಯಾವ ವೇದಿಕೆಯಲ್ಲಿಯೂ ಸ್ಥಾನಮಾನ ನೀಡಬಾರದು.

      ಕೆಲ ವರ್ಷಗಳ ಹಿಂದೆ ವೃದ್ಧಾಶ್ರಮವೊಂದರ ಉದ್ಘಾಟನೆಯಲ್ಲಿ ಹಿರಿಯರೊಬ್ಬರು, “ಈ ವೃದ್ಧಾಶ್ರಮ ಸದಾ ಖಾಲಿ ಇರಲಿ” ಎಂದು ಹಾರೈಸಿದ್ದು ಅತ್ಯಂತ ಮಾರ್ಮಿಕವಾಗಿತ್ತು. ಹಿರಿಯರ ಹಿತರಕ್ಷಣೆಯ ಕಾನೂನುಗಳ ಬಗ್ಗೆ ಸಮಾಜ ಮತ್ತು ಸ್ವಯಂಸೇವಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕಾಗಿದೆ. ಹೆತ್ತವರನ್ನು ದೇವರೆಂದು ಭಾವಿಸುವ ನಮ್ಮ ದೇಶದಲ್ಲಿ, ಇಂತಹ ಕಾಯಿದೆಗಳನ್ನು ಬಳಸುವ ಸಂದರ್ಭವೇ ಬಾರದಿರಲಿ ಎಂದು ಆಶಿಸೋಣ

      Continue Reading

      Trending

      Copyright © 2025 Deevatige

      error: Content is protected !!